Thursday, March 22, 2018

ಬದಲಾವಣೆ

ಊರೆಲ್ಲ ಖಾಲಿಯಾಗುತ್ತಿದೆ; ಆಟ ಮುಗಿದ ಅಂಗಳದಂತೆ
ಶಹರ ತುಂಬುತ್ತಲಿದೆ; ಇನ್ನೂ ಹೊರಡದ ಟೆಂಪೋವಿನಂತೆ
ನಾನೂ ಓಡುತ್ತಿದ್ದೇನೆ ಅದೇ ನಗರಿಯಲ್ಲಿ; ಸಿಟಿಯ ಸುಖದ ಅಮಲಿನಲ್ಲಿ
ಊರು-ತೋಟ-ನೆಮ್ಮದಿ ಕಾಡುತ್ತವೆ ತಡರಾತ್ರಿಯ ಕನವರಿಕೆಗಳಲ್ಲಿ

ಅಜ್ಜ-ಅಜ್ಜಿ-ದೊಡ್ಡಮ್ಮ-ದೊಡ್ಡಪ್ಪ ಇನ್ನು ಶ್ರಾದ್ಧಗಳಲ್ಲಷ್ಟೇ ಸಿಗುವುದು
ರಜೆ ಹಾಕಿ ಊರಿಗೆ ಹೋಗಿರಬೇಕು; ಕಾವ್ ಕಾವ್ ಎಂದು ಕರೆಯಬೇಕು
ಊಟ ಮಾಡಿ ಕೈ ತೊಳೆದು ಬೆಟ್ಟ ಹತ್ತಿ; ಮೇಲ್ ಚೆಕ್ ಮಾಡಬೇಕು
ಇನ್ಯಾವಗಲೋ ಬರುವೆನೆಂದು ಸಬೂಬು ಹೇಳಿ ಸ್ಲೀಪರ್ ಬಸ್ಸು ಹತ್ತಬೇಕು

ಅಶುಭಕ್ಕೊಂದೇ ಕಡ್ಡಾಯ ಪ್ರಯಾಣ; ಹಬ್ಬಗಳಲೆಲ್ಲ ಹೊಟೇಲಿನ ನಿರ್ಣಯ
ಹೆಸರಿಗೆ ಮಾತ್ರ ಅಲ್ಲಿಯವರು; ಆದರೆ ಎಲ್ಲಿಯೂ ನಿಲ್ಲದವರು
ಅವಕಾಶವನರಸಿ ಕೆಂಪು ಬಸ್ ಹತ್ತಿ ಬಂದದ್ದೇನೋ ನಿಜ. ಗುರಿ ಮುಟ್ಟಿದೆನಾ?
ಗುರಿಗಳಿಗೂ ಬಡ್ಡಿ-ಚಕ್ರಬಡ್ಡಿಯ ಹಾಕಿ, ಕೈ ಸಿಗದೆಡೆಯಲ್ಲಿ ಅಡಗಿಸಿಟ್ಟೆನಾ?

ತೊಂದರೆಯೇನಿಲ್ಲ ಈ ಪಟ್ಟಣದಲ್ಲಿ; ಬೆವರು ಬಸಿಯುವವರಿಗೆ ಬದುಕಲು
ಉಸಿರಾಡಲು ಶುದ್ಧ ಗಾಳಿ ಸ್ವಲ್ಪ ಕಷ್ಟ; ಟ್ರಾಫಿಕ್ಕಾಸುರನ ಲಹರಿ ನಿತ್ಯ ಅಸ್ಪಷ್ಟ
ಹೊರಡಲೇಬೇಕೆನ್ನುವುದಕ್ಕೆ ಸ್ಪಷ್ಟಕಾರಣವೇನೂ ಸಿಗುತ್ತಿಲ್ಲ
ಕಾರ್ಪರೇಟಿನಲ್ಲಿ ಮುಳುಗಿದ ಮೇಲೆ ಸತ್ಯ-ಪ್ರಾಮಾಣಿಕತೆಗಳೂ ಬದುಕಿಲ್ಲ

ಜೊತೆಗೆ ಊರೂ ಮೊದಲಿನಂತಿಲ್ಲ; ಬದಲಾವಣೆ ಜಗದ ನಿಯಮ
ಬೇಡಿಕೆ-ಪೂರೈಕೆ;ಬ್ಲಾಕ್ ಆಂಡ್ ವೈಟ್ ಬದುಕಿಗೆ ಬಣ್ಣದ ಆಯಾಮ
ಆದರೆ, ಮೊದಲಂತೆ ಅನ್ನದ ಚರಿಗೆ ಬಿಸಿಯಾಗುವುದಿಲ್ಲ; ಕಾರಣ ಅಷ್ಟೆಲ್ಲ ಉಣ್ಣುವವರಿಲ್ಲ
ಊರ ಪ್ರತಿಷ್ಠೆ: ಬೇಲಿ ಸಲುವಾಗಿ ನಂಬರವಿಲ್ಲ; ಕಾರಣ ಬೇಲಿ ಕಾಯಲೂ ಜನರಿಲ್ಲ

ಅಲ್ಲೂ ಇಲ್ಲೂ ನನ್ನಲ್ಲೂ ಎಲ್ಲ ಬದಲಾಗಿವೆ
ಆದರೆ ನಾ ಕಂಡಿದ್ದ ಊರು ನನ್ನಲ್ಲೇ ಭದ್ರವಾಗಿದೆ;
ನನ್ನನ್ನು ಇಂದಿಗೂ ಸಂತೈಸುತ್ತಿದೆ
ಎಲ್ಲ ಬಿಟ್ಟು ಬರಿಗೈಯ್ಯಲ್ಲಿ ಬಂದಾಗಲೂ
ಅಮ್ಮನಂತೆ ಬಿಗಿದಪ್ಪಿಕೊಳ್ಳುತ್ತದೆ,
ಅಪ್ಪನಂತೆ ಹೆಗಲುಕೊಡುತ್ತದೆ
-ಚಿನ್ಮಯ
22/03/2018

2 comments:

Srikanth Manjunath said...

ಆಣೆಗಳು ರೂಪಾಯಿಗಳಾದಾಗಿಂದ ಬದಲಾವಣೆಯ ಪರ್ವವನ್ನು ಸೊಗಸಾಗಿ ಮೂಡಿಸಿದ್ದೀರಾ.. ಹಳ್ಳಿಯ ಜೀವನ.. ಅದರ ಜೊತೆಗಿನ ಜೀವನ ಎಲ್ಲವೂ ಈಗ ಕನಸಾಗಿದೆ..
ಹಳ್ಳಿಗೆ ಟಾರು ರಸ್ತೆ ಬಂತು.. ಎಲ್ಲವೂ ಬದಲಾಯಿತು...

ಸೂಕ್ಷ್ಮವಾಗಿ ಮನುಜನ ಯಾಂತ್ರಿಕ ಜೀವನವನ್ನು ಕಟ್ಟಿಕೊಟ್ಟಿರುವ ರೀತಿ ಸೂಪರ್ ಚಿನ್ಮಯ್

ನಿಮ್ಮ ಔಟ್ಪುಟ್ ಸೂಪರ್ ಆಗಿ ಬಂದಿದೆ

ಚಿನ್ಮಯ ಭಟ್ said...

ಧನ್ಯವಾದ ಶ್ರೀಕಾಂತಣ್ಣಾ :)