Tuesday, December 9, 2014

ಸಿಗ್ನಲ್ಲು ಬೀಳುವಂತಿದೆ (ಕವನ:ಸವಾರಿ)

ನಮಸ್ಕಾರ ಸ್ನೇಹಿತರೇ..
ಟ್ರಾಫಿಕ್ಕಿನ ಜಂಜಾಟ ಎಲ್ಲರಿಗೂ ಗೊತ್ತಿರುವಂಥದ್ದೇ..ಅದನ್ನೇ ನನ್ನೊಳಗಿನ ಒಂದಿಷ್ಟು ಗೊಂದಲದೊಂದಿಗೆ ,ಹೆದರಿಕೆಯೊಂದಿಗೆ ಸಮೀಕರಿಸಿ ಬರೆಯುವ ಪುಟ್ಟ ಪ್ರಯತ್ನವಿದು..ದಯಮಾಡಿ ಓದಿ,ವಾಚನ ಕೇಳಿ,ಅನಿಸಿಕೆ ಹೇಳಿ ಪ್ರೋತ್ಸಾಹಿಸಿ..ತಪ್ಪು-ಒಪ್ಪು ಹೇಳಿ ಬೆಳೆಯಲು ಸಹಕರಿಸಿ....ಹೇಳ್ತಿರಾ ಅಲ್ವಾ ?? ಇಲ್ಲಿದೆ ನೋಡಿ ಕವನ ..

ಸವಾರಿ
==========================
ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ  ನುಗ್ಗಿ ಸಾಗುವುದೋ  ತಿಳಿಯದಾಗಿದೆ

ಅತ್ತಿತ್ತ ನೋಡದೇ ಬಂದಹಾಗೇ ಗುಡುಗುಡು ಓಡುತ್ತಲೇ ಇದ್ದರೆ
 ಬರ್ರನೆ ತೂರಿ  ಬಂದವನ ಅಡಿಗೆ ಸೇರಿ ಅಪ್ಪಚ್ಚಿಯಾಗುವ ಭೀತಿ.
ಎಡಬಲ ನೋಡಿ, ನೋಡಿಕೊಂಡು ಮೆಲ್ಲಗೆ ನುಸಿಯಹೋದರೆ,
ಹಾ!ಪಶೆ ಬಿದ್ದೆ ಎಂದು ಅಣಕಿಸುತಿದೆ ಆ ಮಾವನ ನೋಟದ ರೀತಿ.

ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ  ನುಗ್ಗಿ ಸಾಗುವುದೋ  ತಿಳಿಯದಾಗಿದೆ

ಈ ಉರಿಉಚ್ಚೆಯರ್ಜಂಟು ಸಲ್ಲದು ನಿಂತು ಹೋಗುವಾ ಎಂದೆಣಿಸಿ
ಬಂದುಮಾಡಿದರೆ ಗಾಡಿ ,ನಿಂತದ್ದು ನಿಂತೇ ಹೋಗುತ್ತದೆ ಆತ್ಮಲಿಂಗದಂತೆ.
ಹಿಂದಿನವರ ಹಾರನ್ನುಗಳೆಲ್ಲಾ ಯಥಾಶಕ್ತಿ ಕಿರುಚಿಕೊಳ್ಳತೊಡಗುತ್ತವೆ
ವೈರಿಯ ನಡುಮುರಿಯಲು ಹಪಹಪಿಸುತಿಹ ಸೈನಿಕರ ಯುದ್ಧಘೋಷದಂತೆ.

ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ  ನುಗ್ಗಿ ಸಾಗುವುದೋ  ತಿಳಿಯದಾಗಿದೆ

ಕದ್ದುಮುಚ್ಚಿ ನುಸುಳಿದರೆ ಗಳಿಗೆ ಗಳಿಗೆಗೂ ಅದೇನೋ ಹೆದರಿಕೆಯಾಗುತ್ತದೆ
ತಣ್ಣಗೆ ಬಿಳಿಗೆರೆಯ ಮೇಲೆ  ನಿಶ್ಚಿಂತೆಯಿಂದ ನಿಲ್ಲಬಾರದಿತ್ತೇ? ಅನ್ನಿಸುತ್ತದೆ
ನಿಂತಲ್ಲಿ,ರೊಯ್ಯ್ಯ ಎಂದು ಹೋಗುವವರ ನೋಡಿ ಥೋ ಹೊಟ್ಟೆಉರಿಯುತ್ತದೆ
ಉಲ್ಟಾಬರುವ ಕೆಂಪುನಂಬರು,ವ್ಯರ್ಥವಾಯಿತೀಕ್ಷಣವೆಂಬುದ  ನೆನಪಿಸುತ್ತದೆ .

ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ  ನುಗ್ಗಿ ಸಾಗುವುದೋ  ತಿಳಿಯದಾಗಿದೆ

-
ಚಿನ್ಮಯ ಭಟ್ಟ
೦೯/೧೨/೧೪

ಪಶೆ ಬೀಳು-ವ್ಯೂಹಕ್ಕೆ ಸಿಲುಕು,ಮೋಸ ಹೋಗು
ಉರಿಯುಚ್ಚೆಯರ್ಜಂಟು-ತೀರಾ ಅರ್ಜಂಟು ಎನ್ನುವ ಅರ್ಥದಲ್ಲಿ..


ವಾಚನದ ಪ್ರಯೋಗ ಇಲ್ಲಿದೆ :




ಹುಂ....ಏನ್ ಅನ್ನಿಸ್ತು ?? ದಯಮಾಡಿ ಹೇಳಿ ಕಾಯ್ತಿದೀನಿ ::)...

Saturday, November 8, 2014

ಮಣ್ಮುಕ ನಜರು

ನಮಸ್ಕಾರ ಗೆಳೆಯರೆ...ಹೆಂಗಿದೀರಾ ?
ಜೀವನದಲ್ಲಿ ಉದರನಿಮ್ಮತ್ತ ಮಾಡುವ ಕಾರ್ಯಗಳು ಮತ್ತು ಮನಸ್ಸಿಗೆ ಹಿತಕೊಡುವಂಥ ಕೆಲಸಗಳು ಇವುಗಳ ನಡುವಿನ ತಿಕ್ಕಾಟದ ನಡೀತಾನೇ ಇರತ್ತೆ...ನಾವು ಮಾಡುತ್ತಿರುವುದು ಒಂದು ,ಅಂದುಕೊಳ್ಳುವುದು ಇನ್ನೊಂದು...ಏನೋ ಪರಿಸ್ಥಿತಿ ಎಂದು ಕೊಂಡು ಮುಂದುವರೆಯುತ್ತಿರುತ್ತೇವೆ..ಮನಸ್ಸಿಗೆ ಖುಷಿ ಕೊಡುವ ಕೆಲಸಗಳನ್ನು ಅವಕಾಶ ಸಿಕ್ಕಾಗಿ ಮಾಡಿ ಉಲ್ಲಸಿತರಾಗ್ತೇವೆ,ಸಿಗದೆ ಹೋದಾಗ ನಿರಾಸೆಗೊಳ್ತೇವೆ...ಹೀಗಾಗಿ ಇವುಗಳನ್ನೇ ಇಟ್ಟುಕೊಂಡು ನನ್ನ ವಿಚಾರವನ್ನು ಕವನದ ರೂಪದಲ್ಲಿ ಹೇಳುವ ಪ್ರಯತ್ನ...ದಯಮಾಡಿ  ಓದಿ,ಎಂದಿನಂತೆ ತಪ್ಪು-ಒಪ್ಪು ತಿಳಿಸಿ,ಅನಿಸಿಕೆಗಳನ್ನಾ ಹಂಚಿಕೊಳ್ತೀರಾ ಅಲ್ವಾ ?? ಕಾಯ್ತಿರ್ತೀನಿ :)..


ಜಡವು ಬದುಕಿನ ಹೊಣೆಯು,ಬಾಳ ಚೇತನ ಚಿಗುರು
ಬೂಮರಂಗಿನ  ನಡಿಗೆ , ಬಿಡದು ಮಣ್ಮುಕ ನಜರು

ಜಡವೆಂದರೆ ಚಿರ ಸ್ಥಿರವಲ್ಲಾ ಜಗ,
ಪಚನ ಪ್ರಚೋದಿತ ಪರಿಭ್ರಮಣೆ.
ಸೃಷ್ಟಿ-ಶೈಶವ-ಯೌವನ-ಮುಕ್ತಿಯ
ಪುನರಪಿ ಪುನರಪಿ ಅನುಕರಣೆ||ಜಡವು||

ಛೇದನ-ಬಂಧನ ಕರ್ಮಾಲಿಂಗನ
ಹೊಸದದು ಏನಿದೆ ನಡುವಿನಲಿ ?
ಹೊಸದದು ಹಳೆಯದು,ಹಳೆಯದೇ ಹೊಸದು
ಸಾಗುವ ಸಮಯದ ತಿರುವಿನಲಿ||ಜಡವು||

ಕನಲಿದ ಮನದಾ ಪುನರುತ್ಥಾನಕೆ
ಅವತರಿಸುವುದು ಚೇತನವು .
’ಅಲ್ಲ’ವ ಮರೆಸಿ,ಬೆಲ್ಲವ ತೋರಿಸಿ
ಕಲ್ಲನು ಕಡೆಸುವ ಸಾಧನವು ||ಜಡವು||

ನೊಗವದು ವೀಣೆ ಮೀಟುವುದರಿಯಲು
ನೂರಿದೆ ರಾಗವು ತಂತಿಯಲೇ.
ಬೇಸರ ಜೀಕುವ ಅರಿವಿನ ಹಾಣೆಯು
ಅಡಗಿದೆ ಒಳಮನೆ ಜಂತಿಯಲೇ||ಜಡವು||

ಜಡವು ಬದುಕಿನ ಹೊಣೆಯು,ಬಾಳ ಚೇತನ ಚಿಗುರು
ಬೂಮರಂಗಿನ ನಡಿಗೆ , ಬಿಡದು ಮಣ್ಮುಕ ನಜರು

-ಚಿನ್ಮಯ ಭಟ್ಟ



ಟಿಪ್ಪಣಿ:

ಮಣ್ಮುಕ ನಜರು : ಎರಡು ತಲೆಗಳಿರುವ ಹಾವಿನ ದೃಷ್ಟಿ.. ನಮ್ಮನೆ ಕಡೆ ಈ ಎರಡು ಮುಖದ ಹಾವಿಗೆ  ಮಣ್ಮುಕ ಹಾವು ಎಂದು ಕರೆಯುವುದನ್ನು ಬಲ್ಲೆ..ಹಾಗಾಗಿ ಬಳಸಿಕೊಂಡೆ.. ಇಲ್ಲಿ  ಇದನ್ನು ಯಾವಾಗಲೂ ಪರ-ವಿರುಧ್ಧವಾಗಿ ಬರುವ  ಯೋಚನೆಗಳಿಗೆ ಸಮೀಕರಿಸಬಹುದು...

ಬೂಮರಂಗು : BOOMRANG ,ಅಸ್ತ್ರೇಲಿಯಾದ ಆದಿವಾಸಿಗಳು ಬಳಸುತ್ತಿದ್ದ ಆಯುಧ..ಬೇಟೆಗಾರನ ಕೈಯ್ಯಿಂದ ಹೊರಟು ಬೇಟೆಯಾಡಿ ವಾಪಸ್ಸು ತಿರುಗಿ ಬೇಟೆಗಾರನ ಕೈಸೇರುತ್ತಿದ್ದುದು ಇದರ ವಿಶೇಷ. ಇಲ್ಲಿ ನಮ್ಮ ಪ್ರಯತ್ನಗಳೆಲ್ಲಾ ಏನೇ ಇದ್ದರೂ ಕೊನೆಗೆ ನಾವು  ಮೊದಲಿದ್ದಲ್ಲಿಗೆ ತಲುಪುವುದರ ಸಂಕೇತವಾಗಿ ಅರ್ಥೈಸಿಕೊಳ್ಳಬಹುದು...

ಪಚನ ಪ್ರಚೋದಿತ ಪರಿಭ್ರಮಣೆ :ಪಚನ ಅಂದರೆ ಜೀರ್ಣವಾಗುವುದು .ಪರಿಭ್ರಮಣೆ ಅಂದರೆ ಸುತ್ತುವುದು..ಹೊಟ್ಟೆಪಾಡಿಗಾಗಿ ಮಾಡುವ ಕಾರ್ಯಗಳು ಎಂದು ತಿಳಿದುಕೊಳ್ಳಬಹುದು.

ಪುನರಪಿ ಪುನರಪಿ: ಮತ್ತೆ ಮತ್ತೆ

ಕನಲಿದ : ಬೇಸರಗೊಂಡ

ಪುನರುತ್ಥಾನ : ಮರು ಹುಟ್ಟು,ಮತ್ತೆ  ಅಸ್ತಿತ್ವಕ್ಕೆ ಬರುವುದು,ಪುನಃ ಶುರುವಾಗುವ ಬೆಳವಣಿಗೆ

ಬೇಸರ ಜೀಕುವ  :ಜೀಕು,ಜೋರಾಗಿ ತಳ್ಳು ,ನೂಕು.

ಅರಿವಿನ ಹಾಣೆಯು: ಹಾಣೆ -ಕೋಲು,ದಾಂಡು..ನಮ್ಮೂರಿನಲ್ಲಿ ಗಿಲ್ಲಿ-ದಾಂಡುವಿಗೆ ಹಾಣೆ-ಗಿಂಡು ಎಂದು ಕರೆಯುವುದುಂಟು. ಇಲ್ಲಿ   ಗಿಲ್ಲಿಯನ್ನು ಮಣ್ಣಿನ ಸಣ್ಣ ಕುಳಿಯಿಂದ ಚಿಮ್ಮಿಸುವ ಕ್ರಿಯೆಗೆ ಜೀಕುವುದು ಎಂದು ಬಳಸುತ್ತಾರೆ.ಹೀಗೆ  ಅರಿವು ಬೇಸರವನ್ನು ಹೊರಗೆ ಹಾರಿಸುವ ಸಾಧನ ಎನ್ನುವ ಅರ್ಥದಲ್ಲಿ ಬಳಸಿದ್ದು

ಒಳಮನೆ ಜಂತಿ :ಜಂತಿ ಎಂದರೆ  ಕೈ ಅಟ್ಟ..ಸಾಮಾನ್ಯವಾಗಿ ಅಡಿಗೆ ಮನೆ ಸುತ್ತ ಮುತ್ತಲು ಇರುವ ಪಾತ್ರೆ,ಡಬ್ಬಿಗಳನ್ನು ಇಡುವ ಸಣ್ಣ ಅಟ್ಟ..ಇಲ್ಲಿ ನಮ್ಮೊಳಗೇ ಬೇಸರವನ್ನು ಓಡಿಸುವ ಅರಿವು ಅಡಗಿದೆ ,ಅದನ್ನು ನಾವು ಹುಡುಕುತ್ತಾ ಹೋಗಬೇಕು ಎನ್ನುವ ಭಾವದಲ್ಲಿ ಬಳಸಿದ್ದು..

ಈ ಕವನವನ್ನು ವಾಚಿಸುವ ಪ್ರಯತ್ನವನ್ನೂ ಮಾಡಿದ್ದೇನೆ ದಯಮಾಡಿ ಕೇಳಿ ಹೆಂಗಿದೆ ಹೇಳಿ ...
https://soundcloud.com/chinmay-bhat-3/0inwdpw2cbwl


ಇವುಗಳ  ಜೊತೆಗೆ ನಿಮ್ಮ ಅನಿಸಿಕೆಗಳೂ ಬಹಳ ಮುಖ್ಯ..ಅವುಗಳನ್ನು ತಾವು  ಬಿಚ್ಚುಮನಸ್ಸಿನಿಂದ ಹಂಚಿಕೊಳ್ಳುವಿರೆಂದು ನಂಬಿದ್ದೇನೆ.
ವಂದನೆಗಳು :)

Sunday, September 21, 2014

ಪಲ್ಲಟ(ಕಥೆ)

ಗೆಳೆಯರೇ,ಹೆಂಗಿದೀರಿ ?? ಅರಾಮಲ್ವಾ ...
ಕಥೆ ಹೇಳುವ ಇನ್ನೊಂದು ಪ್ರಯತ್ನ...."ಪಲ್ಲಟ" ಎನ್ನುವ ಕಥೆಯನ್ನು ಬರೆದು ಅದನ್ನು ಧ್ವನಿ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ...
ದಯಮಾಡಿ ಕೇಳಿ..ಅನಿಸಿಕೆ,ತಪ್ಪು-ಒಪ್ಪು ಹೇಳಿ,ತಿದ್ದಿ  ನನ್ನನ್ನು ಬೆಳೆಸಿ,ತೀರಾ ಇಷ್ಟವಾದರೆ  ಅನಿಸಿಕೆಗಳನ್ನು,ಲಿಂಕ ಅನ್ನು ನಿಮ್ಮ ಫೇಸ್ ಬುಕ್ಕು,ಬ್ಲಾಗಿನ ಅಂಕಣಗಳಲ್ಲೂ ಹಂಚಿಕೊಂಡು ಪ್ರೋತ್ಸಾಹಿಸಿ :)...
ವಂದನೆಗಳು...
ನಮಸ್ತೆ :)

ಇಲ್ಲಿದೆ ಲಿಂಕು : ಸೌಂಡ ಕ್ಲೌಡ್ ನ ಕೊಂಡಿ

https://soundcloud.com/chinmay-bhat-3/mlg635uhs5hr

Thursday, July 3, 2014

ಭಾವದಾ ಬರ ಬಂದಿದೆ..

ನಮಸ್ಕಾರಾ...
ಚೆನಾಗಿದೀರಾ ಅಲ್ವಾ???.
ಹಮ್..ಅದೇನೋ ಗೊತ್ತಿಲ್ಲಾರೀ ಚಿತ್ರಗೀತೆಗಳು ಅಂದ್ರೆ ಒಂಥರಾ ಇಷ್ಟ..ಚಂದದ ಗೀತೆಗಳಲ್ಲಿನ ಸಾಹಿತ್ಯ ಇಷ್ಟ,ಅದಕ್ಕೆ ಪೋಣಿಸಿದ ಸಂಗೀತ ಇಷ್ಟ..ಅದರ ದನಿಯಾದ ಗಾಯಕರ ಅಭಿವ್ಯಕ್ತಿಗಳು  ಇಷ್ಟ..ಚಿತ್ರಗೀತೆಗಳ ಥರದ್ದು ಎನಾದ್ರೂ ಬರಿಬೇಕು ಅನ್ನೋ ಕನಸು ಕನವರಿಕೆ ನನ್ನನ್ನು ಚಿಕ್ಕಂದಿನಿಂದಲೂ ಕಾಡ್ತಾನೇ ಇದೆ...ಇಂತಹ ಹುಚ್ಚುತನಗಳ ಒಂದು ರೂಪ ನಿಮ್ಮ ಮುಂದಿದೆ..
ಸುಮ್ಮನೆ ಬರೆದಿದ್ದ ಒಂದು ಪ್ಯಾರಾಕ್ಕೆ ದಾಟಿ ಹಾಕಿ,ಪಲ್ಲವಿ-ಚರಣ ಎಲ್ಲಾ ಹೇಳಿಕೊಟ್ಟು ಅದಕ್ಕೆ ಪದ ಹೆಕ್ಕಿಸಿದ್ದು ಗೆಳೆಯ ರಾಘವೇಂದ್ರ.. ಒಂದು ಪುಟ್ಟ ಪ್ರಯತ್ನ ನಮ್ಮಿಬ್ಬರದು..ಓದಿ,ಕೇಳಿ,ತಪ್ಪು ಒಪ್ಪು ಹೇಳಿ ಪ್ರೋತ್ಸಾಹಿಸಿ..
ಹೇಳ್ತೀರಾ ಅಲ್ಲಾ ???


ಭಾವದಾ ಬರ ಬಂದಿದೆ  ಬಳಿಗೆನೀ ಬಾರದೇ
ಬಾರದಾ ಪದ ಗೀಚಿದೆ   ಬೇಸರಾ ತಾಳದೇ

ಸಾವಿರಾ ಸಾಲು ಕೋಶದಲೂ
ಸಿಗದ ದೇಸಿ ಪದ ನೀನು,
ಕಳೆದು ಹೋದರೆ ಕನಸಿಂದ ಹೇಗೇ ಹುಡುಕಲಿ?
ಹಿಡಿದು ಖಾಲಿ ಕೈಪಿಡಿ.
ಹಾಳು ಸುರಿದಿದೆ ಎನ್ನ ಪ್ರೀತಿ ಜೋಪಡಿ.

ಮುದ್ದಿನಾ ಮೂರು ಮಾತಿಂದಾ
ಮೂಡುತಿದ್ದಾ ನಗೆಬಿಂಬ,
ವಲಸೆ ಹೋದರೆ ಮುನಿಸಿಂದ ಹೇಗೇ ಸಹಿಸಲಿ ?
ಮನಸು ಒಡೆದಾ ಕನ್ನಡಿ.
ಬರಿದು ಎನಿಸಿದೆ ತಲೆ ಹರಟೆಯಂಗಡಿ.

ಭಾವದಾ ಬರ ಬಂದಿದೆ  ಬಳಿಗೆನೀ ಬಾರದೇ
ಬಾರದಾ ಪದ ಗೀಚಿದೆ  ಬೇಸರಾ ತಾಳದೇ

ಈಗ ಹಾಡು ಕೇಳಣ್ವಾ ?? :)...




ಹೆಂಗಿದೆ ಹೇಳಿ...ದಯವಿಟ್ಟು.. ಕಾಯ್ತಿದೀನಿ...
ಧನ್ಯವಾದಗಳು...
ನಮಸ್ತೆ :)

Saturday, May 3, 2014

ಶ್ರಾಯ

ಬಹುಷಃ ಜೀವನದ ಘಟ್ಟಗಳೇ ಹಾಗೆ ಅನ್ನಿಸುತ್ತದೆ.,ಎಲ್ಲಿಂದಲೋ ಗುರುತು ಪರಿಚಯವಿಲ್ಲದೆಡೆಗೆ ಬಂದಾಗ ಹೆದರಿರುತ್ತೇವೆ, ಇದು ನಮ್ಮದಲ್ಲದ ಪರಿಸರ ಎಂದು ಕೊರಗುತ್ತೇವೆ, ಕ್ರಮೇಣ ನಮಗೇ ತಿಳಿಯದಂತೆ ಅಲ್ಲಿಗೆ ಹೊಂದಿಕೊಂಡುಬಿಡುತ್ತೇವೆ,ಅಲ್ಲಿನ ಚಟುವಟಿಕೆಗಳಿಗೆ ತೀವ್ರವಾಗಿ ಸ್ಪಂದಿಸತೊಡಗುತ್ತೇವೆ,ಅಲ್ಲಿಯವರೇ ಆಗಿಬಿಡುತ್ತೇವೆ. ಕೊನೆಗೊಂದು ದಿನ ಅದನ್ನೆಲ್ಲಾ ಬಿಟ್ಟು ಹೊರಡುವಾಗ ಮತ್ತೆ ನಮ್ಮ ಮನೆಯನ್ನೇ ಬಿಟ್ಟು ಹೋಗುವಾಗಿನ ತಳಮಳಗಳು ಶುರುವಾಗುತ್ತವೆ.  
ಇದು ನಾನು ಇಂಜಿನಿಯರಿಂಗ್ ಮುಗಿಸಿ ವಾಪಸ್ಸು ಹೊರಡುವಾಗ ಬರೆಯಲು ಶುರುಮಾಡಿದ ಕವನ.ಅದೇನೋ ಕುಂಟುತ್ತಾ ಸಾಗಿ ಈಗ ಈ ಆಕಾರ ತಲುಪಿದೆ.ದಯಮಾಡಿ ಓದಿ,ತಪ್ಪು-ಒಪ್ಪುಗಳನ್ನು ಮರೆಯದೇ ತಿಳಿಸಿ ಪ್ರೋತ್ಸಾಹಿಸಿ  

ಮಾರುಬೀದಿ ಸಾಲಿನೊಳು ಸೇರಿಹೋಗುವ ಮುನ್ನ
ಹೊಸಮಡಿಕೆ ಬುಡದಲ್ಲಿ ರವಿಸಿಹುದು ಹಳೆನೆನಪು
ನೂರು ಹಾದಿಬಲೆಯೊಳಗೆ ಕರಗಿ ಸಾಗುವ ಮುನ್ನ
ಬಿಸಿತಡಿಕೆ ಅಡಿಯಲ್ಲಿ ದ್ರವಿಸಿಹುದು ಕಳೆದೊನಪು

ಕಾಣದಬುದಿಯ ಪಯಣಕೆ ಒಂಟಿಹಡಗಲಿ ಬಂದು
ನಡುನೆಲದ ಬುಡದಲ್ಲಿ  ಕಾಲಿಡಲು ಬರಿದಿಗಿಲು
ಗೇಣಿಪಡೆದಾ ಭವನದಿ ಸ್ನೇಹದುದಕವ  ಮಿಂದು
ನಡೆಯೊಡನೆ ನಗೆಯಿರಲು ಗರಿಯಾಸೆ ಗಿರಿಮುಗಿಲು

ಹಾಲುಹಲ್ಲದು ಉದುರಿ ಮೈಲಿಗಲ್ಲದು ಚಿಗುರಿ
ಕಲಿಯುತಿರೆ ಹೊಸ ಈಜು,  ಬರದಿರದೆ ಎದುರುಸಿರು
ಬೇಲಿಯೆಲ್ಲೆಯ ದಾಟಿ ನೀಲಿಯಂಬರ ಮೀಟಿ
ಮೆಲಿಯುತಿರೆ ಮೆದುಎದೆಯ ಹನಿಸಿಹುದು ಹೊನ್ನೆಸರು

ತೊಳಕೆಬಳ್ಳಿಯು ತಡವಿ,ದಿಕ್ಕುತಪ್ಪಿರೆ ಅಡವಿ
ಹುಸಿನಡಿಗೆ ಕಾನ್ಗಿರಕಿ ,  ಹದತಪ್ಪಿ  ಮನದೊಲುವು
ಅರಿವ ದಿವಟಿಗೆ ಗೀರಿ ಗಮ್ಯ ಭೂಪಟ  ತೋರಿ
ಸಮಪಥದಿ ನಡೆಸಿರಲು ಗುರುತನಿಕೆ ನಯಮೆಲುವು

ಓಣಿಯೆಲ್ಲವ ಕಂಡು ಊರಿನನ್ನವ ಉಂಡು
ಕೊನೆಹುಲಿಕೆ ಬೇಸರಿಕೆ ,ಬರುಗಳಿಸೆ ಅಳುಮೊಗವು
ಬೆನ್ನದಂಟಿನ ನಂಟು ಕೈಗೆ ಕನಸಿನ ಗಂಟು
ತಿರುಗಿತದು  ಗಿರಗಿಟ್ಟಿ , ಹಾರಿರಲು  ನವಜಗವು

ಮಾರುಬೀದಿ ಸಾಲಿನೊಳು ಸೇರಿಹೋಗುವ ಮುನ್ನ…. 

--------------------------------------------------------------------------------------------
ಶಬ್ದಾರ್ಥ:
ರವಿಸು=ಆರ್ದ್ರವಾಗು,ನೀರೊಡೆ(ಮಳೆಗಾಲದಲ್ಲಿ ಮನೆಯ ಒಳನೆಲವು ತೇವಾಂಶಕ್ಕೆ ನೀರು ಉಗುಳುವುದನ್ನು ನೆನೆಸಿ ಬರೆದದ್ದು)
ಅಬುದಿ=ನೀರು,ಸರೋವರ
ಮೆಲಿಯುವುದು=ಚೆನ್ನಾಗಿ ಹದಮಾಡುವುದು(ಚಪಾತಿಹಿಟ್ಟನ್ನು ಮುದ್ದೆಥರ ಮಾಡಿ ತಿಕ್ತಾರಲ್ಲ ಅದು)
ತೊಳಕೆಬಳ್ಳಿ=ಇದನ್ನು ಹಾದು ಹೋದರೆ ಕಾಡಿನಲ್ಲಿ ದಾರಿತಪ್ಪುವುದೆಂಬ ಪ್ರತೀತಿ ಇರುವ ಬಳ್ಳಿ..ದಿಕ್ಕುಬಳ್ಳಿ,ದಿಕ್ ತಪ್ಸು ಬಳ್ಳಿ ಎಂದೂ ಕರೆಯುತ್ತಾರೆ
ಒಲುವು=ಆಯ,ಶರೀರದ ಸಮತೋಲನ
ಮೆಲುವು=ಹದವಾಗಿ ಜಾರುವ ದ್ರವ್ಯ (ಧಾರೆ ಚೆನ್ನಾಗಿ ಬರಲಿ ಎಂದು ಹಾಲುಕರೆಯುವ ಮುನ್ನ  ಆಕಳು/ಎಮ್ಮೆಯ ಮಲೆಗೆ ಚಿಕ್ಕಮಿಳ್ಳೆ ತುಪ್ಪ ಬೆಣ್ಣೆ ಹಚ್ಚುತ್ತಾರಲ್ವಾ ಅದಕ್ಕೆ ಮೆಲುವು ಎಂದು ಬಳಸುವುದನ್ನು ನೋಡಿದ್ದೆ )
ಹುಲಿಕೆ=ಬೆಳೆಯ ಕುಯ್ಲಿನ ಅಂತಿಮ ಕ್ಷಣಗಳು..ಈ ದಿನದಂದು ಸಿಹಿಹಂಚಿ ಖುಷಿಪಡುವುದು ವಾಡಿಕೆ
ಬರುಗಳಿಸು=ಅತಿಥಿಗಳನ್ನು ಮತ್ತೆಬನ್ನಿ ಎನ್ನುತ್ತಾ ವಾಪಸ್ಸು ಕಳಿಸಿಕೊಡುವುದು  

ವಾಚನವನ್ನು ಆಲಿಸಲು ಇಲ್ಲಿಗೆ ಕ್ಲಿಕ್ಕಿಸಿ : https://soundcloud.com/chinmay-bhat-3/ymep1oqarpmx

Sunday, April 27, 2014

ಒಳಕಂಬಿ

ಬ್ಲಾಗಿಗರ ಖೋ ಖೋ ಆಟದಲ್ಲಿ ಕಥೆ ಬರೆಯುವ ಮುಂದಿನ ಪಾಳಿ ನನ್ನದು..ಒಂದು ಪುಟ್ಟ ಪ್ರಯತ್ನ..ನೋಡಿ ಹೆಂಗಿದೆ ಹೇಳಿ...
ಮೊದಲಿಗೆ  ಪ್ರಕಾಶಣ್ಣನ "ಬೇಲಿ" : http://ittigecement.blogspot.in/2014/04/blog-post.html
ನಂತರ ದಿನಕರಣ್ಣನ "ದಣಪೆ" : http://dinakarmoger.blogspot.in/2014/04/blog-post_14.html
ಅದಾದ ಮೇಲೆ ಬಾಲು ಸರ್ ಬರೆದ  "ಎಲ್ಲೆಯ ಮಿಂಚು" : http://nimmolagobba.blogspot.in/2014/04/blog-post_1912.html
ಆಮೇಲೆ ರೂಪಕ್ಕನ "ಮಿತಿ " :http://nimmolagobba.blogspot.in/2014/04/blog-post_1912.html
ಮುಂದುವರೆದು ಶಮ್ಮೀ ಅಕ್ಕಯ್ಯನ "ವ್ಯಾಪ್ತಿ-ಪ್ರಾಪ್ತಿ" : http://mandaaramallige.blogspot.in/2014/04/blog-post_24.html
ನನಗಿಂತ ಮುಂಚೆ ಸುಷ್ಮಾ ಬರೆದ ಕದಡಿದ ಕಡಲು :http://kanasukangalathumbaa.blogspot.in/2014/04/blog-post.html

ಈಗ ನನ್ನದು...ಕಥೆಯ ಬರವಣಿಗೆಯ ಹರವು ನನಗಿನ್ನು ತಿಳಿಯದು...ಹುಚ್ಚಿಗೆ ಬರೆದಿದ್ದೇನೆ... ನೋಡಿ ತಪ್ಪು-ಒಪ್ಪು ತಿಳಿಸಿ..

==============================================================
ಕಾಲಿಂಗ್ ಬೆಲ್ ಬಡಿದುಕೊಳ್ಳುತ್ತಿದೆ..ಕತ್ತಲಾಗಿದೆ ..ಗಡಿಯಾರ ಗಂಟೆ ಎಂಟು ಎಂದು ತೋರಿಸುತ್ತಿತ್ತು..
ಅರರೇ..ನಿದ್ದೆ ಬಂದುಬಿಟ್ಟಿತ್ತಾ ನನಗೆ..?
ಬಾಗಿಲು ತೆರೆದೆ...
ಪತಿರಾಯನೂ ಮೈತ್ರಿಯೂ ನಗುತ್ತಾ ಒಳಗೆ ಕಾಲಿಡುತ್ತಿದ್ದಾರೆ...ಅದೂ ರಾತ್ರಿಯ ಹೊತ್ತಲ್ಲಿ!!
ಮೈತ್ರಿಯ ಕೈ ನನ್ನ ಗಂಡನ ತೋಳೊಳಗೆ ಬಂಧಿಯಾಗಿತ್ತು.
ಕಾಲಡಿಯ ನೆಲ ಕುಸಿದಂತೆ ಭಾಸ..ಕುಸಿದು ಬಿದ್ದೆ...

ಕಣ್ಣೆಲ್ಲವೂ ಮಂಜುಮಂಜಾಗುತ್ತಿತ್ತು ..
ಕಣ್ಣೀರು ತುಂಬಿಬಂದುದರಿಂದಲೋ ಅಥವಾ ಆ ನೋಡಬಾರದ ದೃಶ್ಯವನ್ನು ನೋಡಿ ಅವಾಕ್ಕಾದುದರಿಂದಲೋ ತಿಳಿಯಲಿಲ್ಲ...
ನೋಡುನೋಡುತ್ತಿದ್ದಂತೆ ಮೇಲಿನ ಭಿತ್ತಿಪಟದ ಗುಲಾಬಿಗಳೆಲ್ಲ ಮರೆಯಾಗತೊಡಗಿತ್ತು .
ಹೂವು-ಬಳ್ಳಿ-ಮುಳ್ಳು  ಎಲ್ಲ ಒಂದೇ ಎನಿಸಹತ್ತಿತ್ತು.
ಕತ್ತಲೆ ಎನ್ನಿಸತೊಡಗಿತ್ತು...ಅದೇ ಕತ್ತಲೆ ನೀರಿಗೆ ಬಿಟ್ಟ ಉಜಾಲಾದಂತೆ ಕ್ಷಣಾರ್ಧದಲ್ಲಿ ನನ್ನ ಕಣ್ಣನ್ನೆಲ್ಲಾ ಪೂರ್ತಿಯಾಗಿ ಆವರಿಸಿಕೊಂಡಿತ್ತು,ರೆಪ್ಪೆ ಮುಚ್ಚಿತ್ತು...
ಆದೇನೋ ಪುನಃ ಕಣ್ಣುಬಿಡಬೇಕು ಅನ್ನಿಸಲಿಲ್ಲ..ನೋಡಬೇಕು ಅನ್ನಿಸಲಿಲ್ಲ..
ಯಾಕೋ ಎಲ್ಲವೂ ಬೇಡವಾಗಿತ್ತು,ರೆಪ್ಪೆ ಒಡೆಯುವುದೂ ಸಹಾ...
ನನ್ನೊಳಗೆ ನಾನಿದ್ದೆ..
ಹೌದು ಪೂರ್ತಿ ಒಳಗೇ ಹೋಗಿದ್ದೆ.....

ಸಂಬಂಧಗಳು ಎಂದರೆ ಏನು ???
ಸ್ನೇಹಕ್ಕೂ,ಪ್ರೀತಿಗೂ,ಬಯಸುವಿಕೆಗೂ ನಡುವೆ ಅಂತರವೇನು??
ಬೇಕು ಅನ್ನಿಸಿದರೆ ಅದು ಬಯಕೆಯಾ??
ಇಬ್ಬರ ಬಯಸುವಿಕೆಗೊಂದು ಅರ್ಥಕೊಡುವುದು ಸ್ನೇಹವಾ??
ಸ್ನೇಹದ ಉತ್ತುಂಗವೇ ಪ್ರೀತಿಯಾ?ಅಥವಾ ಅದೊಂದು ಹೊಸ ಥರಹದ ಉತ್ಕಟ ಬಯಕೆಯಾ ??

ನಾನು ನನ್ನ ಹುಡುಗನ ಸಾಂಗತ್ಯವನ್ನು ಬಯಸಿದ್ದೆ ನಿಜ ,ಆದರೆ ಅದು ಯಾವಗಲೂ ನನ್ನ ಜೊತೆಗೇ ಇರಬೇಕೆಂದು ಬಯಸಿದ್ದೆನಾ??ಇಲ್ಲ,ಅದೊಂದು ಕ್ಷಣಿಕದ ಭಾವನೆಯಷ್ಟೇ..ಏನೋ ಅಮಲೇರಿ ಹೊರಟಿದ್ದೆ,ಅದು ಬಯಕೆಯಷ್ಟೇ ಇರಬೇಕು ಹಾಗಾದರೆ....ಅಲ್ಲಾ ಅದು ಅದಕ್ಕಿಂತ ಚೂರು ಮುಂದಿನದಾ??

ಒಂದಾನೊಂದು ಕಾಲದಲ್ಲಿ ತೀರಪರಿಚಿತರಾಗಿದುದರಿಂದ ಒಂದಿಷ್ಟು ಸಲಿಗೆಯಿಂದ ಮಾತನಾಡಿದುದು....
ಅಷ್ಟೇ ವಾಸ್ತವ...ಆದರೆ ನನ್ನದೆಲ್ಲವನ್ನು ಅವನಿಗೆ ಹೇಳಿದ್ದೆನಾ ಅಥವಾ ಅವನ ಬದುಕಿನ ನಡೆಗಳನ್ನು ಕೇಳಿದ್ದೆನಾ ?ಅವನ ಹೆಂಡತಿ-ಮಕ್ಕಳು ಸಂಸಾರದ ಬಗ್ಗೆ ತೀರಾ ಕೆದಕಿದ್ದೆನಾ ??
ಉಹೂಂ..ಅವನೇ ಯಾವಗಲೋ ಹೇಳಿದ ನೆನಪಲ್ಲವಾ ,"ಸ್ನೇಹಿತರಲ್ಲಿ ಎಲ್ಲವನ್ನು ಹೇಳಿಕೊಳ್ಳುತ್ತೇವೇಯೋ ಇಲ್ಲವೋ ಗೊತ್ತಿಲ್ಲ ಆದರೆ ಹಂಚಿಕೊಳ್ಳುತ್ತಿರುವ ವಿಚಾರಗಳೆಲ್ಲ ಸತ್ಯವಾಗಿರಬೇಕು" ಎಂದು!
ಹಾಗಾದರೆ ಅದೊಂದು ಪರಿಶುಧ್ಧ ಸ್ನೇಹವಾ ?

ಹಾಗಾದರೆ ಇಷ್ಟು ವರ್ಷದ ಮೇಲೆ ಅವನು ಸಿಕ್ಕಾಗ ನಾನೇಗೆ ಅಷ್ಟು ಗಲಿಬಿಲಿಯಾದೆ??
ನನಗೆ ತಿಳಿಯದಂತೆ ಅದೇಕೆ ಹಾಗೆ  ತೀವ್ರವಾಗಿ ಸ್ಪಂದಿಸಿದೆ?
 ನಾನು,ನನ್ನವರು, ಮಕ್ಕಳುಮರಿ,ಅಡಿಗೆ,ನೆಂಟರು,ಮನೆ,ಕಂಪನಿ,ನರ್ಸರಿ,ಸ್ಕೂಲು, ಕಾರು,ಸೈಟು,ಟೀ.ವಿ,ಸೀರಿಯಲ್ಲುಗಳಲ್ಲಿ ಮುಳುಗಿದ್ದವಳಿಗೆ ಅದೇಕೆ ಆ ಹುಡುಗ ಬೇಕೆನ್ನಿಸಿತು???ಅದೇ ಪ್ರೀತಿಯಾ??
ನನ್ನೆಲ್ಲ ಜವಾಬ್ದಾರಿ,ಸ್ಥಾನಮಾನಗಳನ್ನು ಮರೆಸಿ ಸೆಳೆಯುತ್ತಿರುವ ಬಂಧವಾ ??

ಊಹೂಂ..ಯಾಕೋ ಪೂರ್ತಿಯಾಗಿ ಒಪ್ಪಲಾಗುತ್ತಿಲ್ಲ..ಇರಲಿಕ್ಕಿಲ್ಲ..ಅದೊಂದು ಆಸೆಯಿರಬಹುದಷ್ಟೇ..ಚಿಕ್ಕಂದಿನಿಂದಲೂ  ಮಳೆ ಬಂದಾಗ ನೀರಿಗಿಳಿದು ನೆನೆದು ಬಿಡುವ ನನ್ನ ಹುಚ್ಚಿನಂತೆ!...

ಛೇ..ಇದಕ್ಕೆ ಹೆಸರೇ ಬೇಡ ..ಹೋಗಲಿ...
ನಾನು ಅವನೊಡನೆ ಮಾಡಹೊರಟಿರುವುದಾದರೂ ಏನು??
ನನ್ನ ಕಥೆ ಒತ್ತಟ್ಟಿಗಿರಲಿ ಅವನೂ ಸಂಸಾರಸ್ಥ.ಅದೇನು ಸ್ವೇಚ್ಛಾಚಾರವಾ ?
ನನಗನ್ನಿಸಿದ್ದನ್ನು ನಾನು ಮಾಡಿದೆ ಅದರಲ್ಲೇನು ತಪ್ಪು ಅನ್ನಬಹುದಾ??

ಹಾಗಾದರೆ ನನ್ನವರು ಮಾಡುತ್ತಿರುವುದು ಏನು ಈಗ?? ಹೇಸಿಗೆ ಅನ್ನುತ್ತೇನೆ ನಾನು...ಅದನ್ನೂ ಸ್ವೇಚ್ಛಾಚರವೇ ಎನ್ನಬಹುದಾ?? ಅವಳಿಗೂ ನನ್ನವರಿಗೂ ಇಷ್ಟವಿದ್ದಿರಬಹುದು..ಒಟ್ಟಿಗೆ ಓಡಾಡುತ್ತಿದ್ದಾರೆ,ಹಾಯಾಗಿದ್ದಾರೆ..ಅದರಲ್ಲೇನು ತಪ್ಪು?ನಾನೇಕೆ ಇವರಿಬ್ಬರನ್ನೂ ನೋಡಿ ಇಷ್ಟು ದಿಗಿಲಾಗಿದ್ದೇನೆ,ನನ್ನವರ ಮೇಲೆ ಕೋಪಿಸಿಕೊಂಡಿದ್ದೇನೆ??

ಅಥವಾ ಇದೇ ನನ್ನವರ ಮೇಲೆ ಇನ್ನೂ ಎಲ್ಲೋ ನನ್ನಲ್ಲಿ  ಆಗಾಧವಾಗಿರುವ  ಸಹಜ ಪ್ರೀತಿಯಾ??
ಎಲ್ಲೋ ಕೇಳಿದ ನೆನಪು ...ಎಲ್ಲಿ ಪ್ರೀತಿ ಜಾಸ್ತಿ ಇರುತ್ತದೆಯೋ ಅಲ್ಲಿ ಕೋಪವೂ ಜಾಸ್ತಿ ಎಂದು,ನಿಜವೇ ತಾನೆ??ಅದೇ ಕಾರಣವಾ?

ಹಾಗಾದರೆ ಈಗೇನು ಮಾಡಲಿ..ನಾನೇನೋ ನನ್ನ ಹುಚ್ಚು ಬಯಕೆಗಳನ್ನು ಬಚ್ಚಿಟ್ಟು ತೆಪ್ಪಗಿರಬಹುದು..ಏನೇನೋ ಕಾರಣಕೊಟ್ಟು ಅವನನ್ನು ನೋಡದೆಯೇ ಇರಬಹುದು..ತೀರಾ ತಡೆಯಲಾಗದಿದ್ದರೆ "ಇವರಿಗೆ" ದುಂಬಾಲು ಬಿದ್ದು ಊರನ್ನೇ ಬಿಡಲೂ ಬಹುದು..ಆದರೆ ಇವರು ??
ಈ ಪತಿರಾಯನಿಗೆ ಅವಳನ್ನು ಬಿಡುವುದು ಸಾಧ್ಯವಾ?? ಮನೆಯ ತನಕ ಕೈಕೈಹಿಡಿದು ಎದುರೇ ನಿಂತವರು ನಾಳೆ ನೀನು ಬೇಕಾದರೆ ಎಲ್ಲಿಗಾದರೂ ಹೋಗು ಅಂದಾರು....

ಎಲ್ಲಿಗೋ ಹೋಗುವುದು ಕಷ್ಟವಲ್ಲ...ಜಿದ್ದಿಗೆ ಬಿದ್ದು ಯಾರ ಮುಂದೆಯೂ ಕೈಯ್ಯೊಡ್ಡದೇ ತಲೆಯೆತ್ತಿಯೇ ಮಕ್ಕಳನ್ನು ಸಾಕಿಯೇನು..ಆಡಿಕೊಳ್ಳುವವರ ಮುಸಡಿ ಕೆಂಪಾಗುವಂತೆ ಮಕ್ಕಳ ಮದುವೆ-ಮಂಗಲವನ್ನೂ ಮಾಡಿಸಿಯೇನು..ನನ್ನ ಬದುಕು ಇರುವವರೆಗೂ ಮಕ್ಕಳಿಗೊಂದು ದಿಕ್ಕಾದೇನು .. 

ಆದರೆ ಅಷ್ಟೇ ಸಾಕಾ??
ಗಂಡ-ಹೆಂಡತಿ-ಮಕ್ಕಳೆಲ್ಲಾ ಒಟ್ಟಿದ್ದರೆ ಚೆನ್ನವಲ್ಲವಾ?ನನ್ನ  ಅಪ್ಪ-ಅಮ್ಮನಿಗೂ ಇನ್ನೇನು ಬೇಕು??
ಎನು ಮಾಡಲಿ ಈಗ ಹಾಗಾದರೆ...

ಆ ಮೈತ್ರಿಯ ಜುಟ್ಟು ಹಿಡಿದು ಹೊರದಬ್ಬಲಾ??ನನ್ನವರ ಕಾಲು ಹಿಡಿದು ಬೇಡಿಕೊಳ್ಳಲಾ ??
ಅಥವಾ ಇಬ್ಬರನ್ನೂ ಕೂಡ್ರಿಸಿ  ಮಾತುಕಥೆಯಾಡಲಾ ?? ಇಲ್ಲಾ ನೇರವಾಗು ಅದದ್ದಾಯಿತು ಇನ್ನುಮುಂದಾದರೂ ನೆಟ್ಟಗಿರಿ,ಇದನ್ನು ಹೀಗೆ ಮುಂದುವರೆಸಿದರೆ ನನ್ನ ದಾರಿ ನನಗೆಂದು ಗಟ್ಟಿಯಾಗಿ ಕೂಗಿಹೇಳಲಾ??? ಅಂದುಕೊಳ್ಳುತ್ತಿರುವಾಗಲೇ ನನ್ನನ್ನು ದೂರದಿಂದ ಯಾರೋ ಕರೆದಂತಾಯಿತು...
ಮತ್ತೆ ಮತ್ತೆ ಕರೆದಂತಾಯಿತು...
ಹೌದು ಯಜಮಾನರ ಧ್ವನಿಯೇ ಅದು...

ಇನ್ನೊಂದು ಸಲ ಕರೆದಾಗ ಕಣ್ಣು ತಂಪುತಂಪಾಯಿತು...ಕೈಯ್ಯನ್ನು ಯಾರೋ ತಿಕ್ಕುತ್ತಿದ್ದಂತೆ ಅನ್ನಿಸಿತು..ಮುಖಕ್ಕೆ ತಂಪಾದ ಗಾಳಿಗೂ ಹೊಡದಂತೆ ಭಾಸವಾಯಿತು..ಕಣ್ಣು ಬಿಡುವ ಪ್ರಯತ್ನ ಮಾಡಿದೆ....ಉಹೂಂ ಎಲ್ಲ ಮಂಜು ಮಂಜು...ತಲೆ ಸುತ್ತುತ್ತಿತ್ತು...ಬರುಬರುತ್ತಾ ಮಸುಕು ಕಡಿಮೆಯಾಗುತ್ತಿತ್ತು..ಮೆಲ್ಲನೆ ಮಣ್ಣಮುದ್ದೆಯಲ್ಲೊಂದು ಕಪ್ಪು ಕಂಬಳಿಹುಳು ಕಂಡಂತಾಯಿತು..ಒಂದೆರಡು ಗಳಿಗೆಯಲ್ಲೇ ನನ್ನವರ ಮುಖ ಕಾಣತೊಡಗಿತ್ತು..ಅವರ ದಪ್ಪ ಮೀಸೆ,ಗಾಬರಿಯಾದ ಮುಖ ಎಲ್ಲವೂ ಕಾಣುತ್ತಿತ್ತು..ಮೈತ್ರಿ ಕೈ ತಿಕ್ಕುತ್ತಾ ಕುಳಿತ್ತಿದ್ದಳು.ಅವಳ ಮುಖದಲ್ಲೂ ಸ್ತ್ರೀ ಸಹಜ ವಾತ್ಸಲ್ಯವಿತ್ತು.. .ನಾನು ಹಾಲ್ ನ ಸೋಫಾದ ಮೇಲೆ ಮಲಗಿದ್ದೆ...ಇನ್ನೇನು ಎಳಬೇಕು ಅನ್ನಿಸುವಷ್ಟರಲ್ಲಿ ಮುಖದ ಮೇಲೆ ಏನೋ ಅಲುಗಾಡುವಂತೆ ಅನ್ನಿಸುತ್ತಿದ್ದು.ತಂಪಾದ ಗಾಳಿಯೂ ಬರುತ್ತಿತ್ತು...ಕತ್ತೆತ್ತಿದ್ದರೆ ಆ ಹುಡುಗ ಕಾಣುವುದಾ????
ಹೌದು ಅವನೇ ??? ಇರಲಾರದು..ಕಣ್ಣುಜ್ಜಿಕೊಂಡೆ...ಅವನೇ..
ಕೈ ಚಿವುಟಿಕೊಂಡೆ ಚುರ್ರ್  ಅಂದಿತು...ನಿಜವೇ..ಅವನೇ ಕೂತಿದ್ದಾನೆ..ಅರೇ ಇಸ್ಕಾ!!

ಮತ್ತೆ ತಲೆ ಗಿರ್ರೆಂದಿತು...ಅಥವಾ ಮೊದಲಿನಂದಲೂ ತಿರುಗುತ್ತಲೇ ಇತ್ತೋ ಎನೋ,ಸ್ವಲ್ಪ ಜೋರಾಯಿತು ...ಏಳಲು ಹವಣಿಸಿದಾಗ ಪತಿರಾಯರು ಭುಜ,ಬೆನ್ನು ಹಿಡಿದು ಮೇಲೆತ್ತಿದರು.ನೀರು ಕೊಟ್ಟರು..ಸ್ವಲ್ಪ ಸುಧಾರಿಸಿದ ಹಂಗೆ ಕಂಡ ಮೇಲೆ "ಏನಾಯ್ತೇ...ನಡಿ ಆಸ್ಪತ್ರೆಗೆ ಹೋಗಣಾ...ಸ್ಲ್ಜ್ ಸ್ಜ್ಫ಼್ಲ್ಕ್ಸ್ದ್ಜ್ ಫ಼್ಲ್ಸ್ದ್ಜ್ಫ಼್ಸ್ದ್ಕ್ಲ್ಫ಼್ಜ್ಸ್ಲ್ ಲ್ಕ್ಸ್ದ್ಜ್ಫ಼್ಸ್ಲ್ಕ್ದ್ಫ಼್ಜ್ಸ್ಲ್ದ್ಕ್ಫ಼್ಜೊಇವೆಫ಼್ವೆಜ್ಫ಼್ಲ್ಸ್ದ್ಜ್ಫ಼್ಲ್ಕ್ಸ್ದ್ಜ್ಫ಼್ಕ್ಲ್ಸ್ದ್ಜ್ಫ಼್ಸ್ಲ್ದ್ಕ್ಫ಼್ಜ್ ಅ;ದ್ಫ಼’ಸ್ವೊಇಫ಼್ಪೆಫ಼ಿಪೊಎವಿಫ಼್ಪ್ವಿಫ಼್ ಫ಼್ಕ್ವ್ಚ್ನ್ವ್ಸ್ಲ್ಕ್ದ್ಜ್ಫ಼್ಸ್ಲ್ಕ್ಫ಼್ಸ್" ಇನ್ನೂ ಏನೇನೋ ಹೇಳುತ್ತಿದ್ದಂತಿತ್ತು...
ನಾನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ... ಸಣ್ಣಗಿನ ಧ್ವನಿಯನ್ನ ಸ್ವಲ್ಪ ಗಟ್ಟಿ ಮಾಡಿಕೊಳ್ಳುತ್ತಾ "ಏನಿಲ್ಲ,ಸಂಕಷ್ಟಿಯೆಂದು ಊಟಮಾಡಿರಲಿಲ್ಲ ...ಅದ್ಕೇ ಸುಸ್ತು... ಚೂರು ಮಲಗುತ್ತೇನೆ...ಸರಿಯಾಗುತ್ತದೆ " ಎಂದು ರೂಮಿಗೆ ಹೊರಡಲು ಅನುವಾದೆ..ಎದ್ದವಳಿಗೆ ಕಾಲೆಡವಿ ಮತ್ತೆ ರೂಮು ತಲುಪಿಸಲು ನನ್ನವರೇ  ಬರಬೇಕಾಯಿತು..ಕಾಲೆಡವಿದಾಗ ಆ ಹುಡಗ "ನಿಧಾನ ನಿಧಾನ" ಎಂದಿದ್ದು ಈಗಲೂ ಕಿವಿಯಲ್ಲಿ ಗುಯ್ಯ್ಂ ಗುಡುತ್ತಿತ್ತು... ನಾನು ರೂಮಿನಲ್ಲಿ ಮಲಗಿದ್ದೆ...ಮನಸ್ಸು ಕೂಡಾ ರೂಮಿನ ಕದದಂತೆ ಆರ್ಧ ಒಳಗೆ-ಅರ್ಧ ಹಾಲಿನಡೆಗೆ ತೆರೆದಿತ್ತು...

ವಾಪಸ್ಸು ಹೋದ ಪತಿರಾಯರು ಆಗಂತುಕರೊಂದಿಗೆ ನನ್ನ ಕುರಿತು "ಉಪವಾಸ ಗಿಪವಾಸ ಎಲ್ಲಾ ಬೇಕು ಇವಳಿಗೆ..ಎಷ್ಟ್ ಹೇಳಿದ್ರೂ ಕೇಳಲ್ಲಾ ಸಾರ್ " ಎಂದೆಲ್ಲಾ ಒಂದಿಷ್ಟು ಸಾಂದರ್ಭಿಕವಾಗಿ  ಬೈದು ಕೊನೆಗೆ 
"ಎನ್ ಸಾರ್, ಮೈತ್ರಿ ಮೇಡಮ್ ಅವ್ರು ನಿಮ್ ಮಿಸೆಸ್ ಅಂತಾ  ಇಷ್ಟ್ ದಿನಾ ಅದ್ರೂ ಹೇಳ್ಳೇ ಇಲ್ವಲ್ಲಾ ಸಾರ್? ಇದೇನ್ ಹಿಂಗೆ.” ಎಂದರು..
.ನನ್ನ ಕಿವಿ ಚುರುಕಾಯಿತು...
ಧಡಕ್ಕನೆ ಎದ್ದು ಕೂತೆ ಮಂಚದಿಂದ...

ಇವರು ಹಾಗೇ ಮುಂದುವರೆದು..".ಇವತ್ತು ನಿಮ್ ಮನೆಗೆ ಬರ್ತೀನಿ  ತೊಂದ್ರೆ ಇಲ್ಲಾ ಅಲ್ವಾ?? ನನ್ನ ಹಸ್ಬಂಡ್ ನಿಮ್ಮನೆ ದಾರಿಲೇ ಬರ್ತಿದಾರಂತೆ..ಅಲ್ಲಿಗೇ ಬಂದು ಪಿಕ್ ಮಾಡ್ತಾರೆ ಅಂದಾಗಲೇ ಗೊತ್ತಾಗಿದ್ದು ನಿಮ್ಮ ಬಗ್ಗೆ..ಏನಾ ಸಾರ್ ನೀವು,,ಮೊದ್ಲೇ ಹೇಳದಲ್ವಾ?? ನೀವಾದ್ರೂ ಮೇಡಮ್..ನಾನು ಅವಾಗಾವಾಗ ಸಾರ್ ಬಗ್ಗೆ ಹೇಳ್ತಾ ಇದ್ರೂ ಏನೂ ರೆಸ್ಪಾನ್ಸೆ ಮಾಡ್ತಿರ್ಲಿಲ್ವಲ್ಲಾ ಮೇಡಮ್.."ಎಂದರು...
ಆ ಹುಡುಗ.ಛೀ ಹುಡುಗನಲ್ಲ ಅವನು ವಯಸ್ಸಾಗಿದೆ...ಆದರೂ "ಹುಡುಗನೇ ಅವನು" ಇರಲಿ...ಆತ ಕರ್ತವ್ಯ ನಿಷ್ಠೆ,ವೈಯಕ್ತಿಕ ಬದುಕು ಇವುಗಳ ಬಗ್ಗೆ ತನ್ನ ಎಂದಿನ ಶೈಲಿಯಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡಲು ಹೊರಟಾಗ ಮೈತ್ರಿ ಅವನನ್ನು ಅರ್ಧಕ್ಕೆ ತಡೆದು,
"ಗೊತ್ತಿದ್ರೆ ನೀವು ನನ್ ಹತ್ರಾ ಇಷ್ಟು ಕ್ಲೋಸಾಗಿ ಇರ್ತಿದ್ರಾ" ಎಂದು   ಕಣ್ಣು ಮಿಟುಕಿಸಿದ್ದಳು..ಮೂವರೂ ಜೋರಾಗಿ ಗಹಗಹಿಸಿ ನಕ್ಕರು...

ಮತ್ತೆ ಇನ್ನೇನೋ ಮಾತು..ಮತ್ತೆ ನಗು...ನಗು ನಗು...ನನಗೆ ಮಂಗಳೂರು ಟ್ರಿಪ್ಪಿನಲ್ಲಿ ನಾವು ಬಸ್ಸಿನಲ್ಲಿ ಹರಟೆಕೊಚ್ಚುತ್ತಿದ್ದ ನೆನಪು ತಂತು.ಆ ಹುಡುಗ ಚೂರೂ ಬದಲಾಗಿರಲಿಲ್ಲ...ಅದೇ ಮಾತುಗಳು..ಯಾರನ್ನೂ ಆಡಿಕೊಳ್ಳದ ತಿಳಿಹಾಸ್ಯ..ಮುಗ್ಧ ನಗು...ಮೈತ್ರಿಯೂ ಅಷ್ಟೇ...ಅದೇ ಧಾಟಿ...ಚೂರು ಘಾಟು,ಪೋಲಿಯೆನ್ನಿಸುವ ಡೈಲಾಗುಗಳು..ನಗು ನಗು...ಅದೇ ಥರ ಒಂದಿಷ್ಟು ಮಾತುಕಥೆ ಆದಮೇಲೆ ಮೈತ್ರಿ ತಾನು ನನ್ನ ಯಜಮಾನರೊಡನೆ ಕಂಪನಿ ಕೆಲಸದ ಮೇಲೆ ದೆಲ್ಲಿಗೆ ಹೋದಾಗಿನ ,ಅಲ್ಲಿಯ ಒಂದಿಷ್ಟು ನಗುಬರಿಸುವ ಸಂಗತಿಗಳನ್ನೂ ಹೇಳಿದಳು..ಆದನ್ನು ಆ ಹುಡುಗ ತೀರಾ ಸಾಮಾನ್ಯ ಎಂಬಂತೆ ಸ್ವೀಕರಿಸುತ್ತಿದ್ದ...ಅಲ್ಲಲ್ಲಿ ತನ್ನದೂ ಒಂದೆರಡು "ಅಲ್ಲಿ  ಹಾಗೆ ಹೀಗೆ"  ಎಂದು ಸಲ್ಲು ಸೇರಿಸುತ್ತಿದ್ದ...ನಗುತ್ತಿದ್ದ..
ನಾನು ಮಂಚದ ತುದಿಗೆ ಬಂದು ಕೂತಿದ್ದೆ...ಕಾಲು ನೆಲಕ್ಕಿರಿಸಿ ಕೈಯ್ಯಿಂದ ಮುಖಮುಚ್ಚಿಕೊಂಡಿದ್ದೆ..ತೀರಾ ಗೊಂದಲದಲ್ಲಿದ್ದೆ...ಅವರ ಮೂವರ ನಗು ನನ್ನ ಮೌನಕ್ಕೆ ಸಮನಾಗಿತ್ತು...


ಇನ್ನೊಂದೆರಡು ನಿಮಿಷವಾದ ಮೇಲೆ ಅವರಿಬ್ಬರೂ ಹೊರಡಲು ತಯಾರಾದರು.ಮೈತ್ರಿ ನನಗೆ ಬಾಯ್ ಹೇಳಲೋ ಏನೋ ರೂಮಿನ ಹತ್ತಿರ ಬರುವಂತೆ ತೋರಿದಳು ಅಷ್ಟರಲ್ಲೇ ಆ ಹುಡುಗ ಅವಳನ್ನು ತಡೆದು "ಏಯ್ ಅವರನ್ನಾ ಯಾಕೆ ಎಬ್ಬಿಸ್ತೀಯಾ,ಮಲ್ಕೊಳ್ಳಿ ಬಿಡು" ಎನ್ನುತ್ತಾ
,"ನಿಮ್ ಮಿಸಸ್ ಗೂ ಹೇಳ್ಬಿಡಿ" ಎಂದು ಮೆಟ್ಟಿಲಿಳಿದು ಹೊರಟು ಹೋದ....

ನನಗೆ ಅದೇನೋ ಹಾಯೆನಿಸಿತು...ನನ್ನವರ ಬರುವಿಕೆಗಾಗಿ ಕಾದೆ..ಎಲ್ಲವನ್ನೂ ಹೇಳಬೇಕೆಂದುಕೊಂಡೆ..ಅಷ್ಟರಲ್ಲಿ ಅದೇನೋ ಟೇಬಲ್ಲಿನ ವರೆಗೆ ಬಂದವರು  ಬಂದವರು ಮತ್ತೆ ತಿರುಗಿ ತಿರುಗಿ ನೋಡಿದರು...ಮೈತ್ರಿಯಲ್ಲೇ ನೋಡುತ್ತಿದ್ದರಾ ???ಮತ್ತೆ ವಾಪಸ್ಸು ಗೇಟಿನೆಡೆಗೆ ಓಡಿದರು..ನನಗೆ ಸಿಟ್ಟು ಮತ್ತೆ ಬುಸ್ಸೆಂದಿತು...ಎದ್ದು ಹಾಲಿನ ಪಕ್ಕದ ರೂಮಿನ ಕಿಟಕಿಯ ಬಳಿ ನಿಂತೆ...ಇವರು  ಎಲ್ಲಿ ಮತ್ತೆ ಮೈತ್ರಿಗೆ ಬಾಯ್ ಹೇಳಲು ಚಪ್ಪರಿಸಿದರೋ ಅಂದುಕೊಂಡೆ...

ಇವರು ಹೊರಗೋಗಿ ,ಹೊರಟವರ ಕಾರಿನ ಬಳಿ ನಿಂತು,
"ಸಾರ್ ನಿಮ್ಮ ಮಿಸೆಸ್ ಮೊಬೈಲು ಸಾರ್...ಅವತ್ತು ಡೆಲ್ಲಿಇಂದ ಹೊರಡ್ಬೇಕಾದ್ರೆ..  ಏನೋ ತೀರಾ ತೀರಾ ಅರ್ಜಂಟ್ ಕಾಲ್ ಮಾಡ್ಬೇಕಿತ್ತು..ನನ್ ಮೊಬೈಲ್ ಹ್ಯಾಂಗ್ ಆಗ್ತಾ ಇತ್ತು...ಅದ್ಕೆ  ಮೇಡಮ್ ಅವ್ರ  ಹತ್ರಾ ಮೊಬೈಲ್ ಇಸ್ಕೊಂಡು ಕಾಲ್ ಮಾಡ್ದವ್ನು ಹಂಗೆ ಟೆನ್ಶಲ್ ಅಲ್ಲಿ ನಾನೆ ಬ್ಯಾಗಿಗೆ ಹಾಕ್ಕೊಂಡ್ ಬಿಟ್ಟಿದ್ದೆ ಅನ್ಸತ್ತೆ...ಬಂದವನು ನೆನಪಾಗ್ಲಿ ಆಂತಾನೆ ಟೇಬಲ್ಲಿನ ಮೇಲಿಟ್ಟಿದ್ದೆ...ಈಗ ನೆನಪಾಯ್ತು. ತಗೊಳಿ ಸಾರ್  " ಎಂದು ಮೊಬೈಲೊಂದನ್ನು ಕೊಟ್ಟರು...
ಹೌದು..ಅದೇ ಮೊಬೈಲು..ನಾನು ಮೈತ್ರಿಯ ಪ್ರೇಮಸಂದೇಶಗಳನ್ನೆಲ್ಲಾ ಓದಿದ ಮೊಬೈಲು...ನೂರೆಂಟು ಮೆಸ್ಸೇಜುಗಳಿದ್ದ ಮೊಬೈಲು... ಇದೇನಿದು ಅಂದುಕೊಳ್ಳುವಾಗಲೇ,ಆ ಹುಡುಗ ನಗುತ್ತಾ ಮೈತ್ರಿಯ ಮುಖ ನೋಡಿ
"ಥ್ಯಾಂಕ್ಯು ಸಾರ್...ಇದು ನನ್ನ ಹಳೆಯ ಮೊಬೈಲು.. ಅವಳಿಗೆ ಅದೇನೋ ಹುಚ್ಚು ಇವಳಿಗೆ...ಊರುಬಿಟ್ಟೂ ಹೋಗ್ಬೇಕಾದ್ರಲ್ಲಾ ಅದನ್ನಾ ತಗೊಂಡ್ ಹೋಗ್ತಾಳೆ...ನನ್ನ ನೆನಪಿಗಂತೆ... ಇರ್ಲಿ ಇಷ್ಟ ದಿನ ಸುಮ್ನೆ ತಗೊಂಡು ಹೋಗಿ ಬರ್ತಿದ್ಲು ಈ ಸರಿ ನಿಮ್ಗಾದ್ರು ಪ್ರಯೋಜನಕ್ಕೆ ಬಂತು" ಎಂದು ಕಾರು ಸ್ಟಾರ್ಟು ಮಾಡಿದ..

ನಮ್ಮ ಯಜಮಾನರಿಗೆ ಅದೇನನ್ನಿಸಿತೋ "ಸಾರ್..ಸ್ಸಾರಿ..ಇಷ್ಟೇಲ್ಳಾ ಪರ್ಸನೆಲ್ ಅಂತಾ ಗೊತ್ತಿರ್ಲಿಲ್ಲ...ಅದೂ ನಂದು ಒಂದು ಇದೇ ಮಾಡೆಲ್ ನಾ ಮೊಬೈಲ್ ಇದೆ...ಇದೇ ಮಾಡೇಲ್ದು..ಆಶ್ವರ್ಯ ಅಂದ್ರೆ ಅದೇ ಗುರು ರಾಘವೇಂದ್ರರ  ವಾಲ್ಪೇಪರ್ ಕೂಡಾ.. ಅದ್ಕೇ ಗೊತ್ತಾಗ್ಲಿಲ್ಲ..ಸ್ಸಾರಿ" ಎಂದು ಗಲ್ಲುಗಿಂಜಿದರು...
ಅದಕ್ಕೆ ಆತ "ಅಯ್ಯೋ ಪರವಾಗಿಲ್ಲ ಬಿಡಿ" ಎಂದು ನಕ್ಕುಕಾರನ್ನು   ರಿವರ್ಸು ಗೇರಿಗೆ ಹಾಕುತ್ತಾ ಮೈತ್ರಿಯ ಮುಖ ನೋಡಿದ...ಆಕೆ ಸರಿಯಿದ್ದ ತನ್ನ ವೇಲನ್ನು ಮತ್ತೆ ಸರಿಮಾಡಿಕೊಂಡಳು...
ಕಾರು ಮನೆದಾಟಿ ಮೂತಿ ತಿರುಗಿಸಿಕೊಂಡು ಹೊರಟಿತ್ತು.....
ನನ್ನವರು ಗೇಟು ಹಾಕಿ ವಾಪಸ್ಸು ಬರುತ್ತಿದ್ದರು...
ಆಗ ಯಾಕೋ ಆ ಹುಡುಗ ಕಾಲೇಜಿನಲ್ಲಿ  ಹೇಳಿದ ಮಾತು ನೆನಪಾಯಿತು...ಮತ್ತೆ ಮತ್ತೆ ಕೇಳಬೇಕು ಅನ್ನಿಸಿತು..

"ನಮ್ಮ 
ಮನೆಯ ಹಿರಿಯರು ನಮಗೆ  ಒಳ್ಳೆಯ ಸಂಸ್ಕಾರವನ್ನು ಕೊಟ್ಟಿದ್ದಾರೆ..

ಹಿರಿಯರ 

ಆ ಸಂಸ್ಕಾರದ ಬೇಲಿ ನಮಗಾಗಿ..
ನಮ್ಮ ಒಳಿತಿಗಾಗಿ.. 

ಅವರು ಕೊಟ್ಟ 

ಸ್ವಾಂತಂತ್ರ್ಯ... 
ಬೇಲಿಯನ್ನು  ಹಾರುವದಕ್ಕಲ್ಲ...

ಒಪ್ಪುವ ಮನಸ್ಸಿಗಿಂತ..


ಬಯಸುವ  ದೇಹಕ್ಕಿಂತ ... 


ನಮಗೆ ನಾವೆ ಹಾಕಿಕೊಂಡ .. 

ನೀತಿ..
ನಿಯತ್ತು .. ಬಲು ದೊಡ್ಡದು..

ನಿನ್ನ 

ಚಂದದ ಸ್ನೇಹವನ್ನು  ಯಾವಾಗಲೂ ಮರೆಯುವದಿಲ್ಲ.."




ನನ್ನವರು ವಾಪಸ್ಸು ಬರುತ್ತಿದ್ದರು..ನಾನು ಗುಡುಕ್ಕನೆ ಮತ್ತೆ ರೂಮಿಗೋಡಿದೆ..ಅವರು ಬಾಗಿಲ ಚಿಲಕ ಹಾಕಿ ರೂಮಿನೆಡೆ ಬರುತ್ತಿದ್ದರು..
============================================================
(ಮುಂದೇನಾಯಿತು ?  ನಿಮಗೇ ಗೊತ್ತಿದೆ....)

Saturday, April 19, 2014

ಈ ಚುನಾವಣೆ ಮತ್ತು "ಬೂತ"ಗಣ್ಣು

ಅದು ಮಹಾಭಾರತದ ಕುರುಕ್ಷೇತ್ರ ಯುಧ್ದದ ಸಂದರ್ಭ.ಎರಡೂ ಪಂಗಡಗಳು ಹೋರಾಡಲು ಸಜ್ಜಾಗಿ ನಿಂತಿವೆ.ಗಜ-ಅಶ್ವ ಸವಾರರು,ರಥಿಕ-ಪದಾತಿಗಳು ತಮ್ಮ ತಮ್ಮ ಸ್ಥಾನದಲ್ಲಿ ರಣತಂತ್ರಗಳಿಗನುಗುಣವಾಗಿ ನಿಂತಿವೆ.ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭರತಖಂಡದ ಸೈನಿಕರು ಭರ್ಜಿ,ಬಿಲ್ಲು,ಬಾಣ,ಗದೆಗಳನ್ನು ಹಿಡಿದು ಹಣಾಹಣಿಗೆ ನಿಂತಿದ್ದಾರೆ.ಅದನ್ನು ನೋಡಲು ನಭದಲ್ಲಿ ದೇವ,ಗಂಧರ್ವ,ಕಿಂಕರಾದಿಗಣವೂ ಕಾದುಕುಳಿತಿದೆ......
ಹೀಗೆ ಯುದ್ಧಭೂಮಿಯಲ್ಲಿ ನಡೆಯುತ್ತಿರುವುದನ್ನೆಲ್ಳಾ ಕುರುವಂಶದ ರಾಜ ದೃತರಾಷ್ಟ್ರನಿಗೆ  ಸಂಜಯನು ಅರಮನೆಯಲ್ಲಿ ಕೂತಲ್ಲಿಯೇ ಹೇಳುತ್ತಿರುತ್ತಾನೆ.ತನ್ನ ದಿವ್ಯದೃಷ್ಟಿಯ ಮೂಲಕ ಪ್ರತೀಗಳಿಗೆಯ ಮಾಹಿತಿಯನ್ನು ಮಹಾರಾಜನಿಗೆ ತಿಳಿಸುತ್ತಾನೆ.ಇದು ದ್ವಾಪರಾಯುಗದ ಕಥೆ ,ನಮಗೆಲ್ಲರಿಗೂ ಗೊತ್ತು. ಆದರೆ ಕಲಿಯುಗದಲ್ಲಿಯೂ ಇದರ ಅನುಕರಣೆ ನಡೆದಂತಿದೆ ಅಂದ್ರೆ ನಂಬ್ತೀರಾ ??


ಹೌದು,ಇಂತಹ ಒಂದು ಪ್ರಯೋಗಕ್ಕೆ ಸಾಕ್ಷಿಯಾಗುತ್ತಿರುವುದು ಈ ಸಲದ ಲೋಕಸಭಾ ಚುನಾವಣೆ -೨೦೧೪.ಮತದಾರರಿಂದ ಮನ್ನಣೆ ಪಡೆಯುವ ಈ ಚುನಾವಣಾ ಸಂಗ್ರಾಮದಲ್ಲಿ  ಶಾಂತಿಯುತ,ಪಾರದರ್ಶಕ ಮತದಾನ ಪ್ರಕ್ರಿಯೆಗೆ ಆಸ್ಪದ ನೀಡುವ ಉದ್ದೇಶದಿಂದ ಈ ಬಾರಿ ಕೆಲವು ಆಯ್ದ ಲೋಕಸಭಾಕ್ಷೇತ್ರಗಳಲ್ಲಿ ಚುನಾವಣಾ ಆಯೋಗ "ವೆಬ್ ಕಾಸ್ಟಿಂಗ್" ತಂತ್ರಜ್ನಾನವನ್ನು ಅಳವಡಿಸಿಕೊಂಡಿದೆ.ಈ ತಂತ್ರಜ್ನಾನದ ಮೂಲಕ ಪ್ರತೀ "ಬೂತ್" ನಲ್ಲಿ ನಡೆಯುವ ಚಲನವಲನಗಳ ಬಗ್ಗೆ ಆಯೋಗ ಹದ್ದಿನಗಣ್ಣಿಡಬಹುದು. ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಇದನ್ನು ಅನುಷ್ಠಾನಗೊಳಿಸಿದ್ದು,ಇದಕ್ಕಾಗಿ ಇಂಜಿನಿಯರಿಂಗ್ ಸ್ನಾತಕೋತ್ತರ ವಿದ್ಯಾರ್ಥಿಗಳ ನೆರವುಪಡೆಯಲಾಗಿತ್ತು.
 ಬೆಂಗಳೂರು ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಯಾಗಿ ನಾನು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವಸಂತನಗರದ ಮತಗಟ್ಟೆಯೊಂದರಲ್ಲಿ ಈ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದು ನನ್ನ ಮೊದಲ ಚುನಾವಣೆಯ  ಅನುಭವ,ತಿಳಿದುಕೊಂಡ ಕೆಲವಿಚಾರಗಳನ್ನು ಹಂಚಿಕೊಳ್ಳಬಯಸುತ್ತೇನೆ.






ಏನಿದು "ವೆಬ್ ಕಾಸ್ಟಿಂಗ್ "?? 

ವೆಬ್ ಕಾಸ್ಟಿಂಗ್ ಅಂದರೆ ಅಂತರ್ಜಾಲದಲ್ಲಿ ಮಾಹಿತಿಯನ್ನು ಹರಿಯಬಿಡುವುದು ಎಂದರ್ಥ.ಇಲ್ಲಿ ಚುನಾವಣಾ ಮತಗಟ್ಟೆಯಲ್ಲಿ ನಡೆಯುವ ವಿದ್ಯಮಾನಗಳನ್ನು ಕ್ಯಾಮರಾದಲ್ಲಿ ದಾಖಲಿಸಿಕೊಂಡು ತತ್ ಕ್ಷಣ ಹಾಗೆ ಅದನ್ನು ಅಂತರ್ಜಾಲಕ್ಕೆ ಹರಿ ಬಿಡುವುದು ಎಂದು ಅರ್ಥೈಸಿಕೊಳ್ಳಬಹುದು.

ಇದರ ಕಾರ್ಯವಿಧಾನವೇನು ?

ಮೊದಲಿಗೆ ನಿಗದಿಪಡಿಸಿದ ಜಾಗದಲ್ಲಿ ಲ್ಯಾಪ್ ಟಾಪ್ ಅನ್ನು ಇರಿಸಿ(ಪೂರ್ತಿ ಕೋಣೆ, ಮತಗಟ್ಟೆ ಅಧಿಕಾರಿಗಳು,ಮತದಾರರು  ಕಾಣುವಂತೆ ಮತ್ತು ಮತಯಂತ್ರದ ಬಗ್ಗೆ ತೀರಾ ಪೋಕಸ್ ಮಾಡದಂತೆ)ಅದರಲ್ಲಿನ ವೆಬ್ ಕ್ಯಾಮರಾವನ್ನು ಚಾಲೂ ಮಾಡಬೇಕು.ನಂತರ ಅಂತರ್ಜಾಲದ ಸಂಪರ್ಕವನ್ನು ಪಡೆದು(ಡೋಂಗಲ್ ಗಳ ಮೂಲಕ) ಮೊದಲೇ ಸಿಧ್ಧಪಡಿಸಿದ ಚಾನೆಲ್ಲಿನ ಮೂಲಕ ರೆಕಾರ್ಡಮಾಡಿದ ವಿಡಿಯೋವನ್ನು ಅಂತರ್ಜಾಲಕ್ಕೆ ಕಳಿಸಬೇಕು.





ಇಲ್ಲಿ  ಬಳಸಲಾಗುವ ತಂತ್ರಾಂಶಗಳೇನು ?

ಇದಕ್ಕೆ ಯಾವುದೇ ನಿರ್ದಿಷ್ಟ ತಂತ್ರಾಶದ ಬಳಕೆಯ ಬಗ್ಗೆ ಮಾಹಿತಿ ನೀಡಿರಲಿಲ್ಲ,ಬದಲಿಗೆ ಈಗಾಗಲೇ ರೂಢಿಯಲ್ಲಿರುವ ಕೆಲ ಸೋಶಿಯಲ್ ವೆಬ್ ಸೈಟ್ ಗಳನ್ನೇ ಉಪಯೋಗಿಸಲು ನಿರ್ದೇಶನ ನೀಡಲಾಗಿತ್ತು.www.ustream.tv ಎನ್ನುವ ವೆಬ್ ಸೈಟ್ ನಲ್ಲಿ ವೆಬ್ ಕಾಸ್ಟಿಂಗ್ ನ ಸೌಲಭ್ಯ(ಬೇಸಿಕ್ ವರ್ಗದ್ದು) ಮುಕ್ತವಾಗಿದ್ದು,ಅಲ್ಲಿಗೆ ನಮ್ಮ ಹೆಸರನ್ನು ನೊಂದಾಯಿಸಿಕೊಂಡು ಬ್ರೋಡ್ ಕಾಸ್ಟ  ಮಾಡಲು ಹೇಳಲಾಗಿತ್ತು.

ಪ್ರತಿ ಮತಗಟ್ಟೆಯಿಂದ ಸೆರೆಹಿಡಿದ ತುಣುಕುಗಳನ್ನು ಗುರುತಿಸುವುದು ಹೇಗೆ ?

ನಾವು ಸೆರೆಹಿಡಿದ ವಿಡಿಯೋಗಳನ್ನು ಭಿತ್ತರಿಸುವ ಚಾನೆಲ್ ಗಳಿಗೆ ಹೆಸರು ನೀಡುವ ಬಗ್ಗೆ  ಒಂದಿಷ್ಟು ಸೂಚನೆಗಳನ್ನು ನೀಡಲಾಗಿತ್ತು,ಇದು ಪ್ರತೀ ಮತಗಟ್ಟೆಯನ್ನು ಗುರುತಿಸಲು ಸಹಕಾರಿಯಾಗುತ್ತದೆ.
ಚಾನಲ್ ನ ಹೆಸರು  ಒಟ್ಟೂ ೧೧ ಅಕ್ಷರಗಳದ್ದಾಗಿದ್ದು ಈ ಕೆಳಗಿನ ಮಾದರಿಗಳಲ್ಲಿರುತ್ತಿತ್ತು
GEAC-XXX-YYYY
ಇಲ್ಲಿ ಮೊದಲ ನಾಲ್ಕು ಅಕ್ಷರಗಳು ಕಡ್ಡಾಯವಾಗಿದ್ದರೆ ನಂತರದ ಮೂರು ಅಂಕೆಗಳು ಲೋಕಸಭಾಕ್ಷೇತ್ರದ ಸಂಖ್ಯೆ(Assembly Number) ಯನ್ನೂ
ನಂತರದ ನಾಲ್ಕು ಸಂಖ್ಯೆಗಳು ಪೋಲಿಂಗ್ ಬೂತಿನ ಸಂಖ್ಯೆಯನ್ನೂ (Part Number)ಹೇಳುತ್ತಿದ್ದವು.
ಉದಾಹರಣೆಗೆ :GEAC1620040

ಈ ವಿಧಾನದ  ಪ್ರಯೋಜನಗಳೇನು ??
ಪ್ರತೀ ಮತಗಟ್ಟೆಯಲ್ಲಿನ ಕ್ಷಣಕ್ಷಣದ ತುಣುಕುಗಳನ್ನು ಅಧಿಕಾರಿಗಳು ಕೇಂದ್ರ ಕಛೇರಿಯಲ್ಲಿ ಕೂತಂತೆಯೇ ನೋಡಬಹುದು.ಇದರಿಂದ ಮತ್ತಷ್ಟು ಮತದಾನ ಪ್ರಕ್ರಿಯೆ ಮತ್ತಷ್ಟು ಪಾರದರ್ಶಕ ಹಾಗೂ ಸುಗಮವಾಗಿ ನಡೆಯುವ ಆಶಯವಿದೆ.

ಮತಗಟ್ಟೆ ಅಧಿಕಾರಿಗಳು ಇದನ್ನು ಹೇಗೆ ಸ್ವೀಕರಿಸಿದರು ?

ನಾನು ಗಮನಿಸಿದಂತೆ  ಚುನಾವಣಾ ಅಧಿಕಾರಿಗಳಿಗೆ ಇದು ಬಿಸಿ ಮುಟ್ಟಿಸಿತ್ತು.ತಮ್ಮ ಮಾತುಕತೆಗಳೆಲ್ಲವೂ ಕೇಂದ್ರ ಕಛೇರಿಯಲ್ಲಿ ದಾಖಲಾಗುವ ಮಾಹಿತಿ ಅವರಿಗಿದ್ದುದ್ದರಿಂದ ಅವರ ಕಾಡುಹರಟೆಗಳಿಗೆ ಅವಕಾಶವಿರಲಿಲ್ಲ.ಜೊತೆಗೆ ಮತಗಟ್ಟೆಯ ಎಜೆಂಟರು,ಕೆಲ ಮತದಾರರ ಒರಟು ವಾದಗಳನ್ನು ಸಾಗು ಹಾಕಲೂ ಇದು ಸಹಾಯಕವಾಗಿತ್ತು."ನೋಡಿ ನೀವು ಮಾತನಾಡುವುದೆಲ್ಲವೂ ಅಲ್ಲಿ ರೆಕಾರ್ಡ ಆಗಿ ಹೆಡ್ಡಾಫೀಸಿಗೆ ಕಾಣುತ್ತದೆ" ಎಂದಾಗ ತೆಪ್ಪಗಾದ ಸುಮಾರು ಜನರನ್ನು ನೋಡಿದ್ದೆ

.



ಸಾರ್ವಜನಿಕರಿಗೆ ಈ ತುಣುಕುಗಳನ್ನು  ನೋಡುವ ಅವಕಾಶ ಇದೆಯೇ ?

www.ustream.tv ವೆಬ್ ಸೈಟ್ ಸಾರ್ವಜನಿಕ ವೀಕ್ಷಣೆಗೆ  ಮುಕ್ತವಾಗಿರುವುದರಿಂದ ಅಲ್ಲಿನ ವಿಡಿಯೋಗಳನ್ನು ಸಾರ್ವಜನಿಕರೆಲ್ಲರೂ ನೋಡಬಹುದು.ಅಲ್ಲಿ ನಿಮಗೆ ಬೇಕಾದ ಚಾನೆಲ್ ಅನ್ನು (ಚಾನಲ್ ಬರೆಯುವ ವಿಧಾನ ಮೇಲಿದೆ) ಹುಡುಕಿ ಮತಗಟ್ಟೆಯ ವಿಡಿಯೋವನ್ನು ನೋಡಬಹುದು.


 ಇನ್ನು ವೆಬ್ ಕಾಸ್ಟಿಂಗ್ ನ ಬಗ್ಗೆ ನನಗನ್ನಿಸಿದ ವಿಷಯಗಳಲ್ಲಿ ಆಯೋಗ ಬೇರೆ ವೆಬ್ ಸೈಟ್ ಗಳನ್ನು ಆಧರಿಸುವ ಬದಲು ತನ್ನದೇ ಆದ ಪೋರ್ಟಲ್ ಅನ್ನು ಆರಂಭಿಸುವುದು,ಆಪರೇಟರುಗಳಿಗೆ ಸಾಧ್ಯವಿದ್ದೆಡೆ ವೈ-ಫೈ ವ್ಯವಸ್ಥೆ ಮಾಡುವುದು(ಕೆಲವೆಡೆ 3G ಯ ನೆಟವರ್ಕ ಆಗಾಗ ಕಡಿತವಾಗುವುದರಿಂದ) ಸೇರಿದೆ.







ಮತಗಟ್ಟೆಯಲ್ಲಿ ಚುನಾವಣಾ ಆಯೋಗದಿಂದ ಕೊಟ್ಟ ಬ್ಯಾಚು ಸಿಕ್ಕಿಸಿಕೊಂಡೆನೆಂಬ ಖುಷಿ ಬೇರೆ.ಹಿಂದಿನ ದಿನವೇ ಬಸ್ಸಿನಲ್ಲಿ ಮತಗಟ್ಟೆ ಯಂತ್ರಗಳನ್ನು ತೆಗೆದುಕೊಂಡು ಹೋಗುವುದು ,ಅಲ್ಲಿ ಮೇಜು ಕುರ್ಚಿಗಳನ್ನು ಜೋಡಿಸಿಕೊಳ್ಳುವುದು,ಮರುದಿನ ಬೆಳಿಗ್ಗೆ  ಪಕ್ಷದಿಂದ ಒಬ್ಬೊಬ್ಬ ಎಜೆಂಟುಗಳು ಬಂದು ಕುಳಿತುಕೊಳ್ಳುವುದು,ಮೊದಲನೇ ಮತಗಟ್ಟೆ ಅಧಿಕಾರಿ ಮತದಾರರ ಗುರುತು ನೋಡಿ ಅವರ ಹೆಸರನ್ನು,ಸಂಖ್ಯೆಯನ್ನು  ಜೋರಾಗಿ ಕೂಗುವುದು ಅದನ್ನುಎಜೆಂಟರುಗಳು ಗುರುತು ಹಾಕಿಕೊಳ್ಳುವುದು,ನಂತರ ಎರಡನೇಯ ಅಧಿಕಾರಿ ಹೆಬ್ಬರಳಿಗೆ ಶಾಯಿ ಬಳಿದು ,ಸಹಿ ಹಾಕಿಸಿಕೊಂಡು ,ಸ್ಲಿಪ್ ನೀಡುವುದು.ಅದನ್ನು ಪಡೆದ ಕಂಟ್ರೋಲ್ ಯುನಿಟ್ಟಿನ   ಮೂರನೇಯ ಅಧಿಕಾರಿ  ಯಂತ್ರದಲ್ಲಿ ಒಟ್ಟೂ ಮತದಾರರ  ಸಂಖ್ಯೆಯನ್ನು ಲೆಕ್ಕ ಹಾಕಿ,ಮತಚಲಾವಣೆ ಯಂತ್ರವನ್ನು ಸಿದ್ಧ ಮಾಡುವುದು.ಓಟು ಹಾಕಿದ ಕೂಡಲೇ ಅದು ಕುಯ್ಯ್ ಎಂದು ಕೂಗುವುದು(ತುಂಬಾ ಸಲ ಕೂಗಿದ ಮೇಲೆ ಅದೇ ಶಬ್ಧ ತಲೆಚಿಟ್ಟು ಬರಿಸಿತ್ತು ಅನ್ನುವ ವಿಷಯ ಬೇರೆ )ಎಲ್ಲವೂ ಕುತೂಹಲಕಾರಿಯಾಗಿತ್ತು.ಮತಗಟ್ಟೆಯ ಮೇಲಧಿಕಾರಿ ಪ್ರತೀ ಎರಡು ತಾಸಿಗೊಮ್ಮೆ ಒಟ್ಟೂ ಮತದಾರದ ಸಂಖ್ಯೆಯನ್ನು "ಇಷ್ಟು ಗಂಡು,ಇಷ್ಟು ಹೆಣ್ಣು " ಎಂದು ತನ್ನ ಮೇಲಿನವರಿಗೆ ಮೊಬೈಲಿನ ಮೂಲಕ ತಿಳಿಸುವುದನ್ನೂ ನೋಡುವ ಅವಕಾಶವಾಯಿತು.ಇದೆಲ್ಲದರ ಜೊತೆಗೆ  ಕೊನೆಯಲ್ಲಿ ಕಿಟಕಿ,ಗಾಳಿಪಂಖಗಳಿಲ್ಲದ ಕೊಠಡಿಯಲ್ಲಿ ಬಿಸಿಲುಬಾಳೆಹಣ್ಣು ತಿಂದ ಅನುಭವವವೂ ಉಚಿತವಾಗಿದ್ದಿತ್ತು.

ವಿಶೇಷ ಕೃತಜ್ನತೆ :ಪದ್ಮಾ ಭಟ್ (ಲೇಖನ ಬರೆಯುವ ಅಂಗಾಕಾರ ಹೇಳಿಕೊಟ್ಟು ಬರೆಸಿದ್ದಕ್ಕಾಗಿ )

Sunday, March 16, 2014

ಪೂರ್ಣಾಹುತಿ

ನಮಸ್ತೆ,
ಅಹ್. ಜೀವಬಂಧ ಎನ್ನಿಸುವಷ್ಟಗಿನ ಮಟ್ಟಿಗೆ ಹಚ್ಚಿಕೊಂಡ  ಪ್ರೀತಿಯು ಮುರಿದುಹೋಗುವಾಗಿನ ಕೊನೆಯ ಹಂತದ ಚಡಪಡಿಕೆ ಹಾಗೂ ಮರುಮೈತ್ರಿಸಾಧ್ಯವೆನಿಸದಿದ್ದರೂ ಸಾಧ್ಯ ಎಂದು ಸತಾಯಿಸುವ  ಒಳಮನಸ್ಸಿನ ಆಸೆಗಳಿಗೊಂದು ಪೂರ್ಣವಿರಾಮವಿಡುವ ಭಾವ ಹೊತ್ತು ಬರೆದ ಒಂದಿಷ್ಟು ಸಾಲುಗಳಿವು....ದಯಮಾಡಿ ಓದಿ ಅನಿಸಿಕೆ ತಿಳಿಸಿ...

ಪೂರ್ಣಾಹುತಿ
=============
ಒಂದೆಳೆಯ ಉಸಿರಿನಲೆ ನಿಂತಿರುವೆ ಹುಡುಗಿ,
ಹನಿಸಿಬಿಡು ನೀ ಬೇಗ ಮಂಗಳದ ಗಂಗೆಯನು.
ಕುತೂಹಲದ ಸಣ್ಣುರಿಯಲೇ ಕಾಸದಿರು ಗೆಳತಿ,
ಅದೆಷ್ಟು ದಿನ ಹೊರಲಿ ಗೊಜಗುಟ್ಟುವಾ ಈ ಭೋಳೆದೆಯನು.

ಒಂದೋ,ನಿನ್ನ ನೆನಪಲೆ ಮಣ್ಣೊಳಗೆ ಮಲಗುವೆ,
ಜಗದೆಲ್ಲ ಉಬ್ಬುತಗ್ಗುಗಳ ಮರೆತು,ತೆಗೆದುಮುಚ್ಚಿದ ಗುಂಡಿಯೊಳಗೆ.
ಅಸ್ಥಿಯದು ಕರಗಿ ಕೆಂಕಣವಾಗುವವರೆಗೂ ಜತನದಿಂದಿರುವೆ,
ಆರುಗನಸೂದಿಸಿ ಬಚ್ಚಿಟ್ಟ ಮರುಜನುಮದಾ ಹಾರುಪುಗ್ಗಿಯೊಳಗೆ.

ಒಂದೊಮ್ಮೆ ದಕ್ಕಿದರೆ ನೀ ಕೊಡುವ ವಿಧಿಮದ್ದು,
ಹಾರುವೆ ಗರಿಬಿಚ್ಚಿ ಸುಂಗಿನಾಚೆಯ ಶ್ವೇತದಿಗಂಬರ ಚಿಟ್ಟೆಯಾಗಿ.
ಪೂರ್ವಭಾವಬಂಧನಸರಪಣಿಯ ತರಚುಗಾಯದಾರೈಕೆಗೆ
ಚುಚ್ಚಿಕೊಳ್ಳುವೆ ಕಳೆದೊಲವ ಕೋಶಗಳನೆ ಜೀವಲಸಿಕೆಯಾಗಿ.

ಒಂದೆಳೆಯ ಉಸಿರಿನಲೆ ನಿಂತಿರುವೆ ಹುಡುಗಿ,
ಹನಿಸು ನೀ ಬೇಗ ಮಂಗಳದ ಗಂಗೆಯನು.......


--------------------------
*ಗೊಜಗುಟ್ಟು=ಕುದಿ,ಕಾಸು=ಕಾಯಿಸು
ಪುಗ್ಗಿ=ಬಲೂನು,
ಸುಂಗು=ನಮ್ಮೂರ ಕಡೆ ತೆಳ್ಳಗಿನ ಮುಳ್ಳಿನಂಥ ರಚನೆಗಳಿಗೆ ಸುಂಗು ಎಂದು ಬಳಸುವುದುಂಟು( ಕಂಬಳಿಹುಳದ ಮೇಲಿನ ಮುಳ್ಳಿನ ಸಲುವಾಗಿ ಅದನ್ನು ಸುಂಗುನುಳ ಎಂದೂ ಕರೆಯುತ್ತಾರೆ )

ವಂದನೆಗಳು :)
ನಮಸ್ತೆ :)


Sunday, February 16, 2014

ಮೂರುತ್ತರ

ನಮಸ್ಕಾರ ಎಲ್ರಿಗೂ,
ಅಹ್..ನನ್ನೊಳಗಿನ ಗೊಂದಲಗಳಿಗೆ ಒಂದಿಷ್ಟು ಅಕ್ಷರರೂಪು ಕೊಡುವ ಪ್ರಯತ್ನ ಇದು...
ಒಂದಿಷ್ಟು ಒಳನೋಟಗಳಿರುವ ಬರವಣಿಗೆಯ ಹಂಬಲಹೊತ್ತು ಬರೆಯಲು ಶುರುಮಾಡಿದ್ದು...
ಗೊತ್ತಿಲ್ಲ ಎಷ್ಟರಮಟ್ಟಿಗೆ ಅದನ್ನು ಅಳವಡಿಸಿಕೊಂಡೆ ಅಂತಾ..
ದಯವಿಟ್ಟು ಓದಿ, ಅನಿಸಿಕೆಗಳನ್ನು  ತಿಳಿಸಿ, ಬೆಳೆಯಲು ಸಹಕರಿಸಿ :)
 ಬರಿತೀರಾ ಅಲ್ವಾ??ವಂದನೆಗಳು :)






ಬರೆಯಲಾರೆ ಕಣೆ ಹುಡುಗಿ ಕವಿತೆಯನು ನಾನಿಂದು 
ಬರಿಮೌನದಲೆ ಮುಳುಗಿಹುದು ತೇಲ್ಗಡಲ ದನಿಯಿಂದು

ಅರೆಬರೆಹನಿ ಕಾದಂಬಿನಿ ಮರೆಯೊಳು ಸೇರಿ
ತೇಲಿಹೋಗಲೇ ,ಊರುಕೇರಿಯ ದಾಟಿ ತೀರಮುಂದೆ.
ತೆರೆಮರೆಯಲೇ ಸರಿಯಲದೆಷ್ಟು ದಿನ ಗೆಳತಿ
ಪರದೆ ಏಳಲೇ ಬೇಕಲ್ಲ ಘಂಟೆಸದ್ದಿನ ಬೆನ್ನಹಿಂದೆ||ಬ||

ಧಪ್ಪನೆ ಮೇಲೆದ್ದು ಧೋ ಎಂದೆನ್ನುತ ಬಂದಪ್ಪಿಳಿಸಿಬಿಡಲೇ ,
ತಲೆಯೊಡೆದು ಚೂರಾಗಲಿ,ಆರಿದ್ರೆಯಲ್ಲಾರ್ತನಾದವೆಂದಾದರೂ ಕೇಳೀತೇ?
ತೊಪತೊಪನೆಬಿದ್ದ ಮಡಿಮೋರೆತುಣುಕುಗಳೇ
ಕಪ್ಪುಸೋಡದೊಳಗುಸಿರುಗಟ್ಟಿ ಕೆಮ್ಮುತಿಹವಲ್ಲ,
ಇನ್ನು ಹಳೆಹಳ್ಳಿಯಿಂದ ಬಂದ ಶುಧ್ಧಪೆದ್ದಾತ್ಮವುಳಿದೀತೆ ??||ಬ||

ಆದದ್ದಾಗಲೆಂದು ಪವನಸುತನನು ನೆನೆನೆನೆದು
ಉಡ್ಡಯನಕೆ ಸಜ್ಜಾಗಲೇ,ರಸರಾಗವ್ಯೋಮಧೀಂ ಅನುಭಾವ ರಜಸ್ಸಿನೆಡೆಗೆ.
ಹೋಗೇನು ಮಾಡಲಿ?ನಿಜ ಮನುಜತೆಯ ಕಾರ್ಯಭಾಗಕೊಟ್ಟು
ನೂಕಿಹನಲ್ಲವೇ ಅವನೆನ್ನ,ಎರಡು-ಒಂದರೀ ಅನಂತವರ್ತುಲದೊಳಗೆ

ಬರೆಯಲಾರೆ ಕಣೆ ಹುಡುಗಿ ಕವಿತೆಯನು ನಾನಿಂದು 
ಬರಿಮೌನದಲೆ ಮುಳುಗಿಹುದು ತೇಲ್ಗಡಲ ದನಿಯಿಂದು


================================
*ಕಾದಂಬಿನಿ=ಮೋಡಗಳ ಸಾಲು,
ರಜಸ್ಸು=ಧೂಳು,ಕಣ (+ತಮ,ಸತ್ವ,ರಜಗಳೆಂಬ ಮೂರುಗುಣಗಳಲ್ಲಿ ಒಂದು)

Sunday, January 26, 2014

ಮಾಸದ ಸಿನೆಮಾ :ಅತಿಥಿ

ನಮಸ್ತೆ ಎಲ್ರಿಗೂ....
   


             ನಿನ್ನೆ ವಿಜಯನಗರದ ಕಲಾವೇದಿಕೆ ಟ್ರಸ್ಟ್ ವತಿಯಿಂದ ನಡೆಯುವ "ಮಾಸದ ಸಿನೆಮಾ" ಕಾರ್ಯಕ್ರಮಕ್ಕೆ ಹೋಗಿದ್ದೆ . ಮನೆಯ ಟಾರಸಿಯಲ್ಲಿ ಪರದೆಗಳನ್ನು ಇಳಿಬಿಟ್ಟು ಪರದೆಯ ಮೇಲೆ ಸುಮಾರು ಎಂಬತ್ತು ಜನರಿಗೆ ಚಿತ್ರತೋರಿಸುವ ಪ್ರಯತ್ನ ಇದು.ತಿಂಗಳಿನಲ್ಲಿ ಎರಡು ದಿನ ಸಂಜೆ ಒಂದು ಒಳ್ಳೆಯ ಚಿತ್ರದ ವೀಕ್ಷಣೆಯ ಅವಕಾಶ.ವಿಳಾಸ ಹುಡುಕಿಕೊಂಡು ನಾನು ಅಂತೂ ನಿಗದಿತ ಸ್ಥಳ ತಲುಪಿದಾಗ ಚಿತ್ರ ಶುರುವಾಗಲು ಇನ್ನೂ ಒಂದು ಘಂಟೆ ಇರುವುದು ತಿಳಿದುಬಂತು.ಅಲ್ಲಿಯೆ ಇದ್ದ ಸಂಘಟರೊಂದಿಗೆ ಪರಿಚಯ ಮಾಡಿಕೊಳ್ಳುತ್ತಿರುವಾಗ ಈಗಾಗಲೇ ಮೂರ್ನಾಕು ಚಿತ್ರಗಳ ಪ್ರದರ್ಶನ ಆಗಿಹೋಯಿತೆಂದೂ ,ಇಂದು ಪಿ.ಶೇಷಾದ್ರಿಯವರ ನಿರ್ದೇಶನ,ಮಿತ್ರಚಿತ್ರ ನಿರ್ಮಾಣದ "ಅತಿಥಿ" ಚಿತ್ರ ಪ್ರದರ್ಶನಗೊಳ್ಳುತ್ತಿರುವುದಾಗಿಯೂ ತಿಳಿದುಬಂತು.


 (ಚಿತ್ರಕೃಪೆ :ಅಂತರ್ಜಾಲ )

    ಚಪ್ಪಲಿಗಳನ್ನು ಕೆಳಗೇ ಬಿಟ್ಟು ಮೇಲೇರಿದವನಿಗೆ ಎಲ್ಲಾ ಖುರ್ಚಿಗಳು ಖಾಲಿ ಇದ್ದುದು ಆಶ್ಚರ್ಯತಂದಿತ್ತಾದರೂ,ನಿಧಾನವಾಗಿ ಜನ ಬರತೊಡಗಿದ್ದು ಉತ್ಸಾಹ ಹೆಚ್ಚಿಸಿತ್ತು.ಬಂದವರಲ್ಲಿ ಹಿರಿಯರೇ ಹೆಚ್ಚಿದ್ದರು.ಅಬ್ಬಬ್ಬಾ ಎಂದರೆ  ನನ್ನನ್ನೂ ಸೇರಿಸಿ ೪  ಜನ ನಮ್ಮಂಥಹ ಹುಡುಗರಿರಬಹುದಷ್ಟೇ.ಆರೂ ಮೂವತ್ತರ ಹೊತ್ತಿಗೆ ಕಲಾವಿದ ಶ್ರೀನಾಥ ವಸಿಷ್ಠ ಅವರು ಎಲ್ಲರಿಗೂ ಸ್ವಾಗತ ಕೋರಿ,ಚಿತ್ರ ಪ್ರದರ್ಶನದ ನಂತರ ನಿರ್ದೇಶಕರೊಂದಿಗೆ ಸಂವಾದ ಇರುವುದಾಗಿ ತಿಳಿಸಿದರು.ನಾನು ಉತ್ಸುಕತೆಯಿಂದ ಚಿತ್ರನೋಡಲು ತಯಾರಾದೆ,ಚಿತ್ರ ನೋಡಿದ ಮೇಲೆ ನಿರ್ದೇಶಕರೊಂದಿಗೆ ಮಾತನಾಡುವ ಅವಕಾಶ ಸಿಗುತ್ತದೆ ಎಂಬ ಖುಷಿ ಬೇರೆ..
     ಮುಂದೆ ??
(ಇದು ಚಿತ್ರದ ಬಗೆಗಿನ ವಿಮರ್ಶೆ ಎಲ್ಲಾ ಅಲ್ಲ,ಅಷ್ಟು ತಿಳಿದವನೂ ನಾನಲ್ಲ, ಚಿತ್ರನೋಡಿದ ತಕ್ಷಣ ನನಗನಿಸಿದ ಮಾತುಗಳು ಅಷ್ಟೇ.)
          ಚಿತ್ರದ ಕಥೆಯಲ್ಲಿ ಎರಡು ಮುಖ್ಯಪಾತ್ರಗಳು.ನಾಲ್ಕುಗೋಡೆಗಳ ನಡುವೆ ಸಾಗುವ ಕಥೆಯಲ್ಲಿ ಹಿಂಸೆ- ಪ್ರತಿಕಾರ-ಕ್ರಾಂತಿಯನ್ನು ಹೇಳುವ ಒಂದು ಪಾತ್ರವಿದ್ದರೆ ಇನ್ನೊಂದೆಡೆ  ಸೇವೆ-ಅಸಹಾಯಕತೆ-ಮಾನವೀಯತೆಗಳನ್ನು ಹೊತ್ತುಕೊಂಡ ಇನ್ನೊಂದು ಪಾತ್ರವಿದ್ದು ಇವುಗಳ ನಡುವಿನ ವಿಚಾರಭೇಧ,ಮನಸ್ಸಿನ ತೊಳಲಾಟಗಳನ್ನು ಚಿತ್ರಿಸಲಾಗಿದೆ.ಕ್ರಾಂತಿಕಾರಿ ಯುವಕನ ಪಾತ್ರವನ್ನು ಶ್ರೀ ಪ್ರಕಾಶ ರೈ ನಿರ್ವಹಿಸಿದರೆ,ಹಳ್ಳಿಯಲ್ಲಿನ ಒಬ್ಬ ಪ್ರಾಮಾಣಿಕ ವೈದ್ಯನ ಪಾತ್ರವನ್ನು ಶ್ರೀ ದತ್ತಣ್ಣ ನಿರ್ವಹಿಸಿದ್ದಾರೆ.


(ಚಿತ್ರಕೃಪೆ :ಅಂತರ್ಜಾಲ ) 

          ಮಲೆನಾಡಿನ ಹಳ್ಳಿಯೊಂದರ ಸಮೀಪದ ಕಾಡಿನಲ್ಲಿ ಬಾಂಬ್ ತಯಾರಿಕೆಯಲ್ಲಿ ತೊಡಗಿರುವಾಗ ನಡೆದ ಸ್ಫೋಟದಿಂದ ಪ್ರಕಾಶ ರೈ ಗಾಯಗೊಂಡು ಅಲ್ಲೇ ಸಮೀಪದ ಡಾಕ್ಟರ ಮನೆಗೆ ಬರುತ್ತಾರೆ.ಡಾಕ್ಟರ ಹೆಂಡತಿಯನ್ನು ಒತ್ತೆಯಾಳಾಗಿರಿಸಿಕೊಂಡು ತಮ್ಮ ನಾಯಕನ ಗಾಯದ ಚಿಕಿತ್ಸೆಗೆ ಒತ್ತಾಯಿಸುವ ಕ್ರಾಂತಿಕಾರಿ ಗುಂಪಿನವರಿಗೆ ಪ್ರತಿರೋಧ ವ್ಯಕ್ತಪಡಿಸಲಾಗದೇ ದತ್ತಣ್ಣ ರೋಗಿಯ ಆರೈಕೆಯಲ್ಲಿ ತೊಡಗುತ್ತಾರೆ.ಮೊದಮೊದಲಿಗೆ ಪಿಸ್ತೂಲು ಹಿಡಿದುಕೊಂಡೇ ಮಾತಾಡುವ ಕ್ರಾಂತಿಕಾರಿ ಗುಂಪಿನ ನಾಯಕ,ಕ್ರಮೇಣ ತನ್ನೊಳಗಿನ ಮನುಷ್ಯನನ್ನು ಪರಿಚಯಿಸಿಕೊಳ್ಳುತ್ತಾ ಹೋಗುತ್ತಾನೆ.ವಯಸ್ಸಾದ ವ್ಯಕ್ತಿಯ ತುಮುಲಗಳು-ಯುವಕನ ಮಹತ್ವಾಕಾಂಕ್ಷೆ,ಹೆಂಡತಿಯನ್ನು ಬಿಡಿಸಿಕೊಳ್ಳಲಾಗದ ಅಸಹಾಯಕತೆ-ಪೋಲಿಸರ ಹೆದರಿಕೆ,ಇಳಿವಯಸ್ಸಿನಲ್ಲಿ ಮಗ ಹತ್ತಿರವಿರಬೇಕೆಂಬ ಬಯಕೆ-ದೇಹದ ಗಾಯವನ್ನು ಮೆಟ್ಟಿ ನಿಲ್ಲುವ ಛಲ ಹೀಗೆ ಹಲವಾರು ಆಯಾಮಗಳನ್ನು ಕಥೆ ಹೇಳುತ್ತಾ ಸಾಗುತ್ತದೆ.
        
              ಇದರ ಜೊತೆಗೆ ವೃದ್ಧ ದಂಪತಿಯ ಜೀವನಪ್ರೀತಿ,ಪಕ್ಕದ ಮನೆಯ ಪುಟ್ಟಿಯ ಮುಗ್ಧತೆ,ಅವಳು ತನ್ನ ನಾಯಿಮರಿಗಾಗಿ ಹುಡುಕುವ ಪರಿ,ಪಟ್ಟಣದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಮಗನನ್ನು ಕಳೆದುಕೊಂಡ ಅದೇ ಊರಿನ ಒಬ್ಬಾಕೆಯ ದುಃಖ ಹೀಗೆ ಒಂದಿಷ್ಟು ಮಾನವ ಸಹಜ ಅಭಿವ್ಯಕ್ತಿ,ಎಂ.ಟೆಕ್ ಓದಿಯೂ  ಸಾಮಾನ್ಯರಂತೆ ಬದುಕದೇ ಯಾವುದೋ ಸಿದ್ಧಾಂತಕ್ಕಾಗಿ ತನ್ನನ್ನು ಹುರುಪುಗೊಳಿಸಿಕೊಂಡಿರುವ ಯುವಕನ ವಿಶಿಷ್ಟ ಮನಸ್ಥಿತಿ,ಅವನಲ್ಲಿರುವ ಗೊಂದಲ,ನಾಗರೀಕತೆಯ ಮೇಲಿನ ಸಿಟ್ಟು ಎಲ್ಲವೂ ಇಲ್ಲಿದೆ.ಒಟ್ಟಿನಲ್ಲಿ ಒಂದು ಕ್ರೌರ್ಯದ ಮುಖವನ್ನು ಅದರೊಳಗೇ ಎಲ್ಲೋ ಇರುವ ಮಾನವೀಯತೆಯನ್ನು ಹುಡುಕುವಂತೆ ಮಾಡುವುದೇ ಕಥೆಯ ಮೂಲವಸ್ತು ಎನಿಸುತ್ತದೆ.
      
            ಇನ್ನು ಉಳಿದ ಪಾತ್ರಗಳ ಬಗ್ಗೆ ಹೇಳುವಾಗ ನನಗೆ ವೈಯಕ್ತಿಕವಾಗಿ ಆ ಊರಿನ ಒಬ್ಬ ಮಗನನ್ನು ಕಳೆದುಕೊಂಡ ತಾಯಿಯ ಪಾತ್ರ ಅಷ್ಟು ಪರಿಣಾಮಕಾರಿ ಎನಿಸಲಿಲ್ಲ. ಜೊತೆಗೆ  ಕಥೆಯಲ್ಲಿ  ಇನ್ನೂ ಗಂಭೀರನಡತೆಯವನಾಗಿ  ಇರುವಾಗಲೇ ಪ್ರಕಾಶ ರೈ ಪುಟ್ಟಿಯನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ,ಆ ಬದಲಾವಣೆಯ ಹಿಂದಿನ ,ಅವರು ಹೊಸಬರನ್ನು(ಪುಟ್ಟ ಮಗುವನ್ನು) ನಿರಾಕರಿಸುವ ಚಿತ್ರಣ ಯಾಕೋ ಅಷ್ಟಾಗಿ ನೆನಪಿಗೆ ಬರ್ತಾ ಇಲ್ಲ.ಮತ್ತೆ ಸತ್ತ ನಾಯಿಯನ್ನು ಹಿಡಿದ ಬುಟ್ಟಿ ಎಲ್ಲೋ ಅಲ್ಲಾಡಿದ ಹಾಗೇ ಭಾಸವಾಯ್ತು ಗೊತ್ತಿಲ್ಲ,ನನ್ನ ಗ್ರಹಿಕೆಯೇ ತಪ್ಪಿರಬಹುದು.ಇಷ್ಟು ಚಿತ್ರದ ಬಗ್ಗೆ ನನಗನ್ನಿಸಿದ್ದು.ಒಟ್ಟಿನಲ್ಲಿ ಖುಷಿ ಆಯ್ತು,ರೈ-ದತ್ತಣ್ಣರ ಅಭಿನಯಕ್ಕೆ ಚಪ್ಪಾಳೆ ಹೊಡೆಯಲೇ ಬೇಕೆನಿಸಿತು.

            ಕೊನೆಗೆ ಚಿತ್ರ ಮುಗಿಯುತ್ತಿದ್ದಂತೆ,ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದ ಶ್ರೀ ಪ್ರಹ್ಲಾದ್ ಅವರ ಆಗಮನವಾಯಿತು.  ಶೇಷಾದ್ರಿಯವರು ಬರುವುದು ತಡವಾಗುವುದರಿಂದ ಮೊಬೈಲ್ ಫೋನಿನ ಮೂಲಕವೇ ಸಂವಾದ ನಡೆಸಲಾಯಿತು.ಒಂದಿಷ್ಟು ಚಿತ್ರದ ಬಿಡುಗಡೆ,ಅಂಕಿ-ಅಂಶಗಳ ಮೇಲೆ ಮಾತುಕತೆಗಳಾಯಿತು.ಸುಮಾರು ಐದಾರು ಮಂದಿ ಅನಿಸಿಕೆ ವ್ಯಕ್ತಪಡಿಸಿದರು.
ಅದರಲ್ಲಿ ಒಬ್ಬರು ಕೇಳಿದ ಪ್ರಶ್ನೆ-ಉತ್ತರ ನನಗೆ ಇಷ್ಟವಾಯ್ತು.ಅದನ್ನೇ ಹಂಚಿಕೊಳ್ಳುತ್ತಿದ್ದೇನೆ ನೋಡಿ.

ಪ್ರಶ್ನೆ : ಸಾರ್ ನೀವು ಯಾಕೆ ಮಾಸ್ ನಟರನ್ನು ಹಾಕಿಕೊಂಡು ಸಿನೆಮಾ ಮಾಡುವುದಿಲ್ಲ ??ಇದರಿಂದ ಜಾಸ್ತಿ ಜನರನ್ನು ತಲುಪಬಹುದಲ್ಲ?
ಉತ್ತರ : ನಾನು ನಾಯಕನಿಗಾಗಿ  ಕಥೆ ಮಾಡುವುದಿಲ್ಲ,ಕಥೆಯೇ ನಾಯಕ .ಕಥೆಗೆ ಸೂಕ್ತವಾದ ನಟರು ತಾವಾಗಿಯೇ ಸಹಕರಿಸಿದರೆ ಅವರನ್ನಿಟ್ಟುಕೊಂಡು ಚಿತ್ರಿಸುತ್ತೇವೆ.ಇನ್ನು ಪ್ರೇಕ್ಷಕರನ್ನು ಕರೆತರುವ ಸಂಗತಿ.ಕನ್ನಡದ ಪ್ರಭುದ್ಧ ಪ್ರೇಕ್ಷಕ ಚಿತ್ರಮಂದಿರಗಳಿಗೆ ಬರುವುದು ಕಡಿಮೆಯಾಗಿದ್ದೆ ಚಿತ್ರಗಳ ಗುಣಮಟ್ಟವೂ ಕಡಿಮೆಯಾಗುತ್ತಿರಲು ಕಾರಣ.ಹಾಗಾಗಿ ಎಲ್ಲರನ್ನೂ ತಲುಪಲು ಸಾಧ್ಯವಾಗಿತ್ತಿಲ್ಲ.ಕಾಲೇಜು ವಿದ್ಯಾರ್ಥಿಗಳಿಗೆ ಇವುಗಳನ್ನು  ಹೆಚ್ಚು ಹೆಚ್ಚು ತಲುಪಿಸುವ ಬಗ್ಗೆ ಯೋಚಿಸುತ್ತಿದ್ದೇವೆ.

ಅಬ್ಬಾ "ಕನ್ನಡದ ಪ್ರಭುದ್ಧ ಪ್ರೇಕ್ಷಕ ಚಿತ್ರಮಂದಿರಗಳಿಗೆ ಬರುವುದು ............." ನಿಜ ಅನಿಸಿತು.

 ಪ್ರಹ್ಲಾದ್ ಅವರು ಚಿತ್ರೀಕರಣದ ಸಂದರ್ಭದ ಕೆಲ ಘಟನೆಗಳನ್ನೂ ಮೆಲಕು ಹಾಕಿದರು.ಪ್ರಕಾಶ್ ರೈ ಕೇವಲ ಒಂದು ರೂಪಾಯಿ ಸಂಭಾವನೆ ಪಡೆದು ನಟಿಸಿದ್ದನ್ನು ನೆನಪಿಸಿಕೊಂಡರು.ಅವರ ಸರಳತೆಯನ್ನೂ ಹೇಳಿದರು.ಕಥೆಗೆ ಸ್ಫೂರ್ತಿಯಾದ ಘಟನೆಗಳನ್ನು ಮುಕ್ತವಾಗಿ ಹಂಚಿಕೊಂಡರು.ತಾವು ಕಥೆ-ಚಿತ್ರಕಥೆಯನ್ನು ಜೊತೆಜೊತೆಗೆ ಬರೆದಿದ್ದನ್ನೂ ತಿಳಿಸಿದರು.

 ಕಾರ್ಯಕ್ರಮದ ಕೊನೆಯಲ್ಲಿ  ,ಮುಂದಿನ ಪ್ರದರ್ಶನ ದಿನಾಂಕ ೮-೨-೧೪,ಸಂಜೆ ೬:೩೦ ಕ್ಕೆ .
ಚಿತ್ರ: ಗಿರೀಶ್ ಕಾಸರವಳ್ಳಿಯವರ "ಕ್ರೌರ್ಯ"ಎಂದೂ  ತಿಳಿಸಲಾಯಿತು.ನೀವು ಬರ್ತಿರಾ ಅಲ್ವಾ??


ಹಮ್.. ಒಟ್ಟಿನಲ್ಲಿ ಮಾಸದ ಸಿನಿಮಾ ಕಾರ್ಯಕ್ರಮಕ್ಕೆ ಹೋಗಿದ್ದು ಬಹಳ ತೃಪ್ತಿಕೊಟ್ಟಿತು..
ಪರೀಕ್ಷೆಗೆ ಇನ್ನು ಬೆರಳಣಿಕೆಯಷ್ಟೇ ದಿನ ಇದೆ ಎಂದು ನೆನಪಾದಾಗ ನಾಳೆಯಿಂದ ಖಂಡಿತ ಓದುತ್ತೇನೆ ಎನ್ನುವ ಸಿದ್ಧ ಉತ್ತರವೂ ಹೊರಟಿತು. :D..
ಮುಂದಿನದು ನಿಮ್ಮ ಮುಂದಿದೆ ನೋಡಿ :).
ಧನ್ಯವಾದಗಳು ನಮಸ್ತೆ.

Tuesday, January 14, 2014

ಸಂಕ್ರಮಣ



ನೋಡಬೇಕಿದೆ ಒಮ್ಮೆ ನಡೆದ ಹಾದಿಯನು
ಸಾಗಬೇಕಿದೆ ಬಿಟ್ಟು ಅಹಂಮಿನ ಪೊರೆಯನು

ಸುಗ್ಗಿಹುಗ್ಗಿಯ ಮಾಡಿ,ಶಾರದೆಯು ಕರೆಯುತಿರೆ
ಬರುತಿಹನು ರವಿ,ಪಥಪಲ್ಲಟಗೈದು ಹಬ್ಬದೂಟಕೆಂದು
ಕಾಲಧೂಳನು ನೆಕ್ಕಿ,ಸ್ವರ್ಗಪುಣ್ಯವ ಪಡೆದು
ಸಾಗಿಹುದು ನದಿಮೀನು ಮಕರಗಂಬದ ಚೆಲುವನೋಟಕೆಂದು|ನೋ|

ಅಂದದೆಲೆಗಳನೆಲ್ಲ ಬಿಟ್ಟು,ಕನಸಕಸ್ತ್ರವನು ಹೊತ್ತು 
ನಿಂತಿಹುದು ಮಾಮರವು ಫಲಬಲ ಸಾರ್ಥಕ್ಯದಾ ಗುರಿತೊಟ್ಟು
ಕಿಚ್ಚು ಹಾಯುವ ಕೆಚ್ಚು,ಜೆಲ್ಲಿಕಟ್ಟಿನ ಕಸುವರಸಿ
ಕೋಡೆತ್ತಿಹುದು ಜೋಡೆತ್ತು,ಡೊಣಕಲಿಗೊಂದು ಗುದ್ದುಕೊಟ್ಟು|ನೋ|

ಬೇರಿನಾಲವ ಮರೆತು ಬಲುದೂರ ನೆರೆದಿರುವ
ದಿವಾಚರಕೆ ತಿರುಗಿಂದು ತವರಿನೆಡೆ ನಡೆತೃಷೆಯು
ಬೆಳೆದಪೈರನು ಕೊಯ್ದು,ಗೋಣಿಚೀಲದಿ ಒಯ್ದ
ಗೆದ್ದೆಬಯಲಲಿ ನಾಳೆ,ಮಗೆಬಳ್ಳಿ ಹಸಿರ್ಹಸೆಯು |ನೋ|


ನೋಡಬೇಕಿದೆ ಒಮ್ಮೆ ನಡೆದ ಹಾದಿಯನು
ಸಾಗಬೇಕಿದೆ ಬಿಟ್ಟು ಬೇಡದಹಂಮಿನ ಪೊರೆಯನು
ಏಕೆಂದರಿದು ಸಂಕ್ರಮಣ ಕಾಲ,ಇದು ಸಂಕ್ರಮಣಕಾಲ

--------------------------------------------------------------------

*ಶಬ್ದಾರ್ಥ:(ನನಗೆ ತಿಳಿದಂತೆ ,ತಪ್ಪಿದ್ದರೆ ತಿಳಿಸಿ)

ಮಕರಗಂಬ=ಮಕರರಾಶಿಯ ಪ್ರತೀಕವಾದ ಕಂಬ(ಪ್ರತಿರಾಶಿಗೂ ಒಂದೊಂದು ಕಂಬ ಶಾರದೆಯ ಮಡಿಲಲ್ಲಿ)ಜೆಲ್ಲಿಕಟ್ಟು=ಒಂದು ಬಗೆಯ ಎತ್ತುಗಳ ಪಂದ್ಯ,ಡೊಣಕಲು=ಕೊಟ್ಟಿಗೆಯಲ್ಲಿ ದನಕರುಗಳನ್ನು ಕಟ್ಟುವ ಜಾಗ(ಬೇಲಿಯ ಗೇಟು ಎಂದೂ ಬಳಕೆಯಲ್ಲಿದೆಯಂತೆ),ಮಗೆಬಳ್ಳಿ=ಒಂದು ಬಗೆಯ ತರಕಾರಿ,ಮಗೆಕಾಯಿಯ ಬಳ್ಳಿ,ಗೆದ್ದೆ=ಗದ್ದೆ,ಹಸಿರ್ಹಸೆ=ಹಸಿರುಹಸೆ,ದಿವಾಚರ=ಆಕಾಶದಲ್ಲಿ ಚಲಿಸುವುದು,ಪಕ್ಷಿಗಳು ಎಂಬ ಅರ್ಥದಲ್ಲಿ   (ಬೆಳಕಿನಲ್ಲಿ ಓಡಾಡುವ ಜೀವಿಗಳು ಎಂಬ ಅರ್ಥವೂ ಇದೆ)