Wednesday, August 17, 2011

ಬ್ರಷ್ಟತೆಯೆದುರು ಬಾಪು ,ಬನ್ನಿ ಮತ್ತೆ!!

ಬನ್ನಿ ,ಬಾಪು-ನೇತಾಜಿ ಎದ್ದಿರುವೆವು ನಾವು
ಬ್ರಷ್ಟ ನಿಯತ್ತಿಗೆದುರಾಗಲು ದಾರಿದೀಪ ನೀವು

ಕ್ವಿಟ್ ಇಂಡಿಯಾ ಎಂದಂತೆ
ಕ್ಲೀನ್ ಇಂಡಿಯಾ ಎನ್ನುವೆವು
ಉಪ್ಪಿನ ಕರದಂತೆ ನಾವು ,
ಕಪ್ಪು ಕರದೆದುರು ಹೋರಾಡುವೆವು

ಬನ್ನ್ನಿ ತಿಲಕರೇ ಮುಟ್ಟೋಣ,ಜನರನ್ನು ಹೊಸ ರೂಪದಲ್ಲಿ
ಇಂಟರ್ ನೆಟ್ಟು,ಟೀವಿ,ಪೇಪರುಗಳಲ್ಲಿ
ಹೇಳಬನ್ನಿ ಸಾವರ್ಕರರೇ ,ಹೊಸ ಸಂಗ್ರಾಮದ ಕಥೆಯನ್ನು
ಸ್ವತಂತ್ರ ಭಾರತ ,ಸ್ವಚ್ಛವಾದ ಬಗೆಯನ್ನು

ನಾಡಹಿರಿಯರೇ ಸಾಕ್ಷಿಯಾಗಲು ಬನ್ನಿ
ನಮ್ಮ ನಾಡನ್ನು ಸಿಂಗರಿಸಲಿದ್ದೇವೆ.
ಬ್ರಷ್ಟತೆಯನ್ನು ಗುಡಿಸಿ ಬುಟ್ಟಿಯಲ್ಲಿಟ್ಟು,
ಮನದಂಗಳಕೆ ಪಾರದರ್ಶಕತೆಯ ರಂಗವಲ್ಲಿಯನ್ನಿಟ್ಟು..


( ಇದು ಕವಿತೆ ಎಂದೆನಿಸಿಕೊಳ್ಳಲು ಮಾರ್ಗದರ್ಶನ ನೀಡಿದ ವಿವೇಕಾನಂದ ಸರ್ ಅನ್ನು ನೆನೆಪಿಸಿಕೊಳ್ಳುತ್ತಾ )
ಸಮ್ರದ್ಧ ಭಾರತದ ಸಿಹಿಕನಸ ಹೊತ್ತು,

ನಿಮ್ಮನೆ ಹುಡುಗ
ಚಿನ್ಮಯ್

Monday, August 8, 2011

ಮೊದಲ ರಾತ್ರಿ .......... (ಪುಸ್ತಕದ ಜೊತೆ)

ಲೋ ಅ ಸರ್ಕಲ್ ಡಿರೈವಸನ್ ನೋಡ್ಕೊಳೋ !!! ಪಕ್ಕಾ ಅಂತೆ .. ಅಮ್ಯಾಗ ಆ ವೆಕ್ತರ್ ಮಾಡ್ಸಿದ್ ಪ್ರಾಬ್ಲಂಸ್ ಎಲ್ಲದು ಸರಿ ಇಲ್ಲೋ .. ಈದ್ ನೋಡು ಬೆಸ್ಟ್ ನೋಟ್ಸ್ , ಈದ್ ಬ್ಯಾಡಾ ಅಂದ್ರ a ಕಡಿ ಎಕ್ಸ್ ಪರ್ಟ್ ನೋಟ್ಸ್ ಅದಾವ್ ನೋಡು ....ಒಂದ್ ಗಂಟಿ ಮ್ಯಾಲ್ ಪೇಪರ್ ಸಿಕ್ರ್ ಕರಿತಿನ್ ಪಾ ... ಈಗ ಮಕ್ಕೋ ಬೊಸ್ಕೊ ಬುಕ್ ಐತಿ ಹೌವ್ದಿಲ್ಲೋ???" ಹೀಗೆ ಸೆಹ್ವಾಗ್ ಬೌಂಡರಿಗಳತರ ಒಂದರ ಹಿಂದೋದು ಮಾತಾಡುತ್ತಾ ರೂಮಿನ ಬಾಗಿಲು ಹೋದವ ಆ ಹುಬ್ಬಳ್ಳಿ ಹುಡುಗ... ಹುಬ್ಬಳ್ಳಿಯಿಂದ ನಿನ್ನೆ ಮೊನ್ನೆ ಬೈಕಿನಲ್ಲಿ ಬಂದ ,ನಮ್ಮ ಹಾಸ್ಟೆಲ್ ಗೆ ಸೆಕೆಂಡ್ ಪಿಯುಸಿ ಪರೀಕ್ಷೆ ಬರೆಯಲು ಬಂದಿದ್ದ..ಅರ್ಧ ಮುಕ್ಕಾಲು ವರುಷ , ಮಧ್ಯರಾತ್ರಿಯವರೆಗೆ ಓದಿ, ಅದರೂ ಎನೋ ಹೆದರಿಕೆ ಎನ್ನುತ್ತಿದ್ದ ನನಗೆ,ಆತನನ್ನು ನೋಡಿ ಎನೋ ಧೈರ್ಯ ಬಂತು.. ಹಗಲಿಡಿ ಯಾವುದೋ ಲೋಕದಲ್ಲಿರುತ್ತಿದ್ದ ಅವರಿಗೆ ,ಪರೀಕ್ಷೆ ನೆನಪಗುತ್ತಿದ್ದಿದ್ದೇ ಸಂಜೆಗೇನೋ???
ಇನ್ನೇನು ಅವರಿವರನ್ನೆಲ್ಲಾ ಕರೆದು ಗುಂಪಾಗಿ ಸೇರಿ,ಪರೀಕ್ಷೆಗೆ ಏನು ಓದುವುದೆಂದು ಚರ್ಚಿಸುವ ಹೊತ್ತಿಗಾಗಲೇ ಊಟದ ಹೊತ್ತಾಗಿರುತ್ತಿತ್ತು...ಕೂಗಾಡಿ ಜೋರು ಕೇಕೆ ಹಾಕುತ್ತಾ ಊಟ ಮಾಡುವುದನ್ನು ನೋಡಿದರೆ, ಆಕಾಶವೇ ತಲೆ ಮೇಲೆ ಬಿದ್ದಂತೆ ಆಡುತ್ತಿದ್ದ ನಮಗೆಲ್ಲ ಉರಿಯುತ್ತಿತ್ತು...ಹೊತ್ತಾಗುತ್ತದೆ ಎಂದು ಊಟ ಮಾಡಿ ತಟ್ಟೆ ತೊಳೆಯದೇ ರೂಮಿಗೆ ಹೋಗಿ, ಗಣಿತ ಪುಸ್ತಕ ತೆಗೆದರೆ ,ಎಲ್ಲವೂ ಮರೆತಂತೆ ಅನಿಸುತ್ತಿದೆ.ಅದಕ್ಕೆ ಸರಿ ಎಂಬಂತೆ ಅ ತುಪ್ಪ ಹೇಳಿದ ಪ್ರಾಬ್ಲಮ್ಮು ಎಸ್ಟಾದರೂ ಪ್ರಾಬ್ಲಮ್ಮಾಗೇ ಉಳಿದಿದೆ...ಏನು ಮಾಡುವುದೆಂದು ಗೊತ್ತಾಗದೇ ,ಸುಮ್ಮನೇ ಗೋಡೆಗೆ ಗುದ್ದಿ ಕೈ ನೋಯಿಸಿ ಕೊಂಡಿದ್ದಾಯ್ತು,ಬೆಳಿಗ್ಗೆ ಬೇಗ ಎಳುತ್ತೇನೆ ಎಂದವರನ್ನೆಲ್ಲಾ ಮಲಗಿಸಿ ಅಯಿತು..ನಾನೂ ಬೆಳಿಗ್ಗೆ ಬೇಗ ಏಳುವುದೆಂದು ಕಣ್ ಮುಚ್ಚಿದೆ ... ಊಹು ,ಎಂದಿಗೂ ಪುಸ್ತಕದೊಂದಿಗೇ ಬರುತ್ತಿದ್ದ ನಿದ್ರಾದೇವಿಗೆ ಅವತ್ತು ಬಸ್ಸು ತಪ್ಪಿತ್ತು!!!! ....ಆಗಲೇ ಹತ್ತಾರು ಬಾರಿ ಗೀಚಿದ್ದ ಥೇರಂ ಅನ್ನು ಮತ್ತೆ ಪ್ರೂವ್ ಮಾಡಿದರೂ ಪ್ರಯೋಜನವಿಲ್ಲ... ಅದರ ಮುಂದಿನ ಲೆಕ್ಕ ಅರ್ಧಕ್ಕೆ ನಿಂತ ಸಿಟ್ಟಿಗೂ ನಿದ್ರೆ ಬರುತ್ತಿಲ್ಲ ... ಏಕೆ ???? ಗೊತ್ತಿಲ್ಲ....
ಇನ್ನೇನು... ಪಾಪ ಆ ಪೋಲಿ ಹುಡುಗರಿಗೆ ಇಂಪಾರ್ಟೆಂಟ್ ಆದ್ರು ಹೇಳೋಣಾ ಅಂತಾ,ರೂಮಿನ ಬಾಗಿಲು ಬಡಿಯುವ ಮೊದಲೇ ಸಿಗರೇಟಿನ ಗಾಟು ಮೂಗಿಗೆ ರಾಚಿತು..ನನ್ನ ನೋಡಿದ ಕೂಡಲೇ ಎಂದಿಗೂ ಇಲ್ಲದ ರಾಜಮರ್ಯಾದಿ.. ನಮಗೂ ಅವರಿಗೂ ಮೊದಲಿಂದಲೂ ಅಷ್ಟಕ್ಕಷ್ಟೇ...ಇವತ್ತೇನು ಎಂದು ನನ್ನ ಕೆಂಪು ಕಣ್ಣನ್ನು ಅರಳಿಸುವ ಮೊದಲೇ,ಪಕ್ಕದ ರೂಮಿನಿಂದ ಕೂರ್ಚಿ ಬಂದಾಗಿತ್ತು.. ಸರಿ ,ಓನೋ ಸಾಧಿಸಿದವನ ಗತ್ತಿನಲ್ಲಿ ಕುಳಿತ ನನಗೆ ಅಲ್ಲಿ ಅಚ್ಚರಿ ಕಾದಿತ್ತು... ಅದಾಗಲೇ ರೂಮಿಗೆ ಬಂದ ಹುಬ್ಬಳ್ಳಿಯವ ಆಗ ಮಾತ್ರ ನೋಟ್ಸ್ ತೆಗೆಯುತ್ತಿದ್ದ ..ಎನಪ್ಪಾ ಈಗ ರಿವೈಸ್ ಮಾಡ್ತೀಯಾ ಅಂದ್ರೆ ,"ಈಗ್ ಜಸ್ಟ್ ಶುರು ಪಾ "ಅಂದಾಗ ನಿಜಕ್ಕೂ ನಾನು ಶಿಲಾಮೂರ್ತಿಯಾದೆ.. ನಾನು ಪರೀಕ್ಷೆಗೆ ಎರಡು ದಿನ ಮೊದಲೇ ಪುನಾರಾವರ್ತಿಸುವವರನ್ನು ನೋಡಿದ್ದೆ. ಇನ್ನು ಹಿಂದಿನ ದಿನ ,ಬಿಟ್ಟ ಟಾಪಿಕ್ಕುಗಳನ್ನು ಓದುವವರನ್ನು ನೋಡಿದ್ದೆ,ಆದರೆ ಪರೀಕ್ಷೆಯ ಹಿಂದಿನ ರಾತ್ರಿ ಶ್ರೀ ಗಣ...ದಿಂದ ಶುರುಮಾಡುವ ಮಹಾನುಭಾವರ ದರ್ಶನವಾದದ್ದು ಆ ೧೧:೪೫ರ ಮುಹೂರ್ತದಲ್ಲೇ!!! ಸರಿ ಹೆಂಗಿದ್ದರೂ ನಿದ್ದೆ ಬರುತ್ತಿರಲಿಲ್ಲವಾದುದರಿಂದ,ಇವರ ಓದುವ ಕ್ರಮವನ್ನು ತಿಳಿಯುವ ಮನಸ್ಸಾಯಿತು.. ಗಜನಿಯಂತೆ ರೂಮಿನ ತುಂಬೆಲ್ಲ ಹಾಳೆ ಹಚ್ಚಿದ್ದ,ನನಗೆ ಹೊಸ ಹೊಸ ತರ ಓದುವುದರಲ್ಲಿ ಓಲವೂ ಇತ್ತು.. ಸರಿ,೧೫೦-೨೦೦ ಲೆಕ್ಕವಿರುವ ಆ ಪಾಠಗಳನ್ನು ಅದು ಹೇಗೆ ಓದುತ್ತಾನೆ ಎಂದು ಗುಣಿಸಿ,ಭಾಗಿಸುತ್ತಿದ್ದೆ.... ಅಷ್ಟರಲ್ಲೇ ರಿಂಗಣಿಸಿತು ನೋಡಿ ಆತನ ಸೆಲ್ಲು,ಕರೆ ಬಂದೊಡನೆ ಎನನ್ನೋ ಗೆದ್ದವನಂತೆ ಹೊರಗೆ ಹೋದವ,ಬಂದು ನಾನು ಇಲ್ಲಿ ಶುರುವಿನಲ್ಲಿ ಮೇಲುಗಡೆ ಗೀಚಿದ್ದನ್ನು ಒದರಿದ...ನನಗೆ ಆತ ಹೇಳಿದುದೆಲ್ಲ ಬರುತ್ತಿದ್ದರಿಂದ ಎನೋ ಧೈರ್ಯ ಬಂತು. ಸರಿ ಇನ್ನೇನು ಮಲಗಬೇಕು,ಇವನು ರಾತ್ರಿಯಿಡಿ ಇವನ್ನೆಲ್ಲ ಓದಿದರೂ ಪಾಸಾಗುವುದು ಕಷ್ಟ ಎಂದುಕೊಂಡ ನಾನು , ಮಲಗಲು ಹಲ್ಲು ತಿಕ್ಕಿ,ಮುಖ ತೊಳೆದು ಅಣಿಯಾದೆ...ಅಷ್ಟರಲ್ಲೇ ನನ್ನ ಕಂಡ ರಾಕಿ, " ಅವಾ ಮಕ್ಕೊಳಕ್ ಹತ್ಯಾನ್ ಲೇ " ಅಂದ.. "ಹೂ ಲೆ,ಪೇಪರ್ ಸಿಕ್ ಮ್ಯಾಗ್ ಎಬ್ರ್ ಸ್ತೀನ್ ಅವ್ಗ "ಎಂದ ಮಿಸ್ಟರ್ ಹುಬ್ಬಳ್ಳಿ. ಸರಿ ಇನ್ನೇನು ಮಲಗ ಬೇಕು ಎನ್ನುವಷ್ಟರಲ್ಲಿ ೧ ಗಂಟೆಗೇ ಎದ್ದ ವಿವೇಕ,ನನ್ನನ್ನು ಮಾತಿಗೆಳೆದ.. ಬೇಡ ಬೇಡ ಎಂದರೂ ವಿಷಯ ಕ್ರಿಕೇಟಿನ ಕಡೆ ಹೋಗಿದ್ದರಿಂದ ,ನಾನು ಮಾತನಾಡಾಲೇ ಬೇಕಾಯಿತು.. ಅಷ್ಟರಲ್ಲೇ ಆ ಕಡೆಯಿಂದ , "ಏ ಚಿಮ್ಮಯ್ ,ಪೇಪರ್ ಸಿಕ್ಕೈತ್ ಬಾರ್ಲೆ.. ಬುಕ್ ನಾಗ್ ಪ್ರೊಬ್ಲಮ್ಸ್ ಪೇಜ್ ನಂಬರ್ ಹುಡ್ಕ್ ಕೊಡ್ಲೆ ಪಾ"ಎಂದಿತು..ಇಲ್ಲಿಯತನಕ ಪೇಪರ್ ಲೀಕ್ ಆಗುತ್ತದೆ ಅಂತ ಕೇಳಿದ್ದ ನನಗೆ , ಅಂದು ನೋಡುವ ಅವಕಾಶ ಸಿಕ್ಕಿತೇ? ಎನಿಸಿತು... ಮನಸ್ಸು ಬೇಡ, ಬೇಡಾ ಎಂದರೂ ಪ್ಪೇಪರ್ರನ್ನು ನೋಡಿದೆ.. ಸಕತ್ ಖುಷಿಯಿಂದ ಅವನಿಗೆ ಪೇಜ್ ನಂಬರುಗಳನ್ನು ಟಿಕ್ಕು ಮಾಡಿ ಕೊಟ್ಟು,ನಾನೂ ಮೊದಲ ಬಾರಿ ನೈಟೌಟಿಗೆ ಸಿದ್ಧನಾದೆ...ಈ ಪೇಪರಿಗೆ ೧೦೦ ಬರಲೇಬೇಕು ಎಂದು ಕೊಂಡು,೨-೨:೩೦ ತಾಸುಗಳ ತನಕ ಲೆಕ್ಕಬಿಡಿಸಿದೆ.. ಅದಾಗಲೇ ಕಾರ್ತೀಕದಲ್ಲಿ ಎರಡನೇ ಆಟ ಶುರುವಾಗುವ ಹೊತ್ತು,ಸುಮಾರು ೦೪:೩೦... ಇನ್ನೇನು ನಿಶ್ಚಿಂತೆಯಿಂದ ಮಲಗಬೇಕು ಎಂದು ಕೊಂಡಾಗ,ದೀಪು ಮನೆಗೆ ಕರೆದ....ಸರಿ ಅಲ್ಲಿಗೆ ಹೊಗಿ ಬೆಂಗಳೂರಿನ ಪೇಪರನ್ನೂ ಬಿಡಿಸಿದ್ದಾಯ್ತು..ನನಗೆ ಎರಡರಲ್ಲಿ ಯಾವುದು ಕೊಟ್ಟರೂ ೧೦೦ ಅಂದುಕೊಂಡು ಸೂರ್ಯನ ಕಂಡ ನನಗೇ ನನ್ನನ್ನು ನಂಬಲಾಗುತ್ತಿರಲಿಲ್ಲ... ಒಂದು ಕಾಲದಲ್ಲಿ ೭:೩೦ಕ್ಕೆ ಮಲಗಿ ೬ ಕ್ಕೆ ಎಳುತ್ತಿದ್ದ ಮಾಣಿ ಇಂದು ಅಹೋ ರಾತ್ರಿ ಓದಿದ್ದ , ಇದೇ ನನ್ನ ಫಸ್ಟ್ ನೈಟು, ಅಲ್ಲಲ್ಲ ಫಸ್ಟ್ ಫುಲ್ ನೈಟು...


ಅಂದ ಹಾಗೆ ಮುಂದಿನದ್ದೇನೂ ವಿಶೇಷವಿಲ್ಲ.ಎರಡೂ ಪೇಪರುಗಳನ್ನು ಸೇರಿಸಿದರೂ ೨೦ ಮಾರ್ಕ್ಸು ಬರುತ್ತಿರಲಿಲ್ಲ....ಅವರಿಬ್ಬರ ಮುಖ ಕೆಂಪಾಗಿತ್ತು,ನನ್ನ ಕಣ್ಣು ನಿದ್ದೆ ಗೆಟ್ಟು ಕೆಂಪಾಗಿತ್ತು....ಆಮೇಲೆ ಅವರಿಗೆ ಸಿಕ್ಕ ಪೇಪರ್ರುಗಳೆಲ್ಲವೂ ,ಪುಸ್ತಕದ ತುದಿಗಿನ ಮಾಡೆಲ್ ಕ್ವಶ್ಚನ್ ಪೇಪರಿನವು ಎಂದು ಗೊತ್ತಾದಾಗ,ಎಲ್ಲರ ಕೆನ್ನೆ ಕೆಂಪಾಗಿತ್ತು... ನನ್ನ ನೈಟ್ ಔಟಿನ ಕತೆ ಕೇಳಿದವರ ಮುಖ ನಕ್ಕು ನಕ್ಕು ಕೆಂಪಾಗಿತ್ತು.............

ಕೆಂಪಾದವೋ ಎಲ್ಲ ಕೆಂಪಾದವೋ..
ಹಾಸ್ಟೆಲು ಎಂದೊಡನೆ ಇಂದು ನೆನಪಾದವು...
ಥ್ಯಾಂಕ್ಸು ,ಆ ಹಾಸ್ಟೆಲ್ ರಾಜ ನರಸಿಂಹಣ್ಣಂಗೆ.
ನನ್ ಪ್ರೆಂಡ್ಸಿಗೆ,ಸಿರ್ಸಿಗೆ,ನಿಮ್ಗೆ,ಎಲ್ಲರಿಗೆ!!!
ಕೊನೆಗೆ ನನಗೆ ೬೫ ಕೊಟ್ಟು, ಪಾಸು ಮಾಡಿದ ಪುಣ್ಯಾತ್ಮರಿಗೆ!!!!

Sunday, August 7, 2011

ಈ-ದಿನ...

ಅನು ದಿನವೂ ಸ್ನೇಹಿತರ ದಿನ
ನೀವು ಒಳ್ಳೆಯ ಸ್ನೇಹವನ್ನು ಕೊಡುವವರಾಗಿದ್ದಲ್ಲಿ
ಪ್ರತಿ ದಿನವೂ ಪ್ರೇಮಿಗಳ ದಿನ
ನೀವು ಒಳ್ಳೆಯ ಪ್ರೀತಿಯನ್ನು ಕೊಡುವವರಾಗಿದ್ದಲ್ಲಿ

ಎಲ್ಲಾ ದಿನವೂ ಮಕ್ಕಳ ದಿನ
ನಿಮ್ಮಲ್ಲಿ ಬಾಲ್ಯದ ಮುಗ್ದತೆ ಉಳಿದಿದ್ದರೆ
ಶಿಕ್ಷಕರ ದಿನವು ಯಾವಾಗಲೂ
ನೀವು ಗುರುಗಳಿಗೆ ವಂದಿಸುವಿರಾದರೆ

ಪ್ರತಿ ದಿನವು ಪ್ರತಿ ಕ್ಷಣವೂ ವಿಶೇಷ
ನಾವು ಅಹಂಕಾರ,ಸ್ವಾರ್ಥವನ್ನು ಮರೆತರೆ,
ಪ್ರೀತಿ,ಸ್ನೇಹ,ವಂದನೆಗಳನ್ನು ಕೊಡುವುದನ್ನಷ್ಟೆ ಚಿಂತಿಸಿದರೆ.

Thursday, August 4, 2011

ಮಳೆ ಗೆಳತಿ ... ನೀನೀಕೆ ಬರುತಿ ?

ಹೇ ವರ್ಷಧಾರೆ
ನೀ ಎಷ್ಟು ವಿಚಿತ್ರ ಗೆಳತಿ
ಬೇಸಿಗೆಯಲ್ಲಿ ಬಾಯಾರಿದ ಗೆಳೆಯನಿಗೆ
ತಂಪನುಣಿಸಲೆಂದೇ ಬರುವೆಯಾ ?

ಕಾದು ಕಾದು ಬತ್ತಿರುವ ಭಾವದ ತೊರೆಯ
ಮತ್ತೆ ಉಕ್ಕಿಸಲೆಂದೇ ಬರುವೆಯಾ ?

ನೀ ಬಂದೊಡನೆ ಅರಳುವ ಗೆಳೆಯನ
ಹಸಿರು ಮೊಗವ ನೋಡಲು ಬರುವೆಯಾ ?
ನಿನ್ನ ಕಂಡೊಡನೆ ಹರಿದಾಡುವ
ಆ ಚೈತನ್ಯದ ನೀರ ನೋಡಲು ಬರುವೆಯಾ ?

ನೀ ಬರುವೆ ಎಂದೊಡೆ ವಟವಟಗುಟ್ಟುವ
ಗೆಳೆಯನ ಆ ಕೂಗ ಕೇಳಲೆಂದೇ ಬರುವೆಯಾ ?
ನಿಮ್ಮಂತೆ ಈ ಮಳೆಯಲಿ ಹೊಸ ಹ್ರದಯಗಳು
ಹಳೆ ರೀತಿ ಸೇರಲೆಂದೆ ಬರುವೆಯಾ ?


ಪುಟ್ಟ ಕಂದ ನೆನೆಯಾಯಬಾರದು ಎಂದು
ಕೊಡೆತರುವ ತಾಯಿಯ ಆ ಅಗಣಿತ ಮಮತೆಯ
ತೋರಿಸಲು ಬರುವೆಯಾ ?
ಹೊಸ ಬೆಳಕನು , ತುಸು ನೆಮ್ಮದಿಯನು ಬಯಸುವ
ಆ ನೇಗಿಲ ಯೋಗಿಯ ಬದುಕಿಸಲೆಂದೇ ಬರುವೆಯಾ ?

ಹೇಳು ಗೆಳತಿ ನೀನೇಕೆ ಬರುವೆ ?
ಈ ಗೆಳೆಯನೆದೆಯೊಳಗೆ ಹೊಸ ಕಲರವವ ತರುವೆ ?