Sunday, February 16, 2014

ಮೂರುತ್ತರ

ನಮಸ್ಕಾರ ಎಲ್ರಿಗೂ,
ಅಹ್..ನನ್ನೊಳಗಿನ ಗೊಂದಲಗಳಿಗೆ ಒಂದಿಷ್ಟು ಅಕ್ಷರರೂಪು ಕೊಡುವ ಪ್ರಯತ್ನ ಇದು...
ಒಂದಿಷ್ಟು ಒಳನೋಟಗಳಿರುವ ಬರವಣಿಗೆಯ ಹಂಬಲಹೊತ್ತು ಬರೆಯಲು ಶುರುಮಾಡಿದ್ದು...
ಗೊತ್ತಿಲ್ಲ ಎಷ್ಟರಮಟ್ಟಿಗೆ ಅದನ್ನು ಅಳವಡಿಸಿಕೊಂಡೆ ಅಂತಾ..
ದಯವಿಟ್ಟು ಓದಿ, ಅನಿಸಿಕೆಗಳನ್ನು  ತಿಳಿಸಿ, ಬೆಳೆಯಲು ಸಹಕರಿಸಿ :)
 ಬರಿತೀರಾ ಅಲ್ವಾ??ವಂದನೆಗಳು :)






ಬರೆಯಲಾರೆ ಕಣೆ ಹುಡುಗಿ ಕವಿತೆಯನು ನಾನಿಂದು 
ಬರಿಮೌನದಲೆ ಮುಳುಗಿಹುದು ತೇಲ್ಗಡಲ ದನಿಯಿಂದು

ಅರೆಬರೆಹನಿ ಕಾದಂಬಿನಿ ಮರೆಯೊಳು ಸೇರಿ
ತೇಲಿಹೋಗಲೇ ,ಊರುಕೇರಿಯ ದಾಟಿ ತೀರಮುಂದೆ.
ತೆರೆಮರೆಯಲೇ ಸರಿಯಲದೆಷ್ಟು ದಿನ ಗೆಳತಿ
ಪರದೆ ಏಳಲೇ ಬೇಕಲ್ಲ ಘಂಟೆಸದ್ದಿನ ಬೆನ್ನಹಿಂದೆ||ಬ||

ಧಪ್ಪನೆ ಮೇಲೆದ್ದು ಧೋ ಎಂದೆನ್ನುತ ಬಂದಪ್ಪಿಳಿಸಿಬಿಡಲೇ ,
ತಲೆಯೊಡೆದು ಚೂರಾಗಲಿ,ಆರಿದ್ರೆಯಲ್ಲಾರ್ತನಾದವೆಂದಾದರೂ ಕೇಳೀತೇ?
ತೊಪತೊಪನೆಬಿದ್ದ ಮಡಿಮೋರೆತುಣುಕುಗಳೇ
ಕಪ್ಪುಸೋಡದೊಳಗುಸಿರುಗಟ್ಟಿ ಕೆಮ್ಮುತಿಹವಲ್ಲ,
ಇನ್ನು ಹಳೆಹಳ್ಳಿಯಿಂದ ಬಂದ ಶುಧ್ಧಪೆದ್ದಾತ್ಮವುಳಿದೀತೆ ??||ಬ||

ಆದದ್ದಾಗಲೆಂದು ಪವನಸುತನನು ನೆನೆನೆನೆದು
ಉಡ್ಡಯನಕೆ ಸಜ್ಜಾಗಲೇ,ರಸರಾಗವ್ಯೋಮಧೀಂ ಅನುಭಾವ ರಜಸ್ಸಿನೆಡೆಗೆ.
ಹೋಗೇನು ಮಾಡಲಿ?ನಿಜ ಮನುಜತೆಯ ಕಾರ್ಯಭಾಗಕೊಟ್ಟು
ನೂಕಿಹನಲ್ಲವೇ ಅವನೆನ್ನ,ಎರಡು-ಒಂದರೀ ಅನಂತವರ್ತುಲದೊಳಗೆ

ಬರೆಯಲಾರೆ ಕಣೆ ಹುಡುಗಿ ಕವಿತೆಯನು ನಾನಿಂದು 
ಬರಿಮೌನದಲೆ ಮುಳುಗಿಹುದು ತೇಲ್ಗಡಲ ದನಿಯಿಂದು


================================
*ಕಾದಂಬಿನಿ=ಮೋಡಗಳ ಸಾಲು,
ರಜಸ್ಸು=ಧೂಳು,ಕಣ (+ತಮ,ಸತ್ವ,ರಜಗಳೆಂಬ ಮೂರುಗುಣಗಳಲ್ಲಿ ಒಂದು)

Sunday, January 26, 2014

ಮಾಸದ ಸಿನೆಮಾ :ಅತಿಥಿ

ನಮಸ್ತೆ ಎಲ್ರಿಗೂ....
   


             ನಿನ್ನೆ ವಿಜಯನಗರದ ಕಲಾವೇದಿಕೆ ಟ್ರಸ್ಟ್ ವತಿಯಿಂದ ನಡೆಯುವ "ಮಾಸದ ಸಿನೆಮಾ" ಕಾರ್ಯಕ್ರಮಕ್ಕೆ ಹೋಗಿದ್ದೆ . ಮನೆಯ ಟಾರಸಿಯಲ್ಲಿ ಪರದೆಗಳನ್ನು ಇಳಿಬಿಟ್ಟು ಪರದೆಯ ಮೇಲೆ ಸುಮಾರು ಎಂಬತ್ತು ಜನರಿಗೆ ಚಿತ್ರತೋರಿಸುವ ಪ್ರಯತ್ನ ಇದು.ತಿಂಗಳಿನಲ್ಲಿ ಎರಡು ದಿನ ಸಂಜೆ ಒಂದು ಒಳ್ಳೆಯ ಚಿತ್ರದ ವೀಕ್ಷಣೆಯ ಅವಕಾಶ.ವಿಳಾಸ ಹುಡುಕಿಕೊಂಡು ನಾನು ಅಂತೂ ನಿಗದಿತ ಸ್ಥಳ ತಲುಪಿದಾಗ ಚಿತ್ರ ಶುರುವಾಗಲು ಇನ್ನೂ ಒಂದು ಘಂಟೆ ಇರುವುದು ತಿಳಿದುಬಂತು.ಅಲ್ಲಿಯೆ ಇದ್ದ ಸಂಘಟರೊಂದಿಗೆ ಪರಿಚಯ ಮಾಡಿಕೊಳ್ಳುತ್ತಿರುವಾಗ ಈಗಾಗಲೇ ಮೂರ್ನಾಕು ಚಿತ್ರಗಳ ಪ್ರದರ್ಶನ ಆಗಿಹೋಯಿತೆಂದೂ ,ಇಂದು ಪಿ.ಶೇಷಾದ್ರಿಯವರ ನಿರ್ದೇಶನ,ಮಿತ್ರಚಿತ್ರ ನಿರ್ಮಾಣದ "ಅತಿಥಿ" ಚಿತ್ರ ಪ್ರದರ್ಶನಗೊಳ್ಳುತ್ತಿರುವುದಾಗಿಯೂ ತಿಳಿದುಬಂತು.


 (ಚಿತ್ರಕೃಪೆ :ಅಂತರ್ಜಾಲ )

    ಚಪ್ಪಲಿಗಳನ್ನು ಕೆಳಗೇ ಬಿಟ್ಟು ಮೇಲೇರಿದವನಿಗೆ ಎಲ್ಲಾ ಖುರ್ಚಿಗಳು ಖಾಲಿ ಇದ್ದುದು ಆಶ್ಚರ್ಯತಂದಿತ್ತಾದರೂ,ನಿಧಾನವಾಗಿ ಜನ ಬರತೊಡಗಿದ್ದು ಉತ್ಸಾಹ ಹೆಚ್ಚಿಸಿತ್ತು.ಬಂದವರಲ್ಲಿ ಹಿರಿಯರೇ ಹೆಚ್ಚಿದ್ದರು.ಅಬ್ಬಬ್ಬಾ ಎಂದರೆ  ನನ್ನನ್ನೂ ಸೇರಿಸಿ ೪  ಜನ ನಮ್ಮಂಥಹ ಹುಡುಗರಿರಬಹುದಷ್ಟೇ.ಆರೂ ಮೂವತ್ತರ ಹೊತ್ತಿಗೆ ಕಲಾವಿದ ಶ್ರೀನಾಥ ವಸಿಷ್ಠ ಅವರು ಎಲ್ಲರಿಗೂ ಸ್ವಾಗತ ಕೋರಿ,ಚಿತ್ರ ಪ್ರದರ್ಶನದ ನಂತರ ನಿರ್ದೇಶಕರೊಂದಿಗೆ ಸಂವಾದ ಇರುವುದಾಗಿ ತಿಳಿಸಿದರು.ನಾನು ಉತ್ಸುಕತೆಯಿಂದ ಚಿತ್ರನೋಡಲು ತಯಾರಾದೆ,ಚಿತ್ರ ನೋಡಿದ ಮೇಲೆ ನಿರ್ದೇಶಕರೊಂದಿಗೆ ಮಾತನಾಡುವ ಅವಕಾಶ ಸಿಗುತ್ತದೆ ಎಂಬ ಖುಷಿ ಬೇರೆ..
     ಮುಂದೆ ??
(ಇದು ಚಿತ್ರದ ಬಗೆಗಿನ ವಿಮರ್ಶೆ ಎಲ್ಲಾ ಅಲ್ಲ,ಅಷ್ಟು ತಿಳಿದವನೂ ನಾನಲ್ಲ, ಚಿತ್ರನೋಡಿದ ತಕ್ಷಣ ನನಗನಿಸಿದ ಮಾತುಗಳು ಅಷ್ಟೇ.)
          ಚಿತ್ರದ ಕಥೆಯಲ್ಲಿ ಎರಡು ಮುಖ್ಯಪಾತ್ರಗಳು.ನಾಲ್ಕುಗೋಡೆಗಳ ನಡುವೆ ಸಾಗುವ ಕಥೆಯಲ್ಲಿ ಹಿಂಸೆ- ಪ್ರತಿಕಾರ-ಕ್ರಾಂತಿಯನ್ನು ಹೇಳುವ ಒಂದು ಪಾತ್ರವಿದ್ದರೆ ಇನ್ನೊಂದೆಡೆ  ಸೇವೆ-ಅಸಹಾಯಕತೆ-ಮಾನವೀಯತೆಗಳನ್ನು ಹೊತ್ತುಕೊಂಡ ಇನ್ನೊಂದು ಪಾತ್ರವಿದ್ದು ಇವುಗಳ ನಡುವಿನ ವಿಚಾರಭೇಧ,ಮನಸ್ಸಿನ ತೊಳಲಾಟಗಳನ್ನು ಚಿತ್ರಿಸಲಾಗಿದೆ.ಕ್ರಾಂತಿಕಾರಿ ಯುವಕನ ಪಾತ್ರವನ್ನು ಶ್ರೀ ಪ್ರಕಾಶ ರೈ ನಿರ್ವಹಿಸಿದರೆ,ಹಳ್ಳಿಯಲ್ಲಿನ ಒಬ್ಬ ಪ್ರಾಮಾಣಿಕ ವೈದ್ಯನ ಪಾತ್ರವನ್ನು ಶ್ರೀ ದತ್ತಣ್ಣ ನಿರ್ವಹಿಸಿದ್ದಾರೆ.


(ಚಿತ್ರಕೃಪೆ :ಅಂತರ್ಜಾಲ ) 

          ಮಲೆನಾಡಿನ ಹಳ್ಳಿಯೊಂದರ ಸಮೀಪದ ಕಾಡಿನಲ್ಲಿ ಬಾಂಬ್ ತಯಾರಿಕೆಯಲ್ಲಿ ತೊಡಗಿರುವಾಗ ನಡೆದ ಸ್ಫೋಟದಿಂದ ಪ್ರಕಾಶ ರೈ ಗಾಯಗೊಂಡು ಅಲ್ಲೇ ಸಮೀಪದ ಡಾಕ್ಟರ ಮನೆಗೆ ಬರುತ್ತಾರೆ.ಡಾಕ್ಟರ ಹೆಂಡತಿಯನ್ನು ಒತ್ತೆಯಾಳಾಗಿರಿಸಿಕೊಂಡು ತಮ್ಮ ನಾಯಕನ ಗಾಯದ ಚಿಕಿತ್ಸೆಗೆ ಒತ್ತಾಯಿಸುವ ಕ್ರಾಂತಿಕಾರಿ ಗುಂಪಿನವರಿಗೆ ಪ್ರತಿರೋಧ ವ್ಯಕ್ತಪಡಿಸಲಾಗದೇ ದತ್ತಣ್ಣ ರೋಗಿಯ ಆರೈಕೆಯಲ್ಲಿ ತೊಡಗುತ್ತಾರೆ.ಮೊದಮೊದಲಿಗೆ ಪಿಸ್ತೂಲು ಹಿಡಿದುಕೊಂಡೇ ಮಾತಾಡುವ ಕ್ರಾಂತಿಕಾರಿ ಗುಂಪಿನ ನಾಯಕ,ಕ್ರಮೇಣ ತನ್ನೊಳಗಿನ ಮನುಷ್ಯನನ್ನು ಪರಿಚಯಿಸಿಕೊಳ್ಳುತ್ತಾ ಹೋಗುತ್ತಾನೆ.ವಯಸ್ಸಾದ ವ್ಯಕ್ತಿಯ ತುಮುಲಗಳು-ಯುವಕನ ಮಹತ್ವಾಕಾಂಕ್ಷೆ,ಹೆಂಡತಿಯನ್ನು ಬಿಡಿಸಿಕೊಳ್ಳಲಾಗದ ಅಸಹಾಯಕತೆ-ಪೋಲಿಸರ ಹೆದರಿಕೆ,ಇಳಿವಯಸ್ಸಿನಲ್ಲಿ ಮಗ ಹತ್ತಿರವಿರಬೇಕೆಂಬ ಬಯಕೆ-ದೇಹದ ಗಾಯವನ್ನು ಮೆಟ್ಟಿ ನಿಲ್ಲುವ ಛಲ ಹೀಗೆ ಹಲವಾರು ಆಯಾಮಗಳನ್ನು ಕಥೆ ಹೇಳುತ್ತಾ ಸಾಗುತ್ತದೆ.
        
              ಇದರ ಜೊತೆಗೆ ವೃದ್ಧ ದಂಪತಿಯ ಜೀವನಪ್ರೀತಿ,ಪಕ್ಕದ ಮನೆಯ ಪುಟ್ಟಿಯ ಮುಗ್ಧತೆ,ಅವಳು ತನ್ನ ನಾಯಿಮರಿಗಾಗಿ ಹುಡುಕುವ ಪರಿ,ಪಟ್ಟಣದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಮಗನನ್ನು ಕಳೆದುಕೊಂಡ ಅದೇ ಊರಿನ ಒಬ್ಬಾಕೆಯ ದುಃಖ ಹೀಗೆ ಒಂದಿಷ್ಟು ಮಾನವ ಸಹಜ ಅಭಿವ್ಯಕ್ತಿ,ಎಂ.ಟೆಕ್ ಓದಿಯೂ  ಸಾಮಾನ್ಯರಂತೆ ಬದುಕದೇ ಯಾವುದೋ ಸಿದ್ಧಾಂತಕ್ಕಾಗಿ ತನ್ನನ್ನು ಹುರುಪುಗೊಳಿಸಿಕೊಂಡಿರುವ ಯುವಕನ ವಿಶಿಷ್ಟ ಮನಸ್ಥಿತಿ,ಅವನಲ್ಲಿರುವ ಗೊಂದಲ,ನಾಗರೀಕತೆಯ ಮೇಲಿನ ಸಿಟ್ಟು ಎಲ್ಲವೂ ಇಲ್ಲಿದೆ.ಒಟ್ಟಿನಲ್ಲಿ ಒಂದು ಕ್ರೌರ್ಯದ ಮುಖವನ್ನು ಅದರೊಳಗೇ ಎಲ್ಲೋ ಇರುವ ಮಾನವೀಯತೆಯನ್ನು ಹುಡುಕುವಂತೆ ಮಾಡುವುದೇ ಕಥೆಯ ಮೂಲವಸ್ತು ಎನಿಸುತ್ತದೆ.
      
            ಇನ್ನು ಉಳಿದ ಪಾತ್ರಗಳ ಬಗ್ಗೆ ಹೇಳುವಾಗ ನನಗೆ ವೈಯಕ್ತಿಕವಾಗಿ ಆ ಊರಿನ ಒಬ್ಬ ಮಗನನ್ನು ಕಳೆದುಕೊಂಡ ತಾಯಿಯ ಪಾತ್ರ ಅಷ್ಟು ಪರಿಣಾಮಕಾರಿ ಎನಿಸಲಿಲ್ಲ. ಜೊತೆಗೆ  ಕಥೆಯಲ್ಲಿ  ಇನ್ನೂ ಗಂಭೀರನಡತೆಯವನಾಗಿ  ಇರುವಾಗಲೇ ಪ್ರಕಾಶ ರೈ ಪುಟ್ಟಿಯನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ,ಆ ಬದಲಾವಣೆಯ ಹಿಂದಿನ ,ಅವರು ಹೊಸಬರನ್ನು(ಪುಟ್ಟ ಮಗುವನ್ನು) ನಿರಾಕರಿಸುವ ಚಿತ್ರಣ ಯಾಕೋ ಅಷ್ಟಾಗಿ ನೆನಪಿಗೆ ಬರ್ತಾ ಇಲ್ಲ.ಮತ್ತೆ ಸತ್ತ ನಾಯಿಯನ್ನು ಹಿಡಿದ ಬುಟ್ಟಿ ಎಲ್ಲೋ ಅಲ್ಲಾಡಿದ ಹಾಗೇ ಭಾಸವಾಯ್ತು ಗೊತ್ತಿಲ್ಲ,ನನ್ನ ಗ್ರಹಿಕೆಯೇ ತಪ್ಪಿರಬಹುದು.ಇಷ್ಟು ಚಿತ್ರದ ಬಗ್ಗೆ ನನಗನ್ನಿಸಿದ್ದು.ಒಟ್ಟಿನಲ್ಲಿ ಖುಷಿ ಆಯ್ತು,ರೈ-ದತ್ತಣ್ಣರ ಅಭಿನಯಕ್ಕೆ ಚಪ್ಪಾಳೆ ಹೊಡೆಯಲೇ ಬೇಕೆನಿಸಿತು.

            ಕೊನೆಗೆ ಚಿತ್ರ ಮುಗಿಯುತ್ತಿದ್ದಂತೆ,ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದ ಶ್ರೀ ಪ್ರಹ್ಲಾದ್ ಅವರ ಆಗಮನವಾಯಿತು.  ಶೇಷಾದ್ರಿಯವರು ಬರುವುದು ತಡವಾಗುವುದರಿಂದ ಮೊಬೈಲ್ ಫೋನಿನ ಮೂಲಕವೇ ಸಂವಾದ ನಡೆಸಲಾಯಿತು.ಒಂದಿಷ್ಟು ಚಿತ್ರದ ಬಿಡುಗಡೆ,ಅಂಕಿ-ಅಂಶಗಳ ಮೇಲೆ ಮಾತುಕತೆಗಳಾಯಿತು.ಸುಮಾರು ಐದಾರು ಮಂದಿ ಅನಿಸಿಕೆ ವ್ಯಕ್ತಪಡಿಸಿದರು.
ಅದರಲ್ಲಿ ಒಬ್ಬರು ಕೇಳಿದ ಪ್ರಶ್ನೆ-ಉತ್ತರ ನನಗೆ ಇಷ್ಟವಾಯ್ತು.ಅದನ್ನೇ ಹಂಚಿಕೊಳ್ಳುತ್ತಿದ್ದೇನೆ ನೋಡಿ.

ಪ್ರಶ್ನೆ : ಸಾರ್ ನೀವು ಯಾಕೆ ಮಾಸ್ ನಟರನ್ನು ಹಾಕಿಕೊಂಡು ಸಿನೆಮಾ ಮಾಡುವುದಿಲ್ಲ ??ಇದರಿಂದ ಜಾಸ್ತಿ ಜನರನ್ನು ತಲುಪಬಹುದಲ್ಲ?
ಉತ್ತರ : ನಾನು ನಾಯಕನಿಗಾಗಿ  ಕಥೆ ಮಾಡುವುದಿಲ್ಲ,ಕಥೆಯೇ ನಾಯಕ .ಕಥೆಗೆ ಸೂಕ್ತವಾದ ನಟರು ತಾವಾಗಿಯೇ ಸಹಕರಿಸಿದರೆ ಅವರನ್ನಿಟ್ಟುಕೊಂಡು ಚಿತ್ರಿಸುತ್ತೇವೆ.ಇನ್ನು ಪ್ರೇಕ್ಷಕರನ್ನು ಕರೆತರುವ ಸಂಗತಿ.ಕನ್ನಡದ ಪ್ರಭುದ್ಧ ಪ್ರೇಕ್ಷಕ ಚಿತ್ರಮಂದಿರಗಳಿಗೆ ಬರುವುದು ಕಡಿಮೆಯಾಗಿದ್ದೆ ಚಿತ್ರಗಳ ಗುಣಮಟ್ಟವೂ ಕಡಿಮೆಯಾಗುತ್ತಿರಲು ಕಾರಣ.ಹಾಗಾಗಿ ಎಲ್ಲರನ್ನೂ ತಲುಪಲು ಸಾಧ್ಯವಾಗಿತ್ತಿಲ್ಲ.ಕಾಲೇಜು ವಿದ್ಯಾರ್ಥಿಗಳಿಗೆ ಇವುಗಳನ್ನು  ಹೆಚ್ಚು ಹೆಚ್ಚು ತಲುಪಿಸುವ ಬಗ್ಗೆ ಯೋಚಿಸುತ್ತಿದ್ದೇವೆ.

ಅಬ್ಬಾ "ಕನ್ನಡದ ಪ್ರಭುದ್ಧ ಪ್ರೇಕ್ಷಕ ಚಿತ್ರಮಂದಿರಗಳಿಗೆ ಬರುವುದು ............." ನಿಜ ಅನಿಸಿತು.

 ಪ್ರಹ್ಲಾದ್ ಅವರು ಚಿತ್ರೀಕರಣದ ಸಂದರ್ಭದ ಕೆಲ ಘಟನೆಗಳನ್ನೂ ಮೆಲಕು ಹಾಕಿದರು.ಪ್ರಕಾಶ್ ರೈ ಕೇವಲ ಒಂದು ರೂಪಾಯಿ ಸಂಭಾವನೆ ಪಡೆದು ನಟಿಸಿದ್ದನ್ನು ನೆನಪಿಸಿಕೊಂಡರು.ಅವರ ಸರಳತೆಯನ್ನೂ ಹೇಳಿದರು.ಕಥೆಗೆ ಸ್ಫೂರ್ತಿಯಾದ ಘಟನೆಗಳನ್ನು ಮುಕ್ತವಾಗಿ ಹಂಚಿಕೊಂಡರು.ತಾವು ಕಥೆ-ಚಿತ್ರಕಥೆಯನ್ನು ಜೊತೆಜೊತೆಗೆ ಬರೆದಿದ್ದನ್ನೂ ತಿಳಿಸಿದರು.

 ಕಾರ್ಯಕ್ರಮದ ಕೊನೆಯಲ್ಲಿ  ,ಮುಂದಿನ ಪ್ರದರ್ಶನ ದಿನಾಂಕ ೮-೨-೧೪,ಸಂಜೆ ೬:೩೦ ಕ್ಕೆ .
ಚಿತ್ರ: ಗಿರೀಶ್ ಕಾಸರವಳ್ಳಿಯವರ "ಕ್ರೌರ್ಯ"ಎಂದೂ  ತಿಳಿಸಲಾಯಿತು.ನೀವು ಬರ್ತಿರಾ ಅಲ್ವಾ??


ಹಮ್.. ಒಟ್ಟಿನಲ್ಲಿ ಮಾಸದ ಸಿನಿಮಾ ಕಾರ್ಯಕ್ರಮಕ್ಕೆ ಹೋಗಿದ್ದು ಬಹಳ ತೃಪ್ತಿಕೊಟ್ಟಿತು..
ಪರೀಕ್ಷೆಗೆ ಇನ್ನು ಬೆರಳಣಿಕೆಯಷ್ಟೇ ದಿನ ಇದೆ ಎಂದು ನೆನಪಾದಾಗ ನಾಳೆಯಿಂದ ಖಂಡಿತ ಓದುತ್ತೇನೆ ಎನ್ನುವ ಸಿದ್ಧ ಉತ್ತರವೂ ಹೊರಟಿತು. :D..
ಮುಂದಿನದು ನಿಮ್ಮ ಮುಂದಿದೆ ನೋಡಿ :).
ಧನ್ಯವಾದಗಳು ನಮಸ್ತೆ.

Tuesday, January 14, 2014

ಸಂಕ್ರಮಣ



ನೋಡಬೇಕಿದೆ ಒಮ್ಮೆ ನಡೆದ ಹಾದಿಯನು
ಸಾಗಬೇಕಿದೆ ಬಿಟ್ಟು ಅಹಂಮಿನ ಪೊರೆಯನು

ಸುಗ್ಗಿಹುಗ್ಗಿಯ ಮಾಡಿ,ಶಾರದೆಯು ಕರೆಯುತಿರೆ
ಬರುತಿಹನು ರವಿ,ಪಥಪಲ್ಲಟಗೈದು ಹಬ್ಬದೂಟಕೆಂದು
ಕಾಲಧೂಳನು ನೆಕ್ಕಿ,ಸ್ವರ್ಗಪುಣ್ಯವ ಪಡೆದು
ಸಾಗಿಹುದು ನದಿಮೀನು ಮಕರಗಂಬದ ಚೆಲುವನೋಟಕೆಂದು|ನೋ|

ಅಂದದೆಲೆಗಳನೆಲ್ಲ ಬಿಟ್ಟು,ಕನಸಕಸ್ತ್ರವನು ಹೊತ್ತು 
ನಿಂತಿಹುದು ಮಾಮರವು ಫಲಬಲ ಸಾರ್ಥಕ್ಯದಾ ಗುರಿತೊಟ್ಟು
ಕಿಚ್ಚು ಹಾಯುವ ಕೆಚ್ಚು,ಜೆಲ್ಲಿಕಟ್ಟಿನ ಕಸುವರಸಿ
ಕೋಡೆತ್ತಿಹುದು ಜೋಡೆತ್ತು,ಡೊಣಕಲಿಗೊಂದು ಗುದ್ದುಕೊಟ್ಟು|ನೋ|

ಬೇರಿನಾಲವ ಮರೆತು ಬಲುದೂರ ನೆರೆದಿರುವ
ದಿವಾಚರಕೆ ತಿರುಗಿಂದು ತವರಿನೆಡೆ ನಡೆತೃಷೆಯು
ಬೆಳೆದಪೈರನು ಕೊಯ್ದು,ಗೋಣಿಚೀಲದಿ ಒಯ್ದ
ಗೆದ್ದೆಬಯಲಲಿ ನಾಳೆ,ಮಗೆಬಳ್ಳಿ ಹಸಿರ್ಹಸೆಯು |ನೋ|


ನೋಡಬೇಕಿದೆ ಒಮ್ಮೆ ನಡೆದ ಹಾದಿಯನು
ಸಾಗಬೇಕಿದೆ ಬಿಟ್ಟು ಬೇಡದಹಂಮಿನ ಪೊರೆಯನು
ಏಕೆಂದರಿದು ಸಂಕ್ರಮಣ ಕಾಲ,ಇದು ಸಂಕ್ರಮಣಕಾಲ

--------------------------------------------------------------------

*ಶಬ್ದಾರ್ಥ:(ನನಗೆ ತಿಳಿದಂತೆ ,ತಪ್ಪಿದ್ದರೆ ತಿಳಿಸಿ)

ಮಕರಗಂಬ=ಮಕರರಾಶಿಯ ಪ್ರತೀಕವಾದ ಕಂಬ(ಪ್ರತಿರಾಶಿಗೂ ಒಂದೊಂದು ಕಂಬ ಶಾರದೆಯ ಮಡಿಲಲ್ಲಿ)ಜೆಲ್ಲಿಕಟ್ಟು=ಒಂದು ಬಗೆಯ ಎತ್ತುಗಳ ಪಂದ್ಯ,ಡೊಣಕಲು=ಕೊಟ್ಟಿಗೆಯಲ್ಲಿ ದನಕರುಗಳನ್ನು ಕಟ್ಟುವ ಜಾಗ(ಬೇಲಿಯ ಗೇಟು ಎಂದೂ ಬಳಕೆಯಲ್ಲಿದೆಯಂತೆ),ಮಗೆಬಳ್ಳಿ=ಒಂದು ಬಗೆಯ ತರಕಾರಿ,ಮಗೆಕಾಯಿಯ ಬಳ್ಳಿ,ಗೆದ್ದೆ=ಗದ್ದೆ,ಹಸಿರ್ಹಸೆ=ಹಸಿರುಹಸೆ,ದಿವಾಚರ=ಆಕಾಶದಲ್ಲಿ ಚಲಿಸುವುದು,ಪಕ್ಷಿಗಳು ಎಂಬ ಅರ್ಥದಲ್ಲಿ   (ಬೆಳಕಿನಲ್ಲಿ ಓಡಾಡುವ ಜೀವಿಗಳು ಎಂಬ ಅರ್ಥವೂ ಇದೆ)

 

Monday, December 16, 2013

ಚೀಟಿ

ನಮಸ್ಕಾರ ಎಲ್ರಿಗೂ...
ಹೆಂಗಿದೀರಿ ಎಲ್ರೂ ???? ಅರಾಮಲ್ವಾ ???
ಇದೊಂದು ಪುಟ್ಟ ಕವಿತೆ....

 ಬ್ಲಾಗ್ ಬರಹವೊಂದನ್ನು ಓದಿ ಕಮೆಂಟಿಸಲು ಬರೆದಿದ್ದು ಹಾಗೇ ಕವನದ ರೂಪ ತಳೆಯಿತು,...
ಮರುದಿನ ಚಟ ತಡೆಯಲಾರದೆ ಫೇಸ್ ಬುಕ್ಕಿಗೆ ಹಾಕಿದೆ...
ಇವತ್ತು ಹಿರಿಯರೊಬ್ಬರ ಪ್ರೀತಿಯ ಮಾತುಗಳಿಂದ ಬ್ಲಾಗಿಗೆ ಹಾಕುತ್ತಿದ್ದೇನೆ....

 ದಯವಿಟ್ಟು ನೋಡಿ,ಅನಿಸಿಕೆ ಹೇಳಿ...
ಧನ್ಯವಾದ :)

ಚೀಟಿ 
====================================== 


ಅಂದು ಬರೆದು ಬಾರದ ಚೀಟಿ,
ಇಂದು ಬಂದಿದೆ ಕಣೆ ಹುಡುಗಿ...
ಒಂದಿಷ್ಟು ದೀರ್ಘವಿರಾಮಕೊಟ್ಟು ,
ನಾ ಬಿಟ್ಟ ಕಣ್ಣೀರಿನಂಗಿ ತೊಟ್ಟು..

ಬೆಟ್ಟು ಬಿದ್ದಿಲ್ಲ ಕಾಲಾಂತರದಲಿ,
ಭಾವವಿನ್ನೂ ಹಸಿಯಾಗಿದೆ,
ಆದರೆ,ವಿರಹದಕಾವಿಗೋ,ಕೈಸಿಗದನೋವಿಗೂ
ಅಕ್ಷರಗಳುರಿದು ಕರಿಮಸಿಯಾಗಿದೆ...

ನಿನ್ನಪೆನ್ನಿನ ಶಾಯಿಯ ಸ್ಪರ್ಶಮಾತ್ರದಲೆ,
ವರ್ಣಮಾಲೆಯೆದ್ದು ನಲಿದಾಡಿದೆ..
ಆದರೆ,ಬರಿಗಣ್ಣುಗಳದನು ಗುರುತಿಸಲಾಗದೇ
ಚಾಲೀಸಿನ ಚಸ್ಮಕ್ಕೆ ತಡಕಾಡಿದೆ....

ಕಟ್ಟಿಟ್ಟ ಕನಸಹೊತ್ತಿಗೆಗಳೆಲ್ಲಾ
ಈಗ ಒಂದೊಂದೇ ಬಿಚ್ಚಿಕೊಳ್ಳುತ್ತಿವೆ...
ನಿನ್ನೆಪತ್ರಿಕೆಯನಿಂದು ಮಾರಲಾಗಂದೆಂಬುದನರಿತು
ಮತ್ತೆ ಸದ್ದಿಲ್ಲದೇ ಮುಡುಗಿ ಮಡಚಿಕೊಳ್ಳುತ್ತಿವೆ...

ನಿನ್ನಪಾತ್ರವನೂ ಹೊಲಿದು ಬರೆದಿದ್ದ ನಾಟಕದಿ,
ನೀನಿಲ್ಲ,ನಾನೊಬ್ಬನೇ ಹಳೆಯ ಪಾತ್ರವಾಗಿದ್ದೇನೆ..
ಹೊಸ ಮುಖಗಳೊಡಗೂಡಿ ಕಥೆಹೇಳುತ್ತಾ,
ಅವರಿಗಾಸರೆಯಾಗುವ ಸಂಘಸೂತ್ರಧಾರನಾಗಿದ್ದೇನೆ...

ಅಂದು ಬರೆದು ಬಾರದ ಚೀಟಿ,ಇಂದು ಬಂದಿದೆ .....
ನನ್ನೆಲ್ಲ ಬಣ್ಣ,ಪಗಡಿಯ ಕಳಚಿ ,
ಚೌಕಿಯಂಚಿನ ಮನುಜಗನ್ನಡಿಯೆದುರು ತಂದು ನಿಲ್ಲಿಸಿದೆ..

===========================================================

ಅಹ್... ಏನೋ ಗೊತ್ತಿಲ್ಲ...
ಪ್ರತಿಸಲ ಹೇಳುತ್ತಿದ್ದರೆ ಅತೀ ಅನ್ನಿಸಬಹುದೇನೋ..ಆದ್ರೆ ನನ್ನಲ್ಲೊಂದಿಷ್ಟು ಗೊಂದಲ ಇರೋದಂತೂ ನಿಜ...
ಇದನ್ನೇ ನಿಮ್ಮೆದುರು ಹಂಚಿಕೊಳ್ಳುತ್ತಿದ್ದೇನೆ....

ಈ ಕವಿತೆ ನನ್ನ ಮಾಮೂಲಿ ಶೈಲಿಯಲ್ಲಿಲ್ಲ...
ಹೊಸ ಶಬ್ಧ,ಅಲ್ಲಲ್ಲಿ ಒಂದಿಷ್ಟು ಪ್ರಾಸಗಳು..
ಅದರಲ್ಲೇ ಎನೇನೋ ಪ್ರಯೋಗ,ಪ್ರತಿಮೆಗಳು ಹೀಗೆ ಇವುಗಳ ಬಗ್ಗೆ ಜಾಸ್ತಿ ಯೋಚಿಸಿ ಬರೆದದ್ದಲ್ಲ...

ಎನೋ ಇವುಗಳಿಗೆ ಹೋಲಿಸಿದರೆ ಅವಕ್ಕೆ ಸ್ವಲ್ಪ ಜಾಸ್ತಿೇ ಸಮಯ ಬೇಕು...
ಸುಮಾರು ಹುಡುಕಾಡಿ ತಡಕಾಡಿ ಗೀಚಬೇಕು..(ಎಲ್ ಬೋರ್ಡಲ್ವಾ ಅದ್ಕೆ :P)
ಒಂದು ಕವನವನ್ನು ಬಿಡಿಸಿ ಬಿಡಿಸಿ ತಿಳಿದು ಅದರ ಭಾವವನ್ನು ಪೂರ್ತಿ ತಿಳಿದಾಗಿನ ಖುಷಿಯ ಅನುಭವ ನನಗಿಷ್ಟ...ಬರಿಯ ನೇರವಾಗಿ ಅರ್ಥವಾಗುವ ಸಾಲುಗಳಿಗಿಂತ ಅವುಗಳಲ್ಲೇನೋ ಒಂದು ಆನಂದವಿದೆ... 
ಬಹುಷಃ ಅದೇ ನನ್ನ ಕವನಗಳಲ್ಲೂ ಬಂದಿದೆಯೇನೋ....ಗೊತ್ತಿಲ್ಲ... 
  ಜೊತೆಗೆ ಹೊಸ ಹೊಸ ಶಬ್ಧಗಳನ್ನು ಎಲ್ಲರಿಗೂ ಪರಿಚಯಿಸುವುದರ ಜೊತೆಗೆ ,ಆ ಪದದ ಬಳಕೆಯ ಸಂದರ್ಭ ಚೆನ್ನಾಗಿ ತಿಳಿದಿರುವುದರಿಂದ ಅದನ್ನು ಬಳಸಲು ಸುಲಭ ಎನ್ನುವ ಯೋಚನೆ ನನ್ನದು...ಗೊತ್ತಿಲ್ಲ...

ಹಮ್... ಆದರೆ ಬರೀ ಅವುಗಳ ಯೋಚನೆಯಲ್ಲಿ ಸುಲಭವಾಗಿ ಅರ್ಥವಾದಾಗಿನ ಸಹಜ ಸಂತೃಪ್ತಿಗೆ ಭಂಗ ತರುತ್ತಿದ್ದೇನಾ?? ಬರೀ ಅಲಂಕಾರದ ಗೋಜಲಿನಲ್ಲೇ ರಚನೆಯನ್ನು ಜಡಕು ಮಾಡ್ತಾ ಇದೀನಾ ??ಗೊತ್ತಿಲ್ಲ...ಒಂದು ಸಲ ಬರೀ ಶಬ್ಧಗಳ ಹುಡುಕಾಟದಲ್ಲೇ,ಅವುಗಳ ಬಳಕೆ ಸರಿಕಾಣದೇ ಭಾವದ ಓಘವನ್ನು ಕಳೆದುಕೊಂಡಂತೆನೂ ಅನಿಸಿದ್ದಿದೆ...ಬರೀ ಪದ,ಪ್ರಾಸನೇ ಕಣ್ಣಿಗೆ ಬಿದ್ದು ಮುಂದಿನ ಭಾವದ ಹರಿವು ಅಲ್ಲೇ ನಿಂತಿದ್ದೂ ಇದೆ...ಮತ್ತೆ ಯಾವಾಗಲೋ ಬರೀಬೇಕು ಅನ್ನಿಸಿದರೂ ಶುರುಮಾಡಿದಾಗಿನದಕ್ಕೂ ಮುಂದಿನಕ್ಕೂ ಹೊಂದಾಣಿಕೆ ಮಾಡುವುದು ಕಷ್ಟವಾದದ್ದೂ ಇದೆ...

ಹಾಗೆಲ್ಲಾ ನೋಡಿದರೆ ಹೊಳೆದ ವಿಚಾರಕ್ಕೆ ಏನೋ ಒಂದು ಸಿಕ್ಕ ಕಾವ್ಯದಲ್ಲಿ ಬಳಸುವ ಪದಗಳ ತರಹದ್ದನ್ನು ಬಳಸಿಬಿಟ್ಟರೆ ಕವಿತೆ ಅನ್ನಿಸಿಕೊಂಡುಬಿಡುತ್ತದೆ ಅನ್ನಿಸುತ್ತದೆ...ಆದರೆ ಮತ್ತೆ ಅರೆಚಣದಲ್ಲೇ ಇದನ್ನು ಯಾವುದಾದರೂ ಪ್ರಬಂಧ,ಲೇಖನದಲ್ಲೇ ಬಿಡಿಸಿ ಹೇಳಬಹುದಿತ್ತಲ್ಲಾ ,ಕವಿತೆಗಳೇ ಬೇಕಿತ್ತೇ???ಆಕಾರ,ಪ್ರಾಸಗಳಿಲ್ಲದಿದ್ದರೆ ಅದನ್ನು ಬರೆದದ್ದೇಕೆ ಅನ್ನಿಸಿಬಿಡುತ್ತದೆ... ಕವಿತೆ ಎಂಬುದು ಒಗಟಿನಂತೆ,ಅದನ್ನು ಬಿಡಿಸಿ ತಿಂದಾಗಲೇ ಸ್ವಾದ ತಿಳಿಯುವುದು ಎಂಬ ನನಗಿಷ್ಟದ ಮಾತು ಗುಯ್ಯ್ಂ ಗುಡುತ್ತದೆ....

ನಿಜಾ ಹೇಳ್ಬೇಕು ಅಂದ್ರೆ, ಕವನವನ್ನು ಹೇಗೆ ಬರೀಬೇಕು ಅನ್ನೋದೇ ಒಂಥರ ತಿಳಿದೇ ಇದ್ದಂಗೆ ಆಗಿದೆ.... :(
ದಯವಿಟ್ಟು ನಿಮ್ಮ ಅಮೂಲ್ಯ ಸಲಹೆ ನೀಡಿ,ನನಗೊಂದು ದಾರಿ ತೋರಿಸಿ...
ಧನ್ಯವಾದ 

Saturday, November 2, 2013

ನಾಳೆ ದೀಪಾವಳಿ...



ನಮಸ್ಕಾರ ಎಲ್ರಿಗೂ...ರಾಜ್ಯೋತ್ಸವ ಹಾಗೂ  ದೀಪಾವಳಿಯ  ಶುಭಾಷಯಗಳು..
ನಿನ್ನೆ ರಾತ್ರಿ ಬರೆದ ಸಾಲುಗಳಿವು....ಕವನ ಅನ್ನಬೇಕೋ ಬಿಡ್ಬೇಕೋ ಗೊತ್ತಾಗ್ತಾ ಇಲ್ಲ...
ಸುಮಾರು ದಿನದಿಂದ ಒಂದೆರಡು ಅರ್ಧಮರ್ಧ ಕವನಗಳನ್ನು ಪೂರ್ತಿಮಾಡಲಾಗದೇ ಹೆಣಗಾಡುತ್ತಿದ್ದೆ....
ಇರ್ಲಿ, ಬರ್ಯಕ್ ಅಂತೂ ಆಗ್ತಿಲ್ಲಾ ಇನ್ನೇನು ಮಾಡದು ಎಂ.ಇ ಮಾಡ್ತಾ ಇರೋದಾದ್ರೂ ಸಾರ್ಥಕವಾಗ್ಲಿ ಅಂದ್ಕೊಂಡು Digital Image Processing ಪುಸ್ತಕ ಹಿಡಿದುಕೊಂಡಿದ್ದೆ..ಅದರಲ್ಲಿರುವುದು ಅರ್ಥವಾಗದೇ ಆ ಕಡೆ ಈ ಕಡೆ ಓಡಾಡಿಕೊಂಡಿದ್ದೆ..ಟೆರೇಸಿನ ಮೇಲೆ ಹೋದವನಿಗೆ  ನನ್ನ ರೂಮಿನ ಮುಂದಿನ  ಮನೆಯ ಸಾಲಿನಲ್ಲಿ ದೂರದಲ್ಲಿ  ಒಬ್ಬಳು ಹುಡುಗಿ ರಾತ್ರಿ ರಂಗೋಲಿ ಹಾಕುತ್ತಿರುವುದನ್ನಾ ನೋಡಿದೆ...ನಂಗೆ ಇದು ಹೊಸಾದು ಅನಿಸ್ತು...ನಮ್ಮನೆಲಿ ಎಲ್ಲಾ ಸಾಧಾರಣ ಬೆಳಿಗ್ಗೆ ಹೊತ್ತೇ ಹಾಕದು...
ಇನ್ನೇನು ವಯಸ್ಸಿನ ತಪ್ಪಿರ್ಬೇಕು ಒಂದೆರಡು ಸಾಲು ಮೂಡಿತು...
ಕೆಳಗೆ ಬಂದು ಬರೆಯುತ್ತಾ ಹೋದೆ...ಉಳಿದದ್ದು ನಿಮ್ಮ ಮುಂದಿದೆ...
ಎಂದಿನಂತೆ ಓದಿ,ಅನಿಸಿಕೆ ತಿಳಿಸಿ :) ...ಬೆಳೆಯಲು ಸಹಕರಿಸಿ...






ನಾಳೆ ದೀಪಾವಳಿ,ನನ್ನವಳಿಂದು ರಂಗವಲ್ಲಿಯಿಕ್ಕುತ್ತಿದ್ದಾಳೆ..
ತೊಳೆದ ಹಾದಿಯೊಳು,ತಿಳಿಯದ ಒಗಟಿನ ಚುಕ್ಕಿಯಿಕ್ಕುತ್ತಿದ್ದಾಳೆ


ದಿನವೂ ನಾವಿಬ್ಬರು  ಓಡಾಡುವ ಹಾದಿಯದು
ಅವಳೇ ಮುಂದೆ ಎಂದಿಗೂ,ನಾ ಬೇಗ ಬಂದಿದ್ದರೂ
ಮುನಿಸಿನ ಕೋಳಿಜುಟ್ಟದಲೆ ಕರೆಯುವಳು ಎನ್ನ
ಬಹುಳದ ಬಳಿಕದ ಬೆಳಕಿನಂತೆ,ನಾ ಅಲ್ಲೆ ಎಲ್ಲೋ ನಿಂತಿದ್ದರೂ


ಓಡಾಟದ ಒಡನಾಟದಿ ಗೌಜಿಲ್ಲ,ನಂಬರವಿಲ್ಲ
ಬರಿಭರವಸೆಯ ಮೌನದಿ ನಡೆದ  ಮೈಲಿಮೈಲಿ ದೂರ,ಅರ್ಧಫರ್ಲಾಂಗಿನಂತಿದೆ
ಚಡಪಡಿಕೆಯ ಬಂಡಿಯೊಳು ಹೊಯ್ದಾಡಿದ ಛಂದದ ಬಿಸಿನೆನಪು
ಇಂದು ಅವಳುಟ್ಟ ನಿಗಿನಿಗಿ  ನವಿಲುಗರಿ ರೇಷಿಮೆಯಲಂಗದಂತಿದೆ


ಕಾಯಿಹುಳಿಯದು ಮಾಗಿ ಹಣ್ಣಸವಿಯುಕ್ಕುವ ಪರ್ವದಿ
ಎದೆಯೊಳು ಅಸೆಅಂಬಿಕ್ಕಿ ಕುಕ್ಕುತಿಹ ಹೆಜ್ಜೇನ ಪಡೆಯಿತ್ತು
ದುಂಡಗಿನ ಮೂರು ಪದಗಳ ಬಾಲತಿರುವಿ ಕೆಂಪಟವ ಬೀಸಲು
ಆ ಸ್ನೇಹ ಸಂತ್ರಸ್ತರ ದಾವೆಯಂಜಿಕೆಯ ತಡೆಯಿತ್ತು


ಮೂರುಕಾಲಿನ ಮೇಜು ಹರಕು ಚಾಪೆಯ ಬದುಕು
ಸಾಕೆನಿಸಿ ಕಡೆಗೆ ತೆರೆದೆ ನಾ ಕನವರಿಕೆಯ ಕದಗಳನು
ದಾರಸೂಜಿಯ ತೆರದಿ ಹೊಲಿಯಬಯಸುವೆ ನಾಳೆಯ
ನೂಕು ಬೇಗ ಕಿವಿಯೊಳು ನೀ,ಹಸಿನಾಚಿಕೆ ಪದಗಳನು


ನಾಳೆ ದೀಪಾವಳಿ,ನನ್ನವಳಿಂದು ರಂಗವಲ್ಲಿಯಿಕ್ಕುತ್ತಿದ್ದಾಳೆ..
ತೊಳೆದ ಹಾದಿಯೊಳು,ತಿಳಿಯದ ಒಗಟಿನ ಚುಕ್ಕಿಯಿಕ್ಕುತ್ತಿದ್ದಾಳೆ

-----------------------------------------------------------------------------------------------------------
ಶಬ್ದಾರ್ಥ :ಬಹುಳ=ಕೃಷ್ಣ ಪಕ್ಷ,ಗೌಜು=ಗದ್ದಲ,ನಂಬರ=ಜಗಳ
 

ಮತ್ತೊಮ್ಮೆ ಕವನ ವಾಚಿಸುವ ಪುಟ್ಟ ಪ್ರಯತ್ನ...ಸಮಯ ಮಾಡಿಕೊಂಡು  ಅದನ್ನೂ ಕೇಳಿ :) ನಿಮ್ಮ ಅನಿಸಿಕೆನೂ ದಯವಿಟ್ಟು ಹೇಳಿ :)
ನಮಸ್ತೆ :)





 

Saturday, October 19, 2013

ಹುಣ್ಣಿಮೆಯ ತಡರಾತ್ರಿ.....(ಕಟ್ಟುಕಟ್ಟದ ಶಬ್ಧಗಳ ಜೊತೆಗೊಂದು ಹುಚ್ಚುಪ್ರಯೋಗ )


ನಮಸ್ಕಾರ ಎಲ್ರಿಗೂ,
ಅದೇನೋ ಗೊತ್ತಿಲ್ಲ...ನಿನ್ನೆ ರಾತ್ರಿ ಹಲ್ಲುತಿಕ್ಕಲು ಹೋದವನಿಗೆ ರಾತ್ರಿಯ ಆಗಸದಲ್ಲಿ ಚಂದಿರ ಕಂಡ..
ಉಳಿದ ದಿನಕ್ಕಿಂತ ಯಾಕೋ ವಿಶೇಷವಾಗಿ ಕಂಡ..
ಏನೂ ಬರೆಯಲಿಲ್ಲವಲ್ಲಾ ಎಂದು ಅಂದುಕೊಳ್ಳುತ್ತಿದ್ದವನಿಗೇಕೋ ಈ ಕೆಳಗಿನ ಬರಹದ ಎರಡು ಸಾಲುಗಳು ಹಲ್ಲುತಿಕ್ಕಿ ಮುಗಿಸುವುದರೊಳಗಾಗಿ ಹೊಳೆದುಬಿಟ್ಟವು..
ಏನೋ ಗೊತ್ತಿಲ್ಲ...ಸುಮ್ಮನೆ ಅದನ್ನು ಚಾಟಿನ ಮಧ್ಯೆ ಮೆಸ್ಸೆಜಿಸಿ ನಗುಮೊಗದ ಸ್ನೇಹಿತೆ ಲಹರಿಯೊಡನೆ  ಹಂಚಿಕೊಂಡೆ..

"ಚೆನಾಗಿದೆ ಕಣೋ ಮಾರಾಯಾ..ಅದ್ ಹೆಂಗ್ ಬರಿತೀಯಾ ಇದ್ನೆಲ್ಲಾ "ಅಂದಳು...
ಕೊಂಬು ಬಂದಂಗಾಯ್ತು ನೋಡಿ,ಏನೋ ಅನಿಸಿದ ಭಾವವನ್ನೆಲ್ಲಾ ಬರಹಕ್ಕಿಳಿಸಿದೆ...ಉಳಿದದ್ದು ನಿಮ್ಮ ಮುಂದೆ..

 ಇನ್ನು ಇದನ್ನಾ ಹಂಗೆ ಲೇಖನದ ಥರಬರ್ಯಕೆ ನಂಗ್ ಬರ್ಲಿಲ್ಲ....
ಇದಕ್ಕೆ  ಕವನ ಅಂತಾ ಹೇಳಕೆ ನನ್ನೊಳಗಿನ ಒಂದು  ಮನಸ್ಸು ಒಪ್ತಾ ಇಲ್ಲ...
ಹಂಗಂತಾ ಇದ್ನಾ ನಿಮ್ಮ ಜೊತೆ ಹಂಚ್ಕೊಳ್ದೇ ಇರಕ್ಕೆ ಇದನ್ನು ಬರೆದ ಮನಸ್ಸು ಬಿಡ್ತಾ ಇಲ್ಲ..

ಇಬ್ಬರಿಗೂ ಸಂಧಾನ ಮಾಡ್ಸೋ ಪ್ರಯತ್ನ ಇದು..ದಯವಿಟ್ಟು ಬೇಜಾರಾಗ್ಬೇಡಿ...
ಭಾವವ ಬರಹಕ್ಕಿಳಿಸಿದ ಸಂಸ್ಕರಿಸದ ಸಾಲುಗಳಿವು...
ಬೇಗ ಓದಿ,ಹೇಂಗಿದೆ ಹೇಳಿ..ಜಾಸ್ತಿ ಇಟ್ರೆ ಕೆಟ್ಟೋಗತ್ತೆ !!!





  (ನನ್ನ ಮೊಬೈಲಿನ ಮಸುಬು ಕ್ಯಾಮರಾ+ಫೋಟೋಸ್ಕೇಪಿನ ಕೃಪೆ )



ಹುಣ್ಣಿಮೆಯ ತಡರಾತ್ರಿ
ಬರೆದ ಸಾಲುಗಳಿವು ಕಣೆ ಹುಡುಗಿ,
ನಿನ್ನ ಸಂಗದ ನಶೆಯಲ್ಲಿ,
ಅಳಿದುಳಿದ ನೆನಪುಗಳ ಬೆಳಕಿನ ಕತ್ತಲೆಯಲ್ಲಿ..

ಅವತ್ತು ಅಮಾವಾಸ್ಯೆಯಿರಬೇಕು ನೀ ಕಂಡ ದಿನ ಎನಗೆ
ಬಾಕಿಉಳಿದಿದ್ದ ಕನಸಚುಕ್ಕಿಗಳೆಲ್ಲಾ ಏಕೋ ಮಾಯವಾಗಿದ್ದವು,
ಕಣ್ಣ ಮುಂದಿದ್ದುದೊಂದೆ ಕತ್ತಲೆ....
ನಿನ್ನ ಪಿಸುಮಾತೊಂದೆ ಎದೆಯೊಳು ಮಾರ್ದನಿಸುವ ಕತ್ತಲೆ....

ಆ ರಾತ್ರಿಯಲು ಒಂದು ಸೊಗಸಿತ್ತು...
ತುಂಟಮಾತಿನ ಕಚಕುಳಿಯಿತ್ತು...
ತಡೆಯಿಲ್ಲದೆ ಹರಿವ ಮಾತಿನ ಸರಪಳಿಯಿತ್ತು...
ಕಾಲೆಳೆದಾಗ ನೀ ಎನ್ನ ಬಲಭುಜವ ಹೊಡೆವ ಚಂದದ ಸಪ್ಪಳವಿತ್ತು..
ನೀಯನ್ನ ತೀರ ರೇಗಿಸಿದಾಗಿನ ಮಾತಿಲ್ಲದ ಮೌನದ ಬಿಸಿಯುಸಿರ ಛಳವಿತ್ತು..

ಅಂದು ಕತ್ತಲೆಯಿತ್ತು...ಕತ್ತಲೆಯೊಳಗೆಲ್ಲ ಇತ್ತು...

ಹುಣ್ಣಿಮೆಯ ತಡರಾತ್ರಿ
ಬರೆದ ಸಾಲುಗಳಿವು ಕಣೆ ಹುಡುಗಿ,
ನಿನ್ನ ಸಂಗದ ನಶೆಯಲ್ಲಿ,
ಅಳಿದುಳಿದ ನೆನಪುಗಳ ಬೆಳಕಿನ ಕತ್ತಲೆಯಲ್ಲಿ..

ಇಂದು ಹುಣ್ಣಿಮೆ..ನೀನಿಲ್ಲದ ಒಂಟಿ ಬದುಕಿನ ಹುಣ್ಣಿಮೆ..
ಜೇಬತುಂಬಿಬಂದ ಕನಸುಗಳು ನೋಡುತ್ತಿವೆ ಎನ್ನ ಕೆಕ್ಕರಿಸಿಕೊಂಡು..
ಜೀವಹಿಂಡುವ ಬಿಳಿಯಚಂದ್ರ ತಲೆತಿನ್ನುತಿಹ ಬಂದುವಕ್ಕರಿಸಿಕೊಂಡು..
ಈಗ ಎತ್ತನೋಡಿದರತ್ತಲಲ್ಲೆಲ್ಲ ಬೆಳಕು..
ಚಿತ್ತಕಲಕುವ ನೆನಪೆಲ್ಲವ ಕೆದಕಿ,ಉಸಿರುಗಟ್ಟಿಸುವ ಮಬ್ಬು ಬೆಳಕು...

ಏನಿದೆ ಈ ಬೆಳಕಲ್ಲಿ??ಏನಿದೆ ಈ ಬೆಳಕಲ್ಲಿ??

ಹಾಳುಗರಿವ ಕೆಂಪುಕುನ್ನಿಯ ರಾತ್ರಿರಾಗಕೆ ,
ಬರುತಿದ್ದ ಅರೆಬರೆ ನಿದ್ದೆಯೂ ಹತ್ತುತಿಲ್ಲ..
ಭಗಭಗನೆ ಹೊತ್ತುರಿದು ನಿರಾಸೆಯ ಮರಳುಗಾಡಿಗೆಕೊಂಡೊಯ್ಯುತಿದ್ದ
 ಹತಾಶೆಯ ಹಾಳುಬೆಂಕಿಯೂ ಇಂದು ಕತ್ತುತಿಲ್ಲ...
ಎಲ್ಲೆಲ್ಲೂ ಬರಿಕೆಂಪುದೀಪಗಳು ಕಣೆ ಹುಡುಗಿ,
ಕಣ್ಣಮುಚ್ಚಿದೊಡೆ ಬಣ್ಣಬಣ್ಣದ ಕನಸುಗಳ ಸುಳಿವಿಲ್ಲ..
ಬರಡುಬಿದ್ದಿಹ ಈ ಎದೆಯೊಳಗೆ 
ಒಂದಿನಿತು ಬದುಕ ಸಾಗಿಸುವ ಸ್ಪೂರ್ತಿಯ ಸೆಲೆಯಿಲ್ಲ..

ಇಂದು ನೀನಿಲ್ಲ...ಈ ಬೆಳಕಲ್ಲು ಏನಿಲ್ಲ...

ಹುಣ್ಣಿಮೆಯ ತಡರಾತ್ರಿ
ಬರೆದ ಸಾಲುಗಳಿವು ಕಣೆ ಹುಡುಗಿ,
ನಿನ್ನ ಸಂಗದ ನಶೆಯಲ್ಲಿ,
ಅಳಿದುಳಿದ ನೆನಪುಗಳ ಬೆಳಕಿನ ಕತ್ತಲೆಯಲ್ಲಿ..

          





ಇದ್ರ ಜೊತೆಗೆ ಇದನ್ನಾ ಓದಿಹೇಳೋ ಒಂದು ಪ್ರಯತ್ನಾನು ನಡ್ದಿದೆ..
ಬರಿ ಓದೋದಕ್ಕೆ ಹೇಳೋದ್ಕಿಂತಾ ಅದನ್ನಾ ಓದಿ ಹೇಳಿದ್ರೆ ಅದರ ಪರಿಣಾಮ ಜಾಸ್ತಿ ಅನಿಸ್ತು..
.ಗೊತ್ತಿಲ್ಲ..ನನ್ನ ಭಾವವನ್ನು ನಿಮಗೆ ತಿಳಿಸುವ ನಿಟ್ಟಿನಲ್ಲಿ ಒಂದು ಪುಟ್ಟ ಪ್ರಯತ್ನ..
ಒಂದ್ಸಲ ಕೇಳಿ ಕಿವಿ ತುಂಬುಸ್ಕೋಳಿ.:D..
ತಪ್ಪು ಒಪ್ಪುಗಳೇನಿದ್ರೂ ಹೇಳಿ..ನನ್ನನ್ನಾ ತಿದ್ದಿ ತೀಡಿ...


Monday, October 14, 2013

"ಜಟ್ಟ"...ಮುಚ್ಚಿದ ಬಾಗಿಲೊಳಗೊಂದು ಸತ್ವಪೂರ್ಣ ಕಥನ..

ನಾನು ಸುಮಾರು ಒಂದು ತಿಂಗಳಿನಿಂದ ಜಟ್ಟ ಚಿತ್ರದ ಭಿತ್ತಿಚಿತ್ರಗಳನ್ನು ನೋಡುತ್ತಿದ್ದನೇನೋ...ಆಗಾಗ ಪತ್ರಿಕೆ ಸಿನಿಮಾ ಸಂಚಿಕೆಗಳಲ್ಲಿ ಬರುವ ಚಿತ್ರದ ಜಾಹೀರಾತುಗಳನ್ನು ನೋಡಿದವನಿಗೆ "ಹತ್ತೊರ ಮೇಲೆ ಹನ್ನೊಂದು" ಅನ್ನಿಸಿದ್ದುಂಟು..ಚಿತ್ರ ನೋಡಲೇ ಭಯ ಹುಟ್ಟಿಸುವಂತಹ ಹೊಡಿ-ಬಡಿ ರೌಡಿಸಂ ಕಥೆಯುಳ್ಳ ಚಿತ್ರಗಳು ಬಂದು ವಾಕರಿಕೆ ಹುಟ್ಟಿಸುವ ಸಂದರ್ಭ ಎದುರಿಗಿರುವಾಗ ,ಇದೂ ಅದರಂಥಹುದೇ ಇರಬೇಕು ಎಂಬುದು ನನ್ನ ಎಣಿಕೆಯಾಗಿತ್ತು...ಮತ್ತೆ ಕಿಶೋರ್ ಅವರು ಇಲ್ಲಿಯ ತನಕ ಪಾತ್ರಗಳೂ ಸಹ ಸುಮಾರೆಲ್ಲ ಗಡಸು ಪಾತ್ರಗಳೇ ಆಗಿದ್ದುದ್ದು,ಚಿತ್ರದ ಜಾಹೀರಾತುಗಳಲ್ಲಿದ್ದ ಬಿಂಬಗಳು ಕ್ರೌರ್ಯವನ್ನೇ ಹೇಳುವಂತೇ ಇದ್ದುದ್ದು,ಚಿತ್ರದ ಸಹಶೀರ್ಷಿಕೆಯಲ್ಲೂ ಸೇಡು ಎನ್ನುವ ಪದವಿದ್ದುದ್ದೂ ಇದಕ್ಕೆ ಕಾರಣವಿರಬಹುದು...ಏನೋ ಗೊತ್ತಿಲ್ಲ ನೋಡಲೇ ಬಾರದ ಚಿತ್ರಗಳ ಪಟ್ಟಿಯಲ್ಲಿ ಇದು ಇದ್ದುದಂತೂ ನಿಜ.....

ಮೊನ್ನೆ ಎಲ್ಲೋ ಪತ್ರಿಕೆಯಲ್ಲಿ ಚಿತ್ರದ ನಿರ್ದೇಶಕರ ಬಗ್ಗೆ ಓದಿದೆ...ಸಾಹಿತ್ಯದ ಒಲವಿರುವ,ಈಗಾಗಲೇ ಸಾಕಷ್ಟು ಬರೆದಿರುವ ವ್ಯಕ್ತಿಯ ಸಿನಿಪ್ರಯೋಗ ಎನ್ನುವುದನ್ನು ಅರಿತೆ...ಕನ್ನಡ ಸಾಹಿತ್ಯಕ್ಕೆ ಪ್ರಶಸ್ತಿ ಪಡೆದವರೇಕೆ ಸಿನಿಮಾಕ್ಕೆ ಬಂದರಪ್ಪಾ ಎಂದೆನ್ನುತ್ತಾ ಪತ್ರಿಕೆ ಮುಚ್ಚಿಟ್ಟಿದ್ದೆ...ಚಿತ್ರದ ಬಗ್ಗೆ ಮತ್ತೆ ಆಸಕ್ತಿ ಮೂಡಿದ್ದು  ಹಿರಿಯ ಬ್ಲಾಗಿಗರೊಬ್ಬರು ಸಿನಿಮಾದ ಬಗ್ಗೆ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಾಗ...ಸರಿ ಯಾವಾಗಲಾದರೂ ನೋಡುವಾ ಎಂದುಕೊಂಡವನಿಗೆ ಮತ್ತೆ ನಿನ್ನೆ ಇವತ್ತು ಅದೇ ಚಿತ್ರದ ಬಗೆಗಿನ ಮಾತುಗಳು ಕಾಣ ಸಿಕ್ಕವು...ಹೊಸ ಪ್ರಯೋಗ,ಅದ್ಭುತ ಕತೆ ಎನ್ನುವ ಸಾಲುಗಳೂ ಕಂಡವು...ಇನ್ನೇನು?? ಇವತ್ತು ವಿಜಯದಶಮಿಯ ರಜೆ...ಗೆಳೆಯ ಪ್ರಥ್ವಿಯನ್ನೆಳೆದುಕೊಂಡು ಚಿತ್ರ ಮಂದಿರದೆಡೆಗೆ ಹೊರಟೆ...

ನನಗೋ ಬೆಂಗಳೂರು ಮೊದಲೇ ಹೊಸದು,ಇನ್ನ್ನು ಸ್ವಪ್ನ ಚಿತ್ರ ಮಂದಿರವೆಲ್ಲಿದೆಯೋ ಎಂದುಕೊಂಡವನಿಗೆ,ಗೂಗಲ್ ಮ್ಯಾಪ್ಸ್ ನ ಸಹಾಯಹಸ್ತ ಸಿಕ್ಕಿತು...೪ ಗಂಟೆಯ ದಿಖಾವೆಗೆ ಎಂದು  ನಾವು ಚಿತ್ರಮಂದಿರ ತಲುಪಿದಾಗ ಸುಮಾರು ೩:೫೦..ಅರ್ಜಂಟಿನಲ್ಲಿ ಹೋಗಿ "ಅಣ್ಣಾ ೨ ಬಾಲ್ಕನಿ " ಎಂದೆ,ಟಿಕೀಟು ಕೊಡುವವರು ಹುಸಿನಕ್ಕು ಎರಡು ಚೀಟಿ ಹರಿದುಕೊಟ್ಟರು...ಸರಿ ಬಾಗಿಲು ತೆಗೆಯುವುದು ಯಾವಾಗೆಂದು ಕಾಯುತ್ತಿರುವಾಗಲೇ ಯಾರೋ ಬಂದರು ಎಂದು ಜನ ಸೇರಿದರು..ಯಾರೋ ದೊಡ್ಡವರಿರಬೇಕೆಂದುಕೊಂಡು ನಾನೂ ಒಂದೆರಡು ಬಾರಿ ಎಗರಿ ನೋಡಿದರೂ ಕಂಡಿದ್ದು ಜನರ ಬುರುಡೆ ಮತ್ತು ಕೈ ಮೇಲೆತ್ತಿ ಹಿಡಿದ ಮೊಬೈಲುಗಳಷ್ಟೇ..ಅಷ್ಟರಲ್ಲಿ ಯಾರೋ  "ಹೀರೋಯಿನ್ನು ಬಂದಿದಾರೆ ಸಾರ್" ಎಂದರು..ಇರಲಿ ಬಿಡಿ ಅವರಿಗೆ ಇವತ್ತು ಅರ್ಜಂಟಿನಲ್ಲಿ ಮೇಕಪ್ಪೆಲ್ಲಾ ಮಾಡಿಕೊಳ್ಳಲು ಪುರಸೊತ್ತು ಸಿಕ್ಕಿತ್ತೋ ಇಲ್ಲವೋ ಹೇಗಂದ್ರೂ ಚಿತ್ರದಲ್ಲೇ ಒಪ್ಪವಾಗಿ ತೋರಿಸ್ತಾರೆ ಬಿಡಿ ಎಂದುಕೊಂಡು ಸುಮ್ಮನಾದೆ...ಮುಂದೆ ಒಂದೈದು ನಿಮಿಷ ಕಳೆದ ಮೇಲೆ ಬಾಗಿಲ ಬಳಿಯೇ ಅವರ ಪ್ರತ್ಯಕ್ಷ ದರ್ಶನವೂ ಆಯಿತೆನ್ನಿ...ಜೊತೆಗೆ ನಿರ್ದೇಶಕರದೂ ಸಹ...

ಮುಂದೆ ನನಗೆ ಇವತ್ತು ಎರಡು ಹೊಸ ಅನುಭವವಾಯ್ತು...ಮೊದಲನೇಯದು ಚಿತ್ರ ನೋಡುವ ಮುಂಚೆಯೇ ಚಿತ್ರದ ನಿರ್ದೇಶಕರು ಒಳಬರುವ ಪ್ರೇಕ್ಷಕರನ್ನೆಲ್ಲಾ ಹಸ್ತಲಾಘವ ನೀಡಿ ಸ್ವಾಗತಿಸಿದ್ದು..ಪ್ರಾಯಶಃ ಇನ್ನುಮುಂದೆ ಅಂಥಹ ಭಾಗ್ಯ ಸಿಗಲಾರದೇನೋ ಗೊತ್ತಿಲ್ಲ,ನನಗಂತೂ ಸಖತ್ ಖುಷಿಯಾಯ್ತು..."ಸಾರ್ ಚಿತ್ರ ನೋಡಿ ಸಂಜೆ ಬ್ಲಾಗಿನಲ್ಲಿ ಬರೆಯುತ್ತೇನೆ " ಎಂದಿದ್ದೆ,ಅವರಿದನ್ನು ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಚಿತ್ರದ ಮೊದಲಿನ ಹಸ್ತಲಾಘವ ಚಿತ್ರದ ಬಗ್ಗೆ ಸಾಕಷ್ಟು  ಆಸಕ್ತಿ ಕೆರಳಿಸಿದ್ದಂತೂ ನಿಜ...ಎರಡನೇಯದು ಚಿತ್ರಮಂದಿರದ್ದು..ನಾನು ಇಲ್ಲಿಯ ತನಕ ನೋಡಿದ ಚಿತ್ರ ಮಂದಿರಗಳೆಲ್ಲಾ ದೊಡ್ಡ ದೊಡ್ಡವು..ನಮ್ಮ ಶಿರಸಿಯಲ್ಲಿ ಗಟ್ಟಿ ಇರುವುದು ಎರಡೇ ಆದರೂ ತಕ್ಕ ಮಟ್ಟಿಗೆ ದೊಡ್ಡದಾಗೇ ಇದೆ...ಬಾಲ್ಕನಿ, ಗಾಂಧೀ ಕ್ಲಾಸು ಎಂಬುದೆಲ್ಲ ಇದೆ..ಇಲ್ಲಿ ನೋಡಿದರೆ ಒಂದು ಸಾದಾ ದೊಡ್ಡ ಹಾಲು..ಅದರ ಮುಂದೊಂದು ಚಿಕ್ಕ ಪರದೆ...ಜೊತೆಗೆ ಪಕ್ಕಪಕ್ಕದಲ್ಲೇ ಒತ್ತೊತ್ತಾಗಿ  ಕುಳಿತ ಜನ...ಇದೇನಿದು ಬಾಲ್ಕನಿಯೆಲ್ಲಿ ಎಂದುಕೊಳ್ಳುವಾಗಲೇ ಟಿಕೀಟು ಹರಿಯುವ ಮಾವನ ಹುಸಿನಗುವಿನ ಅರ್ಥ ಗೊತ್ತಾದದ್ದು..ಸರಿ ಕುಳಿತು ಕೊಳ್ಳುವಾ ಎಂದು ಸೀಟು ನಂಬರು ಹಿಡಿದು ಕೂತೆ..ಅದೇಕೋ ಆ ಭಾರಿ ಜನರನ್ನು ನೋಡಿ ಆ ಪರಿಸರ ಆಪ್ತವೆನಿಸಿದು...ಕೂತವನಿಗೆ ಯಾಕೋ ಕಾಯ್ಕಿಣಿಯವರ "ಟೂರಿಂಗ್ ಟಾಕೀಸ್ " ನ ಸಾಲುಗಳು ಮತ್ತೆ ನೆನಪಾದವು..."ಸಿನಿಮಾ ಮತ್ತು ಅಂಥಹ ಕಲೆಗಳು ಪಬ್ಲಿಕ್ ಪ್ರಾಪರ್ಟಿ.ನಾವು ಪಬ್ಲಿಕ ಆಗಿ ಪಬ್ಲಿಕ್ ನ ಅವಿಭಾಜ್ಯ ಅಂಗವಾಗಿ ಅದನ್ನು ಆಸ್ವಾದಿಸಿದಾಗಲೇ ಅದು ನಮ್ಮದಾಗುತ್ತದೆ"...
ಇನ್ನು  ನಮ್ಮಂಥಹ ಪಡ್ಡೆ ಹುಡುಗರು,ನಮಗಿಂತ ಸ್ವಲ್ಪ ದೊಡ್ಡವರು,ಕುಡಿಮೀಸೆಯವರು ಇರುವುದು ಸಹಜವೆನಿಸಿದರೂ ಐವತ್ತು ದಾಟಿದವರು,ನೀಟಾಗಿ ಇನ್ ಶರ್ಟು ಮಾಡಿ ಕೂದಲು ಬಾಚಿ ಚಾಲೀಸಿನ ಕನ್ನಡ ಹಾಕಿ ಬಂದವರು, ಎಲ್ಲಾ  ಕೂದಲು ಬೆಳ್ಳಗಾದರೂ ಡೈ ಹೊಡೆಯದೇ ಇದ್ದವರು,ನನ್ನ ವಯಸ್ಸಿನ ಮಕ್ಕಳಿರಬಹುದಾದ ಅಮ್ಮಂದಿರು ಹೀಗೆ ಮೇಲ್ನೋಟಕ್ಕೆ ಚಿಂತನಾಶೀಲ ವರ್ಗ ಎಂದೆನಿಸಿಕೊಳ್ಳುವವರೂ ಬಂದಿದ್ದು ಆಶ್ಚರ್ಯ ತಂದಿತ್ತು ...

=======================================================================
ಚಿತ್ರದ ಬಗ್ಗೆ ವಿಮರ್ಶೆ ಮಾಡುವಷ್ಟೆಲ್ಲಾ ದೊಡ್ಡವ ನಾನಲ್ಲ,ಅನ್ನಿಸಿದ್ದನ್ನು ಹೇಳುತ್ತಿದ್ದೇನೆ ನೋಡಿ...

ಚಿತ್ರದ ಕಥೆಯೇ ವಿಚಿತ್ರವಾಗಿದೆ..ಕಾಡಿನ ನಡುವೆ ನಡೆಯುವ ಮಾನವ ಸಹಜ ನಿಲುವುಗಳ ನಡುವಿನ ತಿಕ್ಕಾಟ ಎನ್ನಬಹುದೇನೋ....ಇಲ್ಲಿ ಕಿಶೋರ್ ಒಬ್ಬ ಮುಗ್ಧ ಮನಸ್ಸಿನ ಅರಣ್ಯಪಾಲಕ...ಅವನನ್ನು ಬಳಸಿಕೊಳ್ಳುವ ಕೆಲವರು,ಅವನನ್ನು ದಾಳವಾಗಿಸಿಕೊಳ್ಳುವ ಕೆಲ ಸಿದ್ಧಾಂತಗಳು,ಅದನ್ನು ವಿರೋಧಿಸಿ ನಡೆಯುವ ಇನ್ನೊಂದು ಬಗೆಯ ವಿಚಾರ ಧಾರೆ..ಅವುಗಳ ನಡುವಿನ ತಿಕ್ಕಾಟ ,ಭಾರತೀಯ ಸಂಸ್ಕೃತಿ,ಅದರ ಬಗೆ ಬಗೆಯ ಆಯಾಮಗಳು,ಪ್ರೀತಿ, ಪ್ರೇಮ ,ಕಾಮ ಹಾಗೂ  ಕರ್ತವ್ಯ ಪರಿಪಾಲನೆಗಳ ಭಾವಪಾಕ, ಹೀಗೆ ವಿವಿಧ ಮಜಲುಗಳಲ್ಲಿ ಕಥೆ ಸಾಗಿರುವಂತೆ ಅನಿಸಿತು...ಕಥೆಗಿಂತ ನನಗೆ ಇಷ್ಟವಾದದ್ದು ಪ್ರತಿಯೊಂದು ಪಾತ್ರಗಳ ಹಿಂದಿರುವ ಗಟ್ಟಿಯಾದ ಬೇರು,ಅವುಗಳಿದೇ ಆದ ವಿಭಿನ್ನ ದೃಷ್ಟಿಕೋನ....

ಇನ್ನು ಚಿತ್ರದ ಶೀರ್ಷಿಕೆ ಗೀತೆಗೆ ಜಾನಪದ ಶೈಲಿಯ ಸುಂದರ ಬೆನ್ನೆಲುಬಿದೆ...ಅದನ್ನು ಬಿಟ್ಟರೆ "ಜಟ್ಟ" ಎಂದು ಬರುವ ಒಂದು ಗೀತೆ ಸ್ವಲ್ಪ ನೆನಪಿಗೆ ಬರುತ್ತಿದೆ ಅಷ್ಟೇ...ನನ್ನ ಮಟ್ಟಿಗೆ ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡುಗಳೇನು ಇಲ್ಲ .. ಛಾಯಾಗ್ರಹಣದ ಬಗ್ಗೆ ನನಗೆ ಜಾಸ್ತಿ ಗೊತ್ತಿಲ್ಲ...ಆಗಾಗ ವಾವ್ ವಾವ್ ಎನ್ನುವಂತಹದ್ದು ಸುಮಾರಿದೆ ಎಂದಷ್ಟೇ ಹೇಳಬಲ್ಲೆ...ಚಿತ್ರ ಮುಗಿಯುವುದಕ್ಕಿಂತ ಸ್ವಲ್ಪ ಹಿಂದಿನ ಹೊಡೆದಾಟದ ದೃಶ್ಯವೊಂದರಲ್ಲಿ ಜೇಡರ ಬಲೆಯಿಂದ ಶುರುಮಾಡಿ ಕಡೆಗೆ ಅದನ್ನು ಹುಲ್ಲು-ಕಿಶೋರ ನಡುವೆ ಫೋಕಸ್ ಮಾಡಿದ್ದು ತುಂಬಾ ಇಷ್ಟವಾಯ್ತು...

ಇನ್ನು ಚಿತ್ರದ ಇನ್ನೊಂದು ವಿಶೇಷತೆ ಎಂದರೆ ದೇಸೀತನ..ಅದು ಚಿತ್ರ ನಡೆಯುವ ಪರಿಸರ,ಉಡುಗೆ ತೊಡುಗೆ ಅಥವಾ ಸಂಭಾಷಣೆಯಲ್ಲಿರಬಹುದು...ಪರಿಸರ ಸುಂದರ ಮಲೆನಾಡು,ಹಸಿರು ಕಾಡುಗಳಲ್ಲಿದೆ...ಕರಾವಳಿ,ಹಿನ್ನೀರುಗಳೂ ನಿಮ್ಮೆದುರು ಬಂದು ಹೋಗುತ್ತವೆ...ಇನ್ನು ಚಿತ್ರದೆಡೆಗೆ ನಿಮ್ಮನ್ನು ಎಳೆದುಕೊಳ್ಳುವ ಇನ್ನೊಂದು ಅಂಶವೆಂದರೆ ಸಂಭಾಷಣೆ..ಕುಂದಾಪುರದ ಕನ್ನಡದ ಸೊಬಗನ್ನು ಕಾಣಬಹುದು...ಆ ಅಪ್ಪಟ ದೇಸೀ ಶಬ್ಧಗಳು ಕೇಳುವುದಕ್ಕೇ ಛಂದ..ಬೈದರೂ ಸಹ ಅಸಹ್ಯವೆನಿಸದಂತೆ ತೋರಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ ಅಂತಲೇ ಹೇಳಬೇಕು...

ಇನ್ನು ಸಂಭಾಷಣೆ ಅಂದ್ನಲಾ ಅಲ್ಲಿ ಯಾಕೋ ಮಧ್ಯ ಮಧ್ಯ ಬೆಂಗಳೂರು ಸೀಮೆಯ ಗ್ರಾಮ್ಯಪದಗಳೂ ನುಸುಳಿಬಿಟ್ಟಿವೆ...ಅದ್ಯಾಕೋ ಗೊತ್ತಿಲ್ಲ...ಇರತ್ತೆ ಬರತ್ತೆ ಪರ್ವಾಗಿಲ್ಲ ಆಧುನಿಕತೆಯ ಪ್ರಭಾವ ಎನ್ನಬಹುದು ಆದ್ರೆ  "ಹೋಯ್ತದೆ" ಎನ್ನುವ ಥರದ ಪದಗಳನ್ನು ಆ ಕಡೆ ಬಳಸುವುದನ್ನು ನಾನಂತೂ ಕಾಣೆ..ನನ್ನ ಮಟ್ಟಿಗೆ ಅದು   ಹಾಲಿಗೆ ಹುಳಿ ಹಿಂಡಿದಂತೆ ಅನಿಸಿತು..ಅಷ್ಟು ಛಂದದ ಮಾತಿನ ಸರಪಣಿಯ ನಡುವೆ ಬೆಂಗಳೂರು ಕನ್ನಡ  ಅದು ಹೆಂಗೆ ಬಂತೋ ನಂಗಂತೂ ಅರ್ಥವಾಗುತ್ತಿಲ್ಲ...

ಇನ್ನು ಎರಡು ಕಡೆ ಚಿತ್ರ ಸ್ವಲ್ಪ ಬೋರು ಹೊಡೆದಂತೆ ಅನಿಸಿತು..ಅದೂ ಸಹ ನಾಯಕನಟಿಯ ಅಭಿನಯ ಹಾಗೂ ಹಿನ್ನೆಲೆಯ ಧ್ವನಿಯ ನಡುವಿನ ಸಮನ್ವಯತೆಯ ಕೊರತೆಯಿಂದೇನೋ...ಹೆಣ್ಣಿನ ಇಂದಿನ ಪರಿಸ್ಥಿತಿಯ ಕುರಿತು ವಿಶ್ಲೇಷಿಸುವಾಗ ನಾಯಕ ನಟಿಯ ಅಭಿನಯ ಸಪ್ಪೆಯೆನಿಸಿತು,ಜೊತೆಗೆ ತುಟಿಯ ಚಲನೆಗೂ  ಹಿನ್ನೆಲೆಯ ಮಾತುಗಳಿಗೂ ಯಾಕೋ ಹೊಂದಾಣಿಕೆ ಆಗುತ್ತಿಲ್ಲ ಅನಿಸಿತು.. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದಿತ್ತೇನೋ...ಗೊತ್ತಿಲ್ಲ...ಹಾಗಂತ  ಉಳಿದೆಡೆಗೆ ಅಭಿನಯದ ಬಗ್ಗೆ ಎರಡು ಮಾತಿಲ್ಲ// "yu hav met with a wrong person " ಎನ್ನುವಾಗ ಕಣ್ಣುಗುಡ್ಡೆಯ ಚಲನೆ ಖಂಡಿತವಾಗಿಯೂ ಅದ್ಭುತ ಎಂದೆನಿಸಿಬಿಡುತ್ತದೆ..ಭಾವಾವೇಶದ ಸಂದರ್ಭಗಳಲ್ಲಿ ಚಂದದ ಅಭಿನಯವಿದೆ...ಕಿಶೋರ್ ಅವರ ನಡಿಗೆಯ ಶೈಲಿಯೇ ವಿಶಿಷ್ಟವಾಗಿದೆ,,,

ಇವಿಷ್ಟು ನನಗೆ ಸಧ್ಯಕ್ಕೆ ತೋಚುತ್ತಿರುವಂತದ್ದು..ನನಗಂತೂ ಈ ಚಿತ್ರ ಒಂಥರ ಭೈರಪ್ಪನವರ ಕಾದಂಬರಿ ಓದಿದಾಗಿನ ನಂತರದ ಅನುಭವ ಕೊಡುತ್ತಿದೆ..ಪ್ರಾಯಶಃ ಹಲವಾರು ಹಾದಿಯಲ್ಲಿ ಸಾಗುವ ಕಥೆಯ ಅಂತ್ಯವನ್ನು ಒಂದೇ ಸಿದ್ಧಾಂತದಡಿಯಲ್ಲಿ ಹೇರದೇ ವೈಯಕ್ತಿಕ ನೆಲೆಗಟ್ಟಿನಲ್ಲಿ ಚಿಂತಿಸುವಂತೆ ಪ್ರೇರೇಪಿಸಿದ್ದಕ್ಕೋ ಏನೋ ಗೊತ್ತಿಲ್ಲ...
ಒಟ್ಟಿನಲ್ಲಿ ಹೊಸ ಅನುಭವಗಳನ್ನು ಪಡೆದ ಖುಷಿ ನನ್ನದು..ಒಳ್ಳೆಯ ಚಿತ್ರ ನೋಡಿದ ಖುಷಿ ನನ್ನದು..ಅದನ್ನು ಹಂಚಿಕೊಳ್ಳಿತ್ತಿದ್ದೇನೆ ಅಷ್ಟೇ :)..

ಮುಂದೆ ಹೋಗುವ  ಮುನ್ನ :
 ಹಮ್...ಈ ಚಿತ್ರ ಖಂಡಿತ ತೆರೆದ ಬಾಗಿಲಿನದಲ್ಲ..ಸುಮ್ಮನೆ ಹೋಗಿ ಏನೋ ಕುಣಿವಾಗ ಕುಣಿದು ನಗಿಸುವಾಗ  ನಕ್ಕುಬರುವುದಕ್ಕೆ ..ಇಷ್ಟಪಟ್ಟು ಪುರಸೊತ್ತು ಮಾಡಿಕೊಂಡು  ಹೋಗಿ,ಪಾತ್ರಗಳಲ್ಲಿ ಒಂದಾಗಿ ಒಂದಿಷ್ಟು ಯೋಚಿಸಿ...ಆ ತರ್ಕಗಳ ಸರಣಿಯನ್ನು ಆನಂದಿಸಿ..ಸತ್ವಪೂರ್ಣ ಕಥನವನ್ನು ಅಸ್ವಾದಿಸಿ...ಹೊಸತನದ ಚಿತ್ರವೊಂದನ್ನು ಬೆಂಬಲಿಸಿ..

ನಮಸ್ತೆ :) :)