Monday, June 13, 2016

ಕನ್ನಡ ದೇವದಾಸ (Part-2)

ಕನ್ನಡ ದೇವದಾಸ ತೂರಾಡುತ್ತ ಬರುತ್ತಿದ್ದಾನೆ
ಚಂದ್ರಮುಖಿಯ ನೆನೆ-ನೆನೆಯುತ್ತಾ
ರಸ್ತೆಯ ಇಕ್ಕೆಲಗಳನೂ ಮುಟ್ಟುತ್ತಿದ್ದಾನೆ
ಕಣ್ಣು ಕೆಂಪಾಗಿದೆ
ಕೂದಲು ಗೆದರಿದೆ
ಬಟ್ಟೆಯಂತೂ ಗಬ್ಬು ಗಬ್ಬಾಗಿದೆ

ಆತನೇನೂ ಕುಡಿದಿಲ್ಲ
ರಾತ್ರಿಯೆಲ್ಲ ಯಾವಳದೋ ಮನೆಯಲ್ಲಿ
ಬಿದ್ದುಕೊಂಡಿಲ್ಲ

ಎಲ್ಲಿದ್ದ?
ಮೇಳದಲ್ಲಿದ್ದ.

ಊರಿಗೆ ಬಂದ ಮೇಳದವರ ಜೊತೆ
ಮೂರೂ ದಿನ ಕ್ಯಾಂಪು ಹಾಕಿದ್ದ
ರಾತ್ರಿಯೆಲ್ಲಾ ಕಣ್ಣೆದುರೇ
ರಾಜ ಮಹಾರಾಜರ ಒಡ್ಡೋಲಗ
ಸಿಕ್ಕಷ್ಟು ಸಮಯ ಕಣ್ಣು ಮುಚ್ಚಿ ತೆರೆದರೆ
ಮತ್ತೆ ಚೌಕಿಮನೆಯ ಸಹವಾಸ
ಅಷ್ಟೂ ದಿನ ಭಾಗವತರ ಪಕ್ಕ ಕೂತು
ಶ್ರುತಿ ಹಿಡಿದು ಪೀಯನ್ನು ಗುಂಡಿ ಒತ್ತುತ್ತಿದ್ದ
ಪಾಂಡವ-ಕೌರವ,
ರಾಮ-ರಾವಣ
ದೇವೇಂದ್ರರ ಆಸ್ಥಾನದಲ್ಲಿ
ಕಾಲ ಕಳೆಯುತ್ತಿದ್ದ

ಯಾಕೆ?

ಈಗಿನ ಕಾಲದ ಯುವಕರಂತೆ
ದೇವದಾಸನಿಗೂ ಬೇಗ ನಿದ್ದೆ ಹತ್ತುವುದಿಲ್ಲ
ನಿನ್ನೆಯ ದಿನ ಮಲಗಿ ಇವತ್ತು ಬೆಳಿಗ್ಗೆ ಏಳುವುದು
ಈತನಿಗೀಗ ಸಾಧ್ಯವಾಗುತ್ತಿಲ್ಲ
ಕತ್ತಲಾಯಿತೆಂದರೆ ಪಾರ್ವತಿಯ ಮುಖಚರ್ಯೆ
ಕಣ್ಣೆದುರು ಹರಡಿಕೊಳ್ಳುತ್ತದೆ
ಕ್ಷಣ ಕ್ಷಣಕ್ಕೂ ಆಕೆಯ ಮುದ್ದು ಮಾತುಗಳು
ಕಿವಿಯಲ್ಲಿ ಗುಯ್ಯಂ ಗುಟ್ಟಿ
ತಲೆ ಹನ್ನೆರೆಡಾಣೆಯಾಗುತ್ತದೆ

ಹಗಲೆಲ್ಲ ಹೇಗೋ ಕಳೆಯುವ ದೇವದಾಸನಿಗೆ
ರಾತ್ರಿ ಬಂತೆಂದರೆ ಹುಚ್ಚು ಹಿಡಿಯುತ್ತದೆ
ಕಳೆದುಕೊಂಡ ಪಾರ್ವತಿಯ ನೆನಪಾಗಿ
ಮೈ ಕಾವೇರುತ್ತದೆ
ದಿನ ಕಳೆದಂತೆ ಮೈ ಕಾವು ಕೆಚ್ಚಾಗಿ
ಮನಸೆಲ್ಲಾ ಹುಚ್ಚಾಗಿ
ಜ್ವರಬಂದು ಎರಡೂ ಕಾಲು
ಚಂದ್ರಮುಖಿಯ ಹುಡುಕ ಹೊರಡುತ್ತದೆ

ಅಲ್ಲೆಲ್ಲೋ ಆಟದ ಚೌಕಿ
ಬಣ್ಣ ವಸ್ತ್ರ ಗೆಜ್ಜೆ
ಕೀಚಕ ದುರ್ಯೋಧನ
ಭಾಗವತರ ಪದ್ಯ
ಇದೇ ಕನ್ನಡ ದೇವದಾಸನ
ಚಂದ್ರಮುಖಿ ಸಾಂಗತ್ಯ
ಎದೆಯ ಬಡಿತವ ನಡುಗಿಸಿ
ಹುಲುಮಾನವ ನೀನೆಂದು ಅಣಕಿಸುವ
ಚಂಡೆಯ ಸದ್ದು
ಟಂಟರ್ ಟಂಟರ್ ಟಂಟರ್ ಟಾ
ಟಂಟರ್ ಟಂಟರ್ ಟಂಟರ್ ಟಾ

ಆಹಾ ಕೇಳುತ್ತಿದ್ದರೆ
ಮೈ ಜ್ವರವೆಲ್ಲ ಮರೆಯುತ್ತದೆ
ಮೈ ತಣ್ಣಗಾಗಿರುತ್ತದೆ
ಬೆಳಗಿನ ಜಾವದ ನಿದ್ದೆಯಲ್ಲಿ
ಮತ್ತೆ ಪಾರ್ವತಿಯ ಮುಖ ಕಾಣಿಸುತ್ತದೆ

ಪಾರ್ವತಿ ದೇವದಾಸನ ಕೈ ಹಿಡಿಯುತ್ತಾಳೆ
ಹೀಗ್ಯಾಕಾದೆ ಎಂದು ಕುಶಲ ವಿಚಾರಿಸುತ್ತಾಳೆ
ನೀನಿಲ್ಲದೆ ನಾನಿಲ್ಲ ಎನ್ನುತ್ತಾಳೆ
ಅಷ್ಟರಲ್ಲಿ ಕುರುಡು ನೊಣವೊಂದು
ಭುಜಕ್ಕೆ ಕಚ್ಚುತ್ತದೆ
ಅರ್ಧ ನಿದ್ರೆಯಿಂದ ಎಚ್ಚರಾಗುತ್ತದೆ

ಅದೇ ಪ್ರಪಂಚ!
ಹಿಂದಿನ ರಾತ್ರಿ ಜಗಮಗಿಸಿದ ಭವ್ಯ ರಂಗಮಂಚ
ಈಗ ಎಲ್ಲ ಖಾಲಿ ಖಾಲಿಯಾಗಿದೆ
ಟ್ಯೂಬ್ ಲೈಟಿಗೆಂದು ಕಟ್ಟಿದ ವೈರು
ತನ್ನ ಪಾಡಿಗೆ ತಾನು ಜೋತಾಡುತ್ತಿದೆ
ಲಾಟಣ್ಣಿಗೆ ಹಾಕಿ ಚೆಲ್ಲಿದ ಸೀಮೆಎಣ್ಣೆಯ ಘಮ
ಇನ್ನೂ ಅಲ್ಲೆಲ್ಲೋ ಬರುತ್ತಿದೆ
ಹಣತೆಗೆಂದು ಹಚ್ಚಿದ ಬತ್ತಿ
ಅರ್ಧ ಸುಟ್ಟು ನೆಲಕ್ಕೆ ಬಿದ್ದಿದೆ
ಚೆಲ್ಲಿದ ಮಂಡಕ್ಕಿ
ಹರಿದು ಬಿದ್ದ ಹಿಂಪರದೆ
ಬಿಟ್ಟು ಹೋದ ಹರಕು ಚಾದರ
ನಿನ್ನೆಯ ವೈಭವವನೆಲ್ಲ ಅಪಹಾಸ್ಯ ಮಾಡುತ್ತದೆ
ಬದುಕೊಂದು ಭ್ರಮೆಯೆನಿಸುತ್ತದೆ

ಎದ್ದು ಊರ ಕಡೆ ಮುಖ ಮಾಡುತ್ತಾನೆ
ನಿದ್ದೆಗೆಟ್ಟಿದ್ದರಿಂದ ಓಲಾಡುತ್ತಾನೆ
ಹಸಿವಿನಿಂದ ತೂರಾಡುತ್ತಾನೆ
ಆಪ್ತೇಷ್ಟರಿಂದ ಬೈಸಿಕೊಂಡು ಹಗುರಾಗಲು
ಮನೆಯ ದಾರಿ ಹಿಡಿಯುತ್ತಾನೆ
ಮತ್ತೆ ಜ್ವರ ಬರುವವರೆಗೆ ಕಾಯುತ್ತಾನೆ

ಕಥೆ ಮುಂದುವರೆಯಬಹುದು

-ಚಿನ್ಮಯ (13/6/16)

4 comments:

sunaath said...

ದೇವದಾಸನ ಸ್ಥಿತಿಯನ್ನು ನೋಡ(ಓದ)ಲಾಗುತ್ತಿಲ್ಲ. ಅವನಿಗೆ ಬೇಗನೆ ಮದುವೆ ಮಾಡಿಸಿಬಿಡಿ.

ಚಿನ್ಮಯ ಭಟ್ said...

Dhanyavada sir :)

Unknown said...

super agide sir. munduvaresi

ಚಿನ್ಮಯ ಭಟ್ said...

Dhanyavad tejashree avre....blog ge svagatha :)