Sunday, September 30, 2018

ಲಟಕಿ-ಪಿಟಕಿ

ಲಟಕಿ-ಪಿಟಕಿ ಚೀನಾ ಮಾಲಿನಂತೆ ಜಗಮಗದ ಜೀವನ 
ಇಲ್ಲಿ ರಿಪೇರಿಯ ಮಾತೇ ಇಲ್ಲ; ಇದ್ದಷ್ಟು ದಿನ ನಡೆಯಬೇಕಷ್ಟೇ
ಅಲ್ಲಿ ಬದುಕು ಗೋಡೆ ಗಡಿಯಾರಂತೆ ಟಕ್ ಟಕ್ ಸಾಗುತ್ತದೆ
ಅದೇ ವೇಗ,ಅದೇ ರಾಗ, ಆಗಾಗ ಕೀಲಿ ಕೊಡುತ್ತಿರಬೇಕಷ್ಟೇ
ಏನೂ ಇಲ್ಲವೆಂದೇನಿಲ್ಲ, ಆದರೇನೋ ಅಂದುಕೊಂಡಂತಿಲ್ಲ
ಇಲ್ಲದೇ ಬದುಕು ಜೀಕಿದವರಿಗೆ ಇದೆಲ್ಲ ಅರ್ಥವಾದಂತಿಲ್ಲ
ಅಂದು ಟಿ.ವಿಯೊಂದ ತಂದರೆ ಆಯೂಷ್ಯಪೂರ್ತಿ ಬರಬೇಕೆಂಬ ಹಂಬಲ
ಇಂದು ಮೊಬೈಲು ತಂದು ಮೂರನೇ ತಿಂಗಳಲ್ಲೇ ಬದಲಾವಣೆಯ ತಳಮಳ
ಫೋನಿನಲ್ಲಿನ ಮಾತು, ಕ್ಷೇಮ-ಸಮಾಚಾರ ಕರೆಯೋಲೆ-ಆಮಂತ್ರಣ ಅವಶ್ಯಕತೆಗಷ್ಟೇ ಸೀಮಿತವಾ?
ಕಾಲೇಜು ಆಫೀಸು ಮನೆಯ ಕಷ್ಟ ಸುಖ ಹಂಚಿಕೊಳ್ಳುವ, ಹರಟಿ ಹಗುರಾಗುವ ಮಾಧ್ಯಮವಾ?
ಕೆಲಸವೊಂದು ಸಿಕ್ಕರೆ ತಲೆಬಗ್ಗಿಸಿ ಅರವತ್ತೂ ವರುಷ ಗೈಯ್ಯುವುದು ಧರ್ಮವಾ?
ವರುಷಕ್ಕೊಂದು ಕಂಪನಿ ಬದಲಾಯಿಸಿ, ಮೂವತ್ತು ಪರಸೆಂಟ್ ಹೈಕ್ ಗಳಿಸುವದು ಕ್ರಮವಾ?
ಪಕ್ಕದ ಮನೆಯೊಂದಿಗೆ ಬೇಲಿ ಗುಟ್ಟಕ್ಕೂ ಜಗಳವಾಡಿ ತಲೆ ಕೆಡಿಸಿಕೊಳ್ಳಲೇ ಬೇಕಾ?
ಫ್ಲಾಟಿನಲ್ಲಿ ತಮ್ಮಷ್ಟಕ್ಕೆ ತಾವಿದ್ದು, ಲಿಫ್ಟಿನಲ್ಲಿ ಸಿಕ್ಕಾಗ ಹಾಯ್ ಎಂದು ಸಾಗಿದರೆ ಸಾಕಾ?
ನೆಂಟರು ಬಂಧುಗಳು ಹಬ್ಬಗಳು ಸಮಾಜ; ಎಲ್ಲರ ಜೊತೆಗಿದ್ದು ಸಾಗಬೇಕು
ಕೆಲವೊಮ್ಮೆ ಮಿಂಚಬೇಕು, ಸುಮ್ಮನಿರಬೇಕು, ಹಲವು ಬಾರಿ ಬೈಯ್ಯಬೇಕು
ಇತ್ತ ಗುರುತು ಪರಿಚಯವಿಲ್ಲದ ಜಾಗಕ್ಕೆ ಹೋಗಿ, ಕುಡಿದು ಕುಣಿದು ತೂರಾಡಿ
ಸೋಮವಾರ ಬೆಳಿಗ್ಗೆಯೆದ್ದು ಆಫೀಸಿಗೆ ಹೊರಡಬೇಕು,ಶನಿವಾರಕ್ಕೆ ಕಾಯಬೇಕು
ಇಷ್ಟಕ್ಕೂ ಬದಲಾಗಿದ್ದು ಏನು? ಬರೀಕಾಲವಾ?
ಮನಸ್ಥಿತಿಯಾ?ಆರ್ಥಿಕ ಪರಿಸ್ಥಿತಿಯಾ?
ಒಂದಿಷ್ಟು ಹೌದು, ಒಂದಿಷ್ಟು ಅಲ್ಲ...
ಸ್ಪಷ್ಟ ಉತ್ತರ ಸಿಗುತ್ತಿಲ್ಲ...ಅಲ್ಲೂ ಅಲಿಪ್ತ ನೀತಿಯಾ?
ಏನೂ ಇಲ್ಲವೆಂದೇನಿಲ್ಲ, ಆದರೇನೋ ಅಂದುಕೊಂಡಂತಿಲ್ಲ
ಬಹುಷಃ ಇಲ್ಲದೇ ಬದುಕು ಜೀಕಿದವರಿಗೆ ಇದೆಲ್ಲ ಅರ್ಥವಾದಂತಿಲ್ಲ
-ಚಿನ್ಮಯ
30/09/2018

Sunday, September 23, 2018

ಹ್ಯಾಶ್‍ಟ್ಯಾಗ್ # ಪ್ರೀತಿ(ಭಾಗ-ಸರಿಯಾಗ್ ಗೊತ್ತಿಲ್ಲ)

“ನೀನೋ..ನಿನ್ ಮೂಡೋ...ಭಗವಂತಾ..ನೀನೇ ಕಾಪಾಡ್ಬೇಕು..”
“ಭಗವಂತಾ” .... “ತುಂಬಾ ಸ್ವೀಟ್ ಆಗ್ ಕೇಳ್ಸತ್ತೆ ಕಣೆ ನೀನ್ ಹೇಳದ್ರೆ..”
“ಏನೋ..ಸುಮ್ನೆ ಹೇಳ್ತಿಯಾ ಕಣೋ..”
“ನಿಜ್ಜಾ ಲೇಯ್...”
“ಅದ್ ಹೆಂಗೋ...ಎಲ್ರೂ ಹೇಳ್ತಾರೆ ಭಗವಂತಾ..ದೇವ್ರೇ..ರಾಮಾ ಅಂತಾ...ನಿಮ್ಮನೆಲ್ ಯಾರೂ ಹೇಳಲ್ವಾ?”
“ಹೇಳ್ತಾರೆ....ಆದ್ರೆ”
“ಏನ್ ಆದ್ರೆ?”
“ಏನೋ ನಿನ್ನಷ್ಟ್ ಚೆನಾಗ್ ಕೇಳ್ಸಲ್ಲ”
[ಆಕೆ ಜೋರಾಗಿ ನಕ್ಕಳು. ಅವಳ ಭಾಷೆಯಲ್ಲೇ ಹೇಳೋದಾದ್ರೆ ಕಿಸಿಯುತ್ತಿದ್ದಳು. ಶತಭಿಷ ಕಾಫಿ ಮುಗಿಸಿ ನೀರು ಕುಡಿಯಲು ಹೊರಟ]
“ಲೋ..ನೀರ್ ಕುಡಿಬಾರ್ದೋ...”
“ಏಯ್...ಹೋಗೇ...”
“ಆಯ್ಯಾ..ಬಿಡು...”
“ಲೇಯ್ ಯಾಕೇ ಕುಡಿಬಾರ್ದು?”
“ಕಾಫಿ ಕುಡದು ಅರ್ಧ ಗಂಟೆ ಏನೂ ತಿನ್ಬಾರ್ದು, ಕುಡಿಬಾರ್ದು ...ಕಾಫಿ ಘಮ ಹಂಗೆ ಬಾಯಲ್ಲೇ ಇರ್ಬೇಕು...”
“ಏನೋ..ನಾವ್ ಈಗೀಗ್ ಕಾಫಿ ಕುಡಿತಿರೋದು...ನಿಮ್ಮಷ್ಟ್ ಎಲ್ಲಾ ಚೆನಾಗ್ ಕುಡ್ಯಕ್ ಬರಲ್ಲ ಮೇಡ,..ಕಲಸ್ ಕೊಡಿ ಸ್ವಲ್ಪ...”
“ಇರ್ಲಿ ಇರ್ಲಿ..ಕಲಸ್ ಕೊಡಣಾ”
[ಅಷ್ಟರಲ್ಲಿ ಬಿಲ್ ಬಂತು..]
[ಶತಭಿಷ ವಾಡಿಕೆಯಂತೆ ಬಿಲ್ ಕಸಿದುಕೊಂಡು ಹಣ ಕೊಟ್ಟ]
“ಎಷ್ಟಾಯ್ತೋ?”
“ಎಷ್ಟೋ ಆಯ್ತು ...ಯಾಕೀಗ?”
“ಏಯ್..ಎಷ್ಟ್ ಆಯ್ತು ಹೇಳೋ..”
“ಹೇಳಲ್ಲ...”
“ಸರಿ...” [ಆಕೆ ಐನೂರರ ನೋಟನ್ನು ಅವನ ಕೈಗಿಡಲು ಬಂದಳು]
“ಲೇಯ್ ಇರ್ಲಿ ಬಿಡೆ...”
“ಊಹೂಂ..ಸರಿ ಆಗಲ್ಲ ಕಣೋ..”
“ಯಾಕೇ?”
“ಅದ್ ಹಂಗೆ...ಮುಚ್ಕೊಂಡ್ ಎಷ್ಟ್ ಆಯ್ತು ಹೇಳು”
“ಓಕೇ..ಓಕೇ...50-50 ಮಾಡೋ ತನ್ಕಾ ಬಿಡಲ್ಲಾ ಅಲ್ಲಾ ನೀ...100 ಕೊಡು ಹೋಗ್ಲಿ..”
“ಚೇಂಜ್ ಇಲ್ಲಾ..”
“ನನ್ ಹತ್ರ ಇದೆ ಕೊಡು...”
“ಕೊಡಲ್ಲ”
“ಲೇ..ಎಷ್ಟೇ ನಾಟಕಾ ಮಾಡ್ತಿಯಾ?..”
“ನಾಟಕಾ ನಾ? ನಾನಾ? ಇಲ್ಲಪ್ಪಾ...ನಾನ್ ನಾಟಕಾ ನೋಡಕ್ ಬಂದಿರದು..”
[ಕುಂತಲ್ಲಿಂದಲೇ ಕಣ್ಣು ಹೊಡೆದು ಹೊರಡಲು ಅನುವಾದಳು]
“ಕಥೆ...ಹೋಗಣಾ ಬಾ...” [ಶತಭಿಷನಿಗೆ ಅವರಿಬ್ಬರ ಮೊದಲ ಭೇಟಿಯ ನೆನಪಾಯಿತು]
ಕಾಲೇಜಿನಿಂದ ಇಬ್ಬರೂ ಒಂದು ಕಾನ್ಫರೆನ್ಸಿಗೆ ಹೋಗಿದ್ದರು. ಲಂಚ್‍ಗೆ ಆರ್ಡರ್ ಮಾಡಿದ್ದು ಪಲಾವ್ ಮತ್ತು ಒಂದು ನಾರ್ಥ್ ಇಂಡಿಯನ್ ಥಾಲಿ. ಈತ ಸೂಪ್ ಮುಗಿಸುವಷ್ಟರಲ್ಲಿ ಆಕೆ ಹಪ್ಪಳಕ್ಕೆ ಕೈ ಹಾಕಿದ್ದಳು. ಈ ಚಂಪಾಕಲಿ ಇಷ್ಟವೆಂದು ಹೇಳಿದ್ದಕ್ಕೆ ಪಾಯಸಕ್ಕೆ ಸಕ್ಕರೆ ಹಾಕಿ ತಿನ್ನುವಷ್ಟು ಸಿಹಿಯ ಹುಚ್ಚಿರುವ ಆತ ಅದನ್ನು ಬಿಟ್ಟು ಕೊಟ್ಟಿದ್ದ. ಆಕೆ ಊಟವಾದ ಕೂಡಲೇ ಹೇಳಿಬಿಟ್ಟಿದ್ದಳು...
”50-50”
ಅಂದೂ ಆಕೆಯ ಬಳಿ ಚಿಲ್ಲರೆ ಇರಲಿಲ್ಲ. ಮರುದಿನ ಹುಡುಕಿಕೊಂಡು ಬಂದು ಕೊಟ್ಟಿದ್ದಳು.
“ಥ್ಯಾಂಕ್ಸ್ ಫಾರ್ ಅ ನೈಸ್ ಡೇ ಔಟ್” ಎನ್ನುವ ಕಾಂಪ್ಲಿಮೆಂಟ್ ಜೊತೆ. ಶತಭಿಷನಿಗೆ ಚಂಪಾಕಲಿ ತಿಂದಷ್ಟೇ ಖುಷಿಯಾಗಿತ್ತು...
ಆದರೆ ಇವತ್ತೇಕೋ ಕಾಫಿಯ ಕಹಿ ಬಾಯಿಗಂಟಿತ್ತು. ಆದರೆ ಅದರಲ್ಲೇನೋ ಮಜವಿತ್ತು..
50-50, 100-0 ಕ್ಕೆ ಬದಲಾಗುವ ಎಲ್ಲಾ ಸಾಧ್ಯತೆಯಿತ್ತು. ಆದರೆ ಆ ಕಡೆಗೋ ಈ ಕಡೆಗೋ ಶತಭಿಷನ ತಲೆತುಂಬಾ ಗೊಂದಲ ಗುಯ್ಯ್‍ಗುಡುತ್ತಿತ್ತು...
ನಾಟಕ ಶುರುವಾಗಲು ಹದಿನೈದು ಇಪ್ಪತ್ತು ನಿಮಿಷ ಇರುವಂತೆಯೇ ಎಲ್ಲರೂ ಕ್ಯೂನಲ್ಲಿ ನಿಂತರು. ಅಚಾನಕ್ಕಾಗಿ ಶ್ರಾವ್ಯಾಳ ಆಂಟಿಯೊಬ್ಬರು ಕ್ಯೂನಲ್ಲಿ ಕಾಣಿಸಿಕೊಂಡರು. ಮಾತಾಡಿಸಿದರು. ಶ್ರಾವ್ಯಾ ನಗುನಗುತ್ತಲೇ ಮಾತಾಡಿದ್ದರೂ ಸ್ವಲ್ಪ ಪೆಚ್ಚಾದಂತೆ ಕಂಡಿತು.
ನಂತರ ಶತಭಿಷನ ಕಡೆ ತಿರುಗಿದವಳು “ಸುಮ್ನೆ ಕುಯ್ಯಂ ಅಂತಾರೆ ಕಣೋ” ಎಂದಳು.
ಆಕೆ ಶತಭಿಷನನ್ನು ಆ ಆಂಟಿಗೆ ಪರಿಚಯಿಸಲಿಲ್ಲ..
“ಪರಿಚಯಿಸಿದ್ದರೆ ಏನೆಂದು ಹೇಳಿಯಾಳು?” ಶತಭಿಷ ಹುಳಬಿಟ್ಟುಕೊಂಡ.
“ಫ್ರೆಂಡ್...?” “ತುಂಬಾ ಸಿಂಪಲ್”
“ಕಾಲೇಜ್ ಫ್ರೆಂಡ್?”, “ಊಹೂಂ”
“ಸೀನಿಯರ್?”, “ನಾಟ್ ಹಿಯರ್. ಔಟ್ ಸೈಡ್ ದ ಕಾಲೇಜ್”
“ಏನಾಯ್ತೋ?” ಭುಜ ತಿವಿದಳು.
“ಏನಿಲ್ವೇ” ಗೋಣು ಅಲ್ಲಾಡಿಸಿದ.
“ಏಯ್ ಅರುಂಧತಿ ಮೇಡಂ ಅಲ್ವಾ?”
“ಹೂಂ”
“ಬಾರೋ ಮಾತಾಡ್ಸಣಾ”
“ಊಹೂಂ”
“ಸರಿ ...ಇರು ಬಂದೆ”
[ಆಕೆ ಅವರಿಗೊಂದು ವಿಷ್ ಮಾಡಿ ಫೋಟೋ ತೆಗೆಸಿಕೊಂಡು ಬಂದಳು]
“ಯಾಕೋ ಬರ್ಲಿಲ್ಲ?”
“ಮೂಡ್ ಇಲ್ಲ”
“ಸರಿ” ಎಂದು ಫೋನ್‍ನಲ್ಲಿ ಫೋಟೋವನ್ನು ಮತ್ತೆ ನೋಡಿದಳು. ಅಷ್ಟರಲ್ಲಾಗಲೇ ಕ್ಯೂ ನಿಧಾನವಾಗಿ ಕರಗತೊಡಗಿತ್ತು. ಶತಭಿಷ ಆಚೀಚೆ ನೋಡುತ್ತಿರುವಂತೇ ಕಲೀಗ್ ಒಬ್ಬರನ್ನು ನೋಡಿದಂತಾಯಿತು. ಶ್ರಾವ್ಯಾಳ ಜೊತೆ ನಿಂತಿದ್ದ ಇವನಿಗೆ ಏನೋ ಮುಜುಗರ..ತಿಣುಕಾಡುತ್ತಲೇ “ಹಾಯ್ ” ಅಂದ.
ಸಾಲು ಕರಗುತ್ತಾ ಇನ್ನೇನು ಮೆಟ್ಟಿಲ ಬಳಿ ಹೋಗುವಷ್ಟರಲ್ಲಿ ಸೆಕ್ಯುರಿಟಿ ಹಗ್ಗವನ್ನು ಅಡ್ಡ ಹಾಕಿದ. ಕಲೀಗ್ ಮೆಸ್ಸೇಜ್ ಮಾಡಿದ್ದರು.
“ಗರ್ಲ್ ಫ್ರೆಂಡ್ ಅಹ್? ಎಂಜಾಯ್”
ಶತಭಿಷನ ಹಾರ್ಟ್‍ಬಿಟ್ ಇದ್ದಕ್ಕಿದ್ದಂತೇ ಜಾಸ್ತಿಯಾಯಿತು. ಅವರೆಡೆ ನೋಡಿದ. ಏನೋ ಹೇಳಬೇಕೆನ್ನುವಷ್ಟರಲ್ಲೇ ಸೆಕ್ಯುರಿಟಿ ಹಗ್ಗವನ್ನು ಬಿಟ್ಟ.  ರಿಪ್ಲೈ ಮೆಸ್ಸೇಜು ಬರೆಯಲು ತಿಣಕಾಡುತ್ತಾ ಶತಭಿಷ ಮೆಟ್ಟಿಲು ಹತ್ತಿದ್ದ.
“ಏನೋ?” ಶ್ರಾವ್ಯಾ ಅವನಿಗಾಗಿ ಕಾಯುತ್ತಿದ್ದಳು.
ಶತಭಿಷ ಕಲೀಗ್ ಕಡೆ ನೋಡಿದ ...ಅವರು ನಗುತ್ತಿದ್ದರು...
“ಸೆಲ್‍ಫೋನ್ ಸ್ವಿಚ್ ಆಫ್ ಮಾಡಿ ಸರ್...” ಟಿಕೇಟ್ ಹರಿಯಲು ನಿಂತಿದ್ದ ಟೀ ಶರ್ಟ್ ಹಾಕಿದ ಹುಡುಗಿ ಮೆಲ್ಲಗೆ ಹೇಳಿದಳು. ಶತಭಿಷ ಡು ನಾಟ್ ಡಿಸ್ಟರ್ಬ್ ಮೋಡಿನಲ್ಲಿಟ್ಟ. ಅದಾಗಲೇ ಡಿಸ್ಟರ್ಬ್ ಆಗಿದ್ದ ಮನಸ್ಸನ್ನ ನಿಯಂತ್ರಿಸಲು ಕಷ್ಟಪಡುತ್ತಿದ್ದ.
“ರಂಗಶಂಕರದಲ್ಲಿ ನಿಮಗೆಲ್ಲಾ ಸ್ವಾಗತ...ದಯವಿಟ್ಟು ನಿಮ್ಮ ಮೊಬೈಲ್ ಫೋನ್‍ಗಳನ್ನು ಸ್ವಿಚ್ ಆಫ್ ಮಾಡಿ... ವೆಲ್ ಕಮ್ ಟು ...”
“ಲೇ ಅದು ರಂಗಶಂಕರಕ್ಕೆ ಆಗ್ಬೇಕಲ್ವಾ?”
“ರಂಗಶಂಕರದಲ್ಲಿ ಅಂದ್ರೆ ತಪ್ಪಾ?”
“ತಪ್ಪು ಅಂತಾ ಅಲ್ಲ...ಆದ್ರೆ ಯಾಕೋ ಸರಿ ಅನಸ್ತಾ ಇಲ್ಲ”
“ತಪ್ಪು ಅಂತಾ ಕರೆಕ್ಟಾಗ್ ಗೊತ್ತಾಗೋವರ್ಗೂ ಅದ್ ಸರಿನೇ ಕಣೋ..”
“ಹೌದಾ...ಸರಿ...” ಶತಭಿಷ ಸುಮ್ಮನಾದ.
ಶ್ರಾವ್ಯಾ ಎಫ್.ಬಿಯಲ್ಲಿ ಪೋಸ್ಟ್ ಮಾಡುವುದಕ್ಕಾಗಿ ಫೋಟೋವೊಂದನ್ನು ಕ್ಲಿಕ್ಕಿಸಿದಳು. ಶತಭಿಷನನ್ನು ಟ್ಯಾಗ್ ಮಾಡುವುದಾ ಬಿಡುವುದಾ ಎಂಬ ಗೊಂದಲ ಹೊಕ್ಕಿ ಪೋಸ್ಟಿನ ಯೋಚನೆಯನ್ನೇ ಕೈಬಿಟ್ಟಳು.
ನಾಟಕ ಶುರುವಾಯಿತು.
“ತಲೆದಂಡ”
ಕಲಚೂರಿಯ ಬಿಜ್ಜಳ ಮತ್ತು ಬಸವಣ್ಣನವರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯ. ಆದರೆ ಆಂತರ್ಯದಲ್ಲಿ ಗಟ್ಟಿಯಾಗಿರುವ ಸ್ನೇಹ. ಯಾರಿಗೂ ಏನನ್ನೂ ಆದೇಶಿಸದ ಘನತೆ, ಮಗನ ಬಗೆಗಿನ ಅಸಹಾಯಕತೆ....ಶತಭಿಷ ಹನ್ನೆರಡನೇ ಶತಮಾನಕ್ಕೇ ಹೋಗಿದ್ದ.
ವಾಸ್ತವದ ಕೂಪದಿಂದ ಹೊರಗೇಳಿಸುವ ಆದರ್ಶ
ಆದರ್ಶದ ಅಮಲಿನಿಂದ ನೆಲಕ್ಕಿಳಿಸುವ ಹಸಿವು
ಇಂದಿನ ಉಳಿವೋ, ನಾಳಿನ ಏಳ್ಗೆಯೋ ಎಲ್ಲ ಅಸ್ಪಷ್ಟ
ಹಳೆ ಸಲುಗೆ ಹೊಸ ಫಾರ್ಮಾಲಿಟಿ ಚೂಸ್ ಮಾಡುವುದು ತೀರ ಕಷ್ಟ

ಎಲ್ಲಾದರೂ ಬರೆದಿಡಬೇಕು ಅನಿಸಿತು. ಪೆನ್ನು-ಪೇಪರ್ರು ಕೈ ಸಿಗಲಿಲ್ಲ. ಮೊಬೈಲು ತೆಗೆಯಲು ಹೊರಟ.
“ಚೆನಾಗಿತ್ತು ಅಲ್ವೇನೋ” ರಂಗತಂಡದ ಜೊತೆ ಫೋಟೋ ತೆಗೆಯುತ್ತಾ ಶ್ರಾವ್ಯಾ ಕೇಳಿದಳು. ಎದ್ದು ನಿಂತು ಎಲ್ಲರೂ ಚಪ್ಪಾಳೆ ಹೊಡೆಯುತ್ತಿದ್ದರು.  ಆ ಸದ್ದಿನ ನಡುವೆ ಅವಳ ಮಾತು ಪೂರ್ತಿ ಕೇಳಿಸಿರಲಿಲ್ಲ.
“ಆಂ?” ಎಂದು ಅವಳತ್ತ ನೋಡಿದ..
ಕತ್ತಲಿಗೆ ಕಣ್ಣುಗಳು ಅರಳಿದ್ದವು. ಆಗಷ್ಟೇ ಆಡಿಯನ್ಸ್ ಲೈಟ್ ಆನ್ ಆಗಿತ್ತು. ಮೆಲು ಹಳದಿ ಬಣ್ಣದ ಲೈಟಿಗೆ ಶ್ರಾವ್ಯಾಳ ಕೂದಲು ಮಿನುಗುತ್ತಿತ್ತು. ಆಕೆ ಕೂದಲು ಹರಡಿಕೊಂಡಾಗಲೆಲ್ಲಾ ಶತಭಿಷನಿಗೆ ಕೂದಲ ನೇವರಿಸುವ ಮನಸ್ಸಾಗುತ್ತಿತ್ತು.  ಪ್ರೊಫೈಲಿನಲ್ಲಿ ಕಾರಣವಿಲ್ಲದೇ ತುಟಿಗಳು ಮಿನುಗಿತ್ತಿದ್ದವು. ಲಿಪ್‍ಸ್ಟಿಕ್ ಜಾಸ್ತಿಯಾಯಿತಾ? ಅವಳನ್ನೇ ನೋಡುತ್ತಾ ಶತಭಿಷ ಹಾಗೇ ನಿಂತಿದ್ದ. ಪಕ್ಕದಲ್ಲಿದ್ದವರೆಲ್ಲಾ ಹೊರಡಲು ರೆಡಿಯಾದರು.
“ಏನೋ? ನಡಿ” ಎಂಬಂತೆ ಶ್ರಾವ್ಯಾ ಇಶಾರೆಯಿತ್ತಳು. ಶತಭಿಷನಿಗೆ ಸೀನನ್ನು ಕಟ್ ಮಾಡಲು ಇಷ್ಟವೇ ಇರಲಿಲ್ಲ.
“ಇಷ್ಟ ಆಯ್ತೇನೋ?”
“ಸಖತ್ ಇಷ್ಟ....” ಶತಭಿಷ ಯಾವ ಕಡೆ ಗುರಿಯಿಟ್ಟಿದ್ದ ಸ್ಪಷ್ಟವಿರಲಿಲ್ಲ.
ನಿಧಾನವಾಗಿ ಬೆಳಕಿಗೆ ಬಂದರು.  ಶ್ರಾವ್ಯಾ ಒಮ್ಮೆ ದುರುಗುಟ್ಟಿ ನೋಡಿದಳು.
“ವಾಟ್” ಎಂಬಂತೆ ಶತಭಿಷ ಕೈತಿರುಗಿಸಿದ. ಆಕೆ ದವಡೆಯ ಮೇಲಿದ್ದ ಎಡಕೋರೆಹಲ್ಲು ಕಾಣಿಸುವಂತೆ ನಕ್ಕಳು. ಶತಭಿಷ ಸುಮ್ಮನೆ ಹೊರನಡೆದ.
ಸುಮಾರು ದೂರ ಹೋದಮೇಲೆ, “ಕಾಫಿ ಕುಡಿಬೇಕು ಅನಸ್ತಿದೆ ಕಣೋ” ಎಂದಳು..
“ಇಷ್ಟೊತ್ನಲ್ಲಾ?” ಶತಭಿಷ ಮತ್ತೆ ಕೇಳಿದ..
“ಹೂಂ”..
“ಲೇಯ್ ಇಷ್ಟೊತ್ನಲ್ ಯಾರೇ ಕಾಫಿ ಕುಡಿತಾರೆ?”
“ನಾನು...”
“ಅದ್ ಗೊತ್ತು..ಈಗ್ ಯಾಕೆ? ಒಂಬತ್ತೂವರೆಗೆ?”
“ಗೊತ್ತಿಲ್ಲ....ಯಾಕ್ ಕುಡಿಬಾರ್ದು?”
“ಯಾಕೆ ಅಂದ್ರೆ?”
“ಕಾಫಿ ತಾನೆ ಕುಡಿತೀನಿ ಅಂದಿದ್ದು....” ಎಂದು ಕಣ್ಣು ಹೊಡೆದಳು...ಶತಭಿಷ ಪೆಚ್ಚಾದ...ಅಲ್ಲೇ ಎಲ್ಲೋ ಉಡುಪಿ ಹೊಟೆಲ್ಲೊಂದು ಇರುವುದು ನೆನಪಿತ್ತು..
“ನೋಡಣಾ ತಾಳು..” ಎಂದು ಆ ಕಡೆ ಹೆಜ್ಜೆ ಹಾಕಿದ.
“ಒಂದ್ ಬ್ಯಾಲೆನ್ಸ್ ಇತ್ತಲ್ವಾ?” ಶ್ರಾವ್ಯಾ ಹಾರ್ನ್ ನಡುವೆಯೇ ಕೇಳಿದಳು..ಶತಭಿಷನ ಮನಸ್ಸು ಬ್ಯಾಲೆನ್ಸ್ ತಪ್ಪಿತ್ತು. ಹಾಲು ಒಡೆದು ಬಹುತೇಕ ಹಾಳಾಗಿದ್ದ ಕಾಫಿ ಕುಡಿದು ಇಬ್ಬರೂ ಬಸ್ ಹತ್ತಿದರು.  ಬನಶಂಕರಿಗೆ ಐದು ರೂಪಾಯಿಯ ಟಿಕೇಟು.
ನೆಟ್ ಆನ್ ಮಾಡಿ ವಾಟ್ಸಪ್ಪು, ಫೇಸ್‍ಬುಕ್ಕು ನೋಡುವಷ್ಟರಲ್ಲಿ ಬನಶಂಕರಿ ಬಂದಿತ್ತು. ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿತ್ತು.
“ಬಾರೋ ಮನೆ ತನ್ಕಾ” ಆಕೆ ಕರೆದಿದ್ದಳು.
“ಇಬ್ಬರಿಗೂ ಸಾಕಷ್ಟು ಮಾತನಾಡುವುದಕ್ಕಿತ್ತು...” ಆದರೆ ಎಲ್ಲಿಂದ ಶುರುಮಾಡುವುದು ಗೊತ್ತಿರಲಿಲ್ಲ..
“ಇನ್ನೇನೇ ಸಮಾಚಾರ?”
“ಏನಿಲ್ವೋ ಹೇಳ್ಬೇಕು..”
“ಫ್ಯೂಚರ್ ಬಗ್ಗೆ ಏನ್ ಪ್ಲಾನ್ಸ್?”
“ಫ್ಯೂಚರ್ರಾ? ಆ ಥರ ಎಲ್ಲಾ ಏನಿಲ್ವೋ...ಯಾಕೆ?”
“ಹಂಗಲ್ಲ ನೆಕ್ಸ್ಟ್ ಬಿಗ್ ಥಿಂಗ್ ಏನು ಅಂತಾ?”
“ಏನಿಲ್ವೋ...ಸಧ್ಯಕ್ ಮನೆಲ್ ಹುಡ್ಗನ್ ನೋಡ್ತಿದಾರೆ..”
“ಆಹಾಂ”
“ಹೇಳಿರ್ಲಿಲ್ವಾ ನಾ ನಿಂಗೆ?”
“ಊಹೂಂ..”
“ಹಮ್..”
“ಈಗ್ ಹೇಳಿದ್ಯಲ್ಲ...”
“ಹೂಂ..ಈಗ್ ಹೇಳ್ದೆ..ಹೇಳ್‍ಬಾರ್ದಿತ್ತಾ??”
“ಗೊತ್ತಿಲ್ಲ...”
“ಕರ್ಮಾ..”
ಶತಭಿಷ ಏನನ್ನೋ ಹೇಳಲು ಬಾಯಿ ತೆರೆದಿದ್ದ...
ಅಷ್ಟರಲ್ಲಿ ಆಕೆ “ಸರಿ ಕಣೋ ನೀ ಹೋಗು ...ನೆಕ್ಸ್ಟ್ ಕ್ರಾಸ್ ಅಲ್ಲೇ ....ನಾ ಹೋಗ್ತಿನಿ..” ಎಂದಳು...
ಶತಭಿಷ ನಾಲ್ಕು ಹೆಜ್ಜೆ ನಡೆದು ನಿಧಾನಕ್ಕೆ ನಿಂತ. “ಹುಷಾರು ” ಎಂದು ಕೈ ಬೀಸಿದ...
“ಹೂಂ...ನೀನೂ...ಮೆಸ್ಸೇಜ್ ಮಾಡು ರೂಮಿಗ್ ಹೋದ್ಮೇಲೆ...” ಆಕೆ ಬಾಯ್ ಮಾಡಿದಳು..
ಶತಭಿಷ ವಾಪಸ್ ಹೊರಟಿದ್ದ...
ತಂಪಾದ ರಾತ್ರಿ, ಬಿಸಿಯಾದ ಮನಸ್ಸು , ಬೆಳಕು ನೀಡುತ್ತಿದ್ದ ಬೀದಿದೀಪ..ದಾರಿ ಕಾಣದ ಬದುಕು...ಇನ್ನೇನು ರೆಡಿ ಆಗಿದ್ದ ಮೆಟ್ರೋ ಟ್ರ್ಯಾಕು... ಹಳಿ ತಪ್ಪಿದ್ದ ಶತಭಿಷನ ಮನಸ್ಸು...
“ಹೇಳುವುದಾದರೆ ಹೇಳಬೇಕು; ಬಹುಷಃ ಇದೇ ಕೊನೆಯ ಬಾರಿ
ಒಪ್ಪಿತವಾದರೆ ಸರಿ; ಇಲ್ಲವಾದರೆ ಹುಡುಕಬೇಕು ಬದಲೀದಾರಿ
ಕನಸ ಹೊತ್ತು ಮುಂದೆ ಸಾಗಿದ ದಾರಿ; ವಾಪಸ್ಸಾಗುವಾಗ ಮಾತ್ರ ಒಬ್ಬಂಟಿಯೇ
ನಗು-ಖುಷಿ-ತಾತ್ಕಾಲಿಕ; ಕಣ್ಣೀರು ಮಾತ್ರ ಖಾಯಂ ಸಂಗಾತಿಯೇ?”

ಬರೆದಿಟ್ಟುಕೊಳ್ಳಬೇಕು ಅಂದುಕೊಂಡ...ನೀರುತುಂಬಿ ಮಂಜಾದ ಕಣ್ಣಲ್ಲಿ ಟೈಪ್ ಮಾಡಲಾಗಲಿಲ್ಲ..ಕಣ್ಣೊರಿಸಿಕೊಳ್ಳಲು ಮನಸ್ಸಿರಲಿಲ್ಲ...ಇಂದಿನ ಖುಷಿಗೋ. ಆತಂಕಕ್ಕೋ...ಕಾರಣ ಸ್ಪಷ್ಟವಿರಲಿಲ್ಲ...
ಅಷ್ಟರಲ್ಲಿ....
[ಹಿಂದಿನಿಂದ ಅಂಬುಲೆನ್ಸ್ ಸದ್ದು ಕೇಳಿಸುತ್ತಿತ್ತು]
-ಚಿನ್ಮಯ
23/9/2018