Sunday, February 24, 2013

ಬೇಲಿಯಾ ಮುಳ್ಳುಗಳು( ಇದೆನ್ನ ಮನದ ಹಾಡು!!)

"ಬದುಕಿಗೆ ನಿಯಮಗಳು-ಕಟ್ಟುಪಾಡುಗಳು  ಬೇಕು ,ಆದರೆ ಅದೇ ಬದುಕಾದರೆ??" ವಯಸ್ಸಿಗೆ ಮೀರಿದ ಆಲೋಚನೆ ಅಂತೀರಾ???ಹಾ ಹಾ....ಪ್ರೇಮ ಪ್ರೀತಿ ಬಿಟ್ಟು ಒಂದ್ಸ್ವಲ್ಪ ಏನೋ ವಿಚಾರ ಅದು ಇದು ಅಂತಾ ಬರ್ಯಕ್ ಹೊರ್ಟ್ನಾ???ಛೇ ಗೊತ್ತಿಲ್ಲಪ್ಪಾ...ಸರಿ ವಿಷ್ಯಕ್ ಬರ್ತೀನಿ..
ಈಗೊಂದು ತಿಂಗಳ ಹಿಂದೆ ಡಾ.ಲಕ್ಷ್ಮಿನಾರಾಯಣ ಭಟ್ಟರ "ಕಾವ್ಯ ಪ್ರತಿಮೆ" ಎಂಬ ಪುಸ್ತಕವನ್ನು ತಂದು ೪-೫ ಪುಟ ಓದಿದ್ದೆ...
ಪ್ರತಿಮೆಗಳು ಎಂದರೇನು ಎಂಬುದು ಚೂರ್ ಚೂರು ಅರ್ಥವಾಗಿ ಅದನ್ನು ಬಳಸಬೇಕು ಎಂಬುದು ತಲೆಗೆ ಹೊಕ್ಕಿತ್ತು...
ಇದೀಗ ಸುಮಾರು ದಿನದಿಂದ ತಲೆಯಲ್ಲಿ ಕೊರೆಯುತ್ತಿದ್ದ ಹುಳವೊಂದನ್ನು ನಿಮ್ಮೆದುರಿಟ್ಟಿದ್ದೇನೆ...ವಸ್ತು ನಾನೇ...ಇನ್ನೇನಿಲ್ಲ..ಮನಸ್ಸು ..ಅದರಲ್ಲಿನ ಬದಲಾವಣೆಗಳು...
ಒಮ್ಮೆ ಓದಿ...ಜೊತೆಗೆ ಕವನದ ಕೆಳಗೆ ಬರಹದ ಆಶಯವನ್ನೂ ಕೊಟ್ಟಿದ್ದೇನೆ ಅದನ್ನೂ ನೋಡಿ ಕವನ ಬೇಗ ಅರ್ಥವಾಗಬಹುದು..


ಬೇಲಿಯಾ ಮುಳ್ಳುಗಳು ತಟ್ಟುತಿವೆ ಬಾಗಿಲಿಗೆ
ಹೇಡಿಗೆಯ ಗಡಿ ದಾಟಿ ನಡೆಯುತಿವೆ ಜಗಲಿಗೆ

ಬಡವನೀ ಬಿಡಾರದೀ ಜೊತೆಗಿದ್ದ ಕಪಿಯೊಂದು,
ತುಂಡುಗುಪ್ಪಣ ಹಾಕಿ ಕುಣಿದಿತ್ತು ಊರ್ಮೇಲೆ.
ಲಿಗಾಡಿ ಜಾತಿಯದು ನಿಂತಲ್ಲಿ ನಿಲದೆಂದು,
ನೆಡಿಸಿದೆ ಮುಳ್ಳುಗಳ ಅಂಗಳದ ತುದಿಯಲ್ಲೇ.

ನಡುವೆತ್ತರ ಬೆಳೆಯಿತದು ಗೊಬ್ಬರವ ಬೇಡದೇ,
ಹಾಡಿಕುಣಿಯಿತು ಮಂಗ ಒಬ್ಬನೇ ಅದರೊಳಗೆ,
ನೋಡಿದಾ ಕಣ್ಣುಗಳು ಅದ್ಭುತವು ಎಂದೆನಲು,
ಮೂಡಿತು ಕೋಡೊಂದು ತಿಳಿಯದೇ ಒಳಗೊಳಗೆ.

ಗಡಿಸರಿಗೆ ಇಂದೀಗ ಅಂಗಳಕು ಹರಡಿದೆ,
ಜಡಿತಟ್ಟಿ ನಡುಮುರಿದು ಮನೆಕೋಳು ಹಿಡಿದಿದೆ.
ಬಡಪಾಯಿ ಮರ್ಕಟಕೆ ಉಸಿರೊಂದೆ ಉಳಿದಿದೆ.
ನಡೆನಡೆಗು ತಡೆಯಿರಲು ಕುಣಿಜೀವ ಸೊರಗಿದೆ,
ನಡೆನಡೆಗು ತಡೆಯಿರಲು ಕುಣಿಜೀವ ಸೊರಗಿದೆ.

ಬೇಲಿಯಾ ಮುಳ್ಳುಗಳು ತಟ್ಟುತಿವೆ ಬಾಗಿಲಿಗೆ,
ಹೇಡಿಗೆಯ ಗಡಿ ದಾಟಿ ನಡೆಯುತಿವೆ ಜಗುಲಿಗೆ!!!!

-ಚಿನ್ಮಯ :)

ಶಬ್ಧಾರ್ಥ: 
ಹೇಡಿಗೆ=ಮನೆಯ ಮುಂದಿನ ಕಟ್ಟೆ(ಮೆಟ್ಟಿಲುಗಳ ಪಕ್ಕ ಉದ್ದಕೆ ಏನೋ ಇರತ್ತಪಾ ಅದಕ್ಕೆ ಹಂಗನ್ನದು ನಮ್ ಕಡೆ),
ಜಗಲಿ=ಜಗುಲಿ,ಇಂದಿನ "ಹಾಲ್",
ತುಂಡುಗುಪ್ಪಣ=ಲಗಾಮಿಲ್ಲದ ಕುಣಿತ(ನಮ್ಮನೆ ಕಡೆ ಈ ರೀತಿಯ ಅರ್ಥದಲ್ಲಿ ಬಳಸುತ್ತಾರೆ,ಬಹುಷಃ ಯಕ್ಷಗಾನದಲ್ಲಿ ಮಂಡಿಯೂರಿ ಕುಣಿಯುವ ನೃತ್ಯದ ಬಗೆಗೂ ಇದೇ ಹೆಸರಿದೆ ಎನ್ನುವುದು ನನ್ನ ಭಾವನೆ),
ಊರ್ಮೇಲೆ=ಊರಿನ ಮೇಲೆ,ಊರಿನ ತುಂಬೆಲ್ಲಾ..
ಲಿಗಾಡಿ=ಹೋಳಿ,ಕಿಲಾಡಿ..
ನಡುವೆತ್ತರ=ಸೊಂಟದಷ್ಟು ಎತ್ತರ.
ಕೋಡು ಮೂಡುವುದು=ಹೆಮ್ಮೆ ,ಒಂಥರ ಅಹಂಕಾರವೂ ಇರಬಹುದು...
ಗಡಿಸರಿಗೆ=ಸರಿಗೆ ಎಂದರೆ ಕಬ್ಬಿಣದ ತಂತಿ..ಗಡಿಸರಿಗೆ ಅಂದರೆ ಗಡಿಯನ್ನು ಗುರುತಿಸುವ ತಂತಿ ಎನ್ನುವ ಅರ್ಥದಲ್ಲಿ..
ಜಡಿತಟ್ಟಿ=ಮಳೆಯಿಂದ ಮನೆಯನ್ನು ರಕ್ಷಿಸಲು ಮನೆಯ ಸುತ್ತ ಕಟ್ಟುತ್ತಿದ್ದ ಸೋಗೆಯ ಮುಚ್ಚಿಗೆ...
ಮನೆಕೋಳು=ಮನೆಯ ಮೇಲ್ಭಾಗದ ಅಂಚು..ಮನೆಕೋಳು ಅಂದರೆ ಅಧಿಕಾರದ ಪ್ರತೀಕವಾಗಿ ಇಲ್ಲಿ..
ಮರ್ಕಟ=ಮಂಗ :) (ನಾನು ಒಂದೊಂದ್ ಸಲಾ :)P )



(ಆಶಯ: ನಮ್ಮ ಮನಸ್ಸಿನ  ಮಂಗಾಟಗಳು ಹಾಗೂ ಅದನ್ನು ನಿಯಂತ್ರಿಸಲು ನಾವೇ ಹಾಕಿಕೊಳ್ಳುವ ಕೆಲವು ನಿಯಮಗಳು...
ಅದು "ಹೊಸದನ್ನೇನೋ ಸೃಷ್ಟಿಸಲು ಹೋಗುವೆ" ಎನ್ನುವುದಿರಬಹುದು ಅಥವಾ "ಎಲ್ಲರಂತೇ ನೀನೂ ಇರು,ನಿನಗೇಕೆ ಇಲ್ಲದ ಉಸಾಬರಿ" ಎನ್ನುವುದಿರಬಹುದು.. 
ಈ "ಶಿಸ್ತು ಹಾಗೂ ಸೃಜಶೀಲತೆಯ ನಡುವಿನ ತಿಕ್ಕಾಟ" ,ಕೊನೆಗೆ ಒಂದು ದಿನ  ನಿಯಮಗಳೇ ಜಾಸ್ತಿಯಾಗಿ ಆ ಮಂಗಾಟಗಳಿಗೆ .ಹೊಸ ಆಲೋಚನೆಗಳಿಗೆ ಆಸ್ಪದವೇ ಇರದಂತಾದ ಸ್ಥಿತಿಯೇ  ನನ್ನ ಈ ಕವನದ ವಸ್ತು..
ಇಲ್ಲಿ ಹೊಸ ಹೊಸ ಆಲೋಚನೆಗಳ ಪ್ರತೀಕವಾಗಿ "ಮಂಗ"ವಿದ್ದರೆ,ಶಿಸ್ತು-ನಿಯಮಗಳನ್ನು ಬಿಂಬಿಸಲು "ಮುಳ್ಳು ಬೇಲಿ"ಯನ್ನು ಬಳಸಿದ್ದೇನೆ...ಇಲ್ಲಿಯ ಮನೆ ,ನನ್ನ ಮನಸ್ಸು...)

ತಪ್ಪು-ಒಪ್ಪನ್ನು ಕಮೆಂಟಿನ ಮೂಲಕ ತಿಳಿಸಿ ಎಂದಿನಂತೆ ಈ ಹುಡುಗನ್ನಾ ಪ್ರೋತ್ಸಾಹಿಸ್ತೀರಾ ಅಲ್ವಾ??? 
ನಮಸ್ತೆ :)

Friday, February 22, 2013

ಮೈನಾ ..ತುಂಬಾ ತುಂಬಾ ವೈನ !




ತೇವವಾದ ನೋಡುಗರ ಕಣ್ಣುಗಳನ್ನು ಅತ್ತಿತ್ತ ಸರಿಯದಂತೆ ಹಿಡಿದಿಟ್ಟ ಸನ್ನಿವೇಶ,ಹಿನ್ನೆಲೆಯಲ್ಲಿ ತೇಲಿ ತೇಲಿ ಬಂದು ಎದೆಯಲಿ ಮಾರ್ದನಿಸುವ ಸೋನು ನಿಗಮರ ಹಿನ್ನೆಲೆ ಗಾಯನ,ಕರುಳು ಕಿತ್ತು ಬರುವಂತೆ ಇರುವ ಪಾತ್ರಗಳ ಅಭಿನಯ..ಅಭ್ಭಾ ವಾವ್..ಮೈನಾ ಚಿತ್ರದ ಕ್ಲೈಮ್ಯಾಕ್ಸ್ ಗೆ ಅದೇ ಸಾಟಿ…ಜೀವನದಲ್ಲಿ ಮೊದಲ ಬಾರಿಗೆ ಕಾಲೇಜು ಹುಡುಗರೆಲ್ಲಾ ಚಿತ್ರಮಂದಿರದಿಂದ ಅಳುತ್ತಾ ಹೊರಬರುವುದನ್ನು ನೋಡಿದೆ..ಇನ್ನೊಂದು ಸಲ ಅದೇ ಚಿತ್ರ ನೋಡಿದರೆ ನಾನೂ ಅಳುತ್ತೇನೋ ಏನೋ..ಅದೇನೋ ಗೊತ್ತಿಲ್ಲ ಇದೀಗ ೮:೩೦ರ ಷೋ ಮುಗಿಸಿ ರೂಮಿಗೆ ಬಂದವನನ್ನು ತಾನಾಗೇ ಬೆರಳುಗಳು ಕುಣಿಸುತ್ತಿವೆ…ಒಂದೊಳ್ಳೆ ಕನ್ನಡ ಚಿತ್ರ ನೋಡಿದ ಖುಷಿಯಲ್ಲಿ ಏನೇನೋ ಗೀಚುತ್ತಿವೆ…
ಕಳೆದೆರಡು ವಾರದಿಂದ ಪ್ರಾಜೆಕ್ಟಿನ ಗೊಂದಲದಲ್ಲಿ ಮುಳುಗಿದ್ದೆ….ಮಧ್ಯದಲ್ಲೊಂದಿಷ್ಟು ತೀವ್ರ ತರವಾದ ನಿರಾಸೆ,ಬಿಡದೇ ಕಾಡಿದ ಹತಾಶೆ….ಅದರಿಂದ ಸುಧಾರಿಸಿಕೊಳ್ಳುವುದೇ ಸ್ವಲ್ಪ ಕಷ್ಟವಾಯಿತು…ಸುಮ್ಮನೆ ಬೇಜಾರು ಕಳೆಯಲೆಂದು ಗೆಳೆಯ ಪ್ರಥ್ವಿಯ ಜೊತೆಗೂಡಿ “ಮೈನಾ” ಚಿತ್ರಕ್ಕೆ ಹೋಗಿದ್ದೆ…ತುಂಬಾ ವೈನಾದ ಚಿತ್ರವದು..ನನಗಂತೂ ಬಹಳ ಇಷ್ಟವಾಯ್ತು …ಈಗೇನೋ ಮನಸ್ಸು ಹಗುರವೆನಿಸಿದೆ …
ನಾಗಶೇಖರ್ ನಿರ್ದೇಶನದ,ರಾಜಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಆ ದಿನಗಳು ಚೇತನ್ ಹಾಗೂ ನಿತ್ಯಾ ಮೆನನ್ ನಾಯಕ- ನಾಯಕಿಯರು..ಉಳಿದಂದತೆ ತಾರಾಗಣದಲ್ಲಿ ಮಾಳವಿಕಾ,ತಬ್ಲಾನಾಣಿ.ಸುಮನಾ ರಂಗನಾಥ್,ಸುಹಾಸಿನಿ,ಅನಂತ್ ನಾಗ್ ಮುಂತಾದವರಿದ್ದಾರೆ… ಸಂಗೀತ ಜೆಸ್ಸಿಗಿಫ್ಟ್ ಹಾಗೂ ಹಿನ್ನೆಲೆ ಸಂಗೀತ, ಚಿತ್ರದಲ್ಲೂ ಬಂದು ನಗಿಸಿಹೋಗುವ ಸಾಧುಕೋಕಿಲ..ನನ್ನ ಮಟ್ಟಿಗೆ ಈ ಚಿತ್ರದ ಇನ್ನೊಂದು ಹೀರೋ ಚಿತ್ರದ ಛಾಯಾಗ್ರಾಹಕ ಸತ್ಯ ಹೆಗಡೆ..
ನಿಜ ….ದೂದ್ ಸಾಗರ ಜಲಪಾತವನ್ನು ಕ್ಯಾಮರಾ ಕಣ್ಣುಗಳಲ್ಲಿ ತೋರಿಸಿದ ಪರಿ ಮನಮೋಹಕ…ಅದನ್ನು ನೋಡಿದ ಕೂಡಲೇ ಒಮ್ಮೆ ಅಲ್ಲಿಗೆ ಹೋಗಲೇಬೇಕು ಅನ್ನಿಸದೇ ಇರಲಾರದು…ಹಸಿರು ಕಾನನದ ಮಧ್ಯ ಚೆಲ್ಲಿದ ಹಾಲಿನಂತೆ ಇಳಿಯುವ ಜಲಧಾರೆಯನ್ನು ತೋರಿಸಿರುವ ರೀತಿಯೇ ಮೊದಲಾರ್ಧದಲ್ಲಿ ನಿಮ್ಮನ್ನು ಸೆರೆಹಿಡಿಯುತ್ತದೆ…ಅದೇ ಸುಂದರ ಪರಿಸರದಲ್ಲಿ ಬಹುತೇಕ ಮೊದಲಾರ್ಧದ ಕಥೆ ಸಾಗುತ್ತದೆ…
ಮುಂದೆ ಅನೇಕ ತಿರುವುಗಳಲ್ಲಿ ಸಾಗುವ ಕಥೆಯಲ್ಲಿ ನಾಯಕ ಚೇತನ್ ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿದ್ದಾರೆ…ಪ್ರೀತಿಗಾಗಿ ತಹತಹಿಸುವ ಹುಡುಗನಾಗಿ,ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಗಂಡನಾಗಿ ,ಕೊನೆಗೆ ಹೊಡೆದಾಟದ ಸನ್ನಿವೇಶದಲ್ಲೂ  ಸಹ ಅವರ ಅಭಿನಯ ಇಷ್ಟವಾಗುತ್ತದೆ…ಇನ್ನು ವಿಶೇಷ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಕಿ ನಿತ್ಯಾ ಮೆನನ್ ತಮ್ಮ ಮುದ್ದು ನಗೆಯಿಂದ ಮೊದಲಾರ್ಧದಲ್ಲಿ ಇಷ್ಟವಾದರೆ,ನಂತರ ಕಥೆ ಸಾಗಿದಂತೆ ಕರುಳು ಕಿವಿಚುವಂತೆ ಅಭಿನಯಿಸಿದ್ದಾರೆ…ಇದರ ಜೊತೆಗೆ ಚಿತ್ರದಲ್ಲಿ ಪೋಲಿಸರ ಮಾನವೀಯ ಭಾವನೆಗಳಿಗೆ ಮಹತ್ವದ ಸ್ಥಾನ ನೀಡದ್ದು ಇಷ್ಟವಾಯಿತು.…
ಇನ್ನೂ ಬರೆದರೆ ಉತ್ಪ್ರೇಕ್ಷೆ ಎನ್ನಿಸಬಹುದೇನೋ…ಗೊತ್ತಿಲ್ಲ…ಆದರೇಕೋ ಮುಂಗಾರುಮಳೆ ಬಿಟ್ಟರೆ ಮನಸ್ಸಿಗೆ  ತುಂಬಾ ಕ್ಲೈಮಾಕ್ಸ್ ಈ ಚಿತ್ರದ್ದು… ಸುಂದರವಾದ ಹಾಡುಗಳು,ಅಂದದ ಲೊಕೇಶನ್ ಗಳಿರುವ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದು ನನ್ನ ಅಭಿಪ್ರಾಯ…ಸಮಯವಿದ್ದರೆ ಖಂಡಿತ ಹೋಗಿ ನೋಡಿ…ನೋಡಿ ಖುಷಿ ಪಡಿ…
ಓದಿ,ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು..
ನಮಸ್ತೆ 

Wednesday, February 13, 2013

ಹಿಂಗೊಂದು ಪ್ರೇಮ ಪತ್ರ.


ಗೆ,
ಬರಿ ಹೆಸರಲ್ಲಿ ಬಣ್ಣಿಸಲಾಗದ ನನ್ನ ಹುಡುಗಿಗೆ.

ಇಂದ,
ಶಬ್ಧಗಳೆಲ್ಲಾ ಬತ್ತಿ ಬರಿದಾದ ನಿನ್ನ ಹುಡುಗನಿಂದ.

ಎಯ್,
                   ವಿಷಯ:ವಿಷಯವಿಲ್ಲದೇ ದಿನವಿಡೀ ಹರಟಬಹುದು ಕಣೆ,ವಿಷಯವಿದ್ದರೇ ತುಸು ಕಷ್ಟ.
 ಗೊತ್ತು ಕಣೆ ನಾ ನಿನಗೆ,ನೀ ನನಗೆ.ಆದರೇನೋ ಹೇಳಬೇಕೆನಿಸಿದೆ
ನಿನಗೆ ಗೊತ್ತಿರುವುದನ್ನೇ ನಾ ,ಪದಗಳಲ್ಲಿ ಬರೆಯಬೇಕೆನಿಸಿದೆ…..
ದಿನಾ ತಡರಾತ್ರಿಯವರೆಗೂ ಮಾಡುತ್ತಿದ್ದ ಮೆಸ್ಸೇಜಿನಲ್ಲೇ ನಾ ಹೇಳಬಹುದಿತ್ತೇನೋ ನಾನು,
“hmm…..” ,
“then…”,
 “wassup????? “ ಗಳ ಬದಲು..
ಆದರೇಕೋ ಬರೆವ ಅಕ್ಷರ ನನ್ನದಲ್ಲವೆನಿಸಿದೆ
ನಗುವಾಗಲೂ,ಅಳುವಾಗಲೂ ಒಂದೇ ಥರ ಇರುವ ಅಕ್ಷರ ಬೇಡವೆನಿಸಿದೆ
ಇನ್ನು ಫೇಸ್ಬುಕ್ಕು,ಜೀಮೇಲುಗಳಿವೆಯೇನೋ ನಿಜಆದರೆ ಅವೂ ನನ್ನದಲ್ಲವೆನಿಸಿದೆಯಾರೋ ಕದ್ದು ಕೇಳುವ ಭೀತಿ ನನ್ನ ಕಾಡಿದೆ
ನೋಡು ಹುಡುಗಿ ಇದು ನಿನಗಾಗಿನಿನ್ನೊಬ್ಬಳಿಗಾಗಿ….
ಅದೇನೋ ಗೊತ್ತಿಲ್ಲ ಕಣೆ..
ನನ್ನ ಕೈಯ್ಯಾರೆ, ನನ್ನಕ್ಷರದಲೆ ಮೊದಲ ಪ್ರೇಮಪತ್ರವ ಬರೆಯಬೇಕೆನಿಸಿದೆ..
ನೂರಾರು ಬಾರಿ ಗೀಚಿ,ಹತ್ತಾರು ಬಾರಿ ಹರಿದು,ಮತ್ತೆ ಮತ್ತೆ ಬರೆಯಬೇಕೆನಿಸಿದೆ
ಕೈ ನಡುಗಬಹುದು...ಅಕ್ಷರವು ಕಾಗೆ ಕಾಲು ಗುಬ್ಬಿ ಕಾಲಾಗಬಹುದು,ನಿನ್ನೊಲವ ಕಂಪನದಿಂದ..
ಅರ್ಥವಾಗುವುದು ಆದರೂ ಅಲ್ಲವೆ ನಿನಗೆ????
ಛೇ,ಬಿಡೆ….ಒಂದೆರಡು ಬಾರಿ ಭೂಮಿ ಆಕಾಶ ನೋಡಿ,ತಲೆಕೆರೆದುಕೊಂಡಾಗಲೇ, “ಯಾಕೋ??Take it Easy “ ಅಂದವಳಲ್ಲವೇ ನೀನು??… J
ನಿನಗೆಲ್ಲವೂ ಗೊತ್ತು,ಆದರೂ ನಾನೇ ಹೇಳಬೇಕು ಅಲ್ವಾ??
ಸರಿಗಂಡು ಹುಳುವಾಗಿ ನಾನೇ ಹೇಳುತ್ತಿದ್ದೇನೆ ಕೇಳು
           ಪೀಯು. ಹುಡುಗಿಯರ ಗ್ವಾಲೆಯಲಿ,ಕಣ್ಣು ಕುಕ್ಕಿದವಳು ನೀನು
                ಕುಡಿಮೀಸೆ ಮೂಡುವಾಗಲೇ ,ನನ್ನವಳೆನಿಸಿದವಳು ನೀನು
                ಹೂ-ದುಂಬಿಯ ಕವನದಲಿ,ಹೂವಾಗಿ ಕಂಡವಳು ನೀನು
                ಮನದುಂಬಿ ಬಂದ ಮಾತೆಲ್ಲ,ಕೇಳಿಸಿಕೊಂಡವಳು ನೀನು

ಛೇ,ಇವಷ್ಟೇ ಹೇಳಿದರೆ ಯಾವುದೋ ಹಳೆಯ ಕಥೆಯಂತಿದೆ ಅಲ್ವಾ???
ಚೆನ್ನಾಗಿ ಕಂಡ ಐಸ್ ಕ್ರೀಮೆಲ್ಲಾ ತಿನ್ನಲು ಬೇಕೆನಿಸುವ ವಯಸ್ಸಿನಲ್ಲಿ ಹಿಮವಾಗಿ ಸೇರಿ ಒಂದೆರಡು ತಿಂಗಳಿಗೆ ಕರಗಿ ಹೋದ ಕಥೆಯಲ್ಲ ಕಣೆ ಇದುಆ ನಿನ್ನ ಸೆಳೆತ ಧ್ರುವ ಪರ್ವ ಬಿಂದು..ಕಾಲವೆಷ್ಟೇ ಆದರೂ ನೀರೊಡೆಯದು ಕಣೆ ಅದು,ನೀರೊಡೆಯದು
ಚಾಕಲೇಟಿನ ಕನಸು ಮುಗಿದು ಹೊಸ ಹೊಸ ಬಣ್ಣ ಬಣ್ಣದ ಕನಸು ಬೀಳುವ ಹೊತ್ತಲ್ಲವಾ ಅದು???
ಅದೆಷ್ಟು ಬಾರಿ ಹೇಳಿದ್ದೆ,ನೀನಗೆ ಆ ನೀಳಕೂದಲ ಬಿಳಿಗೆಂಪು ಹುಡುಗನಾ ಕನಸನ್ನ
ಆ ಕನಸ ಕಥೆ ಕೇಳಿ ಅಲ್ಲವೇ ನಾನೂ ಉದ್ದ ಕೂದಲು ಬಿಟ್ಟಿದ್ದು
ರಜೆಯಲ್ಲಿ ಮನೆಗೆ ಹೋದಾಗ ಅಪ್ಪನ ಹತ್ತಿರ ಬೈಸಿಕೊಂಡಿದ್ದು
ಮರುದಿನ ಮಿಲಿಟರಿ ಕಟ್ಟು ಮಾಡಿಸಿಕೊಂಡು ಬಂದಾಗ ಅದೆಷ್ಟು ನಕ್ಕಿದ್ದೆ..”ಯಾರೋ ನೀನು?” ಅಂತೆಲ್ಲಾ ಕೇಳಿ ಅದೆಷ್ಟು ರೇಗಿಸಿದ್ದೆ.
ಮುಂದೆ ನಾ ವಿಜ್ನಾನಕೆ ಸಲಾಮು ಹೊಡೆದು ಕಲೆಯ ಹಾದಿ ಹಿಡಿದೆನಲ್ಲವೇ???
ಡಿಗ್ರಿಯ ಆ ದಿನಗಳುಏನೆಂದು ಹೇಳಲಿ ನಾ

    ತನ್ನ ಹೆಸರಲ್ಲಿ ಪುಸ್ತಕವ ತಂದು ಓದೆಂದು ಕೊಟ್ಟವಳು ನೀನು
                ನನ್ನಯಾ ಯೋಚನೆಗಳಿಗೆ ಸ್ಪೂರ್ತಿಯ ಸರಕಾಗಿ ನಿಂತವಳು ನೀನು
                ನನ್ನೆಲ್ಲ ಪುಟಗೋಸಿ ಬರಹವಾ ಓದಿ, “ ನಾ ನಿನ್ನ ಅಭಿಮಾನಿಎಂದವಳು ನೀನು
                ನಾ ಎಲ್ಲ ಬಲ್ಲವನೆಂದು ಕೊಚ್ಚಿಕೊಂಡಾಗ,ಬಾಯ್ತುಂಬ ಬೈದವಳು ನೀನು
ಅದ್ಯಾಕೋ ಗೊತ್ತಿಲ್ಲ ಕಣೆ..
ಎಲ್ಲ ಹೇಳುವಂತೆ ಕಾಲೇಜಿನಲ್ಲಿಕ್ರಷ್”,”ಲವ್ ಅಟ್ ಫಸ್ಟ್ ಸೈಟ್ಅನ್ನುವುದೆಲ್ಲ ಆಗಲೇ ಇಲ್ಲ ನನಗೆ….
ಮೊದಲೇ ಆಗಿ ಬಿಟ್ಟಿತ್ತೇನೋ ಬಿಡು,ನನಗೇ ಗೊತ್ತಿಲ್ಲದಂತೆ
ನಿನಗಿಂತ ಚೆನಾಗಿರುವವರು ಕಾಣಲಿಲ್ಲವಂತೇನಲ್ಲಆದರೇಕೋ ನಿನ್ನಷ್ಟು ಕಾಡಿಸಲಿಲ್ಲ ಕಣೆ ಹುಡುಗಿ ಅವರ್ಯಾರೂ..ಬಂದು ಹೋಗಿ ಬಿಟ್ಟರು ಅಷ್ಟೇ
ಹಮ್..ನನಗೂ ಗೊತ್ತು ,ನಿನಗೂ ಗೊತ್ತು ಆದೇಕೆ ಅವಾಗ ಒಂದು ವಾರ ಮಾತು ಬಿಟ್ಟಿದ್ದೆವೆಂದು
ಬಿಟ್ಟಿರಲಾರದೇ ಮತ್ತೆ ಜೊತೆಯಾದೆವೆಂದು
ಅದೆಷ್ಟು ಚೆನ್ನ ಹುಡುಗಿ ಗೆಳತಿಯ ಗುಂಪೊಡನೆ ನೀ ಸಿಕ್ಕರೆ ,ಸುಮ್ಮನೆ ಪರಿಚಯದ ನಗೆಯಾಡಿ ನಾ ಹೋಗುವಂತದ್ದು
ಸ್ಟೇಡಿಯಮ್ಮಿನ ಮೇಲುಗಡೆ ಇಬ್ಬರೇ ಇರುವಾಗ ಗಂಟೆಗಟ್ಟಲೇ ಊರ ಮೇಲಿನ  ಸುದ್ದಿಯೆಲ್ಲಾ ಹಲುಬುವಂತದ್ದು
ಬೇಲಿಯ ರಾಕ್ಷಸ ಪರಂಗಿ ಎಲೆಯ ಮೇಲೆ ಇಬ್ಬರ ಹೆಸರನ್ನೂ ಗೀರುವಂತದ್ದು….
ಬೇರೆಯವರಿಗೆ ಕಾಣಿಸುವುದೆಂದು ಅಲ್ಲೇ ಸಿಗಿದು ಹಾಕುವಂತದ್ದು
ಅದೆಷ್ಟು ನೆನಪುಗಳೋ ಹೀಗೇ ಹೇಳುತ್ತಾ ಹೋದರೆ

                          ಕಣ್ಣಲ್ಲೇ ಕೂತಿದ್ದ ಕಣ್ಣೀರ ಗುರುತಿಸಿ,ಅದನೊರೆಸಿದವಳು ನೀನು
                                ದಾರಿತಪ್ಪಿದವನೆಂದು ಮಂಕಾಗಿ ಕುಳಿತಾಗ,ಹಾದಿ ನೆನಪಿಸಿದವಳು ನೀನು
                                ಆ ಮೂರು ವರುಷವನು,ಮೂರು ಮರೆಯದ ಕನಸಾಗಿಸಿದವಳು ನೀನು
                                ಕೊನೆಯ ದಿನ ಉಟ್ಟ ಸೀರೆಯಲಿ ,ನನ್ನ ಮದುವೆಕೂಸಾಗಿ ಕಂಡವಳು ನೀನು

ಹಿಂಗಾಡಿ ಹಂಗಾಡುವುದರೊಳಗೆ ಕಾಲೇಜೇ ಮುಗಿಯಿತಲ್ಲೆ
ನೀ ಮುಂದೆ ನಿನ್ನಿಷ್ಟದ ಮಾಯಾನಗರಿಯ ಸೇರಿದೆಯಲ್ಲೆ
ನಾ ಉಳಿದೆ ಇಲ್ಲೆ
ನೋಡೆದೆ ಕಣೆ ನಾ ಡಿಗ್ರಿ ಬಳಿಕ ಜಗತ್ತನ್ನ ಮತ್ತೆಅದೆಷ್ಟು ಬದಲಾವಣೆಗಳು ಅಬ್ಬಾ
ಅದಾವ ಗೆರೆಯು ಕೈಗೂಡಿತೋ,ಬರೆಯುವುದೊಂದು ನನ್ನದಾಯಿತು..
ಬರೆದು ಹರಿದು,ಹರಿದು ಬರೆದ ಬರಹಗಳು ದೊಡ್ಡವರಿಗಿಷ್ಟವಾಯ್ತು
ಮತ್ತೆ ಅಲೆದೆ,ಬರೆದೆ..ಓದಿದೆ,ಬರೆದೆ..ಅಲೆದೆ..
ಓದೇ ಅನ್ನವಾಯ್ತುಪುಸ್ತಕಗಳೇ ಉಸಿರಾಯ್ತುಅನುಭವವೇ ಆಸ್ತಿಯಾಯ್ತುಬರವಣಿಗೆ ವ್ರತವಾಯ್ತು
ಕೊನೆಗೊಂದು ದಿನ ಕೈ ಹಿಡಿಯಿತು ಅದೂ ನಿನ್ನಂತೆ
ಈಗೇನೋ ಒಂದಿಷ್ಟು ಪ್ರಶಸ್ತಿ ಅವು ಇವು ಕಪಾಟಿನಲ್ಲಿದೆ
ಮನೆಗೆ ಸಾಕಾಗುವಷ್ಟು ದುಡಿವ ಕೆಲಸ ಕೈಯ್ಯಲ್ಲಿದೆ
ನಾಳೆಗೊಂದಿಷ್ಟು ದುಡ್ಡು ಬ್ಯಾಂಕಿನಲ್ಲಿದೆ
ಆದರೆ……..ನೀನು????
ಬರಿಗಣ್ಣಿನಿಂದ ನಿನ್ನ ನೋಡದೇ ಎಷ್ಟು ತಿಂಗಳಾಯ್ತೇ??ಇಪ್ಪತ್ತಿರಬೇಕು ಅಲ್ವಾ??..
ಏನು ಮಾಡಲಿ ಹೇಳು..ನಾನಿರುವುದು ಇದೇ ಕೊಂಪೆಯಲ್ಲಿ
ನೀ ಇರುವೆ ಆ ಮಾಯಾನಗರಿಯಲಿ..
ಇರಲಿ ಹುಡುಗಿ ರಾತ್ರಿ ಫೋನಿನಲ್ಲಾದರೂ ಸಿಗುವೆಯಲ್ಲಾ ಅದೇ ಸಂತೋಷ ನನಗೆ
ಶನಿವಾರ,ರವಿವಾರ ನೆಟ್ಟಿನಲ್ಲಿ ಸಿಕ್ಕು,ವಾರದ ಸುದ್ದಿಯಲ್ಲಾ ಖರ್ಚು ಮಾಡುವೆವಲ್ಲಾ ಅದೇ ಖುಷಿ ಎನಗೆ..
ಆದರೂ ಯಾಕೋ ನೀನು ಬೇಕೆನಿಸಿದೆ
ನೀನಿಲ್ಲದೇ ಈ ಜೀವ ಅಪೂರ್ಣವೆನಿಸಿದೆ
ಬಾ ಹುಡುಗಿ……
ಸುಮ್ಮನೆ ಎಲ್ಲರಂತೆ ನಾಳೆಯ ಬಗ್ಗೆ ನಾ ಕನಸ ಕಟ್ಟಿ ಹೇಳಲಾರೆ ಇಲ್ಲಿ..ಅದು ನನ್ನೊಬ್ಬನ ಕನಸಾದೀತು ನಿನ್ನ ಕೇಳದೇ..
ಜೊತೆಗೂಡೆ ಕನಸ ಕಟ್ಟುವಾ ಬಾ
ಜೊತೆಗೂಡೆ ಅದನು ನನಸಾಗಿಸುವಾ ಬಾ..
ಕನಸ ನನಸಾಗಿಸಲು ದುಡಿದು,ದುಡಿದು ಜೀವ ತೈಯ್ಯುವಾ ಬಾ
ಒಟ್ಟಿಗೇ ದೇವರಿಗಿಡುವ ಗಂಧ,ಚಂದನವಾಗುವಾ ಬಾ

ಏಯ್ ನೋಡೆನೀ ನನಗೆ ಪರಿಚಯವಾಗಿ ಹತ್ತು ವರುಷವಾಯ್ತು..
ನನ್ನವಳೆಂದು ನಾ ತಿಳಿದೂ ಹತ್ತು ವರುಷವಾಯ್ತು..
ಆದರೇಕೋ ಎಂದೂ ಪ್ರೇಮಪತ್ರವ ಬರೆಯಬೇಕೆನಿಸಿರಲಿಲ್ಲ..
ಇಂದೇಕೆ ಬರೆಯ ಹೊರಟೆ?? ಅದೂ ಗೊತ್ತಿಲ್ಲ
ಗೊತ್ತಿದ್ದು ನಾ ಮಾಡಿದ ಕೆಲಸ ಯಾವುದಿದೆ ಬಿಡು!!!
                                     
          ನನ್ನೆಲ್ಲ ಎಡಬಲವ ಬಲ್ಲವಳು ನೀನು.
                                                ನನ್ನೊಲವ ಕಲರವದ ಸಂಗೀತ ನೀನು.
                                                ನನ್ನದೆಯ  ಬಡಿತವಾಗಿಹೆ ನೀನು,
                                                ಹೇಳಲಿ ಇನ್ನೇನು???
                                                ಒಂದಾಗಿ ನಡೆಯೋಣ ಬಾ ಇನ್ನು
ಇದುವೆ ಎನ್ನ ಪ್ರೇಮ ನಿವೇದನೆ
ಅಲ್ಲಲ್ಲ ಆತ್ಮ ನಿವೇದನೆ

ಸ್ಥಳ: ಒಂದಿಷ್ಟು ಹೃದಯದಿಂದ,ಒಂದ್ಚೂರು ನೆನಪಿನಿಂದ                                          ಇತಿ ನಿನ್ನ ನಿನ್ನವ,
ದಿನಾಂಕ: ನೀ ಕನಸಲ್ಲಿ ಬಂದ ಅನುದಿನ                                                            ---------


=============================================================================================
*********************************************************************************************
ಶಬ್ಧಾರ್ಥ:ಗ್ವಾಲೆ=ಗುಂಪು,ಕಾಗೆ ಕಾಲು ಗುಬ್ಬಿ ಕಾಲು ಅಕ್ಷರ =ಸ್ಪುಟವಾಗಿಲ್ಲದ ಕೈಬರಹ,ಹಲುಬು,=ಮಾತನಾಡು
********************************************************************************************

ಹಮ್... ಇದು ಪಕ್ಕಾ ದಾರಿ ತಪ್ಪಿ ಬಂದ ಪ್ರೇಮ ಪತ್ರ!!!!
ಗಾಬರಿ ಆಗ್ಬೇಡಿ...
ಆಗಿದ್ದಿಷ್ಟೇ...
ಪ್ರಜಾವಾಣಿಯಲ್ಲೊಂದು ಪ್ರೇಮ ಪತ್ರ ಬರೆಯುವ ಸ್ಪರ್ಧೆ ಇದೆ ಅಂತಾ ಬ್ಲಾಗಿಗ ಮಿತ್ರ ಶ್ರೀ ವತ್ಸ ಕಂಚೀಮನೆಯವರು ತಿಳಿಸಿದ್ದರು ಡಿಸೆಂಬರಿನಲ್ಲಿ..."ಹುಂ" ಎಂದವನಿಗೆ ಮತ್ತೆ ನೆನಪಾಗಲಿಲ್ಲ ಅದು...ಮತ್ತೆ ಜನವರಿ ಮಧ್ಯದಲ್ಲೆಲ್ಲೋ ಸುಮನಕ್ಕ ಮೆಸ್ಸೆಜು ಮಾಡಿ "ಹಿಂಗಿದೆ ಕಣೊ,ಬರ್ಯದಾದ್ರೆ ಬರಿ" ಎಂದು ಅಡ್ರೆಸ್ಸನ್ನೂ ಕಳಿಸಿದ್ಲು...
ಇಲ್ಲಪ್ಪಾ ಮನೆಯಲ್ಲಿ ಏನನ್ನೂ ಬರೆಯಲು ಮನಸ್ಸೇ ಬರಲಿಲ್ಲ..ಅದೇಕೋ ಗೊತ್ತಿಲ್ಲ...ತೀರಾ ಅರಾಮವಾಗಿದ್ದೇನೆನಿಸಿದಾಗ ಬರೆಯಬೇಕೆನಿಸುವುದೇ ಇಲ್ಲ...ಮತ್ತೆ ವಾಪಸ್ಸು ಬಂದೆ ನೋಡಿ ಪ್ರಾಜೆಕ್ಟು,ಸೆಮಿನಾರು ಅಂತಾ ಚೂರು ತಲೆ ಬಿಸಿ ಶುರುವಾಯ್ತು..ಅದರ ಮಧ್ಯೆ ಒಂದು ಅಲ್ಪ ವಿರಾಮ ಈ ಬರಹ...ಅದಾವತ್ತೋ ಒಂದು ದಿನ ಮನೆಯಲ್ಲಿ ಕಷ್ಟಪಟ್ಟು ಒಂದು ಪುಟ ಬರೆದಿದ್ದೆ...ಅದನ್ನು ನಿನ್ನೆ ಪೂರ್ತಿಗೊಳಿಸಿ ಇವತ್ತು ನಿಮ್ಮೆದುರು ಇಟ್ಟಿದ್ದೇನೆ ಅಷ್ಟೇ...
ನನಗೆ ಈ ಪ್ರೇಮ ಪತ್ರ ಬರೆಯುವುದು ಓದುವುದೆಲ್ಲಾ ಹೊಸದು...
ಬರೆಯುವುದು ಕಡೆಗಾಯ್ತು,ಹಣೆಬರಕ್ಕೆ ಬರೆದ ಪತ್ರವನ್ನು ಓದಿದವನೂ ಅಲ್ಲ ನಾನು...
ಒಂದು ಪ್ರಯತ್ನ..
ಎಂದಿನಂತೆ ಒಂದಿಷ್ಟು ಕಲ್ಪನೆ..
ಬೇಡ ಬೇಡಾ ಅಂದರೂ ನುಸಿದು ಬರುವ ಕೆಲ ಶಬ್ಧಗಳು...
ಎಂದಿನಂತೆ ನೋಡಿ,ಹೆಂಗಿದೆ ಅಂತಾ ಹೇಳ್ತೀರಲ್ವಾ???
ಹಾಂ ನಿಮ್ಮ ಪ್ರೇಮ ಪತ್ರದ ಪ್ರಸಂಗಗಳೇನಾದ್ರೂ ಇದ್ರೂ ಬರಿರಿ ಒಂದಿಷ್ಟು ದಯವಿಟ್ಟು,....
ಕಾಯ್ತಿರ್ತೀನಿ ನಿಮ್ಮ ಕಮೆಂಟ್ ಗಳಿಗೆ...