Sunday, December 23, 2012

ತಿಂಗಳು ಮರೆಯಾದರೇನಂತೆ ತನ್ವಂಗಿ….



ಅಬ್ಬಾ..ಸುಮಾರು ೧೫ ದಿನದಿಂದ ಪರೀಕ್ಷೆಯ ನೆಪದಲ್ಲಿ ಬ್ಲಾಗ್ ಲೋಕದಿಂದ ದೂರವಿದ್ದೆ... ಅಂತೂ ಇಂತೂ ನಾಲ್ಕು ಪರೀಕ್ಷೆಗಳು ಮುಗಿದವು ..ಇನ್ನೆರಡು ಮುಂದಿನ ವರುಷಕ್ಕೆ (ಜನವರಿ ೩,೫ಕ್ಕೆ ಹಾ ಹಾ)...ಹಾಗಾಗಿ ಸಿಕ್ಕಾಪಟ್ಟೆ ಅಂತರವಿರುವುದರಿಂದ ಕೆಲಸ ಕಾಣದೇ ಮಾಡಿದ ಕೆಲಸವಿದು..ಒಂದು ಪುಟ್ಟ ಕವಿತೆ ಬರೆಯುವ ಪ್ರಯತ್ನ..ಸಂದರ್ಭ ಅಂತೇನೂ ಅಂದುಕೊಂಡು ಬರೆದಿದ್ದಲ್ಲ,ಬರೆಯುತ್ತಾ ಹೋದಂತೆ ಮನಸ್ಸಿಗೆ  ಬಂದ ಸನ್ನಿವೇಶ..ಗೆಳತಿಯ ಮದುವೆಯ ಹಿಂದಿನ ದಿನ ಆಕೆಯ ಗಂಡನಾಗುವವನು ಮನೆಬಿಟ್ಟು ಹೋದಾಗ ,ಆಕೆಯನ್ನು ಸಂತೈಸುವ ಭಾವ ಹೊತ್ತು ಬರೆದದ್ದು...ಎಷ್ಟರಮಟ್ಟಿಗೆ ಬರೆದೆನೋ ಕಾಣೆ..ನೀವೇ ತಿದ್ದಿ ಆಶೀರ್ವದಿಸಬೇಕು..

ತಿಂಗಳು ಮರೆಯಾದರೇನಂತೆ ತನ್ವಂಗಿ,
ಕಂಗಳಾ ಕನಸೆಲ್ಲಾ ಇಂಗೀತೇ?
ಮದರಂಗಿ ಮಸುಕಾದರೇನಂತೆ ಮುಂಗೈಲಿ,
ಅಂಗೈಯ್ಯ ಗೆರೆಯಂದ ಅಳಿಸೀತೆ?

ಮಲಾರದಲ್ಲಿಪ್ಪ ಚಿಕ್ಕಿಬಳೆಯೀಗ
ಒಡೆಯಲು,ನೀ ಹೀಗೆ ತೀಡದಿರು.
ಹಜಾರ ಬಳೆಯುಂಟು ಇನ್ನೂ ಆ ಮಾಲೆಯಲಿ
ಹೊನ್ನಿನ ಕಡಗವ ಹುಡುಕುತಿರು

ಬೇಸರದ ಸಬರವ ಮೇಲ್ಮೆತ್ತಿಗಿಟ್ಟಿರು,
ಅಂಗಳದಿ ಗೊಂದಲದಾ ಕಲ್ಲು-ಕ್ವಾಳೆಯ ಗುಡಿಸಿರು.
ಹಂಗಿಸುವ ನೆಂಟರ ಸಗಣಿಯಲಿ ತೊಡೆದಿರು,
ನಾಳಿನಾಸೆಯಾ  ಬಣ್ಣದಲಿ, ರಂಗೋಲಿ ಬಿಡಿಸಿರು.

ಚಂದಿರ  ಮರೆಯಾದರೇನಂತೆ ??

ಶಬ್ಧಾರ್ಥ: ತಿಂಗಳು:ಚಂದಿರ,ತನ್ವಂಗಿ:ಕೋಮಲವಾದ ಶರೀರವುಳ್ಳವಳು,ಮಲಾರ:ಬಳೆಗಾರನ ಬಳೆ ಸಂಚಿ,ಚಿಕ್ಕಿಬಳೆ:ಬಳೆಯ ಒಂದು ಪ್ರಕಾರ,
( ಇನ್ನು ನಮ್ಮ ಕಡೆ ಬಳಸುವ ಶಬ್ಧಗಳನ್ನು ಬಳಸುವ ಒಂದು ಪುಟ್ಟ ಯತ್ನ…ಪಕ್ಕಾ ಇದೇ ಅರ್ಥವೋ ಗೊತ್ತಿಲ್ಲ,ನನಗೆ ತಿಳಿದಂತೆ ಬರೆದಿದ್ದೇನೆ… 
ತೀಡು:ಅಳು,ಸಬರ:ಗುಂಪು,ಚಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು,ಮೇಲ್ಮೆತ್ತಿ:ಮೆತ್ತಿಯ ಮೇಲ್ಭಾಗ,ಮನೆಯ ಕೊನೆಯ ಹಂತ,ಕ್ವಾಳೆ-ಕತ್ತರಿಸಿದ ಗಿಡಗಂಟಿಯ ಉಳಿದ ಭಾಗ,ಕೋಳೆ..)

ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ನಮೂದಿಸಿ..
ತಪ್ಪು ತಿದ್ದಿಕೊಂಡು ಬೆಳೆಯಲು ಸಹಕರಿಸಿ :)
ನಮಸ್ತೆ.
-ಚಿನ್ಮಯ ಭಟ್ಟ

Thursday, December 6, 2012

ಶೀತ ಗೀತೆ..



ಹಮ್..ಇವತ್ತು ಬೆಳಿಗ್ಗೆ ಯಾಕೋ ತೀರಾ ಛಳಿಯೆನಿಸತೊಡಗಿತ್ತು...ಯಾಕೋ ಬೆಚ್ಚನೆಯ ಕಂಬಳಿ ಹೊದ್ದಿದ್ದ ಹಾಸಿಗೆ ಬಿಟ್ಟೇಳಲು ಮನಸೇ ಬಾರದಾಗಿತ್ತು...ಈ ಛಳಿಯ ಯಾಕಾದರೂ ಬರುತ್ತದೆಯೋ ಅಂದುಕೊಂಡೆ..ಮತ್ತೆ ಇನ್ನೊಂದು ಕ್ಷಣದಲ್ಲಿ ಈ ಛಳಿಯಲ್ಲಿಯೂ ಏನೋ ಒಂದು ಸುಖವಿದೆ ,ಈ ಚಳಿಗಾಲವೂ ಸುಂದರವೇ ಎನಿಸಿತು...ಅದನ್ನೇ ಒಂದು ಹೆಣ್ಣಾಗಿಸಿ ಒಂದೆರಡು ಸಾಲು ಬರೆದೆ...ನೋಡಿ ಈ ಸಂಜೆ ಅದನ್ನು ಪೂರ್ತಿಗೊಳಿಸಿ ನಿಮ್ಮ ಮುಂದಿಟ್ಟಿದ್ದೇನೆ...ದಯವಿಟ್ಟು ತಪ್ಪು-ಒಪ್ಪು ತಿಳಿಸಿ...ಆಶೀರ್ವದಿಸಿ  ...


ಮರಳಿ ಬಂದಳು ಛಳಿಯಾ ಗೆಳತಿ
ಹಸಿ-ಬಿಸಿ ಕನಸಿನ ಜೊತೆಗೆ.
ಗುಬುರನು ಹಾಕಿ,ಮಲಗಿದ್ದಾ ಮನವನು
ತಂದಳು ಚವಿಯಾ ಸ್ಥಿತಿಗೆ.

ಹವಳದಾ ಇಬ್ಬನಿಯು ಹೂವಿನಾ ಪಕಳೆಗೆ,
ಕಾವಳದ ಮಂದಲಿಗೆ,ಗರಿಕೆಗೆ.
ನೇವಳದ ಈ ಒಲವು,ಪ್ರಾಲೇಯದಾ ಚೆಲುವು
ಚಿಚ್ಛಕ್ತಿ ಚಿಮ್ಮಿಸಿದೆ ಎದೆಯೊಳಗೆ.

ಛಾನಸವಾ ಹೆದರಿಸಿ,ಜಡತೆಯಾ ನಡುಗಿಸಿ
ಎಬ್ಬಿಸಿದೆ ಎನ್ನಾ ನಿನ ಶೀತ.
ಕನಸಿನ ಕಸ್ತ್ರವ ಕಂಡಿಹೆನು ನಿನ್ನಲ್ಲೇ,
ಇದುವೇ ಸಂಕ್ರಮಣ ಗೀತ.
(ಶಬ್ದಾರ್ಥ:ಗುಬುರು:ಮುಸುಕು,ಚವಿ:ಕಾಂತಿ,ಹೊಳಪು,ಕಾವಳ:ಮಂಜು(ಕತ್ತಲೆ ಎನ್ನುವ ಅರ್ಥವೂ ಇದೆಯಂತೆ),ನೇವಳ:ಉಡಿದಾರ,ಕಂಠೀಹಾರ,ಮಂದಲಿಗೆ:ಚಾಪೆ,ಪ್ರಾಲೇಯ:ಹಿಮ,ಚಿಚ್ಛಕ್ತಿ:ಚೈತನ್ಯ,ಆತ್ಮಶಕ್ತಿ,ಛಾನಸ:ಸೋಮಾರಿತನ,ಕಸ್ತ್ರ:ನಮ್ಮ ಕಡೆ ಮಾವಿನ ಹೂವಿಗೆ “ಮಾವಿನ ಕಸ್ತ್ರ” ಎಂದು ಬಳಸುತ್ತಾರೆ ಅದನ್ನು ಬರೆದೆ ಆಷ್ಟೆ…)


ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ನಮೂದಿಸಿ..
ನಿಮ್ಮ ಸಲಹೆಗಳೆ ನಮ್ಮಂತಹ ಎಡಬಿಡಂಗಿ ಬರಹಗಾರರಿಗೆ ಶಕ್ತಿ,ಅದೇ ನಮಗೆ ಸ್ಪೂರ್ತಿ :)
ವಂದನೆಗಳೊಂದಿಗೆ
-ಚಿನ್ಮಯ ಭಟ್ಟ

Tuesday, November 27, 2012

ಬಾ ಮರಳಿ……




ಸುಮ್ಮನೆ ಒಂದು ಕವನ ಬರ್ದಿದೀನಿ...ದಯವಿಟ್ಟು ತಪ್ಪು-ಒಪ್ಪು ತಿಳಿಸಿ....

ನಗೆಯಲ್ಲೆ ಅಪಹರಿಸಿ,ನಯನದಲೆ ಉಪಚರಿಸಿ
ನಾಭಿಯಲು ಸಂಚರಿಸಿ,ನಡಿಗೆಯಲು ಛಾಪಿರಿಸಿ
ಮಂಜಿನಂತೆ ಕರಗಿ ಮರೆಯಾದ ಮೋಹಿತೆ,
ಪಂಜಿನಂತೆ ಉರಿದು ಬರಿದಾದ ಸ್ನೇಹಿತೆ
ಕಣ್ಣಲ್ಲೆ ನಿನ್ನ ಹಚ್ಚೆಯ ಬರೆದಿಹೆ
ಓ ಗಿಣಿಯೆ ಬಾ ಒಮ್ಮೆ,ನಿನಗೆ ಕಾದಿಹೆ.

ಬಜ್ಜರಂದದ ಬೆಡಗಿ,ಚಿಕಣಿಯ ಕಂಗಳ ಹುಡುಗಿ,
ಕಂಜರಿಯಂತಹ ನುಡಿಯು,ಕಾಡುವ ಮೊಗ್ಗಿನ ಜಡೆಯು,
ಎಂದೆಂದೂ ನಿನ್ನ ಜೊತೆಗೆ ಇರುವ ಹವಣಿಕೆ,
ಸರಿಸಿ ಹಳೆಯ ಪರದೆ,ಬಾ ನೀ ಸನಿಹಕೆ,

ಬಣ್ಣಗಳು ಹಳೆನೆನಪು,ಇಂದೆಲ್ಲಾ ಕರಿಬಿಳುಪು,
ಕಾಣದು ಕಣ್ಣಲಿ ಹೊಳಪು ,ಕರಗಿದೆ ಕನಸಿನ ಒನಪು,
ಆ ಕಾಲನಿಂದ ಬಿರಿದೆದೆಗೆ ಮುತ್ತಿಗೆ.
ಸೋಲಿಸುವೆ ಅವನ ನೀ ಬರುವಾ ಹೊತ್ತಿಗೆ.
-ಚಿನ್ಮಯ
(ಶಬ್ಧಾರ್ಥ : ಬಜ್ಜರ-ವಜ್ರ,ಕಂಜರಿ-ಸಣ್ಣ ತಮಟೆ,ನಾಭಿ-ಹೊಕ್ಕಳು,ಕೇಂದ್ರ ಸ್ಥಾನ,ಚಿಕಣಿ-ಚಿಕ್ಕ )

Saturday, November 24, 2012

ನಾ ನೋಡಿದ ಡ್ರಾಮಾ .....



ಈಗಷ್ಟೇ ಡ್ರಾಮಾ ಚಿತ್ರ ನೋಡಿ ಮಸಾಲೆ ದೋಸೆ ತಿಂದು ರೂಮಿಗೆ ಬಂದೆ .....ಬೆಳಿಗ್ಗೆ ಪರೀಕ್ಷೇಯಲ್ಲಿ ಔಟ್  ಪುಟ್ಟು ಬಂದ ಖುಷಿ ಒಂದು ಕಡೆಗಾದರೆ ಅಂತೂ ಇಂತೂ ಮೊದಲ ಪ್ರದರ್ಶನವನ್ನು ನೋಡಲಾಗದಿದ್ದರೂ ಎರಡನೇ ದಿನವೇ ನೋಡಿದ ಖುಷಿ..ನಾಳೆ ಬೆಳಿಗ್ಗೆ ಮನೆಗೆ...ಅದಕ್ಕೆ ರಾತ್ರಿ ಕಣ್ಣು ಕೆಂಪಗೆ ಮಾಡಿಕೊಂಡು ಬೆರಳಚ್ಚಿಸುತ್ತಿದ್ದೇನೆ...ಬೇರೆ ಎನೂ ಅರ್ಜಂಟ್ ಕೆಲಸವಿಲ್ಲದಿದ್ದರೆ ಹಂಗೇ ಒಂದ್ ಸಲ ಓದಿ....

ಚಿತ್ರದ ಬಗ್ಗೆ  ವಿಮರ್ಶಿಸುವಷ್ಟೆಲ್ಲಾ ದೊಡ್ಡವನು ನಾನಲ್ಲ..ಒಂದಿಷ್ಟು ಅನಿಸಿಕೆಗಳು ಅಷ್ಟೇ..
ಚಿತ್ರದಲ್ಲಿ ಮೊದಲಿಗೆ ಇಷ್ಟವಾಗಿದ್ದು ಮಂಡ್ಯದ ಭಾಷೆಯ ಸೊಗಡು...ಒಂದಿಷ್ಟು ಗ್ರಾಮ್ಯತೆಯ ಚಿತ್ರಣ...ಎಂದಿನಂತೆ ಭಟ್ಟರ ಚಿತ್ರದ  ಮೊದಲ ಅರ್ಧಗಂಟೆ ನಾಯಕನ ವ್ಯಕ್ತಿತ್ವವನ್ನು ಹೇಳಲು ಮೀಸಲು..ಅಲ್ಲಿಂದ ಇನ್ನೊಂದೆಡೆಗೆ ಪ್ರಯಾಣ...ಇಲ್ಲಿ ,ಬೇರೆಡೆ ಹೋದಾಗ ಪ್ರೀತಿ ಹುಟ್ಟಿದುವರ ಬದಲು ಪ್ರೀತಿಗಾಗಿಯೇ ಬೇರೆಡೆ ಹೋಗುತ್ತಾರೆ ನಾಯಕ ಯಂಕಟೇಸ ಹಾಗೂ ಸತೀಸ...ಅಲ್ಲಿ ಏನೇನೋ ನಡೆಯುತ್ತದೆ...ಜೊತೆಗೆ ಅಂಡರ್ ವರ್ಡನ ಥಳಕೂ ಚಿತ್ರಕ್ಕಿದೆ...ಒಟ್ಟಿನಲ್ಲಿ ಒಂದು ನಕ್ಕು ಹಗುರಾಗುವ ಚಿತ್ರ...ಮನಸ್ಸಿನಲ್ಲಿ ಭವಿಷ್ಯದ ಬಗೆಗಿನ ಗೊಂದಲಗಳನ್ನು ಮರೆತು ಇಂದಿನದನ್ನು ಆನಂದದಿಂದ ಕಳೆಯಿರಿ..ಉಳಿದದ್ದೆಲ್ಲಾ ಭಗವಂತನ ಮೇಲೆ ಬಿಡಿ ಎನ್ನುವ ಸಂದೇಶ ಇದೇಯೇನೋ ಅಂತ ನನಗನಿಸಿದ್ದು...

ಮೊದಲಿಗೆ ಒಂದಿಷ್ಟು ತರಲೆ ಮಾತುಗಳು...ಮಂಗಾಟಗಳು....ಆಮೇಲಾಮೇಲೆ  ಗಂಭೀರವಾಗುವಂತಹ ಪಾತ್ರದಲ್ಲಿ ಯಶ್ ಅಭಿನಯ ಇಷ್ಟವಾಯ್ತು....ಹೊಡೆದಾಟದ ದೃಶ್ಯಗಳಲ್ಲಿ ಯಶ್ ಡಿಚ್ಚಿ ಒಂದು ಸಲ ನೆನಪಿರತ್ತೆ...ಪ್ರೀತಿ ಮಾಡುವ ಹುಡುಗನ ಪಾತ್ರ ಅವರಿಗೇನು ಹೊಸದೇನಲ್ಲ...ಹಾಂ ಯಾಕೋ ಕೊನೆಯಲ್ಲಿ ,ಕುಡಿದು ಮಾಡಿದ ತಪ್ಪುಗಳಿಗೆ ಫಾದರ ಹತ್ತಿರ ಕ್ಷಮೆ ಯಾಚಿಸುವಾಗ ನಟನೆ ಇನ್ನೂ ಚೆನ್ನಾಗಿರಬಹುದ್ದೇನೋ ಅನಿಸಿದರೆ,ಗುಂಡು ಬಿದ್ದು ನರಳುವ  ಸಂದರ್ಭದಲ್ಲಿಯೂ ಕೂಡ "ಪ್ರಿಯತಮೆಯನ್ನು ಚೆನ್ನಾಗಿ ನೋಡಿಕೋ" ಎಂದು ಅವರಪ್ಪನ ಹತ್ತಿರ ಭಾಷೆ ತೆಗೆದುಕೊಳ್ಳುವಾಗ ವ್ಹಾರ ವ್ಹಾ ಎನ್ನಿಸದೇ ಇರದು....

ಇನ್ನು ನೀನಾಸಂ  ಸತೀಶರದ್ದು ಕೂಡ ನಗೆಬುಗ್ಗೆ ಚಿಮ್ಮಿಸುವ ಪಾತ್ರ....ನಾಯಕನ ಜೊತೆಗೂಡಿ ಆಡುವ ಮಂಗಾಟಗಳಿಗೆಲ್ಲಾ ಸೋ ಎನ್ನುವ ಪಾತ್ರವದು....ಜೊತೆಯಿಷ್ಟು ಮುಗ್ಧತೆ ಕೂಡ ಆ ಪಾತ್ರಕ್ಕಿದ್ದು ,ಆ ಸಮಯದಲ್ಲಿ ಸತೀಶರ ಆಂಗಿಕ ಅಭಿನಯ ಮನಸೂರೆಗೊಳ್ಳುತ್ತದೆ.... ಕೊನೆಯಲ್ಲ್ಲಿ ಸಮುದ್ರದ ಹತ್ತಿರ ನಿಂತು ಅಳುವ ಸಂಧರ್ಭದ ಅಭಿನಯ ಇಷ್ಟವಾಯ್ತು.....

ಇನ್ನು ನಾಯಕಿ ರಾಧಿಕಾ ಪಾತ್ರಕ್ಕೆ ಎಂದಿನಂತೆ  ನ್ಯಾಯ ಒದಗಿಸಿದ್ದಾರೆ...ಮೊದಲಿಗೆ ಶ್ರೀಮಂತನ ಮಗಳಾಗಿ ಅವರು ತೋರಿಸುವ ಅಭಿನಯ ಯಾಕೋ ಅಷ್ಟೇನೂ ಇಷ್ಟವಾಗಲಿಲ್ಲ...ಜೊತೆಗೆ ಮೊದಲಾರ್ಧದ ತನಕ ಮುಖ ಯಾಕೋ ಪ್ರೆಶ್ ಅನಿಸಲಿಲ್ಲ....ಆದರೆ ದ್ವಿತೀಯಾರ್ಧದಲ್ಲಿ ಅವರ ನಟನೆ ನಮ್ಮನ್ನು ಪಾತ್ರದೊಳಗೆ ಕೊಂಡೊಯ್ಯುತ್ತದೆ...ಸುಚೇಂದ್ರ ಪ್ರಸಾದ್ ಅವರ ಕೈಯ್ಯಲ್ಲಿ ಮಗಳಂತೆ ಅವರ ಡ್ರಾಮಾ ಆಡುತ್ತಾ  ಕೈತುತ್ತು ತಿನ್ನುವ ದೃಶ್ಯದಲ್ಲಿ ನಿಜಕ್ಕೂ ಕಣ್ಣೀರು ತರಿಸುತ್ತಾರೆ ರಾಧಿಕಾ..ಅದನ್ನು ನೋಡುತ್ತಾ ಯಾಕೋ ನಾನು ನನ್ನ ಕನಸು ನೆನಪಾಯ್ತು.....ದ್ವಿತೀಯಾರ್ಧದಲ್ಲಿ ಮುದ್ದಾಗಿ ಕಾಣಿಸುವ ರಾಧಿಕಾ ಪಂಡಿತ್ ಅಭಿನಯದಲ್ಲಿ ಹಿನ್ನೆಲೆಯಲ್ಲಿ ತೇಲಿಬರುವ "ಹಂಬಲದ ಹೂವಂತೆ ...."ಮನಸ್ಸಿನಲ್ಲಿ ಉಳಿದಿರುತ್ತದೆ...

ಇನ್ನು ಚಿತ್ರಕ್ಕೆ ಹೊಸ ಛಾಪು ಕೊಟ್ಟ ಎರಡು ಪಾತ್ರಗಳ ಬಗ್ಗೆ ಹೇಳಲೇಬೇಕು.."ಏಯ್ ಹುಡುಗ್ರಾ..."ಎಂದು ಗಡಸು ದನಿಯೇರಿಸಿ ಚಿತ್ರದೊಳಗಿಳಿಯುವ ಬುಲ್ ಬುಲ್ (ಅಂಬರೀಷ ಅವರಿಗೆ ನಾಯಕ ಕರೆಯುವ ಹೆಸರು )..."ಅವನು ಆಡಿಸ್ತಾನೆ ಆಡ್ಭೇಕು "ಎಂದು ಕೈಯೆತ್ತಿ ಬೊಂಬೆ ತಿರುಗಿಸುತ್ತಾರೆ...ಪ್ರತಿಯೊಂದು ತಿರುವಿನಲ್ಲು ಕಾಣಿಸಿಕೊಂಡು ಕಣ್ಣಲ್ಲೇ ಎಲ್ಲಾ ಹೇಳುವ ಅಭಿನಯ ಕನ್ನಡದ ಕರ್ಣರದ್ದು.....ಆ ಟೋಪಿ,ಆ ಬೊಂಬೆ ಅದರ ಹಿಂದಿನ ಅರ್ಥ ಅಧ್ಯಾತ್ಮದ ಬಗ್ಗೆ ಆಸಕ್ತಿ ಇರುವವರಿಗೆ ಇನ್ನಷ್ಟು ಇಷ್ಟವಾಗಬಹುದು......

ಜೊತೆಗೆ ಸುಚೇಂದ್ರ ಪ್ರಸಾದ್ ಅವರ ಅಭಿನಯವನ್ನು ಮರೆಯಲು ಅಸಾಧ್ಯ...ಕಾಲೇಜಿನ ಪ್ರಾಂಶುಪಾಲರಾಗಿ "ಕನ್ನಡದಲ್ಲೇ ವ್ಯವಹರಿಸೋಣ" ಎಂದು ಬೋರ್‍ಡು ಹಾಕಿಕೊಂಡು ಅಚ್ಚ ಕನ್ನಡ ಮಾತನಾಡುವ ಅವರು,ಮನೆಯಲ್ಲಿ ಯೆಂಕ್ಟೇಶ್,ಸತೀಶ ಬಂದಾಗ ಕಾಣದ  ಮಗಳ ಬಗೆಗಿನ ಮೋಹದಲ್ಲಿ ,ಅವಳ ಮುದ್ದಾಡುವ  ಆಸೆಯಲ್ಲಿ ಭಾವಾವೇಶಕ್ಕೊಳಗಾಗುವ ಸನ್ನಿವೇಶ ಅವಿಸ್ಮರಣೀಯ, ಅನನ್ಯ ,ಅದ್ಭುತ...ಕೋಪದಲ್ಲೂ ಅಷ್ಟೇ,ಮಮತೆಯಲ್ಲೂ ಅಷ್ಟೇ,ಹತಾಶೆಯಲ್ಲೂ ಅಷ್ಟೇ,ಪ್ರೀತಿಯಲ್ಲೂ ಅಷ್ಟೇ ಸುಚೇಂದ್ರ ಪ್ರಸಾದ ಇಡೀ ತೆರೆಯನ್ನು ಆವರಿಸಿಕೊಂಡಿರುತ್ತಾರೆ ... ಅವರ  ಸ್ಪಷ್ಟವಾದ ಉಚ್ಚಾರ,ಸಂದರ್ಭಕ್ಕೆ ತಕ್ಕಂತೆ ಬದಲಾಗುವ  ಮುಖಭಾವ ನೆನಪಿನಲ್ಲುಳಿಯುತ್ತದೆ....

ಹಾಡುಗಳ ಬಗ್ಗೆಯಂತೂ ಹೇಳುವದೇ ಬೇಡ...ಒಂದಕ್ಕಿಂತ ಒಂದು ಸುಂದರ...ಚೆಂದುಟಿಯ ಪಕ್ಕದಲಿ ಯ ನೃತ್ಯ ಸಂಯೋಜನೆ,ಬೆಳಕಿನ ಸಂಯೋಜನೆಯ ಬಹಳ ಹಿಡಿಸಿತು...ಬಂಗಾರದಂತೆ ಹೊಳೆಯುವ ಬೆಳಕಿನಲ್ಲಿ ಪ್ರೇಮ ನಿವೇದನೆ ಮಾಡುತ್ತಿರುವ ಯಶ್ ಹಾಗೂ ಅಂದದ ರಾಧಿಕಾ ಇನ್ನೂ ಕಣ್ಣಿಗೆ ಕಟ್ಟಿದಂತಿದ್ದಾರೆ....
ತುಂಡ್ ಹೈಕಳ ಸಾವಾಸ ದಲ್ಲಿ ಯಶ್ ಹಾಗೂ ಸತೀಶ ಒಂದಿಷ್ಟು ನಗಿಸ್ತಾರೆ....."ಡ್ರಾಮಾ ತನಿನಾನನ " ಹಾಡುನಲ್ಲಿ ಹಚ್ಚಿಕೊಂಡಿರುವ ಮೀಸೆ,ಕಲ್ಲಂಗಡಿ,ಸೇಬು,ಏಣಿ ಮೇಲೆ ಸೈಕಲ್ಲು  ಹಿಂಗೆ ಏನೋನೋ ಹೊಸತರದ್ದು ಎನಿಸಿ ಮುಂದೇನು ವ್ಯಾಶವೋ ಎಂದು ಕಣ್ಣು ಹುಡುಕುವಂತೆ ಮಾಡುತ್ತದೆ....ಕೃಷ್ಣ ಅವರ ಕ್ಯಾಮರಾದಲ್ಲಿ ತೆಗೆದ  ಬ್ರಿಡ್ಜಿನ ಕೆಳಗಿನ ದೃಶ್ಯಗಳು,ಸಮುದ್ರದ ತೀರ ಮತ್ತೆ ಮತ್ತೆ ನೋಡಬೇಕು ಎನಿಸುವಂತೆ ಮಾಡುತ್ತದೆ...

ಇವಿಷ್ಟು ನಮ್ಮ ಡ್ರಾಮಾಕಥೆ ಪುರಾಣಗಳು....ಈ ನನ್ ಮಗಾ ಎನ್ ಸಿನಿಮಾ ಪಂಟರಾ ಅಂತ ಬೈಕೋಬೇಡಿ...ಅನಿಸಿದ್ದನ್ನು ಬರೆಯುವ ಚಟ ನೋಡಿ...ಬೆರಳಚ್ಚಿಸಿದ್ದೇನೆ ಆಷ್ಟೇ...ಇದು ನಾ ಕಂಡ ಡ್ರಾಮಾ...

ಪುರಸೊತ್ತು ಆದ್ರೆ ನೀವೂ ಒಂದು ಸಲ ಹೋಗಿ ಬನ್ನಿ.......

ಒಟ್ಟಿನಲ್ಲಿ ಎಲ್ಲರನ್ನೂ ನಗಿಸಿ,ನಾಳೆಯ ಬಗೆಗಿನ ಚಿಂತೆ ಹೊಡೆದೊಡಿಸಿ,ಎಲ್ಲ ನಿನ್ನ ಆಟ ಕಣೋ ಎಂಬತೆ ಹಾಯಾಗಿರಿ,ಇಂದಿನದನ್ನು ಆಸ್ವಾದಿಸಿ ಎನ್ನುವ ಡ್ರಾಮಾ ನಂಗಂತೂ ಇಷ್ಟವಾಯ್ತು...

ಇನ್ನೊಮ್ಮೆ ಹೋಗಬೇಕು ಅಪ್ಪ ಬೈದೇ ಇದ್ರೆ,
ಜೇಬಲ್ಲಿ ದುಡ್ಡು ಉಳಿದಿದ್ರೆ!!!!!!
-ಚಿನ್ಮಯ.

 

Thursday, November 8, 2012

ಉಸಿರನ್ನೆ ಕಸಿದಿಟ್ಟ…..


ಸುಮಾರು  ದಿನಗಳಿಂದ ಡ್ರಾಮಾ ಚಿತ್ರದ "ಚೆಂದುಟಿಯ ಪಕ್ಕದಲಿ"...ಹಾಗೂ  "ಹಂಬಲದ ಹೂವಂತೆ ..." ಗೀತೆಗಳನ್ನು ಗುನುಗುನಿಸುತ್ತಾ ಇದ್ದೆ...ತೀರಾ ಇಷ್ಟವಾದ ಹಾಡುಗಳವು... ಯಾವಾಗಲೋ ಊರಿಗೆ ಹೋಗುವಾಗ ಬಸ್ಸಿನ ಟಿಕೆಟ್ಟಿನ ಹಿಂದೆ ಒಂದೆರಡು ಸಾಲನ್ನೂ ಗೀಚಿದ್ದೆ...ಪರೀಕ್ಷೆ ಬರೆದು ಗಣಕದ ಮುಂದೆ ಕುಂತವನಿಗೆ ಇಂದೇಕೋ "ಹಳೆ ರಾಗ ಹೊಸ ಹಾಡು " ಗುಂಪಿನಲ್ಲಿ ಹೃದಯ ಶಿವ ಅವರ ಮಾತು ಕಣ್ಣಿಗೆ  ಬಿತ್ತು...ಹಾಗೆಯೇ ಕಣ್ಣ ಮುಂದೆ ಪೆನ್ನು-ಪೇಪರಿತ್ತು...
ಅದೇ ದಾಟಿಯನ್ನು ಗುನುಗುನಿಸುತ್ತಾ ಗೀಚಿದ ಸಾಲುಗಳಿವು..ದಯವಿಟ್ಟು ನೋಡಿ ತಪ್ಪು ಒಪ್ಪು ತಿಳಿಸಿ..ಆಶೀರ್ವದಿಸಿ...

ಉಸಿರನ್ನೇ ಕಸಿದಿಟ್ಟ ನೇಸರನ ಬಿಸಿಯಿಟ್ಟ,
 ಕನಸೂರ ಕನ್ನೆಗೆ ಹೆಸರಿಲ್ಲಾ.
ಕೆಸರಿದ್ದ ಕಿಸೆಯಲ್ಲಿ ಪ್ರೀತಿಸುವ ಕಾಸಿಟ್ಟ,
ಆ ಕುಸುಮವನ್ನಿಂದು ಮರೆತಿಲ್ಲಾ.
ಮಿಸರಿಯ ಎಸರಂತೆ ಈ ಪ್ರೇಮ,
ಕೇಸರಿಯ ತಿನಿಸಷ್ಟು ವ್ಯಾಮೋಹ,
ಬಸರಿಯ ಬಳ್ಳಿಯೇ ಈ ದೇಹ.

ಬೆಂತರದ ಹುಡುಕಾಟ ಎದೆಸೆಲ್ಲೆಯಲ್ಲಿರಲು,
ಎಲ್ಲಿರುವೆಯೆಂದು ನೀ ಹೇಳವಲ್ಲೆ.
ನಿಂತಲ್ಲೇ ನಿಲ್ಲು ನೀ ನನ್ನೊಲವಿನಾ ಹುಲ್ಲೆ,
ಸಿರಿಚೆಲುವ ಸವಿಯಲು ಬರುವೆನು ಅಲ್ಲೆ.
ಸಂತಿಗೆ ಹೊಡೆಯೋಣ ಸವಿಲಲ್ಲೆ,
ಜೊತೆಗೂಡಿ ಕದಿಯೋಣ ಸಿಹಿಜಲ್ಲೆ,
ನಕ್ಕಿರಲಿ ಅದ ನೋಡಿ ಮಳೆ ಬಿಲ್ಲೆ.
ಎಲ್ಲಿರುವೆ ನೀ ಓ ನಲ್ಲೆ…


 -ಚಿನ್ಮಯ ಭಟ್ಟ. 
 (ಶಬ್ಧಾರ್ಥ:ಮಿಸರಿ- ಒಂದು ಬಗೆಯ ಜೇನು,ಕೇಸರಿ-ನಮ್ಮ ಕಡೆಯಲ್ಲಿ ಮಾಡುವ ಒಂದು ಕಜ್ಜಾಯ,ಬೆಂತರ-ಬೇತಾಳ,ಸೆಲ್ಲೆ-ಮೇಲುಹೊದಿಕೆ,ವಲ್ಲೆ-ಬಯಲು ಸೀಮೆಯಲ್ಲಿ "ಇಲ್ಲ" ಎನ್ನವುದು,ಸಂತಿಗೆ-ಜೊತೆಯಲ್ಲಿ)
ದಯವಿಟ್ಟು ತಪ್ಪುಗಳನ್ನು ತಿಳಿಸಿ....ಹಾಂ ಈ ನನ್ನ ಹುಚ್ಚುತನವನ್ನು ಕಾಯ್ಕಿಣಿ ಹಾಗೂ ಭಟ್ಟರು ಕ್ಷಮಿಸುವಿರೆಂದೂ ನಂಬಿದ್ದೇನೆ..)

Wednesday, October 24, 2012

ಸಿಂಗಾರದ ಕಥೆ


ಕಣ್ಣಿಗೆ ಬೆಳಕು ಕಾಣುತ್ತಲೇ ,ಹಾಸಿಗೆಯ ಮೇಲೆ ಕೈ ಹಾಕಿ “gud mrng dearJ” ಎಂದು ಮೆಸ್ಸೆಜು ಟೈಪು ಮಾಡಿದ ಶತಭಿಷ ಆ ಹುಣಸಿಗೆ ಊರಿನಲ್ಲಿ ನೆಟ್ವರ್ಕು ಸಿಗಲ್ಲಾ ಎಂಬುದನ್ನು ನೆನಪಿಸಿಕೊಂಡು  ಮತ್ತೆ ಮಲಗಿದ.
“ತಮ್ಮಾ ಬೆಳ್ಗಾತು ಎದ್ಕಾ … ಎಂದು ಅಜ್ಜಿ ಎಬ್ಬಿಸಿದಾಗಲೇ ಆತ ಮತ್ತೆ ಕಣ್ಬಿಟ್ಟಿದ್ದು..
ಅಜ್ಜಿ ಹೂವಿನ ಕುಕ್ಕೆ ಹಿಡಿದು ದೇವಸ್ಥಾನಕ್ಕೆ ಹೋದರೆ ಬೆಂಗಳೂರಿನಲ್ಲಿ ಅರ್ಲಿ ಮಾರ್ನಿಂಗ್ ಹತ್ತಕ್ಕೆ ಎದ್ದು ಬಿಡುವ ಹೊಸಜಮಾನಾದ ಈ ಹುಡುಗ ಇಲ್ಲಿ ಏಳೂವರೆಗೇ ಎದ್ದು ಕೋಲ್ಗೇಟು ಹಿಡಿದು ಹೊರಟ.
ಬಚ್ಚಲು ಮನೆಯಲ್ಲಿ ಕಾಸಿಟ್ಟ ಬಿಸಿನೀರಿನಲ್ಲಿ ಮುಖತೊಳೆದು,ಹಾಗೆಯೇ ಒಂದಿಪ್ಪತ್ತೈದು ಹೆಜ್ಜೆ ನಡೆದು ಅಡಿಗೆ ಮನೆಯತ್ತ ನಡೆದವನಿಗೆ ,ಬಾಳೆ-ಮಣೆಯ ಸ್ವಾಗತ ಕಾದಿತ್ತು..ಬಂದೊಡನೆ ಬಂಡಿಮೇಲೆ ಹೊಯ್ದ ತೆಳ್ಳೇವು “ಚೊಯ್ ಯ್…”ಎಂದು ಸದ್ದು  ಮಾಡುತ್ತಿತ್ತು.ಬೆಳಿಗ್ಗೆಯ ಕಾಫಿ-ಬಿಸ್ಕತ್ತನ್ನು ಅವನ ಕಣ್ಣುಗಳು ಹುಡುಕುತ್ತಿರುವಾಗಲೇ ,
ಅಜ್ಜಿ “ತಮಾ ಬಾ ಆಸ್ರಿಗೆ ಕುಡ್ಯಲೇ”(ತಿಂಡಿ ತಿನ್ನಲು) ಎಂದರು…
ಬೆಳಬೆಳಿಗ್ಗೆ ತಿಂಡಿತಿಂದು ಅಭ್ಯಾಸವಿಲ್ಲ ಎಂದು ಬಾಯಿಗೆ ಬಂದರೂ,ತನ್ನಿಂದ ಅಜ್ಜಿಯ ಉಳಿದ ಕೆಲಸಗಳಿಗೆ ತಡವಾಗಬಾರದು ,ತಾನು ತಿಂಡಿ ತಿನ್ನದೇ ಅಜ್ಜಿ ತಿಂಡಿ ತಿನ್ನರು,ಅದರಿಂದ ಮನೆಯ ಕೆಲಸವೆಲ್ಲಾ ತಡವಾಗುವುದು ಎಂದರಿತು “ಹಾಂ ಸರಿ” ಎಂದು ತಿಂಡಿಗೆ ಕೂತ .
ಬೆಲ್ಲ ಬೆಣ್ಣೆಯ ಹದಪಾಕದಲ್ಲಿ ಗರಿಗರಿ ತೆಳ್ಳೆವಿನ ಚೂರುಗಳನ್ನು ಮುಳುಗಿಸಿ ತಿಂದ ಆತ ,ಒಂದು ಶೇರು ಚಹಾವನ್ನು ಹೀರಿ ಅಡುಗೆಯಮನೆಯಿಂದ ಹೊರಬಿದ್ದ.ಅದಾದ ಮೇಲೆ ಹಾಗೆಯೇ ಯಾರೋ ಶಿರಸಿಯಿಂದ ನಿನ್ನೆ ತಂದಿದ್ದ ಪೇಪರನ್ನು ಓದುತ್ತಾ ಕುಳಿತಿದ್ದ.
ಅಷ್ಟರಲ್ಲೇ ಒಬ್ಬ ಪಟ್ಟೇಪಟ್ಟೆ ಲುಂಗಿಯುಟ್ಟಿದ್ದ ಆಸಾಮಿ ಜಗುಲಿಗೆ ಬಂದು “ಅಮ್ಮಾ “ಎಂದ.
ಪೇಪರ್ ಓದುತ್ತಿದ್ದ ಶತಭಿಷ “ಎಂತದು?” ಎಂದು ಕೇಳಿದ,
ಆ ಆಸಾಮಿ ,”ತಮ್ಮಾ಼….ಅಮ್ಮನ ಕೂಡೆ ಆಚಾರಿ ಬಂದಿದ ಹೇಳು..”
ಶತಭಿಷನ ಕಿವಿಗಳು ಇದನ್ನು ಕೇಳಿ “ಬೈಂದೂರು ಭಾಷೆ’ ಎಂದವು..ಅದರ ಜೊತೆಗೆ ಗೊಬ್ಬರ ಹೊರಲು ಬರುತ್ತಿದ್ದ ಶೇರುಗಾರರು ಮಾತನಾಡುತ್ತಿದ್ದ ಭಾಷೆಯೂ ಇದೇ ಎಂಬ ಪುರಾವೆಯೂ ಸಿಕ್ಕಿತ್ತು..
”ಸರಿ ಹೇಳ್ತೆ ನೀವ್ ಕುತ್ಕಳಿ” ಎಂದು ಸ್ಟೂಲು ಮುಂದಿಟ್ಟು ಅಜ್ಜಿಯ ಹತ್ತಿರ ಹೋಗಿ “ಆಯಿ,..ಆಚಾರಿ ಬಂಜಾ”(ಅಜ್ಜಿ, ಆಚಾರಿ ಬಂದಿದ್ದಾನೆ)ಎಂದ.
ಅಜ್ಜಿ “ಸರಿ,ಕುತ್ಕಂಬಲೆ ಹೇಳು,ಆಸ್ರಿಗೆ ತತ್ತಿ”(ಕೂರಲು ಹೇಳು,ತಿಂಡಿ ತರುವೆನು) ಎಂದು ಹೇಳಿ ಕಳುಹಿಸಿದರು…
ಜಗುಲಿಗೆ ಬಂದ ಶತಭಿಶಷ ಆಚಾರಿಯ ಬಳಿ ಮಾತಿಗಿಳಿದ…
ಶತಭಿಷ : “ನಿಮ್ ಹೆಸ್ರು ಎಂತದು??ಎಷ್ಟ್ ವರ್ಷಆಯ್ತು ಈ ಕೆಲ್ಸಾ ಮಾಡ್ತಾ?”
ಆಚಾರಿ:”ನನ್ ಹೆಸ್ರು ಮಂಜೇಶ್ವರನಾಥೇಶ್ವರಾಚಾರಿ  .ಜನ  ಮಂಜಾಚಾರಿ,ಒಂದೊಂದ್ ಸಲ್  ಮಳ್ಳಾಚಾರಿ ಹೇಳು ಕರಿತ್ರು ಅಂತಿಟ್ಕಣಿ..ನಾನು ನಮ್ಮಪ್ಪನ ಕೂಡೆ ಉಳಿ-ಚಾಣ ಹಿಡ್ಕಂಡ್ ಘಟ್ಟ ಹತ್ತಿ ಬಂದವಾ..ಸಣ್ಣಕಿದ್ದಾಗಿಂದಲೂ ಇದೇ ಕೆಲ್ಸಾ..ಸುಮಾರ್ ವರ್ಷಾ ಆಯ್ತ್ ”
ಶತಭಿಷ: “ಹಮ್..ಮತ್ತೆ ಕೆಲಸ ಹೆಂಗದೆ ಈಗ??”
ಆಚಾರಿ :”ಎಂತಾ ಹೇಳುದ್ ಹೇಳಿ ಕಾಂಬಾ..ಎಲ್ಲಾ ಭಗವಂತ ಕೊಟ್ಟಿದ್ ಅಲ್ದಾ…ಈಗ ಮರದ ಕೆಲ್ಸಾ ಇಲ್ಲಾ ಮಷಿನ್ ನಲ್ಲೇ ಮಾಡ್ತಿರು,,ರೆಡಿಮೇಡ್ ಬಾಗ್ಲು,ರೆಡಿಮೇಡ್ ಕಿಡಕಿ ಚೌಕಟ್ಟು,ರೆಡಿಮೇಡ್ ಮಂಚ..ನಮ್ಮನ್ನ ಯಾರು ಕೇಳ್ತ್ರು… ಅದೂ ಈಗ ನಾಟಾ ಸಿಗೂದೂ ಕಷ್ಟಾ ಆಗಿತಲ್ದಾ...”
ಇಗಾ ಇಲ್ ಕಾಣಿ, ಆ ದ್ವಾರ ಬಾಗಿಲ್ ಇತ್ ಅಲ್ದಾ,,ಅದು ನಮ್ಮಪ್ಪನೆ ಮಾಡಿದು..ಒಂದ್ ವಾರ ಆ ಬಳ್ಳಿ ಬಿಡ್ಸುಕೆ ತಕಂಡಿದಾ ಅವಾ…ಅದ್ನೆ ನೀವು ಈಗ ಮಷಿನ ಅವ್ರ ಹತ್ರ ಹೋಗಿ ಹೇಳ್ರೆ,ಬೆಳಿಗ್ಗೆ ಹೇಳಿ ಸಂಜೆ ತಕಂಡ್ ಹೋಗಿ ಅಂತ್ರ್ …
ಅಲ್ಲಾ ಎಷ್ಟೇ ಹೇಳಿ,ನೆರಿಗೆ ಹಿಡ್ಯು ಕೆಲ್ಸಾ ಮಷಿನ್ ಇಂದಾ ಆತ್ತಾ??”
ಶತಭಿಷ:: “ಅರೆ ಹಂಗದ್ರೆ?”
ಆಚಾರಿ :” ಮರನಾ ಬರೆ ಕತ್ತಿನೋ ಕೊಡ್ಲಿನೋ ತಕಂಡ್ ಕಡ್ದು,ಕತ್ತರಿಸಿ ಕೂಡ್ಸದಲ್ಲಾ ಮರದ್ ಕೆಲ್ಸಾ ಅಂದ್ರೆ..ಅದ್ರ ನಾರು ಹೆಂಗದೆ..ಅದು ಯಾವ್ ಜಾತಿ ಮರ..ಎಷ್ಟ್ ಗಟ್ಟಿ ಇರ್ತ್, ಬಾಗಿಲಿಗೆ ಹಾಕುದಾ,ರೀಪಿಗೆ ಹೋಡ್ಯುದಾ,  ಎಲ್ ಹೊಡ್ದ್ರೆ ಸಿಗುಳು ಬತ್ತ್,ಎಷ್ಟ್ ಜೊರ್ ಹೊಡ್ಯಕ್,ಎಲ್ಲಾ ನೋಡ್ಕಣುಕಾತ್ತಾ ಮಷಿನ್ ಹತ್ರ?ಇಲ್ಲ ಬಿಡಿ  “
ಶತಭಿಷ: “ಅದು ಸರಿನೆ ಬಿಡಿ”..
ಅಷ್ಟರಲ್ಲಿ ತಿಂಡಿ ಬಂದಿತ್ತು ,ಆಚಾರಿ ಅದನ್ನು ತಿಂದು ಮನೆಯ ಹಿಂಭಾಗಕ್ಕೆ ಹೊರಟ..ಅಲ್ಲಿ ಆಚಾರಿ ದೇವರ ಪೀಠವನ್ನು ಸರಿ  ಮಾಡುವ ಕೆಲಸವಿತ್ತು…ದೇವರ ಪೀಠ ಹಳೆಯದಾಗಿ ಹಾಳಾದ್ದರಿಂದಲೇ ಇವನನ್ನು ಸರಿ ಮಾಡಲು ಕರೆಸಿದ್ದರು..ಶತಭಿಷನ ಮಾವ ಮೊದಲೇ ಪೀಠವನ್ನು ಅಲ್ಲಿಗೆ ತಂದಿಟ್ಟು ಶಿರಸಿಗೆ ಹೋಗಿದ್ದರು..ಆಚಾರಿ ತನ್ನ ಕೆಲಸದಲ್ಲಿ ಮಗ್ನನಾದರೆ ಶತಭಿಷ ಯಾವುದೋ ಇಂಗ್ಲಿಷ್ ಕಾದಂಬರಿ ಹಿಡಿದು ಕೂತ…
                             *************************************************
ಸಂಜೆ ನಾಲ್ಕು ಘಂಟೆಯ ಸುಮಾರಿಗೆ ಶತಭಿಷ ಮಲಗೆದ್ದು ಮುಖತೊಳೆಯಲು ಬಚ್ಚಲಮನೆಯ ಕಡೆಬಂದಾಗ ಹಳೆಯ ಪೀಠ ಹೊಸರೂಪವನ್ನು ಪಡೆದು ಸುಂದರವಾಗಿ ಕಾಣುತ್ತಿತ್ತು..ಅಷ್ಟೊತ್ತಿಗೆ ಅಲ್ಲಿಗೆ  ಬಂದ ಆಚಾರಿ
“ಇಗ ಆಯ್ತಂಬ್ರ..ನಾ ಹೊರ್ಟೆ.. “ ಎಂದು ಹೊರಟ..
ಆಗ ಅಜ್ಜಿ “ಏಯ್ ಆಚಾರಿ ಅಚ್ಚೆ ನಾಡಿದ್ದೆಯ ದೊಡ್ಡ ಹಬ್ಬ”(ದೀಪಾವಳಿ )”ಶಿಂಗಾರ ಬೇಕಾದ್ರೆ ತ್ವಾಟದಲ್ ಅದ್ಯಾ ನೋಡ್ಕಾ “ (ಸಿಂಗಾರ ಬೇಕಾದರೆ ತೋಟದಲ್ಲಿ ಇದೆಯೋ ನೋಡು)ಎಂದರು..
ಆಚಾರಿ:”ಹಾಂ ಮರ್ತೆ ಹೋಗಿತ್..ನಾ ತ್ವಾಟಕ್ ಹೋಗ ಬತ್ತೆ ಇವ್ರ್ ಕರ್ಕಂಡು..ಇವ್ರಿಗ್ ತ್ವಾಟದ್ ದಾರಿ ಗೊತ್ತೀತ್ ಅಲ್ದಾ??”
ಅಜ್ಜಿ :”ಹಾಂ..ತಮ್ಮಾ ಅವನ್ನಾ ಇಲ್ಲೆ ಬಾಗಿಲಿನ ಪಾಲಿಗೆ ಕರ್ಕಂಡ್ ಹೋಗಾ “
ಇತ್ತ ಶತಭಿಷನಿಗೆ ನಗುಬರುತ್ತಿತ್ತು..ಅವನಿಗೂ ತೋಟಕ್ಕೂ ಭಾರೀ ದೂರ..ಅವರಮ್ಮ ಒಮ್ಮೆಮ್ಮೆ “ಈ ಮಾಣೀಗೆ ಅಡ್ಕೆ ಕಾಯಿ ಅಡ್ಕೆ ಮರದ್ ಮೇಲೆ ಇರ್ತಾ??ಕೆಳಗ್ ಬಿಡ್ತಾ  ಹೇಳೂ ಗೊತ್ತಿದ್ದ ಇಲ್ಯ! “ ಎಂದು ಆಡಿಕೊಳ್ಳುವುದುಂಟು..ಅವನಿಗೆ ತೋಟದ ದಾರಿಯೊಂದು ಗೊತ್ತಿತ್ತು ಅಷ್ಟೇ.!!!.
ಗುಡ್ಡ ಇಳಿದು ಹೋಗುತ್ತಿರುವಾಗ,
 ಶತಭಿಷ :” ಅಲ್ಲಾ ಅದು ನೀವು ಕೆಲಸ ಮಾಡುತ್ತಿರುವಾಗ ಕೈತಪ್ಪಿ ಏನಾದ್ರು ಕರಗಸ,ಸುತ್ತಿಗೆ ತಟ್ಟಿ ದೇವರ ಪೀಠ ಹಾಳಾಗೊದ್ರೆ ಅಂಥ ಹೆದ್ರಿಕೆ ಆಗೂದಿಲ್ವಾ ?“
ಆಚಾರಿ:” ಇದು ನನ್ನ ಕಟ್ಟಿಗೆ,ಇದು ನನ್ನ ಪೀಠ..ಇದನ್ನು ನಾನೇ ಮಾಡುತ್ತಿರುವುದು ಅಂತಾ ಮಾಡುಕಾಗ..ಎಲ್ಲದೂ ದೇವರದ್ದು..ಅವನೇ ಮಾಡ್ಸ್ಕಂತಿಪ್ಪುದು…ಹೇಳಿ ಮಾಡ್ದ್ರೆ ಎಲ್ಲದೂ ಸರಿ ಆತ್..ಅಲ್ಲಾ ಅವ್ನೇ ಕೂಕಂಬು(ಕುಳಿತುಕೊಳ್ಳುವ)  ಪೀಠ ಅವ್ನೇ ಹಾಳ್ ಮಾಡ್ಕಂತ್ನಾ??ಹೇಳಿ ” ಎನ್ನುತ್ತಾ ತೋಟ ತಲುಪಿದ..
ಅದು ಮಲೆನಾಡಿನ ಶಿರಸಿಯ ವಳಭಾಗೀ ಸೀಮೆಯ ತೋಟ..ವರಷ ಪೂರ್ತಿ ನೀರಿರುವ ಆ ತೋಟದಲ್ಲಿ ಅಡಿಕೆಮರಗಳೆಲ್ಲಾ  ಸೂರ್ಯನನ್ನು ಚುಂಬಿಸುವಷ್ಟು ಎತ್ತರವಾಗಿದ್ದವು..ಬೈತಲೆ ತೆಗೆದಂತೆ ಇದ್ದ ಕಾಲುವೆಗಳು,ಪುಟ್ಪಾತಿನಂತಿದ್ದ ನಿತ್ತುಗಟ್ಟುಗಳು(ಮಧ್ಯ ನಡೆಯುವ ಜಾಗ) ..ಮೆಲ್ಲಗೆ ಹರಿಯುವ ನೀರುಹೊಂದಿದ ಮಂಡಗಾಲುವೆಗಳು,ಅಲ್ಲಲ್ಲಿ ತಲೆ ಎತ್ತಿನಿಂತದ್ದ ಹಲಸು ಮಾವುಗಳು,ಅಡಿಕೆಯ ಮರಗಳನ್ನು ಅಪ್ಪಿಕೊಂಡಿದ್ದ ಮೆಣಸಿನ ಬಳ್ಳಿಗಳು,ಆ ಮರಗಳ ಮಧ್ಯದಲ್ಲಿ ಸುಗಂಧ ಸೂಸುತ್ತಿದ್ದ ಏಲಕ್ಕಿಯ ಗಿಡಗಳು..ಬಂದವರನ್ನು ಬಾಗಿ ನಡೆಸುತ್ತಿದ್ದ ಬಾಳೆಯ ಗಿಡಗಳು,ನಡೆಯುವರನ್ನು ಜಾರಿ ಬೀಳಿಸುತ್ತಿದ್ದ ಕೊಳೆತಹಾಳೆಗಳು..ಅಲ್ಲಿಲ್ಲಿ  ಕಂಡುಬರುತ್ತಿದ್ದ ಸೋಂಗೆಹಸೆಗಳು(ಅಡಿಕೆಯ ಸೋಗೆಯನ್ನು ತಾತ್ಕಾಲಿಕವಾಗಿ ಸಂಗ್ರಹಿಸಿವು ಜಾಗ),ಅಲ್ಲಿಂದಿಲ್ಲಿಗೆ ಹೋಗಲು ಹಾಕಿದ್ದ ಅಡಿಕೆಯ ಮುಂಡಗಳು..
ಇಂತಿಪ್ಪ ತೋಟದಲ್ಲಿ ಅಚಾರಿಯ ಕಣ್ಣಿಗೆ ಅವತ್ತು ಯಾವ ಚಿಕ್ಕ ಮರವೂ ಬೀಳಲಿಲ್ಲ. . ದೊಡ್ಡ ಮರ ಹತ್ತಿ ಸಿಂಗಾರ ಕಡಿಯಲು ಅವನಿಗೆ ಹೆದರಿಕೆ..ಯಾವುದಾದರೂ ಬಿದ್ದ ಮರದಲ್ಲಿ ಸಿಂಗಾರ ವಿದ್ದೀತೇ ಎಂದು ಹುಡುಕುತ್ತಿದ್ದ ಆತ.. ದೊಡ್ಡ ಹಬ್ಬಕ್ಕೆ ಸಿಂಗಾರ ಅಂದರೆ ಅಡಿಕೆಯ ಹೂವು ಇಲ್ಲದೇ ಬಲಿವೇಂದ್ರನಿಗೆ ಕಳೆಯಿಲ್ಲ,ಹಾಂ ಆದರೆ ಈ ಸಿಂಗಾರ ಬೇಕೆಂದರೆ ಆ ಮರವನ್ನು ಕೊಲ್ಲಲೇ ಬೇಕು,,ಏಕೆಂದರೆ ಅದರ ತಲೆಯಲ್ಲಿಯೇ ಹೂವು ಇರುವುದು….
ಹೀಗೆ ಹುಡುಕುತ್ತಿದ್ದವನಿಗೆ ಒಂದು ಕಡೆ ಬಿದ್ದ ಮರ ಕಂಡಿತು,ಅವನ ಅದೃಷ್ಟಕ್ಕೆ ಸಿಂಗಾರವೂ ಅದರಲ್ಲಿತ್ತು..ಖುಷಿಯಿಂದ ಅದನ್ನು ಕಡಿದ ಆತ ,ಹಿಡಿದುಕೊಂಡು ಹುಣಸಿಗೆ ಕತ್ರಿಯ ಹಾದಿ ಹಿಡಿದ..
ಇತ್ತ ನಮ್ಮ ಶತಭಿಷನಿಗೇನೋ ಗಲಿಬಿಲಿ..ಅವನಿಗೆ ಇದು ತನ್ನ ಅಜ್ಜನಮನೆಗೆ ಸೇರಿದ ತೋಟವೆಂದು ಗೊತ್ತು..ಆದರೆ ಅವರಲ್ಲೇ ಹಿಸೆಯಾಗಿ (ಅವಿಭಕ್ತ ಕುಟುಂಬಗಳ ವಿಭಜನೆ) ಯಾವ ಪಾಲು ಯಾರದ್ದೆಂದು ತಿಳಿಯದ್ದಾಗಿತ್ತು..ತನ್ನ ಅಜ್ಜನದು ಯಾವ ಪಾಲೋ,ಚಿಕ್ಕಜ್ಜನದು ಯಾವ ಪಾಲೋ ತಿಳಿಯದಾಗಿತ್ತು..ಈ ಅಜ್ಜಂದಿರಿಬ್ಬಿರೂ ಈಗ ಹಾವು-ಮುಂಗುಸಿಯ ಥರ ಕಚ್ಚಾಡುತ್ತಿದ್ದುದೂ ಅವನಿಗೆ ತಿಳಿದಿತ್ತು.. ಇತ್ತ ಆಚಾರಿಯೋ ಇವನು ಮೊಬೈಲಿನಲ್ಲಿ ಸಿಗ್ನಲ್ಲು ಹುಡುಕುತ್ತಿರುವಾಗಲೇ ಸಿಂಗಾರ ತೆಗೆದುಕೊಂಡು “ ಬರ್ತೆ ಅಗಾ “ ಎಂದು ಹೇಳಿ ಹೊರಟು  ಹೋಗಿದ್ದ…ಏನು ಮಾಡುವುದೆಂದು ತಿಳಿಯದೇ ಬಿದ್ದ ಅಡಿಕೆ ಮರದ ಬಣ್ಣವನ್ನು (ನಿತ್ತುಗಟ್ಟಿನ ಅನುಕ್ರಮ ಸಂಖ್ಯೆ) ನೋಡುತ್ತಾ, “ಆರೆನೇ ಬಣ್ಣ” ಎಂದು ನೆನಪಿಟ್ಟುಕೊಂಡು ಮನೆಗೆ ಹಿಂದಿರುಗಿದ..
ಮರುದಿನ ಬೆಳಿಗ್ಗೆ ವಾಪಸ್ ತನ್ನ ಮನೆಗೆ ಹೊರಟಿದ್ದ ಶತಭಿಷ,ಬಸ್ಸು ಸ್ಟಾಪಿನ ತನಕ ತನ್ನನ್ನು ಕಳಿಸಿಕೊಡಲು ಬಂದ ಮಾವನ ಬಳಿ
“ಮಾವಾ ..ನಿಮ್ಮನೆದು ಕೆಳಗಿನ ಪಾಲು ಎಷ್ಟು ಬಣ್ಣ ???ಚಿಕ್ಕಜ್ಜಂದು ಎಲ್ಲಿಂದ ಶುರು ??”ಎಂದು ಕೇಳಿದ..
ಅದಕ್ಕೆ ಮಾವ..”ನಮ್ಮದು ಮೊದಲಿನ ಐದು ಬಣ್ಣ,ಆರನೇಯ ಬಣ್ಣದಿಂದ ಅವರದ್ದು” ಎಂದ.
ಅಷ್ಟರಲ್ಲೇ ಶತಭಿಷನಿಗೆ ಬೆವರಿಳಿಯತೊಡಗಿತ್ತು..ಇನ್ನು ಹುಣಸಿಗೆಯಲ್ಲಿ ಇವತ್ತು ಜಗಳ ಖಚಿತ..

“ನಿಮ್ಮ ಮನೆಗೆ ಬಂದ ಆಚಾರಿ ತನ್ನ ತೋಟದ ಸಿಂಗಾರವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು,ಇದಕ್ಕೆ ನಿನ್ನ 

ಕುಮ್ಮಕ್ಕೇ ಕಾರಣ “ಎಂದು ಚಿಕ್ಕಜ್ಜ ಅಜ್ಜನ ಮನೆ ಬಾಗಿಲಿಗೆ ಬರುತ್ತಾನೆ..ಏನೂ ಗೊತ್ತಿರದ ಅಜ್ಜ ತಪ್ಪೇ ಇಲ್ಲವೆಂದು 

ಕೂಗಾಡುತ್ತಾನೆ..ಆಮೇಲೆ ಶುರು ಹುಣಸಿಗೆ ಮಹಾಯುದ್ಧ ಎಂದು ಎಣಿಸುತ್ತಿರುವಾಗಲೇ,ಒಬ್ಬ ಸೈಕಲ್ ಹತ್ತಿರ ಬಂದು

 “ ದೊಡ್ಡ ಭಟ್ರು ಅರ್ಜಂಟ್ ಬರುಕ್ ಹೇಳ್ ಕಳ್ಸಾರೆಮ್,ಅಚ್ಚೆ ಕೇರಿ ಭಟ್ರ್ ಎಲ್ಲಾ ಬಂದಾರೆ,ಏನೋ ನಂಬರಕಟ್ಟು(ಜಗಳ) ಆಗದೆ” ಎಂದು ಮಾವನ ಹತ್ತಿರ ಹೇಳಿದ..ಅದಾಗಲೇ ಬಸ್ಸೂ ಬಂದಿದ್ದರಿಂದ  ಶತಭಿಷನೂ ಬಸ್ಸೇರಿದ…ಕೂತವಿನಿಗೆ ಯಾಕೋ ಆಚಾರಿಯ ಮಾತುಗಳು ಮತ್ತೆ ನೆನಪಾದವು…
 “ಇದು ನನ್ನ ಕಟ್ಟಿಗೆ,ಇದು ನನ್ನ ಪೀಠ..ಇದನ್ನು ನಾನೇ ಮಾಡುತ್ತಿರುವುದು ಅಂತಾ ಮಾಡುಕಾಗ..ಎಲ್ಲದೂ ದೇವರದ್ದು..ಅವನೇ ಮಾಡ್ಸ್ಕಂತಿಪ್ಪುದು…ಹೇಳಿ ಮಾಡ್ದ್ರೆ ಎಲ್ಲದೂ ಸರಿ ಆತ್”..” 
ಜೊತೆಯಲ್ಲಿ
“ದೇವರು ಕೊಟ್ಟ ಭೂಮಿ,ಅವನು ಕೊಟ್ಟ ತೋಟ,ಅವನು ಕೊಟ್ಟ ಸಿಂಗಾರ..ಅದು ಸಲ್ಲುವುದೂ ಅವನಿಗೇ…ಮತ್ಯಾಕೆ ಈ ಜಗಳ ????”ಎಂಬ ಸಾಲುಗಳೂ ಮೂಡಿದವು…..
(ಇದು ಒಂದು ಕಾಲ್ಪನಿಕ ಕಥೆ..ನನ್ನ ಕನಸಿನ ಕಾದಂಬರಿಯಲ್ಲಿ ಬರುವ ಒಂದು ಪುಟ್ಟ ಭಾಗ..ಏನೋ ಬರೆಯುವ ಪ್ರಯತ್ನ ಮಾಡಿದ್ದೇನೆ..ನಮ್ಮ ಕಡೆ ಬಳಸುವ ಪದಗಳನ್ನು ಉಪಯೋಗಿಸುವ  ಪ್ರಯತ್ನವೂ ಇದೆ, ಶಬ್ಧಗಳು ಅರ್ಥವಾಗದಿದ್ದರೆ ದಯವಿಟ್ಟು ಕೇಳಿ..
ತಪ್ಪುಗಳಿದ್ದರೆ ದಯವಿಟ್ಟು ಹೇಳಿ...ನಿಮ್ಮ ಅನಿಸಿಕೆಗಳನ್ನು ಹೇಳಿ,ತಪ್ಪು-ಒಪ್ಪನ್ನು ತಿಳಿಸಿ,ಪ್ರೋತ್ಸಾಹಿಸಿ..)
-ನಿಮ್ಮನೆ ಹುಡುಗ,
ಚಿನ್ಮಯ ಭಟ್ಟ

Monday, October 15, 2012

ಗಿರಿ-ಬಾಲೆಯ ದರ್ಶನ

"ಆಕಸ್ಮಿಕ","ಅದೃಷ್ಟ" ಅಂತೆಲ್ಲಾ ಹೇಳ್ತೀವಲ್ವಾ???ಅದ್ಕೆ ಒಂದು ಒಳ್ಳೆ ಉದಾಹರಣೆ ನಿನ್ನೆ ಸಿಕ್ತು. ..ಬೆಳಗಿಂದ ಪುಸ್ತಕ ಹಿಡಿದುಕೊಂಡು ಕೂತವನಿಗೆ ಸುಮನಕ್ಕ ದೇವಸ್ಥಾನಕ್ಕೆ ಹೋಗ್ತಿದೀನಿ ಅಂದಾಗ ನನಗೂ ದೇವರ ನೆನಪಾಯ್ತು..ಹಂಗೇ ಇಲ್ಲಿಯೇ ಪಿ.ಜಿಯ ಬದಿಯ ಹಿರೇಮಗಳೂರು ಕೋದಂಡರಾಮ ದೇವಸ್ಥಾನಕ್ಕೆ ಹೋದವನಿಗೆ ಗಿರೀಶ(ಗಿರಿ ಶಿಖರ ಬ್ಲಾಗ್) ಹಾಗೂ ಬಾಲು ಸರ್(ನಿಮ್ಮೊಳಗೊಬ್ಬ ಬಾಲು) ಸಿಕ್ಕಿದ್ರು..ಕೇವಲ ಬ್ಲಾಗಿನಲ್ಲಿ ಅವರ ಲೇಖನಗಳನ್ನು ಓದಿ ಅಭಿಮಾನಿಯಾಗಿದ್ದ ನನಗೆ ಅವರೊಂದಿಗೆ ಮುಖತಃ ಭೇಟಿಯಾಗಿ ಮಾತನಾಡುವ ಅದೃಷ್ಟ ಸಿಕ್ತು..ಹಂಗೆ ದೇವಸ್ಥಾನ ನೋಡಿಕೊಂಡು ಹೊರಡುವ ಮುನ್ನ ಬಾಲು ಸರ್ ಆತ್ಮೀಯತೆಯಿಂದ ಗಿರಿ ಪ್ರವಾಸಕ್ಕೆ ಕರೆದರು,ನಾನೂ ಗೋಣಲ್ಲಾಡಿಸಿ ಹೊರಟೆ..ಜೊತೆಗೆ ನಮ್ಮದೇ ಕಾಲೇಜಿನ ದರ್ಶನ್ ಕೂಡ ಸೇರಿದರು.. ಹೀಗೆ ಆಕಸ್ಮಿಕವಾಗಿ ಹೊರಟ ಪ್ರವಾಸ ನನ್ನ ಪಾಲಿಗೆ ಮರೆಯಲಾದದ್ದು...ಅಲ್ಲಿಯ ಗಿರಿ ಪರ್ವತಗಳನ್ನು ನೋಡಿ ಮನಸ್ಸಿಗನಿಸಿದ್ದಷ್ಟನ್ನು ಗೀಚಿದ್ದೇನೆ..ದಯವಿಟ್ಟು ಓದಿ ,ತಪ್ಪು-ಒಪ್ಪುಗಳನ್ನು ತಿಳಿಸಿ ಆಶೀರ್ವದಿಸಿ...



ಕರಿಹಸಿರು ಕೇಶರಾಶಿಯ ಬಿಟ್ಟು,
ಗಿಳಿಹಸಿರು ಕುಪ್ಪಸವ ತೊಟ್ಟು
ಬಿಳಿಮೋಡದ ಸೆರಗನು ಹೊದೆದು
ನಿಂತಿದ್ದಳಾಕೆ ನಮಗಾಗಿ ಕಾದು

ಮೋಡದಡಿಯಲಿ ನಮ್ಮನು ನೂಕಿ,
ಆಡಿಸಿದಳು ಹರುಷದುಯ್ಯಾಲೆಯನು ಜೀಕಿ,
ಬೀಳಿಸಿದಳು ಕ್ಯಾಮರವ ಹಳೆಹೋಳಿಯಲಿ
ಬೀಸಿದಳು ಚಾಮರವ ತಂಗಾಳಿಯಲಿ

ಅಲ್ಲಿತ್ತು ಹಸಿರು ಮೆತ್ತಿದ ಕಲ್ಲಿನ ಕೇಕು
ಜೊತೆಗಿತ್ತು ಹಸಿರಿನ ಹೂಗಳ ತಳಕು
ಕಂಡಿರಲು ಸುತ್ತಲೂ ಹಸಿರಿನ ಸಾಲುಗಳು
ಮೂಡಿತು ಮೆತ್ತಗೆ ಶಬ್ಧವಿರದ ಸಾಲುಗಳು.

( ಇಲ್ಲಿ ಜೀಕುವುದು ಎಂದರೆ ತೂಗುವುದು ಎಂದರ್ಥ,
ಹೋಳಿ ಎಂದರೆ ನಮ್ಮ ಕಡೆ ತುಂಟತನಕ್ಕೆ ಬಳಸುವ ಪದ)

ಧನ್ಯವಾದ ಗಿರೀಶ್,ಬಾಲು ಸರ್ ಹಾಗೂ ದರ್ಶನ್.......

-ನಿಮ್ಮನೆ ಹುಡುಗ

Friday, October 5, 2012

ಮೂಡುತಿದೆ ಮಿರಿಮಿಂಚು…..

ನಿನ್ನೆ ನಿಸಾರ್ ಅಹ್ಮದರ "ನಿತ್ಯೋತ್ಸವ 'ತಂದು ಓದುತ್ತಾ ಕೂತೆ.. ಅವರು ಶಬ್ದಗಳನ್ನು ಬಳಸುವ ರೀತಿ ಹಾಗೂ ಭಾವವನ್ನು ಅಭಿವ್ಯಕ್ತಪಡಿಸುವ ರೀತಿ ತುಂಬಾ ಇಷ್ಟವಾಯ್ತು.. .ಹಾಗೇಯೆ ಮಡಚಿಟ್ಟವನಿಗೆ ,ನನಗೂ ಏನಾದರೂ ಬರಿಯಬೇಕು ಎಂದೆನಿಸಿತು...ಆಗಷ್ಟೇ ಮಳೆ ಬಿಟ್ಟಿತ್ತು...ನನ್ನ ಮನಸ್ಸಿನಲ್ಲಿ ಹಲವಾರು ದಿನದಿಂದ ಹೊಯ್ದಾಡುತ್ತಿದ್ದ ಗೊಂದಲಗಳ  ಪರಿಹಾರಕ್ಕೊಂದು ದಾರಿ ಹೊಳೆದಿತ್ತು.ಅವೆರಡನ್ನೂ ಸೇರಿಸಿ ಬರೆಯುವ ಪ್ರಯತ್ನ ಇದು...ಇದನ್ನು  ಮಳೆ ನಿಂತು ಹೋದ ಮೇಲಿನ ವಾತವರಣವೆಂದಾದರೂ ತಿಳಿದುಕೊಳ್ಳಿ ಅಥವಾ ಮನದ ಗೊಂದಲಗಳು ಕಳೆದು,ಹೊಸ ದಾರಿ ಸಿಕ್ಕ ಸ್ಥಿತಿಯ ಸಾಲುಗಳು ಎಂದಾದರು ತಿಳಿದುಕೊಳ್ಳಿ....


ಮೂಡುತಿದೆ ಮಿರಿಮಿಂಚು ಬಾಂದಣದ ಅಂಚಿನಲಿ
ತಾಡಿಸುತಿದೆ ಹೊಸಕನಸು ಮಳೆಬಿಲ್ಲ ಕುಂಚದಲಿ||

ಕೊಚ್ಚಿಹೋಯಿತು ಕೊಳೆಯು ಜಡಿದಿದ್ದ ಸುರಿಮಳೆಗೆ,
ಚೊಕ್ಕವಾಯಿತು ಇಳೆಯು ನೆಗಸಿನಾ ಸುಳಿಗಳಿಗೆ.
ಬಿರುಕೆಲ್ಲಾ ಸೇರುತಿದೆ,ನನಕಾರ ಕರಗುತಿದೆ,
ಸಮತೆಯಾ ಬಯಲೀಗ ಕೈಬೀಸಿ ಕರೆಯುತಿದೆ.

ಚಾಮರವಾ ಬೀಸುತಿದೆ ಮಿಂದೆದ್ದ ಹಳೆಮರವು,
ಹಾನವನು ಸುಳಿದಿರಲು ಕೆನ್ನೀರ ಹೊಸಹರಿವು.
ಮೊಳೆಯುತಿದೆ ಚಿಗುರೊಂದು ಮಲಗಿದ್ದ ಮಣ್ಣಿನಲಿ,
ಕಾಣುತಿದೆ ಕೋಲ್ಮಿಂಚು ಕಂದಿದಾ ಕಣ್ಣಿನಲಿ.

(ಇದರಲ್ಲಿ ನಮ್ಮ ಮನೆಯ ಕಡೆ ಬಳಸುವ ಶಬ್ದವನ್ನು ಬಳಸುವ ಪ್ರಯತ್ನ ಮಾಡಿದ್ದೇನೆ,ನೋಡಿ..
ನೆಗಸು=ಜೋರಾದ ಮಳೆಯಿಂದ ಹೊಳೆಯ ನೀರಿನಲ್ಲಿ ಉಂಟಾಗುವ ಉಬ್ಬರ
ಹಾನ=ದ್ರಷ್ಟಿ ತೆಗೆಯುವ ಒಂದು ಬಗೆ  )
,ದಯವಿಟ್ಟು ಓದಿ ,,,ತಪ್ಪು ಒಪ್ಪುಗಳನ್ನು ತಿಳಿಸಿ, ನನ್ನನ್ನು ಬೆಳೆಸಿ
-ನಿಮ್ಮನೆ ಹುಡುಗ

Saturday, September 22, 2012

ಊರುಗೋಲಾಗಿರಿ ಗೆಳೆಯರೆ…



ಆತನ ಹೆಸರು ಕರಣ್.ಒಳ್ಳೆಯ ಮಿಮಿಕ್ರಿ ಪ್ರತಿಭೆ.ಕಾಲೇಜಿನ ಕ್ಯಾಂಟೀನಿನಲ್ಲಿ ಒನ್ ಬೈ ತ್ರೀ ಕೋಕೋಕೋಲಾ  ಕುಡಿಯುತ್ತಾ ಗುಂಪಾಗಿ ಕುಳಿತ ಸ್ನೇಹಿತರ ನಡುವೆ ಬೇರೆ ಬೇರೆ ಕಲಾವಿದರ ಅನುಕರಣೆಯನ್ನು ಮಾಡುತ್ತಾ ಅವರಲ್ಲಿ ನಗೆಬುಗ್ಗೆಯನ್ನು ಚಿಮ್ಮಿಸುವ ಹುಡುಗ.ಆದರೆ ಅವನ ಈ ಕಲೆ ಕ್ಯಾಂಟಿನಿಗಷ್ಟೇ  ಸೀಮಿತ.ವೇದಿಕೆಯ ಮೇಲೆ ಮಿಮಿಕ್ರಿ ಮಾಡೋಕೆ ಅವನಿಗೇನೋ ಹಿಂಜರಿಕೆ.ಅದಕ್ಕೆ ಅವನೇ ಕೊಡುವ ಕಾರಣ “ಈ ನನ್ ಮಕ್ಳೆಲ್ಲಾ ಆಡ್ಕೊಂಡ್ ನಗ್ತಾರೆ ಆಮೇಲೆ”.ತನ್ನ ಗೆಳೆಯರು ತನ್ನನ್ನು ಹೀಯಾಳಿಸಬಹುದು,ತಾನೊಂದು ಹಾಸ್ಯಕ್ಕೆ ವಸ್ತುವಾಗುತ್ತೇನೇನೋ ಎಂಬುದೇ ಆತನ ಹಿಂಜರಿಕೆಗೆ ಕಾರಣ.ಇನ್ನು ಆಕೆಯ ಹೆಸರು ರಿಯಾ .ವಾರಕ್ಕೆರಡು ಚುಟುಕುಗಳನ್ನು ಪ್ರೀತಿಯ ಮೇಲೆ ರಚಿಸಿ,ಕೆಲ ಗೆಳತಿಯರಿಗೆ ಮೆಸ್ಸೇಜಿಸುತ್ತಾಳೆ.ಆಗೊಮ್ಮೆ ಈಗೊಮ್ಮೆ ಬರೆದ ಪ್ರೇಮ ಕವಿತೆಗಳನ್ನು ಆಪ್ತರಿಗೆ ತೋರಿಸುವುದೂ ಉಂಟು.ಆದರೆ ಅವನ್ನೆಲ್ಲಾ ಹೊರಜಗತ್ತಿಗೆ ತೋರಿಸಲು ಅವಳಿಗೇನೋ ಮುಜುಗರ.ಕಲ್ಪನೆಯಲ್ಲಿ ಬರೆದ ಸಾಲುಗಳಿಗೆ ಉಳಿದವರು ಹೊಸ ಅರ್ಥ ಕಲ್ಪಿಸುತ್ತಾರೇನೋ ,ಯಾರೇ  ಆ ಹುಡುಗ?ಎಲ್ಲಿದ್ದಾನೆ?ಎನ್ ಕಥೆ? ಎನ್ನುವ ಪ್ರಶ್ನೆಗಳಿಗೆ ತಾನು ಆಹಾರವಾದೀನೇನೋ ಎಂಬ ಆತಂಕ.ಇದೇ ಆತಂಕ ಅವಳ ಕವಿತೆಗಳನ್ನು ,ಆಕೆಯ ದಿನಚರಿಯಲ್ಲಷ್ಟೇ ಇರುವಂತೆ ಮಾಡಿದೆ.ಇಂತಹ ಉದಾಹರಣೆಗಳು ಹುಡುಕುತ್ತಾ ಹೋದರೆ ಹಲವಾರು ಸಿಗಬಹುದು,ಈ ಲೇಖನವನ್ನು ಓದುತ್ತಿರುವ ನಿಮ್ಮ ಕಥೆಯೂ ಆಗಿರಬಹುದು.ಆದರೆ ಇದರ ಪರಿಣಾಮ??
ಬೆಳೆಯುವ ಸಿರಿ ಮೊಳಕೆಯಲ್ಲಿ”ಎಂಬಂತೆ ಸಾಮಾನ್ಯವಾಗಿ ಪ್ರತಿಯೊಬ್ಬರ ಕೌಶಲ್ಯಗಳು ,ಅವರಲ್ಲಿರುವ ವಿಶೇಷತೆಗಳು ಅನಾವರಣಗೊಳ್ಳುವುದು ಪ್ರೌಢಶಾಲೆ ಹಾಗೂ ಕಾಲೇಜು ದಿನಗಳಲ್ಲಿ.ಇವರ ವ್ಯಕ್ತಿತ್ವಕ್ಕೊಂದು ಗಟ್ಟಿಯಾದ ಅಡಿಪಾಯ ಸಿಗುವುದೂ ಸಹ ಈ ದಿನಗಳಲ್ಲೇ.ಆ ಕಾಲಘಟ್ಟದಲ್ಲಿಯೇ ಅವರಿಗೆ ತಮ್ಮ ನೆಚ್ಚಿನ ಕ್ಷೇತ್ರದ ಬಗ್ಗೆ ಅರಿವಾಗತೊಡಗುತ್ತದೆ.ತನಗೆ ಯಾವ ಕೆಲಸದ ಮೇಲೆ ಆಸಕ್ತಿ ಇದೆ ಎಂಬುದು ಗೊತ್ತಾಗತೊಡಗುತ್ತದೆ.ಇದೇ ಆಸಕ್ತಿ,ಕುತೂಹಲವಾಗಿ ಕೊನೆಗೊಂದು ದಿನ ಹವ್ಯಾಸವಾಗುತ್ತದೆ.ತಮ್ಮ ನೆಚ್ಚಿನ ಹವ್ಯಾಸಗಳಿಂದ ಅವರಿಗೇನೋ ಹೇಳಿಕೊಳ್ಳಲಾಗದ ಸಂತೋಷ ಸಿಗಲಾರಂಭಿಸುತ್ತದೆ.ಸಂತೋಷದ ಜೊತೆಗೆ ಅವರಲ್ಲಿ ಹೊಸ ಕನಸುಗಳು ಚಿಗುರೊಡೆಯುತ್ತಿರುತ್ತವೆ,ಸ್ರಜನಶೀಲ ಚಿಂತನೆಗಳು ಮೂಡತೊಡಗುತ್ತವೆ,ದುರದ್ರಷ್ಟವಶಾತ್ ಇದರ ಜೊತೆಗೆ ಒಂದಿಷ್ಟು ಆತಂಕ,ಹೆದರಿಕೆ,ಹಿಂಜರಿತಗಳೂ ಶುರುವಾಗುತ್ತವೆ.ತತ್ ಪರಿಣಾಮವಾಗಿ ಅವರ ಪ್ರತಿಭಾ ಪ್ರದರ್ಶನ,ಕೌಶಲ್ಯದ ಅನಾವರಣ ನಿರ್ದಿಷ್ಟ ಪರಿಧಿಗೆ ಸೀಮಿತವಾಗತೊಡಗುವ ಸಾಧ್ಯತೆ ಹೆಚ್ಚು.ಯಾವುದೋ  ಹೆದರಿಕೆಯಿಂದ ಪ್ರತಿಭಾವಂತರು ತಮ್ಮದೇ ಆದ ಸುಖವರ್ತುಲದೊಳಗೆ ಮಾತ್ರ ತಮ್ಮೊಳಗಿನ ವಿಶೇಷತೆಯನ್ನು ತೋರಿಸಿಕೊಳ್ಳುವ ಸಂಭವವೂ ಉಂಟು.ಇದು ಹೀಗೆ ಮುಂದುವರೆದಲ್ಲಿ ಮುಂದೊಮ್ಮೆ ಆ ವರ್ತುಲದಲ್ಲಿ ಆ ವ್ಯಕ್ತಿಯೊಬ್ಬರೇ ಮೂಕಪ್ರೇಕ್ಷಕರಾಗಿ ಕುಳಿತುಬಿಡುತ್ತಾರೆ.ತನ್ನಲ್ಲಿರುವ ಕಲೆಯ ಬಗ್ಗೆ ತನಗೇ ದ್ವೇಷ ಹುಟ್ಟುವಂತೆ ಮಾಡಿಕೊಳ್ಳುತ್ತಾರೆ.ಅಲ್ಲಿಗೆ ಅವರ ಸ್ರಜನಶೀಲತೆಗೊಂದು ಕಡಿವಾಣ ಬೀಳುತ್ತದೆ.ಹಾಗಾದರೆ ಅವರು ಎಡವಿದ್ದಾದರೂ ಎಲ್ಲಿ?ಒಬ್ಬ ವ್ಯಕ್ತಿ ತನ್ನನ್ನು ತಾನು ಹೊರಜಗತ್ತಿಗೆ ತೆರೆದುಕೊಳ್ಳದೇ,ತನ್ನನ್ನು ತಾನು ಅಳೆದುಕೊಳ್ಳಲು ಹೇಗೆ ಸಾಧ್ಯ?ಅದರಿಂದ ಅವನ ಕೌಶಲ್ಯದ ಬೆಳವಣಿಗೆಯಾದರೂ ಹೇಗಾದೀತು?ಪರಸ್ಪರ ವಿಚಾರ ವಿನಿಮಯಗಳಿಂದ, ಸೂಕ್ತ ಅಭ್ಯಾಸದಿಂದ, ತಪ್ಪು-ಒಪ್ಪುಗಳ ವಿಮರ್ಶೆಯಿಂದಲ್ಲವೇ ಯಾವುದೇ ಕಲೆಯಾದರೂ ವ್ಯಕ್ತಿಯೊಬ್ಬನ ಕೈ ಹಿಡಿಯುವುದು?ಅದಕ್ಕೆ ಮೊದಲ ಮೆಟ್ಟಿಲೇ ಕಾಲೇಜು ದಿನಗಳು.
ನಿಜ,ಕಾಲೇಜಿನಲ್ಲಿಯೇ ಅವರ ಸಾಧನೆಗೆ ಸ್ಪೂರ್ತಿ ಸಿಗಬೇಕು,ಅದಕ್ಕೊಂದು ಸೂಕ್ತ ವೇದಿಕೆ ಬೇಕು.ಅದಕ್ಕಿಂತ ಜಾಸ್ತಿಯಾಗಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು.ನಾನು ಮೇಲೆ ಹೇಳೆದ ಎರಡೂ ಪ್ರಸಂಗಗಳಲ್ಲಿ ಕರಣ್ ಹಾಗೂ ರಿಯಾರಿಗೆ ಅವಕಾಶದ ಕೊರತೆಯಿಲ್ಲ,ಆದರೆ ಭಯ,ನಾಚಿಕೆ ಅವರನ್ನು ಹೊರ ಜಗತ್ತಿಗೆ ತಮ್ಮನ್ನು ತೆರೆದುಕೊಳ್ಳದಂತೆ ಹಿಮ್ಮೆಟ್ಟಿಸುತ್ತಿದೆ.ಈ ಭಯವನ್ನು ಎರಡು ರೀತಿಯಲ್ಲಿ ಸ್ಥೂಲವಾಗಿ ವಿಂಗಡಿಸುತ್ತೇನೆ.ಒಂದು ಅಪರಿಚಿತರಿಂದಾಗುವ ಭಯ.ಇದು ಅವರು ಯಾರು,ಏನು ಎತ್ತ ಎಂದು ಗೊತ್ತಿಲ್ಲದಿದ್ದರೂ,ಅವರ ಪ್ರತಿಕ್ರೀಯೆಗಳಿಂದ  ನಮಗಾಗುವ ಭಯ.ಉದಾಹರಣೆಗೆ ವೇದಿಕೆಯ ಮೇಲೆ ಹೋದಾಗ “ಹೋ ಹೋ ….” ಎಂದು ಕಿರಿಚುವುದು,ಕವನಗಳನ್ನು ಓದಿ ಅಪಹಾಸ್ಯದ ನಗೆಯಾಡುವುದು,ಚಿತ್ರ ಕಲೆಯನ್ನು ಅಸಡ್ಡೆಯಿಂದ ನೋಡುವುದು ಇತ್ಯಾದಿ.ಇದರಿಂದ ಕಲಾವಿದನಲ್ಲಿ ಹಿಂಜರಿಕೆ ಜಾಸ್ತಿಯಾಗತೊಡಗುತ್ತದೆ,ತಾನು ನಗಣ್ಯ ಎನ್ನುವ ಭಾವ ಜಾಸ್ತಿಯಾಗುತ್ತದೆ.ಇದನ್ನು ಸರಿಯಾದ ತಿಳುವಳಿಕೆಯನ್ನು ಕೊಡುವುದರ ಮೂಲಕ ಹೋಗಲಾಡಿಸುವ ಪ್ರಯತ್ನ ಮಾಡಬಹುದು,ಹಿರಿಯರ ಮಾರ್ಗದರ್ಶನದಲ್ಲಿ ಈ ಭಯವನ್ನು ಮೆಟ್ಟಿ ನಿಲ್ಲುವುದು ಕಷ್ಟವೇನಲ್ಲ.”ಯಾರು ಏನಂದ್ರೇನು?ನಿನಗೆ ಇಷ್ಟವಾದ್ರೆ ಸಾಕು ,ನಾಳೆ ಅವರು ಬರ್ತಾರಾ?”ಎನ್ನುವ ಮಾತುಗಳೂ ಸ್ಪೂರ್ತಿ ಕೊಡಬಹುದು.ಆದರೆ ಎರಡನೇ ಭಯವು ವಿಚಿತ್ರವಾದದ್ದು  ವಿಚಿತ್ರವಾದದ್ದು.ಅದು ಪರಿಚಿತರ ಭಯ,ಅಂದರೆ “ನನ್ನ ಸ್ನೇಹಿತರು ಏನೆಂದುಕೊಳ್ಳುತ್ತಾರೋ?ಮನೆಯವರಿಗೆ ಏನೆನ್ನಿಸುವುದೋ?ನಾಳೆ ಅವರೆಲ್ಲಾ ಸೇರಿ ನನ್ನನ್ನು ಹೀಯಾಳಿಸಿದರೆ?..ಇದರಿಂದ ನನಗೆ ಅವಮಾನವಾದಂತಲ್ಲವೇ??...ಛೇ ಛೇ..ಹೀಗಾಗುವುದು ಬೇಡ” ಮುಂತಾದ ಯೋಚನೆಗಳು.ಗೆಳೆಯರಲ್ಲಿ ತನಗಿರುವ ಗೌರವವೆಲ್ಲಿ ಕಡಿಮೆಯಾದೀತೋ ಎಂಬ ಆತಂಕ.ಇದನ್ನು ಯಾರಿಗೂ ಹೇಳಲಾರದೇ ,ತಮ್ಮೊಳಗೇ ಅದುಮಿಟ್ಟುಕೊಳ್ಳುತ್ತಾ ,ಕೆಲವೊಮ್ಮೆ ಹತಾಶರಾಗುತ್ತಾ ,ಮೂಕವೇದನೆ ಅನುಭವಿಸುತ್ತಾರೆ..ಹಾಗಾದರೆ ಇದಕ್ಕೆಲ್ಲಾ ಕಾರಣಕರ್ತರು ಯಾರು??
ಸ್ನೇಹಿತರೇ?? ಹೌದು.ಅವರಲ್ಲಿ ಈ ತರಹದ ಯೋಚನೆಗಳು ಬರಲು ಸ್ನೇಹವೂ ಕಾರಣವಿರಬಹುದು.ನಿಮ್ಮನ್ನು ನಗಿಸುವ,ಖುಷಿಪಡಿಸುವ ಸ್ನೇಹಿತರು,ಆತ್ಮೀಯರು ಈ ತರಹದ ಸ್ನೇಹದ ಸಲುವಾಗಿಯೇ ವೇದನೆ ಅನುಭವಿಸುತ್ತಿದ್ದರೆ,ಅದೆಂತಹ ಸ್ನೇಹ ನೀವೇ ಯೋಚಿಸಿ?ಇದರಲ್ಲಿ ನಿಮ್ಮೆದುರು ನಗುತ್ತಲೇ ಇರುವ  ಕಲಾಕಾರರು ಇರಬಹುದಲ್ಲವೇ?ಅವರ ಮನವನ್ನೊಮ್ಮೆ ಮೇಲೆ ಹೇಳಿದ ದ್ರಷ್ಟಿಕೋನದಿಂದ ಅವಲೋಕಿಸಿ,ಅವರ ನೋವನ್ನು ತಿಳಿದು ಕೊಳ್ಳುವ ಪ್ರಯತ್ನ ಮಾಡಿ…….
ಹಾಗಾದ್ರೆ ಒಳ್ಳೆಯ ಸ್ನೇಹಿತರಾಗಿ ಒಬ್ಬ ಸ್ನೇಹಿತನ ಪ್ರತಿಭೆಗೆ ಸ್ಪೂರ್ತಿ ತುಂಬಲು ಕಾಲೇಜು ದಿನಗಳಲ್ಲಿ ಏನೇನು ಮಾಡಬಹುದು?? ನನಗೆ ತೋಚಿದ್ದನ್ನು ಬರೆದಿದ್ದೇನೆ ನೋಡಿ.
೧) ಗೆಳೆಯರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಮನವರಿಕೆ ಮಾಡಿಕೊಡಿ.
ಎಷ್ಟೋ ಜನರಿಗೆ ಅವರ ಬಗ್ಗೆಯೇ ಅವರಿಗೆ ಗೊತ್ತಿರುವುದಿಲ್ಲ.ಅಂಥವರಲ್ಲಿನ ಕಲೆಯನ್ನು ಗುರುತಿಸಿ,ಅವರಿಗೆ ಅವರ ಬಗ್ಗೆ,ಅವರಲ್ಲಿನ ವಿಶೇಷತೆಯಯನ್ನು ಗುರುತಿಸಿಕೊಳ್ಳುವ ಬಗ್ಗೆ ವಿವರಿಸಿ.
೨)ವೇದಿಕೆ ಹತ್ತಲು ಪ್ರೇರೇಪಿಸಿ.
ನಿಮ್ಮ ನಿಮ್ಮ ನಡುವೆಯೇ ಸುಪ್ತವಾಗಿರುವ ಕಲೆಯನ್ನು  ವೇದಿಕೆಯ ಮೇಲೆ ಪ್ರದರ್ಶಿಸಲು ಗೆಳೆಯರನ್ನು ಉತ್ತೇಜಿಸಿ.ಇದರಿಂದ ಅವರಿಗೆ ಕಲಿಕೆಯ ಹೊಸ ಮಾರ್ಗ ಕಾಣಿಸುತ್ತದೆ,ತಮ್ಮನ್ನು ತಾವು ತಿದ್ದಿಕೊಳ್ಳಲು ಸಹಾಯಕವಾಗುತ್ತದೆ.
೩)ತಪ್ಪುಗಳಾದಾಗ ಸಂತೈಸಿ,ಅವರನ್ನು ಮತ್ತೆ ಪ್ರಯತ್ನಿಸುವಂತೆ ಉತ್ತೇಜಿಸಿ.
ಹೊಸದಾಗಿ ನಡೆಯಲು ಕಲಿತ ಮಗು ಬೀಳುವುದು ಸಹಜ,ಇದೇ ತರಹ ಆರಂಭಿಕ ಹಂತದಲ್ಲಿ  ತಪ್ಪುಗಳಾಗುವುದು ಸಾಮಾನ್ಯ,ಅವರ ತಪ್ಪುಗಳನ್ನು ಅವರಿಗೆ ಮನವರಿಕೆ ಮಾಡಿ ಕೊಡಿ,ಬದಲಿಗೆ ಅವರನ್ನು ಗೇಲಿಮಾಡಿ,ನಿರುತ್ಸಾಹಗೊಳಿಸಬೇಡಿ.ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಪ್ರಯತ್ನಿಸುವಂತೆ ಉತ್ತೇಜಿಸಿ
೪) ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿ.
ಸಾಮಾನ್ಯವಾಗಿ ಕಾಲೇಜಿನಲ್ಲಿ ನಮ್ಮ ಮೊದಲ ವಿಮರ್ಶಕರು ನಮ್ಮ ಸ್ನೇಹಿತರೇ .ನಿಮ್ಮ ಗೆಳೆಯರ ಪ್ರದರ್ಶನದ ಬಗ್ಗೆ ನಿಮಗೆ ಅನಿಸಿದ್ದನ್ನು ಸ್ಪಷ್ಟವಾಗಿ,ಸರಲವಾಗಿ ಹೇಳಿ.ಅವರಿಗೆ ಬೇಜಾರಾಗುವುದೆಂದೋ  ಅಥವಾ ಅವರಿಗೆ ತಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಬರುವುದೆಂದೋ ಯೋಚಿಸಬೇಡಿ,ಗೆಳೆಯರ ತಪ್ಪುಗಳನ್ನು ಹೇಳಿ ಅವರು ಅದನ್ನು ತಿದ್ದಿಕೊಳ್ಳುವಂತೆ ಮಾಡುವವರೇ ನಿಜವಾದ ಸ್ನೇಹಿತರು.
೫)ಕೈಲಾದಷ್ಟು ಸಂಪರ್ಕಗಳನ್ನು,ಸಂಪಸ್ಮೂಲಗಳನ್ನು ಒದಗಿಸಿಕೊಡಿ…
ನಿಮ್ಮ ಕೈಲಾದಷ್ಟು ಸಂಪನ್ಮೂಲಗಳನ್ನು ನಿಮ್ಮ ಗೆಳೆಯರಿಗೆ ಒದಗಿಸಿ ಕೊಡಿ.ಅದು ನಿಮ್ಮ ಸ್ನೇಹಿತನಿಗೆ ನಿಮ್ಮ ರೂಮಿನಲ್ಲಿ ಅಭ್ಯಾಸಕ್ಕೆ ಜಾಗ ಒದಗಿಸುವುದರಿಂದ ಹಿಡಿದು,ಬೆಲೆಬಾಳುವ ಪರಿಕರಗಳನ್ನು ತಂದುಕೊಡುವವರೆಗೂ ಇರಬಹುದು.ಇನ್ನು ನಿಮಗೆ ಪರಿಚಯವಿದ್ದ ಸಮಾನ  ಮನಸ್ಕರನ್ನು ಪರಸ್ಪರ ಪರಿಚಯ ಮಾಡಿಸಿ,ಉದಾಹರಣೆಗೆ ನಿಮ್ಮ ಪ್ರೌಢಶಾಲೆಯ ಮಿತ್ರರೊಬ್ಬರು ಸಂಗೀತ ಸಾಧನೆಯಲ್ಲಿ ತೊಡಗಿದ್ದು,ಕಾಲೇಜಿನ ಮಿತ್ರರೊಬ್ಬರಿಗೂ ಅದೇ ಆಸಕ್ತಿ ಇದ್ದರೆ ಪರಸ್ಪರ ಅವರನ್ನು ಪರಿಚಯಿಸಿ.ಇದರಿಂದ ವಿಚಾರಗಳು ವಿನಿಮಯವಾಗಿ ಇಬ್ಬರು ಸ್ನೇಹಿತರಿಗೂ ಒಳ್ಳೆಯದಾಗುತ್ತದೆ.ಹಾಗೆಯೇ ನಿಮ್ಮ ಸಂಬಂಧಿಕರಲ್ಲಿ ಸಂಗೀತದ ಗುರುಗಳಿದ್ದರೆ,ಅವರ ಬಳಿಯೂ ಕರೆದೊಯ್ಯಿರಿ,ಇದರಿಂದ ವಿಪುಲವಾದ ವಿಚಾರಗಳು ದಕ್ಕಿ,ನಿಮ್ಮ ಸ್ನೇಹಿರಿಗೆ ಸಂಶಯಗಳನ್ನು ಪರಿಹರಿಸಿಕೊಳ್ಳಲೂ ಸಹಾಯಕವಾದೀತು,

ಕೊನೆಯದಾಗಿ ಒಂದು ಮಾತು,ಪ್ರತಿಭೆ ಎನ್ನುವುದು ದೈವದತ್ತವಾಗಿ ಬಂದ ಉಡುಗೊರೆ.ಸತತ ಅಭ್ಯಾಸದಿಂದ ಅದನ್ನು ಅರಗಿಸಿಕೊಂಡು ಸಾಧನೆಯನ್ನು ಮಾಡಲು ಸಾಧ್ಯ,ಇಂತಹ  ಒಂದು ಸಾಧನೆಯ ಹಾದಿಯಲ್ಲಿ ಕಾಲೇಜು ಪ್ರಮುಖ ಪಾತ್ರ ವಹಿಸುತ್ತದೆ,ಕಾಲೇಜಿನಲ್ಲಿ ಸ್ನೇಹಕ್ಕೆ ಅಮೂಲ್ಯವಾದ ಸ್ಥಾನವಿದೆ.ಈ ಸ್ನೇಹ ಅವರ ಸಾಧನೆಗೆ ಮುಳ್ಳಾಗದೇ,ಅವರ ಯಶಸ್ಸಿನ ಪ್ರಯಾಣಕ್ಕೆ ಊರುಗೋಲಾಗಲಿ ಎಂದು ಆಶಿಸುತ್ತೇನೆ.
ಪ್ರತಿಯೊಬ್ಬರೂ ಅವರಲ್ಲಿರುವ ಕಲೆ,ಕೌಶಲ್ಯಗಳನ್ನು ಮುಕ್ತವಾಗಿ ಪ್ರಕಟಿಸಿ ಅದರಲ್ಲೇ ಪಳಗಿ,ಜಗತ್ತನ್ನು ಸಾಂಸ್ಕ್ರತಿಕವಾಗಿ ಬೆಳಗಲಿ ಎನ್ನುವ ಸುಂದರ ಕನಸನ್ನು ಹೊತ್ತು,
ಸ್ನೇಹ ಪೂರ್ವಕವಾಗಿ,
ನಿಮ್ಮನೆ ಹುಡುಗ
ಚಿನ್ಮಯ ಭಟ್

Monday, September 3, 2012

ಭಾವ ದೀಪ




ಮನೆಯ ಹೊಗೆಯೆಲ್ಲ ಸೇರಿ,
ಮನದಿಂದ ದೂರ ಹಾರಿ
ಹೋಗಬಾರದೇ ಕರಿಮೋಡದ ಒಳಗೆ
ಬೀಳಬಾರದೇ ಸವಿಮುತ್ತಾಗಿ ಕೆಳಗೆ

ಭೇದ-ದ್ವೇಷವ ಕೂಡಿ,
ಎದೆಯ ಕಹಿಯನು ದೂಡಿ,
ಹದಮಾಡಬಾರದೇ ಸ್ನೇಹದೆರಕವನ್ನು
ಅಚ್ಚಿಡಬಾರದೇ ಒಮ್ಮತದ ಮೂರುತಿಯನ್ನು

ರೋಷ-ಮತ್ಸರದ ಜ್ವಾಲೆಗಳು ಜೊತೆಯಾಗಿ
ಸುಡಬಾರದೇ ಜಡತನವ ಚಿತೆಯಾಗಿ
ಬಾಳಿನೊಳಗೊಂದು ಭಾವದ ಬೆಳಕಾಗಿ,
ದಾರಿದೋರಬಾರದೇ ಬರಿದಾಗದ ಹಣತೆಯಾಗಿ

-ನಿಮ್ಮನೆ ಹುಡುಗ

Thursday, August 16, 2012

ಸ್ನೇಹಕೊಂದಿಷ್ಟು ಸಾಲು......



ಹಾದಿ ಬದಿಯ ಹೂವಾಗದಿರಿ ಗೆಳೆಯರೆ
ಪಾದವ ಮುತ್ತಿಕ್ಕುವ ಗರಿಕೆಯಾಗಿ
ನಗುವ ಮನಕೆ ದಾಣಿಯಾಗಬೇಕಿಲ್ಲ ನೀವು
ಬದಲಿಗೆ,ಅಳುವ ಮನಕೆ ಸಾಂತ್ವನದ ಹರಕೆಯಾಗಿ

ಎದೆಯ ಮಂದಿರದೊಳಿಟ್ಟು ಪೂಜಿಸುವ ಹೂವಾಗಬೇಕಿಲ್ಲ ನೀವು
ಆಗಿರಿ ನೋವು ತಿಂದ ಹ್ರದಯಗಳಿಗೆ ಹಿತತರುವ ಕಾವು
ಮಿನುಗುತಾರೆಯಾಗಿ ಕಟ್ಟಬೇಕಿಲ್ಲ ನಿತ್ಯವೂ ಹೊಸ ಕನಸಿನ ಮಂದಿರ,
ಆಗಿರಿ ಸಾಕು ಅಳುವ ಸ್ನೇಹ ಶಿಶುವನ್ನು ಖುಷಿ ಪಡಿಸುವ ಚಂದಿರ

ಸ್ನೇಹವೆಂದರೆ ಹೊಸ ಕಟ್ಟು ಪಾಡುಗಳಲ್ಲ ಗೆಳೆಯರೇ
ಅದು,ನಿಮ್ಮೊಳಗಿನ ನಿಮ್ಮತನದ ಹಾಡು
ಗೆಳೆತನಕೆಂದು ಬದಲಾಗದಿರಿ,ಗೆಳೆತನಕೆಂದೇ ಬದಲಾಯಿಸದಿರಿ,
ಬದಲಾಯಿಸಿರಿ ನಿಮ್ಮ ದ್ರಷ್ಟಿಕೋನವನ್ನು,ನಿಮ್ಮ ಕಲ್ಪನೆಗಳನ್ನು..
(ಇದು ಗೆಳೆಯರ ದಿನದಂದು  ಬರೆದ ಕವನ…. ಬರಿಯ ತೋರಿಕೆಯ ಸ್ನೇಹಕ್ಕಿಂತ ಪರಸ್ಪರ ಸಹಾಯ,ಸಾಂತ್ವನಗಳೇ ಸ್ನೇಹದ ಆಧಾರಗಳು ಎಂಬ ಆಶಯವನ್ನಿಟ್ಟುಕೊಂಡು ನಾಲ್ಕು ಸಾಲುಗಳನ್ನು ಗೀಚಿದ್ದೇನೆ…ದಯವಿಟ್ಟು ಓದಿ ಪ್ರತಿಕ್ರೀಯಿಸಿ)
ವಂದನೆಗಳೊಂದಿಗೆ,
ನಿಮ್ಮನೆ ಹುಡುಗ,
ಚಿನ್ಮಯ ಭಟ್

Thursday, August 2, 2012

ಕೊನೆಯ ದಿನದ ಪಾಠ



ಮಲೆನಾಡಿನ ಮಣ್ಣನ್ನು ಮೈ ತುಂಬಾ ಮೆತ್ತಿಕೊಂಡ,ಕೆಂಪು ಹಳದಿ ಬಣ್ಣದ ಬಸ್ಸು ಕುಲಕಾಡುತ್ತಾ ಬಂದು ” ಕುಯ್ ಕುಯ್ಯ್….” ಎಂದು ನಿಂತಿತು.ಬಸ್ಸಿನ ಬಾಗಿಲಿನಲ್ಲಿ ನಿಂತಿದ್ದವರು ಇಳಿದು,ಇಳಿಯುವವರಿಗೆ ದಾರಿ ಮಾಡಿ ಕೊಟ್ಟು ,ಮತ್ತೆ ಅದನ್ನೇ ಹತ್ತಿ ಹೊರಟು ಹೋದರು.ಸುಮಾರು ಒಂದು ಗಂಟೆಯ ಜನಜಂಗುಳಿಯ ಕಚಪಚ ಸದ್ದುಗಳನ್ನು ಕೇಳಿಸಿಕೊಂಡ ಕಿವಿಗಳಿಗೀಗ ನೀರವ ಮೌನದ ಸ್ವಾಗತ.ಮರಕುಟಿಗವೊಂದು ಕುಟ್ ಕುಟ್ ಎಂದು ಸದ್ದು ಮಾಡಿದಾಗಲೇ ಯಾವುದೋ ಲೋಕದಲ್ಲಿದ್ದ ಕಾಂತಕ್ಕೋರಿಗೆ ಎಚ್ಚರವಾಗಿದ್ದು.ಡಾಂಬರು ರಸ್ತೆ ದಾಟಿ ಬದಿಯ ಮಣ್ಣು ರಸ್ತೆಯನ್ನು ಹಿಡಿದು ಹೊರಟ ಅವರ ಕಣ್ಣುಗಳಿಗೆ ಬರಬರುತ್ತಾ ಎಲ್ಲವೂ ಮಸುಕು ಮಸುಕಾಗಿ ಕಾಣುತ್ತಿತ್ತು.ಇದೇನಿದು ಕನ್ನಡಕ ಹಾಕಿಕೊಂಡಿಲ್ಲವೇ ಎಂದು ಕಣ್ಣು ಮುಟ್ಟಿಕೊಳ್ಳುವಷ್ಟರಲ್ಲೇ ,ರೆಪ್ಪೆಯನ್ನು ದಾಟಿ ಬಂದ ಅಶ್ರುಬಿಂದುಗಳು ಅವರ ನೆರಿಗೆ ಬಿದ್ದ ಕೆನ್ನೆಯನ್ನು ತಂಪಾಗಿಸಿತ್ತು,ಅದೊಂದು ವಿಚಿತ್ರ ಅನುಭವ.ಮೂವತ್ತು ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ  ಇಂದು ನಿವ್ರತ್ತಿಯಾಗುತ್ತಿರುವ ಸಾರ್ಥಕತೆಯ ಭಾವ ಒಂದು ಕಡೆ ಇದ್ದರೆ,ಇಷ್ಟು ದಿನ ತಾನಿದ್ದ ಪ್ರಪಂಚವನ್ನು ಬಿಟ್ಟು ಹೋಗುತ್ತಿರುವ ನೋವು ಇನ್ನೊಂದು ಕಡೆ.ಆ ಕಣ್ಣೀರು ಖುಷಿಗೋ?ಅಥವಾ  ಬೇಜಾರಿಗೋ? ಗೊತ್ತಿಲ್ಲ,ಆದರೆ ಹ್ರ್‍ದಯದಲ್ಲಿದ್ದ ತಲ್ಲಣಗಳಿಗೆ ಅದು ಸಾಂತ್ವನ ನೀಡಿದ್ದಂತೂ ನಿಜ.
ಎಷ್ಟೊಂದು ಬದಲಾವಣೆಗಳಾಗಿದೆ ಈ ಮೂವತ್ತು ವರ್ಷಗಳಲ್ಲಿ ?ಮೊದಲಿದ್ದ ಕಾಲುದಾರಿಯು ಇದೀಗ ಖಡಿಹಾಕಿದ ಕೆಂಪು ರಸ್ತೆಯಾಗಿದೆ,ಇನ್ನೇನು ಬರುವ ಚುನಾವಣೆಯ ಹೊತ್ತಿಗೆ ಟಾರು ರಸ್ತೆಯಾಗಲೂಬಹುದು.ರಸ್ತೆಯ ಬದಿಗಿದ್ದ ರಾಕ್ಷಸರೂಪಿ ವ್ರ್‍ಕ್ಷಗಳು ರಾತ್ರಿಗಳು ಕಳೆದಂತೆ ಕಣ್ಮರೆಯಾಗಿದೆ.ಇದೀಗ ಅಲ್ಲಿ ಅಕೇಶಿಯಾ ಪ್ಲಾಂಟೇಶನ್ ಗಳು ತಲೆ ಎತ್ತಿವೆ.ಮೊದಲಿಗೆ ಅಲ್ಲೇ ಮರದ ಬಡ್ಡೆಯ ಮೇಲೆ ಕಾಣುತ್ತಿದ್ದ ಗೌರಿದಂಡೆ,ಸೀತೆದಂಡೆಗಳು ಇಂದು ಅಪರೂಪವಾಗಿದೆ.ಜೊತೆಗೆ ಹುಣಸಿಗೆಯ ಜನರ ಮನಸ್ಸೂ ಸಹ ಬದಲಾಗಿದೆ.ಹಾಸಿಗೆಯಲ್ಲಿ ರಾತ್ರಿ ಉಚ್ಚೆಹೊಯ್ದುಕೊಳ್ಳುತ್ತಿದ್ದ ಹೈಕಳನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ ಹನುಮ,ಇಂದು ಮೊಮ್ಮಕ್ಕಳನ್ನು ತಾನೇ ಶಾಲೆಗೆ ಕರೆದುಕೊಂಡು ಬರುತ್ತಾನೆ,ಶೆಟ್ಟರಂಗಡಿಯಲ್ಲಿ ಪೆನ್ಸಿಲ್ಲು ತೆಗಿಸಿಕೊಂದುತ್ತಾನೆ.ಇಪ್ಪತ್ತೆಂಟು ಗಂ ಹಾಗೂ ಹದಿನಾಲ್ಕು ಹೆಂ ಎಂದು ಬರೆದಿಡುತ್ತಿದ್ದ ದಾಖಲಾತಿ ಪುಸ್ತಕದಲ್ಲಿ ಇಂದು ಮಕ್ಕಳ ಸಂಖ್ಯೆ ನೂರಕ್ಕೇರಿದೆ.ಶಾಲೆಗೆ ಮಳೆಗಾಲದಲ್ಲಿ ಇರುತ್ತಿದ್ದ ಜಡಿತಟ್ಟಿ ಮಾಯವಾಗಿ ,ಕಂಪೌಂಡು ಬಂದು ನಿಂತಿದೆ.ಸುಣ್ಣ ಉದುರುತ್ತಿದ್ದ ಗೋಡೆಗಳ ಬದಲು ,ಈಗ ಗೋಡೆಯ ತುಂಬಾ ಇರುವ  ಬಣ್ಣ ಬಣ್ಣದ ಚಿತ್ರಗಳು ಚಿಣ್ಣರನ್ನು ರಂಜಿಸುತ್ತಿವೆ.ಅಷ್ಟೇ ಏಕೆ? ಕಾಂತಕ್ಕೋರಿಗೂ ವಯಸ್ಸಾಗಿದೆ.ಕಣ್ಣಿಗೆ ಕನ್ನಡಕ ಬಂದಿದೆ.ಆಗೀಗ ಮಂಡಿನೋವು,ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ.ಆದರೆ,ತಮ್ಮ ಕೈಯಲ್ಲಿ ಅಕ್ಷರ ಕಲಿತ ಗಂಡು ಮಕ್ಕಳು ದೊಡ್ಡವರಾಗಿ ,ಈಗ ಎಲ್ಲಾದರೂ ಶಿರಸಿಯಲ್ಲಿ ಸಿಕ್ಕಿದಾಗ ಎಡಗೈಯ್ಯಲ್ಲಿ ಕಾರಿನ ಕೀಲಿ ಹಿಡಿದು,ಬಲಗೈಯಲ್ಲಿ ನಮಸ್ತೆ ಎನ್ನುವಾಗ ಮಂಡಿನೋವು ಕಡಿಮೆಯಾಗುತ್ತದೆ.ಅಕ್ಕೋರು ಮನೆಗೆ ಬಂದರೆ ಹೆದರಿ ಅಡುಗೆಮನೆಯಲ್ಲಿ   ಪುಸ್ತಕ ಹಿಡಿದು ಕೂರುತ್ತಿದ್ದ ಹೆಣ್ಣುಮಕ್ಕಳು ಬರೆದ ಲೇಖನಗಳು ಇಂದು ಆಳುವ ಕೈಗಳನ್ನೇ ಹೆದರಿಸುವಾಗ ಬೆನ್ನುನೋವು ವಾಸಿಯಾಗುತ್ತದೆ.
ಶಿಕ್ಷಕಿಯಾಗಿ ಬದುಕು ಸಾರ್ಥಕವಾಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ದಾರಿಯ ಬದಿಯಲ್ಲಿ ಬಿದ್ದಿದ್ದ ಬಾಳೆಗೋನೆಯನಿಂದ ಹಿಸಿದ ಒಂದು  ಚಿಪ್ಪಿನ ಜಿಂಡು ಕಣ್ಣಿಗೆ ಬಿತ್ತು.ಅದನೋಡಿ ಅದ್ಯಾಕೋ ತುಟಿಗಳು ಅಗಲವಾದವು…ಹೌದು,ಅದು ಕಾಂತಕ್ಕೋರೇ ಮೊನ್ನೆ ಶನಿವಾರ ಸಂಜೆ ಎಸೆದದ್ದು.ಶನಿವಾರ ಶಾಲೆಮುಗಿದ ಮೇಲೆ ಊರಿನವರು ಹಾಗೂ ಶಿಕ್ಷಕರಲ್ಲಾ ಸೇರಿ ಅವರನ್ನು ಬೀಳ್ಕೊಟ್ಟಿದ್ದರು.ಒಂದು ಸೀರೆ,ಫಲ-ತಾಂಬೂಲ ಜೊತೆಗೊಂದು ಪುಟ್ಟ ಗಂಧದ  ಗಣಪತಿಯ ಮೂರ್ತಿಯನ್ನು ಅಕ್ಕೋರ ಕೈಗಿಟ್ಟು,ಊರಿನಲ್ಲಿ ಅಕ್ಷರದ ಬೆಳಕು ಹರಿಸಿದವರಿಗೆ ನಮಸ್ಕರಿಸಿದ್ದರು,ತಮ್ಮ ವಂದನೆಗಳನ್ನು ತಿಳಿಸಿದ್ದರು.ಅದನ್ನು ಮುಗಿಸಿ ಮನೆಗೆ ವಾಪಸ್ಸಾಗುವಾಗ ಹಣ್ಣನ್ನು ತೆಗೆದು ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಾಕಿಕೊಂಡು ಜಿಂಡನ್ನು ಅಲ್ಲೇ ಬಿಸಾಡಿ ಹೋಗಿದ್ದರು.ಅಷ್ಟರಲ್ಲೇ ಮಕ್ಕಳು ಮೈದಾನದಲ್ಲಿ ಆಡುತ್ತಿರುವ ಸದ್ದು ಕೇಳತೊಡಗಿತ್ತು.ಕಾಂಪೋಂಡಿನ ಹತ್ತಿರ ಬರುವಷ್ಟರಲ್ಲೇ “ಅಕ್ಕೋರೆ ನಮಸ್ಕಾರಾ” ಎಂಬ ಹುಡುಗರ ಕೂಗು,ಶಿಕ್ಷಕರ ಕೊಠಡಿಯನ್ನು ಮುಟ್ಟೀತ್ತು.ಮುಗುಳ್ನಗೆಯೊಂದಿಗೆ ನಮಸ್ಕರಿಸಿದ ಅಕ್ಕೋರು,ಮಾಸ್ತರುಗಳನ್ನೆಲ್ಲಾ ಒಮ್ಮೆ ನೋಡಿ ,ನಮಸ್ಕರಿಸಿ,ತುಸು ನಕ್ಕು ತಮ್ಮ ಮುಖ್ಯ ಶಿಕ್ಷಕರ ಕೊಠಡಿಗೆ ಹೋದರು.
          ಟೇಬಲ್ಲಿನ ಬದಿಯ ಕುರ್ಚಿಯ ಮೇಲೆ ಕೈಚೀಲವನ್ನಿಟ್ಟು ಟೇಬಲ್ಲಿನ್ಜ ಕಡೆ ಗಮನ ಹರಿಸಿದಾಗ ಅಲ್ಲೊಂದು ಅಶ್ಚರ್ಯವು ಕಾದಿತ್ತು,ಒಂದು ಅನಾಮಧೇಯ ಪತ್ರ ಅಲ್ಲಿತ್ತು.ಅದನ್ನು ಬಿಡಿಸಿ ಓದಲು ಶುರು ಮಾಡಿದಾಗ,

ಗೆ,
ಕಾಂತಕ್ಕೋರು
ಹುಣಸಿಗೆ ಶಾಲೆ
ಇಂದ,
ಅನಾಮಿಕ
ಮಾನ್ಯರೇ,
          ವಿಷಯ: ಅನಿಲ್ ಮಾಸ್ತರ ಕುರಿತು.
          ನಮ್ಮೂರಿನ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಅನೀಲ ಮಾಸ್ತರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂದು ದೂರು ಬಂದಿರುತ್ತದೆ.ಜೊತೆಗೆ ಅವರು ಹೇಳದೇ ಕೇಳದೇ ರಜೆ ಹಾಕಿ ಹೋಗುತ್ತಾರೆಂದೂ ತಿಳಿದು ಬಂದಿದೆ.ಇದಕ್ಕೆ ಪುರಾವೆಯಾಗಿ ಮೊನ್ನೆ ಶನಿವಾರ ಬೆಳಿಗ್ಗೆ  ಅವರು ಹಾಜರಿ ಹಾಕಿ ಶಿರಸಿಗೆ ಹೋಗಿದ್ದರೆಂದು ಹೇಳಲು ವಿಷಾದಿಸುತ್ತೇವೆ.ಹೀಗಾಗಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಮ್ಮ ವಿನಂತಿ.
                                      ಧನ್ಯವಾದಗಳೊಂದಿಗೆ
ದಿನಾಂಕ:---------                                                                  ಇತಿ
ಸ್ಥಳ:ಹುಣಸಿಗೆ                                                                         ಅನಾಮಿಕ
ಇದನ್ನು ಓದಿದ ಕಾಂತಕ್ಕೋರಿಗೆ ಅದು ಸುನೀಲನದೇ ಕೆಲಸ ಎಂದು ಗೊತ್ತಾದರು ,ಸುಮ್ಮನೆ ಮಡಚಿ ಒಳಗಿಟ್ಟರು.ಅನೀಲ ಹಾಗೂ ಸುನೀಲ ಅಕ್ಕ ಪಕ್ಕದ ಮನೆಯವರಾದರೂ ಆ ಎರಡು ಮನೆಗಳ ನಡುವೆ ಮೂರ್ನಾಲ್ಕುತಲೆಮಾರುಗಳಿಂದ ದ್ವೇಷವಿದೆ.ಒಬ್ಬರ ಕಂಡರೆ ಇನ್ನೊಬ್ಬರಿಗಾಗದು.ಒಮ್ಮೆ ಶ್ರೀ ಧರ್ಮಸ್ಥಳದ ಒಂದು ಯೋಜನೆಯಡಿಯಲ್ಲಿ ಹುಣಸಿಗೆ ಶಾಲೆಗೆ ಒಂದು ಒಂದು ಶಿಕ್ಷಕರ ನೇಮಕಾತಿಗೆ ಅವಕಾಶವಾಯಿತು.ಆಗ ಅರ್ಜಿ ಬಂದಿದ್ದು ಅನೀಲ ಹಾಗೂಸುನೀಲರದು.ಇಬ್ಬರೂ ಡಿಗ್ರಿ ಮುಗಿಸಿದ್ದರಾದರೂ ಅನಿಲನ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಕಂಡು ಕಾಂತಕ್ಕೋರು ಅನೀಲನನ್ನು  ಮಾಸ್ತರನನ್ನಾಗಿಸಿದ್ದರು.ಇದರಿಂದ ಸುನೀಲನಿಗೆ ಅನೀಲನ ಕಂಡರಾಗದು,ಹಾಗಾಗಿ ಅವನದೇ ಏನೋ ಒಂದು ಮೂಗರ್ಜಿ ಎಂದು ಸುಮ್ಮನಾದರಾದರೂ,ಹಾಜರಿ ಪುಸ್ತಕಕ್ಕೆ ಸಹಿಮಾಡುವಾಗ ಅವರಲ್ಲಿದ್ದ ಮುಖ್ಯಶಿಕ್ಷಕರು ಜಾಗ್ರತರಾದರು.ಸರಿ,ಅಲ್ಲೇ ಓಡಾಡುತ್ತಿದ್ದ ಹುಡುಗರನ್ನು ಕರೆದು
ಏಯ್ ಅಲ್ ಅನೀಲ್ ಮಾಸ್ತರ್ ಹತ್ರಾ ಬರೂಕ್ ಹೇಳಾ” ಎಂದರು.ಆ ಹುಡುಗ ಅಲ್ಲಿಂದಲೇ ತಾನು ಬೈಕಿನಲ್ಲಿ ಕೂತಿರುವಂತೆ ಕೈತಿರುವುತ್ತಾ  “ಕಾಂತಕ್ಕೋರ್ ಹೇಳಾರೆ,ಅನೀಲ್ ಮಾಸ್ತರಿಗೆ ಬರೂಕ್ ಹೇಳ್ಬಕಂತೆ “ಎಂದು ಜೋರಾಗಿ ಹೇಳುತ್ತಾ ಓಡಿದ.
ಅನೀಲ:”ಅಕ್ಕೋರೆ”
ಕಾಂತಕ್ಕೋರು:”ಕುತ್ಕಳಪ್ಪಾ”
ಅನೀಲ:”ಹೆಂಗಿತ್ತು?ಮೊನ್ನೆ ಫಂಕ್ಷನ್ನು?ಖುಷಿ ಆಯ್ತಾ?”
ಅಕ್ಕೋರು:”ಹಾಂ..ಖುಷಿ ಆಗ್ದೇ ಇರ್ತದ್ಯೇನ!”
ಅನೀಲ:”ನಾನೆಯ ಎಲ್ಲಾ ಓಡಾಡಿದ್ದು ಅದ್ಕೆ”
ಅಕ್ಕೋರು:”ಓಹೋ…ಎಯ್ ಆದ್ರು ಸೀರೆ ಗೀರೆ ಎಲ್ಲಾ ಬ್ಯಾಡ್ವಾಗಿತ್ತು”
ಅನೀಲ:”ಎಯ್ ಇರ್ಲಿ ಬಿಡಿ”
ಅಕ್ಕೋರು:”ಹಮ್…ಎಲ್ಲಿಂದ ತಂದ್ರಿ ಆ ಗಣಪತಿ ಮೂರ್ತಿಯಾ?”
ಅನೀಲ:”ಅದ್ ಗುಡಿಗಾರ್ ರ ಹತ್ರ ,ನೀಲೇಕಣಿಲಿ”
ಅಕ್ಕೋರು:”ಓಹ್?ನೀಲೇಕಣಿಲಾ?ಗುಡಿಗಾರ್ ರ ಮನಿಲಾ?ನೀನೇ ತಂದ್ಯಾ? “
ಅನೀಲ:”ಹಾಂ…ಅವಾ ಶುಕ್ರವಾರ ಕೊಡ್ತೆ ಹೇಳ್ದವಾ,ಶನಿವಾರ ಕೊಟ್ಟ,ಅದ್ಕೆ ನಾನೇ ತಂದೆ.ಛೊಲೋ ಅದೆ ಅಲಾ?”
ಅಕ್ಕೋರು:” ಹಾಂ ಛೊಲೋ ಅದೆ….ಸರಿ ನೀ ಹೋಗು…”
ಅಲ್ಲಿಗೆ ಕಾಂತಕ್ಕೋರಿಗೆ ಅನೀಲ ರಜೆ ಹಾಕಿರದೇ ಶಿರಸಿಗೆ ಹೋಗಿರುವುದು ಖಾತ್ರಿಯಾಯಿತು.ಆದರೆ ಹಾಜರಿ ಹಾಕಿ ಅವನೇಕೆ ಹೋದ ? ಹಾಗೆಲ್ಲಾ ಮಾಡುವ ಹುಡುಗನಲ್ಲವಲ್ಲಾ ಎಂದುಕೊಂಡು ,ಶಾಲೆಯ ಆಯಾ ಶಿವಮ್ಮನ ಹತ್ತಿರ ವಿಚಾರಿಸಿದರು.ಆಗ ಊರಿನವರೆಲ್ಲಾ ಶಾಲೆಗೆ ಬಂದಿದ್ದರೆಂದೂ ,ಅವರೇ ಅನೀಲನನ್ನು ಒತ್ತಾಯ ಮಾಡಿ ಕಳಿಸಿದರೆಂದೂ ಗೊತ್ತಾಯಿತು.ಆಗ ಅಕ್ಕೋರಿಗೆ ಅನಿಲನಿಗೂ ಗುಡಿಗಾರರಿಗೂ ಒಳ್ಳೆಯ ಪರಿಚಯ ಇದ್ದುದ್ದರಿಂದ ಹಳ್ಳಿಯವರು ಅನೀಲನನ್ನೇ ಕಳಿಸಿದ್ದಾರೆ,ಊರಿನವರ ಒತ್ತಾಯಕ್ಕೆ ಮಣಿದು ,ಶಾಲೆಗೆ ಬಂದವನು ತಡಿಬಿಡಿಯಿಂದ ಪೇಟೆಗೆ ಹೋಗಿದ್ದಾನೆ ಎಂಬುದು ತಿಳಿಯಿತು.ಸಾಂದರ್ಭಿಕವಾಗಿ ನೋಡಿದರೆ ಅವನದು ತಪ್ಪಿಲ್ಲವಾದರೂ ,ಅದ್ದು ಶಾಲೆಯ ನಿಯಮಗಲ ಪ್ರಕಾರ ತಪ್ಪು ಎನಿಸಿತು.ಕೊನೆಗೆ,ಇದಕ್ಕೆಲ್ಲಾ ತಾನೇ ಕಾರಣ ಎಂದೆನಿಸಿ ಖಿನ್ನರಾಗಿ ಕುಳಿತುಬಿಟ್ಟರು.
                                                **************
ಅನೀಲನನ್ನು ಕರೆದ ಅಕ್ಕೋರು ಒಂದು ಪತ್ರಕೆ ಸಹಿ ಹಾಕು ಎಂದರು.ಅದನ್ನು ಓದಿದ ಆತ ಒಂದು ಕ್ಷಣ ಬೆವರಿದನಾದರೂ ,ತನ್ನ ತಪ್ಪಿನ ಅರಿವಾಗಿ ಸುಮ್ಮನೆ ಸಹಿ ಹಾಕಿ ,ಐನೂರು ರೂಪಾಯಿಗಳನ್ನು ಟೇಬಲ್ಲಿನ ಮೇಲಿರಿಸಿ ಹೊರಟುಬಿಟ್ಟನು.ಅದು ಆತ ಕಾಂತಕ್ಕೋರಲ್ಲಿಟ್ಟ ಗೌರವದ ಪ್ರತೀಕ.ಆಗ ಮತ್ತೆ ಶಿವಮ್ಮನನ್ನು ಕರೆದ ಅಕ್ಕೋರು
“ಶಿವಮ್ಮಾ ಆ ದೇಣಿಗೆ ಪುಸ್ತಕ ತಗೊಂಡ್ ಬಾ “  ಎಂದರು.ಅದರಲ್ಲಿ ಅನೀಲಕುಮಾರ ,ದೇಣಿಗೆ ಐದು ನೂರು ರೂಪಾಯಿ ಎಂದು ಬರೆದು,ಹಣ ಸ್ವೀಕರಿಸಿದವರು ಎಂಬ ಜಾಗದಲ್ಲಿ ತಮ್ಮ ಸಹಿ ಮಾಡಿ ,ಹಾಗೆಯೇ ಒಂದು ಕವರಿನಲ್ಲಿ ಆ ಪತ್ರವನ್ನೂ ,ದೇಣಿಗೆಯ ಹಣವನ್ನೂ ಇರಿಸಿ,”ಇದನ್ನು ಶಾಲಾಮಂಡಳಿ ಅಧ್ಯಕ್ಷರಿಗೆ ತಲುಪಿಸು “ಎಂದರು.
          ಹೌದು,ಇದು ಆ ಶಾಲೆಯ ನಿಯಮ.ಮಾಡಿದ ತಪ್ಪಿಗೆ ದಂಡವನ್ನು ದೇಣಿಗೆಯಾಗಿ ಕಟ್ಟಬೇಕು ಎಂಬುದು ಕಾಂತಕ್ಕೋರೇ ಮಾಡಿಕೊಂಡ ನಿಯಮ,ನಡೆಸಿಕೊಂಡು ಬಂದ ನಿಯಮ.ಅದನ್ನು ಅವರು ಮೂವತ್ತು ವರುಷದಿಂದ ಕಾಪಾಡಿಕೊಂಡೂ ಬಂದಿದ್ದರು.ಅದನ್ನು ಕೊನೆಯತನಕವೂ ಉಳಿಸಿಕೊಂಡರು.
“ಅಬ್ಬಾ..ಮುಗಿಯಿತಲ್ಲಾ “ಎಂದು ಕಣ್ಮುಚ್ಚಿ ಕುಳಿತ ಮುಖ್ಯಶಿಕ್ಷಕರಲ್ಲಿ ಅಂತಃಕರಣ ಜಾಗ್ರತವಾಯಿತು.ತನ್ನ ನೆಚ್ಚಿನ ಶಿಕ್ಷಕರಿಗಾಗಿ,ಅದೂ ಊರಜನರ ಒತ್ತಾಯದ ಮೇರೆಗೆ ಶಿರಸಿಗೆ ಅನೀಲ ಹೋಗಿದ್ದು ಅವರೊಳಗಿನ ಹ್ರದಯಕ್ಕೆ ತಪ್ಪು ಎಂದೆನಿಸಲೇ ಇಲ್ಲ .ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಅನೀಲನಿಗೆ ತಾನೇ ತೊಂದರೆಯಾದೆನಲ್ಲಾ ಎನ್ನುವ ಅಪರಾಧಿ ಭಾವ ಅವರನ್ನು ಪೀಡಿಸತೊಡಗಿತ್ತು.ಅದಾಗಲೇ ಕಷ್ಟಕ್ಕೆ ಮಿಡಿಯುವ ಅವರ ಮಮಕಾರದ ಮನಸ್ಸು ಜಾಗ್ರತಗೊಂಡಿತ್ತು.ಒಂದು ನಿರ್ಧಾರಕ್ಕೆ ಬಂದು ತಮ್ಮ ದಿನದ ಕಾರ್ಯಗಳಲ್ಲಿ ಮಗ್ನರಾದರು.
                                      **********
ಸಂಜೆ ೪:೩೦ಕ್ಕೆ ಜನಗಣಮನ  ಹೇಳಿ ಹೊರಡುತ್ತಲೇ ಅಕ್ಕೋರು,ಅನೀಲನನ್ನು ಕರೆದರು.ಅವನಿಗೆ ಬೆಲಿಗ್ಗೆ ದಂಡಕಟ್ಟು ಅಂದಿರುವುದರಿಂದ ಬೇಜಾರಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.ಹಾಗೆಯೇ ಬರುವ ಒಂದು ಸಾವಿರದಲ್ಲಿ ಐದುನೂರನ್ನು ಕಲೆದುಕೊಂಡೆನಲ್ಲಾ ಎನ್ನುವ ಹತಾಶೆಯೂ ಕೂಡಿತ್ತು.ಅಕ್ಕೋರು ನಿಧಾನಕ್ಕೆ ಹೋಗಿ ಅವನ ಬಳಿ ಹೋಗಿ,
 “ನನ್ ಜೊತೆ ಬಸ್ ಸ್ಟಾಪಿನ ತನ್ಕಾ  ಬರ್ತ್ಯಾ?” ಎಂದರು.”ಸರಿ “ಎಂಬಂತೆ ಗೋಣಲ್ಲಾಡಿಸಿದ ಅನೀಲ,ಸುಮ್ಮನೆ ಅವರ ಹಿಂದೆ ಬಸ್ ಸ್ಟಾಪಿನ ತನಕ ನಡೆದ.ಕಾಂತಕ್ಕೋರಿಗೆ ಈಗ ಮತ್ತೊಮ್ಮೆ ವಿಚಿತ್ರ ಅನುಭವವಾಗಿತ್ತು.ತನ್ನದೆಲ್ಲವನ್ನೂ ಬಿಟ್ಟು ಹೋಗುತ್ತಿದ್ದೇನೆ,ನನ್ನ ನೆಚ್ಚಿನ ಕೆಲಸಕ್ಕೆ ವಿದಾಯ ಹೇಳುತ್ತಿದ್ದೇನೀಂದು ಬೇಜಾರಾಗುವ ಬದಲು ಅದೇಕೋ ಖುಷಿಯಾಗುತ್ತಿತ್ತು.ಆ ಖುಷಿಯನ್ನು ಅನೀಲ ಗಮನಿಸಿದನಾದರೂ  ಆತನಿಗೆ ಅದರ ಬಗ್ಗೆ ಕೇಳುವ ಮನಸ್ಸಿರಲಿಲ್ಲ ..ಕೊನೆಗೆ ಬಸ್ಸು ಹತ್ತಿ ಹೋಗುವಾಗ ಕಾಂತಕ್ಕೋರು ಅನೀಲನ ಕೈಗೆ ಎಂದು ಕವರನ್ನಿತ್ತು ಹೊರಟು ಹೋದರು.
 ಆ ಕವರಿನಲ್ಲಿ ಒಂದು ಸಾವಿರ ರೂಪಾಯಿಯೂ ,ಒಂದು ಪತ್ರವೂ ಇದ್ದಿತ್ತು.ಎಡಗೈಯ್ಯಲ್ಲಿ ದುಡ್ಡುಹಿಡಿದು,ಬಲಗೈಯ್ಯಲ್ಲಿ ಪತ್ರ ಹಿಡಿದು ಅನೀಲ ಆ ಪತ್ರವನ್ನು ಓದುತ್ತಾ ಹೋದ.
ಪ್ರೀತಿಯ ಅನೀಲ,
                ನಿನ್ನ  ಮನಸ್ಸನ್ನು ನೋಯಿಸಿದ್ದಕ್ಕೆ ಮೊದಲಿಗೆ ಕ್ಷಮೆಯಾಚಿಸುತ್ತೇನೆ.ಇಲ್ಲಿಯತನಕ ಶಾಲೆಯ ನಿಯಮಗಳನ್ನು ನಾನು ತಪ್ಪದೇ ಪಾಲಿಸಿಕೊಂಡು ಬಂದೆ,ಹಾಗೆಯೇ ಕೊನೆಯ ದಿನವಾದರೂ ನಿನ್ನ ತಪ್ಪನ್ನು ಮನ್ನಿಸಿ ಸುಮ್ಮನಿರಲು ನನ್ನೊಳಗಿನ ಮುಖ್ಯಶಿಕ್ಷಕಿ ಬಿಡಲಿಲ್ಲ.ಅದಕ್ಕೆಂದೇ ಐದುನೂರು ರೂಪಾಯಿ ದಂಡದ ದೇಣಿಗೆ ಬರೆದೆ.ಬಹುಷಃ ಅದಕ್ಕೆ ಕಾರಣ ನಿನಗೂ ಗೊತ್ತು.
                ಆದರೆ ಆ ತಪ್ಪಿಗೆ ನಾನೇ ಕಾರಣನಾದಿನೇನೋ ಎಂಬ ಭಾವನೆ ನನ್ನನ್ನು ಚುಚ್ಚುತ್ತಿದೆ .ಜೊತೆಗೆ ನಿನ್ನ ಮನೆಯ ಪರಿಸ್ಥಿತಿಯನ್ನೂ ನಾನು ಬಲ್ಲೆ ,ನಿಮ್ಮ ತಾಯಿಯ ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ನೀನು ಹಣ ಹೊಂದಿಸಲು ಪರದಾಡುತ್ತಿರುವುದೂ ನನಗೆ ಗೊತ್ತು,ಅದಕ್ಕಾಗಿ ನನ್ನ ಸ್ವಂತದ ಒಂದು ಸಾವಿರವನ್ನು ಈ ಪತ್ರದೊಡನೆ ಇಟ್ಟಿದ್ದೇನೆ.ಅದನ್ನು  ನನ್ನ ಉಡುಗೊರೆ ಎಂದು ಭಾವಿಸಿ  ಸ್ವೀಕರಿಸುವುದು.
ಕೊನೆಗೊಂದು ವಿಷಯ ಹೇಳಲೇ ಬೇಕು.ಇಷ್ಟು ದಿನ ಜೀವನದಲ್ಲಿ ನಾನು ಮಕ್ಕಳಿಗೆ  ಪಾಠ ಕಲಿಸುತ್ತಿದ್ದೆ,ಆದರೆ ಇಂದು ಕೊನೆಯ ದಿನ ನನಗೆ ಪಾಠ ಕಲಿಸಿತು.ವ್ರತ್ತಿ ಜೀವನದಲ್ಲಿ ಕರ್ತವ್ಯ ನಿಷ್ಠೆ ಎಷ್ಟು ಮುಖ್ಯವೂ ,ನಿತ್ಯ ಜೀವನದಲ್ಲಿ ಮಾನವೀಯತೆ ಅಷ್ಟೇ ಮುಖ್ಯ. ಅವೆರಡೂ ಸೂರ್ಯ-ಚಂದ್ರರಿದ್ದಂತೆ,ಯಾವುದೊಂದಿಲ್ಲದಿದ್ದರೂ ಆ  ಹಗಲು ಅಥವಾ ರಾತ್ರಿಗೆ  ಅಂದವಿಲ್ಲ.ಇವತ್ತು ನಾನು ಕಲಿತ ಪಾಠ ,ಇಲ್ಲಿನ ತನಕ ನಾನು ಕಲಿಸಿದ ಪಾಠಗಳಿಗಿಂತ ದೊಡ್ಡದು.ಇಂತಹ ಪಾಠಗಳನ್ನು ಕಲಿಯಲು ಶಿಕ್ಷಕಿಯಿಂದ ಮತ್ತೆ ವಿದ್ಯಾರ್ಥಿಯಾಗುತ್ತಿದ್ದೇನೆ.
                ಶುಭಮಸ್ತು,
                                                                                                                ಆಶೀರ್ವಾದಗಳೊಂದಿಗೆ,
                                                                                                                ಕಾಂತಕ್ಕೋರು.

ಇದನ್ನು ಓದಿದ ಅನಿಲನ ಕಣ್ಣುಗಳಲ್ಲಿ ನೀರು ಜಿನುಗಿತ್ತು.

ಇಲ್ಲಿಗೀಕಥೆ ಮುಗಿಯಿತು,ಆದರೆ ಈ ಶಿಕ್ಷಕಿಯ ಕಥೆಯಿಂದ ನಾವು ಕಲಿಯ ಬೇಕಾದ ಪಾಠ,ಪ್ರತಿಯೊಂದು ವ್ರತ್ತಿಗೂ ಅನ್ವಯಿಸುತ್ತದೆ ಎಂಬುದು ನನ್ನ ಭಾವನೆ.ಸರಿಯಾದ ಕರ್ತವ್ಯ ಪಾಲನೆಯೊಂದಿಗೆ ಮಾನವೀಯತೆಯೂ ಇದ್ದಲ್ಲಿ ನಮ್ಮ ಬಾಳಿಗೊಂದು ಸಾರ್ಥಕತೆ ಸಿಕ್ಕೀತು. ನಾವು ನಿತ್ಯವೂ ಇಂತಹ ಪಾಠಗಳನ್ನು ಕಲಿಯುವ,ಅದನ್ನು ಅಳವಡಿಸಿಕೊಳ್ಳುವ ವಿದ್ಯಾರ್ಥಿಗಳಾಗೇ ಇರೋಣ ಎನ್ನುವಂತಹ ಆಶಯ ಹೊತ್ತು ,
ನನ್ನೆಲ್ಲ ಗುರುಗಳಿಗೆ ವಂದಿಸುತ್ತಾ,
                                                                                      ಇತಿ ನಿಮ್ಮನೆ ಹುಡುಗ
                                                                                      ಚಿನ್ಮಯ ಭಟ್

                                     

Thursday, June 28, 2012

ಮೊದ್ಲೆ ಓದ್ಬೇಕಿತ್ತು ಅನ್ನೋದ್ ಬಿಡೋದ್ ಯಾವಾಗ?(ಪರೀಕ್ಷೆ ಹೊತ್ತಿನ ಯೋಚನೆಗಳು)


ಮೊದ್ಲೆ ಓದ್ಬೇಕಿತ್ತು ಅನ್ನೋದ್ ಬಿಡೋದ್ ಯಾವಾಗ
ನಾಳೆ ಓದಿದ್ರಾಯ್ತು ಅನ್ನೋದ್ ಮರ್ಯೋದ್ ಯಾವಾಗ

ಇನ್ನೂ ಒಂದ್ ವಾರ ಇದೆ ಇವತ್ ರೆಸ್ಟ್ ಮಾಡಣಾ
ನಾಳೆ ಇಂದಾ ಓದಕ್ಕೆ ಪಕ್ಕಾ ಸ್ಟಾರ್ಟ್ ಮಾಡಣಾ
ಫ್ರೆಂಡ್ಸಿಗೆಲ್ಲಾ ಬೆಳ್ಗೆ ಎದ್ದು ಮೆಸ್ಸೇಜು ಮಾಡಣಾ
ಸೆಲ್ ಸ್ವಿಚ್ ಆಫ್ ಮಾಡಿ ಮಲ್ಕೊಂಡೆ ಬಿಡಣಾ

ಫೇಸ್ ಬುಕ್ ನಲ್ಲಿ ಮಾಡಿ ಫೋಟೋ ಅಪ್ ಲೋಡು
ಹೊಸಾ ಮೂವಿ ಬಂದರೆ ಬಿಡ್ದೆ ಮಾಡಿ ಡೌವ್ನ್ ಲೋಡು
ಟ್ರೈ ಮಾಡ್ರಿ ದಿನಕ್ಕೊಂದು ಹೊಸಾ ಹೊಸಾ ಸಾಫ್ಟವೇರು
ಓರಿಜ್ನಲ್ಲೋ ಡೂಪ್ಲಿಕೇಟೋ ವಿ ಡೋಂಟ್ ಕೇರು

ಕ್ಲಾಸಿಗೆಲ್ಲಾ ಚಕ್ಕರ್ ಹೊಡ್ದು ಕ್ಯಾಂಟೀನ್ ನಲ್ಲೆ ಕೂರ್ತಿದ್ವಿ
ಆಸ್ಕರಿಂದ ಶುರುಮಾಡಿ,ಬುಕ್ಕರ್ ತನ್ಕಾ ಮಾತಾಡ್ತಿದ್ವಿ
ಫಾರೆನ್ ಆಥರ್ ಟೆಕ್ಸ್ಟ್ ಬುಕ್ ಗಳು ಅರ್ಥಾ ಆಗಲ್ಲಾ
ಝೆರಾಕ್ಸಿನ ನೋಟ್ಸ್ ಬಿಟ್ಟು ಬೇರೆದೇನೂ ಓದಲ್ಲಾ

ಎಲ್ಲಿಂದ ಓದೋದಂತಾ ಅರ್ಥಾನೇ ಅಗ್ತಿಲ್ಲಾ
ಸಿಲೆಬಸ್ಸು,ಸಿಟಿಬಸ್ಸು ಒಂದೇ ಥರ ಇದ್ಯಲ್ಲಾ
ರಾತ್ರಿ ಪೂರ್ತಿ ಓದಿ ಎಕ್ಸಾಮು ಬರಿತಿವಿ
ಮೂವತ್ತೈದು ಬಂದ್ರೆ ಸಾಕು ಪಾರ್ಟಿ ಮಾಡ್ತಿವಿ

ಆದ್ರೆ,

ಮೊದ್ಲೆ ಓದ್ಬೇಕಿತ್ತು ಅನ್ನೋದ್ ಬಿಡೋದ್ ಯಾವಾಗ?
ನಾಳೆ ಓದಿದ್ರಾಯ್ತು ಅನ್ನೋದ್ ಮರೆತು ಹೋದಾಗ!


(ಪರೀಕ್ಷೆಯ ಹೊತ್ತಿನಲ್ಲಿ ಓದುವುದೊಂದು ಬಿಟ್ಟು ಉಳಿದೆದ್ದಲ್ಲ ಉಚಿತವಾಗಿಯೇ ಕಾಣುತ್ತದೆ....ಹಾಗೆ ಯಾವಾಗಲೋ ಪುಸ್ತಕ ಹಿಡಿದುಕೊಂಡಾಗ ಹುಟ್ಟಿಕೊಂಡ ಸಾಲುಗಳನ್ನೇ ಒಂದು ೪ ೪ ಸಾಲುಗಳಂತೆ ಬರೆದು ನಿಮ್ಮ ಮೊಂದಿಟ್ಟಿದ್ದೇನೆ. ನಿಮ್ಮ ಪರೀಕ್ಷೆಯ ಸಮಯದ ವಿಶೇಷ ಅನುಭವಗಳನ್ನು ಬರೆದು ಈ ಬರಹವನ್ನು  ಅಂದಗಾಣಿಸಿ..ಹಾಗೆಯೇ ಇದರ ಕುರಿತು ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ)



ಪರೀಕ್ಷೆ ಮುಗಿಸಿದ ಸಂತಸದಲ್ಲಿ,
ಇತಿ ನಿಮ್ಮನೆ ಹುಡುಗ
ಚಿನ್ಮಯ ಭಟ್.


Friday, May 25, 2012

ಮೋಡವ ಮುತ್ತಿಕ್ಕಿದೆನು(ನಾನೂ ಮುಳ್ಳಯ್ಯನ ಗಿರಿಗೆ ಹೋಗಿದ್ದೆ!)

ಮನೆಗೆ ಹೋಗಬೇಕೆಂದು ಹಟ ಹಿಡಿದು ಕೂತಿದ್ದ ನನ್ನೊಳಗಿನ ಪುಟ್ಟ  ಮಾಣಿಗೆ ಪರೀಕ್ಷೆಯ ಗುಮ್ಮವನ್ನು       ತೋರಿಸುತ್ತಾ  ಬೇಜಾರಾಗಿ , ಸಂಜೆ ಹಾಗೆ  ಬುಕ್ಕಿನ ಮೇಲಿಂದ ಫೇಸನ್ನು ತೆಗೆದು ಫೇಸ್ ಬುಕ್ ನ ಕಡೆಗೆ ತಿರುಗಿಸಿದ್ದೆ.ಅಷ್ಟರಲ್ಲಿ ಸುಮನಕ್ಕನ ಕರೆ ಬಂತು.ಸರಿ ಇನ್ನೇನು, ನಿಯತ್ತಾಗಿ ರೂಮು ಬಿಟ್ಟು ಸಿಗ್ನಲ್ಲು ಸರಿ ಸಿಗುವ ಮನೆಯ ಬಾಗಿಲಿಗೆ ಹೋಗಿ ನಿಂತೆ.ಆ ಕಡೆಯಿಂದ 
"ಲೋ ನಾಳೆ ಏನ್ ಪ್ಲಾನ್ಸ್ ನಿಂದು ?" 
ಅಂದಕೂಡಲೆ ತಲೆಯೊಳಗಿನ ಗೂಗಲ್ "ಮನೆಗೆ ಕರಿತಾಳೋ ಅಥವಾ ಇನ್ನೇನೋ ಇರಬೇಕು "ಎಂದು ಸಲಹೆಗಳನ್ನು ಕೊಟ್ಟಿತು. ಏನಾದರಾಗಲಿ ಎಂದುಕೊಂಡು ,

"ಎನಿಲ್ಲಾ ಅಕಾ ,ನಾಳೆ  ನಂದ್ ಎನೂ ಪ್ರೋಗ್ರಮ್ ಇಲ್ಲಾ "ಎಂದೆ.

ಅದಾಗ  "ನಾಳೆ ಮುಳ್ಳಯನ ಗಿರಿಗೆ ಹೋಗಣಾ ಬರ್ತಿಯಾ  ?" ಅಂದ್ಲು.
ಬಾಯಿಯ ತುದಿಯಲ್ಲೆ ಬರಲ್ಲಾ ಕಣೇ ಓದ್ಬೇಕು ಅನ್ನೋ ಉತ್ತರ ಇದ್ದರೂ,ಕುತೂಹಲಕ್ಕೋ ಅಥವಾ ನನ್ನೊಳಗಿನ ಗೊಂದಲಗಳನ್ನು ಕಡಿಮೆಮಾಡಿಕೊಳ್ಳಲಿಕ್ಕೋ ಗೊತ್ತಿಲ್ಲಾ, 

"ಯಾರ್ಯಾರು ಹೋಗ್ತಿರದು ?"ಅಂದೆ.

"ನಾನು ಸುಮಂತ್ ಶ್ಸ್ಫ಼್ಗ್ಜಿಗ್ದ್ರ್ಸುಇ ಇಹ್ಧಿದ್ಫ಼್ ದ್ಜ್ಕ್ಫ಼್ದ್ಶ್ಕ್ ಜ್ಕ್ಸ್ದ್ಫ಼್ಹ್ಜ್ಕ್ ಎವಿಒಎಉರಿಒ ಇಒಎರು"(ಅದು ಎನು ಅಂತಾ ಕೇಳ್ಸ್ಲಿಲ್ಲಾ ಆದ್ರೆ ಸುಮಂತ್ ಅನ್ನೋ ಎಂಬ ಹೆಸರು ಸಾಕಿತ್ತು)

ನಾನು "ಹಮ್ ಮ್ ಸರಿ "ಎಂದೆ.
ಆಕೆ "ಬರ್ತಿದಿಯಾ ತಾನೆ?ಇಲ್ಲಾಂದ್ರೆ ಹೊಡ್ಸ್ಕೋತಿಯಾ  "ಎಂದು ಅಕ್ಕನ ಪವರ್ ನೆನಪಿಸಿದಳು.

ನಾನು ದೊಡ್ಡ ರಾಜಕಾರಣಿಯಂತೆ "ನೋಡಣಾ ಕಣೆ,ಸುಮಂತ್ ಗೆ ಫೋನ್ ಮಾಡಿ ಕೇಳಿ ಆಮೇಲ್ ಹೇಳ್ತಿನಿ "ಎಂದು ನನ್ನ ಸಂಚಾರಿ ದೂರವಾಣಿಯ ಕೆಂಪುಗುಂಡಿಯನ್ನು ಅದುಮಿದೆ.

ಸರಿ..ಹೋಗ್ಲೋ ಬೇಡ್ವೋ ಎಂಬ ಯೋಚನೆಯ ಸುಳಿಯಲ್ಲಿ ಸಿಕ್ಕು ಹುಟ್ಟು ಹಾಕುತ್ತಲೇ,ಸುಮಂತನಿಗೆ ರಿಂಗಣಿಸಿದೆ
 "ಏಯ್ ನಾಳೆ ಹೋಪದನಾ,ಎಷ್ಟ್ ಹೊತ್ತಿಗೆ ?' ಎಂದೆ.

ಅವನಿಂದ ಬೆಳಿಗ್ಗೆ ೫.೩೦ಕ್ಕೆ ನಮ್ಮ ಕಾಲೇಜಿನ ಹತ್ತಿರದಿಂದ ಹೊರಡುವುದೆಂಬ ಮಾಹಿತಿ ಬಂತು.ಈಗ ಹೋಗಲೋ ಬಿಡಲೋ ಎಂದು ಕೇಳಲೆಂದು ಅಮ್ಮನಿಗೆ ಪೋನಾಯಿಸಲೆಂದು ಹೊರಟಾಗಲೇ ಅಮ್ಮ ಬೆಂಗಳೂರಿಗೆ ಹೊರಟಿರುವುದು ನೆನಪಾಯಿತು.ಸರಿ ಇನ್ನೇನು,ಚಿಕ್ಕಮಗಳೂರಿನಲ್ಲಿದ್ದು ೩ ವರ್ಷ ಮುಗಿಯುತ್ತಾ ಬಂದರೂ ಇನ್ನೂ ಗಿರಿಗೆ ಹೋಗಿಲ್ಲಾ ಅಂದ್ರೆ ನಾಚಿಕೆಗೇಡು ಅಂದು ಕೊಂಡು,ಉಳಿದೆಲ್ಲ ಯೋಚನೆಗಳನ್ನು ಇಗ್ನೋರ್ ಮಾಡಿ ,

ಸುಮನ್ ಗೆ "ಹೂಂ,ಬರ್ತಿನಿ" ಎಂದು ಸಂದೇಶಿಸಿದೆ.

                                                     *****
ಬೆಳಿಗ್ಗೆ ಆರುಗಂಟೆಗೆ ಏಳಲೆಂದೇ ಮೂರುಸಲ ಅಲಾರಾಂ ಇಡುವ ನಾನು,ಇವತ್ತು ೪.೩೦ ಕ್ಕೆ ಒಂದು ಸಲ ಅದು ಕೂಗುತ್ತಿದ್ದಂತೆ ಎದ್ದೆ.ನನ್ನೊಳಗಿನ ಸೋಮಾರಿ
  "ಏಯ್ ಬೇಕೇನಾ ಎವೆಲ್ಲ್ಲಾ?ಸುಮ್ನೆ ಮಲ್ಕಳಲೇಯ್"   ಎಂದರೂ
ಅದೇನೋ ಉತ್ಸಾಹದಲ್ಲಿ ಹಾಸಿಗೆ ಬಿಟ್ಟೆದ್ದೆ.ಅಲ್ಲಿಂದ ಅಂಕಲ್ ಕೊಟ್ಟ ಬಿಸಿಬಿಸಿ ಕಾಫಿ ಕುಡಿದು,ಸುಮಂತನ ಚಾಳ ತಲುಪುವಷ್ಟರಲ್ಲಿ ಸಮಯ ೫.೧೫.ಅಲ್ಲಿಂದ ಕಾಲೇಜು ತನಕ ನಮ್ಮ ಹಳೆಯ ಹೀರೋ ಜೆಟ್,ಹರ್ಕುಲೆಸ್ ಸೈಕಲ್ ಗಳನ್ನು ನೆನೆಸಿಕೊಂದು ನಡೆದೆವು.ಅಲ್ಲಿಂದ ಉಳಿದವರೆಲ್ಲಾ ಬಂದು ದಾರಿ ಮಧ್ಯ ಎಂದಿವ್ವರನ್ನು ಹತ್ತಿಸಿಕೊಂಡು ಚಿಕ್ಕಮಗಳೂರು ಬಿಡುವಷ್ಟರಲ್ಲಿ ಆಕಾಶವಾಣಿಯಲ್ಲಿ "ವಂದೇ ಮಾತರಂ"ಬರುತ್ತಿದ್ದ ಸಮಯ(೬ ಗಂಟೆ).ಆ ವಾಹನದಲ್ಲಿದ್ದು ನವಗ್ರಹಗಳು! ಜೊತೆಗೊಬ್ಬ ಸಾರಥ್ಜಿ.
ನಾನು ಅಂದರೆ ಈಗ ಕೆಲಸವಿಲ್ಲದೆ ಇದನ್ನು ಬರೆಯುತ್ತಿರುವ ಚಿನ್ಮಯ್,ಸುಮಂತ್,ಸುಮನಕ್ಕಾ,ಸೌಮ್ಯಾ,ಅರ್ಜುನ್,ವರ್ಷಾ,ವಸಂತ್,ಶ್ರತಿ,ನಿತಿನ್ ಇಂತಿಪ್ಪ ನಮ್ಮ ತಂಡದ ಸವಾರಿ ಬೆಳಬೆಳಿಗ್ಗೆಯೇ  ಮುಳ್ಳಯ್ಯನಗಿರಿಗೆ ಹೊರಟಿತ್ತು.ನನಗೆ ಗಿರಿ ಪ್ರವಾಸ ಮೊದಲಸಲವಾದರೆ,ಕೆಲವರಿಗೆ ಎರಡು,ಮೂರು ಹೀಗೆ ಏರಿಕೆ ಕ್ರಮದಲ್ಲಿತ್ತು.ಚೂರು ಛಳಿಯಾಗುತ್ತಿದ್ದರೂ ತೋರಿಸಿಕೊಳ್ಳದೇ ,ಅವರೆಲ್ಲಾ ಮಾತಾಡುತ್ತಿದ್ದ  ಅವರ ಕ್ಲಾಸಿನ,ಬ್ರಾಂಚಿನ ಸಮಾಚಾರಗಳನ್ನು ಮಂದಸ್ಮಿತದೊಂದಿಗೆ ಕೇಳುತ್ತಿದ್ದೆ.ಸಿದ್ದಾಪುರದಿಂದ ಶಿರಸಿಗೆ ಹೋಗುವ ದಾರಿಯ ನೆನಪಿಸುತ್ತಿದ್ದ ಆ ಇಳಿಜಾರು ದರೆ,ಅದರ ಅಂಚಿನಲ್ಲೆ ಇದ್ದ ಹತ್ತು ಹಜಾರು ಮರಗಳು ,ಕಣ್ಣು ಕುಕ್ಕುತ್ತಿದ್ದ ಕಪ್ಪು ಹಸಿರು ಹೀಗೆ ದಾರಿಯ ಬದಿಯನ್ನೇ ನೋಡುತ್ತಾ ಹೊರಟವನಿಗೆ,ಮುಂದೆ ಗಿರಿಯ ಹತ್ತಿರದ ತಿರುವು ಮುರುವು ರಸ್ತೆಗಳನ್ನು ನೋಡಿ ಮುಂಬೈ -ಪುಣಾ ಮಧ್ಯ ಸಿಗುವ ಖಂಡಾಲಾಘಾಟ್ ನ ರಸ್ತೆ ನೆನಪಾಗಿದ್ದು ಸುಳ್ಳಲ್ಲ.ಆ ಇಬ್ಬನಿ ಮುಸುಕಿದ ದಾರಿಯಲಿ ಗಾಡಿಯಲಿ ಕೂತು, ಪರ್ವತವ ಹತ್ತುತ್ತಿದ್ದ ನನಗೆ ಬಿ.ಎಂ.ಶ್ರೀ ಅವರ
"ಕರುಣಾಳು ಬಾ ಬೆಳಕೆ 
ಮುಸುಕಿದೆ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು"
ಸಾಲುಗಳು ನೆನಪಾದವು.
                                                           *********
 ನಮ್ಮ ವಾಹನದಿಂದ ಕಾಲು ಕೆಳಗಿಟ್ಟು ನಾಲ್ಕು ಹೆಜ್ಜೆ ನಡೆದಿರಬಹುದಷ್ಟೇ ,ಆಹಾ..ಅದೆಲ್ಲಿಯದೋ ತಂಗಾಳಿ ನನ್ನ ಮೈಗೆ ಸೋಕಿತ್ತು.ಮೈ ನಡುಗುತ್ತಿದ್ದರೂ,ಕೈ ಎತ್ತಿ,ಕಣ್ಣು ಮುಚ್ಚಿ ದೀರ್ಘವಾದ ಉಸಿರು ತೆಗೆದುಕೊಂಡಾಗ ಕಣ್ಣೆದುರು ಕಂಡ ಪದ 

"ವಾವ್ !!!".

ನನಗೆ ಗೊತ್ತಿಲ್ಲದೆಯೇ ನನ್ನೊಳಗೆ ಅದೇನೋ ಖುಷಿಯಾಗುತ್ತಿತ್ತು,ಮೈಸೂರಿನಲ್ಲಿ  ಜಿ.ಆರ್.ಎಸ್ ನ ಕ್ರತಕ ಜಲಪಾತಕ್ಕೆ ತಲೆಕೊಟ್ಟಾಗಲೂ ಅದೇತರಹದ ಅನುಭವವಾಗಿತ್ತು.ಅದನ್ನು ಮಾತಿನಲ್ಲಿ ಹೇಳಲಾರೆನು ಕ್ಷಮಿಸಿ!
ಸರಿ ಮೆಟ್ಟಿಲುಗಳನ್ನು ಹತ್ತುತ್ತಾ,ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಾ,ಗಿರಿಯ ಮೇಲಣ ದೇವಸ್ಥಾನವನ್ನು ತಲುಪಿದೆವು.ಅಲ್ಲಿ ನೆರೆದಿದ್ದ ಸುಮಾರು ೨೦-೩೦ ಜನರನ್ನು ನೋಡಿ ಮದುವೆಯೇನಾದರೂ ಇರಬಹುದೇನೋ ಎಂದು ಅಂದುಕೊಂಡೆನಾದರೂ ನನ್ನ ಊಹೆ ತಪ್ಪಾಗಿತ್ತು.ಅದಾಗ ಅಕಾಶಾವಾಣಿಯಲ್ಲಿ ವಾರ್ತೆಬರುವ ಸಮಯ(೭.೩೫),
ಅಲ್ಲೇ ಒಂದೆರಡು ಛಾಯಾ ಚಿತ್ರಗಳನ್ನು ತೆಗೆದೆನಾದರೂ ,ಅದರ ಸಂಖ್ಯೆ ವ್ರದ್ದ್ಧಿಸಿದ್ದು ಅಲ್ಲಿಂದ ಚೂರು ಕೆಳಗಿಳಿದು ಕಲ್ಲುಗಳ ಹತ್ತಿರ ಹೋದಾಗ.
ಅಲ್ಲಿ  ಗಿರಿಯನ್ನು ಸುತ್ತುವರೆದು ಬಿಳಿಯ ಮೋಡಗಳು ಹೋಗುವ ಪರಿ ಅನನ್ಯ,ಅದ್ಭುತ,ಅಮೋಘ,ಅಪೂರ್ವ,ಅತಿಮನೋಹರ,ಅತಿಸುಂದರ!!

ಅದನ್ನು ನೋಡಿ ಒಂದೆರಡು ಸಾಲುಗಳು ಹೊಳೆದವು ಅವನ್ನೇ ಬರೆದಿದ್ದನೆ ನೋಡಿ,

ಮೇಘರಾಶಿಯ ಬಗೆದು ಎದ್ದು 
ನಿಂತಿರುವುದು ಈ ಗಿರಿಯು
ಅದಕೆ ಅಂದ ನೀಡಿದೆ ಹಸಿರು
ಮರಗಳು ಅಂಟಿಕೊಂಡ ಪರಿಯು

ಈ ಜಗವ ಮರೆಸುವುದು
ಆ ಮನಮೋಹಕ ತಂಗಾಳಿಯು
ಬಿಸಿ ಮಾಡಿ ಎಬ್ಬಿಸುವುದು ಸಂತಸವ
ಆ ಜುಮು ಜುಮು ಛಳಿಯು

ನೋಡುವ ಕಂಗಳಿಗೆ ಹಬ್ಬವು
ಈ ನಿಸರ್ಗದ ಸಿರಿಯು
ಚಿರ ಕಾಲ  ಉಳಿಯಲಿ ಆ ಸೊಬಗು ಆಶಿಸುವೆ,
ನೋಡಿ ಖುಷಿ ಪಡಲೆಂದು ಮುಂದಿನ ಮಕ್ಕಳು ಮರಿಯು
 

                                    *******
ಮುಂದೇನು ವಿಶೇಷವಿಲ್ಲ,ತಾಳ ಹಾಕುತ್ತಿದ್ದ ಹೊಟ್ಟೆಯನ್ನು ಚಪಾತಿ,ಪಲ್ಯಗಳು ತಣಿಸಿದವು.ಒಗ್ಗರಣೆ ಮಂಡಕ್ಕಿ,ಚಕ್ಕುಲಿಗಳು ದಾರಿ ಖರ್ಚಿಗಾದವು.ಸುಮಾರು ಹನ್ನೊಂದಕ್ಕೆ ವಾಪಸ್ಸಾದೆವು.ಅಲ್ಲಿಂದ ಬಂದ ಮೇಲೂ ಅದೇ ಗುಂಗಿನಲ್ಲೇ ಇದ್ದೇನೆ.

ಆ ಛಳಿ,ಬೀಸುವ ಗಾಳಿ ,ಹಸಿರನುಟ್ಟು ನಿಂತಿರುವ ಪರ್ವತರಾಶಿ 
ಇನ್ನೂ ನನ್ನ ಕಣ್ ಮುಂದಿದೆ,
ಅದರ ನೆನಪಲ್ಲೇ ಈ ಪ್ರವಾಸ ಲೇಖನದ ಥರ ಬರೆಯ ಹೊರಟ ತಲೆಹರಟೆ 
ನಿಮ್ಮ ಕಣ್ಣ  ಮುಂದಿದೆ

ನನಗೆ ಗಿರಿಯನ್ನು ತೋರಿಸಿದ ನವಗ್ರಹಗಳಿಗೆ ಧನ್ಯವಾದಗಳು.
ಈ ಲೇಖನವನ್ನು ಓದಿದ ನಿಮಗೂ ಧನ್ಯವಾದಗಳು.

ಕೊನೆಗೆ ಅಂತೂ ನಾನೀಗ ಹೇಳಬಲ್ಲೆ ,
"ನಾನೂ ಗಿರಿಗೆ ಹೋಗಿದ್ದೆ!" ಅಂತ

-ಮನದಾಳದ ಮಾತುಗಳನ್ನು ಹಂಚಿಕೊಂಡ ಸಂತಸದೊಂದಿಗೆ 
 ಇತಿ ನಿಮ್ಮನೆ ಹುಡುಗ 
ಚಿನ್ಮಯ ಭಟ್

Monday, April 9, 2012

ಎಳೆಯರಾಗಿರಿ ಗೆಳೆಯರೇ.......

ಎಳೆಯರಾಗಿರಿ ಗೆಳೆಯರೇ ನೀವ್,
ಗೆಳೆಯರಾಗಿರಿ ಮತ್ತೆ ಎಳೆಯರಾಗಿ.

ಹೋಗದಿರಿ ಹುಚ್ಚರಂತೆ ಹಣದ ಹಿಂದೆ,
ಹೋದರೆ ಜೀವನ ಮಸಣವು ಮುಂದೆ.
ಬನ್ನಿ ಹೋಗುವಾ ಚಿಟ್ಟೆಯ ಹಿಡಿಯಲು
ದಾರವ ಕಟ್ಟಿ ನಕ್ಕು ನಲಿಯಲು

ಮೇಲೆ ತಾ ಮೇಲೆ ಹೋಗಲು
ಮೇಲಣ ಕಾಲ ಜಗ್ಗದೆ ನಿಲ್ಲಿ,
ಎಲ್ಲರೂ ಕೂಡಿ ಆಡುವಾ ಬನ್ನಿ
ಒಂಟಿ ಕಾಲ ಕುಂಟೆ- ಬಿಲ್ಲಿ

ಕದಿವುದೋ ಯಾಕೋ,ಹಿಡಿವುದು ನಿಜಕೋ
ಕ್ಲೋಸು ಮಾಡಿ ಆ ಹೊಡೆದಾಟದ ಕೇಸು.
ಜಾತ್ರೆಯ ಟೋಪಿಗೆ ಆಟಿಕೆ ಗನ್ನು,
ಆಡುವ ಬನ್ನಿ ಕಳ್ಳಾ-ಪೊಲೀಸು..


ಎಳೆಯರಾಗಿರಿ ಗೆಳೆಯರೇ ನೀವ್,
ಗೆಳೆಯರಾಗಿರಿ ಮತ್ತೆ ಎಳೆಯರಾಗಿ.


Saturday, March 24, 2012

ಎಲ್ಲಿ ಕಾಣೆಯಾಗಿರುವಿರಿ ? ನನ್ನ ಎಮ್ಮೆಗಳೆ ಬನ್ನಿ....


(ನನ್ನೆಲ್ಲಾ ಗೆಳೆಯ/ಗೆಳತಿಯರಿಗೆ ಈ ಕವನ ಸಮರ್ಪಿತ)

ಎಲ್ಲಿ ಕಾಣೆಯಾಗಿರುವಿರಿ
ನನ್ನ ಎಮ್ಮೆಗಳೆ ಬನ್ನಿ ಇಲ್ಲಿ,
ಕಣ್ಣ ಮುಚ್ಚಿ ಹತ್ ಎಣಿಸುವೆ
ನನ್ನ ಎದುರು ಬಂದು ನಿಲ್ಲಿ.

ಕಲ್ಲು ಮುಳ್ಳುಗಳಿದೆ ಎಲ್ಲೆಡೆ
ಆದಿರೇಕೆ ಒಬ್ಬಂಟಿ ?
ಬನ್ನಿ ಎಲ್ಲರೂ ,ಕೂಡಿ ತಿನ್ನುವ
ಈಗ ಒಂದು ಬನ್-ಟೀ

ಥೂ ,ಎಲ್ಲಿರುವಿರಿ??
ಹ್ಯಾಪಿ ಬರ್ತಡೇಯ ದಿನ ಜಾಡಿಸಿ
ಒದೆಯುವ ನನ್ನ ಎಮ್ಮೆಗಳೇ ಬನ್ನಿ
ಹ್ಯಾಪುಮೋರೆ ಹಾಕಿಕೊಂಡ ದಿನವು
ಗುದ್ದಿ ಎಬ್ಬಿಸಿದ ಎಮ್ಮೆಗಳೇ ಬನ್ನಿ

ಖಾಲಿ ಥೈಲಿಗೆ ಸಾಲವ ನೀಡಿ,
ಜೋಲಿ ಹೊಡೆದ ಮನವ ತಿದ್ದಿ ತೀಡಿ,
ಹೋದಿರೆಷ್ಟು ದೂರ ಸಾಗಿ??
ಕೇಳದೇಕೆ ನಿಮಗಿಂದು,ನಾ ಕರೆದರೂ ಕೂಗಿ!

ಕಾಣದೇ ಕಾಡುವ ಒಲವೆ..........

ಕಾಣದೆ ಕಾಡುವ ಚೆಲುವೆ
ನೀ ಕಾಡುತ ಒಡುವ ಮನವೆ
ಆಣೆಯ ಪಡೆವ ನಲಿಮೆ
ನೀ ಎದೆಯ ಸುಡುವ ಕುಲುಮೆ

ಕಣ್ಣ ಮುಚ್ಚಿ ತೆರೆಸುವ ನಿನ್ನಯ ತುಟಿಗಳೆ ಸುಂದರ
ಮಣ್ಣು ಮೆತ್ತಿ ಕೊಂಡರೆ ಕೆನ್ನೆಯ ಒರೆಸುವ ಚಂದಿರ
ಮೋಹಕ-ಸಮ್ಮೋಹಕ ಕಣ್ಣಿನಾ ಸೆಳೆತವು
ಜಾರ್ಜಿಯಾ-ಕೆಲಿಫೋರ್ನಿಯಾ ನಿನ್ನದೇ ಎಲ್ಲವೂ
ಹಲ್ಲಲೇ ಹಾಲ,ಚೆಲ್ಲುವಾ ಚೆಲುವೆ

ಕನಸಲಿ ನನ್ನ ಕಾಡುವ ಈಗಿನ ಕಾಲದ ಮೋಹಿನಿ
ನನಸಲಿ ಸಿಗದೆ ಓಡುವ ಪ್ರೀತಿಯ ಲೋಕದ ವಾಹಿನಿ
ದಿಟವೋ ಇದು,ಹುಡುಗಾಟವೋ ನಿನ್ನದೇ ಎಲ್ಲವೂ
ಆಟದಿ ಹುಡುಕಾಟತಿ ಸಿಗುವುದೇ ಗೆಲುವು
ಬದುಕುವೆ ನಿನ ನೆನಪಲೇ ಬಂದರೂ ಸಾವು

Sunday, February 5, 2012

ಬರಡೆಮ್ಮೆ-ಮುದಿಯೆತ್ತು

ಬರಡೆಮ್ಮೆ ಮೇಲೆ
ಎರಡಾಣೆ ಬೆಲೆ ಕಾಣೆ,
ಮುದಿಯೆತ್ತ ತೊಗಲಲಿ
ಸದರಿನ ಮಾಲೆ ಕಾಣೆ

ಎಲ್ಲಿ ಹೋದೆ ಕರುವೆ ಜಾರಿ
ಎಲ್ಲೆ ಮೀರಿ ಊರ ಹಾರಿ...

ಡಬ್ಬಿಯ ತಿಂಡಿ ಕದ್ದ
ಕಳ್ಳ ಬೆಕ್ಕೆಲ್ಲಿಗೆ ಹೋಯ್ತು
ಗುಬ್ಬಿಯ ಗೂಡು ಹೆಣೆದ
ಒಳ್ಳೆ ಗಿಣಿ ಕಾಣದಾಯ್ತು

ಉಳಿದದ್ದು ಬರಡೆಮ್ಮೆ ಕನಸು
ಹಳಸಿದ್ದು ಹೊಸ ಹೊಸ ತಿನಿಸು.

ಮೊದಲಿದ್ದ ಜಡೆ ಜುಟ್ಟು ,
ರಟ್ಟೆಯಷ್ಟುದ್ದವಾಯ್ತು
ಹದವಿದ್ದ ಕುಡಿಮೀಸೆ
ಕಂಬಳಿ ಹುಳುವಾಗಿ ಕಚ್ತು

ಬಾಗಿದ್ದೊಂದೇ ಎತ್ತಿನ ಬೆನ್ನು
ನೊಗವ ಹೊತ್ತ ಬಾಳ ಹೊನ್ನು

ಬರಡೆಮ್ಮೆ ಮೇಲೆ
ಎರಡಾಣೆ ಬೆಲೆ ಕಾಣೆ
ಮುದಿಯೆತ್ತ ತೊಗಲಲಿ
ಸದರಿನ ಮಾಲೆ ಕಾಣೆ

ಎಲ್ಲಿ ಹೋದೆ ಕರುವೆ ಜಾರಿ
ಎಲ್ಲೆ ಮೀರಿ ಊರ ಹಾರಿ!!!

(ಮೊನ್ನೆ ರಜೆಯಲ್ಲಿ ಯಾವುದೋ ಕಾದಂಬರಿ ಓದುತ್ತಿದ್ದೆ..ಅದರಲ್ಲಿ ತಂದೆ ತಾಯಿಗಳನ್ನು ಬಿಟ್ಟು ಹೋದ ಮಕ್ಕಳ ಚಿತ್ರಣವಿತ್ತು..ಹಾಗೆ ಯೋಚಿಸುತ್ತಾ ಒಂದೆರಡು ಎನೇನೋ ಶಬ್ದಗಳು ಹೊಳೆದವು...ಅದನ್ನೇ ಸೇರಿಸಿ ಒಂದು ಕವನದ ಥರ ಏನೋ ಬರೆದಿಟ್ಟೆ..ಒಬ್ಬನೇ ಇದ್ದಾಗ ಅದಕ್ಕೊಂದು ರಾಗ ಹಾಕಲೂ ಪ್ರಯತ್ನಿಸುತ್ತಿದ್ದೇನೆ..ನಿಮಗೂ ಚೂರು ಪುರಸೊತ್ತಿದ್ದರೆ ಅದನ್ನೂ ಪ್ರಯತ್ನಿಸಿ ನೋಡಿ!!!!
ಹಾಂ..ಮತ್ತೊಂದು,ಮತ್ತೊಂದು ದಿನ ನಾನೇ ಓದಿದಾಗ ಇದು ನನಗೇ ಅರ್ಥವಾಗಲಿಲ್ಲ ,ಅದಕ್ಕೆ ಮೊದಲೇ ಹೇಳುತ್ತಿದ್ದೇನೆ,
ಇಲ್ಲಿ ಬರಡೆಮ್ಮೆ,ಮುದುಯೆತ್ತು ಎಲ್ಲಾ ವಯಸ್ಸಾದ ಅಪ್ಪ-ಅಮ್ಮಂದಿರು..ಕರು,ಗಿಳಿ,ಬೆಕ್ಕು ಎಲ್ಲಾ ಮಕ್ಕಳು!!!!!!)