Friday, May 18, 2018

ಕ್ಲಾಥ್‍ವುಡ್ ಭಾಗ-2

ನಮಸ್ತೆ..ಹೇಗಿದೀರಾ?
ಇದು "ಯುವರ್ಸ್ ಕೋಟ್" ಮತ್ತು "ಕಹಳೆ" ಜಂಟಿಯಾಗಿ ಆಯೋಜಿಸಿದ್ದ ಜಗುಲಿಸಾಲು ಕಾರ್ಯಕ್ರಮದಲ್ಲಿ ವಾಚಿಸಿದ್ದ ಕವನ. ದಯವಿಟ್ಟು ಓದಿ/ನೋಡಿ, ತಪ್ಪು-ಒಪ್ಪು ತಿಳಿಸಿ...ಕಾಯ್ತಿರ್ತೀನಿ :)

-----------------
ಇನ್ನೇನು ಬೆಳಗಾಗುತ್ತಿತ್ತು;ದಿನಪತ್ರಿಕೆ ಹಾಲಿನ ವ್ಯಾನು ಹೊರಡುತ್ತಿತ್ತು
ಬಟ್ಟೆಗಳೆಲ್ಲ ರಾತ್ರಿಯ ಹರಟೆ-ಹಾಸ್ಯದ ಮೆಲುಕು ಹಾಕುತ್ತಿದ್ದವು
ನೆಂಟರ ಲುಂಗಿ ಮಾತ್ರ ಏಕಾಂಗಿಯಾಗಿ ಸುಮ್ಮನೇ ಕೂತಿತ್ತು

ಇದೇನು ಹೊಸದಲ್ಲ,ಇದೇನು ಮೊದಲಲ್ಲ, ಇದರಲ್ಲೇನೂ ವಿಶೇಷವಿಲ್ಲ
ಪರರ ನಗಿಸುವ ಹೃದಯದ ಹಿಂದೆ ನೋವಿರುವುದು ಗುಟ್ಟಾಗಿ ಉಳಿದಿಲ್ಲ
ಆದರೂ ತಿಳಿಯಬೇಕೆನಿಸಿದೆ ನೆಂಟರ ಲುಂಗಿಯ ಕತೆಯನ್ನ
ಠಾಟು-ಠೀಕಾಗಿ ಓಡಾಡಿಕೊಂಡಿದ್ದ ನೆಂಟರಲುಂಗಿ ಗಡ್ಡಬಿಡಲು ಕಾರಣವನ್ನ

ಹರೆಯದ ಹೊಸದರಲ್ಲಿ ನೆಂಟರಲುಂಗಿ ಮನೆಗೆ ಬಂತು
ಆಗೆಲ್ಲ ಅದು ನೆಂಟರಲುಂಗಿಯಾಗಿರಲಿಲ್ಲ;
ಅಸಲಿಗೆ ಅದಕ್ಕೆ ಡೆಸಿಗ್ನೇಷನ್ನೇ ಇರಲಿಲ್ಲ
ಮದುವೆಯ ಜವಳಿಗಂಟು ರೇಷ್ಮೆಸೀರೆಯ ಭರಾಟೆಯಲ್ಲಿ
ಇದನ್ನು ಯಾರೂ ಗಮನಿಸುವವರೇ ಇರಲಿಲ್ಲ
ಇದಕ್ಕೋ, ಊರೆಲ್ಲ ಮೆರೆಯಬೇಕೆಂಬ ಆಸೆ; 
ಆದರೆ ದಾರಿ ಮಾತ್ರ ತಿಳಿದಿರಲಿಲ್ಲ

ಪಕ್ಕದ ಕೋಣೆಯಲ್ಲಿ ಅತ್ತೆ ತನ್ನ ಮಗನಿಗೆ ಹೇಳುತ್ತಿದ್ದಳು
“ಈ ಬರ್ಮೂಡಾ ಎಲ್ಲ ಬೇಡ; ಇವತ್ತಾದ್ರೂ ಲಕ್ಷಣವಾಗಿ ಪಂಚೆ ಉಡು”
ನೆಂಟರಲುಂಗಿಗೆ ಖುಷಿಯೋ ಖುಷಿ; 
ಬಿಗಿದಪ್ಪಿಕೊಂಡಿತು ಅವನ ಸೊಂಟವನ್ನ
ನೋಡುವವರೆಂದರು,
“ಅರೆರೆ..ಇವತ್ತೇನು ಈ ಪಟ್ಟೆ ಪಟ್ಟೆ ಲುಂಗಿ.ಉಡು ಬಿಳಿ ಪಂಚೆಯನ್ನ”

ಬೆಂಗಳೂರಿನಿಂದ ಬಂದ ಅತ್ತೆಯ ಮಗ ಕಿತ್ತೆಸೆದ ಲುಂಗಿಯನ್ನ
ಇಸ್ತ್ರೀಮಾಡಿದ್ದ ಜೀನ್ಸ್ ಸಿಕ್ಕಿಸಿ, ತಿರುಗಿಸಿದ ಬೈಕಿನ ಕೀಲಿಯನ್ನ
ನೆಂಟರಲುಂಗಿ ಮಾತ್ರ ಅಲ್ಲೇ ಮುದುಡಿಬಿದ್ದಿತ್ತು
ತನ್ನ ಅದೃಷ್ಟವ ಹಳಿಯುತ್ತಿತ್ತು, ಮುಂದೇನು ಎಂದು ಯೋಚಿಸುತ್ತಿತ್ತು
ಏನಾದರೂ ಮಾಡಲೇಬೇಕೆಂದು ಹವಣಿಸುತ್ತಿತ್ತು

ಅಷ್ಟರಲ್ಲಿ ಅತ್ತೆ ಕೋಣೆಗೆ ಬಂದಳು;
ರೇಷ್ಮೆ ಸೀರೆ ಕುಪ್ಪಸ ಚಿಲ್ಲರೆ ಕಾಸು ಎಲ್ಲವನ್ನೂ ಮಂಚದ ಮೇಲಿಟ್ಟಳು
ನೆಂಟರಲುಂಗಿಯ ಕಣ್ಣು ಇನ್ನೂರಾ ಇಪ್ಪತ್ತು ಡಿಗ್ರಿ ತಿರುಗಿತು
ಸೀರೆ-ಕುಪ್ಪಸದ ಕಡೆಗಲ್ಲ, ಅದರ ಜೊತೆಗಿದ್ದ ರೇಷಿಮೆ ಶಾಲಿನ ಕಡೆಗೆ
ರಾತ್ರಿಯಾಯಿತು, ಎಲ್ಲರೂ ಮಲಗಿದ್ದರು
ನೆಂಟರಲುಂಗಿ ಮಾತ್ರ ಎಲ್ಲರಿಗಿಂತ ಬೇಗ ಎದ್ದಿತ್ತು

ಹಲೋ, ಮೈ ನೇಮ್ ಈಸ್ ----, 
ಹೌಡುಯು ಡೂ ಎಂದು ಮಾತನಾಡಿಸಿತು
ಹೈ ಹೌವ್ ಆರ್ ಯು ಎಂದು ಶಾಲು
ಪರಿಚಯಪೂರ್ವಕ ನಗೆಬೀರಿತು

ಅದೇ ಸಮಯದಲ್ಲಿ, ಪಕ್ಕದ ಕೋಣೆಯಲ್ಲಿ ವಾಟ್ಸಾಪ್ಪಿನ ಸ್ಮೈಲಿ ಹಾರಾಡುತ್ತಿತ್ತು
ಬೆಂಗಳೂರಿನ ಅತ್ತೆಯ ಮಗ -ಪಕ್ಕದೂರಿನ ಹುಡುಗಿಯ ವತಿಯಿಂದ
ಕರಕುಶಲ ಕೈಗಾರಿಕೆಯ ಪ್ರದರ್ಶನ ನಡೆಯುತ್ತಿತ್ತು
ಮತ್ತೆ ಬೆಳಗಾಯಿತು; ಕೆಲವರಿಗೆ ಬಹಳ ಬೇಜಾರಾಯಿತು
ರಾತ್ರಿಯ ಏಕಾಂತಕ್ಕಾಗಿ ಬಹಳೇ ಹೊತ್ತು ಕಾಯಬೇಕಾಯಿತು

ವಿಧಿಲಿಖಿತ, 
ಕೋಣೆಯಲ್ಲಿ ಹರಡಿದ್ದ ಲುಂಗಿಯಲ್ಲಿ ಸೀರೆಯ ರಾಶಿಯನ್ನ ಕಟ್ಟಿದರು
 ಕಳುವಾಗದಿರಲಿ ಎಂದು ಯಜಮಾನತಿ ಅದನ್ನು
ಜೋಪಾನವಾಗಿ ಕಪಾಟಿನಲ್ಲಿ ಬಚ್ಚಿಟ್ಟರು
ಆದರೆ ಕಳ್ಳತನ ಅದಾಗಲೇ ಆಗಿಹೋಗಿತ್ತು;
ನೆಂಟರಲುಂಗಿಯ ಹಾರ್ಟನ್ನ ರೇಷಿಮೆ ಶಾಲು ಅಪಹರಿಸಿತ್ತು

ವಿಧಿಲಿಖಿತ,
ಅತ್ತ ಜವಳಿಯಲ್ಲಿ ಚೂಡಿದಾರದ ಬಟ್ಟೆ ಕಮ್ಮಿಬಿತ್ತು
ಖರೀದಿಯ ಜವಾಬ್ದಾರಿ ಸುತ್ತಿ ಬಳಿಸಿ
ಬೈಕಿದ್ದ ಹುಡುಗ, ಪೇಟೆ ಗೊತ್ತಿದ್ದ ಹುಡುಗಿಯ ಮೇಲೆ ಬಿತ್ತು

ಜೊತೆಗೇ ಇದ್ದರೂ, ಇಬ್ಬರೂ ಇಲ್ಲಲ್ಲ ನಾಲ್ವರೂ ಅಂತರ ಕಾಯ್ದುಕೊಂಡಿದ್ದರು
ತಮಗೆ ಮಾತ್ರ ತಿಳಿಯುವಂತೆ ಕನಸಿನ ಅರಮನೆ ಕಟ್ಟುತ್ತಿದ್ದರು
ಮರುದಿನ ಮಧ್ಯಾನ್ಹದವರೆಗೂ ಅದು ಮುಂದುವರೆದಿತ್ತು
ಮುಂದಿನ ದಿಬ್ಬಣ ಪಕ್ಕದೂರಿಗೇ ಬರುವುದು ಬಹುತೇಕ ನಿಶ್ಚಿತವಾಗಿತ್ತು

ಮರುದಿನ, ಚಂದದ ಸೀರೆಯನುಟ್ಟು 
ಬಿತ್ತಕ್ಕಿಗಾಗಿ ಹುಡುಗಿ ಶಾಲುಹೊದ್ದಳು
ಅವನ ಡಿ.ಎಸ್.ಎಲ್.ಆರ್ ಕ್ಯಾಮರಾದಲ್ಲಿ 
ವಧು-ವರರಿಗಿಂತ ಅವಳ ಪೋಟೋಗಳೇ ಜಾಸ್ತಿ ಇದ್ದವು

ನೆಂಟರಲುಂಗಿ ಕೋಣೆಯಲ್ಲಿರಲಾಗದೇ 
ಯಾವುದೋ ಒಂದು ನೆಂಟರ ಸೊಂಟವನ್ನ ಅಪ್ಪಿಕೊಂಡಿತು
ಅಂದಿನಿಂದ ಅದಕ್ಕೆ ನೆಂಟರಲುಂಗಿಯ ಪಟ್ಟ ಪಕ್ಕಾ ಆಯಿತು

ಮದುವೆ ಮುಗಿದಮೇಲೆ ಹುಡುಗಿ ಬೈಕನ್ನೇರಿ ಹೊರಟಿದ್ದಳು
ಲುಂಗಿಗೆ ಬಾಯ್ ಹೇಳಲೆಂದು ಶಾಲು ನೆಲಕ್ಕೆ ಇಳಿದುಬಿತ್ತು

ಅದೇ ಘಳಿಗೆಯಲ್ಲಿ ಬೈಕಿನ ಚಕ್ರ ತಿರುಗಿತ್ತು
ಶಾಲು, ಶಾಲಿನ ಜೊತೆಗಿದ್ದ ಸೆರಗು, ಸೆರಗಿನ ಜೊತೆಗಿದ್ದ ಸೀರೆ
ಸೀರೆ ಉಟ್ಟಿದ್ದ ಹುಡುಗಿ ಅದಕ್ಕೆ ಬಲಿಯಾಗಿಯಾಗಿತ್ತು
ಶುಭ ಕಾರ್ಯ ಮುಗಿಸಿದ ಮನೆಯಲ್ಲಿ ಅಶುಭದ ಸುದ್ದಿ ಹರಡಿತು

ಚಿತೆಯು ಧಗಧಗ ದಹಿಸುವಾಗ ಎಲ್ಲರ ಕಣ್ಣಲ್ಲೂ ನೀರು
ಅಷ್ಟರಲ್ಲೇ ಯಾರೋ ಹುಡುಗಿಯ ಶಾಲನ್ನೂ ಬೆಂಕಿಗೆ ಬಿಸಾಡಿದರು
ಎಲ್ಲ ಮುಗಿದಿತ್ತು; ಹುಡುಗನಿಗಾಗಿ ಬೆಂಗಳೂರಿನ ಸ್ಲೀಪರ್ ಬಸ್ಸು ಕಾದಿತ್ತು
ಇತ್ತ ಪ್ರೇಯಸಿಯ ನೆನಪಲ್ಲಿ ಲುಂಗಿಯ ಗಡ್ಡಬೆಳೆದಿತ್ತು

ತಾನು ಶಾಲಿಗೆ ಪರಿಚಯವೇ ಆಗದಿದ್ದರೆ ಬಹುಷಃ ಹೀಗೆಲ್ಲ ಆಗುತ್ತಿರಲಿಲ್ಲ
ಶಾಲು ಬಗ್ಗೆ ತನಗೆ ಬಾಯ್ ಹೇಳುತ್ತಿರಲಿಲ್ಲ
ಇಬ್ಬರೂ ದೂರಾಗುತ್ತಿರಲಿಲ್ಲ
ನೆಂಟರ ಲುಂಗಿಯ ತಲೆಯಲ್ಲಿ ಬೇರೆ ಏನೇನೋ ಓಡುತ್ತಿತ್ತು
ಅಜನ್ಮ ಬ್ರಹ್ಮಚಾರಿಯಾಗುವ ಪಣತೊಟ್ಟಿತ್ತು

ಅತ್ತ ಬೆಂಗಳೂರಿನಲ್ಲಿ ಹುಡುಗನ ಬದುಕು 
ಎಂದಿನಂತೆ ಸಾಗಿತ್ತು

“ಈ ಮನುಷ್ಯರೇ ಹೀಗೆ” 
ನೆಂಟರಲುಂಗಿಗೆ ಮನುಕುಲದ ಬಗ್ಗೆ ಸಿಟ್ಟು ಬಂತು
ಉಟ್ಟವರು ಕೂರಲಿಕ್ಕಾಗದಂತೆ ಕಿರಿಕಿರಿಯಿಡಲು ಶುರುವಿಟ್ಟಿತು
ಮನೆಗೆ ಬಂದ ನೆಂಟರೆಲ್ಲ ಹೇಳಲಿಕ್ಕಾಗದ ವೇದನೆ ಅನುಭವಿಸಿದರು
ಮರೆಯಲ್ಲೆಲ್ಲೋ ನಿಂತು ಪರಪರ ಕೆರೆದು ಬಸ್ಸು ಹತ್ತಿದರು

ಕೆಲದಿನಗಳ ನಂತರ,
ನೆಂಟರ ಲುಂಗಿಯ ಕೋಪ ತಣ್ಣಗಾಯಿತು
ಯಜಮಾನ ಯಜಮಾನತಿಯ ಸ್ಥಿತಿ ನೋಡಿ
ಹೃದಯ ಆದ್ರ್ರವಾಯಿತು

ಅವತ್ತಿನಿಂದ ಮನೆಗೆ ಬಂದ ನೆಂಟರಿಗೆಲ್ಲ ಇದೇ ಲುಂಗಿಯೇ ಬೇಕು
ಅವರು ಹೊರಟ ದಿನ ರಾತ್ರಿ, 
ಕ್ಲಾತ್‍ವುಡ್‍ನಲ್ಲಿ ಅವರ ಬಗ್ಗೆ ಸಾಲು ಸಾಲು ಜೋಕು

ಇನ್ನೇನು ಬೆಳಗಾಗುತ್ತಿತ್ತು;ದಿನಪತ್ರಿಕೆ ಹಾಲಿನ ವ್ಯಾನು ಹೊರಡುತ್ತಿತ್ತು
ಬಟ್ಟೆಗಳೆಲ್ಲ ರಾತ್ರಿಯ ಹರಟೆ-ಹಾಸ್ಯದ ಮೆಲುಕು ಹಾಕುತ್ತಿದ್ದವು
ನೆಂಟರ ಲುಂಗಿ ಮಾತ್ರ ಏಕಾಂಗಿಯಾಗಿ ಸುಮ್ಮನೇ ಕೂತಿತ್ತು
-ಚಿನ್ಮಯ


2 comments:

sunaath said...

ಚಿನ್ಮಯ,
ನಿಮ್ಮ ‘ನೆಂಟರ ಲುಂಗಿ’ಯು ನನ್ನೊಡನೆ ವಿನೋದವಾಗಿ ಮಾತನಾಡುತ್ತ, ನನ್ನನ್ನು ಖುಶಿಪಡಿಸುತ್ತಿದ್ದಂತೆ ದುರಂತದಲ್ಲಿ ಮುಕ್ತಾಯವಾಯಿತಲ್ಲ. ಕವನ ಚೆನ್ನಾಗಿದೆ. ನಿಮ್ಮ ಓದೂ ಸಹ ಅಷ್ಟೇ ಚೆನ್ನಾಗಿದೆ. ಅಭಿನಂದನೆಗಳು.

ಪ್ರಗಲ್ಭಾ said...

ಕವನ ತುಂಬಾ ಚೆನ್ನಾಗಿದೆ....