Sunday, February 16, 2014

ಮೂರುತ್ತರ

ನಮಸ್ಕಾರ ಎಲ್ರಿಗೂ,
ಅಹ್..ನನ್ನೊಳಗಿನ ಗೊಂದಲಗಳಿಗೆ ಒಂದಿಷ್ಟು ಅಕ್ಷರರೂಪು ಕೊಡುವ ಪ್ರಯತ್ನ ಇದು...
ಒಂದಿಷ್ಟು ಒಳನೋಟಗಳಿರುವ ಬರವಣಿಗೆಯ ಹಂಬಲಹೊತ್ತು ಬರೆಯಲು ಶುರುಮಾಡಿದ್ದು...
ಗೊತ್ತಿಲ್ಲ ಎಷ್ಟರಮಟ್ಟಿಗೆ ಅದನ್ನು ಅಳವಡಿಸಿಕೊಂಡೆ ಅಂತಾ..
ದಯವಿಟ್ಟು ಓದಿ, ಅನಿಸಿಕೆಗಳನ್ನು  ತಿಳಿಸಿ, ಬೆಳೆಯಲು ಸಹಕರಿಸಿ :)
 ಬರಿತೀರಾ ಅಲ್ವಾ??ವಂದನೆಗಳು :)






ಬರೆಯಲಾರೆ ಕಣೆ ಹುಡುಗಿ ಕವಿತೆಯನು ನಾನಿಂದು 
ಬರಿಮೌನದಲೆ ಮುಳುಗಿಹುದು ತೇಲ್ಗಡಲ ದನಿಯಿಂದು

ಅರೆಬರೆಹನಿ ಕಾದಂಬಿನಿ ಮರೆಯೊಳು ಸೇರಿ
ತೇಲಿಹೋಗಲೇ ,ಊರುಕೇರಿಯ ದಾಟಿ ತೀರಮುಂದೆ.
ತೆರೆಮರೆಯಲೇ ಸರಿಯಲದೆಷ್ಟು ದಿನ ಗೆಳತಿ
ಪರದೆ ಏಳಲೇ ಬೇಕಲ್ಲ ಘಂಟೆಸದ್ದಿನ ಬೆನ್ನಹಿಂದೆ||ಬ||

ಧಪ್ಪನೆ ಮೇಲೆದ್ದು ಧೋ ಎಂದೆನ್ನುತ ಬಂದಪ್ಪಿಳಿಸಿಬಿಡಲೇ ,
ತಲೆಯೊಡೆದು ಚೂರಾಗಲಿ,ಆರಿದ್ರೆಯಲ್ಲಾರ್ತನಾದವೆಂದಾದರೂ ಕೇಳೀತೇ?
ತೊಪತೊಪನೆಬಿದ್ದ ಮಡಿಮೋರೆತುಣುಕುಗಳೇ
ಕಪ್ಪುಸೋಡದೊಳಗುಸಿರುಗಟ್ಟಿ ಕೆಮ್ಮುತಿಹವಲ್ಲ,
ಇನ್ನು ಹಳೆಹಳ್ಳಿಯಿಂದ ಬಂದ ಶುಧ್ಧಪೆದ್ದಾತ್ಮವುಳಿದೀತೆ ??||ಬ||

ಆದದ್ದಾಗಲೆಂದು ಪವನಸುತನನು ನೆನೆನೆನೆದು
ಉಡ್ಡಯನಕೆ ಸಜ್ಜಾಗಲೇ,ರಸರಾಗವ್ಯೋಮಧೀಂ ಅನುಭಾವ ರಜಸ್ಸಿನೆಡೆಗೆ.
ಹೋಗೇನು ಮಾಡಲಿ?ನಿಜ ಮನುಜತೆಯ ಕಾರ್ಯಭಾಗಕೊಟ್ಟು
ನೂಕಿಹನಲ್ಲವೇ ಅವನೆನ್ನ,ಎರಡು-ಒಂದರೀ ಅನಂತವರ್ತುಲದೊಳಗೆ

ಬರೆಯಲಾರೆ ಕಣೆ ಹುಡುಗಿ ಕವಿತೆಯನು ನಾನಿಂದು 
ಬರಿಮೌನದಲೆ ಮುಳುಗಿಹುದು ತೇಲ್ಗಡಲ ದನಿಯಿಂದು


================================
*ಕಾದಂಬಿನಿ=ಮೋಡಗಳ ಸಾಲು,
ರಜಸ್ಸು=ಧೂಳು,ಕಣ (+ತಮ,ಸತ್ವ,ರಜಗಳೆಂಬ ಮೂರುಗುಣಗಳಲ್ಲಿ ಒಂದು)