Sunday, February 16, 2025

ಏರಲೇ ಬೇಕು ಉಗಿಬಂಡಿ

ಜಾರುತಿದೆ ಹಳಿಯಿಂದ ನಮ್ಮ ಬೆಂಗಳೂರು

ಏರುತಿಹ ದರದಿಂದ ಕಾಪಿಡುವವರಾರು?

ಬೆಳೆಬೆಳೆದು ತನ್ನೆ ತಾ ತಿಂದು ಮುಗಿಸುವ ಮುನ್ನ

ಪುರವ ಕಾಯುವ ದೊರೆಗಳು ಎದ್ದುಕೂತರೆ ಚೆನ್ನ


ನೆರಳೆ-ಹಸಿರು ಸುಂದರಿಯರಿಗಾಗಿ ತಿಂದೆವೆಲ್ಲ ಮಣ್ಣು-ಧೂಳು

ತೆವಳುವ ಟ್ರಾಫಿಕ್ಕಿನಲ್ಲೇ ಸವೆಸಿದೆವಲ್ಲ ದಶಕದ ಬಾಳು

ಈಗ ಉಸ್ಸೆಂದು ಕೂತು ಮುಂದಿನ ನಿಲ್ದಾಣಕ್ಕೆ ಹೊರಡುವ ಮುನ್ನ

ಬೆವರಿದ ಜೇಬಿಗೆ ಹೊಡೆದಿರಲ್ಲ ದರ ಏರಿಕೆಯ ಗುನ್ನಾ


ಹಳದಿ ನೀಲಿ ಕಿತ್ತಳೆ; ವಿಸ್ತರಿಸಿದಿರಿ ದಾರಿಗೊಂದು ಬಣ್ಣ

ಕಾಲು ಚಾಚುವ ಮುನ್ನ ಹಾಸಿಗೆ ನೋಡಬೇಕಲ್ಲಣ್ಣ ?

ಯಾಕೆ ಬೇಕಿತ್ತು ಸ್ವಯಂಚಾಲಿತ ರೈಲು? ಬಿಟ್ಟು ಹೊರಟಿಲ್ಲ ಚೈನಾ

ಹೊಸ ಸೀರೆಗೆಂದು ಹಳೆಸೀರೆ ಸುಟ್ಟಂತೆ ನಮದೀಗ ನಾವಿಕನಿರದ ಪಯಣ


ಇಲ್ಲಿಯವರ ಬಳಿಯಿಲ್ಲ ಖಜಾನೆ, ಅಲ್ಲಿಯವರಿಗಿಲ್ಲ ಕೇಳುವ ಸಹನೆ

ಪರಿಹಾರದ ಮಾತಿಲ್ಲ; ಇಬ್ಬರದೂ ಬರೀ ಬಾಯಿಬಡುಕ ರಾಜಕಾರಣ

ಇಂದು ಅದ್ಯಾರ ಫರ್ಮಾನೋ ; ನಾಳೆ ಅದ್ಯಾರ ತಲೆದಂಡವೋ

ಶ್ರೀ ಸಾಮಾನ್ಯನ ಬದುಕಲ್ಲಂತೂ ನಿತ್ಯ ಸ್ವಪ್ನದಹನ


ಆದರೂ ಏರಲೇ ಬೇಕು ಉಗಿಬಂಡಿ; ಕಾರಣ? ಸಮಯ ಉಳಿಯುತ್ತದೆ

ಎಪ್ಪತ್ತು ಗಂಟೆ ದುಡಿದು ಸುಸ್ತಾಗಿರುವಾಗ ದೇಹ, ನಿದ್ದೆ-ಊಟ ಬೇಡುತ್ತದೆ

ಬಿನ್ನಹವಿಷ್ಟೇ ದೊರೆ!, "ಸುಂಕ ಏರಿಸಲೇಬೇಡಿ" ಎನ್ನುತ್ತಿಲ್ಲ ಖಂಡಿತ

ಲೆಕ್ಕದ ಪಟ್ಟಿ ಹಿಡಿದು ಕೂತಾಗ, ದಪ್ಪ ಅಕ್ಷರದಲಿ ಕಾಣಲಿ "ಜನಹಿತ"


-ಚಿನ್ಮಯ

೧೬/೨/೨೦೨೫

No comments: