Monday, December 16, 2013

ಚೀಟಿ

ನಮಸ್ಕಾರ ಎಲ್ರಿಗೂ...
ಹೆಂಗಿದೀರಿ ಎಲ್ರೂ ???? ಅರಾಮಲ್ವಾ ???
ಇದೊಂದು ಪುಟ್ಟ ಕವಿತೆ....

 ಬ್ಲಾಗ್ ಬರಹವೊಂದನ್ನು ಓದಿ ಕಮೆಂಟಿಸಲು ಬರೆದಿದ್ದು ಹಾಗೇ ಕವನದ ರೂಪ ತಳೆಯಿತು,...
ಮರುದಿನ ಚಟ ತಡೆಯಲಾರದೆ ಫೇಸ್ ಬುಕ್ಕಿಗೆ ಹಾಕಿದೆ...
ಇವತ್ತು ಹಿರಿಯರೊಬ್ಬರ ಪ್ರೀತಿಯ ಮಾತುಗಳಿಂದ ಬ್ಲಾಗಿಗೆ ಹಾಕುತ್ತಿದ್ದೇನೆ....

 ದಯವಿಟ್ಟು ನೋಡಿ,ಅನಿಸಿಕೆ ಹೇಳಿ...
ಧನ್ಯವಾದ :)

ಚೀಟಿ 
====================================== 


ಅಂದು ಬರೆದು ಬಾರದ ಚೀಟಿ,
ಇಂದು ಬಂದಿದೆ ಕಣೆ ಹುಡುಗಿ...
ಒಂದಿಷ್ಟು ದೀರ್ಘವಿರಾಮಕೊಟ್ಟು ,
ನಾ ಬಿಟ್ಟ ಕಣ್ಣೀರಿನಂಗಿ ತೊಟ್ಟು..

ಬೆಟ್ಟು ಬಿದ್ದಿಲ್ಲ ಕಾಲಾಂತರದಲಿ,
ಭಾವವಿನ್ನೂ ಹಸಿಯಾಗಿದೆ,
ಆದರೆ,ವಿರಹದಕಾವಿಗೋ,ಕೈಸಿಗದನೋವಿಗೂ
ಅಕ್ಷರಗಳುರಿದು ಕರಿಮಸಿಯಾಗಿದೆ...

ನಿನ್ನಪೆನ್ನಿನ ಶಾಯಿಯ ಸ್ಪರ್ಶಮಾತ್ರದಲೆ,
ವರ್ಣಮಾಲೆಯೆದ್ದು ನಲಿದಾಡಿದೆ..
ಆದರೆ,ಬರಿಗಣ್ಣುಗಳದನು ಗುರುತಿಸಲಾಗದೇ
ಚಾಲೀಸಿನ ಚಸ್ಮಕ್ಕೆ ತಡಕಾಡಿದೆ....

ಕಟ್ಟಿಟ್ಟ ಕನಸಹೊತ್ತಿಗೆಗಳೆಲ್ಲಾ
ಈಗ ಒಂದೊಂದೇ ಬಿಚ್ಚಿಕೊಳ್ಳುತ್ತಿವೆ...
ನಿನ್ನೆಪತ್ರಿಕೆಯನಿಂದು ಮಾರಲಾಗಂದೆಂಬುದನರಿತು
ಮತ್ತೆ ಸದ್ದಿಲ್ಲದೇ ಮುಡುಗಿ ಮಡಚಿಕೊಳ್ಳುತ್ತಿವೆ...

ನಿನ್ನಪಾತ್ರವನೂ ಹೊಲಿದು ಬರೆದಿದ್ದ ನಾಟಕದಿ,
ನೀನಿಲ್ಲ,ನಾನೊಬ್ಬನೇ ಹಳೆಯ ಪಾತ್ರವಾಗಿದ್ದೇನೆ..
ಹೊಸ ಮುಖಗಳೊಡಗೂಡಿ ಕಥೆಹೇಳುತ್ತಾ,
ಅವರಿಗಾಸರೆಯಾಗುವ ಸಂಘಸೂತ್ರಧಾರನಾಗಿದ್ದೇನೆ...

ಅಂದು ಬರೆದು ಬಾರದ ಚೀಟಿ,ಇಂದು ಬಂದಿದೆ .....
ನನ್ನೆಲ್ಲ ಬಣ್ಣ,ಪಗಡಿಯ ಕಳಚಿ ,
ಚೌಕಿಯಂಚಿನ ಮನುಜಗನ್ನಡಿಯೆದುರು ತಂದು ನಿಲ್ಲಿಸಿದೆ..

===========================================================

ಅಹ್... ಏನೋ ಗೊತ್ತಿಲ್ಲ...
ಪ್ರತಿಸಲ ಹೇಳುತ್ತಿದ್ದರೆ ಅತೀ ಅನ್ನಿಸಬಹುದೇನೋ..ಆದ್ರೆ ನನ್ನಲ್ಲೊಂದಿಷ್ಟು ಗೊಂದಲ ಇರೋದಂತೂ ನಿಜ...
ಇದನ್ನೇ ನಿಮ್ಮೆದುರು ಹಂಚಿಕೊಳ್ಳುತ್ತಿದ್ದೇನೆ....

ಈ ಕವಿತೆ ನನ್ನ ಮಾಮೂಲಿ ಶೈಲಿಯಲ್ಲಿಲ್ಲ...
ಹೊಸ ಶಬ್ಧ,ಅಲ್ಲಲ್ಲಿ ಒಂದಿಷ್ಟು ಪ್ರಾಸಗಳು..
ಅದರಲ್ಲೇ ಎನೇನೋ ಪ್ರಯೋಗ,ಪ್ರತಿಮೆಗಳು ಹೀಗೆ ಇವುಗಳ ಬಗ್ಗೆ ಜಾಸ್ತಿ ಯೋಚಿಸಿ ಬರೆದದ್ದಲ್ಲ...

ಎನೋ ಇವುಗಳಿಗೆ ಹೋಲಿಸಿದರೆ ಅವಕ್ಕೆ ಸ್ವಲ್ಪ ಜಾಸ್ತಿೇ ಸಮಯ ಬೇಕು...
ಸುಮಾರು ಹುಡುಕಾಡಿ ತಡಕಾಡಿ ಗೀಚಬೇಕು..(ಎಲ್ ಬೋರ್ಡಲ್ವಾ ಅದ್ಕೆ :P)
ಒಂದು ಕವನವನ್ನು ಬಿಡಿಸಿ ಬಿಡಿಸಿ ತಿಳಿದು ಅದರ ಭಾವವನ್ನು ಪೂರ್ತಿ ತಿಳಿದಾಗಿನ ಖುಷಿಯ ಅನುಭವ ನನಗಿಷ್ಟ...ಬರಿಯ ನೇರವಾಗಿ ಅರ್ಥವಾಗುವ ಸಾಲುಗಳಿಗಿಂತ ಅವುಗಳಲ್ಲೇನೋ ಒಂದು ಆನಂದವಿದೆ... 
ಬಹುಷಃ ಅದೇ ನನ್ನ ಕವನಗಳಲ್ಲೂ ಬಂದಿದೆಯೇನೋ....ಗೊತ್ತಿಲ್ಲ... 
  ಜೊತೆಗೆ ಹೊಸ ಹೊಸ ಶಬ್ಧಗಳನ್ನು ಎಲ್ಲರಿಗೂ ಪರಿಚಯಿಸುವುದರ ಜೊತೆಗೆ ,ಆ ಪದದ ಬಳಕೆಯ ಸಂದರ್ಭ ಚೆನ್ನಾಗಿ ತಿಳಿದಿರುವುದರಿಂದ ಅದನ್ನು ಬಳಸಲು ಸುಲಭ ಎನ್ನುವ ಯೋಚನೆ ನನ್ನದು...ಗೊತ್ತಿಲ್ಲ...

ಹಮ್... ಆದರೆ ಬರೀ ಅವುಗಳ ಯೋಚನೆಯಲ್ಲಿ ಸುಲಭವಾಗಿ ಅರ್ಥವಾದಾಗಿನ ಸಹಜ ಸಂತೃಪ್ತಿಗೆ ಭಂಗ ತರುತ್ತಿದ್ದೇನಾ?? ಬರೀ ಅಲಂಕಾರದ ಗೋಜಲಿನಲ್ಲೇ ರಚನೆಯನ್ನು ಜಡಕು ಮಾಡ್ತಾ ಇದೀನಾ ??ಗೊತ್ತಿಲ್ಲ...ಒಂದು ಸಲ ಬರೀ ಶಬ್ಧಗಳ ಹುಡುಕಾಟದಲ್ಲೇ,ಅವುಗಳ ಬಳಕೆ ಸರಿಕಾಣದೇ ಭಾವದ ಓಘವನ್ನು ಕಳೆದುಕೊಂಡಂತೆನೂ ಅನಿಸಿದ್ದಿದೆ...ಬರೀ ಪದ,ಪ್ರಾಸನೇ ಕಣ್ಣಿಗೆ ಬಿದ್ದು ಮುಂದಿನ ಭಾವದ ಹರಿವು ಅಲ್ಲೇ ನಿಂತಿದ್ದೂ ಇದೆ...ಮತ್ತೆ ಯಾವಾಗಲೋ ಬರೀಬೇಕು ಅನ್ನಿಸಿದರೂ ಶುರುಮಾಡಿದಾಗಿನದಕ್ಕೂ ಮುಂದಿನಕ್ಕೂ ಹೊಂದಾಣಿಕೆ ಮಾಡುವುದು ಕಷ್ಟವಾದದ್ದೂ ಇದೆ...

ಹಾಗೆಲ್ಲಾ ನೋಡಿದರೆ ಹೊಳೆದ ವಿಚಾರಕ್ಕೆ ಏನೋ ಒಂದು ಸಿಕ್ಕ ಕಾವ್ಯದಲ್ಲಿ ಬಳಸುವ ಪದಗಳ ತರಹದ್ದನ್ನು ಬಳಸಿಬಿಟ್ಟರೆ ಕವಿತೆ ಅನ್ನಿಸಿಕೊಂಡುಬಿಡುತ್ತದೆ ಅನ್ನಿಸುತ್ತದೆ...ಆದರೆ ಮತ್ತೆ ಅರೆಚಣದಲ್ಲೇ ಇದನ್ನು ಯಾವುದಾದರೂ ಪ್ರಬಂಧ,ಲೇಖನದಲ್ಲೇ ಬಿಡಿಸಿ ಹೇಳಬಹುದಿತ್ತಲ್ಲಾ ,ಕವಿತೆಗಳೇ ಬೇಕಿತ್ತೇ???ಆಕಾರ,ಪ್ರಾಸಗಳಿಲ್ಲದಿದ್ದರೆ ಅದನ್ನು ಬರೆದದ್ದೇಕೆ ಅನ್ನಿಸಿಬಿಡುತ್ತದೆ... ಕವಿತೆ ಎಂಬುದು ಒಗಟಿನಂತೆ,ಅದನ್ನು ಬಿಡಿಸಿ ತಿಂದಾಗಲೇ ಸ್ವಾದ ತಿಳಿಯುವುದು ಎಂಬ ನನಗಿಷ್ಟದ ಮಾತು ಗುಯ್ಯ್ಂ ಗುಡುತ್ತದೆ....

ನಿಜಾ ಹೇಳ್ಬೇಕು ಅಂದ್ರೆ, ಕವನವನ್ನು ಹೇಗೆ ಬರೀಬೇಕು ಅನ್ನೋದೇ ಒಂಥರ ತಿಳಿದೇ ಇದ್ದಂಗೆ ಆಗಿದೆ.... :(
ದಯವಿಟ್ಟು ನಿಮ್ಮ ಅಮೂಲ್ಯ ಸಲಹೆ ನೀಡಿ,ನನಗೊಂದು ದಾರಿ ತೋರಿಸಿ...
ಧನ್ಯವಾದ 

Saturday, November 2, 2013

ನಾಳೆ ದೀಪಾವಳಿ...



ನಮಸ್ಕಾರ ಎಲ್ರಿಗೂ...ರಾಜ್ಯೋತ್ಸವ ಹಾಗೂ  ದೀಪಾವಳಿಯ  ಶುಭಾಷಯಗಳು..
ನಿನ್ನೆ ರಾತ್ರಿ ಬರೆದ ಸಾಲುಗಳಿವು....ಕವನ ಅನ್ನಬೇಕೋ ಬಿಡ್ಬೇಕೋ ಗೊತ್ತಾಗ್ತಾ ಇಲ್ಲ...
ಸುಮಾರು ದಿನದಿಂದ ಒಂದೆರಡು ಅರ್ಧಮರ್ಧ ಕವನಗಳನ್ನು ಪೂರ್ತಿಮಾಡಲಾಗದೇ ಹೆಣಗಾಡುತ್ತಿದ್ದೆ....
ಇರ್ಲಿ, ಬರ್ಯಕ್ ಅಂತೂ ಆಗ್ತಿಲ್ಲಾ ಇನ್ನೇನು ಮಾಡದು ಎಂ.ಇ ಮಾಡ್ತಾ ಇರೋದಾದ್ರೂ ಸಾರ್ಥಕವಾಗ್ಲಿ ಅಂದ್ಕೊಂಡು Digital Image Processing ಪುಸ್ತಕ ಹಿಡಿದುಕೊಂಡಿದ್ದೆ..ಅದರಲ್ಲಿರುವುದು ಅರ್ಥವಾಗದೇ ಆ ಕಡೆ ಈ ಕಡೆ ಓಡಾಡಿಕೊಂಡಿದ್ದೆ..ಟೆರೇಸಿನ ಮೇಲೆ ಹೋದವನಿಗೆ  ನನ್ನ ರೂಮಿನ ಮುಂದಿನ  ಮನೆಯ ಸಾಲಿನಲ್ಲಿ ದೂರದಲ್ಲಿ  ಒಬ್ಬಳು ಹುಡುಗಿ ರಾತ್ರಿ ರಂಗೋಲಿ ಹಾಕುತ್ತಿರುವುದನ್ನಾ ನೋಡಿದೆ...ನಂಗೆ ಇದು ಹೊಸಾದು ಅನಿಸ್ತು...ನಮ್ಮನೆಲಿ ಎಲ್ಲಾ ಸಾಧಾರಣ ಬೆಳಿಗ್ಗೆ ಹೊತ್ತೇ ಹಾಕದು...
ಇನ್ನೇನು ವಯಸ್ಸಿನ ತಪ್ಪಿರ್ಬೇಕು ಒಂದೆರಡು ಸಾಲು ಮೂಡಿತು...
ಕೆಳಗೆ ಬಂದು ಬರೆಯುತ್ತಾ ಹೋದೆ...ಉಳಿದದ್ದು ನಿಮ್ಮ ಮುಂದಿದೆ...
ಎಂದಿನಂತೆ ಓದಿ,ಅನಿಸಿಕೆ ತಿಳಿಸಿ :) ...ಬೆಳೆಯಲು ಸಹಕರಿಸಿ...






ನಾಳೆ ದೀಪಾವಳಿ,ನನ್ನವಳಿಂದು ರಂಗವಲ್ಲಿಯಿಕ್ಕುತ್ತಿದ್ದಾಳೆ..
ತೊಳೆದ ಹಾದಿಯೊಳು,ತಿಳಿಯದ ಒಗಟಿನ ಚುಕ್ಕಿಯಿಕ್ಕುತ್ತಿದ್ದಾಳೆ


ದಿನವೂ ನಾವಿಬ್ಬರು  ಓಡಾಡುವ ಹಾದಿಯದು
ಅವಳೇ ಮುಂದೆ ಎಂದಿಗೂ,ನಾ ಬೇಗ ಬಂದಿದ್ದರೂ
ಮುನಿಸಿನ ಕೋಳಿಜುಟ್ಟದಲೆ ಕರೆಯುವಳು ಎನ್ನ
ಬಹುಳದ ಬಳಿಕದ ಬೆಳಕಿನಂತೆ,ನಾ ಅಲ್ಲೆ ಎಲ್ಲೋ ನಿಂತಿದ್ದರೂ


ಓಡಾಟದ ಒಡನಾಟದಿ ಗೌಜಿಲ್ಲ,ನಂಬರವಿಲ್ಲ
ಬರಿಭರವಸೆಯ ಮೌನದಿ ನಡೆದ  ಮೈಲಿಮೈಲಿ ದೂರ,ಅರ್ಧಫರ್ಲಾಂಗಿನಂತಿದೆ
ಚಡಪಡಿಕೆಯ ಬಂಡಿಯೊಳು ಹೊಯ್ದಾಡಿದ ಛಂದದ ಬಿಸಿನೆನಪು
ಇಂದು ಅವಳುಟ್ಟ ನಿಗಿನಿಗಿ  ನವಿಲುಗರಿ ರೇಷಿಮೆಯಲಂಗದಂತಿದೆ


ಕಾಯಿಹುಳಿಯದು ಮಾಗಿ ಹಣ್ಣಸವಿಯುಕ್ಕುವ ಪರ್ವದಿ
ಎದೆಯೊಳು ಅಸೆಅಂಬಿಕ್ಕಿ ಕುಕ್ಕುತಿಹ ಹೆಜ್ಜೇನ ಪಡೆಯಿತ್ತು
ದುಂಡಗಿನ ಮೂರು ಪದಗಳ ಬಾಲತಿರುವಿ ಕೆಂಪಟವ ಬೀಸಲು
ಆ ಸ್ನೇಹ ಸಂತ್ರಸ್ತರ ದಾವೆಯಂಜಿಕೆಯ ತಡೆಯಿತ್ತು


ಮೂರುಕಾಲಿನ ಮೇಜು ಹರಕು ಚಾಪೆಯ ಬದುಕು
ಸಾಕೆನಿಸಿ ಕಡೆಗೆ ತೆರೆದೆ ನಾ ಕನವರಿಕೆಯ ಕದಗಳನು
ದಾರಸೂಜಿಯ ತೆರದಿ ಹೊಲಿಯಬಯಸುವೆ ನಾಳೆಯ
ನೂಕು ಬೇಗ ಕಿವಿಯೊಳು ನೀ,ಹಸಿನಾಚಿಕೆ ಪದಗಳನು


ನಾಳೆ ದೀಪಾವಳಿ,ನನ್ನವಳಿಂದು ರಂಗವಲ್ಲಿಯಿಕ್ಕುತ್ತಿದ್ದಾಳೆ..
ತೊಳೆದ ಹಾದಿಯೊಳು,ತಿಳಿಯದ ಒಗಟಿನ ಚುಕ್ಕಿಯಿಕ್ಕುತ್ತಿದ್ದಾಳೆ

-----------------------------------------------------------------------------------------------------------
ಶಬ್ದಾರ್ಥ :ಬಹುಳ=ಕೃಷ್ಣ ಪಕ್ಷ,ಗೌಜು=ಗದ್ದಲ,ನಂಬರ=ಜಗಳ
 

ಮತ್ತೊಮ್ಮೆ ಕವನ ವಾಚಿಸುವ ಪುಟ್ಟ ಪ್ರಯತ್ನ...ಸಮಯ ಮಾಡಿಕೊಂಡು  ಅದನ್ನೂ ಕೇಳಿ :) ನಿಮ್ಮ ಅನಿಸಿಕೆನೂ ದಯವಿಟ್ಟು ಹೇಳಿ :)
ನಮಸ್ತೆ :)





 

Saturday, October 19, 2013

ಹುಣ್ಣಿಮೆಯ ತಡರಾತ್ರಿ.....(ಕಟ್ಟುಕಟ್ಟದ ಶಬ್ಧಗಳ ಜೊತೆಗೊಂದು ಹುಚ್ಚುಪ್ರಯೋಗ )


ನಮಸ್ಕಾರ ಎಲ್ರಿಗೂ,
ಅದೇನೋ ಗೊತ್ತಿಲ್ಲ...ನಿನ್ನೆ ರಾತ್ರಿ ಹಲ್ಲುತಿಕ್ಕಲು ಹೋದವನಿಗೆ ರಾತ್ರಿಯ ಆಗಸದಲ್ಲಿ ಚಂದಿರ ಕಂಡ..
ಉಳಿದ ದಿನಕ್ಕಿಂತ ಯಾಕೋ ವಿಶೇಷವಾಗಿ ಕಂಡ..
ಏನೂ ಬರೆಯಲಿಲ್ಲವಲ್ಲಾ ಎಂದು ಅಂದುಕೊಳ್ಳುತ್ತಿದ್ದವನಿಗೇಕೋ ಈ ಕೆಳಗಿನ ಬರಹದ ಎರಡು ಸಾಲುಗಳು ಹಲ್ಲುತಿಕ್ಕಿ ಮುಗಿಸುವುದರೊಳಗಾಗಿ ಹೊಳೆದುಬಿಟ್ಟವು..
ಏನೋ ಗೊತ್ತಿಲ್ಲ...ಸುಮ್ಮನೆ ಅದನ್ನು ಚಾಟಿನ ಮಧ್ಯೆ ಮೆಸ್ಸೆಜಿಸಿ ನಗುಮೊಗದ ಸ್ನೇಹಿತೆ ಲಹರಿಯೊಡನೆ  ಹಂಚಿಕೊಂಡೆ..

"ಚೆನಾಗಿದೆ ಕಣೋ ಮಾರಾಯಾ..ಅದ್ ಹೆಂಗ್ ಬರಿತೀಯಾ ಇದ್ನೆಲ್ಲಾ "ಅಂದಳು...
ಕೊಂಬು ಬಂದಂಗಾಯ್ತು ನೋಡಿ,ಏನೋ ಅನಿಸಿದ ಭಾವವನ್ನೆಲ್ಲಾ ಬರಹಕ್ಕಿಳಿಸಿದೆ...ಉಳಿದದ್ದು ನಿಮ್ಮ ಮುಂದೆ..

 ಇನ್ನು ಇದನ್ನಾ ಹಂಗೆ ಲೇಖನದ ಥರಬರ್ಯಕೆ ನಂಗ್ ಬರ್ಲಿಲ್ಲ....
ಇದಕ್ಕೆ  ಕವನ ಅಂತಾ ಹೇಳಕೆ ನನ್ನೊಳಗಿನ ಒಂದು  ಮನಸ್ಸು ಒಪ್ತಾ ಇಲ್ಲ...
ಹಂಗಂತಾ ಇದ್ನಾ ನಿಮ್ಮ ಜೊತೆ ಹಂಚ್ಕೊಳ್ದೇ ಇರಕ್ಕೆ ಇದನ್ನು ಬರೆದ ಮನಸ್ಸು ಬಿಡ್ತಾ ಇಲ್ಲ..

ಇಬ್ಬರಿಗೂ ಸಂಧಾನ ಮಾಡ್ಸೋ ಪ್ರಯತ್ನ ಇದು..ದಯವಿಟ್ಟು ಬೇಜಾರಾಗ್ಬೇಡಿ...
ಭಾವವ ಬರಹಕ್ಕಿಳಿಸಿದ ಸಂಸ್ಕರಿಸದ ಸಾಲುಗಳಿವು...
ಬೇಗ ಓದಿ,ಹೇಂಗಿದೆ ಹೇಳಿ..ಜಾಸ್ತಿ ಇಟ್ರೆ ಕೆಟ್ಟೋಗತ್ತೆ !!!





  (ನನ್ನ ಮೊಬೈಲಿನ ಮಸುಬು ಕ್ಯಾಮರಾ+ಫೋಟೋಸ್ಕೇಪಿನ ಕೃಪೆ )



ಹುಣ್ಣಿಮೆಯ ತಡರಾತ್ರಿ
ಬರೆದ ಸಾಲುಗಳಿವು ಕಣೆ ಹುಡುಗಿ,
ನಿನ್ನ ಸಂಗದ ನಶೆಯಲ್ಲಿ,
ಅಳಿದುಳಿದ ನೆನಪುಗಳ ಬೆಳಕಿನ ಕತ್ತಲೆಯಲ್ಲಿ..

ಅವತ್ತು ಅಮಾವಾಸ್ಯೆಯಿರಬೇಕು ನೀ ಕಂಡ ದಿನ ಎನಗೆ
ಬಾಕಿಉಳಿದಿದ್ದ ಕನಸಚುಕ್ಕಿಗಳೆಲ್ಲಾ ಏಕೋ ಮಾಯವಾಗಿದ್ದವು,
ಕಣ್ಣ ಮುಂದಿದ್ದುದೊಂದೆ ಕತ್ತಲೆ....
ನಿನ್ನ ಪಿಸುಮಾತೊಂದೆ ಎದೆಯೊಳು ಮಾರ್ದನಿಸುವ ಕತ್ತಲೆ....

ಆ ರಾತ್ರಿಯಲು ಒಂದು ಸೊಗಸಿತ್ತು...
ತುಂಟಮಾತಿನ ಕಚಕುಳಿಯಿತ್ತು...
ತಡೆಯಿಲ್ಲದೆ ಹರಿವ ಮಾತಿನ ಸರಪಳಿಯಿತ್ತು...
ಕಾಲೆಳೆದಾಗ ನೀ ಎನ್ನ ಬಲಭುಜವ ಹೊಡೆವ ಚಂದದ ಸಪ್ಪಳವಿತ್ತು..
ನೀಯನ್ನ ತೀರ ರೇಗಿಸಿದಾಗಿನ ಮಾತಿಲ್ಲದ ಮೌನದ ಬಿಸಿಯುಸಿರ ಛಳವಿತ್ತು..

ಅಂದು ಕತ್ತಲೆಯಿತ್ತು...ಕತ್ತಲೆಯೊಳಗೆಲ್ಲ ಇತ್ತು...

ಹುಣ್ಣಿಮೆಯ ತಡರಾತ್ರಿ
ಬರೆದ ಸಾಲುಗಳಿವು ಕಣೆ ಹುಡುಗಿ,
ನಿನ್ನ ಸಂಗದ ನಶೆಯಲ್ಲಿ,
ಅಳಿದುಳಿದ ನೆನಪುಗಳ ಬೆಳಕಿನ ಕತ್ತಲೆಯಲ್ಲಿ..

ಇಂದು ಹುಣ್ಣಿಮೆ..ನೀನಿಲ್ಲದ ಒಂಟಿ ಬದುಕಿನ ಹುಣ್ಣಿಮೆ..
ಜೇಬತುಂಬಿಬಂದ ಕನಸುಗಳು ನೋಡುತ್ತಿವೆ ಎನ್ನ ಕೆಕ್ಕರಿಸಿಕೊಂಡು..
ಜೀವಹಿಂಡುವ ಬಿಳಿಯಚಂದ್ರ ತಲೆತಿನ್ನುತಿಹ ಬಂದುವಕ್ಕರಿಸಿಕೊಂಡು..
ಈಗ ಎತ್ತನೋಡಿದರತ್ತಲಲ್ಲೆಲ್ಲ ಬೆಳಕು..
ಚಿತ್ತಕಲಕುವ ನೆನಪೆಲ್ಲವ ಕೆದಕಿ,ಉಸಿರುಗಟ್ಟಿಸುವ ಮಬ್ಬು ಬೆಳಕು...

ಏನಿದೆ ಈ ಬೆಳಕಲ್ಲಿ??ಏನಿದೆ ಈ ಬೆಳಕಲ್ಲಿ??

ಹಾಳುಗರಿವ ಕೆಂಪುಕುನ್ನಿಯ ರಾತ್ರಿರಾಗಕೆ ,
ಬರುತಿದ್ದ ಅರೆಬರೆ ನಿದ್ದೆಯೂ ಹತ್ತುತಿಲ್ಲ..
ಭಗಭಗನೆ ಹೊತ್ತುರಿದು ನಿರಾಸೆಯ ಮರಳುಗಾಡಿಗೆಕೊಂಡೊಯ್ಯುತಿದ್ದ
 ಹತಾಶೆಯ ಹಾಳುಬೆಂಕಿಯೂ ಇಂದು ಕತ್ತುತಿಲ್ಲ...
ಎಲ್ಲೆಲ್ಲೂ ಬರಿಕೆಂಪುದೀಪಗಳು ಕಣೆ ಹುಡುಗಿ,
ಕಣ್ಣಮುಚ್ಚಿದೊಡೆ ಬಣ್ಣಬಣ್ಣದ ಕನಸುಗಳ ಸುಳಿವಿಲ್ಲ..
ಬರಡುಬಿದ್ದಿಹ ಈ ಎದೆಯೊಳಗೆ 
ಒಂದಿನಿತು ಬದುಕ ಸಾಗಿಸುವ ಸ್ಪೂರ್ತಿಯ ಸೆಲೆಯಿಲ್ಲ..

ಇಂದು ನೀನಿಲ್ಲ...ಈ ಬೆಳಕಲ್ಲು ಏನಿಲ್ಲ...

ಹುಣ್ಣಿಮೆಯ ತಡರಾತ್ರಿ
ಬರೆದ ಸಾಲುಗಳಿವು ಕಣೆ ಹುಡುಗಿ,
ನಿನ್ನ ಸಂಗದ ನಶೆಯಲ್ಲಿ,
ಅಳಿದುಳಿದ ನೆನಪುಗಳ ಬೆಳಕಿನ ಕತ್ತಲೆಯಲ್ಲಿ..

          





ಇದ್ರ ಜೊತೆಗೆ ಇದನ್ನಾ ಓದಿಹೇಳೋ ಒಂದು ಪ್ರಯತ್ನಾನು ನಡ್ದಿದೆ..
ಬರಿ ಓದೋದಕ್ಕೆ ಹೇಳೋದ್ಕಿಂತಾ ಅದನ್ನಾ ಓದಿ ಹೇಳಿದ್ರೆ ಅದರ ಪರಿಣಾಮ ಜಾಸ್ತಿ ಅನಿಸ್ತು..
.ಗೊತ್ತಿಲ್ಲ..ನನ್ನ ಭಾವವನ್ನು ನಿಮಗೆ ತಿಳಿಸುವ ನಿಟ್ಟಿನಲ್ಲಿ ಒಂದು ಪುಟ್ಟ ಪ್ರಯತ್ನ..
ಒಂದ್ಸಲ ಕೇಳಿ ಕಿವಿ ತುಂಬುಸ್ಕೋಳಿ.:D..
ತಪ್ಪು ಒಪ್ಪುಗಳೇನಿದ್ರೂ ಹೇಳಿ..ನನ್ನನ್ನಾ ತಿದ್ದಿ ತೀಡಿ...


Monday, October 14, 2013

"ಜಟ್ಟ"...ಮುಚ್ಚಿದ ಬಾಗಿಲೊಳಗೊಂದು ಸತ್ವಪೂರ್ಣ ಕಥನ..

ನಾನು ಸುಮಾರು ಒಂದು ತಿಂಗಳಿನಿಂದ ಜಟ್ಟ ಚಿತ್ರದ ಭಿತ್ತಿಚಿತ್ರಗಳನ್ನು ನೋಡುತ್ತಿದ್ದನೇನೋ...ಆಗಾಗ ಪತ್ರಿಕೆ ಸಿನಿಮಾ ಸಂಚಿಕೆಗಳಲ್ಲಿ ಬರುವ ಚಿತ್ರದ ಜಾಹೀರಾತುಗಳನ್ನು ನೋಡಿದವನಿಗೆ "ಹತ್ತೊರ ಮೇಲೆ ಹನ್ನೊಂದು" ಅನ್ನಿಸಿದ್ದುಂಟು..ಚಿತ್ರ ನೋಡಲೇ ಭಯ ಹುಟ್ಟಿಸುವಂತಹ ಹೊಡಿ-ಬಡಿ ರೌಡಿಸಂ ಕಥೆಯುಳ್ಳ ಚಿತ್ರಗಳು ಬಂದು ವಾಕರಿಕೆ ಹುಟ್ಟಿಸುವ ಸಂದರ್ಭ ಎದುರಿಗಿರುವಾಗ ,ಇದೂ ಅದರಂಥಹುದೇ ಇರಬೇಕು ಎಂಬುದು ನನ್ನ ಎಣಿಕೆಯಾಗಿತ್ತು...ಮತ್ತೆ ಕಿಶೋರ್ ಅವರು ಇಲ್ಲಿಯ ತನಕ ಪಾತ್ರಗಳೂ ಸಹ ಸುಮಾರೆಲ್ಲ ಗಡಸು ಪಾತ್ರಗಳೇ ಆಗಿದ್ದುದ್ದು,ಚಿತ್ರದ ಜಾಹೀರಾತುಗಳಲ್ಲಿದ್ದ ಬಿಂಬಗಳು ಕ್ರೌರ್ಯವನ್ನೇ ಹೇಳುವಂತೇ ಇದ್ದುದ್ದು,ಚಿತ್ರದ ಸಹಶೀರ್ಷಿಕೆಯಲ್ಲೂ ಸೇಡು ಎನ್ನುವ ಪದವಿದ್ದುದ್ದೂ ಇದಕ್ಕೆ ಕಾರಣವಿರಬಹುದು...ಏನೋ ಗೊತ್ತಿಲ್ಲ ನೋಡಲೇ ಬಾರದ ಚಿತ್ರಗಳ ಪಟ್ಟಿಯಲ್ಲಿ ಇದು ಇದ್ದುದಂತೂ ನಿಜ.....

ಮೊನ್ನೆ ಎಲ್ಲೋ ಪತ್ರಿಕೆಯಲ್ಲಿ ಚಿತ್ರದ ನಿರ್ದೇಶಕರ ಬಗ್ಗೆ ಓದಿದೆ...ಸಾಹಿತ್ಯದ ಒಲವಿರುವ,ಈಗಾಗಲೇ ಸಾಕಷ್ಟು ಬರೆದಿರುವ ವ್ಯಕ್ತಿಯ ಸಿನಿಪ್ರಯೋಗ ಎನ್ನುವುದನ್ನು ಅರಿತೆ...ಕನ್ನಡ ಸಾಹಿತ್ಯಕ್ಕೆ ಪ್ರಶಸ್ತಿ ಪಡೆದವರೇಕೆ ಸಿನಿಮಾಕ್ಕೆ ಬಂದರಪ್ಪಾ ಎಂದೆನ್ನುತ್ತಾ ಪತ್ರಿಕೆ ಮುಚ್ಚಿಟ್ಟಿದ್ದೆ...ಚಿತ್ರದ ಬಗ್ಗೆ ಮತ್ತೆ ಆಸಕ್ತಿ ಮೂಡಿದ್ದು  ಹಿರಿಯ ಬ್ಲಾಗಿಗರೊಬ್ಬರು ಸಿನಿಮಾದ ಬಗ್ಗೆ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಾಗ...ಸರಿ ಯಾವಾಗಲಾದರೂ ನೋಡುವಾ ಎಂದುಕೊಂಡವನಿಗೆ ಮತ್ತೆ ನಿನ್ನೆ ಇವತ್ತು ಅದೇ ಚಿತ್ರದ ಬಗೆಗಿನ ಮಾತುಗಳು ಕಾಣ ಸಿಕ್ಕವು...ಹೊಸ ಪ್ರಯೋಗ,ಅದ್ಭುತ ಕತೆ ಎನ್ನುವ ಸಾಲುಗಳೂ ಕಂಡವು...ಇನ್ನೇನು?? ಇವತ್ತು ವಿಜಯದಶಮಿಯ ರಜೆ...ಗೆಳೆಯ ಪ್ರಥ್ವಿಯನ್ನೆಳೆದುಕೊಂಡು ಚಿತ್ರ ಮಂದಿರದೆಡೆಗೆ ಹೊರಟೆ...

ನನಗೋ ಬೆಂಗಳೂರು ಮೊದಲೇ ಹೊಸದು,ಇನ್ನ್ನು ಸ್ವಪ್ನ ಚಿತ್ರ ಮಂದಿರವೆಲ್ಲಿದೆಯೋ ಎಂದುಕೊಂಡವನಿಗೆ,ಗೂಗಲ್ ಮ್ಯಾಪ್ಸ್ ನ ಸಹಾಯಹಸ್ತ ಸಿಕ್ಕಿತು...೪ ಗಂಟೆಯ ದಿಖಾವೆಗೆ ಎಂದು  ನಾವು ಚಿತ್ರಮಂದಿರ ತಲುಪಿದಾಗ ಸುಮಾರು ೩:೫೦..ಅರ್ಜಂಟಿನಲ್ಲಿ ಹೋಗಿ "ಅಣ್ಣಾ ೨ ಬಾಲ್ಕನಿ " ಎಂದೆ,ಟಿಕೀಟು ಕೊಡುವವರು ಹುಸಿನಕ್ಕು ಎರಡು ಚೀಟಿ ಹರಿದುಕೊಟ್ಟರು...ಸರಿ ಬಾಗಿಲು ತೆಗೆಯುವುದು ಯಾವಾಗೆಂದು ಕಾಯುತ್ತಿರುವಾಗಲೇ ಯಾರೋ ಬಂದರು ಎಂದು ಜನ ಸೇರಿದರು..ಯಾರೋ ದೊಡ್ಡವರಿರಬೇಕೆಂದುಕೊಂಡು ನಾನೂ ಒಂದೆರಡು ಬಾರಿ ಎಗರಿ ನೋಡಿದರೂ ಕಂಡಿದ್ದು ಜನರ ಬುರುಡೆ ಮತ್ತು ಕೈ ಮೇಲೆತ್ತಿ ಹಿಡಿದ ಮೊಬೈಲುಗಳಷ್ಟೇ..ಅಷ್ಟರಲ್ಲಿ ಯಾರೋ  "ಹೀರೋಯಿನ್ನು ಬಂದಿದಾರೆ ಸಾರ್" ಎಂದರು..ಇರಲಿ ಬಿಡಿ ಅವರಿಗೆ ಇವತ್ತು ಅರ್ಜಂಟಿನಲ್ಲಿ ಮೇಕಪ್ಪೆಲ್ಲಾ ಮಾಡಿಕೊಳ್ಳಲು ಪುರಸೊತ್ತು ಸಿಕ್ಕಿತ್ತೋ ಇಲ್ಲವೋ ಹೇಗಂದ್ರೂ ಚಿತ್ರದಲ್ಲೇ ಒಪ್ಪವಾಗಿ ತೋರಿಸ್ತಾರೆ ಬಿಡಿ ಎಂದುಕೊಂಡು ಸುಮ್ಮನಾದೆ...ಮುಂದೆ ಒಂದೈದು ನಿಮಿಷ ಕಳೆದ ಮೇಲೆ ಬಾಗಿಲ ಬಳಿಯೇ ಅವರ ಪ್ರತ್ಯಕ್ಷ ದರ್ಶನವೂ ಆಯಿತೆನ್ನಿ...ಜೊತೆಗೆ ನಿರ್ದೇಶಕರದೂ ಸಹ...

ಮುಂದೆ ನನಗೆ ಇವತ್ತು ಎರಡು ಹೊಸ ಅನುಭವವಾಯ್ತು...ಮೊದಲನೇಯದು ಚಿತ್ರ ನೋಡುವ ಮುಂಚೆಯೇ ಚಿತ್ರದ ನಿರ್ದೇಶಕರು ಒಳಬರುವ ಪ್ರೇಕ್ಷಕರನ್ನೆಲ್ಲಾ ಹಸ್ತಲಾಘವ ನೀಡಿ ಸ್ವಾಗತಿಸಿದ್ದು..ಪ್ರಾಯಶಃ ಇನ್ನುಮುಂದೆ ಅಂಥಹ ಭಾಗ್ಯ ಸಿಗಲಾರದೇನೋ ಗೊತ್ತಿಲ್ಲ,ನನಗಂತೂ ಸಖತ್ ಖುಷಿಯಾಯ್ತು..."ಸಾರ್ ಚಿತ್ರ ನೋಡಿ ಸಂಜೆ ಬ್ಲಾಗಿನಲ್ಲಿ ಬರೆಯುತ್ತೇನೆ " ಎಂದಿದ್ದೆ,ಅವರಿದನ್ನು ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಚಿತ್ರದ ಮೊದಲಿನ ಹಸ್ತಲಾಘವ ಚಿತ್ರದ ಬಗ್ಗೆ ಸಾಕಷ್ಟು  ಆಸಕ್ತಿ ಕೆರಳಿಸಿದ್ದಂತೂ ನಿಜ...ಎರಡನೇಯದು ಚಿತ್ರಮಂದಿರದ್ದು..ನಾನು ಇಲ್ಲಿಯ ತನಕ ನೋಡಿದ ಚಿತ್ರ ಮಂದಿರಗಳೆಲ್ಲಾ ದೊಡ್ಡ ದೊಡ್ಡವು..ನಮ್ಮ ಶಿರಸಿಯಲ್ಲಿ ಗಟ್ಟಿ ಇರುವುದು ಎರಡೇ ಆದರೂ ತಕ್ಕ ಮಟ್ಟಿಗೆ ದೊಡ್ಡದಾಗೇ ಇದೆ...ಬಾಲ್ಕನಿ, ಗಾಂಧೀ ಕ್ಲಾಸು ಎಂಬುದೆಲ್ಲ ಇದೆ..ಇಲ್ಲಿ ನೋಡಿದರೆ ಒಂದು ಸಾದಾ ದೊಡ್ಡ ಹಾಲು..ಅದರ ಮುಂದೊಂದು ಚಿಕ್ಕ ಪರದೆ...ಜೊತೆಗೆ ಪಕ್ಕಪಕ್ಕದಲ್ಲೇ ಒತ್ತೊತ್ತಾಗಿ  ಕುಳಿತ ಜನ...ಇದೇನಿದು ಬಾಲ್ಕನಿಯೆಲ್ಲಿ ಎಂದುಕೊಳ್ಳುವಾಗಲೇ ಟಿಕೀಟು ಹರಿಯುವ ಮಾವನ ಹುಸಿನಗುವಿನ ಅರ್ಥ ಗೊತ್ತಾದದ್ದು..ಸರಿ ಕುಳಿತು ಕೊಳ್ಳುವಾ ಎಂದು ಸೀಟು ನಂಬರು ಹಿಡಿದು ಕೂತೆ..ಅದೇಕೋ ಆ ಭಾರಿ ಜನರನ್ನು ನೋಡಿ ಆ ಪರಿಸರ ಆಪ್ತವೆನಿಸಿದು...ಕೂತವನಿಗೆ ಯಾಕೋ ಕಾಯ್ಕಿಣಿಯವರ "ಟೂರಿಂಗ್ ಟಾಕೀಸ್ " ನ ಸಾಲುಗಳು ಮತ್ತೆ ನೆನಪಾದವು..."ಸಿನಿಮಾ ಮತ್ತು ಅಂಥಹ ಕಲೆಗಳು ಪಬ್ಲಿಕ್ ಪ್ರಾಪರ್ಟಿ.ನಾವು ಪಬ್ಲಿಕ ಆಗಿ ಪಬ್ಲಿಕ್ ನ ಅವಿಭಾಜ್ಯ ಅಂಗವಾಗಿ ಅದನ್ನು ಆಸ್ವಾದಿಸಿದಾಗಲೇ ಅದು ನಮ್ಮದಾಗುತ್ತದೆ"...
ಇನ್ನು  ನಮ್ಮಂಥಹ ಪಡ್ಡೆ ಹುಡುಗರು,ನಮಗಿಂತ ಸ್ವಲ್ಪ ದೊಡ್ಡವರು,ಕುಡಿಮೀಸೆಯವರು ಇರುವುದು ಸಹಜವೆನಿಸಿದರೂ ಐವತ್ತು ದಾಟಿದವರು,ನೀಟಾಗಿ ಇನ್ ಶರ್ಟು ಮಾಡಿ ಕೂದಲು ಬಾಚಿ ಚಾಲೀಸಿನ ಕನ್ನಡ ಹಾಕಿ ಬಂದವರು, ಎಲ್ಲಾ  ಕೂದಲು ಬೆಳ್ಳಗಾದರೂ ಡೈ ಹೊಡೆಯದೇ ಇದ್ದವರು,ನನ್ನ ವಯಸ್ಸಿನ ಮಕ್ಕಳಿರಬಹುದಾದ ಅಮ್ಮಂದಿರು ಹೀಗೆ ಮೇಲ್ನೋಟಕ್ಕೆ ಚಿಂತನಾಶೀಲ ವರ್ಗ ಎಂದೆನಿಸಿಕೊಳ್ಳುವವರೂ ಬಂದಿದ್ದು ಆಶ್ಚರ್ಯ ತಂದಿತ್ತು ...

=======================================================================
ಚಿತ್ರದ ಬಗ್ಗೆ ವಿಮರ್ಶೆ ಮಾಡುವಷ್ಟೆಲ್ಲಾ ದೊಡ್ಡವ ನಾನಲ್ಲ,ಅನ್ನಿಸಿದ್ದನ್ನು ಹೇಳುತ್ತಿದ್ದೇನೆ ನೋಡಿ...

ಚಿತ್ರದ ಕಥೆಯೇ ವಿಚಿತ್ರವಾಗಿದೆ..ಕಾಡಿನ ನಡುವೆ ನಡೆಯುವ ಮಾನವ ಸಹಜ ನಿಲುವುಗಳ ನಡುವಿನ ತಿಕ್ಕಾಟ ಎನ್ನಬಹುದೇನೋ....ಇಲ್ಲಿ ಕಿಶೋರ್ ಒಬ್ಬ ಮುಗ್ಧ ಮನಸ್ಸಿನ ಅರಣ್ಯಪಾಲಕ...ಅವನನ್ನು ಬಳಸಿಕೊಳ್ಳುವ ಕೆಲವರು,ಅವನನ್ನು ದಾಳವಾಗಿಸಿಕೊಳ್ಳುವ ಕೆಲ ಸಿದ್ಧಾಂತಗಳು,ಅದನ್ನು ವಿರೋಧಿಸಿ ನಡೆಯುವ ಇನ್ನೊಂದು ಬಗೆಯ ವಿಚಾರ ಧಾರೆ..ಅವುಗಳ ನಡುವಿನ ತಿಕ್ಕಾಟ ,ಭಾರತೀಯ ಸಂಸ್ಕೃತಿ,ಅದರ ಬಗೆ ಬಗೆಯ ಆಯಾಮಗಳು,ಪ್ರೀತಿ, ಪ್ರೇಮ ,ಕಾಮ ಹಾಗೂ  ಕರ್ತವ್ಯ ಪರಿಪಾಲನೆಗಳ ಭಾವಪಾಕ, ಹೀಗೆ ವಿವಿಧ ಮಜಲುಗಳಲ್ಲಿ ಕಥೆ ಸಾಗಿರುವಂತೆ ಅನಿಸಿತು...ಕಥೆಗಿಂತ ನನಗೆ ಇಷ್ಟವಾದದ್ದು ಪ್ರತಿಯೊಂದು ಪಾತ್ರಗಳ ಹಿಂದಿರುವ ಗಟ್ಟಿಯಾದ ಬೇರು,ಅವುಗಳಿದೇ ಆದ ವಿಭಿನ್ನ ದೃಷ್ಟಿಕೋನ....

ಇನ್ನು ಚಿತ್ರದ ಶೀರ್ಷಿಕೆ ಗೀತೆಗೆ ಜಾನಪದ ಶೈಲಿಯ ಸುಂದರ ಬೆನ್ನೆಲುಬಿದೆ...ಅದನ್ನು ಬಿಟ್ಟರೆ "ಜಟ್ಟ" ಎಂದು ಬರುವ ಒಂದು ಗೀತೆ ಸ್ವಲ್ಪ ನೆನಪಿಗೆ ಬರುತ್ತಿದೆ ಅಷ್ಟೇ...ನನ್ನ ಮಟ್ಟಿಗೆ ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡುಗಳೇನು ಇಲ್ಲ .. ಛಾಯಾಗ್ರಹಣದ ಬಗ್ಗೆ ನನಗೆ ಜಾಸ್ತಿ ಗೊತ್ತಿಲ್ಲ...ಆಗಾಗ ವಾವ್ ವಾವ್ ಎನ್ನುವಂತಹದ್ದು ಸುಮಾರಿದೆ ಎಂದಷ್ಟೇ ಹೇಳಬಲ್ಲೆ...ಚಿತ್ರ ಮುಗಿಯುವುದಕ್ಕಿಂತ ಸ್ವಲ್ಪ ಹಿಂದಿನ ಹೊಡೆದಾಟದ ದೃಶ್ಯವೊಂದರಲ್ಲಿ ಜೇಡರ ಬಲೆಯಿಂದ ಶುರುಮಾಡಿ ಕಡೆಗೆ ಅದನ್ನು ಹುಲ್ಲು-ಕಿಶೋರ ನಡುವೆ ಫೋಕಸ್ ಮಾಡಿದ್ದು ತುಂಬಾ ಇಷ್ಟವಾಯ್ತು...

ಇನ್ನು ಚಿತ್ರದ ಇನ್ನೊಂದು ವಿಶೇಷತೆ ಎಂದರೆ ದೇಸೀತನ..ಅದು ಚಿತ್ರ ನಡೆಯುವ ಪರಿಸರ,ಉಡುಗೆ ತೊಡುಗೆ ಅಥವಾ ಸಂಭಾಷಣೆಯಲ್ಲಿರಬಹುದು...ಪರಿಸರ ಸುಂದರ ಮಲೆನಾಡು,ಹಸಿರು ಕಾಡುಗಳಲ್ಲಿದೆ...ಕರಾವಳಿ,ಹಿನ್ನೀರುಗಳೂ ನಿಮ್ಮೆದುರು ಬಂದು ಹೋಗುತ್ತವೆ...ಇನ್ನು ಚಿತ್ರದೆಡೆಗೆ ನಿಮ್ಮನ್ನು ಎಳೆದುಕೊಳ್ಳುವ ಇನ್ನೊಂದು ಅಂಶವೆಂದರೆ ಸಂಭಾಷಣೆ..ಕುಂದಾಪುರದ ಕನ್ನಡದ ಸೊಬಗನ್ನು ಕಾಣಬಹುದು...ಆ ಅಪ್ಪಟ ದೇಸೀ ಶಬ್ಧಗಳು ಕೇಳುವುದಕ್ಕೇ ಛಂದ..ಬೈದರೂ ಸಹ ಅಸಹ್ಯವೆನಿಸದಂತೆ ತೋರಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ ಅಂತಲೇ ಹೇಳಬೇಕು...

ಇನ್ನು ಸಂಭಾಷಣೆ ಅಂದ್ನಲಾ ಅಲ್ಲಿ ಯಾಕೋ ಮಧ್ಯ ಮಧ್ಯ ಬೆಂಗಳೂರು ಸೀಮೆಯ ಗ್ರಾಮ್ಯಪದಗಳೂ ನುಸುಳಿಬಿಟ್ಟಿವೆ...ಅದ್ಯಾಕೋ ಗೊತ್ತಿಲ್ಲ...ಇರತ್ತೆ ಬರತ್ತೆ ಪರ್ವಾಗಿಲ್ಲ ಆಧುನಿಕತೆಯ ಪ್ರಭಾವ ಎನ್ನಬಹುದು ಆದ್ರೆ  "ಹೋಯ್ತದೆ" ಎನ್ನುವ ಥರದ ಪದಗಳನ್ನು ಆ ಕಡೆ ಬಳಸುವುದನ್ನು ನಾನಂತೂ ಕಾಣೆ..ನನ್ನ ಮಟ್ಟಿಗೆ ಅದು   ಹಾಲಿಗೆ ಹುಳಿ ಹಿಂಡಿದಂತೆ ಅನಿಸಿತು..ಅಷ್ಟು ಛಂದದ ಮಾತಿನ ಸರಪಣಿಯ ನಡುವೆ ಬೆಂಗಳೂರು ಕನ್ನಡ  ಅದು ಹೆಂಗೆ ಬಂತೋ ನಂಗಂತೂ ಅರ್ಥವಾಗುತ್ತಿಲ್ಲ...

ಇನ್ನು ಎರಡು ಕಡೆ ಚಿತ್ರ ಸ್ವಲ್ಪ ಬೋರು ಹೊಡೆದಂತೆ ಅನಿಸಿತು..ಅದೂ ಸಹ ನಾಯಕನಟಿಯ ಅಭಿನಯ ಹಾಗೂ ಹಿನ್ನೆಲೆಯ ಧ್ವನಿಯ ನಡುವಿನ ಸಮನ್ವಯತೆಯ ಕೊರತೆಯಿಂದೇನೋ...ಹೆಣ್ಣಿನ ಇಂದಿನ ಪರಿಸ್ಥಿತಿಯ ಕುರಿತು ವಿಶ್ಲೇಷಿಸುವಾಗ ನಾಯಕ ನಟಿಯ ಅಭಿನಯ ಸಪ್ಪೆಯೆನಿಸಿತು,ಜೊತೆಗೆ ತುಟಿಯ ಚಲನೆಗೂ  ಹಿನ್ನೆಲೆಯ ಮಾತುಗಳಿಗೂ ಯಾಕೋ ಹೊಂದಾಣಿಕೆ ಆಗುತ್ತಿಲ್ಲ ಅನಿಸಿತು.. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದಿತ್ತೇನೋ...ಗೊತ್ತಿಲ್ಲ...ಹಾಗಂತ  ಉಳಿದೆಡೆಗೆ ಅಭಿನಯದ ಬಗ್ಗೆ ಎರಡು ಮಾತಿಲ್ಲ// "yu hav met with a wrong person " ಎನ್ನುವಾಗ ಕಣ್ಣುಗುಡ್ಡೆಯ ಚಲನೆ ಖಂಡಿತವಾಗಿಯೂ ಅದ್ಭುತ ಎಂದೆನಿಸಿಬಿಡುತ್ತದೆ..ಭಾವಾವೇಶದ ಸಂದರ್ಭಗಳಲ್ಲಿ ಚಂದದ ಅಭಿನಯವಿದೆ...ಕಿಶೋರ್ ಅವರ ನಡಿಗೆಯ ಶೈಲಿಯೇ ವಿಶಿಷ್ಟವಾಗಿದೆ,,,

ಇವಿಷ್ಟು ನನಗೆ ಸಧ್ಯಕ್ಕೆ ತೋಚುತ್ತಿರುವಂತದ್ದು..ನನಗಂತೂ ಈ ಚಿತ್ರ ಒಂಥರ ಭೈರಪ್ಪನವರ ಕಾದಂಬರಿ ಓದಿದಾಗಿನ ನಂತರದ ಅನುಭವ ಕೊಡುತ್ತಿದೆ..ಪ್ರಾಯಶಃ ಹಲವಾರು ಹಾದಿಯಲ್ಲಿ ಸಾಗುವ ಕಥೆಯ ಅಂತ್ಯವನ್ನು ಒಂದೇ ಸಿದ್ಧಾಂತದಡಿಯಲ್ಲಿ ಹೇರದೇ ವೈಯಕ್ತಿಕ ನೆಲೆಗಟ್ಟಿನಲ್ಲಿ ಚಿಂತಿಸುವಂತೆ ಪ್ರೇರೇಪಿಸಿದ್ದಕ್ಕೋ ಏನೋ ಗೊತ್ತಿಲ್ಲ...
ಒಟ್ಟಿನಲ್ಲಿ ಹೊಸ ಅನುಭವಗಳನ್ನು ಪಡೆದ ಖುಷಿ ನನ್ನದು..ಒಳ್ಳೆಯ ಚಿತ್ರ ನೋಡಿದ ಖುಷಿ ನನ್ನದು..ಅದನ್ನು ಹಂಚಿಕೊಳ್ಳಿತ್ತಿದ್ದೇನೆ ಅಷ್ಟೇ :)..

ಮುಂದೆ ಹೋಗುವ  ಮುನ್ನ :
 ಹಮ್...ಈ ಚಿತ್ರ ಖಂಡಿತ ತೆರೆದ ಬಾಗಿಲಿನದಲ್ಲ..ಸುಮ್ಮನೆ ಹೋಗಿ ಏನೋ ಕುಣಿವಾಗ ಕುಣಿದು ನಗಿಸುವಾಗ  ನಕ್ಕುಬರುವುದಕ್ಕೆ ..ಇಷ್ಟಪಟ್ಟು ಪುರಸೊತ್ತು ಮಾಡಿಕೊಂಡು  ಹೋಗಿ,ಪಾತ್ರಗಳಲ್ಲಿ ಒಂದಾಗಿ ಒಂದಿಷ್ಟು ಯೋಚಿಸಿ...ಆ ತರ್ಕಗಳ ಸರಣಿಯನ್ನು ಆನಂದಿಸಿ..ಸತ್ವಪೂರ್ಣ ಕಥನವನ್ನು ಅಸ್ವಾದಿಸಿ...ಹೊಸತನದ ಚಿತ್ರವೊಂದನ್ನು ಬೆಂಬಲಿಸಿ..

ನಮಸ್ತೆ :) :)

Wednesday, September 18, 2013

ಸಂಜೆಗತ್ತಲ ಪಯಣವೆತ್ತಲೊ….


ನಮಸ್ಕಾರ ಎಲ್ರಿಗೂ..

ಜೀವನದಲ್ಲಿ ಬದಲಾವಣೆಗಳು ಸಹಜ...ಕೆಲವೊಮ್ಮೆ ಅನಿವಾರ್ಯ ಕೂಡಾ..
ಆದರೂ ನೆಲೆನಿಲ್ಲುವ ಮತ್ತೆ ಕಾಲುಕೀಳುವ ಪ್ರಕ್ರಿಯೆ ಸಾಗುತ್ತಲೇ ಇರುತ್ತದೆ...
ಈ  ಸ್ಥಿತ್ಯಂತರದ ಸಮಯದಲ್ಲಿ  ಒಂದಿಷ್ಟು  ಗೊಂದಲಗಳು ನಮ್ಮನ್ನು ಹೊಕ್ಕಿರುತ್ತವೆ..
ಅದೇ ಭಾವ ಹೊತ್ತು ನಿಮ್ಮ ಮುಂದೆ ಈ ಕವನ...
ದಯವಿಟ್ಟು ಮರೆಯದೇ ಅನಿಸಿಕೆ ನಮೂದಿಸಿ,ಪ್ರೋತ್ಸಾಹಿಸಿ...ನಮಸ್ತೆ




ಸಂಜೆಗತ್ತಲ ಪಯಣವೆತ್ತಲೊ ಹಾದಿಮಸುಕಿನ ಚಾರಣ,
ಪಂಜಿಮೆತ್ತಿಹ ಧೂಳಸುತ್ತಲು ಕನಸಿನುಸುಕಿನ ತೋರಣ.


ಜೀಕುಗಾಲಿನ ಪ್ರೇಮಲಾಳಕೆ ಸೂಜಿಗಲ್ಲಿನ ಹಂಬಲ,
ಬದಲುಬಯಸುವ ಅಂತರಾಳಕೆ ಬೀಸುಗಾಳಿಯ ಬೆಂಬಲ.
ತಿರುಗುಭೂಮಿಯ ಬುಗುರಿಯಾನಕೆ ಕಾಶಿದಾರದ ಸರಗುಣಿ,
ಏರಿಇಳಿಯುವ ನೂರುಬಯಕೆಯು ಒಡೆದ ಮುಚ್ಚಲ ತಿರುಗುಣಿ.


ಸೂಡಿಕಿಡಿಯಾ ಹಾರುಗುಣಿತಕೆ ದುಗುಡವೆದೆಯಾ ಪಣತದಿ,
ಬಾಳೆದಡಿಯ ಬಾವಿಯಾಟವು ಗುರಿಯಗರಿಗಳ ಹೆಣೆತದಿ.
ನಡೆವಹಾದಿಯ ಮುಳ್ಳುಕಲ್ಲಿಗೆ ಕೆಂಪುನೆತ್ತರ ತಿಲಕವು.
ಸೋತಕಾಲಿಗೆ ಸುಳ್ಳುಪಾನಕ ಕಳೆದಆಸೆಗೆ ಫಲಕವು.


ಬುತ್ತಿಬಂಡಿ ಬಾಳಹಸಿವು ಎಂದುಮುಗಿಯದ ಗಣತಿಯು,
ಕತ್ತಪಿಂಡಿ ಸೋಲಶಿಂಬೆ ನಡುವೆ ಜಯದಾ ಪ್ರಣತಿಯು.
ಪಾದವಿಟ್ಟೆಡೆ ಜೀವಪಸೆದು ಇಟ್ಟಹೆಜ್ಜೆಯ ನೆಗ್ಗುತಾ,
ನಿತ್ತನೆಲದಾ ಲೆಕ್ಕಮುಗಿದೊಡೆ ಮತ್ತೆ ನೊಗವಾ ಎತ್ತುತಾ.


ಸಂಜೆಗತ್ತಲ ಪಯಣವೆತ್ತಲೊ ಹಾದಿಮಸುಕಿನ ಚಾರಣ ………
-ಚಿನ್ಮಯ ಭಟ್ಟ
ಶಬ್ದಾರ್ಥ :
( ಪಂಜಿ=ಪಂಚೆ,ಸರಗುಣಿ=ಸರಗುಣಿಕೆ,ಒಂದು ಬಗೆಯ ಗಂಟು,
ಪಣತ=ಕಣತ,ಧವಸ ಧಾನ್ಯ ಸಂಗ್ರಹಿಸುವ ಜಾಗ,
ಬಾಳೆದಡಿ=ಬಾಳೆಯ ಎಲೆಯ ನಡುವಿನ ದಂಟು,ಬಾಳೆಯ ಕೋಲು
ಸುಳ್ಳುಪಾನಕ=ಒಂದು ಬಗೆಯ ಬೆಲ್ಲದ ಪಾನಕ,
ಕತ್ತಪಿಂಡಿ=ಕತ್ತದ ದಾರದ ದೊಡ್ಡಮುದ್ದೆ
ಶಿಂಬೆ=ಗಂಟುಗಂಟಾಗಿರುವುದು
ಪ್ರಣತಿ=ಹಣತೆ,ಪಸೆ= ಸವೆಯುವುದು,ನೆಗ್ಗು=ಎತ್ತು )
[ತುಂಬಾ ದಿನದಲ್ಲಿಂದ ಏನೂ ಬ್ಲಾಗಿಸಲಾಗಲಿಲ್ಲ...ಕ್ಷಮೆ ಇರಲಿ..
ಇದೀಗ ಒಂದು ಕಡೆ ನೆಲೆ ನಿಂತೆ ಅಂದು ಕೊಂಡಿದ್ದೇನೆ....ಬೆಂಗಳೂರಿನೆಡೆಗೆ ಪ್ರಯಾಣ..ಮುಂದೇನೋ ಗೊತ್ತಿಲ್ಲ....

ನಾ ಅಂದುಕೊಂಡಂತೆ ಭಾವ ಹೀಗಿದೆ ,ಸ್ವಲ್ಪ ತಲೆತುರಿಸುತ್ತೆ ಎನ್ನುವ ಸಾಲುಗಳದ್ದನ್ನಷ್ಟೇ ಕೊಟ್ಟಿದೀನಿ,ಉಳ್ದಿದ್ದು ಓದ್ತೀರಾ ಅಲ್ವಾ??...

"ಪಂಜಿಮೆತ್ತಿಹ ಧೂಳಸುತ್ತಲು ಕನಸಿನುಸುಕಿನ ತೋರಣ."

ಇಲ್ಲಿ ಪಂಜಿಮೆತ್ತಿಹ ಧೂಳು ಅಂದರೆ ಶ್ರಮದ ಪ್ರತೀಕ..ಉಸುಕು ಕನಸನ್ನು ಬಿಂಬಿಸುವ ಸಲುವಾಗಿ(ಮರಳಿನ ಅರಮನೆ ಹೇಗೆ ಪೂರ್ತಿಯಾಗದೋ ಅದೇ ಥರಾ ಕನಸುಗಳೂ ಬಿದ್ದು ಹುಟ್ಟುತ್ತಿರುತ್ತವೆ ಅಂತಾ)..ಮನುಷ್ಯ ಶ್ರಮವಹಿಸಿ ದುಡಿಯುವುದು ಅವನ ಕನಸನ್ನು ಈಡೇರಿಸುವ ಆಸೆಹೊತ್ತು ಎನ್ನುವ ಭಾವ ಇಲ್ಲಿ..

"ತಿರುಗುಭೂಮಿಯ ಬುಗುರಿಯಾನಕೆ ಕಾಶಿದಾರದ ಸರಗುಣಿ,
ಏರಿಇಳಿಯುವ ನೂರುಬಯಕೆಯು ಒಡೆದ ಮುಚ್ಚಲ ತಿರುಗುಣಿ."

ಬದುಕಿನಲ್ಲಿ ಇಚ್ಛೆಬಂದಂತೆ ನಮ್ಮ ಪಾಡಿಗೆ ನಾವು ಜಗತ್ತನ್ನು ತಿರುಗುವ ಆಸೆಗಳಿಗೆ ಹೆತ್ತವರಿಂದ ಅಥವಾ ಹುಟ್ಟಿನೊಂದಿಗೆ ಬರುವ ಕೆಲ ಜವಾಬ್ದಾರಿಗಳಿಂದ ಕಡಿವಾಣ ಬೀಳುತ್ತದೆ ..ಜೊತೆಗೆ ಈ ಥರದ ಆಸೆಗಳು ದಿನದಿನಕ್ಕೂ ಬದಲಾಗುತ್ತಾ ಹೋಗುತ್ತದೆ,ಒಂದಾದ ಮೇಲೊಂದರಂತೆ..ಅದಕ್ಕೆ ಕೊನೆಯೆಂಬುದೇ ಇಲ್ಲ...ಮುಚ್ಚಲು ಒಡೆದ ತಿರುಗುಣಿಯ ಪಾತ್ರೆಯನ್ನು ಕೂರಿಸಲಾದೀತೆ??ಅದನ್ನು ತಿರುಗಿಸಿತ್ತಾ ಇರಬೇಕು ಅಷ್ಟೇ ಅಲ್ಲವೇ ??ಆ ಭಾವ ಹೊತ್ತು ಬರೆದ ಸಾಲುಗಳಿವು...

"ಸೂಡಿಕಿಡಿಯಾ ಹಾರುಗುಣಿತಕೆ ದುಗುಡವೆದೆಯಾ ಪಣತದಿ,"
ಉರಿಯುವು ಸೂಡಿ ಅಂದರೆ ಈಗಾಗಲೇ ನಮ್ಮ ಹಾದಿಯಲ್ಲಿ ಮುಂದೆ ಸಾಗಿರುವವರನ್ನು ನೋಡಿ ನಮ್ಮಲ್ಲಿ ಭಯ ಹುಟ್ಟುವುದು ಸಹಜ..ನಾವು ಆ ಮಟ್ಟಕ್ಕೆ ಏರಬಲ್ಲೆವೆ ಎನ್ನುವ ಆತಂಕ ನಮ್ಮಲ್ಲಿ ಮನೆಮಾಡಿರುತ್ತದೆ...

"ಬಾಳೆದಡಿಯ ಬಾವಿಯಾಟವು ಗುರಿಯಗರಿಗಳ ಹೆಣೆತದಿ."

 ಬಾಳೆದಡಿಯಲ್ಲಿ ಅಂದರೆ ಬಾಳೆ ಎಲೆಯ ಮಧ್ಯದ ಗಟ್ಟಿ ಕೋಲಿರತ್ತಲ್ಲಾ ಅದ್ರಲ್ಲಿ ಬಾವಿಯನ್ನು ಕಟ್ಟುತ್ತಿದ್ದೆವು ಬಾಲ್ಯದಲ್ಲಿ..ಅದೇಕೋ ಗುರಿಯು ಸ್ಪಷ್ಟವಾದರೆ ಅರ್ಧ ಕೆಲಸ ಮುಗಿದಂತೆ,ಮುಂದಿನದು ಮಕ್ಕಳಾಟ ಎಂಬುದನ್ನು ಹೇಳುವಾಗ ಈ ಆಟದ ನೆನಪಾಯ್ತು...ಮಕ್ಕಳಾಟದ ಬದಲು ಬಾಳೆದಡಿಯಾ ಬಾವಿಯಾಟ ಅಷ್ಟೇ...

"ನಡೆವಹಾದಿಯ ಮುಳ್ಳುಕಲ್ಲಿಗೆ ಕೆಂಪುನೆತ್ತರ ತಿಲಕವು."

ಕೆಂಪುನೆತ್ತರು ಇಲ್ಲಿ ತ್ಯಾಗದ ಪ್ರತೀಕ...ಸಾಧನೆಯ ಹಾದಿಯಲ್ಲಿ ಬರುವ ತೊಂದರೆಗಳನ್ನು ನಿವಾರಿಸಲು ಕೆಲ ತ್ಯಾಗವನ್ನು ಮಾಡಬೇಕು ಅಥವಾ ಅದಕ್ಕೆ ಸಿದ್ಧರಾಗಿರಬೇಕು ಎನ್ನುವುದನ್ನು ಹೇಳ ಹೊರಟಿದ್ದೇನೆ...

"ಸೋತಕಾಲಿಗೆ ಸುಳ್ಳುಪಾನಕ ಕಳೆದಆಸೆಗೆ ಫಲಕವು."
ಸೋತಕಾಲಿಗೆ ಸುಳ್ಳುಪಾನಕ ಅಂದರೆ ಸ್ಪೂರ್ತಿ ತುಂಬುವಿಕೆಯ ಅಗತ್ಯತೆಯನ್ನು ಹೇಳಲು ಬಳಸಿದ್ದು...ಇನ್ನು ನಮ್ಮೂರಿನ ಕಡೆ ದನಕರುಗಳು ಕಳೆದು ಹೋದಾಗ ಹಲಗೆಯ ಮೇಲೆ ಮಸಿಯಲ್ಲಿ ಏನೋ ಬರೆದು ಅವುಗಳ ದಿಕ್ಕನ್ನು ಹೇಳುವ ವಿದ್ಯೆಯಿದೆ..ಅದನ್ನು "ಹಲಗೆ ಬರೆಯದು" ಎಂದು ಬಳಸಿದ್ದನ್ನು ಕೇಳಿದ್ದೆ..ಹಾಗಾಗೆ ಫಲಕವು ಎಂಬುದನ್ನು ಬಳಸಿದೆ..ಇಲ್ಲಿ ಸಾಧನೆಯ ಹಾದಿಯಲ್ಲಿ ದಿಕ್ಕುತಪ್ಪಿದಾಗ ದಾರಿ ತೋರಿಸಿ ಎಂಬುದಷ್ಟೇ ತಾತ್ಪರ್ಯ..ಒಟ್ಟಿನಲ್ಲು ಮಾರ್ಗದರ್ಶನ ಹಾಗೂ ಸ್ಪೂರ್ತಿಯನ್ನು ಕುರಿತು ಹೇಳುವ ಸಾಲುಗಳಿವು..

"ಕತ್ತಪಿಂಡಿ ಸೋಲಶಿಂಬೆ ನಡುವೆ ಜಯದಾ ಪ್ರಣತಿಯು.’

ಕತ್ತದ ಪಿಂಡಿ ಎಂದರೆ ನಾರಿನ ದಾರದ ದೊಡ್ಡ ಮುದ್ದೆ..ಛಂದವಾಗಿ ಮಡಿಸಿಕೊಂಡು ಬಂದ ಅದನ್ನಾ,ಒಂದು ಮಾರು ಹುರಿಗಾಗಿ ಒಮ್ಮೆ ಹೇಗೇಗೋ ಎಳೆದು ಗಂಟು ಗಂಟು ಮಾಡಿಬಿಟ್ಟಿದ್ದೆ...ಬಿಡಿಸಲೇ ಸುಸ್ತಾಯ್ತು...ಇದನ್ನು ಬಳಸಿದ್ದು.. ಸಮಸ್ಯೆಗಳ ಸುಳಿಯ ನಡುವೆಯೇ ಜಯವಿರುತ್ತದೆ ಎಂಬುದನ್ನು ಹೇಳಲು...

ಧನ್ಯವಾದ ಬರ್ತಾ ಇರಿ...
ನಮಸ್ತೆ :)

Thursday, May 23, 2013

ಗುಡುಗುಮ್ಮ ಬಂದೆನ್ನ…

ನಮಸ್ಕಾರ ಎಲ್ರಿಗೂ...
ಸುಮಾರ್ ದಿನಾ ಅಯ್ತಲ್ವಾ ಏನೂ ಬರೀದೆ???
ಮೂರನೇ ಇಂಟರ್ನಲ್ಸು ಮುಗ್ದು ನಾಲ್ಕೈದು ದಿನವಾದ್ರೂ ಏನು ಬರ್ದಿಲ್ಲಾ ಅಂದ್ರೆ ಹೆಂಗೆ ???
ಅದ್ನಾ ಒಂದೆರಡು ನಲುಮೆಯ ಗೆಳೆಯ ಗೆಳತಿಯರು ಕೇಳಿದ್ದೂ ಆಗಿದೆ ಬಿಡಿ...ಅದು ನನ್ನ ಪುಣ್ಯ ಅಂದ್ಕೋತೀನಿ :)..

ಇದು ಇನ್ನೊಂದು ಪ್ರಯತ್ನ....
ನೋಡಿ...ಬರೆದದ್ದು ನಿಮ್ಮ ಮುಂದಿದೆ...ನನ್ನ ಲೆಕ್ಕದಲ್ಲಿ ಬರೆದದ್ದು ಮುಗಿಯಿತು ಅಂದುಕೊಂಡಿದ್ದೇನೆ...ತಪ್ಪ್ಪು -ಒಪ್ಪು ತಿಳಿಸಿ ಇದನ್ನು  ತಿದ್ದುವುದು,ಇಷ್ಟವಾದರೆ ಮೆಚ್ಚಿ ಕಮೆಂಟಿಸುವುದು,ನಿಮ್ಮ ಅನಿಸಿಕೆಯನ್ನು ಬರೆದು ಪ್ರೋತ್ಸಾಹಿಸುವುದು ನಿಮ್ಮ ಕೈಲಿದೆ..ಮಾಡ್ತೀರಾ ಅಲ್ವಾ??

ಎಂದಿನಂತೆ ಅದರ ಕೆಳಗೆ ಕೆಲ ಶಬ್ದಾರ್ಥ..ಅದರ ಕೆಳಗೆ ನನ್ನ ಕಲ್ಪನೆಗಳ ಸಾರಾಂಶ...ಪ್ರಾಯಶಃ ಅದು ನನ್ನ ಕಲ್ಪನೆಗಳನ್ನು ನಿಮ್ಮ ಮೇಲೆ ಹೇರಿದಂತಾಗುತ್ತದೆ ಅನಿಸುತ್ತದೆ ..ಇರಲಿ..ಎಲ್ಲರಿಗೂ ಓದಿ ಅರ್ಥ ತಿಳಿದುಕೊಳ್ಳಲು ಸಹಾಯವಾಗಲಿ ಎಂಬುದೊಂದೇ ನನ್ನ ಆಶಯ...ಹಾಗಾಗಿ ಮೇಲೆ ಅರ್ಥವಾಗದಿದ್ದರೆ ಕೆಳಗೆ ಕಣ್ಣಾಡಿಸಿ..ನಿಮ್ಮ ಅನಿಸಿಕೆಯನ್ನೂ,ನಾ ಗೀಚಿದ್ದನ್ನೂ ಒಮ್ಮೆ ಹೋಲಿಸಿ,ಕಮೆಂಟಿಸಿ...
ಮರೆಯದೇ ಅನಿಸಿಕೆ ತಿಳಿಸಿ ಪ್ರೋತ್ಸಾಹಿಸಿ...





ಗುಡುಗುಮ್ಮ ಬಂದೆನ್ನ ಭೂಗಡಲ ನಡುಗಿಸಿರೆ
ಉಡುಗಿತು ಎನ್ನೆದೆಯ ಉಸಿರ ನಡಿಗೆ,
ಅಡಗಿಹೆನು ಹೆದರಿಕೆಯ ಕರಿ ಗೂಡಿನೊಳಗೆ…

ಕರಿಮೋಡದಾ ಝಳಕೆ ಕನಸುಗಳು ಸುಡುತಲಿರೆ
ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ
ಬರಸಿಡಿಲ ಘೀಳಿಗೆ ಮಾನಸವು ಮುಡುಗುತಿರೆ,
ಕುಡಿಕೆ ಸದ್ದಿನ ಕಡಗೋಲಿಗಿಂದು ಖಾಲಿಗಡಿಗೆ

ದರಕೊಡೆವ ಗಾಳಿಯು ಮರಿಹೂವ ಬರಗುತಿರೆ
ಕಡಗಲದಳ ಮರೆಯಿತದುವೆ ಬಿದಿರ ಬಡಿಗೆ
ಮರಕೆಡುವೊ ಮಳೆಗೆ ಬರಿಗಾಲು ಜಾರುತಿರೆ
ಕಡಿಕೆಮಣೆಯಿನ್ನು ಹಳೆಮನೆಯ ಮಾಡಿನಡಿಗೆ

ಕೊರಗುಡುವ ಮಳೆಜಿರಲೆ ಮರವನು ಹೀರುತಿರೆ
ಅಡಿಕೆ ಶಿದ್ದಕ್ಕಿಯಿಲ್ಲ ಕೊಡಲು ಬೇಡುಪಡಿಗೆ
ಸುರಿಕೊಡೆಯ ಬೀಳಲಾ ಜವನಿಕೆಯು ಕರಗುತಿರೆ
ಹಿಡಿಕೆ ಇದ್ದಿಲ ಬಲವು ಸುಡುವ ಹಾದಿಕಡೆಗೆ


ಗುಡುಗುಮ್ಮ ಬಂದೆನ್ನ ಭೂಗಡಲ ನಡುಗಿಸಿರೆ…

-ಚಿನ್ಮಯ ಭಟ್ಟ.

ಇನ್ನು  ನಾ ತಿಳಿದಂತೆ+ಬಳಸಿದಂತೆ ಶಬ್ಧಾರ್ಥ ..ತಪ್ಪಿದ್ದರೆ ದಯವಿಟ್ಟು ತಿಳಿಸಿ…ಕಲಿಯಲು ಸಹಕರಿಸಿ..
( ಶಬ್ದಾರ್ಥ :
ಮಾನಸ-ಹಿಮಾಲಯದ ಒಂದು ಸರೋವರದ ಹೆಸರೂ ಇದೆ..ನಾ ಬಳಸಿದ್ದು ಮನಸ್ಸು ಎಂಬರ್ಥದಲ್ಲಿ..
ಕುಡಿಕೆ-ನಮ್ಮ ಕಡೆ  ಒಂದು ಬಗೆಯ ಪಟಾಕಿಗೆ ಈ ರೀತಿಯ ಹೆಸರಿದೆ ಆ ಅರ್ಥದಲ್ಲಿ ಬಳಸಿರುವುದು.ಅದಕ್ಕೆ ಹೂವಿನ ಕುಂಡ                  flower pot ಅಂತಾನೂ ಕರಿತಾರಂತೆ ...
ಕಡಗೋಲು-ಮಜ್ಜಿಗೆ ಕಡೆಯಲು ಬಳಸುವ ಕೋಲು,ದರಕು-ಒಣಗಿದ ಎಲೆ,ಮರಿಹೂವು-ಮೊಗ್ಗು ಎನ್ನುವ ಅರ್ಥದಲ್ಲಿ,
ಕಡಗಲದಳ-ಕಡಗಲ ಹೂವಿನ ದಳ,ನಮ್ಮನೆಯಲ್ಲಿ ಈ  ಹೂವು ಸುಮಾರು ಒಂದೂವರೆ ಅಡಿ ಎತ್ತರದ ಮರದಲ್ಲಿ ಬಿಡುತ್ತಿತ್ತು.ಸ್ವಲ್ಪ ಗಟ್ಟಿ ಅದರ ದಳಗಳು.
ಕಡಿಕೆ ಮಣೆ-ಕೊನೆಗೌಡರು ಮರದಲ್ಲಿ ಕುಳಿತುಕೊಳ್ಳಲು ಮಾಡುಕೊಳ್ಳುವ ಒಂದು ಬಗೆ ಮಣೆ.
ಶಿದ್ದಕ್ಕಿ-ಶಿದ್ದೆಯಷ್ಟು ಅಕ್ಕಿ,
ಬೇಡುಪಡಿ-ಬೇಡುವವರಿಗೆ ಕೊಡುವ ಭಿಕ್ಷೆ,ಪಡಿಯನ್ನು ಅಕ್ಕಿ ಎನ್ನುವ ಅರ್ಥದಲ್ಲೂ ಬಳಸುತ್ತಾರೆ.
ಬೀಳಲು-ಆಲದ ಮರದ ಇಳಿಬೀಳುವ ಬೇರುಗಳು ಎನ್ನುವ ಅರ್ಥದಲ್ಲಿ,
ಜವನಿಕೆ-ಪರದೆ,ಹೊದಿಕೆ ಎನ್ನುವ ಅರ್ಥದಲ್ಲಿ,  )
---------------------------------------------------------------------------------------------
ಇದು ಹಿಂಗೆ ನನ್ ಲೆಕ್ಕದಲ್ಲಿ....

"ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ"
ಹುಡುಗು ಬುದ್ಧಿಯವರು ಅಂದ್ರೆ ಯುವಜನರು,ನಾವು...ಹೊಸದನ್ನೇನೋ ಮನಸ್ಸುಳ್ಳವರು... ಗುಡಿಸಲು ಎನ್ನುವುದು ಅವರ ಬದುಕಿನ ಸರಳತೆ ತೋರಿಸಲು..ಮೌನದಡುಗೆ ಎಂದರೆ ಕನಸುಗಳೇ ನಮಗೆ  ಬಲ..ಅದೇ ಮನಸ್ಸಿಗೆ ಊಟ... ಅವೇ ಇಲ್ಲದಿದ್ದರೆ ನಮಗೆ   ಚೈತನ್ಯವಿಲ್ಲ ಎನ್ನುವ ಅರ್ಥದಲ್ಲಿ...

"ಕುಡಿಕೆ ಸದ್ದಿನ ಕಡಗೋಲಿಗಿಂದು ಖಾಲಿಗಡಿಗೆ"
ಕುಡಿಕೆ ಎನ್ನುವುದು ಒಂದು ಬಗೆಯ ಪಟಾಕಿ.. ಅದು ಸುರ್ರ್ ಎನ್ನುತ್ತಾ ಕತ್ತುತ್ತದೆ..ಆ ಶಬ್ಧ ಮಜ್ಜಿಗೆ ಕಡೆಯುವ ಶಬ್ಧದ ಥರ ಇರುತ್ತದೆ..ಅಂಥಹ ಮಜ್ಜಿಗೆ ಕಡೆಯುವ ಕಡಗೋಲಿಗೆ ಇಂದು ಕಡೆಯಲೂ ಏನೂ ಸಿಕ್ಕಿಲ್ಲ...ಅಂದರೆ ನಮ್ಮಲ್ಲಿ ಚಿಂತನ ಮಂಥನ ಕಡಿಮೆಯಾಗುತ್ತಿದೆ...ಯೋಚಿಸುವ ಶಕ್ತಿ ಖಾಲಿ ಆಗಿದೆ ಎನ್ನುವ ಅರ್ಥದಲ್ಲಿ...

"ಕಡಗಲದಳ ಮರೆಯಿತದುವೆ ಬಿದಿರ ಬಡಿಗೆ"
ಕಡಗಲ ಹೂವು ಆಗಲೇ ಹೇಳಿದಂತೆ ನಾ ನೋಡಿದ್ದು ಎತ್ತರದ ಮರದಲ್ಲಿ...ಅದನ್ನು ದೇವರಿಗೆ ಕೊಯ್ಯಲು ಅಜ್ಜಿ ಒಂದು ಬಿದಿರಿನ ಬಡಿಗೆಯನ್ನು  ಬಳಸುತ್ತಿದ್ದರು...ಹಾಗಾಗಿ ಬಿದಿರ ಕೋಲಿನ ಕೆಲಸ ಹೂವನ್ನು ಕೊಯ್ಯುವುದು..ಅದು ಅದನ್ನು ಮರೆತಿದೆ ಎಂದರೆ,ನಮ್ಮ ಕರ್ತವ್ಯವನ್ನು ಮರೆಯುತ್ತಿದ್ದೇವೆ ಎನ್ನುವ ಅರ್ಥದಲ್ಲಿ...

"ಕಡಿಕೆಮಣೆಯಿನ್ನು ಹಳೆಮನೆಯ ಮಾಡಿನಡಿಗೆ"
ಕಡಿಕೆ ಮಣೆ ಎಂದರೆ ಮರದಲ್ಲಿ ಕೊನೆಗೌಡರು ಕೂರಲು ಬಳಸುವುದು...ಆಂದರೆ ಮರ ಏರುವುದು ಎಂದರೆ ಪ್ರಗತಿಯ ಸಂಕೇತ..ಹೊಸ ಪ್ರಯೋಗಗಳ ಸಂಕೇತ... ಅಲ್ಲಿ ಕೂರುವುದು ಅಂದರೆ ಅಲ್ಲಿ ನೆಲೆನಿಂತು ಯಶಸ್ಸನ್ನು ಕಾಣುವುದು...ಹಂಗಾಗಿ ಆ ಕಡಿಕೆಮಣೆ ಹಳೆಮನೆಯ ಮಾಡಿನಡಿಗೆ ಅಂದರೆ ಆ ಹೊಸ ಪ್ರಯೋಗಗಳು ನಿಂತು,ಮತ್ತೆ ಹಳೆಯದಕ್ಕೇ ಜೋತುಬಿದ್ದಿದ್ದೇವೆ ಎನ್ನುವ ಆರ್ಥದಲ್ಲಿ... 

"ಅಡಿಕೆ ಶಿದ್ದಕ್ಕಿಯಿಲ್ಲ ಕೊಡಲು ಬೇಡುಪಡಿಗೆ"
ಇಲ್ಲಿ ಮಳೆಜಿರಲೆ ಎಂದರೆ ಬ್ರಷ್ಟಾಚಾರ....ಅವರು ಬೇಡುವವರು...ನಮ್ಮ ಕಡೆ ಬೇಡುವವರಿಗೆ ಅಡಿಕೆ ಅಥವಾ ಒಂದು ಶಿದ್ದೆ ಅಕ್ಕಿಯನ್ನು ಕೊಡುವುದನ್ನು ನೋಡಿದ್ದೇನೆ.. ಅವರಿಗೆ ಕೊಡಲು ನಮ್ಮಲ್ಲಿ ಅಕ್ಕಿ-ಅಡಿಕೆ ಏನೂ ಇಲ್ಲ,ಸಂಪತ್ತಿಲ್ಲ ...ಅವರ ಬಕಾಸುರ ಹೊಟ್ಟೆಯನ್ನು ತುಂಬಲು ಸಾಧ್ಯವಾಗುತ್ತಿಲ್ಲ ಎನ್ನುವ ಅರ್ಥದಲ್ಲಿ...

"ಹಿಡಿಕೆ ಇದ್ದಿಲ ಬಲವು ಸುಡುವ ಹಾದಿಕಡೆಗೆ"
ಇಲ್ಲಿ ಕೊಡೆ ಎಂದರೆ ನಮ್ಮ ಸಂಸ್ಕೃತಿ.ಬೀಳಲು ಅಂದರೆ ಅಂದರ ವಿವಿಧ ವಿಭಾಗಗಳು... ಅದರ ಅಂಗಾಂಗಳನ್ನೇ,  ನಮ್ಮೆಲ್ಲರನ್ನು ಒಂದು ಮಾಡಿದ್ದ ಆ  ಹೊದಿಕೆಯನ್ನೇ ನಾವಿಂದು ಕಳೆದುಕೊಳ್ಳುತ್ತಿದ್ದೇವೆ..ಹಿಡಿಕೆ ಇದ್ದಿಲು ಬಲ ಎಂದರೆ ಹಳೆಯ ತತ್ವ,ಆದರ್ಶಗಳ ಬಲ..ಅದರಿಂದಲೇ ಮುಂದಿನ ದಿನಗಳಿಗೆ ಪರಿಹಾರ ಎಂಬ ಅರ್ಥದಲ್ಲಿ...

ಹಮ್...ನಂದ್ ಮುಗಿತು.. ಈಗ ನಿಮ್ಮ ಸರದಿ :)..
ಕಾಯ್ತಿರ್ತೀನಿ.. 


Sunday, May 5, 2013

ಮರುಕಳಿಸಿತೇ???


ಇವತ್ತು ಮತದಾನದ ದಿನ….
ಓಟು ಹಾಕುತ್ತಾರೆ ಎಲ್ಲರೂ…
ನಾನೂ ಹಾಕಬೇಕು ಅಲ್ವಾ??..


ಬೆಳಬೆಳಿಗ್ಗೆಯೇ ಎದ್ದು ಕೊಟ್ಟಿಗೆ ಕೆಲಸ ಮುಗಿಸಿ,ಮಡಿ ಉಟ್ಟುಕೊಂಡು,ಗಂಗೆ ತಂದು ಭಸ್ಮ ಹಚ್ಚಿ ಜಪಕ್ಕೆ ಕುಳಿತಿದ್ದೇನೆ…
ಎಂದಿನಂತಿಲ್ಲ ಜಪ…
ಬರೀ ಅವಳದೇ ನೆನಪು…
ಕಣ್ಣ ಮುಚ್ಚಿ ಕುಳಿತುಕೊಂಡಿದ್ದಷ್ಟೇ ಗೊತ್ತು….
ಗೊತ್ತಿಲ್ಲ ಅದೆಷ್ಟು ಬಾರಿ ಅವಳನ್ನು ನೆನೆದೆನೋ,ಅದೆಷ್ಟು ಬಾರಿ ದೇವರನ್ನು ಜಪಿಸಿದೆನೋ…
ಕಣ್ಣ ಮುಚ್ಚಿದರೆ ಅವಳದೇ ನೆನಪು,ಅದೇ ಅವಳದೇ ಆಕಾರ…

ಅಹಾ ಅದೆಂಥಹಾ ಹಾಲಿನಂತಾ ಬಿಳುಪು…
ಪೌಡರು ,ಲಿಪ್ಟಿಕ್ಕುಗಳಿಲ್ಲದಿದ್ದರೂ ಮತ್ತೆ ಮತ್ತೆ ನೋಡಬೇಕೆನ್ನಿಸುವ ಮೊಗದ ಸೊಗಸು..
ಚಿಕ್ಕವನಿದ್ದಾಗ ಹಿಡಿದು ಮಲಗುತ್ತಿದ್ದ ಅಮ್ಮನ ಆ ಜಡೆಯನ್ನು ನೆನಪಿಸುವ  ಉದ್ದನೆಯ ಕೂದಲು…
ಕನಸಿನಲ್ಲೂ ಕಾಡುವ ಆ ಛಂದದ ನಗು..
ಅಹ್..ಮತ್ತೆ ಮತ್ತೆ ನೆನಪಾಗುತ್ತಿದ್ದಾಳೆ…
ನನ್ನ ರಕ್ತವೆಲ್ಲಾ ಹೃದಯಕ್ಕೇ ನುಗ್ಗುತ್ತಿದೆಯೋ ಏನೋ!
ಎದೆಯು ಬಡಿವ  ಸದ್ದು,ಎಳೆದು ಬಿಡುವ  ಉಸಿರ ಬಿಸಿ ನನಗೇ ಕೇಳಿಸುತ್ತಿದೆ ಸ್ಪಷ್ಟವಾಗಿ…
ಅದೆಷ್ಟು ಬಾರಿ ಹಾಗೇ ಸುಮ್ಮನೆ ಎಂಜಲು ನುಂಗಿದೆನೋ…ಲೆಕ್ಕವಿಲ್ಲ..


ಅದೇಕೆ ಹೀಗೆ ಇವತ್ತು ????
ಅವಳ ನೋಡಲಿಕ್ಕೆಂದೇ ಹೀಗಾ???ಗೊತ್ತಿಲ್ಲ…
ಅವಳು ಬಂದೇ ಬರುವಳಾ??? ಅದೂ ಗೊತ್ತಿಲ್ಲ…

ನಿಜ …..ಇವತ್ತು ಮತದಾನದ ದಿನ…ಊರಿನವರೆಲ್ಲಾ ಸಾಲೇಮನೆಗೆ ಓಟು ಹಾಕಲು ಬಂದೇ ಬರುತ್ತಾರೆ…
ಊರಿನವರಷ್ಟೇ ಏನು ಇದೇ ಆಟದ ಬೈಲಿನಲ್ಲಿ ಕುಂಟಾಟ,ಕ್ರಿಕೆಟ್ಟು ಆಡಿ ಇಂದು ಬೆಂಗ್ಳೂರು,ಬೊಂಬಯ್ಯಿಯಲ್ಲಿರುವವರೂ ಬಂದೇ ಬರುತ್ತಾರೆ..ಮನೆಯವನ್ನು ನೋಡವುದೂ ಆಯಿತೆಂದು ಬಹುತೇಕ ಎಲ್ಲರೂ ಬರುತ್ತಾರೆ… ಜೊತೆಗೆ ಅವಳೂ????

ಹಮ್..ಗೊತ್ತಿಲ್ಲ…ಹಳೆಯ ನೆನಪು ಬಂದೇ ಬರುತ್ತಾಳೆ ಎಂದು ಬಿಸ್ಕೀಟು ಹಾಕುತ್ತಿದೆ..
ಮಧ್ಯದಲ್ಲಿನ ಸುಂಗು ಮಾತ್ರ ,ಅವಳ್ಯಾಕೆ ಬರುತ್ತಾಳೆ ??
ಬರುವುದೇ ಅನುಮಾನ,ಬಂದರೂ ಈಗ ಅವಳ್ಯಾರು ನಿನಗೆ??
ಎಂದೆಂಬ ಪ್ರಶ್ನೆಗಳ ಬಾರುಕೋಲು ಹಿಡಿದು ನಿಂತಿದೆ..
ನಾನು….??

ಯೋಚಿಸುತ್ತಾ ಇದ್ದೇನೆ ಬೆಳಗಿನಿಂದ…
ಆಸರಿಗೆ ಕುಡಿದೆನೋ ಇಲ್ಲವೋ ಗೊತ್ತಾಗಲಿಲ್ಲ..ಅವಲಕ್ಕಿ ಮಜ್ಜಿಗೆಗೆ ಬೆಲ್ಲ ಕಡಿಮೆ ಇದ್ದ ಹಾಗಿತ್ತು…
ಬಿಡಿ,ನಾಲಿಗೆಯ ರುಚಿಯೆಲ್ಲಿ ತಿಳಿದೀತು,ನೆನಪಿನ ಪಾಕದ ಮುಂದೆ ಅಲ್ವಾ???

ಹಮ್..ಏನೋ ..ಮೆದುಳು ಹೇಳದಿದ್ದರೂ ಕಾಲು ತನ್ನ ಕೆಲಸ ಮಾಡಿ ಮುಗಿಸಿದೆ..
 ಆಚೀಚೆ ನೋಡುತ್ತಾ ತಲೆಕೆರೆದುಕೊಳ್ಳುವುದರೊಳಗಾಗಿ ಸಾಲೆಮನೆಯ ಸರಗೋಲು ಕಾಣಿಸುತ್ತಿದೆ..
ಜನರೆಲ್ಲಾ ಆ ಕಡೆ ಈ ಕಡೆ ಓಡಾಡುತ್ತಿದ್ದಾರೆ…ಒಂದಿಷ್ಟು ಮೋಟರು ಸೈಕಲ್ಲು,ಓಮಿನಿಗಳೂ ನಿಂತಿವೆ..

ಏನು ಮಾಡಲಿ ನಾನು??
ಹೋಗಿ ಓಟೋತ್ತಿ ಬಂದು ಬಿಡಲಾ???
ಬೇಡ ಬೇಡ..ಅವಳು ಬಂದರೂ ಬರಬಹುದು ಕಾಯಲಾ???
ಬಂದರೂ ಎಷ್ಟೋತ್ತಿಗೆ ಬರಬಹುದು???
ಒಬ್ಬಳೇ ಬರುವಳಾ???ಛೇ ಸಾಧ್ಯವಿಲ್ಲ..ಅವರಪ್ಪನ ಜೊತೆಗೇ ಬರುವದು…
ನಡೆದುಕೊಂಡಾ???ಹಮ್..ಅವರಪ್ಪ ದೊಡ್ಡಮನೆಯ ಶೀಪಾದನ ಲಟೂರೀ ಬೈಕು ಫೋರ್ತು ಹ್ಯಾಂಡಿಗೆ ತಗಂಡ ಎಂದು ಕೇಳಿದಂಗೆ ಇದೆ,,ಗೊತ್ತಿಲ್ಲ…ಏನು ಮಾಡಲಿ???.....
……
ಕಾಯುವಾ…..
ಏನಾದರಾಗಲಿ ಕಾಯಲೇ ಬೇಕು….
ಎಲ್ಲಿರಲಿ??????ಇಲ್ಲೇ ಇದ್ದರೆ ಪೋಲೀಸರು ಅನುಮಾನಿಸಬಹುದು…
ಸಾಲೆಯಲ್ಲೇ ಯಾವುದೋ ಪಕ್ಷದವರ ಜೊತೆ ಕೂರಲಾ??ಶೇ …ಅಲ್ಲಿ ಕೆಟ್ಟ ಗೌಜು…
ಎಲ್ಲಿರಲಿ??ಅವಳ್ಯಾವಾಗ ಬರುವದು ಬಂದರೆ???೯ಕ್ಕಾ , ೧೨ಕ್ಕಾ ಅಥವಾ ಸಂಜೆಗಾ??


ಅಗಾ…
ಅಲ್ಲಿ ಸಿಕ್ತು…
ಏನು?.
ಜಾಗ…
ನನ್ನ ಫೇವರೇಟ್ ಜಾಗ…
ನಾನು ನನ್ನೊಳಗಿನ ನನ್ನನ್ನು ನೋಡಿಕೊಳ್ಳೋ ಜಾಗ…ಕಷ್ಟ ಸುಖ ಹಂಚಿಕೊಂಡ ಜಾಗ…


ಇದೇ ರಸ್ತೆಯ ಬಲಬದಿಗೆ ಸ್ವಲ್ಪ ಕೆಳಗೆ ರಾಕ್ಷಸ ಪರಂಗಿ ಬೇಲಿ ಹಾರಿ,ಸಣ್ಣ ಧರೆಯ ದಾಟಿದರೆ ನಮ್ಮನೆಯದೇ ಬೆಟ್ಟ..
ಅಲ್ಲೊಂದು ಜೋಡಿ ಮತ್ತಿಯ ಮರ..ಅದರ ಪಕ್ಕದಲ್ಲೊಂದು ಹೊಸದಾಗಿ ಬೆಳೆದ ನುರುಕಲು ಗಿಡ..
ಮತ್ತಿಯ ಮರದಲ್ಲಿ ಕೊಟ್ಟೆಯ ಕಟ್ಟಿದಂತೆ ಇರುವ ಎಲೆಗಳು..
ತೊಟ್ಟಿಲಂತೆ ಹರಡಿಕೊಂಡ ಹೆಣೆಗಳು…
ಅಲ್ಲಿ ಕೂತು ನಾನು ಬರೆದದ್ದೆಷ್ಟೋ..ಓದಿದ್ದೆಷ್ಟೋ..ಕಾದಿದ್ದೆಷ್ಟೋ..ಅತ್ತಿದ್ದೆಷ್ಟೋ,ಕುಣಿದದ್ದೆಷ್ಟೋ..

ಹತ್ತಿದ್ದೇನೆ ಇಂದೂ ಆ ಮರವನ್ನು…
ಹತ್ತುವಾಗ  ಒಣಗಿದ ಕೊಂಬೆಯ ಮೇಲೆ ಕಾಲಿಟ್ಟಿದ್ದರಿಂದ ಜಾರಿತು ಒಂದೆರಡು ಬಾರಿ ಅಷ್ಟೇ…ಮತ್ತೇನೂ ಆಗಿಲ್ಲ..
ಬರುವಾಗ ಪಕ್ಕದ ನುರುಕಲು ಮರದ ಕೊಣಜು ಹತ್ತಿಕೊಂಡಿದೆ …ಸೊಂಟದಲ್ಲಿದ್ದ ಎರಡನ್ನು ಒರೆದು ಎಸೆದೆ..
ಗಲ್ಲದ ಮೇಲೆ ಹತ್ತಿಕೊಂಡದ್ದನ್ನು ಹಾಗೆಯೇ ಕೆಳಕ್ಕೆ ಉದುರಿಸಿದೆ…
ಮತ್ತೆಲ್ಲಿ ಕೊಣಜಿದೆಯೋ…ಅದೆಲ್ಲಿ ಸವಳಿಯಿದೆಯೋ…!!

ಇರಲಿ..ಇಲ್ಲಿಂದ ದಾರಿ ಚೆನ್ನಾಗೇ ಕಾಣುತ್ತಿದೆ..ಅಲ್ಲಿ ಓಡಾಡುವವರೂ ಕಾಣುತ್ತಿದ್ದಾರೆ….
ಅವರಿಗೆ ಮಾತ್ರ ನಾನು ಕಾಣಲಾರೆ…ನನಗಾದರೂ ನಾನು ಕಾಣುತ್ತೀನಾ????
ಗೊತ್ತಿಲ್ಲ….ತೀರ ತಲೆಬಿಸಿಯಾಯಿತೆಂದು ಎಂದಿನಂತೆ ಒಂದು ಗುಟಕಾ ಪ್ಯಾಕೆಟ್ಟು ಒಡೆದು ಬಾಯಿಗೆ ಹಾಕಿದೆ…
ಮನಸ್ಸೇ ಕಹಿಯಿತ್ತೋ ಅಥವಾ ಹಳೆಯ ಪ್ಯಾಕೇಟಿನಲ್ಲಿದ್ದ ಗುಟಕಾ ಕೆಂಪಾಗಿ ಕಹಿ ಎನಿಸಿತೋ ಏನೋ ಗೊತ್ತಿಲ್ಲ…
ಎಂದಿನ ಖುಷಿ ಸಿಗುತ್ತಿಲ್ಲ…
ಮತ್ತೊಂದು ಪ್ಯಾಕೆಟ್ಟು ಒಡೆದು,ಕೈಯ್ಯಲ್ಲಿ ತಿಕ್ಕಿ,ಹುಡಿಯನ್ನು ಉಬಿಸಿ ಬಾಯಿಗೆ ಹಾಕಿದೆ…
ನಿಧಾನವಾಗಿ ಒಳಸೇರುತ್ತಿದೆ…
ತಲೆ ಗುಯ್ಯ್ ಎನ್ನುತ್ತಿದೆ,ಕಣ್ಣು ಮಂಜಾಗುತ್ತಿದೆ..
ಮತ್ತೆ ಹಾಕಿದ ತಂಬಾಕು ಜಾಸ್ತಿ ಆಯ್ತೋ ಅಥವಾ ಅವಳ ನೆನಪಿನ ಮತ್ತು ಕಿಕ್ಕೇರಿತೋ ಗೊತ್ತಿಲ್ಲ…
ಹಾಗೆಯೇ ಕೈಗೆ ತಲೆಯಿಟ್ಟೆ…ಕಣ್ಣು ಮುಚ್ಚಿದೆ…





ಕತ್ತಲು...
 ಕತ್ತಲು ....
ಬರೀ ಕತ್ತಲು……
(ನಮಸ್ತೆ..ಇದೊಂದು ಹೊಸ ಪ್ರಯೋಗ ನನ್ನ ಪಾಲಿಗೆ...ಒಂದು ಎಳೆಯನ್ನು ಇಟ್ಟುಕೊಂಡು ಬರೆಯುವ ಪ್ರಯತ್ನ...ಇದನ್ನು ಇಲ್ಲಿಗೇ ಮುಗಿಸಬೇಕೋ ಅಥವಾ ಇನ್ನೂ ಬೆಳೆಸಬೇಕೋ ಅನ್ನೋ ಗೊಂದಲದಲ್ಲಿದೀನಿ... ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ಮರೆಯದೇ ದಾಖಲಿಸಿ... ನಿಮಗೆ ಅನಿಸಿದ್ದನ್ನು ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿ...ಅದೇ ನನಗೆ ಸ್ಪೂರ್ತಿ...ಕಾಯ್ತಿರ್ತೀನಿ...ನಮಸ್ತೆ )

Saturday, April 20, 2013

ನಾಳೆಯಾ ಬೆಳಗನು.......

ಸಮಸ್ಯೆಗಳು ಎಲ್ಲರಲ್ಲೂ ಇದ್ದಿದ್ದೆ...ಒಬ್ಬೊಬ್ಬರಿಗೆ ಒಂದೊಂದು ತರಹದ್ದು...
ಚಾಕಲೇಟು ಸಿಕಲಿಲ್ಲವೆಂಬ ಬಾಲಕ,
ಹುಡುಗಿ ಸಿಗಲಿಲ್ಲವೆಂಬ ಯುವಕ,
ನಿನ್ನೆಯ ನೆನಪಲ್ಲಿ ಇಂದು ಪರಿತಪಿಸುವ ಮುದುಕ
ಹೀಗೆ ಪ್ರಾಯಶಃ ಅವರವರಿಗೆ ಅವರವರದೇ ಸಮಸ್ಯೆಗಳು....
ಆರಾಮಾಗಿ ಹಾರಾಡಿಕೊಂಡಿರುವ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡುವುದೇ ಬಹುಷಃ ಈ ಯೋಚನೆಗಳು...ಅವುಗಳನ್ನು ತಿಳಿಯಾಗಿಸಿವಾ ಎಂಬ ಆಶಯ ಹೊತ್ತ ಒಂದೆರಡು ಸಾಲುಗಳು ನಿಮ್ಮ ಮುಂದೆ....
ಎಂದಿನಂತೆ ಆತ್ಮೀಯತೆಯಿಂದ ದಯವಿಟ್ಟು   ಅನಿಸಿಕೆ,ತಪ್ಪು-ಒಪ್ಪುಗಳನ್ನು ಕಮೆಂಟಿಸಿ...ನನ್ನನ್ನು ಆಶೀರ್ವದಿಸಿ...




ನಾಳೆಯಾ ಬೆಳಗನು ಶಿಖರದೀ ನೋಡುವಾ,
ತೋಳಿನಾ ಬಲದಲೇ ಶರಧಿಯಾ ಈಜುವಾ

ಸವೆದಿಹ   ಹಾದಿಯ  ಋಣವದು    ಕಳೆದಿದೆ,
ಅವಿತಿಹ ಎದೆಯೊಳ  ದನಿಯದು ಮೊಳಗಿದೆ,
ನವಯುಗ ನಾಂದಿಗೆ  ಚಣವದು  ಮೊಳೆತಿದೆ,
ಸವಿಸವಿ   ಕನಸಿನ     ಸರಪಣಿ    ಸೆಳೆದಿದೆ.

ಜವರಾಯನ ಕರಿ ಮೊಸಳೆಯು  ಮುಳುಗಿದೆ,
ಬವಣೆಯ  ತೆರೆಗಳ  ನೆರೆಯದು    ಇಳಿದಿದೆ,
ಸಾವಿನ   ಸುಳಿಗಳ    ಭಯವದು   ಅಳಿದಿದೆ,
ಭವಿತವ್ಯದ  ಗೆರೆ    ಕೈಯ್ಯಲೆ    ಹೊಳೆದಿದೆ.

ಕವಿದಿಹ ಕರಿಮೆದೆ ಹನಿಯದು ಜೊಳಗಿದೆ,
ಭುವನದ ಹಾದಿಗೆ ಲಾಟೀನು    ಬೆಳಗಿದೆ.
ನಾವೆಯ ಮರೆತಿಹ ಪಯಣವು ಎಳೆದಿದೆ,
ಜವ್ವನದಾ   ಹಸಿ   ಹಂಪಲು    ಗಳತಿದೆ .

ನಾಳೆಯಾ ಬೆಳಗನು...............

(ಶಬ್ಧಾರ್ಥ : ಜವರಾಯ-ಯಮ ,ಭವಿತವ್ಯ-ಭವಿಷ್ಯ,ಮೆದೆ-ಗುಂಪು(ಸಾಮಾನ್ಯವಾಗಿ ಹುಲ್ಲಿನ ಕಟ್ಟನ್ನು ಮೆದೆ ಎಂದು ಬಳಸುತ್ತಾರೆ),ಭುವನ-ಭೂಮಿ,ಜಲ ,ಜವ್ವನ-ಯವ್ವನ )
-ಚಿನ್ಮಯ ಭಟ್ಟ




ಹಮ್...ನಿಜ ಹೇಳ್ಬೇಕು ಅಂದ್ರೆ  ನಾನೂ ಪ್ರಾಜೆಕ್ಟು,ಸೆಮಿನಾರು ಅವು ಇವು ಅಂತಾ ತಲೆ ಕೆಡಿಸಿಕೊಂಡು ಓಡಾಡುತ್ತಿದ್ದಾಗ,ನನಗೆ ಸ್ಪೂರ್ತಿಯಾಗಿದ್ದು ದಿನೇಶ ಮಾನೀರ್ ಅವರು ಕೊಟ್ಟ ಒಂದು ಛಾಯಾ ಚಿತ್ರ...ಅವರ ಒಂದು ಫೋಟೋ-ಬರಹಗಳ ಸರಣಿಯ ಒಂದು  ಭಾಗವಾಗಿ ನನಗೆ ಅವರ ಛಾಯಾ ಚಿತ್ರಕ್ಕೆ  ಒಂದೆರಡು ಸಾಲು ಬರೆಯುವ ಅವಕಾಶ ಸಿಕ್ಕಿತು....ಆ ಚಿತ್ರಕ್ಕೆ ಅವು ಸೂಕ್ತವಾದ ಸಾಲುಗಳು ಅವು ಹೌದೋ ಅಲ್ಲವೋ ಗೊತ್ತಿಲ್ಲ,ಆ ಕ್ಷಣದಲ್ಲಿ ನನ್ನ ಮನಸ್ಥಿತಿಯಲ್ಲಿ ಹೊಳೆದ ಸಾಲುಗಳು ಇವು...ಅದನ್ನು ಪ್ರೀತಿಯಿಂದ ಅವರ ವೆಬ್ ಸೈಟಿನಲ್ಲಿ ಪ್ರಕಟಿಸಿ,ನನ್ನನ್ನು ಪ್ರೋತ್ಸಾಹಿಸಿದ್ದಾರೆ... ದಯವಿಟ್ಟು ಒಮ್ಮೆ ಕಣ್ಣಾಡಿಸಿ..
(ಆ ಸುಂದರ  ಛಾಯಾ ಚಿತ್ರ ಎಲ್ಲಿ ನನ್ನ ಸಾಹಿತ್ಯವನ್ನು ನುಂಗಿ ಬಿಡುವುದೋ ಎಂಬ ಹೊಟ್ಟೆಕಿಚ್ಚಿನಿಂದ ಚಿತ್ರವನ್ನು ಇಲ್ಲಿ ಹಾಕಿಲ್ಲ...ಕ್ಷಮಿಸಿ) 

ಹಾಂ..ಹೇಳಕ್ ಮರ್ತಿದ್ದೆ ..ಇವತ್ತು ಎರಡನೇ ಇಂಟರ್ನಲ್ಸು ಮುಗೀತು...:D..
ಪರವಾಗಿಲ್ಲ,ಸಾಧಾರಣದಿಂದ ಮಧ್ಯಮ ....ಹಾ ಹಾ...

ಸರಿ.... ಕಾಯ್ತಿರ್ತೀನಿ,ನಿಮ್ ಕಮೆಂಟ್ ಗೆ..ಮರಿಬೇಡಿ...:)
ನಮಸ್ತೆ...

Sunday, March 17, 2013

ನಮನ

ಮೊದಲನೇ ಇಂಟರ್ನಲ್ಸು ಮುಗಿತು...ಹೆಂಗಾಯ್ತು ಅಂತೆಲ್ಲಾ ಕೇಳ್ಬೇಡಿ ಪ್ಲೀಸ್ ;)...
ಅದೇ ಖುಷಿಗೆ ಒಂದು ಕವನ ಬ್ಲಾಗಿಸ್ತಾ ಇದೀನಿ...
ಈಗ ಸುಮಾರು ಹದಿನೈದು ದಿನಗಳ ಹಿಂದೆ ವಿ.ಟಿ.ಯು ಫೆಸ್ಟ್ ಗೆ ಅಂತಾ ಅರ್ಜಂಟಿನಲ್ಲೊಂದು ದೇಶಭಕ್ತಿ ಗೀತೆಯನ್ನು ಬರೆಯಲು ಹೊರಟು ಹಿಂಗಾಯ್ತು...
ಜಾಸ್ತಿ ತೀರಾ ಯೋಚಿಸಿ ಬರೆದದ್ದೇನಲ್ಲಾ,ಹಂಗೆ ಸುಮ್ಮನೆ ಗೀಚಿದ್ದು...
ಫೆಸ್ಟ್ ನಾ ಸುದ್ದಿಯಂತೂ ಇಲ್ಲ,ಬರೆದದ್ದನ್ನಾ ನಿಮ್ಮೆದುರು ಇಟ್ಟಿದ್ದೇನೆ....
ಸಮಯವಿದ್ದಾಗ ಒಮ್ಮೆ ದಯವಿಟ್ಟು  ನೋಡಿ,ಹೆಂಗಿದೆ ಹೇಳಿ.....


ಮೂಡಣ ಪಡುವಣ,ಬಡಗಣ ತೆಂಕಣ
ಕೂಡಿದೆ ಜನಮನ ಹಾಡಲು ಜನಗಣ||

ಸಾಗರದಲೆಯಲು ಸರಿಗಮ ಸ್ವರವಿದೆ,
ಹಿಮಗಿರಿ ಜಾಲದಿ ವೇದದ ಅರಿವಿದೆ,
ಸಮತೆಯ ಬಯಲಲಿ ಹಸುರಿನ ಗರಿಯಿದೆ,
ನಲುಮೆಯ ನದಿಯಲಿ ಕಾಯಕ ಝರಿಯಿದೆ.

ಗಣಗಳ ಹಿರಿತನ,ಗಣಕದ ಹೊಸತನ,
ಚಿಗುರಿಗೆ ಬೇರಿನ ನೆರವಿನ ಸಿರಿತನ.
ಕಲೆಗಳ ನಂದನ,ಭಾಷೆಯ ಗೆಳೆತನ,
ವಿವಿಧತೆಯಲ್ಲೂ ಏಕತೆಯಾ ಗುಣ.

ಜ್ನಾನದ ಸ್ಪುರಣ,ಭಕುತಿಯ ಹೂರಣ,
ದೇಶಕೆ ದೇಹದ ಶಕ್ತಿಯೇ ಅರ್ಪಣ..
ವೈರಿಗೆ ಶೌರ್ಯದ ರಕುತದ ತರ್ಪಣ,
ನೀಡುವ ಸೈನ್ಯಕೆ ನಮ್ಮಯ ನಮನ..
ಹೆಮ್ಮೆಯ ನಮನ..

-ಚಿನ್ಮಯ ಭಟ್ಟ

(ಇದರಲ್ಲಿ ಅದೇಕೋ ಹೊಸ ಶಬ್ದಗಳು ಹೊಳೆಯಲಿಲ್ಲ....ಸುಮ್ಮನೆ ತುರುಕಲೂ ಮನಸಾಗಲಿಲ್ಲ... ಅದಕ್ಕಾಗಿ ಕ್ಷಮೆ ಇರಲಿ)
ಹಾಂ ಎಂದಿನಂತೆ ನಿಮ್ಮ ಸಲಹೆ-ಸೂಚನೆಗಾಗಿ ಕಾಯ್ತಿರ್ತಿನಿ..ನಿಮ್ಮ ಅನಿಸಿಕೆ ನಾ ದಯವಿಟ್ಟು ಬರಿರಿ...ನಂಗೆ ಅದೇ ಶಕ್ತಿ..
ತಪ್ಪುಗಳೇನಾದ್ರೂ ಕಂಡ್ರೆ ಮರೆಯದೇ ತಿಳಿಸಿ ನನ್ನನ್ನಾ ಬೆಳೆಸ್ತೀರಾ ಅಲ್ವಾ???


Sunday, February 24, 2013

ಬೇಲಿಯಾ ಮುಳ್ಳುಗಳು( ಇದೆನ್ನ ಮನದ ಹಾಡು!!)

"ಬದುಕಿಗೆ ನಿಯಮಗಳು-ಕಟ್ಟುಪಾಡುಗಳು  ಬೇಕು ,ಆದರೆ ಅದೇ ಬದುಕಾದರೆ??" ವಯಸ್ಸಿಗೆ ಮೀರಿದ ಆಲೋಚನೆ ಅಂತೀರಾ???ಹಾ ಹಾ....ಪ್ರೇಮ ಪ್ರೀತಿ ಬಿಟ್ಟು ಒಂದ್ಸ್ವಲ್ಪ ಏನೋ ವಿಚಾರ ಅದು ಇದು ಅಂತಾ ಬರ್ಯಕ್ ಹೊರ್ಟ್ನಾ???ಛೇ ಗೊತ್ತಿಲ್ಲಪ್ಪಾ...ಸರಿ ವಿಷ್ಯಕ್ ಬರ್ತೀನಿ..
ಈಗೊಂದು ತಿಂಗಳ ಹಿಂದೆ ಡಾ.ಲಕ್ಷ್ಮಿನಾರಾಯಣ ಭಟ್ಟರ "ಕಾವ್ಯ ಪ್ರತಿಮೆ" ಎಂಬ ಪುಸ್ತಕವನ್ನು ತಂದು ೪-೫ ಪುಟ ಓದಿದ್ದೆ...
ಪ್ರತಿಮೆಗಳು ಎಂದರೇನು ಎಂಬುದು ಚೂರ್ ಚೂರು ಅರ್ಥವಾಗಿ ಅದನ್ನು ಬಳಸಬೇಕು ಎಂಬುದು ತಲೆಗೆ ಹೊಕ್ಕಿತ್ತು...
ಇದೀಗ ಸುಮಾರು ದಿನದಿಂದ ತಲೆಯಲ್ಲಿ ಕೊರೆಯುತ್ತಿದ್ದ ಹುಳವೊಂದನ್ನು ನಿಮ್ಮೆದುರಿಟ್ಟಿದ್ದೇನೆ...ವಸ್ತು ನಾನೇ...ಇನ್ನೇನಿಲ್ಲ..ಮನಸ್ಸು ..ಅದರಲ್ಲಿನ ಬದಲಾವಣೆಗಳು...
ಒಮ್ಮೆ ಓದಿ...ಜೊತೆಗೆ ಕವನದ ಕೆಳಗೆ ಬರಹದ ಆಶಯವನ್ನೂ ಕೊಟ್ಟಿದ್ದೇನೆ ಅದನ್ನೂ ನೋಡಿ ಕವನ ಬೇಗ ಅರ್ಥವಾಗಬಹುದು..


ಬೇಲಿಯಾ ಮುಳ್ಳುಗಳು ತಟ್ಟುತಿವೆ ಬಾಗಿಲಿಗೆ
ಹೇಡಿಗೆಯ ಗಡಿ ದಾಟಿ ನಡೆಯುತಿವೆ ಜಗಲಿಗೆ

ಬಡವನೀ ಬಿಡಾರದೀ ಜೊತೆಗಿದ್ದ ಕಪಿಯೊಂದು,
ತುಂಡುಗುಪ್ಪಣ ಹಾಕಿ ಕುಣಿದಿತ್ತು ಊರ್ಮೇಲೆ.
ಲಿಗಾಡಿ ಜಾತಿಯದು ನಿಂತಲ್ಲಿ ನಿಲದೆಂದು,
ನೆಡಿಸಿದೆ ಮುಳ್ಳುಗಳ ಅಂಗಳದ ತುದಿಯಲ್ಲೇ.

ನಡುವೆತ್ತರ ಬೆಳೆಯಿತದು ಗೊಬ್ಬರವ ಬೇಡದೇ,
ಹಾಡಿಕುಣಿಯಿತು ಮಂಗ ಒಬ್ಬನೇ ಅದರೊಳಗೆ,
ನೋಡಿದಾ ಕಣ್ಣುಗಳು ಅದ್ಭುತವು ಎಂದೆನಲು,
ಮೂಡಿತು ಕೋಡೊಂದು ತಿಳಿಯದೇ ಒಳಗೊಳಗೆ.

ಗಡಿಸರಿಗೆ ಇಂದೀಗ ಅಂಗಳಕು ಹರಡಿದೆ,
ಜಡಿತಟ್ಟಿ ನಡುಮುರಿದು ಮನೆಕೋಳು ಹಿಡಿದಿದೆ.
ಬಡಪಾಯಿ ಮರ್ಕಟಕೆ ಉಸಿರೊಂದೆ ಉಳಿದಿದೆ.
ನಡೆನಡೆಗು ತಡೆಯಿರಲು ಕುಣಿಜೀವ ಸೊರಗಿದೆ,
ನಡೆನಡೆಗು ತಡೆಯಿರಲು ಕುಣಿಜೀವ ಸೊರಗಿದೆ.

ಬೇಲಿಯಾ ಮುಳ್ಳುಗಳು ತಟ್ಟುತಿವೆ ಬಾಗಿಲಿಗೆ,
ಹೇಡಿಗೆಯ ಗಡಿ ದಾಟಿ ನಡೆಯುತಿವೆ ಜಗುಲಿಗೆ!!!!

-ಚಿನ್ಮಯ :)

ಶಬ್ಧಾರ್ಥ: 
ಹೇಡಿಗೆ=ಮನೆಯ ಮುಂದಿನ ಕಟ್ಟೆ(ಮೆಟ್ಟಿಲುಗಳ ಪಕ್ಕ ಉದ್ದಕೆ ಏನೋ ಇರತ್ತಪಾ ಅದಕ್ಕೆ ಹಂಗನ್ನದು ನಮ್ ಕಡೆ),
ಜಗಲಿ=ಜಗುಲಿ,ಇಂದಿನ "ಹಾಲ್",
ತುಂಡುಗುಪ್ಪಣ=ಲಗಾಮಿಲ್ಲದ ಕುಣಿತ(ನಮ್ಮನೆ ಕಡೆ ಈ ರೀತಿಯ ಅರ್ಥದಲ್ಲಿ ಬಳಸುತ್ತಾರೆ,ಬಹುಷಃ ಯಕ್ಷಗಾನದಲ್ಲಿ ಮಂಡಿಯೂರಿ ಕುಣಿಯುವ ನೃತ್ಯದ ಬಗೆಗೂ ಇದೇ ಹೆಸರಿದೆ ಎನ್ನುವುದು ನನ್ನ ಭಾವನೆ),
ಊರ್ಮೇಲೆ=ಊರಿನ ಮೇಲೆ,ಊರಿನ ತುಂಬೆಲ್ಲಾ..
ಲಿಗಾಡಿ=ಹೋಳಿ,ಕಿಲಾಡಿ..
ನಡುವೆತ್ತರ=ಸೊಂಟದಷ್ಟು ಎತ್ತರ.
ಕೋಡು ಮೂಡುವುದು=ಹೆಮ್ಮೆ ,ಒಂಥರ ಅಹಂಕಾರವೂ ಇರಬಹುದು...
ಗಡಿಸರಿಗೆ=ಸರಿಗೆ ಎಂದರೆ ಕಬ್ಬಿಣದ ತಂತಿ..ಗಡಿಸರಿಗೆ ಅಂದರೆ ಗಡಿಯನ್ನು ಗುರುತಿಸುವ ತಂತಿ ಎನ್ನುವ ಅರ್ಥದಲ್ಲಿ..
ಜಡಿತಟ್ಟಿ=ಮಳೆಯಿಂದ ಮನೆಯನ್ನು ರಕ್ಷಿಸಲು ಮನೆಯ ಸುತ್ತ ಕಟ್ಟುತ್ತಿದ್ದ ಸೋಗೆಯ ಮುಚ್ಚಿಗೆ...
ಮನೆಕೋಳು=ಮನೆಯ ಮೇಲ್ಭಾಗದ ಅಂಚು..ಮನೆಕೋಳು ಅಂದರೆ ಅಧಿಕಾರದ ಪ್ರತೀಕವಾಗಿ ಇಲ್ಲಿ..
ಮರ್ಕಟ=ಮಂಗ :) (ನಾನು ಒಂದೊಂದ್ ಸಲಾ :)P )



(ಆಶಯ: ನಮ್ಮ ಮನಸ್ಸಿನ  ಮಂಗಾಟಗಳು ಹಾಗೂ ಅದನ್ನು ನಿಯಂತ್ರಿಸಲು ನಾವೇ ಹಾಕಿಕೊಳ್ಳುವ ಕೆಲವು ನಿಯಮಗಳು...
ಅದು "ಹೊಸದನ್ನೇನೋ ಸೃಷ್ಟಿಸಲು ಹೋಗುವೆ" ಎನ್ನುವುದಿರಬಹುದು ಅಥವಾ "ಎಲ್ಲರಂತೇ ನೀನೂ ಇರು,ನಿನಗೇಕೆ ಇಲ್ಲದ ಉಸಾಬರಿ" ಎನ್ನುವುದಿರಬಹುದು.. 
ಈ "ಶಿಸ್ತು ಹಾಗೂ ಸೃಜಶೀಲತೆಯ ನಡುವಿನ ತಿಕ್ಕಾಟ" ,ಕೊನೆಗೆ ಒಂದು ದಿನ  ನಿಯಮಗಳೇ ಜಾಸ್ತಿಯಾಗಿ ಆ ಮಂಗಾಟಗಳಿಗೆ .ಹೊಸ ಆಲೋಚನೆಗಳಿಗೆ ಆಸ್ಪದವೇ ಇರದಂತಾದ ಸ್ಥಿತಿಯೇ  ನನ್ನ ಈ ಕವನದ ವಸ್ತು..
ಇಲ್ಲಿ ಹೊಸ ಹೊಸ ಆಲೋಚನೆಗಳ ಪ್ರತೀಕವಾಗಿ "ಮಂಗ"ವಿದ್ದರೆ,ಶಿಸ್ತು-ನಿಯಮಗಳನ್ನು ಬಿಂಬಿಸಲು "ಮುಳ್ಳು ಬೇಲಿ"ಯನ್ನು ಬಳಸಿದ್ದೇನೆ...ಇಲ್ಲಿಯ ಮನೆ ,ನನ್ನ ಮನಸ್ಸು...)

ತಪ್ಪು-ಒಪ್ಪನ್ನು ಕಮೆಂಟಿನ ಮೂಲಕ ತಿಳಿಸಿ ಎಂದಿನಂತೆ ಈ ಹುಡುಗನ್ನಾ ಪ್ರೋತ್ಸಾಹಿಸ್ತೀರಾ ಅಲ್ವಾ??? 
ನಮಸ್ತೆ :)