ಜಾರುತಿದೆ ಹಳಿಯಿಂದ ನಮ್ಮ ಬೆಂಗಳೂರು
ಏರುತಿಹ ದರದಿಂದ ಕಾಪಿಡುವವರಾರು?
ಬೆಳೆಬೆಳೆದು ತನ್ನೆ ತಾ ತಿಂದು ಮುಗಿಸುವ ಮುನ್ನ
ಪುರವ ಕಾಯುವ ದೊರೆಗಳು ಎದ್ದುಕೂತರೆ ಚೆನ್ನ
ನೆರಳೆ-ಹಸಿರು ಸುಂದರಿಯರಿಗಾಗಿ ತಿಂದೆವೆಲ್ಲ ಮಣ್ಣು-ಧೂಳು
ತೆವಳುವ ಟ್ರಾಫಿಕ್ಕಿನಲ್ಲೇ ಸವೆಸಿದೆವಲ್ಲ ದಶಕದ ಬಾಳು
ಈಗ ಉಸ್ಸೆಂದು ಕೂತು ಮುಂದಿನ ನಿಲ್ದಾಣಕ್ಕೆ ಹೊರಡುವ ಮುನ್ನ
ಬೆವರಿದ ಜೇಬಿಗೆ ಹೊಡೆದಿರಲ್ಲ ದರ ಏರಿಕೆಯ ಗುನ್ನಾ
ಹಳದಿ ನೀಲಿ ಕಿತ್ತಳೆ; ವಿಸ್ತರಿಸಿದಿರಿ ದಾರಿಗೊಂದು ಬಣ್ಣ
ಕಾಲು ಚಾಚುವ ಮುನ್ನ ಹಾಸಿಗೆ ನೋಡಬೇಕಲ್ಲಣ್ಣ ?
ಯಾಕೆ ಬೇಕಿತ್ತು ಸ್ವಯಂಚಾಲಿತ ರೈಲು? ಬಿಟ್ಟು ಹೊರಟಿಲ್ಲ ಚೈನಾ
ಹೊಸ ಸೀರೆಗೆಂದು ಹಳೆಸೀರೆ ಸುಟ್ಟಂತೆ ನಮದೀಗ ನಾವಿಕನಿರದ ಪಯಣ
ಇಲ್ಲಿಯವರ ಬಳಿಯಿಲ್ಲ ಖಜಾನೆ, ಅಲ್ಲಿಯವರಿಗಿಲ್ಲ ಕೇಳುವ ಸಹನೆ
ಪರಿಹಾರದ ಮಾತಿಲ್ಲ; ಇಬ್ಬರದೂ ಬರೀ ಬಾಯಿಬಡುಕ ರಾಜಕಾರಣ
ಇಂದು ಅದ್ಯಾರ ಫರ್ಮಾನೋ ; ನಾಳೆ ಅದ್ಯಾರ ತಲೆದಂಡವೋ
ಶ್ರೀ ಸಾಮಾನ್ಯನ ಬದುಕಲ್ಲಂತೂ ನಿತ್ಯ ಸ್ವಪ್ನದಹನ
ಆದರೂ ಏರಲೇ ಬೇಕು ಉಗಿಬಂಡಿ; ಕಾರಣ? ಸಮಯ ಉಳಿಯುತ್ತದೆ
ಎಪ್ಪತ್ತು ಗಂಟೆ ದುಡಿದು ಸುಸ್ತಾಗಿರುವಾಗ ದೇಹ, ನಿದ್ದೆ-ಊಟ ಬೇಡುತ್ತದೆ
ಬಿನ್ನಹವಿಷ್ಟೇ ದೊರೆ!, "ಸುಂಕ ಏರಿಸಲೇಬೇಡಿ" ಎನ್ನುತ್ತಿಲ್ಲ ಖಂಡಿತ
ಲೆಕ್ಕದ ಪಟ್ಟಿ ಹಿಡಿದು ಕೂತಾಗ, ದಪ್ಪ ಅಕ್ಷರದಲಿ ಕಾಣಲಿ "ಜನಹಿತ"
-ಚಿನ್ಮಯ
೧೬/೨/೨೦೨೫
No comments:
Post a Comment