Monday, January 22, 2018

ಹೇಳದ ಮಾತು

ಒಂದನೇ ಪ್ರೀತಿ ಬಗ್ಗೆ ಎರಡನೇ ಹುಡುಗಿಗೆ ಹೇಳಬಹುದೇ?
ಮೂರು ಬಾರಿ ಯೋಚಿಸಿದೆ; ನಾಲ್ಕಾರು ಬಾರಿ ತಲೆ ಕೆರೆದೆ

ಕಳೆದ ವಾರದಂತಿದೆ ಆಹಾ!, ಕಣ್ಣೆದುರು ಕನಸುಗಳ ತೋರಣವಿತ್ತು
ಹುಣ್ಣಿಮೆಯ ತಡರಾತ್ರಿಯಲ್ಲೆಲ್ಲ ಸಾಲುಗಳು ಮೂಡುತ್ತಿತ್ತು
ಭೂಕಂಪ-ಜ್ವಾಲಾಮುಖಿ ಭಾವಲಹರಿ ಸುನಾಮಿಯಾಗಿತ್ತು
ಸಾಂತ್ವನದ ನಶೆಯೇರಿ; ವಾರಗೆಯವರಿಗೆ ಬರಾಬರಿಯಾಗಿಸಿತ್ತು

ವಸಂತಗಳು ಬದಲಾದವು; ಪ್ರಿಯಾರಿಟಿಗಳು ಬೇರೆಯಾದವು
ಜಗಳ ಕಮ್ಮಿಯಾದಂತೆಲ್ಲ ಅಹಂನ ಕೋಟೆಗಳು ಗಟ್ಟಿಯಾದವು
ಬ್ರೇಕ್-ಅಪ್ ಎಂಬ ಸಮಾರಂಭವಿಲ್ಲದೇ ಸಂಬಂಧ ಮುರಿದಿತ್ತು
ಉಪೇಕ್ಷೆ-ಉಡಾಫೆ-ಸ್ವಾರ್ಥಗಳ ನಡುವೆ ನಂಬಿಕೆ ದಿವಾಳಿಯಾಗಿತ್ತು

ಹೀಗೆ ಒಂದು ದಿನ ಆಮಂತ್ರಣ ಪತ್ರಿಕೆ ಡೌನ್ಲೋಡಾಯಿತು
ಅಷ್ಟುದಿನ ಅಡಗಿದ್ದ ಕಣ್ಣೀರು ಟಪ್ ಎಂದು ಹನಿಯಿಟ್ಟಿತು
ಕ್ಷಣಕಾಲ ಕತ್ತಲಷ್ಟೇ; ಸಾವಕಾಶದಿ ನಿಟ್ಟುಸಿರು ಹೊರಟಿತು
ಬೇಡವೆಂದರೂ ಗಡ್ಡ ಬೆಳೆಯಿತು; ಕೆಲಸ ಬದಲುಮಾಡಲೇಬೇಕಾಯಿತು

ಬದುಕಿದ್ದೆ ಬದುಕ ನೋಡುವ ಆಸೆಗೆ; ಬೆನ್ನುಹಾಕಲಾಗದ ಹಠಕ್ಕೆ
ರಾತ್ರಿಗಳೆಲ್ಲ ಅಮಾವಾಸ್ಯೆ, ಏಕಾಂತವೂ ಹಿಂಸೆ, ಬೈಗುಳ ನಾಯಿ ಬೊಗಳಿದ್ದಕ್ಕೆ
ಮತ್ತೆ ಕ್ಯಾಲೆಂಡರು ಮಗ್ಗಲು ಬದಲಿಸಿತು; ಮನಸ್ಸೊಂದಿಷ್ಟು ತಿಳಿಯಾಯಿತು
ಅಡಿಕೆ ಮರ ಹತ್ತಿ ಬಿದ್ದರೇನಂತೆ, ಏಲಕ್ಕಿ ಬೆಳೆಯುವ ಮನಸ್ಸಾಯಿತು
ಸೂರ್ಯನಿಂದ ಹೊರಸಿಡಿದ ಭೂಮಿ ನಿಧಾನವಾಗಿ ತಂಪಾಗುತ್ತಿತ್ತು
ಸ್ವಯಂ-ನಿಯಂತ್ರಣವೆಂಬ ಪರದೇಸಿ ಪೊರೆ ಕಳಚಿ ಹೋಯಿತು
ಗಾಳಿ ಬಂದ ಕಡೆ ಖುಷಿಯಿಂದ ಸಾಗಿ; ಹಸಿವಾದಾಗ ತಿಂದು ತೇಗಿ
ಮತ್ತೊಮ್ಮೆ ರಾತ್ರಿಯೆಲ್ಲ ನಿದ್ದೆ ಬರಹತ್ತಿತ್ತು; ಆದರ್ಶ ಮಾತಾಡಿತ್ತು

ಆದರ್ಶದ ಭೂತ ನೆತ್ತಿಹತ್ತುವ ಮೊದಲೇ ಇದಾಯಿತು
ಕಾಣದ ನಾಳಿಗಿಂತ, ಕಣ್ಣೆದುರಿನ ಇಂದು ಹಾಯೆನಿಸುತ್ತಿತ್ತು
ಹಾಯ್-ಬಾಯ್ ಇಂದ ಶುರುವಾದಾಗ ಮಾಮೂಲಿಯೆನಿಸಿತ್ತು
ನನ್ನ ಬೇಲಿಗಳ ನಾನೇ ದಾಟಿದಾಗ ಇದೇನೋ ವಿಶೇಷವೆನಿಸಿತು

ಒಂದನೇ ಪ್ರೀತಿ ಬಗ್ಗೆ ಎರಡನೇ ಹುಡುಗಿಗೆ ಹೇಳಬಹುದೇ?
ಮೂರು ಬಾರಿ ಯೋಚಿಸಿದೆ; ನಾಲ್ಕಾರು ಬಾರಿ ತಲೆ ಕೆರೆದೆ
ಪ್ರಯೋಜನವೇನೂ ಆದಂತಿಲ್ಲ;ಉತ್ತರವೂ ಸಿಕ್ಕಿಲ್ಲ
ಬಹುಷಃ ನಂಬಿಕೆಯೊಂದಿದ್ದರೆ,
ಎಲ್ಲವನ್ನೂ ಬಾಯಿಬಿಟ್ಟು ಹೇಳಬೇಕೆಂದಿಲ್ಲ
ಎಲ್ಲವನ್ನೂ ಕಿವಿಯಿಂದಲೇ ಕೇಳಬೇಕೆಂದಿಲ್ಲ

-ಚಿನ್ಮಯ
22/1/2018

2 comments:

sunaath said...

" ಎಲ್ಲವನ್ನೂ ಬಾಯಿಬಿಟ್ಟು ಹೇಳಬೇಕೆಂದಿಲ್ಲ
ಎಲ್ಲವನ್ನೂ ಕಿವಿಯಿಂದಲೇ ಕೇಳಬೇಕೆಂದಿಲ್ಲ ",
ಇದು ಪ್ರೀತಿಯಲ್ಲಿಯ ಮಾತು, ಸಮರ್ಪಕವಾದ ಮಾತು!

ಚಿನ್ಮಯ ಭಟ್ said...

ಧನ್ಯವಾದ ಸುನಾಥ ಕಾಕಾ :)