Saturday, June 20, 2015

ಶಕ್ಕರಗಂಚಿ

ದ್ಯಾವ ಅವತ್ತು ತನ್ನ ಪಾಡಿಗೆ ತಾನು ಕವಳದ ಚಂಚಿಯಿಂದ ಹೊಗೆಸಪ್ಪು ಹರಿಯುತ್ತಾ 

ಒಂದು ಚೂರು ಬಾಯಿಗೆ ಹಾಕಿಕೊಂಡು ಸಂಕದಾಟುತ್ತಿದ್ದ. 

ಇನ್ನೇನು ಎರಡನೇ ಸಂಕ ದಾಟಿ ಮಂಡಗಾಲಿಗೆ ಹತ್ತಿರ ಹೋಗಬೇಕು ಅಷ್ಟರಲ್ಲಿ  

ಭಟ್ಟರ ಮನೆಯಿಂದ ಕೆಂಪಮ್ಮ ಕರೆದಂತಾಯಿತು .

"ಏಯ್ ಯಾರೋ ಅದು ...ದ್ಯಾವ ನನ ???"


"ಹೌದ್ರಾ ಅಮ್ಮಾ..."

"ಬಾ ಇಲ್ಲಿ ...ಎತ್ಲಾಗ್ ಹೋಗಿದ್ದೇ ನೀನು ? " 

ಎಂದು ತಮ್ಮ ಊರುಗೋಲು ಹಿಡಿದುಕೊಂಡೇ ಬಾಗಿಲ ಮೆಟ್ಟಿಲು ಇಳಿದು ಬರತೊಡಗಿದರು.

ವಯಸ್ಸಾದ ಈ ಯಮ್ಮ ಎಲ್ಲಿ ಸಂಕ-ಗಿಂಕ ದಾಟಿ ಬಂದು ಬಿಡುವುದೋ ಎಂದು ಗಡಬಡೆಯಿಂದ 

ದ್ಯಾವ ಭಟ್ಟರ ಮನೆಯ ಅಂಗಳಕ್ಕೆ ಬಂದ .

ಅಮ್ಮ ಕೈ ಮಾಡಿ ಕರೆದು ವರಾಂಡದ ಮೇಲೆ ಕೂರಲು ಹೇಳಿ , 




"ಎತ್ಲಾಗ್ ಹೋಗ್ ಬಿಟ್ಟಿದ್ಯಾ ??

 ಅಲ್ಲಾ ಈಗೀಗ್ ದ್ಯಾವನಿಗೆ ಲಕ್ಶವೇ ಕಡಿಮೆ ಆಗ್ ಬುಟ್ಟದೆ...

ಅಲ್ಲಾ ನಿನ್ನೆ ರಾತ್ರಿ ಆ ಸುಡಗಾಡ್ ಮಂಗ ಹಂಚಿನ ಮೇಲೆಲ್ಲಾ ಓಡಾಡಿ,

ದಡುಬುಡು ಮಾಡದೇ..

ಹಿತ್ತಲ ಕಡಿಗೆ ಎಲ್ಲಾ ಬರೀ ಲಿಗಾಡಿ..

ತ್ವಾಟಕ್ಕೂ ಹೋಗದ್ಯೋ ಏನ ನೋಡ್ದವ್ರ್ ಯಾರು ? 

ನೀ ಎತ್ಲಾಗ್ ಹೋಗ್ತಿಯೇ ???"



ದ್ಯಾವ ಅದಕ್ಕೆ ಪ್ರತಿಯಾಗಿ ಕೋವಿ ಕೆಳಗಿಟ್ಟು,

ಬಟಾರಚೀಲದ ಮೇಲೆ ಕೂತು ಕೈಯಿಂದ ಎಲೆಚೊಕ್ಕಮಾಡುತ್ತಾ



 "ಇಲ್ರಾ ಅದು ನಾನೆ ಬೆರ್ಸಿದ್ದು...

ಅಚ್ಚೆ ಊರಿನ ತ್ವಾಟದ ಸರದಿಂದ ಬೆರೆಸ್ಕಂಡ ಬಂದೆ...

ಇವತ್ತ್ ಅದೆ ಕಬ್ಬಿನಗದ್ದೆ ಗಡಿ ದಾಟ್ಸಿ ಓಡ್ಸಿದೆನ್ರಾ.

.ಅದೆಲ್ಲಾ ಹಂಗೆಲ್ಲಾ ಈ ಹೊತ್ತಿಗ ಬರುದಿಲ್ರಾ.

.ಕಾನಬದಿಗೆ ಹಲ್ಸನ್ ಹಣ್ಣು ಮಾಯಿನ ಹಣ್ಣು ತಿನ್ಕಂಡು ಇರ್ತದೆ..

ಈಗೀಗ ಕಾನು ಕಡ್ಮೆ ಆಗಿ ಊರ ಬದಿಗೆ ಬರ್ತದೆ..

ಎಂತಾ ಮಾಡುದ್ ಹೇಳಿ ಪಾಪ ಅದ್ರದ್ದೂ  ಹೊಟ್ಟೆ ಅಲ್ದಾ ?" 

ಎಂದು ವೃತ್ತಿಪರ ಸಮಜಾಯಿಶಿ  ನೀಡಿದ...



ಅದಕ್ಕೆ ಅಮ್ಮ ಒಂದೊಮ್ಮೆ ಹಲ್ಲಿಲ್ಲದ ಬಾಯನ್ನು ಅಲ್ಲಾಡಿಸಿ ,

ಬಚ್ಚ ತುಟಿಯ ಒಳಗೆ ಹೊರಗೆ ಮಾಡಿ

 "ಅಲ್ಲೋ ನೀ ಮಂಗ್ಯಾನ್ ಕಾಯವ್ನೆ ಅದ್ಕೆ  ಪಾಪ ಪುಣ್ಯ ಅಂದ್ಕಂಡು 

ಹೊಟ್ಟಿಗಿಲ್ಲ ಹೇಳಿ ಸುಮ್ನಿದ್ರೆ ಹೆಂಗೋ ಮಾರಾಯ! .

ಅಗಾ ಅದೆಲ್ಲಾ ನಂಗೊತ್ತಿಲ್ಲ..

ಯುಗಾದಿ ಮುಗ್ದು ೧೫ ದಿವ್ಸಕ್ಕೆ ನಮ್ಮನೆ ಮಾಣಿ ,ಅದೇ ನನ್ನ ಮಮ್ಮಗ ಬತ್ತೆ ಹೇಳಿದಾನೆ...

ಆಮೇಲ್ ಅವಾ ಅದೆಂಥದೋ ಪರದೇಶಕ್ಕೆ ಹೋಗ್ತಾನಂತೆ...

ಹಾಲಂಡ ಎಂಥದೋ ಸುಡಗಾಡು...

ಬರೂದ್ ಯಾವಾಗ್ಲ್ ಎಂತಾ ಕಥೆಯಾ...

ಅಲ್ಲಿ ತನ್ಕಾ ಈ ಮುದುಕಿ ಇರ್ತದ್ಯೋ ಇಲ್ಲ... 



[ಕಣ್ಣಲ್ಲಿ ಚೂರು ನೀರು ತುಂಬಿಕೊಂಡು]



ನೋಡು ..ನೀ ಎಂತಾ ಮಾಡ್ದೆ ನಂಗೊತ್ತಿಲ್ಲ.

.ಆ ಅಂಗಳದಲ್ಲಿ ಉಂಟಲ್ಲ ಆ ಶಕ್ಕರೆಕಂಚಿ ಮರ.

ಅದಕ್ಕೆ ಮಂಗ ಬರುಕಾಗ.. ಅವಾ ಬತ್ತಾ ಹೇಳಿ ಶಕ್ಕರ ಗಂಚಿ ಕಾಯಿ ಇಡ್ಸಿದ್ದೆ..

ಯಾರಿಗೂ ಈ ಸಲ ಕೊಯ್ಲಿಕ್ ಬಿಡ್ಲಿಲ್ಲ...

ಅವ್ನಿಗ್ ಶಕ್ಕರೆಗಂಚಿಕಾಯಿ ಅಂದ್ರೆ ರಾಶಿ ಛೊಲೊವಾ !..." 




ಎಂದು ತಮ್ಮ ಎಂದಿನ ಅಧಿಕಾರವಾಣಿಯಿಂದ ಹೇಳಿದರಾದರೂ ,

ಆಮೇಲೆ ಮೆಲ್ಲಗೆ ಎರಡು ಅಡಿಕೆ ನೆಲದಮೇಲಿಡುತ್ತಾ ,



"ದ್ಯ್ವಾವಾ ...ಅವ ಬರು ಮುನ್ನಾಣದಿನ ಹೇಳ್ ಕಳಿಸ್ತೆ ...

ಬಂದು ಚೂರ್ ಕೊಯ್ಕೊಟ್ಟು ಹೋಗು ಹಾಂ ???"

 ಎಂದು ಒಳಹೋಗಲು ಅಣಿಯಾದರು...


ದ್ಯಾವ ಏನು ಮಾಡುವುದೆಂದು ಅರಿಯದೇ ಸುಮ್ಮನೆ ಅಡಿಕೆ ತೆಗೆದು ಕೈಚಂಚಿಗೆ ಹಾಕಿ ,

ಅಲ್ಲಿ ದ್ದ ಇನ್ನೊಂದು ಅಡಿಕೆ ಚೂರು ಬಾಯಿಗೆ ಹಾಕಿ ಕೋವಿ ಹೆಗಲಿಗೇರಿಸಿ ಹೊರಟ...

ಇನ್ನೇನು ಎರಡು ಹೆಜ್ಜೆ  ನಡೆದಿಲ್ಲ ..

""ಹ್ವಾ...ಕಂಚಿಮರ..ಮಂಗ ಬರುಕಾಗ ಹಾಂ ???" ಎಂದು ಮತ್ತೆ ಕೆಂಪಮ್ಮ ಹೇಳಿದರು...



"ಈ ಅಮ್ಮಂಗೆ ತಲಿ ಪೂರ್ತಿ ಸಮಾ ಇಲ್ಲ...

ಅದೆಂತೋ ಅರವತ್ತಾದ್ಮೇಲ್ ಅರಳು ಮರಳು ಅಂತ್ರಲ್ಲ..ಅದೇ ಇರಬಕು .

ಅಲ್ಲಾ ..ಊರೆಲ್ಲಾ ತಿರುಗೂ ಮಂಗ ಇವ್ರ ಮನೆ ಕಂಚಿ  ಮರಕ್ ಬರುಕಾಗ ಅಂದ್ರೆ ??

ನಾ ಎಂತಾ ಇಲ್ಲೇ ಬಿಡಾರ ಹಾಕಂಡ್ ಕೂಕಂಡ್ಳಾ ?? 

ಈ ಮಂಗನ ಕಾವಲು ಸಾಕಬೇಕಾಯ್ತು..."

 ಎಂದು ತನ್ನಲ್ಲೇ ಹೇಳಿಕೊಳ್ಳುತ್ತಾ ಜಾಗಖಾಲಿ ಮಾಡಿದ...


                                                                                                   ***
ಈ ಮಾತುಕಥೆಯಾಗಿ ಒಂದುವಾರ ಆಗಿತ್ತಷ್ಟೇ .

ರಾತ್ರಿ ಬೆಳಗಾಗುವಷ್ಟರಲ್ಲಿ ಮರದ ಮೇಲಿದ್ದ  ನಾಕೇ ನಾಕು ಕಾಯಿಗಳಲ್ಲಿ 

ಒಂದನ್ನು ಹಾರುಬೆಕ್ಕೋ ,ಮಂಗವೋ ಕೆರೆದು ಹಾಕಿತ್ತು...

ಇನ್ನೂ ಎರಡು ಕಾಯಿಗಳು ಅವುಗಳ  ಓಡಾಟದ ಆರ್ಭಟಕ್ಕೆ ಸಿಲುಕಿ ನೆಲಕ್ಕೆ ಬಿದ್ದಿದ್ದವು...

ತಗೊಳ್ಳಿ ಬೆಳಗಿನ ಆಸರಿಗೆ ಮುಗಿಸಿ ಬಾಳೆ ಒಗೆಯಲು ಹೊಳೆಯ ಹತ್ತಿರ ಬಂದ ಕೆಂಪಮ್ಮನ್ನಿಗೆ

 ಅದು ಕಂಡದ್ದೇ ಕಂಡದ್ದು ಬಾಯಿಬಡಿದುಕೊಳ್ಳಲು ಶುರುವಾಯಿತು...




"ಆಯ್ಯೋ ದ್ಯಾವಾ ...ಎಲ್ ಹಾಳಾಗ್ ಹೋದ್ಯೋ ...ಅಯ್ಯೋ ನೋಡ್ರೋ ಯಾರಾದ್ರುವಾ ..

ಮೊಮ್ಮಗಾ ಬರ್ತಾ ಹೇಳಿ ಕಂಚೀಕಾಯಿ ಇಡ್ಸಿದ್ದೆ..
.
ಈ ಮಂಗ್ಯಾ ಎಲ್ಲಾ  ನೆಲಕ್ಕೆ ಕೆಡಗಿ ಹಾಕದೆ..ಥೋ ...

ಈ ಮಂಗ್ಯಾಂಗೆ ನಮ್ಮೆನೆ ಕಂಚಿಕಾಯಿ ಮರನೇ ಬೇಗಾಗಿತ್ತಾ ?? 

ಮಂಗ್ಯಾನ್ ತಪ್ಪಲ್ಲಾ ಅದು ...ಆ ದ್ಯಾವನ್ ತಲೆಬುರಡೆ...

ಬರ್ಲಿ ಅವಾ...ಅಲ್ಲಾ ಮುದುಕಿ ಕೊನೆಕಾಲದಲ್ಲಿ ಒಂದ್ ಆಸೆ ಇಟ್ಕಳದೇ ತಪ್ಪಾ ??

 ಎಲ್ಲಾ ಹಾಳಾಗ್ ಹೋಗ್ರ್ಲಿ.."

ಬೀಪ್ ಬೀಪ್ ಬೀಪ್  ಬೀಪ್ ಬೀಪ್ ಬೀಪ್  ಬೀಪ್ ಬೀಪ್ ಬೀಪ್

  ಬೀಪ್ ಬೀಪ್ ಬೀಪ್  ಬೀಪ್ ಬೀಪ್ ಬೀಪ್






ಕೆಂಪಮ್ಮ ಬಾಯಿಬಿಟ್ಟರೆ ಅದು ಬ್ರಹ್ಮಾಂಡ ಎಂದು ಗೊತ್ತಿದ್ದರಿಂದ

 ಮತ್ತು ಹೋದರೆ ವಿನಾಕಾರಣ ತಮಗೂ ಒಗ್ಗರಣೆ ಬೀಳುವುದರಿಂದ

 ಅಲ್ಲಿಗೆ ಯಾರೂ ಹೋಗಲು ಧೈರ್ಯಮಾಡಲಿಲ್ಲ..


ಒಂದು ಸ್ವಲ್ಪ ಹೊತ್ತು ಒದರಿ ಕೊಂಡು ಒಳಹೋಗಿ ಸ್ನಾನಮಾಡಿ ಭಜನೆಮಾಡುತ್ತಾ ಕೂರುತ್ತಾರೆ

ಎಂದು ಗೊತ್ತಿದ್ದುದರಿಂದ  ಆ ಕಡೆ ದ್ಯಾವನಿಗೆ ಹೋಗದಂತೆ ಹೇಳಿ ಸುಮ್ಮನಾದರು.

ವಿಷಯ ತಿಳಿದ ದ್ಯಾವ ತನ್ನ ಮನೆಯಲ್ಲಿ



 "ಅಗಾ,ಆ ಅಮ್ಮ  ಎಂತಾರು ಹೇಳ್ ಕಳ್ಸಿರೆ ಬ್ಯಾಟಿಗ್ ಹೋಯಿನಿ ಹೇಳಿ ಹಾಂ ?


 ಮಳೆಗಾಲ ಸುರು ಆದ್ಮೇಲ್ ಕಾಂಬ" ಎಂದುಬಿಟ್ಟಿದ್ದ.

ಅಲ್ಲಿಂದ  ಕೆಂಪಮ್ಮನಿಗೆ ದಿನಾಲೂ ಆ ಶಕ್ಕರೆಕಂಚಿಕಾಯಿಯದೇ ಚಿಂತೆ..

ಬರಬರುತ್ತಾ ಬೇರೆ ಲೋಕವೇ ಇಲ್ಲಾ ಎಂಬಂತಾಗಿತ್ತು..

ಜೋರು ಗಾಳಿ ಬೀಸಿದರೂ ಒಮ್ಮೆ ಹೊರಗೆ ಬಂದು ಕಣ್ಣು ಶಣ್ಣಗೆ ಮಾಡಿ ಮರ ನೋಡಿ



 "ಅಬ್ಬ ಉಂಟು!ಮಾಣಿ ಯಾವಾಗ್ ಬತ್ನೋ ಏನೋ" 


ಎಂದು  ನಿಟ್ಟುಸಿರು ಬಿಟ್ಟು ಮತ್ತೆ  ಮನೆಯೊಳಕ್ಕೆ ಹೋಗುತ್ತಿದ್ದರು.

ಏನಾದರೂ ಕಾಗೆ ಮರದ ಮೇಲೆ ಕುಂತಿದ್ದು ಕಂಡರೆ

 "ಹುಚಾ ಹುಚಾ " ಎಂದು ಓಡಿಸಿಯೇ ಒಳಹೋಗುತ್ತಿದ್ದುದು.

ಹುಳಿಮಜ್ಜಿಗೆ ತೆಗೆದುಕೊಂಡು ಹೋಗಲು,ಗಿಣ್ಣಹಾಲು ಕೊಟ್ಟುಬರಲು,

ಸತ್ಯನಾರಾಯಣಕಥೆ ಪ್ರಸಾದ ಕಾಯಿಸಿಕೊಂಡು ತೆಗೆದುಕೊಂಡು ಹೋಗಲು ಬಂದವರು,

ಸುಮ್ಮನೆ ಬಂದವರು ಎಲ್ಲ ಹೆಂಗಸರ ಹತ್ತಿರವೂ ಬರೀ ಮಾಣಿ ಮತ್ತು ಶಕ್ಕರಗಂಚಿ ಕಾಯಿದೇ ಕಥೆ.




"ಅವಾ ಬಂದಾಗ ಹೇಳಿ ಕಳಿಸ್ತೆ ಹಾಂ ?

 ನಂಗ್ ಕೈ ಸೋತು ಹೋಗ್ತದೆ,ಶಿಪ್ಪೆ ಬಿಡಿಸಿ ಕೊಟ್ಟು ಹೋಗ್ಬೇಕು" 


ಎಂದು ಭರವಸೆ ತೆಗೆದುಕೊಂಡೇ ಕಳಿಸುತ್ತಿದ್ದರು.

ಊರಿನ ಹಾಯಿಸ್ಕೂಲು ಮಕ್ಕಳಿಬ್ಬರಿಗೆ ಆ ಕಾಯಿಯ ಮೇಲೆ ಕಣ್ಣಿತ್ತಾದರೂ

 ಆಮೇಲೆ ಆ ಕೆಂಪಮ್ಮನ ಬಾಯಿಗೆ ಸಿಕ್ಕು ಮನೆಯಲ್ಲಿ ಬಾರುಕೋಲುಪೆಟ್ಟು ತಿನ್ನುವ ಪಚೀತಿ ಅವರಿಗೆ ಬೇಕಿರಲಿಲ್ಲ

.ಒಮ್ಮೆ  ಅದೇ ಗ್ಯಾಂಗಿನ ಹುಡುಗನೊಬ್ಬ ಯಾವುದೋ ರಿಬ್ಬನ್ನಿನ ಹುಡುಗಿಯ ಕನಸುಕಾಣುತ್ತಾ

 ಅವನಿಗೆ ತಿಳಿಯದಂತೆ ಶಕ್ಕರಕಂಚಿ ಮರವನ್ನು ನೋಡುತ್ತಿದ್ದನಾದರೂ 

ಅದನ್ನು ಕಂಡ ಕೆಂಪಮ್ಮ ,



"ಎಯ್ ತಮಾ, ಹಂಗೆಲ್ಲಾ ಕಣ್ಣು ಹಾಕುಕಿಲ್ಲ ಹಾಂ ?" 

ಎಂದು ಬಾಯಿಜೋರು ಮಾಡಿ ಹೇಳಿದ್ದರು.

ಹೀಗೇ ಸುಮಾರು ಒಂದು ವಾರದ ಕಳೆದಮೇಲೆ ಒಂದು ದಿನ ಹಾಲುಹಾಕಲು ಬಂದವ


 "ಅಲ್ರೋ,ಅದೆ ಬೆಳಿಗ್ಗೆ ಮುಂಚೆ ಅಚ್ಚೆಬದಿಗೆ ರಿಕ್ಷಾ ಬಂದಂಗ್ ಆತು.

ಯಾರೋ ನೆಂಟರು ಬಂದಿದ್ರು ಕಾಣ್ತದೆ., "

 ಅಂದಿದ್ದನ್ನು ಕೇಳಿ

 "ಏಯ್ ಅದ್ ನಮ್ಮನೆ ಮಾಣ್ಯೇ ಇರ್ಲಿಕ್ ಸಾಕೋ..ಬೆಂಗ್ಳೂರಲ್ ಇರವಾಂ..

ಯುಗಾದಿ ಮುಗ್ದು ೧೫ ದಿನಕ್ ಬರ್ತೆ ಹೇಳಿದ್ದ" 


ಎಂದು ಹೇಳಿ ಬಾಗಿಲಿನ ಮೀಡ ಹಾಕಿದರಾದರೂ ಅದ್ಯಾಕೋ ಶಕ್ಕರಗಂಚಿ ನೆನಪಾಗಿ

 ಮತ್ತೆ ಮರನೋಡಿ "ಉಂಟು" ಎಂದು ಹೇಳಿಕೊಂಡು ಒಳಹೋದರು.

ಮಧ್ಯಾನ್ಹ ನೀರು ಸೇದಿಕೊಂಡು ಹೋಗಲು ಬಂದ ದ್ಯಾವನ ಹೆಂಡತಿಗೆ 



"ಏಯ್ ಮಾರಾಯ್ತಿ ಆ ದ್ಯಾವಂಗೆ ಹನಿ ಮನೆಬದಿಗೆ ಇರ್ಲಿಕ್ ಹೇಳು..

.ಮೊಮ್ಮಗ ಬಂದಾನೆ,ಅವಾ ನಮ್ಮನೆಗ್ ಬರೂ ದಿನ ಹೇಳ್ ಕಳಿಸ್ತೆ...

ಮೂರ್ನಾಕ್ ದಿನ ಬಿಟ್ ಬರ್ತ್ನೇನ.. ಅಜ್ಜನ ಮನೆಗ್ ಹೋಗಿರ್ಲಿಕ್ ಸಾಕು ಈಗ..

.ಹಾಂ  ಶನಿವಾರ ಬೆಳ್ಗೆ ಬಂದು ಆ ಶಕ್ಕರಗಂಚಿ ಕಾಯಿ ಇಳಿಸಿಕೊಡ್ಲಿಕ್ ಅದೆ...

ಹಂಗೆ ನೀನು ಬಾ ...ಚೂರ್ ಅದ್ರದ್ ಶಿಪ್ಪೆ ಬಿಡಿಸಿಕೊಟ್ಟು ಹೋಗು..

.ಅವಾ ಯಾವಾಗ್ ಬರ್ತ್ನೇನ" ಎಂದು ಹೇಳಿದರು ,



ಆದರೆ  ಆಕೆ ದ್ಯಾವ ಊರಲ್ಲಿ ಇಲ್ಲ ಅನ್ನುವುದೋ ಇನ್ನೇನಾದರೂ ಹೇಳುವುದೋ 

 ಗೊತ್ತಾಗದೆ ಸುಮ್ಮನೆ ಹಗ್ಗ ಜಗ್ಗುವುದನ್ನು ಮುಂದುವರೆಸಿದಳು.



"ಈ ಹೆಂಗ್ಸಿಗ್ ಈಗ್ಲೆ ಕಿವಿ ಮಂದಾಗ್ ಹೋಗದೆ...ಕೆಪ್ಪ ಸ್ವಾಡ...ಏಯ್  ಕೇಳ್ತನೇ ??" 

ಎಂದು ಜೋರಾಗಿ ಇನ್ನೊಮ್ಮೆ ಹೇಳಿದಾಗ ಆಕೆ  "ಹಾಂ ಅಡ್ಡಿಲ್ರ.." 

ಎಂದು ಟೊಂಕಕ್ಕೆ ಕೊಡ ಇಟ್ಟುಕೊಂಡು ನಡೆದುಹೋದಳು.


                                                                 ****
ಅದಾದ ಮೂರ್ನಾಕು ದಿನದ ಮೇಲೆ ಸಂಜೆ ೭:೩೦ರ ಸುಮಾರು.

ವಾಡಿಕೆಯಂತೆ ಮಲೆನಾಡಿನಲ್ಲಿ ಕರೆಂಟು ಹೋಗಿತ್ತು.

ಸಾಯಂಕಾಲ ಬಿದ್ದ ಮಳೆಯ ನಂತರವೂ ಗುಡುಗು-ಮಿಂಚು ಸಣ್ಣಗೆ ಬಂದುಹೋಗುತ್ತಿತ್ತು.

ಕೆಂಪಮ್ಮನವರ ಮನೆ ಬಾಗಿಲು ತಟ್ಟಿದ ಸದ್ದಾಯಿತು. 

ಒಪ್ಪತ್ತು ಮಾಡುವುದಕ್ಕೆಂದು ಬಾಳೆಗಿಡದ ಎಲೆಯ ಮೇಲೆ ರೊಟ್ಟಿ ಹಾಕುತ್ತಿದ್ದ ಕೆಂಪಮ್ಮ 

ಬಂಡಿ ಆರಿಸಿ ಬಾಗಿಲೆಡೆಗೆ ಚುಮಣಿ ದೀಪ ಹಿಡಿದು ಬಂದರು ..



"ಯಾರ್ರಾ " ಎಂದು ಕೇಳುವುದಕ್ಕಿಂತ ಮೊದಲೇ 

ಬಳೆಗಳು ಮತ್ತು ಒಳಬಾಗಿಲ ಮೀಡತೆಗೆದ ಸದ್ದಾಗಿ  ಆಕಡೆ ಇಂದ


 "ಅಮ್ಮಾ ,ನಾನೇ !" 

ಎಂಬ ಕೂಗು ಬಂದಿತು.

"ಅಬ್ಬಾ ಮೊಮ್ಮಗನೇ" ಎಂಬ ಖುಷಿಯಿಂದ

 "ತಮ್ಮನನಾ ?" ಎಂದು ಕೇಳಲು

."yes...ಹೌದು.. ಬಾಗ್ಲು ತೆಗಿರಿ" ಎಂದು ಮೊಮ್ಮಗ ಉತ್ತರಿಸಿದ.


ಬಗ್ಗಿಯೇ ನಡೆದುಕೊಂಡು ಬಂದಿದ್ದ ಅಮ್ಮ ಬೆನ್ನು ನೆಟ್ಟಗೆ ಮಾಡಿ ಬಾಗಿಲಿನ ಕಳ್ಳಮೀಡವನ್ನೂ ತೆಗೆದು 

ಅಂತೂ ಮೊಮ್ಮಗನ ಮುಖನೋಡಲು ಕಾದರು.
ಆಶ್ಚರ್ಯ! 

ಎರಡು ಆಕೃತಿಗಳು ಕಂಡವು.

ಹಾಗೆಯೇ ಅವರಡೂ ಒಳಬಂದಮೇಲೆ ಬಾಗಿಲು ಮುಚ್ಚಿ

 "ತಮಾ ಬಟಾರಕ್ಕೆ ಕಾಲು ಒರೆಸಿಕ್ಯಾ"

ಎಂದಾಗ "ಎಯ್ ಇರ್ಲಿ No problem ಅಜ್ಜಿ" ಎಂದ.




ಇದೇನಿದು "ಅಜ್ಜಿ ??"  ಎಂದು ಒಮ್ಮೆ ನೋಡಿದರಾದರೂ

 ಪಕ್ಕದಲ್ಲಿ ಯಾರೋ ಇರುವುದನ್ನು ನೋಡಿ ಸುಮ್ಮನಾದರು.

ಮೊದಲೇ ಚುಮಣಿ ದೀಪದಲ್ಲಿ ನೋಡುತ್ತಿರುವುದರಿಂದ

 ಮತ್ತು ವಯಸ್ಸಿನ ಕಾರಣದಿಂದ ಚೂರು ಕಣ್ಣು ಮಸುಕಾಗಿದ್ದರಿಂದ 

ಆ ಆಕೃತಿ ಗಂಡೋ ಹೆಣ್ಣೋ ಪಕ್ಕಾ ಗೊತ್ತಾಗಲಿಲ್ಲ.




ನಿಲುವು ,ದೇಹದಾಕೃತಿಯಿಂದ ಹೆಣ್ಣು ಅನಿಸಿದರೂ ಪ್ಯಾಂಟು ಶರಟು ಟೊಪ್ಪಿಥರ

 ಎನೋ ತಲೆಗೆ ಹಾಕಿಕೊಂಡಿದ್ದು ನೋಡಿ ಚೂರು ಅನುಮಾನವಾಯಿತು..

"ಯಾರಾ ತಮಾ ಇದು ??" ಎಂದು ಕೇಳಬೇಕು ಅನ್ನಿಸುವಷ್ಟರಲ್ಲೇ


 "ಅಜ್ಜಿ ,this is akshi,my colleague  ಯಾಂಡ್ friend  " ಎಂದ.




ಆ ಕೆಂಪಮ್ಮ ಮತ್ತೊಮ್ಮೆ 

"ಆಂ ?" 

ಎಂದದ್ದು ನೋಡಿ 

"ನನ್ ಜೊತೆ ಕೆಲಸಾ ಮಾಡವ್ರು ಆಫೀಸಲ್ಲಿ ...ಲೋಲಾಕ್ಷಿ ಅಂತಾ" ಎಂದ.

ಅದಕ್ಕೆ ಪ್ರತಿಯಾಗಿ

 "ಹಾಯ್....ಅ ನಮಸ್ತೆ ಆಂಟಿ" 

ಎನ್ನುವ ಶಬ್ಧವೂ ಬರಲು  ಕೆಂಪಮ್ಮ ಮತ್ತೊಮ್ಮೆ ಬೆನ್ನು ನೆಟ್ಟಗೆ ಮಾಡಿ ಚುಮಣಿಯನ್ನು

 ಎತ್ತಿಹಿಡಿದು ಆ ಆಗಂತುಕ ಹೆಂಗಸಿನ ಮುಖನೋಡಿದರು. 

ಈ ಬಿಚ್ಚುಗೂದಲಿನ ಹೆಂಗಸು "ಯಾರು ಏನು ಎತ್ತ ?" ಎಲ್ಲಾ ಕೇಳಬೇಕು ಅನ್ನಿಸಿದರೂ

 ಏನೋ ಸರಿ ಎನ್ನಿಸದೇ

 "ಬನ್ನಿ ಒಳಗೆ ...ನಡಿರಿ ಬಚ್ಚಲಲ್ಲಿ ಬಿಸಿನೀರಿದ್ದು ..ಕಾಲು ತೊಳಕಳಿ," 

ಎಂದು ಮುಂದುವರೆದರು...

ಅಷ್ಟರಲ್ಲೇ ಹಿಂದುಗಡೆ ಇಂದ

 "No..Ok Leave...ಅಮ್ಮಾ  ನಾವ್ ಇಲ್ಲಿ  ಸುಮ್ನೆ ಒಂದು ವಿಸಿಟ್ ಗೆ ಅಂತಾ ಬಂದ್ವಿ...

ವಿ ಹಾವ್ ಟು  ಲಿವ್ ದಿಸ್ ನೈಟ್" ಎಂದ...





ಕೆಂಪಮ್ಮ ತಿರುಗಿ

 "ಆಂ ?" 
ಎನ್ನಲು "ಯಂಗ ಇಲ್ಲಿ ಉಳಕಂಬಲೆ ಬಂಜ್ವಿಲ್ಲೆ,ರಾತ್ರೆ ಬಸ್ಸಿಗೆ ಹೋಪವ್ವು" 

ಎಂದನಾದರೂ ಪಕ್ಕದಲ್ಲಿದ್ದವಳ ಮುಖನೋಡಿ



 "ರಾತ್ರಿ ಬಸ್ಸಿಗೆ ಹೋಗ್ಬೇಕು ವಾಪಸ್ಸು ...

ರಿಕ್ಷಾ ಬರತ್ತೆ ಇನ್ನೇನು .

.ಸುಮ್ನೆ ನಿಮ್ಮನ್ನಾ ಮಾತಾಡ್ಸ್ಕೊಂಡ್ ಹೋಗಣಾ ಅಂತಾ ಬಂದ್ವಿ " ಎಂದ. 




"ಇದೆಂತಾ ಮಾಣಿದು ಪ್ಯಾಟೆ ಭಾಷೇ!ಎಂತಾ ಅತೋ?"

 ಎಂದು ಕೇಳಬೇಕು ಎಂದುಕೊಂಡರಾದರೂ 

"ಆ ಹೆಂಗಸಿಗೆ  ಅರ್ಥ ಆಗ್ಲಿ ಹೇಳಿ ಹಿಂಗೆ ಮಾತಾಡ್ತಾ ಇದ್ದಾ" ಎಂದುಕೊಂಡರು .



 "ಅಂದ್ರೂ ಮನೆಗ್ ಬಂದ್ಮೇಲ್ ಮನೆಯವ್ರ ಹಂಗೆ ಇರವಪಾ ,ಇದೆಂತಾ ಮಳ್ಳು" ಅನ್ನಿಸಲಾಗಿ ,

"ಇರ್ಲಿ ತಮಾ... ಬನ್ನಿ ಕುತ್ಕಳಿ " 

ಎಂದು ಕಂಬಳಿ ಹಾಸಿದರು.



ಒಳಗೊಳಗೆ ಅದೇನೋ ಸಿಟ್ಟು ಬರುತಿದ್ದಾದರೂ ತಮ್ಮ ಅನುಭವ ಬಲದಿಂದ ಅದನ್ನು ತಡೆದುಕೊಂಡರು..

 "ಎಯ್ ಇರ್ಲಿ ಇರ್ಲಿ ತೊಂದ್ರೆ ಇಲ್ಲ " ಎಂದು ಆತ ಹೇಳಿದ್ದನ್ನು ವಾಡಿಕೆಯ

 "ಬಿಡಿಯಾ" ಎಂದು ಪರಿಗಣಿಸಿದ ಕೆಂಪಮ್ಮ ಕೂರುವಂತೆ ಒತ್ತಾಯ ಮಾಡಿದರು.

 ಅವನು  ತನ್ನ ಜೊತೆಯಲ್ಲಿದ್ದವಳಿಗೆ  

"ಏಯ್ ಚುಚ್ಚತ್ತೆ ಅದು ,ಕೂರಕ್ ಎಲ್ಲಾ ಹೋಗ್ಬೇಡ" 


ಎಂದದ್ದು ಕೇಳಿಸಿತಲ್ಲದೇ ,ಅಲ್ಲೇ ಇದ್ದ ಕಿಟಕಿಯ ಕಟ್ಟೆಗೆ ಒರಗಿ ಕೂತು ಅವರು


 "ಹಾಂ ಇಲ್ಲೆ ತೊಂದ್ರೆ ಇಲ್ಲ...ನೀವು ಏನು ಮಾಡಕ್ ಹೋಗ್ಬೇಡಿ

..ಅಲ್ಲೇ ಮಣೆ ಮೇಲೆ ಕೂತ್ಕೋಳಿ ಕೈಮುಗಿದು ಬಾ ಅಂದ್ಲು ಆಯಿ ಅದ್ಕೆ ಬಂದೆ...ಪ್ಲೀಸ್" 

ಎಂದದ್ದೂ ಆಯಿತು...





"ಈ ಮಾಣಿದು ಅತೀ ಅತು" ಎಂದುಕೊಳ್ಳುತ್ತಾ 

ಅದನ್ನು ತೋರಿಸಗೊಡದೇ

 "ತಮಾ ಅಪರೂಪಕ್ಕೆ ಬಂಜೆ...ಇನ್ನು ಬರದು ಯಾವಗ್ಲೋ ..

.ಅಲ್ಲಿತನಕಾ ಈ ಮುದುಕು ಇರ್ತೋ ಇಲ್ಯೋ..

ಬರದ್ ಬಂಜೆ ಎರಡ್ ತುತ್ತು ಅನ್ನ ಉಂಡು ಹೋಗು...

ಹತ್ತೇ ನಿಮಿಷ ಅಡುಗೆ ಮಾಡಿಬಿಡ್ತೆ " ಅಂದರು.




"ನೋ ನೋ ...ಸಾರಿ..ಟೈಮಿಲ್ಲ ಅದ್ಕೆಲ್ಲಾ...

ಮತ್ತೆ ಜರ್ನಿ ಮಾಡದಲ್ವಾ ಏನು ತಿನ್ನೋಹಂಗಿಲ್ಲ ಜಾಸ್ತಿ.

ಅಲ್ಲಿ ಕೂತ್ಕೋಳಿ ನೀವು" ಎಂದು ಎದ್ದು ಬಂದೇ ಬಿಟ್ಟನು...


ಅಬ್ಬಾ ಹತ್ತಿರಬಂದಿದ್ದು ಖುಷಿ ಆಗಿ 


"ತಮಾ ಆತು..ಚೂರು ಆಸ್ರಿಗೆ ಆದ್ರೂ ಕುಡಿರಿ..ನೋಡು ರೊಟ್ಟಿ ಮಾಡಿದ್ದೇ ಇದ್ದು...

ಒಂದೊಂದೇ ರೊಟ್ಟಿ ತಿಂದು ಬಿಸಿನೀರು ಕುಡಿರಿ.." ಎಂದು ಹೇಳಿದರು. 

"ಅಯ್ಯೋ ನಿಮಗೆಲ್ಲಾ ಯಾಕ್ ತೊಂದರೆ ?ಬೇಡ್ ಬೇಡ...

ಚೂರು ಅಲ್ಲಿ ಹಂಗೆ ಕೂತು ಬಿಡಿ ನಮಸ್ಕಾರ ಮಾಡಿ ಹೊರಡ್ತೀವಿ" 

ಎಂದನು...ಕೆಂಪಮ್ಮನಿಗೆ ಒಂಥರಾ ಬೇಜಾರಾಗಿ ಸಿಟ್ಟೂ ಬಂತು....

ಇರಲಿ ಎಂದುಕೊಂಡು 



"ಆಗ್ಲಿ ಎಲ್ಲಾ ನಿಂಗ್ ಸರಿ ಕಾಣ್ತೋ ಹಂಗೆ...ನಾಕು  ಲಾಡು ಇದ್ದು...

ಅದು ಬಾಳೆಕಾಯಿ ತಾಳಿ ಆದ್ರೂ ತಿಂದು ಹೋಗು...ಬಿಸ್ನೀರು ಮಾಡ್ತಿ" 

ಎಂದು ನೀರು ಬಿಸಿಗಿಡಲು  ಪಾತ್ರೆ ಹುಡುಕತೊಡಗಿದರು..

.ಆ ದೊಡ್ಡ ಪಾತ್ರೆ  ಸ್ವಲ್ಪ ಒಳಗೆ ಇದ್ದುದ್ದರಿಂದಲೋ

 ಕೈ ಚೂರು ನಡುಗಿದ್ದರಿಂದಲೋ 

ಅಲ್ಲಿದ್ದ ಉಳಿದ ಪಾತ್ರೆಗಳು ನೆಲಕ್ಕೆ ಬಿದ್ದವು...



ಅದು ಬಿದ್ದಂತೆ ಮಾಣಿ  ಆ ಹುಡುಗಿಯೆಡೆಗೆ ತಿರುಗಿ 

"ಸೀ ಆಯ್ ಟೋಲ್ಡ್ ಮಾಮ್ ನೋ...

ಇವ್ರಿಗ್ ವಯಸ್ಸಾದ್ರೂ ಮಾತು ಕೇಳಲ್ಲ..

ಏನಾದ್ರೂ ಮಾಡಕ್ ಹೋಗ್ತಾರೆ ಅಂತಾ" ಎಂದು ಬಿಟ್ಟ...




ಇದರಿಂದ ಕೆಂಪಮ್ಮನ ಸಿಟ್ಟು ತಾರಾಮಾರಿ ಏರಿಹೋಯಿತು...



ಅವರಿಗೆ ಅವರ ಅಡುಗೆ,ಅಡುಗೆಮನೆ,ಅತಿಥಿ ಸತ್ಕಾರದ ಮೇಲೆ ಅಪಾರ ಪ್ರೀತಿ..

ಸಾಯುವ ಹಿಂದಿನ ಕ್ಷಣವೂ ಮನೆಗೆ ಬಂದವರಿಗೆ ಅನ್ನನೀರು ಕೊಟ್ಟೇನು 

ಎನ್ನುವ ವಿಶ್ವಾಸ ಅವರದ್ದು..

ಅಡಿಗೆ ಅವರ ಆತ್ಮಗೌರವದ ಪ್ರತೀಕವೂ ಆಗಿತ್ತು... 

ನಿನ್ನೆಮೊನ್ನೆ ಮುಕುಳಿ ತೊಳೆಸಿ ಬೆಳೆಸಿದ ಮಾಣಿ

 ಹುಟ್ಟಿ ಮೂರು ಸೋಮವಾರ ಆಗುವುದರೊಳಗೆ ತನ್ನನ್ನೇ ಆಡಿಕೊಳ್ಳುವಷ್ಟು 

ದೊಡ್ಡವನಾದನೇ  ಅನ್ನಿಸಿ



"ಥೋ ಮಾಣಿಯೇ...

ಅಬ್ಬಬ್ಬಾ ಇದ ರಾಶಿ ಆಗೊತು....

ನಿನ್ ಪ್ಯಾಟೆ ರೂಡಿ ಎಲ್ಲಾ ಅಲ್ಲೆ ಇಟ್ಗಾ..

ಇಲ್ಲಿ ಅಲ್ಲಾ ..

ಮೊನ್ನೆ ಮೊನ್ನೆ ಹುಟ್ಟಿದವ ...ಯಂಗೆ ಹೇಳ್ತ್ಯಾ ?? " ಎಂದು ಜೋರಾಗಿ ಹೇಳಿಬಿಟ್ಟರು...



ತನ್ನಜ್ಜಿಯ ಸಿಟ್ಟು ಸುತ್ತಮೂರು ಹಳ್ಳಿಗೆಲ್ಲಾ ಪ್ರಸಿದ್ಧ 

ಎಂಬುದನ್ನು ಅರಿತ ಮೊಮ್ಮಗ ಮೆತ್ತಗಾಗಿ 

"ಅಲ್ಲಾ ನಾ ಹಂಗ್ ಹೇಳಿದ್ದಲ್ಲಾ...

ವಯಸ್ಸಾಯ್ತಲ್ಲಾ ನಿಂಗೆ ಸುಮ್ನೆ ಯಾಕ್ ತೊಂದ್ರೆ ಅಂದಿ ಅಷ್ಟೇ" 

ಎಂದು ಕುಕ್ಕರುಕಾಲಿನಲ್ಲಿ ಕೂತು ತಲೆತುರಿಸಿಕೊಂಡ...




"ಓಹೋಹೋ ...ಯಂಗ್ ವಯಸ್ಸಾತು ಹೇಳಲ್ ಬಂದ್ಯನೋ ದೊಡ್ಡ ಮನುಷ್ಯಾ ???

 ನಿನ್ನಲ್ದೋ ನಿನ್ ಅಪ್ಪನ್ನೂ ಬೆಳೆಸಿದ್ದು ಆನು...

ಬಾ ನಿನ್ನ ಮಕ್ಳಿಗೂ ಗಂಜಿ-ದ್ವಾಸೆ ಮಾಡಿ ಹಾಕ್ತಿ..

ನಂಗೆ ವಯಸ್ಸಾತು ಹೇಳ್ತಾ ! "

ಎಂದು ಶುರುಮಾಡಿ ಹಾಗೇಯೇ ಹಲವಾರು ಸಾಲುಗಳಿಗೆ ಮುಂದುವರೆಯಿತು....



ಅದೇನೋ ಕೆಂಪಮ್ಮನಿಗೆ ಸಿಟ್ಟು ಬಂದರೇ ಮುಂದಿದ್ದವರೇ ಕಾಣುತ್ತಿರಲಿಲ್ಲ.

.ತಮಗೆ ತಿಳಿಯದಂತೆ ಕೆಲಕ್ಷಣ ಮಾತಾಡುತ್ತಲೇ ಇರುತ್ತಿದ್ದರು.


ಮೊಮ್ಮಗ ಮಹಾಶಯ ಒಂದೈದು ನಿಮಿಷ ನೋಡಿ,

ಕೊನೆಗೆ ಅಜ್ಜಿಯ ಮಾತು ನಿಂತು ತನಗೇನೋ ಅವಮಾನವಾಯಿತು 

ಎನ್ನುವಂತೆ ಅನ್ನಿಸಲು ಶುರುವಾದಾಗ 

"ಅಮ್ಮಾ...ತಪ್ಪಾತು ಮಾರಾಯ್ತಿ ..

.ಆಂ ನಿಂಗ್ ಬೇಜಾರ್ ಮಾಡವು ಹೇಳಿ ಹಿಂಗಲ್ಲಾ ಹೇಳಿದ್ದಲ್ಲಾ...

ಹುಷಾರಾಗ್ ಇರು...ಆಂ ಹೋಗ್ ಬರ್ತಿ "

 ಎಂದು  ಕುಕ್ಕರುಗಾಲಲ್ಲೇ ಕೂತ ಕೆಂಪಮ್ಮನ ಕಾಲಿಗೆ ಕೈತಾಗಿಸಿ  ಹೊರಟು ಹೋದ.



ಒಕ್ಕೈ ನಮಸ್ಕಾರ ಮಾಡಿದ್ದೂ,

ಕೈಯ್ಯನ್ನು ಎದೆಗಿಡದೇ ತುಟಿಗೆ ತಾಗಿಸಿ

 ಅಸಹ್ಯವಾಗಿ ಪ್ಚ್ ಎಂದು ಸದ್ದು ಮಾಡಿ ಹಣೆಗೆ ಭುಜಕ್ಕೆ ತಟ್ಟಿಸಿಕೊಂಡದ್ದೂ 

ಕೆಂಪಮ್ಮನ ಗಮನಕ್ಕೆ ಬಂತಾದರೂ ಅವರು ಏನನ್ನೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ..
.

ಅವರಿಬ್ಬರೂ ಬಾಗಿಲ ದಾಟಿ ಹೋದರೂ 

ಏಳದ ಕೆಂಪಮ್ಮನನ್ನು ನೋಡಿ ಆ ಹುಡುಗಿ  

"ಆಂಟೀ ಡೋರ್ ಲಾಕ್ ಮಾಡ್ಕೋಳಿ" ಎಂದಳು ..

ಆ ದನಿಯಿಂದ ಬೆಚ್ಚಿಬಿದ್ದಂತಾದ ಕೆಂಪಮ್ಮ 

"ಆಹ್ ?  ಹಾಂ..." ಎಂದು ನಿಧಾನಕ್ಕೆ ಬಾಗಿಲೆಡೆಗೆ ಬಂದರು.. 

                                                                             ****
ಬೆಳಬೆಳಿಗ್ಗೆಯೇ ಹಂಚಿನ ಮೇಲೆಲ್ಲಾ ಹತ್ತಿ ದಾಂಧಲೆ ಎಬ್ಬಿಸುತ್ತಿದ್ದ 

 ಮಂಗನ ಹುಡುಕುತ್ತಾ  ಮನೆಕಡೆ ಇಂದ ಅದೇ ಗುಂಗಿನಲ್ಲಿ ಕೆಂಪಮ್ಮನ ಮನೆ ಅಂಗಳಕ್ಕೆ ಬಂದ 

ದ್ಯಾವನಿಗೆ "ದಪ್" ಎಂದು ಏನೋ ಹೊಳೆಗೆ ಬಿದ್ದ ಸದ್ದಾಯಿತು.

ಇಲ್ಲೇ ಇರ್ಬಕು ಎಂದು ಕೋವಿ ಗುರಿಹಿಡಿದವನಿಗೆ ಮರದ ಮೇಲೆ ಏನೂ ಕಾಣಿಸಲಿಲ್ಲ...



"ಎಂತಾ ಇರ್ಬಕು?"

 ಎಂದು ಹೊಳೆಗೆ ಇಣಿಕಿದಾಗ ದ್ಯಾವನಿಗೆ ಶಕ್ಕರಗಂಚಿ ಕಾಯಿ ಬಿದ್ದದ್ದು ಕಂಡಿತು..

ಥೋ ಕಥೆಯೇ...





ಎಂದು ಮತ್ತೆ ಕಂಚಿಮರ ನೋಡಿದವನಿಗೆ ಮರದ ಮೇಲೆ 

ಇನ್ಯಾವುದೂ ಕಾಯಿ ಬಾಕಿ ಇದ್ದಂತೆ ಕಾಣಿಸಲಿಲ್ಲ..

ಯಪ್ಪಾ ...





ಇದು ಆ ಅಮ್ಮನ ಕಣ್ಣಿಗೇನಾದರೂ ಬಿದ್ದರೆ ಅಷ್ಟೇ...

ಮಂಗ ಕೆಡಗಿತು ಎಂದುಕೊಂಡು ಭೂಮಿ ಆಕಾಶ ಒಂದು ಮಾಡುತ್ತಾರೆ...

ಹೆಂಗಿದ್ದರೂ ಅವರ ಮೊಮ್ಮಗ ಬಂದಿದಾನೆ ಅಂತ ಮೊನ್ನೆ ಹೆಂಡತಿ ಹೇಳಿದ ನೆನಪು..

"ನಾನೇ ಕುಯ್ದೆ,ಮಂಗ ಈ ಕಡೆ ಬಂದು ಕಾಟಕೊಡೋದ್ ಕಿಂತ್ ಮುಂಚೆ "

ಎಂದು ಹೇಳಿದರಾಯ್ತು ಎಂದೆಲ್ಲ ಯೋಚಿಸಿ ಕೆಂಪಮ್ಮನ ಮನೆ ಬಾಗಿಲ ಹತ್ತಿರ ಹೋದ....


"ಅಮ್ಮಾ ...ಓ ಅಮ್ಮಾ ...

ನಾನ್ರೋ ದ್ಯಾವ....

ಶಕ್ಕರಗಂಚಿ ಕೊಯ್ದು ತಗಂಡ್ ಬಂದೆನ್ರೋ",,

ಊಹೂಂ..


ಎಲ್ಲೋ ಬಚ್ಚಲುಮನೆ ಕಡೆ ಇರಬೇಕು....

ಅಲ್ಲೇ ಕೂತು ಕವಳಹಾಕಿ ಮತ್ತೆ ಕರೆದ...

"ಅಮ್ಮೋ ...ದ್ಯಾವ ಬಂದೀನ್ರೋ"

ಮತ್ತೆ ಉತ್ತರವಿಲ್ಲ...

ಎಂತಾ ಅಯ್ತು ?


ಬಾಗಿಲ ಹತ್ತಿರ ಹೋಗಿ ಇಣುಕುವಷ್ಟರಲ್ಲೇ ಜೋರಾಗಿ ಗಾಳಿ ಬೀಸಿತು.. 

ಬಾಗಿಲ ಬಳಿಯೇ ಕೆಂಪು ಸೀರೆ ಎಲ್ಲೋ ಹಾರಾಡಿದ ಹಾಗಾಯಿತು...

ಅಯ್ಯಯ್ಯೋ....





ದ್ಯಾವ ಎರಡು ಹೆಜ್ಜೆ ಮುಂದೆ ಹೋಗಿ ವಾಪಸ್ಸು ಜೋರಾಗಿ ಓಡಿದ...





ಅಲ್ಲೇ ಅವನ ಕೈಯಿಂದ ಕಳಚಿಬಿದ್ದ ಶಕ್ಕರಗಂಚಿ ಪೂರ್ತಿಯಾಗಿ ಮಾಗಿತ್ತು,...

Tuesday, December 9, 2014

ಸಿಗ್ನಲ್ಲು ಬೀಳುವಂತಿದೆ (ಕವನ:ಸವಾರಿ)

ನಮಸ್ಕಾರ ಸ್ನೇಹಿತರೇ..
ಟ್ರಾಫಿಕ್ಕಿನ ಜಂಜಾಟ ಎಲ್ಲರಿಗೂ ಗೊತ್ತಿರುವಂಥದ್ದೇ..ಅದನ್ನೇ ನನ್ನೊಳಗಿನ ಒಂದಿಷ್ಟು ಗೊಂದಲದೊಂದಿಗೆ ,ಹೆದರಿಕೆಯೊಂದಿಗೆ ಸಮೀಕರಿಸಿ ಬರೆಯುವ ಪುಟ್ಟ ಪ್ರಯತ್ನವಿದು..ದಯಮಾಡಿ ಓದಿ,ವಾಚನ ಕೇಳಿ,ಅನಿಸಿಕೆ ಹೇಳಿ ಪ್ರೋತ್ಸಾಹಿಸಿ..ತಪ್ಪು-ಒಪ್ಪು ಹೇಳಿ ಬೆಳೆಯಲು ಸಹಕರಿಸಿ....ಹೇಳ್ತಿರಾ ಅಲ್ವಾ ?? ಇಲ್ಲಿದೆ ನೋಡಿ ಕವನ ..

ಸವಾರಿ
==========================
ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ  ನುಗ್ಗಿ ಸಾಗುವುದೋ  ತಿಳಿಯದಾಗಿದೆ

ಅತ್ತಿತ್ತ ನೋಡದೇ ಬಂದಹಾಗೇ ಗುಡುಗುಡು ಓಡುತ್ತಲೇ ಇದ್ದರೆ
 ಬರ್ರನೆ ತೂರಿ  ಬಂದವನ ಅಡಿಗೆ ಸೇರಿ ಅಪ್ಪಚ್ಚಿಯಾಗುವ ಭೀತಿ.
ಎಡಬಲ ನೋಡಿ, ನೋಡಿಕೊಂಡು ಮೆಲ್ಲಗೆ ನುಸಿಯಹೋದರೆ,
ಹಾ!ಪಶೆ ಬಿದ್ದೆ ಎಂದು ಅಣಕಿಸುತಿದೆ ಆ ಮಾವನ ನೋಟದ ರೀತಿ.

ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ  ನುಗ್ಗಿ ಸಾಗುವುದೋ  ತಿಳಿಯದಾಗಿದೆ

ಈ ಉರಿಉಚ್ಚೆಯರ್ಜಂಟು ಸಲ್ಲದು ನಿಂತು ಹೋಗುವಾ ಎಂದೆಣಿಸಿ
ಬಂದುಮಾಡಿದರೆ ಗಾಡಿ ,ನಿಂತದ್ದು ನಿಂತೇ ಹೋಗುತ್ತದೆ ಆತ್ಮಲಿಂಗದಂತೆ.
ಹಿಂದಿನವರ ಹಾರನ್ನುಗಳೆಲ್ಲಾ ಯಥಾಶಕ್ತಿ ಕಿರುಚಿಕೊಳ್ಳತೊಡಗುತ್ತವೆ
ವೈರಿಯ ನಡುಮುರಿಯಲು ಹಪಹಪಿಸುತಿಹ ಸೈನಿಕರ ಯುದ್ಧಘೋಷದಂತೆ.

ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ  ನುಗ್ಗಿ ಸಾಗುವುದೋ  ತಿಳಿಯದಾಗಿದೆ

ಕದ್ದುಮುಚ್ಚಿ ನುಸುಳಿದರೆ ಗಳಿಗೆ ಗಳಿಗೆಗೂ ಅದೇನೋ ಹೆದರಿಕೆಯಾಗುತ್ತದೆ
ತಣ್ಣಗೆ ಬಿಳಿಗೆರೆಯ ಮೇಲೆ  ನಿಶ್ಚಿಂತೆಯಿಂದ ನಿಲ್ಲಬಾರದಿತ್ತೇ? ಅನ್ನಿಸುತ್ತದೆ
ನಿಂತಲ್ಲಿ,ರೊಯ್ಯ್ಯ ಎಂದು ಹೋಗುವವರ ನೋಡಿ ಥೋ ಹೊಟ್ಟೆಉರಿಯುತ್ತದೆ
ಉಲ್ಟಾಬರುವ ಕೆಂಪುನಂಬರು,ವ್ಯರ್ಥವಾಯಿತೀಕ್ಷಣವೆಂಬುದ  ನೆನಪಿಸುತ್ತದೆ .

ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ  ನುಗ್ಗಿ ಸಾಗುವುದೋ  ತಿಳಿಯದಾಗಿದೆ

-
ಚಿನ್ಮಯ ಭಟ್ಟ
೦೯/೧೨/೧೪

ಪಶೆ ಬೀಳು-ವ್ಯೂಹಕ್ಕೆ ಸಿಲುಕು,ಮೋಸ ಹೋಗು
ಉರಿಯುಚ್ಚೆಯರ್ಜಂಟು-ತೀರಾ ಅರ್ಜಂಟು ಎನ್ನುವ ಅರ್ಥದಲ್ಲಿ..


ವಾಚನದ ಪ್ರಯೋಗ ಇಲ್ಲಿದೆ :




ಹುಂ....ಏನ್ ಅನ್ನಿಸ್ತು ?? ದಯಮಾಡಿ ಹೇಳಿ ಕಾಯ್ತಿದೀನಿ ::)...

Saturday, November 8, 2014

ಮಣ್ಮುಕ ನಜರು

ನಮಸ್ಕಾರ ಗೆಳೆಯರೆ...ಹೆಂಗಿದೀರಾ ?
ಜೀವನದಲ್ಲಿ ಉದರನಿಮ್ಮತ್ತ ಮಾಡುವ ಕಾರ್ಯಗಳು ಮತ್ತು ಮನಸ್ಸಿಗೆ ಹಿತಕೊಡುವಂಥ ಕೆಲಸಗಳು ಇವುಗಳ ನಡುವಿನ ತಿಕ್ಕಾಟದ ನಡೀತಾನೇ ಇರತ್ತೆ...ನಾವು ಮಾಡುತ್ತಿರುವುದು ಒಂದು ,ಅಂದುಕೊಳ್ಳುವುದು ಇನ್ನೊಂದು...ಏನೋ ಪರಿಸ್ಥಿತಿ ಎಂದು ಕೊಂಡು ಮುಂದುವರೆಯುತ್ತಿರುತ್ತೇವೆ..ಮನಸ್ಸಿಗೆ ಖುಷಿ ಕೊಡುವ ಕೆಲಸಗಳನ್ನು ಅವಕಾಶ ಸಿಕ್ಕಾಗಿ ಮಾಡಿ ಉಲ್ಲಸಿತರಾಗ್ತೇವೆ,ಸಿಗದೆ ಹೋದಾಗ ನಿರಾಸೆಗೊಳ್ತೇವೆ...ಹೀಗಾಗಿ ಇವುಗಳನ್ನೇ ಇಟ್ಟುಕೊಂಡು ನನ್ನ ವಿಚಾರವನ್ನು ಕವನದ ರೂಪದಲ್ಲಿ ಹೇಳುವ ಪ್ರಯತ್ನ...ದಯಮಾಡಿ  ಓದಿ,ಎಂದಿನಂತೆ ತಪ್ಪು-ಒಪ್ಪು ತಿಳಿಸಿ,ಅನಿಸಿಕೆಗಳನ್ನಾ ಹಂಚಿಕೊಳ್ತೀರಾ ಅಲ್ವಾ ?? ಕಾಯ್ತಿರ್ತೀನಿ :)..


ಜಡವು ಬದುಕಿನ ಹೊಣೆಯು,ಬಾಳ ಚೇತನ ಚಿಗುರು
ಬೂಮರಂಗಿನ  ನಡಿಗೆ , ಬಿಡದು ಮಣ್ಮುಕ ನಜರು

ಜಡವೆಂದರೆ ಚಿರ ಸ್ಥಿರವಲ್ಲಾ ಜಗ,
ಪಚನ ಪ್ರಚೋದಿತ ಪರಿಭ್ರಮಣೆ.
ಸೃಷ್ಟಿ-ಶೈಶವ-ಯೌವನ-ಮುಕ್ತಿಯ
ಪುನರಪಿ ಪುನರಪಿ ಅನುಕರಣೆ||ಜಡವು||

ಛೇದನ-ಬಂಧನ ಕರ್ಮಾಲಿಂಗನ
ಹೊಸದದು ಏನಿದೆ ನಡುವಿನಲಿ ?
ಹೊಸದದು ಹಳೆಯದು,ಹಳೆಯದೇ ಹೊಸದು
ಸಾಗುವ ಸಮಯದ ತಿರುವಿನಲಿ||ಜಡವು||

ಕನಲಿದ ಮನದಾ ಪುನರುತ್ಥಾನಕೆ
ಅವತರಿಸುವುದು ಚೇತನವು .
’ಅಲ್ಲ’ವ ಮರೆಸಿ,ಬೆಲ್ಲವ ತೋರಿಸಿ
ಕಲ್ಲನು ಕಡೆಸುವ ಸಾಧನವು ||ಜಡವು||

ನೊಗವದು ವೀಣೆ ಮೀಟುವುದರಿಯಲು
ನೂರಿದೆ ರಾಗವು ತಂತಿಯಲೇ.
ಬೇಸರ ಜೀಕುವ ಅರಿವಿನ ಹಾಣೆಯು
ಅಡಗಿದೆ ಒಳಮನೆ ಜಂತಿಯಲೇ||ಜಡವು||

ಜಡವು ಬದುಕಿನ ಹೊಣೆಯು,ಬಾಳ ಚೇತನ ಚಿಗುರು
ಬೂಮರಂಗಿನ ನಡಿಗೆ , ಬಿಡದು ಮಣ್ಮುಕ ನಜರು

-ಚಿನ್ಮಯ ಭಟ್ಟ



ಟಿಪ್ಪಣಿ:

ಮಣ್ಮುಕ ನಜರು : ಎರಡು ತಲೆಗಳಿರುವ ಹಾವಿನ ದೃಷ್ಟಿ.. ನಮ್ಮನೆ ಕಡೆ ಈ ಎರಡು ಮುಖದ ಹಾವಿಗೆ  ಮಣ್ಮುಕ ಹಾವು ಎಂದು ಕರೆಯುವುದನ್ನು ಬಲ್ಲೆ..ಹಾಗಾಗಿ ಬಳಸಿಕೊಂಡೆ.. ಇಲ್ಲಿ  ಇದನ್ನು ಯಾವಾಗಲೂ ಪರ-ವಿರುಧ್ಧವಾಗಿ ಬರುವ  ಯೋಚನೆಗಳಿಗೆ ಸಮೀಕರಿಸಬಹುದು...

ಬೂಮರಂಗು : BOOMRANG ,ಅಸ್ತ್ರೇಲಿಯಾದ ಆದಿವಾಸಿಗಳು ಬಳಸುತ್ತಿದ್ದ ಆಯುಧ..ಬೇಟೆಗಾರನ ಕೈಯ್ಯಿಂದ ಹೊರಟು ಬೇಟೆಯಾಡಿ ವಾಪಸ್ಸು ತಿರುಗಿ ಬೇಟೆಗಾರನ ಕೈಸೇರುತ್ತಿದ್ದುದು ಇದರ ವಿಶೇಷ. ಇಲ್ಲಿ ನಮ್ಮ ಪ್ರಯತ್ನಗಳೆಲ್ಲಾ ಏನೇ ಇದ್ದರೂ ಕೊನೆಗೆ ನಾವು  ಮೊದಲಿದ್ದಲ್ಲಿಗೆ ತಲುಪುವುದರ ಸಂಕೇತವಾಗಿ ಅರ್ಥೈಸಿಕೊಳ್ಳಬಹುದು...

ಪಚನ ಪ್ರಚೋದಿತ ಪರಿಭ್ರಮಣೆ :ಪಚನ ಅಂದರೆ ಜೀರ್ಣವಾಗುವುದು .ಪರಿಭ್ರಮಣೆ ಅಂದರೆ ಸುತ್ತುವುದು..ಹೊಟ್ಟೆಪಾಡಿಗಾಗಿ ಮಾಡುವ ಕಾರ್ಯಗಳು ಎಂದು ತಿಳಿದುಕೊಳ್ಳಬಹುದು.

ಪುನರಪಿ ಪುನರಪಿ: ಮತ್ತೆ ಮತ್ತೆ

ಕನಲಿದ : ಬೇಸರಗೊಂಡ

ಪುನರುತ್ಥಾನ : ಮರು ಹುಟ್ಟು,ಮತ್ತೆ  ಅಸ್ತಿತ್ವಕ್ಕೆ ಬರುವುದು,ಪುನಃ ಶುರುವಾಗುವ ಬೆಳವಣಿಗೆ

ಬೇಸರ ಜೀಕುವ  :ಜೀಕು,ಜೋರಾಗಿ ತಳ್ಳು ,ನೂಕು.

ಅರಿವಿನ ಹಾಣೆಯು: ಹಾಣೆ -ಕೋಲು,ದಾಂಡು..ನಮ್ಮೂರಿನಲ್ಲಿ ಗಿಲ್ಲಿ-ದಾಂಡುವಿಗೆ ಹಾಣೆ-ಗಿಂಡು ಎಂದು ಕರೆಯುವುದುಂಟು. ಇಲ್ಲಿ   ಗಿಲ್ಲಿಯನ್ನು ಮಣ್ಣಿನ ಸಣ್ಣ ಕುಳಿಯಿಂದ ಚಿಮ್ಮಿಸುವ ಕ್ರಿಯೆಗೆ ಜೀಕುವುದು ಎಂದು ಬಳಸುತ್ತಾರೆ.ಹೀಗೆ  ಅರಿವು ಬೇಸರವನ್ನು ಹೊರಗೆ ಹಾರಿಸುವ ಸಾಧನ ಎನ್ನುವ ಅರ್ಥದಲ್ಲಿ ಬಳಸಿದ್ದು

ಒಳಮನೆ ಜಂತಿ :ಜಂತಿ ಎಂದರೆ  ಕೈ ಅಟ್ಟ..ಸಾಮಾನ್ಯವಾಗಿ ಅಡಿಗೆ ಮನೆ ಸುತ್ತ ಮುತ್ತಲು ಇರುವ ಪಾತ್ರೆ,ಡಬ್ಬಿಗಳನ್ನು ಇಡುವ ಸಣ್ಣ ಅಟ್ಟ..ಇಲ್ಲಿ ನಮ್ಮೊಳಗೇ ಬೇಸರವನ್ನು ಓಡಿಸುವ ಅರಿವು ಅಡಗಿದೆ ,ಅದನ್ನು ನಾವು ಹುಡುಕುತ್ತಾ ಹೋಗಬೇಕು ಎನ್ನುವ ಭಾವದಲ್ಲಿ ಬಳಸಿದ್ದು..

ಈ ಕವನವನ್ನು ವಾಚಿಸುವ ಪ್ರಯತ್ನವನ್ನೂ ಮಾಡಿದ್ದೇನೆ ದಯಮಾಡಿ ಕೇಳಿ ಹೆಂಗಿದೆ ಹೇಳಿ ...
https://soundcloud.com/chinmay-bhat-3/0inwdpw2cbwl


ಇವುಗಳ  ಜೊತೆಗೆ ನಿಮ್ಮ ಅನಿಸಿಕೆಗಳೂ ಬಹಳ ಮುಖ್ಯ..ಅವುಗಳನ್ನು ತಾವು  ಬಿಚ್ಚುಮನಸ್ಸಿನಿಂದ ಹಂಚಿಕೊಳ್ಳುವಿರೆಂದು ನಂಬಿದ್ದೇನೆ.
ವಂದನೆಗಳು :)

Sunday, September 21, 2014

ಪಲ್ಲಟ(ಕಥೆ)

ಗೆಳೆಯರೇ,ಹೆಂಗಿದೀರಿ ?? ಅರಾಮಲ್ವಾ ...
ಕಥೆ ಹೇಳುವ ಇನ್ನೊಂದು ಪ್ರಯತ್ನ...."ಪಲ್ಲಟ" ಎನ್ನುವ ಕಥೆಯನ್ನು ಬರೆದು ಅದನ್ನು ಧ್ವನಿ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ...
ದಯಮಾಡಿ ಕೇಳಿ..ಅನಿಸಿಕೆ,ತಪ್ಪು-ಒಪ್ಪು ಹೇಳಿ,ತಿದ್ದಿ  ನನ್ನನ್ನು ಬೆಳೆಸಿ,ತೀರಾ ಇಷ್ಟವಾದರೆ  ಅನಿಸಿಕೆಗಳನ್ನು,ಲಿಂಕ ಅನ್ನು ನಿಮ್ಮ ಫೇಸ್ ಬುಕ್ಕು,ಬ್ಲಾಗಿನ ಅಂಕಣಗಳಲ್ಲೂ ಹಂಚಿಕೊಂಡು ಪ್ರೋತ್ಸಾಹಿಸಿ :)...
ವಂದನೆಗಳು...
ನಮಸ್ತೆ :)

ಇಲ್ಲಿದೆ ಲಿಂಕು : ಸೌಂಡ ಕ್ಲೌಡ್ ನ ಕೊಂಡಿ

https://soundcloud.com/chinmay-bhat-3/mlg635uhs5hr

Thursday, July 3, 2014

ಭಾವದಾ ಬರ ಬಂದಿದೆ..

ನಮಸ್ಕಾರಾ...
ಚೆನಾಗಿದೀರಾ ಅಲ್ವಾ???.
ಹಮ್..ಅದೇನೋ ಗೊತ್ತಿಲ್ಲಾರೀ ಚಿತ್ರಗೀತೆಗಳು ಅಂದ್ರೆ ಒಂಥರಾ ಇಷ್ಟ..ಚಂದದ ಗೀತೆಗಳಲ್ಲಿನ ಸಾಹಿತ್ಯ ಇಷ್ಟ,ಅದಕ್ಕೆ ಪೋಣಿಸಿದ ಸಂಗೀತ ಇಷ್ಟ..ಅದರ ದನಿಯಾದ ಗಾಯಕರ ಅಭಿವ್ಯಕ್ತಿಗಳು  ಇಷ್ಟ..ಚಿತ್ರಗೀತೆಗಳ ಥರದ್ದು ಎನಾದ್ರೂ ಬರಿಬೇಕು ಅನ್ನೋ ಕನಸು ಕನವರಿಕೆ ನನ್ನನ್ನು ಚಿಕ್ಕಂದಿನಿಂದಲೂ ಕಾಡ್ತಾನೇ ಇದೆ...ಇಂತಹ ಹುಚ್ಚುತನಗಳ ಒಂದು ರೂಪ ನಿಮ್ಮ ಮುಂದಿದೆ..
ಸುಮ್ಮನೆ ಬರೆದಿದ್ದ ಒಂದು ಪ್ಯಾರಾಕ್ಕೆ ದಾಟಿ ಹಾಕಿ,ಪಲ್ಲವಿ-ಚರಣ ಎಲ್ಲಾ ಹೇಳಿಕೊಟ್ಟು ಅದಕ್ಕೆ ಪದ ಹೆಕ್ಕಿಸಿದ್ದು ಗೆಳೆಯ ರಾಘವೇಂದ್ರ.. ಒಂದು ಪುಟ್ಟ ಪ್ರಯತ್ನ ನಮ್ಮಿಬ್ಬರದು..ಓದಿ,ಕೇಳಿ,ತಪ್ಪು ಒಪ್ಪು ಹೇಳಿ ಪ್ರೋತ್ಸಾಹಿಸಿ..
ಹೇಳ್ತೀರಾ ಅಲ್ಲಾ ???


ಭಾವದಾ ಬರ ಬಂದಿದೆ  ಬಳಿಗೆನೀ ಬಾರದೇ
ಬಾರದಾ ಪದ ಗೀಚಿದೆ   ಬೇಸರಾ ತಾಳದೇ

ಸಾವಿರಾ ಸಾಲು ಕೋಶದಲೂ
ಸಿಗದ ದೇಸಿ ಪದ ನೀನು,
ಕಳೆದು ಹೋದರೆ ಕನಸಿಂದ ಹೇಗೇ ಹುಡುಕಲಿ?
ಹಿಡಿದು ಖಾಲಿ ಕೈಪಿಡಿ.
ಹಾಳು ಸುರಿದಿದೆ ಎನ್ನ ಪ್ರೀತಿ ಜೋಪಡಿ.

ಮುದ್ದಿನಾ ಮೂರು ಮಾತಿಂದಾ
ಮೂಡುತಿದ್ದಾ ನಗೆಬಿಂಬ,
ವಲಸೆ ಹೋದರೆ ಮುನಿಸಿಂದ ಹೇಗೇ ಸಹಿಸಲಿ ?
ಮನಸು ಒಡೆದಾ ಕನ್ನಡಿ.
ಬರಿದು ಎನಿಸಿದೆ ತಲೆ ಹರಟೆಯಂಗಡಿ.

ಭಾವದಾ ಬರ ಬಂದಿದೆ  ಬಳಿಗೆನೀ ಬಾರದೇ
ಬಾರದಾ ಪದ ಗೀಚಿದೆ  ಬೇಸರಾ ತಾಳದೇ

ಈಗ ಹಾಡು ಕೇಳಣ್ವಾ ?? :)...




ಹೆಂಗಿದೆ ಹೇಳಿ...ದಯವಿಟ್ಟು.. ಕಾಯ್ತಿದೀನಿ...
ಧನ್ಯವಾದಗಳು...
ನಮಸ್ತೆ :)

Saturday, May 3, 2014

ಶ್ರಾಯ

ಬಹುಷಃ ಜೀವನದ ಘಟ್ಟಗಳೇ ಹಾಗೆ ಅನ್ನಿಸುತ್ತದೆ.,ಎಲ್ಲಿಂದಲೋ ಗುರುತು ಪರಿಚಯವಿಲ್ಲದೆಡೆಗೆ ಬಂದಾಗ ಹೆದರಿರುತ್ತೇವೆ, ಇದು ನಮ್ಮದಲ್ಲದ ಪರಿಸರ ಎಂದು ಕೊರಗುತ್ತೇವೆ, ಕ್ರಮೇಣ ನಮಗೇ ತಿಳಿಯದಂತೆ ಅಲ್ಲಿಗೆ ಹೊಂದಿಕೊಂಡುಬಿಡುತ್ತೇವೆ,ಅಲ್ಲಿನ ಚಟುವಟಿಕೆಗಳಿಗೆ ತೀವ್ರವಾಗಿ ಸ್ಪಂದಿಸತೊಡಗುತ್ತೇವೆ,ಅಲ್ಲಿಯವರೇ ಆಗಿಬಿಡುತ್ತೇವೆ. ಕೊನೆಗೊಂದು ದಿನ ಅದನ್ನೆಲ್ಲಾ ಬಿಟ್ಟು ಹೊರಡುವಾಗ ಮತ್ತೆ ನಮ್ಮ ಮನೆಯನ್ನೇ ಬಿಟ್ಟು ಹೋಗುವಾಗಿನ ತಳಮಳಗಳು ಶುರುವಾಗುತ್ತವೆ.  
ಇದು ನಾನು ಇಂಜಿನಿಯರಿಂಗ್ ಮುಗಿಸಿ ವಾಪಸ್ಸು ಹೊರಡುವಾಗ ಬರೆಯಲು ಶುರುಮಾಡಿದ ಕವನ.ಅದೇನೋ ಕುಂಟುತ್ತಾ ಸಾಗಿ ಈಗ ಈ ಆಕಾರ ತಲುಪಿದೆ.ದಯಮಾಡಿ ಓದಿ,ತಪ್ಪು-ಒಪ್ಪುಗಳನ್ನು ಮರೆಯದೇ ತಿಳಿಸಿ ಪ್ರೋತ್ಸಾಹಿಸಿ  

ಮಾರುಬೀದಿ ಸಾಲಿನೊಳು ಸೇರಿಹೋಗುವ ಮುನ್ನ
ಹೊಸಮಡಿಕೆ ಬುಡದಲ್ಲಿ ರವಿಸಿಹುದು ಹಳೆನೆನಪು
ನೂರು ಹಾದಿಬಲೆಯೊಳಗೆ ಕರಗಿ ಸಾಗುವ ಮುನ್ನ
ಬಿಸಿತಡಿಕೆ ಅಡಿಯಲ್ಲಿ ದ್ರವಿಸಿಹುದು ಕಳೆದೊನಪು

ಕಾಣದಬುದಿಯ ಪಯಣಕೆ ಒಂಟಿಹಡಗಲಿ ಬಂದು
ನಡುನೆಲದ ಬುಡದಲ್ಲಿ  ಕಾಲಿಡಲು ಬರಿದಿಗಿಲು
ಗೇಣಿಪಡೆದಾ ಭವನದಿ ಸ್ನೇಹದುದಕವ  ಮಿಂದು
ನಡೆಯೊಡನೆ ನಗೆಯಿರಲು ಗರಿಯಾಸೆ ಗಿರಿಮುಗಿಲು

ಹಾಲುಹಲ್ಲದು ಉದುರಿ ಮೈಲಿಗಲ್ಲದು ಚಿಗುರಿ
ಕಲಿಯುತಿರೆ ಹೊಸ ಈಜು,  ಬರದಿರದೆ ಎದುರುಸಿರು
ಬೇಲಿಯೆಲ್ಲೆಯ ದಾಟಿ ನೀಲಿಯಂಬರ ಮೀಟಿ
ಮೆಲಿಯುತಿರೆ ಮೆದುಎದೆಯ ಹನಿಸಿಹುದು ಹೊನ್ನೆಸರು

ತೊಳಕೆಬಳ್ಳಿಯು ತಡವಿ,ದಿಕ್ಕುತಪ್ಪಿರೆ ಅಡವಿ
ಹುಸಿನಡಿಗೆ ಕಾನ್ಗಿರಕಿ ,  ಹದತಪ್ಪಿ  ಮನದೊಲುವು
ಅರಿವ ದಿವಟಿಗೆ ಗೀರಿ ಗಮ್ಯ ಭೂಪಟ  ತೋರಿ
ಸಮಪಥದಿ ನಡೆಸಿರಲು ಗುರುತನಿಕೆ ನಯಮೆಲುವು

ಓಣಿಯೆಲ್ಲವ ಕಂಡು ಊರಿನನ್ನವ ಉಂಡು
ಕೊನೆಹುಲಿಕೆ ಬೇಸರಿಕೆ ,ಬರುಗಳಿಸೆ ಅಳುಮೊಗವು
ಬೆನ್ನದಂಟಿನ ನಂಟು ಕೈಗೆ ಕನಸಿನ ಗಂಟು
ತಿರುಗಿತದು  ಗಿರಗಿಟ್ಟಿ , ಹಾರಿರಲು  ನವಜಗವು

ಮಾರುಬೀದಿ ಸಾಲಿನೊಳು ಸೇರಿಹೋಗುವ ಮುನ್ನ…. 

--------------------------------------------------------------------------------------------
ಶಬ್ದಾರ್ಥ:
ರವಿಸು=ಆರ್ದ್ರವಾಗು,ನೀರೊಡೆ(ಮಳೆಗಾಲದಲ್ಲಿ ಮನೆಯ ಒಳನೆಲವು ತೇವಾಂಶಕ್ಕೆ ನೀರು ಉಗುಳುವುದನ್ನು ನೆನೆಸಿ ಬರೆದದ್ದು)
ಅಬುದಿ=ನೀರು,ಸರೋವರ
ಮೆಲಿಯುವುದು=ಚೆನ್ನಾಗಿ ಹದಮಾಡುವುದು(ಚಪಾತಿಹಿಟ್ಟನ್ನು ಮುದ್ದೆಥರ ಮಾಡಿ ತಿಕ್ತಾರಲ್ಲ ಅದು)
ತೊಳಕೆಬಳ್ಳಿ=ಇದನ್ನು ಹಾದು ಹೋದರೆ ಕಾಡಿನಲ್ಲಿ ದಾರಿತಪ್ಪುವುದೆಂಬ ಪ್ರತೀತಿ ಇರುವ ಬಳ್ಳಿ..ದಿಕ್ಕುಬಳ್ಳಿ,ದಿಕ್ ತಪ್ಸು ಬಳ್ಳಿ ಎಂದೂ ಕರೆಯುತ್ತಾರೆ
ಒಲುವು=ಆಯ,ಶರೀರದ ಸಮತೋಲನ
ಮೆಲುವು=ಹದವಾಗಿ ಜಾರುವ ದ್ರವ್ಯ (ಧಾರೆ ಚೆನ್ನಾಗಿ ಬರಲಿ ಎಂದು ಹಾಲುಕರೆಯುವ ಮುನ್ನ  ಆಕಳು/ಎಮ್ಮೆಯ ಮಲೆಗೆ ಚಿಕ್ಕಮಿಳ್ಳೆ ತುಪ್ಪ ಬೆಣ್ಣೆ ಹಚ್ಚುತ್ತಾರಲ್ವಾ ಅದಕ್ಕೆ ಮೆಲುವು ಎಂದು ಬಳಸುವುದನ್ನು ನೋಡಿದ್ದೆ )
ಹುಲಿಕೆ=ಬೆಳೆಯ ಕುಯ್ಲಿನ ಅಂತಿಮ ಕ್ಷಣಗಳು..ಈ ದಿನದಂದು ಸಿಹಿಹಂಚಿ ಖುಷಿಪಡುವುದು ವಾಡಿಕೆ
ಬರುಗಳಿಸು=ಅತಿಥಿಗಳನ್ನು ಮತ್ತೆಬನ್ನಿ ಎನ್ನುತ್ತಾ ವಾಪಸ್ಸು ಕಳಿಸಿಕೊಡುವುದು  

ವಾಚನವನ್ನು ಆಲಿಸಲು ಇಲ್ಲಿಗೆ ಕ್ಲಿಕ್ಕಿಸಿ : https://soundcloud.com/chinmay-bhat-3/ymep1oqarpmx

Sunday, April 27, 2014

ಒಳಕಂಬಿ

ಬ್ಲಾಗಿಗರ ಖೋ ಖೋ ಆಟದಲ್ಲಿ ಕಥೆ ಬರೆಯುವ ಮುಂದಿನ ಪಾಳಿ ನನ್ನದು..ಒಂದು ಪುಟ್ಟ ಪ್ರಯತ್ನ..ನೋಡಿ ಹೆಂಗಿದೆ ಹೇಳಿ...
ಮೊದಲಿಗೆ  ಪ್ರಕಾಶಣ್ಣನ "ಬೇಲಿ" : http://ittigecement.blogspot.in/2014/04/blog-post.html
ನಂತರ ದಿನಕರಣ್ಣನ "ದಣಪೆ" : http://dinakarmoger.blogspot.in/2014/04/blog-post_14.html
ಅದಾದ ಮೇಲೆ ಬಾಲು ಸರ್ ಬರೆದ  "ಎಲ್ಲೆಯ ಮಿಂಚು" : http://nimmolagobba.blogspot.in/2014/04/blog-post_1912.html
ಆಮೇಲೆ ರೂಪಕ್ಕನ "ಮಿತಿ " :http://nimmolagobba.blogspot.in/2014/04/blog-post_1912.html
ಮುಂದುವರೆದು ಶಮ್ಮೀ ಅಕ್ಕಯ್ಯನ "ವ್ಯಾಪ್ತಿ-ಪ್ರಾಪ್ತಿ" : http://mandaaramallige.blogspot.in/2014/04/blog-post_24.html
ನನಗಿಂತ ಮುಂಚೆ ಸುಷ್ಮಾ ಬರೆದ ಕದಡಿದ ಕಡಲು :http://kanasukangalathumbaa.blogspot.in/2014/04/blog-post.html

ಈಗ ನನ್ನದು...ಕಥೆಯ ಬರವಣಿಗೆಯ ಹರವು ನನಗಿನ್ನು ತಿಳಿಯದು...ಹುಚ್ಚಿಗೆ ಬರೆದಿದ್ದೇನೆ... ನೋಡಿ ತಪ್ಪು-ಒಪ್ಪು ತಿಳಿಸಿ..

==============================================================
ಕಾಲಿಂಗ್ ಬೆಲ್ ಬಡಿದುಕೊಳ್ಳುತ್ತಿದೆ..ಕತ್ತಲಾಗಿದೆ ..ಗಡಿಯಾರ ಗಂಟೆ ಎಂಟು ಎಂದು ತೋರಿಸುತ್ತಿತ್ತು..
ಅರರೇ..ನಿದ್ದೆ ಬಂದುಬಿಟ್ಟಿತ್ತಾ ನನಗೆ..?
ಬಾಗಿಲು ತೆರೆದೆ...
ಪತಿರಾಯನೂ ಮೈತ್ರಿಯೂ ನಗುತ್ತಾ ಒಳಗೆ ಕಾಲಿಡುತ್ತಿದ್ದಾರೆ...ಅದೂ ರಾತ್ರಿಯ ಹೊತ್ತಲ್ಲಿ!!
ಮೈತ್ರಿಯ ಕೈ ನನ್ನ ಗಂಡನ ತೋಳೊಳಗೆ ಬಂಧಿಯಾಗಿತ್ತು.
ಕಾಲಡಿಯ ನೆಲ ಕುಸಿದಂತೆ ಭಾಸ..ಕುಸಿದು ಬಿದ್ದೆ...

ಕಣ್ಣೆಲ್ಲವೂ ಮಂಜುಮಂಜಾಗುತ್ತಿತ್ತು ..
ಕಣ್ಣೀರು ತುಂಬಿಬಂದುದರಿಂದಲೋ ಅಥವಾ ಆ ನೋಡಬಾರದ ದೃಶ್ಯವನ್ನು ನೋಡಿ ಅವಾಕ್ಕಾದುದರಿಂದಲೋ ತಿಳಿಯಲಿಲ್ಲ...
ನೋಡುನೋಡುತ್ತಿದ್ದಂತೆ ಮೇಲಿನ ಭಿತ್ತಿಪಟದ ಗುಲಾಬಿಗಳೆಲ್ಲ ಮರೆಯಾಗತೊಡಗಿತ್ತು .
ಹೂವು-ಬಳ್ಳಿ-ಮುಳ್ಳು  ಎಲ್ಲ ಒಂದೇ ಎನಿಸಹತ್ತಿತ್ತು.
ಕತ್ತಲೆ ಎನ್ನಿಸತೊಡಗಿತ್ತು...ಅದೇ ಕತ್ತಲೆ ನೀರಿಗೆ ಬಿಟ್ಟ ಉಜಾಲಾದಂತೆ ಕ್ಷಣಾರ್ಧದಲ್ಲಿ ನನ್ನ ಕಣ್ಣನ್ನೆಲ್ಲಾ ಪೂರ್ತಿಯಾಗಿ ಆವರಿಸಿಕೊಂಡಿತ್ತು,ರೆಪ್ಪೆ ಮುಚ್ಚಿತ್ತು...
ಆದೇನೋ ಪುನಃ ಕಣ್ಣುಬಿಡಬೇಕು ಅನ್ನಿಸಲಿಲ್ಲ..ನೋಡಬೇಕು ಅನ್ನಿಸಲಿಲ್ಲ..
ಯಾಕೋ ಎಲ್ಲವೂ ಬೇಡವಾಗಿತ್ತು,ರೆಪ್ಪೆ ಒಡೆಯುವುದೂ ಸಹಾ...
ನನ್ನೊಳಗೆ ನಾನಿದ್ದೆ..
ಹೌದು ಪೂರ್ತಿ ಒಳಗೇ ಹೋಗಿದ್ದೆ.....

ಸಂಬಂಧಗಳು ಎಂದರೆ ಏನು ???
ಸ್ನೇಹಕ್ಕೂ,ಪ್ರೀತಿಗೂ,ಬಯಸುವಿಕೆಗೂ ನಡುವೆ ಅಂತರವೇನು??
ಬೇಕು ಅನ್ನಿಸಿದರೆ ಅದು ಬಯಕೆಯಾ??
ಇಬ್ಬರ ಬಯಸುವಿಕೆಗೊಂದು ಅರ್ಥಕೊಡುವುದು ಸ್ನೇಹವಾ??
ಸ್ನೇಹದ ಉತ್ತುಂಗವೇ ಪ್ರೀತಿಯಾ?ಅಥವಾ ಅದೊಂದು ಹೊಸ ಥರಹದ ಉತ್ಕಟ ಬಯಕೆಯಾ ??

ನಾನು ನನ್ನ ಹುಡುಗನ ಸಾಂಗತ್ಯವನ್ನು ಬಯಸಿದ್ದೆ ನಿಜ ,ಆದರೆ ಅದು ಯಾವಗಲೂ ನನ್ನ ಜೊತೆಗೇ ಇರಬೇಕೆಂದು ಬಯಸಿದ್ದೆನಾ??ಇಲ್ಲ,ಅದೊಂದು ಕ್ಷಣಿಕದ ಭಾವನೆಯಷ್ಟೇ..ಏನೋ ಅಮಲೇರಿ ಹೊರಟಿದ್ದೆ,ಅದು ಬಯಕೆಯಷ್ಟೇ ಇರಬೇಕು ಹಾಗಾದರೆ....ಅಲ್ಲಾ ಅದು ಅದಕ್ಕಿಂತ ಚೂರು ಮುಂದಿನದಾ??

ಒಂದಾನೊಂದು ಕಾಲದಲ್ಲಿ ತೀರಪರಿಚಿತರಾಗಿದುದರಿಂದ ಒಂದಿಷ್ಟು ಸಲಿಗೆಯಿಂದ ಮಾತನಾಡಿದುದು....
ಅಷ್ಟೇ ವಾಸ್ತವ...ಆದರೆ ನನ್ನದೆಲ್ಲವನ್ನು ಅವನಿಗೆ ಹೇಳಿದ್ದೆನಾ ಅಥವಾ ಅವನ ಬದುಕಿನ ನಡೆಗಳನ್ನು ಕೇಳಿದ್ದೆನಾ ?ಅವನ ಹೆಂಡತಿ-ಮಕ್ಕಳು ಸಂಸಾರದ ಬಗ್ಗೆ ತೀರಾ ಕೆದಕಿದ್ದೆನಾ ??
ಉಹೂಂ..ಅವನೇ ಯಾವಗಲೋ ಹೇಳಿದ ನೆನಪಲ್ಲವಾ ,"ಸ್ನೇಹಿತರಲ್ಲಿ ಎಲ್ಲವನ್ನು ಹೇಳಿಕೊಳ್ಳುತ್ತೇವೇಯೋ ಇಲ್ಲವೋ ಗೊತ್ತಿಲ್ಲ ಆದರೆ ಹಂಚಿಕೊಳ್ಳುತ್ತಿರುವ ವಿಚಾರಗಳೆಲ್ಲ ಸತ್ಯವಾಗಿರಬೇಕು" ಎಂದು!
ಹಾಗಾದರೆ ಅದೊಂದು ಪರಿಶುಧ್ಧ ಸ್ನೇಹವಾ ?

ಹಾಗಾದರೆ ಇಷ್ಟು ವರ್ಷದ ಮೇಲೆ ಅವನು ಸಿಕ್ಕಾಗ ನಾನೇಗೆ ಅಷ್ಟು ಗಲಿಬಿಲಿಯಾದೆ??
ನನಗೆ ತಿಳಿಯದಂತೆ ಅದೇಕೆ ಹಾಗೆ  ತೀವ್ರವಾಗಿ ಸ್ಪಂದಿಸಿದೆ?
 ನಾನು,ನನ್ನವರು, ಮಕ್ಕಳುಮರಿ,ಅಡಿಗೆ,ನೆಂಟರು,ಮನೆ,ಕಂಪನಿ,ನರ್ಸರಿ,ಸ್ಕೂಲು, ಕಾರು,ಸೈಟು,ಟೀ.ವಿ,ಸೀರಿಯಲ್ಲುಗಳಲ್ಲಿ ಮುಳುಗಿದ್ದವಳಿಗೆ ಅದೇಕೆ ಆ ಹುಡುಗ ಬೇಕೆನ್ನಿಸಿತು???ಅದೇ ಪ್ರೀತಿಯಾ??
ನನ್ನೆಲ್ಲ ಜವಾಬ್ದಾರಿ,ಸ್ಥಾನಮಾನಗಳನ್ನು ಮರೆಸಿ ಸೆಳೆಯುತ್ತಿರುವ ಬಂಧವಾ ??

ಊಹೂಂ..ಯಾಕೋ ಪೂರ್ತಿಯಾಗಿ ಒಪ್ಪಲಾಗುತ್ತಿಲ್ಲ..ಇರಲಿಕ್ಕಿಲ್ಲ..ಅದೊಂದು ಆಸೆಯಿರಬಹುದಷ್ಟೇ..ಚಿಕ್ಕಂದಿನಿಂದಲೂ  ಮಳೆ ಬಂದಾಗ ನೀರಿಗಿಳಿದು ನೆನೆದು ಬಿಡುವ ನನ್ನ ಹುಚ್ಚಿನಂತೆ!...

ಛೇ..ಇದಕ್ಕೆ ಹೆಸರೇ ಬೇಡ ..ಹೋಗಲಿ...
ನಾನು ಅವನೊಡನೆ ಮಾಡಹೊರಟಿರುವುದಾದರೂ ಏನು??
ನನ್ನ ಕಥೆ ಒತ್ತಟ್ಟಿಗಿರಲಿ ಅವನೂ ಸಂಸಾರಸ್ಥ.ಅದೇನು ಸ್ವೇಚ್ಛಾಚಾರವಾ ?
ನನಗನ್ನಿಸಿದ್ದನ್ನು ನಾನು ಮಾಡಿದೆ ಅದರಲ್ಲೇನು ತಪ್ಪು ಅನ್ನಬಹುದಾ??

ಹಾಗಾದರೆ ನನ್ನವರು ಮಾಡುತ್ತಿರುವುದು ಏನು ಈಗ?? ಹೇಸಿಗೆ ಅನ್ನುತ್ತೇನೆ ನಾನು...ಅದನ್ನೂ ಸ್ವೇಚ್ಛಾಚರವೇ ಎನ್ನಬಹುದಾ?? ಅವಳಿಗೂ ನನ್ನವರಿಗೂ ಇಷ್ಟವಿದ್ದಿರಬಹುದು..ಒಟ್ಟಿಗೆ ಓಡಾಡುತ್ತಿದ್ದಾರೆ,ಹಾಯಾಗಿದ್ದಾರೆ..ಅದರಲ್ಲೇನು ತಪ್ಪು?ನಾನೇಕೆ ಇವರಿಬ್ಬರನ್ನೂ ನೋಡಿ ಇಷ್ಟು ದಿಗಿಲಾಗಿದ್ದೇನೆ,ನನ್ನವರ ಮೇಲೆ ಕೋಪಿಸಿಕೊಂಡಿದ್ದೇನೆ??

ಅಥವಾ ಇದೇ ನನ್ನವರ ಮೇಲೆ ಇನ್ನೂ ಎಲ್ಲೋ ನನ್ನಲ್ಲಿ  ಆಗಾಧವಾಗಿರುವ  ಸಹಜ ಪ್ರೀತಿಯಾ??
ಎಲ್ಲೋ ಕೇಳಿದ ನೆನಪು ...ಎಲ್ಲಿ ಪ್ರೀತಿ ಜಾಸ್ತಿ ಇರುತ್ತದೆಯೋ ಅಲ್ಲಿ ಕೋಪವೂ ಜಾಸ್ತಿ ಎಂದು,ನಿಜವೇ ತಾನೆ??ಅದೇ ಕಾರಣವಾ?

ಹಾಗಾದರೆ ಈಗೇನು ಮಾಡಲಿ..ನಾನೇನೋ ನನ್ನ ಹುಚ್ಚು ಬಯಕೆಗಳನ್ನು ಬಚ್ಚಿಟ್ಟು ತೆಪ್ಪಗಿರಬಹುದು..ಏನೇನೋ ಕಾರಣಕೊಟ್ಟು ಅವನನ್ನು ನೋಡದೆಯೇ ಇರಬಹುದು..ತೀರಾ ತಡೆಯಲಾಗದಿದ್ದರೆ "ಇವರಿಗೆ" ದುಂಬಾಲು ಬಿದ್ದು ಊರನ್ನೇ ಬಿಡಲೂ ಬಹುದು..ಆದರೆ ಇವರು ??
ಈ ಪತಿರಾಯನಿಗೆ ಅವಳನ್ನು ಬಿಡುವುದು ಸಾಧ್ಯವಾ?? ಮನೆಯ ತನಕ ಕೈಕೈಹಿಡಿದು ಎದುರೇ ನಿಂತವರು ನಾಳೆ ನೀನು ಬೇಕಾದರೆ ಎಲ್ಲಿಗಾದರೂ ಹೋಗು ಅಂದಾರು....

ಎಲ್ಲಿಗೋ ಹೋಗುವುದು ಕಷ್ಟವಲ್ಲ...ಜಿದ್ದಿಗೆ ಬಿದ್ದು ಯಾರ ಮುಂದೆಯೂ ಕೈಯ್ಯೊಡ್ಡದೇ ತಲೆಯೆತ್ತಿಯೇ ಮಕ್ಕಳನ್ನು ಸಾಕಿಯೇನು..ಆಡಿಕೊಳ್ಳುವವರ ಮುಸಡಿ ಕೆಂಪಾಗುವಂತೆ ಮಕ್ಕಳ ಮದುವೆ-ಮಂಗಲವನ್ನೂ ಮಾಡಿಸಿಯೇನು..ನನ್ನ ಬದುಕು ಇರುವವರೆಗೂ ಮಕ್ಕಳಿಗೊಂದು ದಿಕ್ಕಾದೇನು .. 

ಆದರೆ ಅಷ್ಟೇ ಸಾಕಾ??
ಗಂಡ-ಹೆಂಡತಿ-ಮಕ್ಕಳೆಲ್ಲಾ ಒಟ್ಟಿದ್ದರೆ ಚೆನ್ನವಲ್ಲವಾ?ನನ್ನ  ಅಪ್ಪ-ಅಮ್ಮನಿಗೂ ಇನ್ನೇನು ಬೇಕು??
ಎನು ಮಾಡಲಿ ಈಗ ಹಾಗಾದರೆ...

ಆ ಮೈತ್ರಿಯ ಜುಟ್ಟು ಹಿಡಿದು ಹೊರದಬ್ಬಲಾ??ನನ್ನವರ ಕಾಲು ಹಿಡಿದು ಬೇಡಿಕೊಳ್ಳಲಾ ??
ಅಥವಾ ಇಬ್ಬರನ್ನೂ ಕೂಡ್ರಿಸಿ  ಮಾತುಕಥೆಯಾಡಲಾ ?? ಇಲ್ಲಾ ನೇರವಾಗು ಅದದ್ದಾಯಿತು ಇನ್ನುಮುಂದಾದರೂ ನೆಟ್ಟಗಿರಿ,ಇದನ್ನು ಹೀಗೆ ಮುಂದುವರೆಸಿದರೆ ನನ್ನ ದಾರಿ ನನಗೆಂದು ಗಟ್ಟಿಯಾಗಿ ಕೂಗಿಹೇಳಲಾ??? ಅಂದುಕೊಳ್ಳುತ್ತಿರುವಾಗಲೇ ನನ್ನನ್ನು ದೂರದಿಂದ ಯಾರೋ ಕರೆದಂತಾಯಿತು...
ಮತ್ತೆ ಮತ್ತೆ ಕರೆದಂತಾಯಿತು...
ಹೌದು ಯಜಮಾನರ ಧ್ವನಿಯೇ ಅದು...

ಇನ್ನೊಂದು ಸಲ ಕರೆದಾಗ ಕಣ್ಣು ತಂಪುತಂಪಾಯಿತು...ಕೈಯ್ಯನ್ನು ಯಾರೋ ತಿಕ್ಕುತ್ತಿದ್ದಂತೆ ಅನ್ನಿಸಿತು..ಮುಖಕ್ಕೆ ತಂಪಾದ ಗಾಳಿಗೂ ಹೊಡದಂತೆ ಭಾಸವಾಯಿತು..ಕಣ್ಣು ಬಿಡುವ ಪ್ರಯತ್ನ ಮಾಡಿದೆ....ಉಹೂಂ ಎಲ್ಲ ಮಂಜು ಮಂಜು...ತಲೆ ಸುತ್ತುತ್ತಿತ್ತು...ಬರುಬರುತ್ತಾ ಮಸುಕು ಕಡಿಮೆಯಾಗುತ್ತಿತ್ತು..ಮೆಲ್ಲನೆ ಮಣ್ಣಮುದ್ದೆಯಲ್ಲೊಂದು ಕಪ್ಪು ಕಂಬಳಿಹುಳು ಕಂಡಂತಾಯಿತು..ಒಂದೆರಡು ಗಳಿಗೆಯಲ್ಲೇ ನನ್ನವರ ಮುಖ ಕಾಣತೊಡಗಿತ್ತು..ಅವರ ದಪ್ಪ ಮೀಸೆ,ಗಾಬರಿಯಾದ ಮುಖ ಎಲ್ಲವೂ ಕಾಣುತ್ತಿತ್ತು..ಮೈತ್ರಿ ಕೈ ತಿಕ್ಕುತ್ತಾ ಕುಳಿತ್ತಿದ್ದಳು.ಅವಳ ಮುಖದಲ್ಲೂ ಸ್ತ್ರೀ ಸಹಜ ವಾತ್ಸಲ್ಯವಿತ್ತು.. .ನಾನು ಹಾಲ್ ನ ಸೋಫಾದ ಮೇಲೆ ಮಲಗಿದ್ದೆ...ಇನ್ನೇನು ಎಳಬೇಕು ಅನ್ನಿಸುವಷ್ಟರಲ್ಲಿ ಮುಖದ ಮೇಲೆ ಏನೋ ಅಲುಗಾಡುವಂತೆ ಅನ್ನಿಸುತ್ತಿದ್ದು.ತಂಪಾದ ಗಾಳಿಯೂ ಬರುತ್ತಿತ್ತು...ಕತ್ತೆತ್ತಿದ್ದರೆ ಆ ಹುಡುಗ ಕಾಣುವುದಾ????
ಹೌದು ಅವನೇ ??? ಇರಲಾರದು..ಕಣ್ಣುಜ್ಜಿಕೊಂಡೆ...ಅವನೇ..
ಕೈ ಚಿವುಟಿಕೊಂಡೆ ಚುರ್ರ್  ಅಂದಿತು...ನಿಜವೇ..ಅವನೇ ಕೂತಿದ್ದಾನೆ..ಅರೇ ಇಸ್ಕಾ!!

ಮತ್ತೆ ತಲೆ ಗಿರ್ರೆಂದಿತು...ಅಥವಾ ಮೊದಲಿನಂದಲೂ ತಿರುಗುತ್ತಲೇ ಇತ್ತೋ ಎನೋ,ಸ್ವಲ್ಪ ಜೋರಾಯಿತು ...ಏಳಲು ಹವಣಿಸಿದಾಗ ಪತಿರಾಯರು ಭುಜ,ಬೆನ್ನು ಹಿಡಿದು ಮೇಲೆತ್ತಿದರು.ನೀರು ಕೊಟ್ಟರು..ಸ್ವಲ್ಪ ಸುಧಾರಿಸಿದ ಹಂಗೆ ಕಂಡ ಮೇಲೆ "ಏನಾಯ್ತೇ...ನಡಿ ಆಸ್ಪತ್ರೆಗೆ ಹೋಗಣಾ...ಸ್ಲ್ಜ್ ಸ್ಜ್ಫ಼್ಲ್ಕ್ಸ್ದ್ಜ್ ಫ಼್ಲ್ಸ್ದ್ಜ್ಫ಼್ಸ್ದ್ಕ್ಲ್ಫ಼್ಜ್ಸ್ಲ್ ಲ್ಕ್ಸ್ದ್ಜ್ಫ಼್ಸ್ಲ್ಕ್ದ್ಫ಼್ಜ್ಸ್ಲ್ದ್ಕ್ಫ಼್ಜೊಇವೆಫ಼್ವೆಜ್ಫ಼್ಲ್ಸ್ದ್ಜ್ಫ಼್ಲ್ಕ್ಸ್ದ್ಜ್ಫ಼್ಕ್ಲ್ಸ್ದ್ಜ್ಫ಼್ಸ್ಲ್ದ್ಕ್ಫ಼್ಜ್ ಅ;ದ್ಫ಼’ಸ್ವೊಇಫ಼್ಪೆಫ಼ಿಪೊಎವಿಫ಼್ಪ್ವಿಫ಼್ ಫ಼್ಕ್ವ್ಚ್ನ್ವ್ಸ್ಲ್ಕ್ದ್ಜ್ಫ಼್ಸ್ಲ್ಕ್ಫ಼್ಸ್" ಇನ್ನೂ ಏನೇನೋ ಹೇಳುತ್ತಿದ್ದಂತಿತ್ತು...
ನಾನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ... ಸಣ್ಣಗಿನ ಧ್ವನಿಯನ್ನ ಸ್ವಲ್ಪ ಗಟ್ಟಿ ಮಾಡಿಕೊಳ್ಳುತ್ತಾ "ಏನಿಲ್ಲ,ಸಂಕಷ್ಟಿಯೆಂದು ಊಟಮಾಡಿರಲಿಲ್ಲ ...ಅದ್ಕೇ ಸುಸ್ತು... ಚೂರು ಮಲಗುತ್ತೇನೆ...ಸರಿಯಾಗುತ್ತದೆ " ಎಂದು ರೂಮಿಗೆ ಹೊರಡಲು ಅನುವಾದೆ..ಎದ್ದವಳಿಗೆ ಕಾಲೆಡವಿ ಮತ್ತೆ ರೂಮು ತಲುಪಿಸಲು ನನ್ನವರೇ  ಬರಬೇಕಾಯಿತು..ಕಾಲೆಡವಿದಾಗ ಆ ಹುಡಗ "ನಿಧಾನ ನಿಧಾನ" ಎಂದಿದ್ದು ಈಗಲೂ ಕಿವಿಯಲ್ಲಿ ಗುಯ್ಯ್ಂ ಗುಡುತ್ತಿತ್ತು... ನಾನು ರೂಮಿನಲ್ಲಿ ಮಲಗಿದ್ದೆ...ಮನಸ್ಸು ಕೂಡಾ ರೂಮಿನ ಕದದಂತೆ ಆರ್ಧ ಒಳಗೆ-ಅರ್ಧ ಹಾಲಿನಡೆಗೆ ತೆರೆದಿತ್ತು...

ವಾಪಸ್ಸು ಹೋದ ಪತಿರಾಯರು ಆಗಂತುಕರೊಂದಿಗೆ ನನ್ನ ಕುರಿತು "ಉಪವಾಸ ಗಿಪವಾಸ ಎಲ್ಲಾ ಬೇಕು ಇವಳಿಗೆ..ಎಷ್ಟ್ ಹೇಳಿದ್ರೂ ಕೇಳಲ್ಲಾ ಸಾರ್ " ಎಂದೆಲ್ಲಾ ಒಂದಿಷ್ಟು ಸಾಂದರ್ಭಿಕವಾಗಿ  ಬೈದು ಕೊನೆಗೆ 
"ಎನ್ ಸಾರ್, ಮೈತ್ರಿ ಮೇಡಮ್ ಅವ್ರು ನಿಮ್ ಮಿಸೆಸ್ ಅಂತಾ  ಇಷ್ಟ್ ದಿನಾ ಅದ್ರೂ ಹೇಳ್ಳೇ ಇಲ್ವಲ್ಲಾ ಸಾರ್? ಇದೇನ್ ಹಿಂಗೆ.” ಎಂದರು..
.ನನ್ನ ಕಿವಿ ಚುರುಕಾಯಿತು...
ಧಡಕ್ಕನೆ ಎದ್ದು ಕೂತೆ ಮಂಚದಿಂದ...

ಇವರು ಹಾಗೇ ಮುಂದುವರೆದು..".ಇವತ್ತು ನಿಮ್ ಮನೆಗೆ ಬರ್ತೀನಿ  ತೊಂದ್ರೆ ಇಲ್ಲಾ ಅಲ್ವಾ?? ನನ್ನ ಹಸ್ಬಂಡ್ ನಿಮ್ಮನೆ ದಾರಿಲೇ ಬರ್ತಿದಾರಂತೆ..ಅಲ್ಲಿಗೇ ಬಂದು ಪಿಕ್ ಮಾಡ್ತಾರೆ ಅಂದಾಗಲೇ ಗೊತ್ತಾಗಿದ್ದು ನಿಮ್ಮ ಬಗ್ಗೆ..ಏನಾ ಸಾರ್ ನೀವು,,ಮೊದ್ಲೇ ಹೇಳದಲ್ವಾ?? ನೀವಾದ್ರೂ ಮೇಡಮ್..ನಾನು ಅವಾಗಾವಾಗ ಸಾರ್ ಬಗ್ಗೆ ಹೇಳ್ತಾ ಇದ್ರೂ ಏನೂ ರೆಸ್ಪಾನ್ಸೆ ಮಾಡ್ತಿರ್ಲಿಲ್ವಲ್ಲಾ ಮೇಡಮ್.."ಎಂದರು...
ಆ ಹುಡುಗ.ಛೀ ಹುಡುಗನಲ್ಲ ಅವನು ವಯಸ್ಸಾಗಿದೆ...ಆದರೂ "ಹುಡುಗನೇ ಅವನು" ಇರಲಿ...ಆತ ಕರ್ತವ್ಯ ನಿಷ್ಠೆ,ವೈಯಕ್ತಿಕ ಬದುಕು ಇವುಗಳ ಬಗ್ಗೆ ತನ್ನ ಎಂದಿನ ಶೈಲಿಯಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡಲು ಹೊರಟಾಗ ಮೈತ್ರಿ ಅವನನ್ನು ಅರ್ಧಕ್ಕೆ ತಡೆದು,
"ಗೊತ್ತಿದ್ರೆ ನೀವು ನನ್ ಹತ್ರಾ ಇಷ್ಟು ಕ್ಲೋಸಾಗಿ ಇರ್ತಿದ್ರಾ" ಎಂದು   ಕಣ್ಣು ಮಿಟುಕಿಸಿದ್ದಳು..ಮೂವರೂ ಜೋರಾಗಿ ಗಹಗಹಿಸಿ ನಕ್ಕರು...

ಮತ್ತೆ ಇನ್ನೇನೋ ಮಾತು..ಮತ್ತೆ ನಗು...ನಗು ನಗು...ನನಗೆ ಮಂಗಳೂರು ಟ್ರಿಪ್ಪಿನಲ್ಲಿ ನಾವು ಬಸ್ಸಿನಲ್ಲಿ ಹರಟೆಕೊಚ್ಚುತ್ತಿದ್ದ ನೆನಪು ತಂತು.ಆ ಹುಡುಗ ಚೂರೂ ಬದಲಾಗಿರಲಿಲ್ಲ...ಅದೇ ಮಾತುಗಳು..ಯಾರನ್ನೂ ಆಡಿಕೊಳ್ಳದ ತಿಳಿಹಾಸ್ಯ..ಮುಗ್ಧ ನಗು...ಮೈತ್ರಿಯೂ ಅಷ್ಟೇ...ಅದೇ ಧಾಟಿ...ಚೂರು ಘಾಟು,ಪೋಲಿಯೆನ್ನಿಸುವ ಡೈಲಾಗುಗಳು..ನಗು ನಗು...ಅದೇ ಥರ ಒಂದಿಷ್ಟು ಮಾತುಕಥೆ ಆದಮೇಲೆ ಮೈತ್ರಿ ತಾನು ನನ್ನ ಯಜಮಾನರೊಡನೆ ಕಂಪನಿ ಕೆಲಸದ ಮೇಲೆ ದೆಲ್ಲಿಗೆ ಹೋದಾಗಿನ ,ಅಲ್ಲಿಯ ಒಂದಿಷ್ಟು ನಗುಬರಿಸುವ ಸಂಗತಿಗಳನ್ನೂ ಹೇಳಿದಳು..ಆದನ್ನು ಆ ಹುಡುಗ ತೀರಾ ಸಾಮಾನ್ಯ ಎಂಬಂತೆ ಸ್ವೀಕರಿಸುತ್ತಿದ್ದ...ಅಲ್ಲಲ್ಲಿ ತನ್ನದೂ ಒಂದೆರಡು "ಅಲ್ಲಿ  ಹಾಗೆ ಹೀಗೆ"  ಎಂದು ಸಲ್ಲು ಸೇರಿಸುತ್ತಿದ್ದ...ನಗುತ್ತಿದ್ದ..
ನಾನು ಮಂಚದ ತುದಿಗೆ ಬಂದು ಕೂತಿದ್ದೆ...ಕಾಲು ನೆಲಕ್ಕಿರಿಸಿ ಕೈಯ್ಯಿಂದ ಮುಖಮುಚ್ಚಿಕೊಂಡಿದ್ದೆ..ತೀರಾ ಗೊಂದಲದಲ್ಲಿದ್ದೆ...ಅವರ ಮೂವರ ನಗು ನನ್ನ ಮೌನಕ್ಕೆ ಸಮನಾಗಿತ್ತು...


ಇನ್ನೊಂದೆರಡು ನಿಮಿಷವಾದ ಮೇಲೆ ಅವರಿಬ್ಬರೂ ಹೊರಡಲು ತಯಾರಾದರು.ಮೈತ್ರಿ ನನಗೆ ಬಾಯ್ ಹೇಳಲೋ ಏನೋ ರೂಮಿನ ಹತ್ತಿರ ಬರುವಂತೆ ತೋರಿದಳು ಅಷ್ಟರಲ್ಲೇ ಆ ಹುಡುಗ ಅವಳನ್ನು ತಡೆದು "ಏಯ್ ಅವರನ್ನಾ ಯಾಕೆ ಎಬ್ಬಿಸ್ತೀಯಾ,ಮಲ್ಕೊಳ್ಳಿ ಬಿಡು" ಎನ್ನುತ್ತಾ
,"ನಿಮ್ ಮಿಸಸ್ ಗೂ ಹೇಳ್ಬಿಡಿ" ಎಂದು ಮೆಟ್ಟಿಲಿಳಿದು ಹೊರಟು ಹೋದ....

ನನಗೆ ಅದೇನೋ ಹಾಯೆನಿಸಿತು...ನನ್ನವರ ಬರುವಿಕೆಗಾಗಿ ಕಾದೆ..ಎಲ್ಲವನ್ನೂ ಹೇಳಬೇಕೆಂದುಕೊಂಡೆ..ಅಷ್ಟರಲ್ಲಿ ಅದೇನೋ ಟೇಬಲ್ಲಿನ ವರೆಗೆ ಬಂದವರು  ಬಂದವರು ಮತ್ತೆ ತಿರುಗಿ ತಿರುಗಿ ನೋಡಿದರು...ಮೈತ್ರಿಯಲ್ಲೇ ನೋಡುತ್ತಿದ್ದರಾ ???ಮತ್ತೆ ವಾಪಸ್ಸು ಗೇಟಿನೆಡೆಗೆ ಓಡಿದರು..ನನಗೆ ಸಿಟ್ಟು ಮತ್ತೆ ಬುಸ್ಸೆಂದಿತು...ಎದ್ದು ಹಾಲಿನ ಪಕ್ಕದ ರೂಮಿನ ಕಿಟಕಿಯ ಬಳಿ ನಿಂತೆ...ಇವರು  ಎಲ್ಲಿ ಮತ್ತೆ ಮೈತ್ರಿಗೆ ಬಾಯ್ ಹೇಳಲು ಚಪ್ಪರಿಸಿದರೋ ಅಂದುಕೊಂಡೆ...

ಇವರು ಹೊರಗೋಗಿ ,ಹೊರಟವರ ಕಾರಿನ ಬಳಿ ನಿಂತು,
"ಸಾರ್ ನಿಮ್ಮ ಮಿಸೆಸ್ ಮೊಬೈಲು ಸಾರ್...ಅವತ್ತು ಡೆಲ್ಲಿಇಂದ ಹೊರಡ್ಬೇಕಾದ್ರೆ..  ಏನೋ ತೀರಾ ತೀರಾ ಅರ್ಜಂಟ್ ಕಾಲ್ ಮಾಡ್ಬೇಕಿತ್ತು..ನನ್ ಮೊಬೈಲ್ ಹ್ಯಾಂಗ್ ಆಗ್ತಾ ಇತ್ತು...ಅದ್ಕೆ  ಮೇಡಮ್ ಅವ್ರ  ಹತ್ರಾ ಮೊಬೈಲ್ ಇಸ್ಕೊಂಡು ಕಾಲ್ ಮಾಡ್ದವ್ನು ಹಂಗೆ ಟೆನ್ಶಲ್ ಅಲ್ಲಿ ನಾನೆ ಬ್ಯಾಗಿಗೆ ಹಾಕ್ಕೊಂಡ್ ಬಿಟ್ಟಿದ್ದೆ ಅನ್ಸತ್ತೆ...ಬಂದವನು ನೆನಪಾಗ್ಲಿ ಆಂತಾನೆ ಟೇಬಲ್ಲಿನ ಮೇಲಿಟ್ಟಿದ್ದೆ...ಈಗ ನೆನಪಾಯ್ತು. ತಗೊಳಿ ಸಾರ್  " ಎಂದು ಮೊಬೈಲೊಂದನ್ನು ಕೊಟ್ಟರು...
ಹೌದು..ಅದೇ ಮೊಬೈಲು..ನಾನು ಮೈತ್ರಿಯ ಪ್ರೇಮಸಂದೇಶಗಳನ್ನೆಲ್ಲಾ ಓದಿದ ಮೊಬೈಲು...ನೂರೆಂಟು ಮೆಸ್ಸೇಜುಗಳಿದ್ದ ಮೊಬೈಲು... ಇದೇನಿದು ಅಂದುಕೊಳ್ಳುವಾಗಲೇ,ಆ ಹುಡುಗ ನಗುತ್ತಾ ಮೈತ್ರಿಯ ಮುಖ ನೋಡಿ
"ಥ್ಯಾಂಕ್ಯು ಸಾರ್...ಇದು ನನ್ನ ಹಳೆಯ ಮೊಬೈಲು.. ಅವಳಿಗೆ ಅದೇನೋ ಹುಚ್ಚು ಇವಳಿಗೆ...ಊರುಬಿಟ್ಟೂ ಹೋಗ್ಬೇಕಾದ್ರಲ್ಲಾ ಅದನ್ನಾ ತಗೊಂಡ್ ಹೋಗ್ತಾಳೆ...ನನ್ನ ನೆನಪಿಗಂತೆ... ಇರ್ಲಿ ಇಷ್ಟ ದಿನ ಸುಮ್ನೆ ತಗೊಂಡು ಹೋಗಿ ಬರ್ತಿದ್ಲು ಈ ಸರಿ ನಿಮ್ಗಾದ್ರು ಪ್ರಯೋಜನಕ್ಕೆ ಬಂತು" ಎಂದು ಕಾರು ಸ್ಟಾರ್ಟು ಮಾಡಿದ..

ನಮ್ಮ ಯಜಮಾನರಿಗೆ ಅದೇನನ್ನಿಸಿತೋ "ಸಾರ್..ಸ್ಸಾರಿ..ಇಷ್ಟೇಲ್ಳಾ ಪರ್ಸನೆಲ್ ಅಂತಾ ಗೊತ್ತಿರ್ಲಿಲ್ಲ...ಅದೂ ನಂದು ಒಂದು ಇದೇ ಮಾಡೆಲ್ ನಾ ಮೊಬೈಲ್ ಇದೆ...ಇದೇ ಮಾಡೇಲ್ದು..ಆಶ್ವರ್ಯ ಅಂದ್ರೆ ಅದೇ ಗುರು ರಾಘವೇಂದ್ರರ  ವಾಲ್ಪೇಪರ್ ಕೂಡಾ.. ಅದ್ಕೇ ಗೊತ್ತಾಗ್ಲಿಲ್ಲ..ಸ್ಸಾರಿ" ಎಂದು ಗಲ್ಲುಗಿಂಜಿದರು...
ಅದಕ್ಕೆ ಆತ "ಅಯ್ಯೋ ಪರವಾಗಿಲ್ಲ ಬಿಡಿ" ಎಂದು ನಕ್ಕುಕಾರನ್ನು   ರಿವರ್ಸು ಗೇರಿಗೆ ಹಾಕುತ್ತಾ ಮೈತ್ರಿಯ ಮುಖ ನೋಡಿದ...ಆಕೆ ಸರಿಯಿದ್ದ ತನ್ನ ವೇಲನ್ನು ಮತ್ತೆ ಸರಿಮಾಡಿಕೊಂಡಳು...
ಕಾರು ಮನೆದಾಟಿ ಮೂತಿ ತಿರುಗಿಸಿಕೊಂಡು ಹೊರಟಿತ್ತು.....
ನನ್ನವರು ಗೇಟು ಹಾಕಿ ವಾಪಸ್ಸು ಬರುತ್ತಿದ್ದರು...
ಆಗ ಯಾಕೋ ಆ ಹುಡುಗ ಕಾಲೇಜಿನಲ್ಲಿ  ಹೇಳಿದ ಮಾತು ನೆನಪಾಯಿತು...ಮತ್ತೆ ಮತ್ತೆ ಕೇಳಬೇಕು ಅನ್ನಿಸಿತು..

"ನಮ್ಮ 
ಮನೆಯ ಹಿರಿಯರು ನಮಗೆ  ಒಳ್ಳೆಯ ಸಂಸ್ಕಾರವನ್ನು ಕೊಟ್ಟಿದ್ದಾರೆ..

ಹಿರಿಯರ 

ಆ ಸಂಸ್ಕಾರದ ಬೇಲಿ ನಮಗಾಗಿ..
ನಮ್ಮ ಒಳಿತಿಗಾಗಿ.. 

ಅವರು ಕೊಟ್ಟ 

ಸ್ವಾಂತಂತ್ರ್ಯ... 
ಬೇಲಿಯನ್ನು  ಹಾರುವದಕ್ಕಲ್ಲ...

ಒಪ್ಪುವ ಮನಸ್ಸಿಗಿಂತ..


ಬಯಸುವ  ದೇಹಕ್ಕಿಂತ ... 


ನಮಗೆ ನಾವೆ ಹಾಕಿಕೊಂಡ .. 

ನೀತಿ..
ನಿಯತ್ತು .. ಬಲು ದೊಡ್ಡದು..

ನಿನ್ನ 

ಚಂದದ ಸ್ನೇಹವನ್ನು  ಯಾವಾಗಲೂ ಮರೆಯುವದಿಲ್ಲ.."




ನನ್ನವರು ವಾಪಸ್ಸು ಬರುತ್ತಿದ್ದರು..ನಾನು ಗುಡುಕ್ಕನೆ ಮತ್ತೆ ರೂಮಿಗೋಡಿದೆ..ಅವರು ಬಾಗಿಲ ಚಿಲಕ ಹಾಕಿ ರೂಮಿನೆಡೆ ಬರುತ್ತಿದ್ದರು..
============================================================
(ಮುಂದೇನಾಯಿತು ?  ನಿಮಗೇ ಗೊತ್ತಿದೆ....)