Monday, December 16, 2013

ಚೀಟಿ

ನಮಸ್ಕಾರ ಎಲ್ರಿಗೂ...
ಹೆಂಗಿದೀರಿ ಎಲ್ರೂ ???? ಅರಾಮಲ್ವಾ ???
ಇದೊಂದು ಪುಟ್ಟ ಕವಿತೆ....

 ಬ್ಲಾಗ್ ಬರಹವೊಂದನ್ನು ಓದಿ ಕಮೆಂಟಿಸಲು ಬರೆದಿದ್ದು ಹಾಗೇ ಕವನದ ರೂಪ ತಳೆಯಿತು,...
ಮರುದಿನ ಚಟ ತಡೆಯಲಾರದೆ ಫೇಸ್ ಬುಕ್ಕಿಗೆ ಹಾಕಿದೆ...
ಇವತ್ತು ಹಿರಿಯರೊಬ್ಬರ ಪ್ರೀತಿಯ ಮಾತುಗಳಿಂದ ಬ್ಲಾಗಿಗೆ ಹಾಕುತ್ತಿದ್ದೇನೆ....

 ದಯವಿಟ್ಟು ನೋಡಿ,ಅನಿಸಿಕೆ ಹೇಳಿ...
ಧನ್ಯವಾದ :)

ಚೀಟಿ 
====================================== 


ಅಂದು ಬರೆದು ಬಾರದ ಚೀಟಿ,
ಇಂದು ಬಂದಿದೆ ಕಣೆ ಹುಡುಗಿ...
ಒಂದಿಷ್ಟು ದೀರ್ಘವಿರಾಮಕೊಟ್ಟು ,
ನಾ ಬಿಟ್ಟ ಕಣ್ಣೀರಿನಂಗಿ ತೊಟ್ಟು..

ಬೆಟ್ಟು ಬಿದ್ದಿಲ್ಲ ಕಾಲಾಂತರದಲಿ,
ಭಾವವಿನ್ನೂ ಹಸಿಯಾಗಿದೆ,
ಆದರೆ,ವಿರಹದಕಾವಿಗೋ,ಕೈಸಿಗದನೋವಿಗೂ
ಅಕ್ಷರಗಳುರಿದು ಕರಿಮಸಿಯಾಗಿದೆ...

ನಿನ್ನಪೆನ್ನಿನ ಶಾಯಿಯ ಸ್ಪರ್ಶಮಾತ್ರದಲೆ,
ವರ್ಣಮಾಲೆಯೆದ್ದು ನಲಿದಾಡಿದೆ..
ಆದರೆ,ಬರಿಗಣ್ಣುಗಳದನು ಗುರುತಿಸಲಾಗದೇ
ಚಾಲೀಸಿನ ಚಸ್ಮಕ್ಕೆ ತಡಕಾಡಿದೆ....

ಕಟ್ಟಿಟ್ಟ ಕನಸಹೊತ್ತಿಗೆಗಳೆಲ್ಲಾ
ಈಗ ಒಂದೊಂದೇ ಬಿಚ್ಚಿಕೊಳ್ಳುತ್ತಿವೆ...
ನಿನ್ನೆಪತ್ರಿಕೆಯನಿಂದು ಮಾರಲಾಗಂದೆಂಬುದನರಿತು
ಮತ್ತೆ ಸದ್ದಿಲ್ಲದೇ ಮುಡುಗಿ ಮಡಚಿಕೊಳ್ಳುತ್ತಿವೆ...

ನಿನ್ನಪಾತ್ರವನೂ ಹೊಲಿದು ಬರೆದಿದ್ದ ನಾಟಕದಿ,
ನೀನಿಲ್ಲ,ನಾನೊಬ್ಬನೇ ಹಳೆಯ ಪಾತ್ರವಾಗಿದ್ದೇನೆ..
ಹೊಸ ಮುಖಗಳೊಡಗೂಡಿ ಕಥೆಹೇಳುತ್ತಾ,
ಅವರಿಗಾಸರೆಯಾಗುವ ಸಂಘಸೂತ್ರಧಾರನಾಗಿದ್ದೇನೆ...

ಅಂದು ಬರೆದು ಬಾರದ ಚೀಟಿ,ಇಂದು ಬಂದಿದೆ .....
ನನ್ನೆಲ್ಲ ಬಣ್ಣ,ಪಗಡಿಯ ಕಳಚಿ ,
ಚೌಕಿಯಂಚಿನ ಮನುಜಗನ್ನಡಿಯೆದುರು ತಂದು ನಿಲ್ಲಿಸಿದೆ..

===========================================================

ಅಹ್... ಏನೋ ಗೊತ್ತಿಲ್ಲ...
ಪ್ರತಿಸಲ ಹೇಳುತ್ತಿದ್ದರೆ ಅತೀ ಅನ್ನಿಸಬಹುದೇನೋ..ಆದ್ರೆ ನನ್ನಲ್ಲೊಂದಿಷ್ಟು ಗೊಂದಲ ಇರೋದಂತೂ ನಿಜ...
ಇದನ್ನೇ ನಿಮ್ಮೆದುರು ಹಂಚಿಕೊಳ್ಳುತ್ತಿದ್ದೇನೆ....

ಈ ಕವಿತೆ ನನ್ನ ಮಾಮೂಲಿ ಶೈಲಿಯಲ್ಲಿಲ್ಲ...
ಹೊಸ ಶಬ್ಧ,ಅಲ್ಲಲ್ಲಿ ಒಂದಿಷ್ಟು ಪ್ರಾಸಗಳು..
ಅದರಲ್ಲೇ ಎನೇನೋ ಪ್ರಯೋಗ,ಪ್ರತಿಮೆಗಳು ಹೀಗೆ ಇವುಗಳ ಬಗ್ಗೆ ಜಾಸ್ತಿ ಯೋಚಿಸಿ ಬರೆದದ್ದಲ್ಲ...

ಎನೋ ಇವುಗಳಿಗೆ ಹೋಲಿಸಿದರೆ ಅವಕ್ಕೆ ಸ್ವಲ್ಪ ಜಾಸ್ತಿೇ ಸಮಯ ಬೇಕು...
ಸುಮಾರು ಹುಡುಕಾಡಿ ತಡಕಾಡಿ ಗೀಚಬೇಕು..(ಎಲ್ ಬೋರ್ಡಲ್ವಾ ಅದ್ಕೆ :P)
ಒಂದು ಕವನವನ್ನು ಬಿಡಿಸಿ ಬಿಡಿಸಿ ತಿಳಿದು ಅದರ ಭಾವವನ್ನು ಪೂರ್ತಿ ತಿಳಿದಾಗಿನ ಖುಷಿಯ ಅನುಭವ ನನಗಿಷ್ಟ...ಬರಿಯ ನೇರವಾಗಿ ಅರ್ಥವಾಗುವ ಸಾಲುಗಳಿಗಿಂತ ಅವುಗಳಲ್ಲೇನೋ ಒಂದು ಆನಂದವಿದೆ... 
ಬಹುಷಃ ಅದೇ ನನ್ನ ಕವನಗಳಲ್ಲೂ ಬಂದಿದೆಯೇನೋ....ಗೊತ್ತಿಲ್ಲ... 
  ಜೊತೆಗೆ ಹೊಸ ಹೊಸ ಶಬ್ಧಗಳನ್ನು ಎಲ್ಲರಿಗೂ ಪರಿಚಯಿಸುವುದರ ಜೊತೆಗೆ ,ಆ ಪದದ ಬಳಕೆಯ ಸಂದರ್ಭ ಚೆನ್ನಾಗಿ ತಿಳಿದಿರುವುದರಿಂದ ಅದನ್ನು ಬಳಸಲು ಸುಲಭ ಎನ್ನುವ ಯೋಚನೆ ನನ್ನದು...ಗೊತ್ತಿಲ್ಲ...

ಹಮ್... ಆದರೆ ಬರೀ ಅವುಗಳ ಯೋಚನೆಯಲ್ಲಿ ಸುಲಭವಾಗಿ ಅರ್ಥವಾದಾಗಿನ ಸಹಜ ಸಂತೃಪ್ತಿಗೆ ಭಂಗ ತರುತ್ತಿದ್ದೇನಾ?? ಬರೀ ಅಲಂಕಾರದ ಗೋಜಲಿನಲ್ಲೇ ರಚನೆಯನ್ನು ಜಡಕು ಮಾಡ್ತಾ ಇದೀನಾ ??ಗೊತ್ತಿಲ್ಲ...ಒಂದು ಸಲ ಬರೀ ಶಬ್ಧಗಳ ಹುಡುಕಾಟದಲ್ಲೇ,ಅವುಗಳ ಬಳಕೆ ಸರಿಕಾಣದೇ ಭಾವದ ಓಘವನ್ನು ಕಳೆದುಕೊಂಡಂತೆನೂ ಅನಿಸಿದ್ದಿದೆ...ಬರೀ ಪದ,ಪ್ರಾಸನೇ ಕಣ್ಣಿಗೆ ಬಿದ್ದು ಮುಂದಿನ ಭಾವದ ಹರಿವು ಅಲ್ಲೇ ನಿಂತಿದ್ದೂ ಇದೆ...ಮತ್ತೆ ಯಾವಾಗಲೋ ಬರೀಬೇಕು ಅನ್ನಿಸಿದರೂ ಶುರುಮಾಡಿದಾಗಿನದಕ್ಕೂ ಮುಂದಿನಕ್ಕೂ ಹೊಂದಾಣಿಕೆ ಮಾಡುವುದು ಕಷ್ಟವಾದದ್ದೂ ಇದೆ...

ಹಾಗೆಲ್ಲಾ ನೋಡಿದರೆ ಹೊಳೆದ ವಿಚಾರಕ್ಕೆ ಏನೋ ಒಂದು ಸಿಕ್ಕ ಕಾವ್ಯದಲ್ಲಿ ಬಳಸುವ ಪದಗಳ ತರಹದ್ದನ್ನು ಬಳಸಿಬಿಟ್ಟರೆ ಕವಿತೆ ಅನ್ನಿಸಿಕೊಂಡುಬಿಡುತ್ತದೆ ಅನ್ನಿಸುತ್ತದೆ...ಆದರೆ ಮತ್ತೆ ಅರೆಚಣದಲ್ಲೇ ಇದನ್ನು ಯಾವುದಾದರೂ ಪ್ರಬಂಧ,ಲೇಖನದಲ್ಲೇ ಬಿಡಿಸಿ ಹೇಳಬಹುದಿತ್ತಲ್ಲಾ ,ಕವಿತೆಗಳೇ ಬೇಕಿತ್ತೇ???ಆಕಾರ,ಪ್ರಾಸಗಳಿಲ್ಲದಿದ್ದರೆ ಅದನ್ನು ಬರೆದದ್ದೇಕೆ ಅನ್ನಿಸಿಬಿಡುತ್ತದೆ... ಕವಿತೆ ಎಂಬುದು ಒಗಟಿನಂತೆ,ಅದನ್ನು ಬಿಡಿಸಿ ತಿಂದಾಗಲೇ ಸ್ವಾದ ತಿಳಿಯುವುದು ಎಂಬ ನನಗಿಷ್ಟದ ಮಾತು ಗುಯ್ಯ್ಂ ಗುಡುತ್ತದೆ....

ನಿಜಾ ಹೇಳ್ಬೇಕು ಅಂದ್ರೆ, ಕವನವನ್ನು ಹೇಗೆ ಬರೀಬೇಕು ಅನ್ನೋದೇ ಒಂಥರ ತಿಳಿದೇ ಇದ್ದಂಗೆ ಆಗಿದೆ.... :(
ದಯವಿಟ್ಟು ನಿಮ್ಮ ಅಮೂಲ್ಯ ಸಲಹೆ ನೀಡಿ,ನನಗೊಂದು ದಾರಿ ತೋರಿಸಿ...
ಧನ್ಯವಾದ