Friday, June 10, 2016

ಎವರೆಸ್ಟ್ (ಮೂ: ಜಾನ್ ಕ್ರಾಕೌರ್, ಅ: ವಸುಧೇಂದ್ರ)

ಪರ್ವತ ಚಾರಣವನ್ನು ಒಂದು ಸಣ್ಣ ಮಟ್ಟಿಗಿನ ಹುಚ್ಚು ಎಂದು ಪರಿಗಣಿಸಿದರೆ, ಎವರೆಸ್ಟ್ ಶಿಖರದ ಚಾರಣವನ್ನು ಹುಚ್ಚಿನ ಪರಮಾವಧಿ ಎನ್ನಬಹುದೇನೋ. ಅದೇ ಚಾರಣವನ್ನು ಸವಾಲು ಎಂದು ಪರಿಗಣಿಸಿದರೆ, ಎವರೆಸ್ಟ್ ಶಿಖರವನ್ನು ಯಕ್ಷಪ್ರಶ್ನೆ ಎನ್ನಬಹುದೇನೋ.
ಎವರೆಸ್ಟ್, ಜಗತ್ತಿನಾದ್ಯಂತ ಪರ್ವತಾರೋಹಿಗಳನ್ನು ತೀವ್ರವಾಗಿ ಸೆಳೆಯುವ ಮತ್ತು ತೀವ್ರವಾಗಿ ಹೆದರಿಸುವ ಚಾರಣ ತಾಣ. ಅದನ್ನು ಹತ್ತಿ ಜೀವನದ ಪರಮಾನಂದವನ್ನು ಅನುಭವಿಸಿದವರು ಕೆಲವರಾದರೆ, ಜೀವನದುದ್ದಕ್ಕೂ ಕಾಡುವ ದುರಂತಗಳ ದುಃಸ್ವಪ್ನವನ್ನು ಕಟ್ಟಿಕೊಂಡು ಬಂದವರು ಕೆಲವರು. ಇನ್ನೂ ಕೆಲವರಿದ್ದಾರೆ, ಆದರೆ ಅವರ ಬಗ್ಗೆ ಉಳಿದವರು ಮಾತನಾಡಬೇಕಷ್ಟೇ, ಅವರು ಮಾತ್ರ ಯಾವುದೋ ಹಿಮಗಡ್ಡೆಯಲ್ಲಿ ಖಾಯಂ ಆಗಿ ಮಲಗಿದ್ದಾರೆ.
ಪರಿಶ್ರಮ,ತೊಂದರೆ,ಪ್ರಸಿದ್ಧಿ,ಹಣ ಇವುಗಳ ಲೆಕ್ಕಾಚಾರ ಏನೇ ಇರಲಿ, ಎವರೆಸ್ಟ್ ಚಾರಣವಂತೂ ನಡೆಯುತ್ತಲೇ ಇದೆ. ಅದರ ಆ ಅನನ್ಯ ಅನುಭವ ಚಾರಣಿಗರಿಗೆ ಮಾತ್ರ ಸೀಮಿತವಾದದ್ದಾದರೂ, ಆ ಪ್ರಯಾಣದಲ್ಲಿ ಸಿಗುವ ಥ್ರಿಲ್ ಅನ್ನು ಚೂರೇ ಚೂರಾದರೂ ಅನುಭವಿಸಬೇಕೆಂದರೆ ಜಾನ್ ಕ್ರಾಕೌರ್ ಅವರು ಬರೆದ ವಸುಧೇಂದ್ರ ಅವರು ಕನ್ನಡಕ್ಕೆ ಅನುವಾದಿಸಿದ 'ಎವರೆಸ್ಟ್' ಕೃತಿಯನ್ನು (ಇಂಟು ಥಿನ್ ಏರ್ ) ಓದಬಹುದು.
1996ರಲ್ಲಿ ನಡೆದ ಚಾರಣದ ಕುರಿತಾದ ಈ ಪುಸ್ತಕದಲ್ಲಿ ಚಾರಣದ ಬಗೆಗಿನ ಅನುಭವಗಳಿದೆ, ಚಾರಣಕ್ಕೆ ಬೇಕಾದ ಕೌಶಲ್ಯಗಳ ಬಗೆಗಿನ ವಿಚಾರಗಳಿದೆ, ಎವರೆಸ್ಟ್ ಬಗೆಗಿನ ಚಂದದ ಮಾಹಿತಿ ಇದೆ, ಚಾರಣದಲ್ಲಿ ಸಿಗುವ ವಿವಿಧ ಬಗೆಯ ಜನರ ಬಗ್ಗೆ ವಿಮರ್ಶೆಯಿದೆ, ಮೂರ್ನಾಕು ತಿಂಗಳು ಜೊತೆಗಿದ್ದವರ ಬಗೆಗಿನ ಸ್ನೇಹ-ಸಂಬಂಧಗಳ ಲಹರಿಯಿದೆ, ಶ್ರೇಷ್ಠ ಪರ್ವತಾರೋಹಿಗಳ ಸಾಹಸಗಾಥೆಯಿದೆ, ಗೊತ್ತಿದ್ದೂ ತಪ್ಪು ಮಾಡಿದವರ ವಿಷಾದದ ಕಥೆಯಿದೆ, ಎಲ್ಲಕ್ಕಿಂತ ಮುಖ್ಯವಾಗಿ ಸಾಧನೆಯಲ್ಲೂ ಕಾಡುವ ಅಪರಾಧಿಭಾವದ ಒಳನೋಟವಿದೆ.
ಬಹುಷಃ ಎಕ್ಸಾಮಿನಲ್ಲಿ ಪಾಸು ಫೇಲು ಎಂದು ವರ್ಗೀಕರಿಸುವಷ್ಟೇ ಸರಳವಾಗಿ ಎವರೆಸ್ಟ್ ಹತ್ತಿದವರು ಮತ್ತು ಹತ್ತಲು ಪ್ರಯತ್ನಿಸಿ ಸೋತವರು ಎಂದು ವರ್ಗೀಕರಿಸುವುದು ಈ ಪುಸ್ತಕವನ್ನು ಓದಿದ ಬಳಿಕ ಸಾಧ್ಯವಿಲ್ಲ ಎನಿಸುತ್ತದೆ. ಏಕೆಂದರೆ ಪ್ರತಿಯೊಬ್ಬರ ಚಾರಣದ ಹಿಂದೆಯೂ ಅವರದೇ ಆದ ಕಾರಣವಿದೆ. ಅವರದ್ದೇ ಆದ ಗುರಿಗಳಿದೆ. ಒಂದಿಷ್ಟು ಹುಚ್ಚುತನಗಳಿದೆ, ಅನಿವಾರ್ಯತೆಗಳಿದೆ, ಜೊತೆಗೆ ಅಪೂರ್ವವಾದ ತ್ಯಾಗವೂ ಇದೆ.

ಮಾರ್ಗದರ್ಶಿಗಳು,ಶೇರ್ಪಾಗಳು,ಅವರ ವ್ಯವಹಾರ,ಹಣ, ಕ್ಯಾಂಪು, ಎಜೆನ್ಸಿ, ಪೈಪೋಟಿ, ಶೇರ್ಪಾಗಳ ವಿಚಿತ್ರ ನಂಬಿಕೆಗಳು ಓದುಗರೆದುರು ಹೊಸದೊಂದು ಸಾಂಸ್ಕøತಿಕ ಪ್ರಪಂಚವನ್ನು ಖಂಡಿತಾ ಕಟ್ಟಿಕೊಡುತ್ತದೆ.
ಪ್ರಕೃತಿಯ ವೈಪರಿತ್ಯಕ್ಕೆ ಸಿಕ್ಕಿ ಸತ್ತು ಹೋದವರು ಕೆಲವರಾದರೆ, ಸೂಕ್ತ ಸಂವಹನದ ಕೊರತೆಯಿಂದ ಸತ್ತವರು ಕೆಲವರು. ಅನಾರೋಗ್ಯವನ್ನು ಅಲಕ್ಷ್ಯ ಮಾಡಿ ಯಾವುದೋ ಜಿದ್ದಿಗೆ ಹತ್ತಿ ದೇಹ ಕೈಕೊಟ್ಟವರು, ಶೋಕಿಗೆ ಹತ್ತಿ ಸತ್ತವರು, ಹಣಕ್ಕಾಗಿ ಅಲ್ಲಿದ್ದವರು, ಸ್ವಾಮಿ ನಿಷ್ಠೆ ಪರಿಪಾಲನೆಗಾಗಿ ಪ್ರಾಣವನ್ನು ಲೆಕ್ಕಿಸದವರು, ಕರ್ತವ್ಯಪಾಲನೆಗಾಗಿ ಪ್ರಾಣವನ್ನೇ ಕೊಟ್ಟವರು ಹೀಗೆ ಇಲ್ಲಿ ಮನುಷ್ಯನ ಸಂಕೀರ್ಣ ಮುಖಗಳ ಪರಿಚಯವಾಗುತ್ತದೆ.
ಪುಸ್ತಕದ ಬರವಣಿಗೆಯ ಬಗ್ಗೆ ನಾನೇನೂ ಮಾತನಾಡಲಾರೆ. ಪುಸ್ತಕದ ಕನ್ನಡ ಚೆಂದವಾಗಿದೆ. 'ಹಿಮಕುಳಿ'ಯಂಥಹ ಕನ್ನಡ ಪದಗಳ ಬಳಕೆ ಇಷ್ಟವಾಯಿತು. ಅಗತ್ಯವಿರುವೆಡೆ ಆಂಗ್ಲಭಾಷಾ ಪದಗಳನ್ನು ಹಾಗೆಯೇ ಇಟ್ಟಿದ್ದು ಮೂಲಪುಸ್ತಕದ ಫೀಲ್ಗೆ ಹತ್ತಿರವೆನ್ನಿಸಿತು.
ಪುಸ್ತಕ ಓದಿ ಅವತ್ತೆ ಬರೆಯಬೇಕೆಂದಿದ್ದನ್ನು ಬೇಕಂತಲೇ ತಡೆಹಿಡಿದು, ಮನಸ್ಸಿನಲ್ಲಿ ಉಳಿದಿದ್ದನ್ನು, ಮನಸ್ಸಿನಲ್ಲಿ ಅರಳಿದ್ದನ್ನು ಇಲ್ಲಿ ಬರೆದಿದ್ದೇನೆ. ಸ್ಮೃತಿಯಲ್ಲಿ ರಾಬ್ ಹಾಲ್, ಆಂಡಿ, ಸ್ಕಾಟ್, ಡಹ್ಗ್, ಫಿಷರ್,ಬೊಕ್ರೀವ್ ಮುಂತಾದ ಹಲವು ಹೆಸರುಗಳಿದೆ. ಮನೆಯಲ್ಲಿ ಕಂಬಳಿಯ ಮೇಲೆ ಮಲಗಿ ಪುಸ್ತಕ ಓದುತ್ತಾ ಕಣ್ಣೆದುರು ಹರಡಿದ ಹಿಮಾಲಯದ ಚಂದದ ಕಲ್ಪನೆಗಳಿದೆ.
ಮತ್ತು
ನಾನೂರು ಚಿಲ್ಲರೆ ಅಡಿ ಮೇಲೆ ಇದ್ದವನನ್ನು ರಕ್ಷಿಸಲಾಗದ್ದಕ್ಕೆ ತನ್ನನ್ನು ತಾನು ಅಪರಾಧಿ ಎಂದುಕೊಳ್ಳುವ ಜಾನ್ ಕ್ರಾಕೌರ್ನ ಮನದಾಳದ ಮಾತುಗಳು ವಾರದಾಟಿದರೂ ಕಾಡುತ್ತಿದೆ.
ಧನ್ಯವಾದಗಳು ವಸುಧೇಂದ್ರ ಸರ್ ಚಂದದ ಪುಸ್ತಕಕ್ಕೆ, ಹಿಮಾಲಯವೆನ್ನುವ ಅದ್ಭುತ ಪ್ರಪಂಚದ ತುಣುಕನ್ನು ಪರಿಚಯಿಸಿದ್ದಕ್ಕೆ.
-ಚಿನ್ಮಯ

2 comments:

sunaath said...

ಒಳ್ಳೆಯ ಪುಸ್ತಕದ ಪರಿಚಯ ಮಾಡಿಕೊಟ್ಟಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

ಚಿನ್ಮಯ ಭಟ್ said...

ಧನ್ಯವಾದ ಸುನಾಥ ಕಾಕಾ:)