Sunday, December 23, 2012

ತಿಂಗಳು ಮರೆಯಾದರೇನಂತೆ ತನ್ವಂಗಿ….



ಅಬ್ಬಾ..ಸುಮಾರು ೧೫ ದಿನದಿಂದ ಪರೀಕ್ಷೆಯ ನೆಪದಲ್ಲಿ ಬ್ಲಾಗ್ ಲೋಕದಿಂದ ದೂರವಿದ್ದೆ... ಅಂತೂ ಇಂತೂ ನಾಲ್ಕು ಪರೀಕ್ಷೆಗಳು ಮುಗಿದವು ..ಇನ್ನೆರಡು ಮುಂದಿನ ವರುಷಕ್ಕೆ (ಜನವರಿ ೩,೫ಕ್ಕೆ ಹಾ ಹಾ)...ಹಾಗಾಗಿ ಸಿಕ್ಕಾಪಟ್ಟೆ ಅಂತರವಿರುವುದರಿಂದ ಕೆಲಸ ಕಾಣದೇ ಮಾಡಿದ ಕೆಲಸವಿದು..ಒಂದು ಪುಟ್ಟ ಕವಿತೆ ಬರೆಯುವ ಪ್ರಯತ್ನ..ಸಂದರ್ಭ ಅಂತೇನೂ ಅಂದುಕೊಂಡು ಬರೆದಿದ್ದಲ್ಲ,ಬರೆಯುತ್ತಾ ಹೋದಂತೆ ಮನಸ್ಸಿಗೆ  ಬಂದ ಸನ್ನಿವೇಶ..ಗೆಳತಿಯ ಮದುವೆಯ ಹಿಂದಿನ ದಿನ ಆಕೆಯ ಗಂಡನಾಗುವವನು ಮನೆಬಿಟ್ಟು ಹೋದಾಗ ,ಆಕೆಯನ್ನು ಸಂತೈಸುವ ಭಾವ ಹೊತ್ತು ಬರೆದದ್ದು...ಎಷ್ಟರಮಟ್ಟಿಗೆ ಬರೆದೆನೋ ಕಾಣೆ..ನೀವೇ ತಿದ್ದಿ ಆಶೀರ್ವದಿಸಬೇಕು..

ತಿಂಗಳು ಮರೆಯಾದರೇನಂತೆ ತನ್ವಂಗಿ,
ಕಂಗಳಾ ಕನಸೆಲ್ಲಾ ಇಂಗೀತೇ?
ಮದರಂಗಿ ಮಸುಕಾದರೇನಂತೆ ಮುಂಗೈಲಿ,
ಅಂಗೈಯ್ಯ ಗೆರೆಯಂದ ಅಳಿಸೀತೆ?

ಮಲಾರದಲ್ಲಿಪ್ಪ ಚಿಕ್ಕಿಬಳೆಯೀಗ
ಒಡೆಯಲು,ನೀ ಹೀಗೆ ತೀಡದಿರು.
ಹಜಾರ ಬಳೆಯುಂಟು ಇನ್ನೂ ಆ ಮಾಲೆಯಲಿ
ಹೊನ್ನಿನ ಕಡಗವ ಹುಡುಕುತಿರು

ಬೇಸರದ ಸಬರವ ಮೇಲ್ಮೆತ್ತಿಗಿಟ್ಟಿರು,
ಅಂಗಳದಿ ಗೊಂದಲದಾ ಕಲ್ಲು-ಕ್ವಾಳೆಯ ಗುಡಿಸಿರು.
ಹಂಗಿಸುವ ನೆಂಟರ ಸಗಣಿಯಲಿ ತೊಡೆದಿರು,
ನಾಳಿನಾಸೆಯಾ  ಬಣ್ಣದಲಿ, ರಂಗೋಲಿ ಬಿಡಿಸಿರು.

ಚಂದಿರ  ಮರೆಯಾದರೇನಂತೆ ??

ಶಬ್ಧಾರ್ಥ: ತಿಂಗಳು:ಚಂದಿರ,ತನ್ವಂಗಿ:ಕೋಮಲವಾದ ಶರೀರವುಳ್ಳವಳು,ಮಲಾರ:ಬಳೆಗಾರನ ಬಳೆ ಸಂಚಿ,ಚಿಕ್ಕಿಬಳೆ:ಬಳೆಯ ಒಂದು ಪ್ರಕಾರ,
( ಇನ್ನು ನಮ್ಮ ಕಡೆ ಬಳಸುವ ಶಬ್ಧಗಳನ್ನು ಬಳಸುವ ಒಂದು ಪುಟ್ಟ ಯತ್ನ…ಪಕ್ಕಾ ಇದೇ ಅರ್ಥವೋ ಗೊತ್ತಿಲ್ಲ,ನನಗೆ ತಿಳಿದಂತೆ ಬರೆದಿದ್ದೇನೆ… 
ತೀಡು:ಅಳು,ಸಬರ:ಗುಂಪು,ಚಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು,ಮೇಲ್ಮೆತ್ತಿ:ಮೆತ್ತಿಯ ಮೇಲ್ಭಾಗ,ಮನೆಯ ಕೊನೆಯ ಹಂತ,ಕ್ವಾಳೆ-ಕತ್ತರಿಸಿದ ಗಿಡಗಂಟಿಯ ಉಳಿದ ಭಾಗ,ಕೋಳೆ..)

ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ನಮೂದಿಸಿ..
ತಪ್ಪು ತಿದ್ದಿಕೊಂಡು ಬೆಳೆಯಲು ಸಹಕರಿಸಿ :)
ನಮಸ್ತೆ.
-ಚಿನ್ಮಯ ಭಟ್ಟ

Thursday, December 6, 2012

ಶೀತ ಗೀತೆ..



ಹಮ್..ಇವತ್ತು ಬೆಳಿಗ್ಗೆ ಯಾಕೋ ತೀರಾ ಛಳಿಯೆನಿಸತೊಡಗಿತ್ತು...ಯಾಕೋ ಬೆಚ್ಚನೆಯ ಕಂಬಳಿ ಹೊದ್ದಿದ್ದ ಹಾಸಿಗೆ ಬಿಟ್ಟೇಳಲು ಮನಸೇ ಬಾರದಾಗಿತ್ತು...ಈ ಛಳಿಯ ಯಾಕಾದರೂ ಬರುತ್ತದೆಯೋ ಅಂದುಕೊಂಡೆ..ಮತ್ತೆ ಇನ್ನೊಂದು ಕ್ಷಣದಲ್ಲಿ ಈ ಛಳಿಯಲ್ಲಿಯೂ ಏನೋ ಒಂದು ಸುಖವಿದೆ ,ಈ ಚಳಿಗಾಲವೂ ಸುಂದರವೇ ಎನಿಸಿತು...ಅದನ್ನೇ ಒಂದು ಹೆಣ್ಣಾಗಿಸಿ ಒಂದೆರಡು ಸಾಲು ಬರೆದೆ...ನೋಡಿ ಈ ಸಂಜೆ ಅದನ್ನು ಪೂರ್ತಿಗೊಳಿಸಿ ನಿಮ್ಮ ಮುಂದಿಟ್ಟಿದ್ದೇನೆ...ದಯವಿಟ್ಟು ತಪ್ಪು-ಒಪ್ಪು ತಿಳಿಸಿ...ಆಶೀರ್ವದಿಸಿ  ...


ಮರಳಿ ಬಂದಳು ಛಳಿಯಾ ಗೆಳತಿ
ಹಸಿ-ಬಿಸಿ ಕನಸಿನ ಜೊತೆಗೆ.
ಗುಬುರನು ಹಾಕಿ,ಮಲಗಿದ್ದಾ ಮನವನು
ತಂದಳು ಚವಿಯಾ ಸ್ಥಿತಿಗೆ.

ಹವಳದಾ ಇಬ್ಬನಿಯು ಹೂವಿನಾ ಪಕಳೆಗೆ,
ಕಾವಳದ ಮಂದಲಿಗೆ,ಗರಿಕೆಗೆ.
ನೇವಳದ ಈ ಒಲವು,ಪ್ರಾಲೇಯದಾ ಚೆಲುವು
ಚಿಚ್ಛಕ್ತಿ ಚಿಮ್ಮಿಸಿದೆ ಎದೆಯೊಳಗೆ.

ಛಾನಸವಾ ಹೆದರಿಸಿ,ಜಡತೆಯಾ ನಡುಗಿಸಿ
ಎಬ್ಬಿಸಿದೆ ಎನ್ನಾ ನಿನ ಶೀತ.
ಕನಸಿನ ಕಸ್ತ್ರವ ಕಂಡಿಹೆನು ನಿನ್ನಲ್ಲೇ,
ಇದುವೇ ಸಂಕ್ರಮಣ ಗೀತ.
(ಶಬ್ದಾರ್ಥ:ಗುಬುರು:ಮುಸುಕು,ಚವಿ:ಕಾಂತಿ,ಹೊಳಪು,ಕಾವಳ:ಮಂಜು(ಕತ್ತಲೆ ಎನ್ನುವ ಅರ್ಥವೂ ಇದೆಯಂತೆ),ನೇವಳ:ಉಡಿದಾರ,ಕಂಠೀಹಾರ,ಮಂದಲಿಗೆ:ಚಾಪೆ,ಪ್ರಾಲೇಯ:ಹಿಮ,ಚಿಚ್ಛಕ್ತಿ:ಚೈತನ್ಯ,ಆತ್ಮಶಕ್ತಿ,ಛಾನಸ:ಸೋಮಾರಿತನ,ಕಸ್ತ್ರ:ನಮ್ಮ ಕಡೆ ಮಾವಿನ ಹೂವಿಗೆ “ಮಾವಿನ ಕಸ್ತ್ರ” ಎಂದು ಬಳಸುತ್ತಾರೆ ಅದನ್ನು ಬರೆದೆ ಆಷ್ಟೆ…)


ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ನಮೂದಿಸಿ..
ನಿಮ್ಮ ಸಲಹೆಗಳೆ ನಮ್ಮಂತಹ ಎಡಬಿಡಂಗಿ ಬರಹಗಾರರಿಗೆ ಶಕ್ತಿ,ಅದೇ ನಮಗೆ ಸ್ಪೂರ್ತಿ :)
ವಂದನೆಗಳೊಂದಿಗೆ
-ಚಿನ್ಮಯ ಭಟ್ಟ