Thursday, August 16, 2012

ಸ್ನೇಹಕೊಂದಿಷ್ಟು ಸಾಲು......



ಹಾದಿ ಬದಿಯ ಹೂವಾಗದಿರಿ ಗೆಳೆಯರೆ
ಪಾದವ ಮುತ್ತಿಕ್ಕುವ ಗರಿಕೆಯಾಗಿ
ನಗುವ ಮನಕೆ ದಾಣಿಯಾಗಬೇಕಿಲ್ಲ ನೀವು
ಬದಲಿಗೆ,ಅಳುವ ಮನಕೆ ಸಾಂತ್ವನದ ಹರಕೆಯಾಗಿ

ಎದೆಯ ಮಂದಿರದೊಳಿಟ್ಟು ಪೂಜಿಸುವ ಹೂವಾಗಬೇಕಿಲ್ಲ ನೀವು
ಆಗಿರಿ ನೋವು ತಿಂದ ಹ್ರದಯಗಳಿಗೆ ಹಿತತರುವ ಕಾವು
ಮಿನುಗುತಾರೆಯಾಗಿ ಕಟ್ಟಬೇಕಿಲ್ಲ ನಿತ್ಯವೂ ಹೊಸ ಕನಸಿನ ಮಂದಿರ,
ಆಗಿರಿ ಸಾಕು ಅಳುವ ಸ್ನೇಹ ಶಿಶುವನ್ನು ಖುಷಿ ಪಡಿಸುವ ಚಂದಿರ

ಸ್ನೇಹವೆಂದರೆ ಹೊಸ ಕಟ್ಟು ಪಾಡುಗಳಲ್ಲ ಗೆಳೆಯರೇ
ಅದು,ನಿಮ್ಮೊಳಗಿನ ನಿಮ್ಮತನದ ಹಾಡು
ಗೆಳೆತನಕೆಂದು ಬದಲಾಗದಿರಿ,ಗೆಳೆತನಕೆಂದೇ ಬದಲಾಯಿಸದಿರಿ,
ಬದಲಾಯಿಸಿರಿ ನಿಮ್ಮ ದ್ರಷ್ಟಿಕೋನವನ್ನು,ನಿಮ್ಮ ಕಲ್ಪನೆಗಳನ್ನು..
(ಇದು ಗೆಳೆಯರ ದಿನದಂದು  ಬರೆದ ಕವನ…. ಬರಿಯ ತೋರಿಕೆಯ ಸ್ನೇಹಕ್ಕಿಂತ ಪರಸ್ಪರ ಸಹಾಯ,ಸಾಂತ್ವನಗಳೇ ಸ್ನೇಹದ ಆಧಾರಗಳು ಎಂಬ ಆಶಯವನ್ನಿಟ್ಟುಕೊಂಡು ನಾಲ್ಕು ಸಾಲುಗಳನ್ನು ಗೀಚಿದ್ದೇನೆ…ದಯವಿಟ್ಟು ಓದಿ ಪ್ರತಿಕ್ರೀಯಿಸಿ)
ವಂದನೆಗಳೊಂದಿಗೆ,
ನಿಮ್ಮನೆ ಹುಡುಗ,
ಚಿನ್ಮಯ ಭಟ್

Thursday, August 2, 2012

ಕೊನೆಯ ದಿನದ ಪಾಠ



ಮಲೆನಾಡಿನ ಮಣ್ಣನ್ನು ಮೈ ತುಂಬಾ ಮೆತ್ತಿಕೊಂಡ,ಕೆಂಪು ಹಳದಿ ಬಣ್ಣದ ಬಸ್ಸು ಕುಲಕಾಡುತ್ತಾ ಬಂದು ” ಕುಯ್ ಕುಯ್ಯ್….” ಎಂದು ನಿಂತಿತು.ಬಸ್ಸಿನ ಬಾಗಿಲಿನಲ್ಲಿ ನಿಂತಿದ್ದವರು ಇಳಿದು,ಇಳಿಯುವವರಿಗೆ ದಾರಿ ಮಾಡಿ ಕೊಟ್ಟು ,ಮತ್ತೆ ಅದನ್ನೇ ಹತ್ತಿ ಹೊರಟು ಹೋದರು.ಸುಮಾರು ಒಂದು ಗಂಟೆಯ ಜನಜಂಗುಳಿಯ ಕಚಪಚ ಸದ್ದುಗಳನ್ನು ಕೇಳಿಸಿಕೊಂಡ ಕಿವಿಗಳಿಗೀಗ ನೀರವ ಮೌನದ ಸ್ವಾಗತ.ಮರಕುಟಿಗವೊಂದು ಕುಟ್ ಕುಟ್ ಎಂದು ಸದ್ದು ಮಾಡಿದಾಗಲೇ ಯಾವುದೋ ಲೋಕದಲ್ಲಿದ್ದ ಕಾಂತಕ್ಕೋರಿಗೆ ಎಚ್ಚರವಾಗಿದ್ದು.ಡಾಂಬರು ರಸ್ತೆ ದಾಟಿ ಬದಿಯ ಮಣ್ಣು ರಸ್ತೆಯನ್ನು ಹಿಡಿದು ಹೊರಟ ಅವರ ಕಣ್ಣುಗಳಿಗೆ ಬರಬರುತ್ತಾ ಎಲ್ಲವೂ ಮಸುಕು ಮಸುಕಾಗಿ ಕಾಣುತ್ತಿತ್ತು.ಇದೇನಿದು ಕನ್ನಡಕ ಹಾಕಿಕೊಂಡಿಲ್ಲವೇ ಎಂದು ಕಣ್ಣು ಮುಟ್ಟಿಕೊಳ್ಳುವಷ್ಟರಲ್ಲೇ ,ರೆಪ್ಪೆಯನ್ನು ದಾಟಿ ಬಂದ ಅಶ್ರುಬಿಂದುಗಳು ಅವರ ನೆರಿಗೆ ಬಿದ್ದ ಕೆನ್ನೆಯನ್ನು ತಂಪಾಗಿಸಿತ್ತು,ಅದೊಂದು ವಿಚಿತ್ರ ಅನುಭವ.ಮೂವತ್ತು ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ  ಇಂದು ನಿವ್ರತ್ತಿಯಾಗುತ್ತಿರುವ ಸಾರ್ಥಕತೆಯ ಭಾವ ಒಂದು ಕಡೆ ಇದ್ದರೆ,ಇಷ್ಟು ದಿನ ತಾನಿದ್ದ ಪ್ರಪಂಚವನ್ನು ಬಿಟ್ಟು ಹೋಗುತ್ತಿರುವ ನೋವು ಇನ್ನೊಂದು ಕಡೆ.ಆ ಕಣ್ಣೀರು ಖುಷಿಗೋ?ಅಥವಾ  ಬೇಜಾರಿಗೋ? ಗೊತ್ತಿಲ್ಲ,ಆದರೆ ಹ್ರ್‍ದಯದಲ್ಲಿದ್ದ ತಲ್ಲಣಗಳಿಗೆ ಅದು ಸಾಂತ್ವನ ನೀಡಿದ್ದಂತೂ ನಿಜ.
ಎಷ್ಟೊಂದು ಬದಲಾವಣೆಗಳಾಗಿದೆ ಈ ಮೂವತ್ತು ವರ್ಷಗಳಲ್ಲಿ ?ಮೊದಲಿದ್ದ ಕಾಲುದಾರಿಯು ಇದೀಗ ಖಡಿಹಾಕಿದ ಕೆಂಪು ರಸ್ತೆಯಾಗಿದೆ,ಇನ್ನೇನು ಬರುವ ಚುನಾವಣೆಯ ಹೊತ್ತಿಗೆ ಟಾರು ರಸ್ತೆಯಾಗಲೂಬಹುದು.ರಸ್ತೆಯ ಬದಿಗಿದ್ದ ರಾಕ್ಷಸರೂಪಿ ವ್ರ್‍ಕ್ಷಗಳು ರಾತ್ರಿಗಳು ಕಳೆದಂತೆ ಕಣ್ಮರೆಯಾಗಿದೆ.ಇದೀಗ ಅಲ್ಲಿ ಅಕೇಶಿಯಾ ಪ್ಲಾಂಟೇಶನ್ ಗಳು ತಲೆ ಎತ್ತಿವೆ.ಮೊದಲಿಗೆ ಅಲ್ಲೇ ಮರದ ಬಡ್ಡೆಯ ಮೇಲೆ ಕಾಣುತ್ತಿದ್ದ ಗೌರಿದಂಡೆ,ಸೀತೆದಂಡೆಗಳು ಇಂದು ಅಪರೂಪವಾಗಿದೆ.ಜೊತೆಗೆ ಹುಣಸಿಗೆಯ ಜನರ ಮನಸ್ಸೂ ಸಹ ಬದಲಾಗಿದೆ.ಹಾಸಿಗೆಯಲ್ಲಿ ರಾತ್ರಿ ಉಚ್ಚೆಹೊಯ್ದುಕೊಳ್ಳುತ್ತಿದ್ದ ಹೈಕಳನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ ಹನುಮ,ಇಂದು ಮೊಮ್ಮಕ್ಕಳನ್ನು ತಾನೇ ಶಾಲೆಗೆ ಕರೆದುಕೊಂಡು ಬರುತ್ತಾನೆ,ಶೆಟ್ಟರಂಗಡಿಯಲ್ಲಿ ಪೆನ್ಸಿಲ್ಲು ತೆಗಿಸಿಕೊಂದುತ್ತಾನೆ.ಇಪ್ಪತ್ತೆಂಟು ಗಂ ಹಾಗೂ ಹದಿನಾಲ್ಕು ಹೆಂ ಎಂದು ಬರೆದಿಡುತ್ತಿದ್ದ ದಾಖಲಾತಿ ಪುಸ್ತಕದಲ್ಲಿ ಇಂದು ಮಕ್ಕಳ ಸಂಖ್ಯೆ ನೂರಕ್ಕೇರಿದೆ.ಶಾಲೆಗೆ ಮಳೆಗಾಲದಲ್ಲಿ ಇರುತ್ತಿದ್ದ ಜಡಿತಟ್ಟಿ ಮಾಯವಾಗಿ ,ಕಂಪೌಂಡು ಬಂದು ನಿಂತಿದೆ.ಸುಣ್ಣ ಉದುರುತ್ತಿದ್ದ ಗೋಡೆಗಳ ಬದಲು ,ಈಗ ಗೋಡೆಯ ತುಂಬಾ ಇರುವ  ಬಣ್ಣ ಬಣ್ಣದ ಚಿತ್ರಗಳು ಚಿಣ್ಣರನ್ನು ರಂಜಿಸುತ್ತಿವೆ.ಅಷ್ಟೇ ಏಕೆ? ಕಾಂತಕ್ಕೋರಿಗೂ ವಯಸ್ಸಾಗಿದೆ.ಕಣ್ಣಿಗೆ ಕನ್ನಡಕ ಬಂದಿದೆ.ಆಗೀಗ ಮಂಡಿನೋವು,ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ.ಆದರೆ,ತಮ್ಮ ಕೈಯಲ್ಲಿ ಅಕ್ಷರ ಕಲಿತ ಗಂಡು ಮಕ್ಕಳು ದೊಡ್ಡವರಾಗಿ ,ಈಗ ಎಲ್ಲಾದರೂ ಶಿರಸಿಯಲ್ಲಿ ಸಿಕ್ಕಿದಾಗ ಎಡಗೈಯ್ಯಲ್ಲಿ ಕಾರಿನ ಕೀಲಿ ಹಿಡಿದು,ಬಲಗೈಯಲ್ಲಿ ನಮಸ್ತೆ ಎನ್ನುವಾಗ ಮಂಡಿನೋವು ಕಡಿಮೆಯಾಗುತ್ತದೆ.ಅಕ್ಕೋರು ಮನೆಗೆ ಬಂದರೆ ಹೆದರಿ ಅಡುಗೆಮನೆಯಲ್ಲಿ   ಪುಸ್ತಕ ಹಿಡಿದು ಕೂರುತ್ತಿದ್ದ ಹೆಣ್ಣುಮಕ್ಕಳು ಬರೆದ ಲೇಖನಗಳು ಇಂದು ಆಳುವ ಕೈಗಳನ್ನೇ ಹೆದರಿಸುವಾಗ ಬೆನ್ನುನೋವು ವಾಸಿಯಾಗುತ್ತದೆ.
ಶಿಕ್ಷಕಿಯಾಗಿ ಬದುಕು ಸಾರ್ಥಕವಾಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ದಾರಿಯ ಬದಿಯಲ್ಲಿ ಬಿದ್ದಿದ್ದ ಬಾಳೆಗೋನೆಯನಿಂದ ಹಿಸಿದ ಒಂದು  ಚಿಪ್ಪಿನ ಜಿಂಡು ಕಣ್ಣಿಗೆ ಬಿತ್ತು.ಅದನೋಡಿ ಅದ್ಯಾಕೋ ತುಟಿಗಳು ಅಗಲವಾದವು…ಹೌದು,ಅದು ಕಾಂತಕ್ಕೋರೇ ಮೊನ್ನೆ ಶನಿವಾರ ಸಂಜೆ ಎಸೆದದ್ದು.ಶನಿವಾರ ಶಾಲೆಮುಗಿದ ಮೇಲೆ ಊರಿನವರು ಹಾಗೂ ಶಿಕ್ಷಕರಲ್ಲಾ ಸೇರಿ ಅವರನ್ನು ಬೀಳ್ಕೊಟ್ಟಿದ್ದರು.ಒಂದು ಸೀರೆ,ಫಲ-ತಾಂಬೂಲ ಜೊತೆಗೊಂದು ಪುಟ್ಟ ಗಂಧದ  ಗಣಪತಿಯ ಮೂರ್ತಿಯನ್ನು ಅಕ್ಕೋರ ಕೈಗಿಟ್ಟು,ಊರಿನಲ್ಲಿ ಅಕ್ಷರದ ಬೆಳಕು ಹರಿಸಿದವರಿಗೆ ನಮಸ್ಕರಿಸಿದ್ದರು,ತಮ್ಮ ವಂದನೆಗಳನ್ನು ತಿಳಿಸಿದ್ದರು.ಅದನ್ನು ಮುಗಿಸಿ ಮನೆಗೆ ವಾಪಸ್ಸಾಗುವಾಗ ಹಣ್ಣನ್ನು ತೆಗೆದು ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಾಕಿಕೊಂಡು ಜಿಂಡನ್ನು ಅಲ್ಲೇ ಬಿಸಾಡಿ ಹೋಗಿದ್ದರು.ಅಷ್ಟರಲ್ಲೇ ಮಕ್ಕಳು ಮೈದಾನದಲ್ಲಿ ಆಡುತ್ತಿರುವ ಸದ್ದು ಕೇಳತೊಡಗಿತ್ತು.ಕಾಂಪೋಂಡಿನ ಹತ್ತಿರ ಬರುವಷ್ಟರಲ್ಲೇ “ಅಕ್ಕೋರೆ ನಮಸ್ಕಾರಾ” ಎಂಬ ಹುಡುಗರ ಕೂಗು,ಶಿಕ್ಷಕರ ಕೊಠಡಿಯನ್ನು ಮುಟ್ಟೀತ್ತು.ಮುಗುಳ್ನಗೆಯೊಂದಿಗೆ ನಮಸ್ಕರಿಸಿದ ಅಕ್ಕೋರು,ಮಾಸ್ತರುಗಳನ್ನೆಲ್ಲಾ ಒಮ್ಮೆ ನೋಡಿ ,ನಮಸ್ಕರಿಸಿ,ತುಸು ನಕ್ಕು ತಮ್ಮ ಮುಖ್ಯ ಶಿಕ್ಷಕರ ಕೊಠಡಿಗೆ ಹೋದರು.
          ಟೇಬಲ್ಲಿನ ಬದಿಯ ಕುರ್ಚಿಯ ಮೇಲೆ ಕೈಚೀಲವನ್ನಿಟ್ಟು ಟೇಬಲ್ಲಿನ್ಜ ಕಡೆ ಗಮನ ಹರಿಸಿದಾಗ ಅಲ್ಲೊಂದು ಅಶ್ಚರ್ಯವು ಕಾದಿತ್ತು,ಒಂದು ಅನಾಮಧೇಯ ಪತ್ರ ಅಲ್ಲಿತ್ತು.ಅದನ್ನು ಬಿಡಿಸಿ ಓದಲು ಶುರು ಮಾಡಿದಾಗ,

ಗೆ,
ಕಾಂತಕ್ಕೋರು
ಹುಣಸಿಗೆ ಶಾಲೆ
ಇಂದ,
ಅನಾಮಿಕ
ಮಾನ್ಯರೇ,
          ವಿಷಯ: ಅನಿಲ್ ಮಾಸ್ತರ ಕುರಿತು.
          ನಮ್ಮೂರಿನ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಅನೀಲ ಮಾಸ್ತರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂದು ದೂರು ಬಂದಿರುತ್ತದೆ.ಜೊತೆಗೆ ಅವರು ಹೇಳದೇ ಕೇಳದೇ ರಜೆ ಹಾಕಿ ಹೋಗುತ್ತಾರೆಂದೂ ತಿಳಿದು ಬಂದಿದೆ.ಇದಕ್ಕೆ ಪುರಾವೆಯಾಗಿ ಮೊನ್ನೆ ಶನಿವಾರ ಬೆಳಿಗ್ಗೆ  ಅವರು ಹಾಜರಿ ಹಾಕಿ ಶಿರಸಿಗೆ ಹೋಗಿದ್ದರೆಂದು ಹೇಳಲು ವಿಷಾದಿಸುತ್ತೇವೆ.ಹೀಗಾಗಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಮ್ಮ ವಿನಂತಿ.
                                      ಧನ್ಯವಾದಗಳೊಂದಿಗೆ
ದಿನಾಂಕ:---------                                                                  ಇತಿ
ಸ್ಥಳ:ಹುಣಸಿಗೆ                                                                         ಅನಾಮಿಕ
ಇದನ್ನು ಓದಿದ ಕಾಂತಕ್ಕೋರಿಗೆ ಅದು ಸುನೀಲನದೇ ಕೆಲಸ ಎಂದು ಗೊತ್ತಾದರು ,ಸುಮ್ಮನೆ ಮಡಚಿ ಒಳಗಿಟ್ಟರು.ಅನೀಲ ಹಾಗೂ ಸುನೀಲ ಅಕ್ಕ ಪಕ್ಕದ ಮನೆಯವರಾದರೂ ಆ ಎರಡು ಮನೆಗಳ ನಡುವೆ ಮೂರ್ನಾಲ್ಕುತಲೆಮಾರುಗಳಿಂದ ದ್ವೇಷವಿದೆ.ಒಬ್ಬರ ಕಂಡರೆ ಇನ್ನೊಬ್ಬರಿಗಾಗದು.ಒಮ್ಮೆ ಶ್ರೀ ಧರ್ಮಸ್ಥಳದ ಒಂದು ಯೋಜನೆಯಡಿಯಲ್ಲಿ ಹುಣಸಿಗೆ ಶಾಲೆಗೆ ಒಂದು ಒಂದು ಶಿಕ್ಷಕರ ನೇಮಕಾತಿಗೆ ಅವಕಾಶವಾಯಿತು.ಆಗ ಅರ್ಜಿ ಬಂದಿದ್ದು ಅನೀಲ ಹಾಗೂಸುನೀಲರದು.ಇಬ್ಬರೂ ಡಿಗ್ರಿ ಮುಗಿಸಿದ್ದರಾದರೂ ಅನಿಲನ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಕಂಡು ಕಾಂತಕ್ಕೋರು ಅನೀಲನನ್ನು  ಮಾಸ್ತರನನ್ನಾಗಿಸಿದ್ದರು.ಇದರಿಂದ ಸುನೀಲನಿಗೆ ಅನೀಲನ ಕಂಡರಾಗದು,ಹಾಗಾಗಿ ಅವನದೇ ಏನೋ ಒಂದು ಮೂಗರ್ಜಿ ಎಂದು ಸುಮ್ಮನಾದರಾದರೂ,ಹಾಜರಿ ಪುಸ್ತಕಕ್ಕೆ ಸಹಿಮಾಡುವಾಗ ಅವರಲ್ಲಿದ್ದ ಮುಖ್ಯಶಿಕ್ಷಕರು ಜಾಗ್ರತರಾದರು.ಸರಿ,ಅಲ್ಲೇ ಓಡಾಡುತ್ತಿದ್ದ ಹುಡುಗರನ್ನು ಕರೆದು
ಏಯ್ ಅಲ್ ಅನೀಲ್ ಮಾಸ್ತರ್ ಹತ್ರಾ ಬರೂಕ್ ಹೇಳಾ” ಎಂದರು.ಆ ಹುಡುಗ ಅಲ್ಲಿಂದಲೇ ತಾನು ಬೈಕಿನಲ್ಲಿ ಕೂತಿರುವಂತೆ ಕೈತಿರುವುತ್ತಾ  “ಕಾಂತಕ್ಕೋರ್ ಹೇಳಾರೆ,ಅನೀಲ್ ಮಾಸ್ತರಿಗೆ ಬರೂಕ್ ಹೇಳ್ಬಕಂತೆ “ಎಂದು ಜೋರಾಗಿ ಹೇಳುತ್ತಾ ಓಡಿದ.
ಅನೀಲ:”ಅಕ್ಕೋರೆ”
ಕಾಂತಕ್ಕೋರು:”ಕುತ್ಕಳಪ್ಪಾ”
ಅನೀಲ:”ಹೆಂಗಿತ್ತು?ಮೊನ್ನೆ ಫಂಕ್ಷನ್ನು?ಖುಷಿ ಆಯ್ತಾ?”
ಅಕ್ಕೋರು:”ಹಾಂ..ಖುಷಿ ಆಗ್ದೇ ಇರ್ತದ್ಯೇನ!”
ಅನೀಲ:”ನಾನೆಯ ಎಲ್ಲಾ ಓಡಾಡಿದ್ದು ಅದ್ಕೆ”
ಅಕ್ಕೋರು:”ಓಹೋ…ಎಯ್ ಆದ್ರು ಸೀರೆ ಗೀರೆ ಎಲ್ಲಾ ಬ್ಯಾಡ್ವಾಗಿತ್ತು”
ಅನೀಲ:”ಎಯ್ ಇರ್ಲಿ ಬಿಡಿ”
ಅಕ್ಕೋರು:”ಹಮ್…ಎಲ್ಲಿಂದ ತಂದ್ರಿ ಆ ಗಣಪತಿ ಮೂರ್ತಿಯಾ?”
ಅನೀಲ:”ಅದ್ ಗುಡಿಗಾರ್ ರ ಹತ್ರ ,ನೀಲೇಕಣಿಲಿ”
ಅಕ್ಕೋರು:”ಓಹ್?ನೀಲೇಕಣಿಲಾ?ಗುಡಿಗಾರ್ ರ ಮನಿಲಾ?ನೀನೇ ತಂದ್ಯಾ? “
ಅನೀಲ:”ಹಾಂ…ಅವಾ ಶುಕ್ರವಾರ ಕೊಡ್ತೆ ಹೇಳ್ದವಾ,ಶನಿವಾರ ಕೊಟ್ಟ,ಅದ್ಕೆ ನಾನೇ ತಂದೆ.ಛೊಲೋ ಅದೆ ಅಲಾ?”
ಅಕ್ಕೋರು:” ಹಾಂ ಛೊಲೋ ಅದೆ….ಸರಿ ನೀ ಹೋಗು…”
ಅಲ್ಲಿಗೆ ಕಾಂತಕ್ಕೋರಿಗೆ ಅನೀಲ ರಜೆ ಹಾಕಿರದೇ ಶಿರಸಿಗೆ ಹೋಗಿರುವುದು ಖಾತ್ರಿಯಾಯಿತು.ಆದರೆ ಹಾಜರಿ ಹಾಕಿ ಅವನೇಕೆ ಹೋದ ? ಹಾಗೆಲ್ಲಾ ಮಾಡುವ ಹುಡುಗನಲ್ಲವಲ್ಲಾ ಎಂದುಕೊಂಡು ,ಶಾಲೆಯ ಆಯಾ ಶಿವಮ್ಮನ ಹತ್ತಿರ ವಿಚಾರಿಸಿದರು.ಆಗ ಊರಿನವರೆಲ್ಲಾ ಶಾಲೆಗೆ ಬಂದಿದ್ದರೆಂದೂ ,ಅವರೇ ಅನೀಲನನ್ನು ಒತ್ತಾಯ ಮಾಡಿ ಕಳಿಸಿದರೆಂದೂ ಗೊತ್ತಾಯಿತು.ಆಗ ಅಕ್ಕೋರಿಗೆ ಅನಿಲನಿಗೂ ಗುಡಿಗಾರರಿಗೂ ಒಳ್ಳೆಯ ಪರಿಚಯ ಇದ್ದುದ್ದರಿಂದ ಹಳ್ಳಿಯವರು ಅನೀಲನನ್ನೇ ಕಳಿಸಿದ್ದಾರೆ,ಊರಿನವರ ಒತ್ತಾಯಕ್ಕೆ ಮಣಿದು ,ಶಾಲೆಗೆ ಬಂದವನು ತಡಿಬಿಡಿಯಿಂದ ಪೇಟೆಗೆ ಹೋಗಿದ್ದಾನೆ ಎಂಬುದು ತಿಳಿಯಿತು.ಸಾಂದರ್ಭಿಕವಾಗಿ ನೋಡಿದರೆ ಅವನದು ತಪ್ಪಿಲ್ಲವಾದರೂ ,ಅದ್ದು ಶಾಲೆಯ ನಿಯಮಗಲ ಪ್ರಕಾರ ತಪ್ಪು ಎನಿಸಿತು.ಕೊನೆಗೆ,ಇದಕ್ಕೆಲ್ಲಾ ತಾನೇ ಕಾರಣ ಎಂದೆನಿಸಿ ಖಿನ್ನರಾಗಿ ಕುಳಿತುಬಿಟ್ಟರು.
                                                **************
ಅನೀಲನನ್ನು ಕರೆದ ಅಕ್ಕೋರು ಒಂದು ಪತ್ರಕೆ ಸಹಿ ಹಾಕು ಎಂದರು.ಅದನ್ನು ಓದಿದ ಆತ ಒಂದು ಕ್ಷಣ ಬೆವರಿದನಾದರೂ ,ತನ್ನ ತಪ್ಪಿನ ಅರಿವಾಗಿ ಸುಮ್ಮನೆ ಸಹಿ ಹಾಕಿ ,ಐನೂರು ರೂಪಾಯಿಗಳನ್ನು ಟೇಬಲ್ಲಿನ ಮೇಲಿರಿಸಿ ಹೊರಟುಬಿಟ್ಟನು.ಅದು ಆತ ಕಾಂತಕ್ಕೋರಲ್ಲಿಟ್ಟ ಗೌರವದ ಪ್ರತೀಕ.ಆಗ ಮತ್ತೆ ಶಿವಮ್ಮನನ್ನು ಕರೆದ ಅಕ್ಕೋರು
“ಶಿವಮ್ಮಾ ಆ ದೇಣಿಗೆ ಪುಸ್ತಕ ತಗೊಂಡ್ ಬಾ “  ಎಂದರು.ಅದರಲ್ಲಿ ಅನೀಲಕುಮಾರ ,ದೇಣಿಗೆ ಐದು ನೂರು ರೂಪಾಯಿ ಎಂದು ಬರೆದು,ಹಣ ಸ್ವೀಕರಿಸಿದವರು ಎಂಬ ಜಾಗದಲ್ಲಿ ತಮ್ಮ ಸಹಿ ಮಾಡಿ ,ಹಾಗೆಯೇ ಒಂದು ಕವರಿನಲ್ಲಿ ಆ ಪತ್ರವನ್ನೂ ,ದೇಣಿಗೆಯ ಹಣವನ್ನೂ ಇರಿಸಿ,”ಇದನ್ನು ಶಾಲಾಮಂಡಳಿ ಅಧ್ಯಕ್ಷರಿಗೆ ತಲುಪಿಸು “ಎಂದರು.
          ಹೌದು,ಇದು ಆ ಶಾಲೆಯ ನಿಯಮ.ಮಾಡಿದ ತಪ್ಪಿಗೆ ದಂಡವನ್ನು ದೇಣಿಗೆಯಾಗಿ ಕಟ್ಟಬೇಕು ಎಂಬುದು ಕಾಂತಕ್ಕೋರೇ ಮಾಡಿಕೊಂಡ ನಿಯಮ,ನಡೆಸಿಕೊಂಡು ಬಂದ ನಿಯಮ.ಅದನ್ನು ಅವರು ಮೂವತ್ತು ವರುಷದಿಂದ ಕಾಪಾಡಿಕೊಂಡೂ ಬಂದಿದ್ದರು.ಅದನ್ನು ಕೊನೆಯತನಕವೂ ಉಳಿಸಿಕೊಂಡರು.
“ಅಬ್ಬಾ..ಮುಗಿಯಿತಲ್ಲಾ “ಎಂದು ಕಣ್ಮುಚ್ಚಿ ಕುಳಿತ ಮುಖ್ಯಶಿಕ್ಷಕರಲ್ಲಿ ಅಂತಃಕರಣ ಜಾಗ್ರತವಾಯಿತು.ತನ್ನ ನೆಚ್ಚಿನ ಶಿಕ್ಷಕರಿಗಾಗಿ,ಅದೂ ಊರಜನರ ಒತ್ತಾಯದ ಮೇರೆಗೆ ಶಿರಸಿಗೆ ಅನೀಲ ಹೋಗಿದ್ದು ಅವರೊಳಗಿನ ಹ್ರದಯಕ್ಕೆ ತಪ್ಪು ಎಂದೆನಿಸಲೇ ಇಲ್ಲ .ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಅನೀಲನಿಗೆ ತಾನೇ ತೊಂದರೆಯಾದೆನಲ್ಲಾ ಎನ್ನುವ ಅಪರಾಧಿ ಭಾವ ಅವರನ್ನು ಪೀಡಿಸತೊಡಗಿತ್ತು.ಅದಾಗಲೇ ಕಷ್ಟಕ್ಕೆ ಮಿಡಿಯುವ ಅವರ ಮಮಕಾರದ ಮನಸ್ಸು ಜಾಗ್ರತಗೊಂಡಿತ್ತು.ಒಂದು ನಿರ್ಧಾರಕ್ಕೆ ಬಂದು ತಮ್ಮ ದಿನದ ಕಾರ್ಯಗಳಲ್ಲಿ ಮಗ್ನರಾದರು.
                                      **********
ಸಂಜೆ ೪:೩೦ಕ್ಕೆ ಜನಗಣಮನ  ಹೇಳಿ ಹೊರಡುತ್ತಲೇ ಅಕ್ಕೋರು,ಅನೀಲನನ್ನು ಕರೆದರು.ಅವನಿಗೆ ಬೆಲಿಗ್ಗೆ ದಂಡಕಟ್ಟು ಅಂದಿರುವುದರಿಂದ ಬೇಜಾರಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.ಹಾಗೆಯೇ ಬರುವ ಒಂದು ಸಾವಿರದಲ್ಲಿ ಐದುನೂರನ್ನು ಕಲೆದುಕೊಂಡೆನಲ್ಲಾ ಎನ್ನುವ ಹತಾಶೆಯೂ ಕೂಡಿತ್ತು.ಅಕ್ಕೋರು ನಿಧಾನಕ್ಕೆ ಹೋಗಿ ಅವನ ಬಳಿ ಹೋಗಿ,
 “ನನ್ ಜೊತೆ ಬಸ್ ಸ್ಟಾಪಿನ ತನ್ಕಾ  ಬರ್ತ್ಯಾ?” ಎಂದರು.”ಸರಿ “ಎಂಬಂತೆ ಗೋಣಲ್ಲಾಡಿಸಿದ ಅನೀಲ,ಸುಮ್ಮನೆ ಅವರ ಹಿಂದೆ ಬಸ್ ಸ್ಟಾಪಿನ ತನಕ ನಡೆದ.ಕಾಂತಕ್ಕೋರಿಗೆ ಈಗ ಮತ್ತೊಮ್ಮೆ ವಿಚಿತ್ರ ಅನುಭವವಾಗಿತ್ತು.ತನ್ನದೆಲ್ಲವನ್ನೂ ಬಿಟ್ಟು ಹೋಗುತ್ತಿದ್ದೇನೆ,ನನ್ನ ನೆಚ್ಚಿನ ಕೆಲಸಕ್ಕೆ ವಿದಾಯ ಹೇಳುತ್ತಿದ್ದೇನೀಂದು ಬೇಜಾರಾಗುವ ಬದಲು ಅದೇಕೋ ಖುಷಿಯಾಗುತ್ತಿತ್ತು.ಆ ಖುಷಿಯನ್ನು ಅನೀಲ ಗಮನಿಸಿದನಾದರೂ  ಆತನಿಗೆ ಅದರ ಬಗ್ಗೆ ಕೇಳುವ ಮನಸ್ಸಿರಲಿಲ್ಲ ..ಕೊನೆಗೆ ಬಸ್ಸು ಹತ್ತಿ ಹೋಗುವಾಗ ಕಾಂತಕ್ಕೋರು ಅನೀಲನ ಕೈಗೆ ಎಂದು ಕವರನ್ನಿತ್ತು ಹೊರಟು ಹೋದರು.
 ಆ ಕವರಿನಲ್ಲಿ ಒಂದು ಸಾವಿರ ರೂಪಾಯಿಯೂ ,ಒಂದು ಪತ್ರವೂ ಇದ್ದಿತ್ತು.ಎಡಗೈಯ್ಯಲ್ಲಿ ದುಡ್ಡುಹಿಡಿದು,ಬಲಗೈಯ್ಯಲ್ಲಿ ಪತ್ರ ಹಿಡಿದು ಅನೀಲ ಆ ಪತ್ರವನ್ನು ಓದುತ್ತಾ ಹೋದ.
ಪ್ರೀತಿಯ ಅನೀಲ,
                ನಿನ್ನ  ಮನಸ್ಸನ್ನು ನೋಯಿಸಿದ್ದಕ್ಕೆ ಮೊದಲಿಗೆ ಕ್ಷಮೆಯಾಚಿಸುತ್ತೇನೆ.ಇಲ್ಲಿಯತನಕ ಶಾಲೆಯ ನಿಯಮಗಳನ್ನು ನಾನು ತಪ್ಪದೇ ಪಾಲಿಸಿಕೊಂಡು ಬಂದೆ,ಹಾಗೆಯೇ ಕೊನೆಯ ದಿನವಾದರೂ ನಿನ್ನ ತಪ್ಪನ್ನು ಮನ್ನಿಸಿ ಸುಮ್ಮನಿರಲು ನನ್ನೊಳಗಿನ ಮುಖ್ಯಶಿಕ್ಷಕಿ ಬಿಡಲಿಲ್ಲ.ಅದಕ್ಕೆಂದೇ ಐದುನೂರು ರೂಪಾಯಿ ದಂಡದ ದೇಣಿಗೆ ಬರೆದೆ.ಬಹುಷಃ ಅದಕ್ಕೆ ಕಾರಣ ನಿನಗೂ ಗೊತ್ತು.
                ಆದರೆ ಆ ತಪ್ಪಿಗೆ ನಾನೇ ಕಾರಣನಾದಿನೇನೋ ಎಂಬ ಭಾವನೆ ನನ್ನನ್ನು ಚುಚ್ಚುತ್ತಿದೆ .ಜೊತೆಗೆ ನಿನ್ನ ಮನೆಯ ಪರಿಸ್ಥಿತಿಯನ್ನೂ ನಾನು ಬಲ್ಲೆ ,ನಿಮ್ಮ ತಾಯಿಯ ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ನೀನು ಹಣ ಹೊಂದಿಸಲು ಪರದಾಡುತ್ತಿರುವುದೂ ನನಗೆ ಗೊತ್ತು,ಅದಕ್ಕಾಗಿ ನನ್ನ ಸ್ವಂತದ ಒಂದು ಸಾವಿರವನ್ನು ಈ ಪತ್ರದೊಡನೆ ಇಟ್ಟಿದ್ದೇನೆ.ಅದನ್ನು  ನನ್ನ ಉಡುಗೊರೆ ಎಂದು ಭಾವಿಸಿ  ಸ್ವೀಕರಿಸುವುದು.
ಕೊನೆಗೊಂದು ವಿಷಯ ಹೇಳಲೇ ಬೇಕು.ಇಷ್ಟು ದಿನ ಜೀವನದಲ್ಲಿ ನಾನು ಮಕ್ಕಳಿಗೆ  ಪಾಠ ಕಲಿಸುತ್ತಿದ್ದೆ,ಆದರೆ ಇಂದು ಕೊನೆಯ ದಿನ ನನಗೆ ಪಾಠ ಕಲಿಸಿತು.ವ್ರತ್ತಿ ಜೀವನದಲ್ಲಿ ಕರ್ತವ್ಯ ನಿಷ್ಠೆ ಎಷ್ಟು ಮುಖ್ಯವೂ ,ನಿತ್ಯ ಜೀವನದಲ್ಲಿ ಮಾನವೀಯತೆ ಅಷ್ಟೇ ಮುಖ್ಯ. ಅವೆರಡೂ ಸೂರ್ಯ-ಚಂದ್ರರಿದ್ದಂತೆ,ಯಾವುದೊಂದಿಲ್ಲದಿದ್ದರೂ ಆ  ಹಗಲು ಅಥವಾ ರಾತ್ರಿಗೆ  ಅಂದವಿಲ್ಲ.ಇವತ್ತು ನಾನು ಕಲಿತ ಪಾಠ ,ಇಲ್ಲಿನ ತನಕ ನಾನು ಕಲಿಸಿದ ಪಾಠಗಳಿಗಿಂತ ದೊಡ್ಡದು.ಇಂತಹ ಪಾಠಗಳನ್ನು ಕಲಿಯಲು ಶಿಕ್ಷಕಿಯಿಂದ ಮತ್ತೆ ವಿದ್ಯಾರ್ಥಿಯಾಗುತ್ತಿದ್ದೇನೆ.
                ಶುಭಮಸ್ತು,
                                                                                                                ಆಶೀರ್ವಾದಗಳೊಂದಿಗೆ,
                                                                                                                ಕಾಂತಕ್ಕೋರು.

ಇದನ್ನು ಓದಿದ ಅನಿಲನ ಕಣ್ಣುಗಳಲ್ಲಿ ನೀರು ಜಿನುಗಿತ್ತು.

ಇಲ್ಲಿಗೀಕಥೆ ಮುಗಿಯಿತು,ಆದರೆ ಈ ಶಿಕ್ಷಕಿಯ ಕಥೆಯಿಂದ ನಾವು ಕಲಿಯ ಬೇಕಾದ ಪಾಠ,ಪ್ರತಿಯೊಂದು ವ್ರತ್ತಿಗೂ ಅನ್ವಯಿಸುತ್ತದೆ ಎಂಬುದು ನನ್ನ ಭಾವನೆ.ಸರಿಯಾದ ಕರ್ತವ್ಯ ಪಾಲನೆಯೊಂದಿಗೆ ಮಾನವೀಯತೆಯೂ ಇದ್ದಲ್ಲಿ ನಮ್ಮ ಬಾಳಿಗೊಂದು ಸಾರ್ಥಕತೆ ಸಿಕ್ಕೀತು. ನಾವು ನಿತ್ಯವೂ ಇಂತಹ ಪಾಠಗಳನ್ನು ಕಲಿಯುವ,ಅದನ್ನು ಅಳವಡಿಸಿಕೊಳ್ಳುವ ವಿದ್ಯಾರ್ಥಿಗಳಾಗೇ ಇರೋಣ ಎನ್ನುವಂತಹ ಆಶಯ ಹೊತ್ತು ,
ನನ್ನೆಲ್ಲ ಗುರುಗಳಿಗೆ ವಂದಿಸುತ್ತಾ,
                                                                                      ಇತಿ ನಿಮ್ಮನೆ ಹುಡುಗ
                                                                                      ಚಿನ್ಮಯ ಭಟ್

                                     

Thursday, June 28, 2012

ಮೊದ್ಲೆ ಓದ್ಬೇಕಿತ್ತು ಅನ್ನೋದ್ ಬಿಡೋದ್ ಯಾವಾಗ?(ಪರೀಕ್ಷೆ ಹೊತ್ತಿನ ಯೋಚನೆಗಳು)


ಮೊದ್ಲೆ ಓದ್ಬೇಕಿತ್ತು ಅನ್ನೋದ್ ಬಿಡೋದ್ ಯಾವಾಗ
ನಾಳೆ ಓದಿದ್ರಾಯ್ತು ಅನ್ನೋದ್ ಮರ್ಯೋದ್ ಯಾವಾಗ

ಇನ್ನೂ ಒಂದ್ ವಾರ ಇದೆ ಇವತ್ ರೆಸ್ಟ್ ಮಾಡಣಾ
ನಾಳೆ ಇಂದಾ ಓದಕ್ಕೆ ಪಕ್ಕಾ ಸ್ಟಾರ್ಟ್ ಮಾಡಣಾ
ಫ್ರೆಂಡ್ಸಿಗೆಲ್ಲಾ ಬೆಳ್ಗೆ ಎದ್ದು ಮೆಸ್ಸೇಜು ಮಾಡಣಾ
ಸೆಲ್ ಸ್ವಿಚ್ ಆಫ್ ಮಾಡಿ ಮಲ್ಕೊಂಡೆ ಬಿಡಣಾ

ಫೇಸ್ ಬುಕ್ ನಲ್ಲಿ ಮಾಡಿ ಫೋಟೋ ಅಪ್ ಲೋಡು
ಹೊಸಾ ಮೂವಿ ಬಂದರೆ ಬಿಡ್ದೆ ಮಾಡಿ ಡೌವ್ನ್ ಲೋಡು
ಟ್ರೈ ಮಾಡ್ರಿ ದಿನಕ್ಕೊಂದು ಹೊಸಾ ಹೊಸಾ ಸಾಫ್ಟವೇರು
ಓರಿಜ್ನಲ್ಲೋ ಡೂಪ್ಲಿಕೇಟೋ ವಿ ಡೋಂಟ್ ಕೇರು

ಕ್ಲಾಸಿಗೆಲ್ಲಾ ಚಕ್ಕರ್ ಹೊಡ್ದು ಕ್ಯಾಂಟೀನ್ ನಲ್ಲೆ ಕೂರ್ತಿದ್ವಿ
ಆಸ್ಕರಿಂದ ಶುರುಮಾಡಿ,ಬುಕ್ಕರ್ ತನ್ಕಾ ಮಾತಾಡ್ತಿದ್ವಿ
ಫಾರೆನ್ ಆಥರ್ ಟೆಕ್ಸ್ಟ್ ಬುಕ್ ಗಳು ಅರ್ಥಾ ಆಗಲ್ಲಾ
ಝೆರಾಕ್ಸಿನ ನೋಟ್ಸ್ ಬಿಟ್ಟು ಬೇರೆದೇನೂ ಓದಲ್ಲಾ

ಎಲ್ಲಿಂದ ಓದೋದಂತಾ ಅರ್ಥಾನೇ ಅಗ್ತಿಲ್ಲಾ
ಸಿಲೆಬಸ್ಸು,ಸಿಟಿಬಸ್ಸು ಒಂದೇ ಥರ ಇದ್ಯಲ್ಲಾ
ರಾತ್ರಿ ಪೂರ್ತಿ ಓದಿ ಎಕ್ಸಾಮು ಬರಿತಿವಿ
ಮೂವತ್ತೈದು ಬಂದ್ರೆ ಸಾಕು ಪಾರ್ಟಿ ಮಾಡ್ತಿವಿ

ಆದ್ರೆ,

ಮೊದ್ಲೆ ಓದ್ಬೇಕಿತ್ತು ಅನ್ನೋದ್ ಬಿಡೋದ್ ಯಾವಾಗ?
ನಾಳೆ ಓದಿದ್ರಾಯ್ತು ಅನ್ನೋದ್ ಮರೆತು ಹೋದಾಗ!


(ಪರೀಕ್ಷೆಯ ಹೊತ್ತಿನಲ್ಲಿ ಓದುವುದೊಂದು ಬಿಟ್ಟು ಉಳಿದೆದ್ದಲ್ಲ ಉಚಿತವಾಗಿಯೇ ಕಾಣುತ್ತದೆ....ಹಾಗೆ ಯಾವಾಗಲೋ ಪುಸ್ತಕ ಹಿಡಿದುಕೊಂಡಾಗ ಹುಟ್ಟಿಕೊಂಡ ಸಾಲುಗಳನ್ನೇ ಒಂದು ೪ ೪ ಸಾಲುಗಳಂತೆ ಬರೆದು ನಿಮ್ಮ ಮೊಂದಿಟ್ಟಿದ್ದೇನೆ. ನಿಮ್ಮ ಪರೀಕ್ಷೆಯ ಸಮಯದ ವಿಶೇಷ ಅನುಭವಗಳನ್ನು ಬರೆದು ಈ ಬರಹವನ್ನು  ಅಂದಗಾಣಿಸಿ..ಹಾಗೆಯೇ ಇದರ ಕುರಿತು ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ)



ಪರೀಕ್ಷೆ ಮುಗಿಸಿದ ಸಂತಸದಲ್ಲಿ,
ಇತಿ ನಿಮ್ಮನೆ ಹುಡುಗ
ಚಿನ್ಮಯ ಭಟ್.


Friday, May 25, 2012

ಮೋಡವ ಮುತ್ತಿಕ್ಕಿದೆನು(ನಾನೂ ಮುಳ್ಳಯ್ಯನ ಗಿರಿಗೆ ಹೋಗಿದ್ದೆ!)

ಮನೆಗೆ ಹೋಗಬೇಕೆಂದು ಹಟ ಹಿಡಿದು ಕೂತಿದ್ದ ನನ್ನೊಳಗಿನ ಪುಟ್ಟ  ಮಾಣಿಗೆ ಪರೀಕ್ಷೆಯ ಗುಮ್ಮವನ್ನು       ತೋರಿಸುತ್ತಾ  ಬೇಜಾರಾಗಿ , ಸಂಜೆ ಹಾಗೆ  ಬುಕ್ಕಿನ ಮೇಲಿಂದ ಫೇಸನ್ನು ತೆಗೆದು ಫೇಸ್ ಬುಕ್ ನ ಕಡೆಗೆ ತಿರುಗಿಸಿದ್ದೆ.ಅಷ್ಟರಲ್ಲಿ ಸುಮನಕ್ಕನ ಕರೆ ಬಂತು.ಸರಿ ಇನ್ನೇನು, ನಿಯತ್ತಾಗಿ ರೂಮು ಬಿಟ್ಟು ಸಿಗ್ನಲ್ಲು ಸರಿ ಸಿಗುವ ಮನೆಯ ಬಾಗಿಲಿಗೆ ಹೋಗಿ ನಿಂತೆ.ಆ ಕಡೆಯಿಂದ 
"ಲೋ ನಾಳೆ ಏನ್ ಪ್ಲಾನ್ಸ್ ನಿಂದು ?" 
ಅಂದಕೂಡಲೆ ತಲೆಯೊಳಗಿನ ಗೂಗಲ್ "ಮನೆಗೆ ಕರಿತಾಳೋ ಅಥವಾ ಇನ್ನೇನೋ ಇರಬೇಕು "ಎಂದು ಸಲಹೆಗಳನ್ನು ಕೊಟ್ಟಿತು. ಏನಾದರಾಗಲಿ ಎಂದುಕೊಂಡು ,

"ಎನಿಲ್ಲಾ ಅಕಾ ,ನಾಳೆ  ನಂದ್ ಎನೂ ಪ್ರೋಗ್ರಮ್ ಇಲ್ಲಾ "ಎಂದೆ.

ಅದಾಗ  "ನಾಳೆ ಮುಳ್ಳಯನ ಗಿರಿಗೆ ಹೋಗಣಾ ಬರ್ತಿಯಾ  ?" ಅಂದ್ಲು.
ಬಾಯಿಯ ತುದಿಯಲ್ಲೆ ಬರಲ್ಲಾ ಕಣೇ ಓದ್ಬೇಕು ಅನ್ನೋ ಉತ್ತರ ಇದ್ದರೂ,ಕುತೂಹಲಕ್ಕೋ ಅಥವಾ ನನ್ನೊಳಗಿನ ಗೊಂದಲಗಳನ್ನು ಕಡಿಮೆಮಾಡಿಕೊಳ್ಳಲಿಕ್ಕೋ ಗೊತ್ತಿಲ್ಲಾ, 

"ಯಾರ್ಯಾರು ಹೋಗ್ತಿರದು ?"ಅಂದೆ.

"ನಾನು ಸುಮಂತ್ ಶ್ಸ್ಫ಼್ಗ್ಜಿಗ್ದ್ರ್ಸುಇ ಇಹ್ಧಿದ್ಫ಼್ ದ್ಜ್ಕ್ಫ಼್ದ್ಶ್ಕ್ ಜ್ಕ್ಸ್ದ್ಫ಼್ಹ್ಜ್ಕ್ ಎವಿಒಎಉರಿಒ ಇಒಎರು"(ಅದು ಎನು ಅಂತಾ ಕೇಳ್ಸ್ಲಿಲ್ಲಾ ಆದ್ರೆ ಸುಮಂತ್ ಅನ್ನೋ ಎಂಬ ಹೆಸರು ಸಾಕಿತ್ತು)

ನಾನು "ಹಮ್ ಮ್ ಸರಿ "ಎಂದೆ.
ಆಕೆ "ಬರ್ತಿದಿಯಾ ತಾನೆ?ಇಲ್ಲಾಂದ್ರೆ ಹೊಡ್ಸ್ಕೋತಿಯಾ  "ಎಂದು ಅಕ್ಕನ ಪವರ್ ನೆನಪಿಸಿದಳು.

ನಾನು ದೊಡ್ಡ ರಾಜಕಾರಣಿಯಂತೆ "ನೋಡಣಾ ಕಣೆ,ಸುಮಂತ್ ಗೆ ಫೋನ್ ಮಾಡಿ ಕೇಳಿ ಆಮೇಲ್ ಹೇಳ್ತಿನಿ "ಎಂದು ನನ್ನ ಸಂಚಾರಿ ದೂರವಾಣಿಯ ಕೆಂಪುಗುಂಡಿಯನ್ನು ಅದುಮಿದೆ.

ಸರಿ..ಹೋಗ್ಲೋ ಬೇಡ್ವೋ ಎಂಬ ಯೋಚನೆಯ ಸುಳಿಯಲ್ಲಿ ಸಿಕ್ಕು ಹುಟ್ಟು ಹಾಕುತ್ತಲೇ,ಸುಮಂತನಿಗೆ ರಿಂಗಣಿಸಿದೆ
 "ಏಯ್ ನಾಳೆ ಹೋಪದನಾ,ಎಷ್ಟ್ ಹೊತ್ತಿಗೆ ?' ಎಂದೆ.

ಅವನಿಂದ ಬೆಳಿಗ್ಗೆ ೫.೩೦ಕ್ಕೆ ನಮ್ಮ ಕಾಲೇಜಿನ ಹತ್ತಿರದಿಂದ ಹೊರಡುವುದೆಂಬ ಮಾಹಿತಿ ಬಂತು.ಈಗ ಹೋಗಲೋ ಬಿಡಲೋ ಎಂದು ಕೇಳಲೆಂದು ಅಮ್ಮನಿಗೆ ಪೋನಾಯಿಸಲೆಂದು ಹೊರಟಾಗಲೇ ಅಮ್ಮ ಬೆಂಗಳೂರಿಗೆ ಹೊರಟಿರುವುದು ನೆನಪಾಯಿತು.ಸರಿ ಇನ್ನೇನು,ಚಿಕ್ಕಮಗಳೂರಿನಲ್ಲಿದ್ದು ೩ ವರ್ಷ ಮುಗಿಯುತ್ತಾ ಬಂದರೂ ಇನ್ನೂ ಗಿರಿಗೆ ಹೋಗಿಲ್ಲಾ ಅಂದ್ರೆ ನಾಚಿಕೆಗೇಡು ಅಂದು ಕೊಂಡು,ಉಳಿದೆಲ್ಲ ಯೋಚನೆಗಳನ್ನು ಇಗ್ನೋರ್ ಮಾಡಿ ,

ಸುಮನ್ ಗೆ "ಹೂಂ,ಬರ್ತಿನಿ" ಎಂದು ಸಂದೇಶಿಸಿದೆ.

                                                     *****
ಬೆಳಿಗ್ಗೆ ಆರುಗಂಟೆಗೆ ಏಳಲೆಂದೇ ಮೂರುಸಲ ಅಲಾರಾಂ ಇಡುವ ನಾನು,ಇವತ್ತು ೪.೩೦ ಕ್ಕೆ ಒಂದು ಸಲ ಅದು ಕೂಗುತ್ತಿದ್ದಂತೆ ಎದ್ದೆ.ನನ್ನೊಳಗಿನ ಸೋಮಾರಿ
  "ಏಯ್ ಬೇಕೇನಾ ಎವೆಲ್ಲ್ಲಾ?ಸುಮ್ನೆ ಮಲ್ಕಳಲೇಯ್"   ಎಂದರೂ
ಅದೇನೋ ಉತ್ಸಾಹದಲ್ಲಿ ಹಾಸಿಗೆ ಬಿಟ್ಟೆದ್ದೆ.ಅಲ್ಲಿಂದ ಅಂಕಲ್ ಕೊಟ್ಟ ಬಿಸಿಬಿಸಿ ಕಾಫಿ ಕುಡಿದು,ಸುಮಂತನ ಚಾಳ ತಲುಪುವಷ್ಟರಲ್ಲಿ ಸಮಯ ೫.೧೫.ಅಲ್ಲಿಂದ ಕಾಲೇಜು ತನಕ ನಮ್ಮ ಹಳೆಯ ಹೀರೋ ಜೆಟ್,ಹರ್ಕುಲೆಸ್ ಸೈಕಲ್ ಗಳನ್ನು ನೆನೆಸಿಕೊಂದು ನಡೆದೆವು.ಅಲ್ಲಿಂದ ಉಳಿದವರೆಲ್ಲಾ ಬಂದು ದಾರಿ ಮಧ್ಯ ಎಂದಿವ್ವರನ್ನು ಹತ್ತಿಸಿಕೊಂಡು ಚಿಕ್ಕಮಗಳೂರು ಬಿಡುವಷ್ಟರಲ್ಲಿ ಆಕಾಶವಾಣಿಯಲ್ಲಿ "ವಂದೇ ಮಾತರಂ"ಬರುತ್ತಿದ್ದ ಸಮಯ(೬ ಗಂಟೆ).ಆ ವಾಹನದಲ್ಲಿದ್ದು ನವಗ್ರಹಗಳು! ಜೊತೆಗೊಬ್ಬ ಸಾರಥ್ಜಿ.
ನಾನು ಅಂದರೆ ಈಗ ಕೆಲಸವಿಲ್ಲದೆ ಇದನ್ನು ಬರೆಯುತ್ತಿರುವ ಚಿನ್ಮಯ್,ಸುಮಂತ್,ಸುಮನಕ್ಕಾ,ಸೌಮ್ಯಾ,ಅರ್ಜುನ್,ವರ್ಷಾ,ವಸಂತ್,ಶ್ರತಿ,ನಿತಿನ್ ಇಂತಿಪ್ಪ ನಮ್ಮ ತಂಡದ ಸವಾರಿ ಬೆಳಬೆಳಿಗ್ಗೆಯೇ  ಮುಳ್ಳಯ್ಯನಗಿರಿಗೆ ಹೊರಟಿತ್ತು.ನನಗೆ ಗಿರಿ ಪ್ರವಾಸ ಮೊದಲಸಲವಾದರೆ,ಕೆಲವರಿಗೆ ಎರಡು,ಮೂರು ಹೀಗೆ ಏರಿಕೆ ಕ್ರಮದಲ್ಲಿತ್ತು.ಚೂರು ಛಳಿಯಾಗುತ್ತಿದ್ದರೂ ತೋರಿಸಿಕೊಳ್ಳದೇ ,ಅವರೆಲ್ಲಾ ಮಾತಾಡುತ್ತಿದ್ದ  ಅವರ ಕ್ಲಾಸಿನ,ಬ್ರಾಂಚಿನ ಸಮಾಚಾರಗಳನ್ನು ಮಂದಸ್ಮಿತದೊಂದಿಗೆ ಕೇಳುತ್ತಿದ್ದೆ.ಸಿದ್ದಾಪುರದಿಂದ ಶಿರಸಿಗೆ ಹೋಗುವ ದಾರಿಯ ನೆನಪಿಸುತ್ತಿದ್ದ ಆ ಇಳಿಜಾರು ದರೆ,ಅದರ ಅಂಚಿನಲ್ಲೆ ಇದ್ದ ಹತ್ತು ಹಜಾರು ಮರಗಳು ,ಕಣ್ಣು ಕುಕ್ಕುತ್ತಿದ್ದ ಕಪ್ಪು ಹಸಿರು ಹೀಗೆ ದಾರಿಯ ಬದಿಯನ್ನೇ ನೋಡುತ್ತಾ ಹೊರಟವನಿಗೆ,ಮುಂದೆ ಗಿರಿಯ ಹತ್ತಿರದ ತಿರುವು ಮುರುವು ರಸ್ತೆಗಳನ್ನು ನೋಡಿ ಮುಂಬೈ -ಪುಣಾ ಮಧ್ಯ ಸಿಗುವ ಖಂಡಾಲಾಘಾಟ್ ನ ರಸ್ತೆ ನೆನಪಾಗಿದ್ದು ಸುಳ್ಳಲ್ಲ.ಆ ಇಬ್ಬನಿ ಮುಸುಕಿದ ದಾರಿಯಲಿ ಗಾಡಿಯಲಿ ಕೂತು, ಪರ್ವತವ ಹತ್ತುತ್ತಿದ್ದ ನನಗೆ ಬಿ.ಎಂ.ಶ್ರೀ ಅವರ
"ಕರುಣಾಳು ಬಾ ಬೆಳಕೆ 
ಮುಸುಕಿದೆ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು"
ಸಾಲುಗಳು ನೆನಪಾದವು.
                                                           *********
 ನಮ್ಮ ವಾಹನದಿಂದ ಕಾಲು ಕೆಳಗಿಟ್ಟು ನಾಲ್ಕು ಹೆಜ್ಜೆ ನಡೆದಿರಬಹುದಷ್ಟೇ ,ಆಹಾ..ಅದೆಲ್ಲಿಯದೋ ತಂಗಾಳಿ ನನ್ನ ಮೈಗೆ ಸೋಕಿತ್ತು.ಮೈ ನಡುಗುತ್ತಿದ್ದರೂ,ಕೈ ಎತ್ತಿ,ಕಣ್ಣು ಮುಚ್ಚಿ ದೀರ್ಘವಾದ ಉಸಿರು ತೆಗೆದುಕೊಂಡಾಗ ಕಣ್ಣೆದುರು ಕಂಡ ಪದ 

"ವಾವ್ !!!".

ನನಗೆ ಗೊತ್ತಿಲ್ಲದೆಯೇ ನನ್ನೊಳಗೆ ಅದೇನೋ ಖುಷಿಯಾಗುತ್ತಿತ್ತು,ಮೈಸೂರಿನಲ್ಲಿ  ಜಿ.ಆರ್.ಎಸ್ ನ ಕ್ರತಕ ಜಲಪಾತಕ್ಕೆ ತಲೆಕೊಟ್ಟಾಗಲೂ ಅದೇತರಹದ ಅನುಭವವಾಗಿತ್ತು.ಅದನ್ನು ಮಾತಿನಲ್ಲಿ ಹೇಳಲಾರೆನು ಕ್ಷಮಿಸಿ!
ಸರಿ ಮೆಟ್ಟಿಲುಗಳನ್ನು ಹತ್ತುತ್ತಾ,ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಾ,ಗಿರಿಯ ಮೇಲಣ ದೇವಸ್ಥಾನವನ್ನು ತಲುಪಿದೆವು.ಅಲ್ಲಿ ನೆರೆದಿದ್ದ ಸುಮಾರು ೨೦-೩೦ ಜನರನ್ನು ನೋಡಿ ಮದುವೆಯೇನಾದರೂ ಇರಬಹುದೇನೋ ಎಂದು ಅಂದುಕೊಂಡೆನಾದರೂ ನನ್ನ ಊಹೆ ತಪ್ಪಾಗಿತ್ತು.ಅದಾಗ ಅಕಾಶಾವಾಣಿಯಲ್ಲಿ ವಾರ್ತೆಬರುವ ಸಮಯ(೭.೩೫),
ಅಲ್ಲೇ ಒಂದೆರಡು ಛಾಯಾ ಚಿತ್ರಗಳನ್ನು ತೆಗೆದೆನಾದರೂ ,ಅದರ ಸಂಖ್ಯೆ ವ್ರದ್ದ್ಧಿಸಿದ್ದು ಅಲ್ಲಿಂದ ಚೂರು ಕೆಳಗಿಳಿದು ಕಲ್ಲುಗಳ ಹತ್ತಿರ ಹೋದಾಗ.
ಅಲ್ಲಿ  ಗಿರಿಯನ್ನು ಸುತ್ತುವರೆದು ಬಿಳಿಯ ಮೋಡಗಳು ಹೋಗುವ ಪರಿ ಅನನ್ಯ,ಅದ್ಭುತ,ಅಮೋಘ,ಅಪೂರ್ವ,ಅತಿಮನೋಹರ,ಅತಿಸುಂದರ!!

ಅದನ್ನು ನೋಡಿ ಒಂದೆರಡು ಸಾಲುಗಳು ಹೊಳೆದವು ಅವನ್ನೇ ಬರೆದಿದ್ದನೆ ನೋಡಿ,

ಮೇಘರಾಶಿಯ ಬಗೆದು ಎದ್ದು 
ನಿಂತಿರುವುದು ಈ ಗಿರಿಯು
ಅದಕೆ ಅಂದ ನೀಡಿದೆ ಹಸಿರು
ಮರಗಳು ಅಂಟಿಕೊಂಡ ಪರಿಯು

ಈ ಜಗವ ಮರೆಸುವುದು
ಆ ಮನಮೋಹಕ ತಂಗಾಳಿಯು
ಬಿಸಿ ಮಾಡಿ ಎಬ್ಬಿಸುವುದು ಸಂತಸವ
ಆ ಜುಮು ಜುಮು ಛಳಿಯು

ನೋಡುವ ಕಂಗಳಿಗೆ ಹಬ್ಬವು
ಈ ನಿಸರ್ಗದ ಸಿರಿಯು
ಚಿರ ಕಾಲ  ಉಳಿಯಲಿ ಆ ಸೊಬಗು ಆಶಿಸುವೆ,
ನೋಡಿ ಖುಷಿ ಪಡಲೆಂದು ಮುಂದಿನ ಮಕ್ಕಳು ಮರಿಯು
 

                                    *******
ಮುಂದೇನು ವಿಶೇಷವಿಲ್ಲ,ತಾಳ ಹಾಕುತ್ತಿದ್ದ ಹೊಟ್ಟೆಯನ್ನು ಚಪಾತಿ,ಪಲ್ಯಗಳು ತಣಿಸಿದವು.ಒಗ್ಗರಣೆ ಮಂಡಕ್ಕಿ,ಚಕ್ಕುಲಿಗಳು ದಾರಿ ಖರ್ಚಿಗಾದವು.ಸುಮಾರು ಹನ್ನೊಂದಕ್ಕೆ ವಾಪಸ್ಸಾದೆವು.ಅಲ್ಲಿಂದ ಬಂದ ಮೇಲೂ ಅದೇ ಗುಂಗಿನಲ್ಲೇ ಇದ್ದೇನೆ.

ಆ ಛಳಿ,ಬೀಸುವ ಗಾಳಿ ,ಹಸಿರನುಟ್ಟು ನಿಂತಿರುವ ಪರ್ವತರಾಶಿ 
ಇನ್ನೂ ನನ್ನ ಕಣ್ ಮುಂದಿದೆ,
ಅದರ ನೆನಪಲ್ಲೇ ಈ ಪ್ರವಾಸ ಲೇಖನದ ಥರ ಬರೆಯ ಹೊರಟ ತಲೆಹರಟೆ 
ನಿಮ್ಮ ಕಣ್ಣ  ಮುಂದಿದೆ

ನನಗೆ ಗಿರಿಯನ್ನು ತೋರಿಸಿದ ನವಗ್ರಹಗಳಿಗೆ ಧನ್ಯವಾದಗಳು.
ಈ ಲೇಖನವನ್ನು ಓದಿದ ನಿಮಗೂ ಧನ್ಯವಾದಗಳು.

ಕೊನೆಗೆ ಅಂತೂ ನಾನೀಗ ಹೇಳಬಲ್ಲೆ ,
"ನಾನೂ ಗಿರಿಗೆ ಹೋಗಿದ್ದೆ!" ಅಂತ

-ಮನದಾಳದ ಮಾತುಗಳನ್ನು ಹಂಚಿಕೊಂಡ ಸಂತಸದೊಂದಿಗೆ 
 ಇತಿ ನಿಮ್ಮನೆ ಹುಡುಗ 
ಚಿನ್ಮಯ ಭಟ್

Monday, April 9, 2012

ಎಳೆಯರಾಗಿರಿ ಗೆಳೆಯರೇ.......

ಎಳೆಯರಾಗಿರಿ ಗೆಳೆಯರೇ ನೀವ್,
ಗೆಳೆಯರಾಗಿರಿ ಮತ್ತೆ ಎಳೆಯರಾಗಿ.

ಹೋಗದಿರಿ ಹುಚ್ಚರಂತೆ ಹಣದ ಹಿಂದೆ,
ಹೋದರೆ ಜೀವನ ಮಸಣವು ಮುಂದೆ.
ಬನ್ನಿ ಹೋಗುವಾ ಚಿಟ್ಟೆಯ ಹಿಡಿಯಲು
ದಾರವ ಕಟ್ಟಿ ನಕ್ಕು ನಲಿಯಲು

ಮೇಲೆ ತಾ ಮೇಲೆ ಹೋಗಲು
ಮೇಲಣ ಕಾಲ ಜಗ್ಗದೆ ನಿಲ್ಲಿ,
ಎಲ್ಲರೂ ಕೂಡಿ ಆಡುವಾ ಬನ್ನಿ
ಒಂಟಿ ಕಾಲ ಕುಂಟೆ- ಬಿಲ್ಲಿ

ಕದಿವುದೋ ಯಾಕೋ,ಹಿಡಿವುದು ನಿಜಕೋ
ಕ್ಲೋಸು ಮಾಡಿ ಆ ಹೊಡೆದಾಟದ ಕೇಸು.
ಜಾತ್ರೆಯ ಟೋಪಿಗೆ ಆಟಿಕೆ ಗನ್ನು,
ಆಡುವ ಬನ್ನಿ ಕಳ್ಳಾ-ಪೊಲೀಸು..


ಎಳೆಯರಾಗಿರಿ ಗೆಳೆಯರೇ ನೀವ್,
ಗೆಳೆಯರಾಗಿರಿ ಮತ್ತೆ ಎಳೆಯರಾಗಿ.


Saturday, March 24, 2012

ಎಲ್ಲಿ ಕಾಣೆಯಾಗಿರುವಿರಿ ? ನನ್ನ ಎಮ್ಮೆಗಳೆ ಬನ್ನಿ....


(ನನ್ನೆಲ್ಲಾ ಗೆಳೆಯ/ಗೆಳತಿಯರಿಗೆ ಈ ಕವನ ಸಮರ್ಪಿತ)

ಎಲ್ಲಿ ಕಾಣೆಯಾಗಿರುವಿರಿ
ನನ್ನ ಎಮ್ಮೆಗಳೆ ಬನ್ನಿ ಇಲ್ಲಿ,
ಕಣ್ಣ ಮುಚ್ಚಿ ಹತ್ ಎಣಿಸುವೆ
ನನ್ನ ಎದುರು ಬಂದು ನಿಲ್ಲಿ.

ಕಲ್ಲು ಮುಳ್ಳುಗಳಿದೆ ಎಲ್ಲೆಡೆ
ಆದಿರೇಕೆ ಒಬ್ಬಂಟಿ ?
ಬನ್ನಿ ಎಲ್ಲರೂ ,ಕೂಡಿ ತಿನ್ನುವ
ಈಗ ಒಂದು ಬನ್-ಟೀ

ಥೂ ,ಎಲ್ಲಿರುವಿರಿ??
ಹ್ಯಾಪಿ ಬರ್ತಡೇಯ ದಿನ ಜಾಡಿಸಿ
ಒದೆಯುವ ನನ್ನ ಎಮ್ಮೆಗಳೇ ಬನ್ನಿ
ಹ್ಯಾಪುಮೋರೆ ಹಾಕಿಕೊಂಡ ದಿನವು
ಗುದ್ದಿ ಎಬ್ಬಿಸಿದ ಎಮ್ಮೆಗಳೇ ಬನ್ನಿ

ಖಾಲಿ ಥೈಲಿಗೆ ಸಾಲವ ನೀಡಿ,
ಜೋಲಿ ಹೊಡೆದ ಮನವ ತಿದ್ದಿ ತೀಡಿ,
ಹೋದಿರೆಷ್ಟು ದೂರ ಸಾಗಿ??
ಕೇಳದೇಕೆ ನಿಮಗಿಂದು,ನಾ ಕರೆದರೂ ಕೂಗಿ!

ಕಾಣದೇ ಕಾಡುವ ಒಲವೆ..........

ಕಾಣದೆ ಕಾಡುವ ಚೆಲುವೆ
ನೀ ಕಾಡುತ ಒಡುವ ಮನವೆ
ಆಣೆಯ ಪಡೆವ ನಲಿಮೆ
ನೀ ಎದೆಯ ಸುಡುವ ಕುಲುಮೆ

ಕಣ್ಣ ಮುಚ್ಚಿ ತೆರೆಸುವ ನಿನ್ನಯ ತುಟಿಗಳೆ ಸುಂದರ
ಮಣ್ಣು ಮೆತ್ತಿ ಕೊಂಡರೆ ಕೆನ್ನೆಯ ಒರೆಸುವ ಚಂದಿರ
ಮೋಹಕ-ಸಮ್ಮೋಹಕ ಕಣ್ಣಿನಾ ಸೆಳೆತವು
ಜಾರ್ಜಿಯಾ-ಕೆಲಿಫೋರ್ನಿಯಾ ನಿನ್ನದೇ ಎಲ್ಲವೂ
ಹಲ್ಲಲೇ ಹಾಲ,ಚೆಲ್ಲುವಾ ಚೆಲುವೆ

ಕನಸಲಿ ನನ್ನ ಕಾಡುವ ಈಗಿನ ಕಾಲದ ಮೋಹಿನಿ
ನನಸಲಿ ಸಿಗದೆ ಓಡುವ ಪ್ರೀತಿಯ ಲೋಕದ ವಾಹಿನಿ
ದಿಟವೋ ಇದು,ಹುಡುಗಾಟವೋ ನಿನ್ನದೇ ಎಲ್ಲವೂ
ಆಟದಿ ಹುಡುಕಾಟತಿ ಸಿಗುವುದೇ ಗೆಲುವು
ಬದುಕುವೆ ನಿನ ನೆನಪಲೇ ಬಂದರೂ ಸಾವು